(ಪ್ರಕಟಿತ: ಪುಂಗವ 1/5/2014)
ಭಾರತ ಚೀನಾ ಸಮರ ನಡೆದು(1962) ಐದು ದಶಕಗಳೇ ಕಳೆದರೂ ಎರಡು ದೇಶಗಳ ನಡುವಿನ ಸಂಭಂಧದ ಮೇಲೆ ಸದಾ ಆತಂಕದ ನೆರಳು ಆವರಿಸಿಯೇ ಇದೆ. ರಾಜಕೀಯ, ಆರ್ಥಿಕ ಮತ್ತು ಸಾಂಸ್ಕøತಿಕ ವಿಷಯಗಳಲ್ಲಿ ದ್ವಿಪಕ್ಷೀಯ ವಹಿವಾಟು ವೃದ್ಧಿಯಾದರೂ ಅಪನಂಬಿಕೆ ಇನ್ನೂ ಆಳವಾಗಿಯೇ ಬೇರೂರಿದೆ. ಬಾಹ್ಯವಾಗಿ, ದ್ವಿಪಕ್ಷೀಯ ಸಂಭಂಧಗಳನ್ನು ಘನಿಷ್ಠಗೊಳಿಸಲು ತಮ್ಮ ಬದ್ಧತೆಯನ್ನು ಪುನರುಚ್ಛರಿಸುವ ಯಾವ ಅವಕಾಶವನ್ನು ಎರಡೂ ದೇಶದ ನಾಯಕರುಗಳು ಬಿಡುವುದಿಲ್ಲ. ಆದರೆ ತಳದಲ್ಲಿ ಮಾತ್ರ ಜೋಡಿಸಲಸಾಧ್ಯವಾದ ಭಾರೀ ಕಂದರ ಇರುವುದು ಎರಡು ದೇಶಗಳಿಗೂ ತಿಳಿದಿರುವುದೇ ಆಗಿದೆ.
ಸಹಸ್ರಾರು ವರ್ಷಗಳ ನಾಗರಿಕತೆಯ ಇತಹಾಸವುಳ್ಳ ಭಾರತ ಮತ್ತು ಚೀನಾ ದೇಶಗಳು ದ್ವಿತೀಯ ಸಹಸ್ರಮಾನದ ಕೊನೆಯ ಹೊತ್ತಿಗೆ ಜನಸಂಖ್ಯೆ ಮತ್ತು ಸಂಪನ್ಮೂಲಗಳ ಬಲದಿಂದಾಗಿ ಮತ್ತೆ ವಿಶ್ವದ ಶಕ್ತಿಯಾಗಿ ಹೊರಹೊಮ್ಮಲು ಮುನ್ನುಗ್ಗತೊಡಗಿದವು. 1940ರ ದಶಕದ ಕೊನೆಗೆ ಸ್ವಾತಂತ್ರ ಪಡೆದ ಭಾರತ ಮತ್ತು ಚೀನಾ ಸಂಪೂರ್ಣ ವಿರುದ್ಧವಾದ ರಾಜಕೀಯ ತತ್ವಗಳನ್ನು ಆಯ್ಕೆ ಮಾಡಿಕೊಂಡವು. ಈ ಅಂಶಗಳು ಎರಡೂ ದೇಶಗಳು ಪರಸ್ಪರ ಸ್ಪರ್ಧೆಗಿಳಿಯಲು ಕಾರಣವಾದವು.

ಪ್ರಪಂಚದ ಶಕ್ತಿಯಾಗಬೇಕೆಂಬ ಮಹತ್ವಾಕಾಂಕ್ಷೆಯ ಹಿಂದೆ ಬಿದ್ದಿರುವ ಚೀನಾದ ಆಕ್ರಮಣಶೀಲ ನೀತಿಯಿಂದಾಗಿ ಕೆಲವು ಗಂಭೀರ ಸವಾಲುಗಳು ಭಾರತದ ಮುಂದೆ ಕಾದಿವೆ.
ಗಡಿಪ್ರದೇಶದ ಅಭಿವೃದ್ಧಿ: 2000ನೇ ಇಸವಿಯಿಂದಿಚೆಗೆ ಭಾರತ-ಟಿಬೆಟ್ ಗಡಿಪ್ರದೇಶದಲ್ಲಿ ರೇಲ್ವೆ, ರಸ್ತೆ ಸಂಪರ್ಕ, ಕೈಗಾರಿಕೆ ಮೊದಲಾದುವುಗಳ ನಿರ್ಮಾಣದ ಪ್ರಮುಖ ಯೋಜನೆಗಳನ್ನು ಕೈಗೆತ್ತಿಗೊಂಡ ಚೀನಾ ಅತ್ಯಂತ ವೇಗವಾಗಿ ಟಿಬೆಟ್ನ್ನು ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿಸುವತ್ತ ಮುನ್ನುಗ್ಗುತ್ತಿದೆ. ಜೊತೆಗೆ ಈ ಪ್ರದೇಶದಲ್ಲಿ ಸೇನಾನೆಲೆಯನ್ನು ಬಲಗೊಳಿಸಿದ್ದಲ್ಲದೇ ಪರಮಾಣು ಕ್ಷಿಪಣಿಗಳನ್ನೂ ಸ್ಥಾಪಿಸಿದೆ. ಆದರೆ ಯಥಾಪ್ರಕಾರ ಭಾರತ ಗಡಿಪ್ರದೇಶಗಳ ಅಭಿವೃದ್ಧಿಯಲ್ಲಿ ಕುಂಟುತ್ತಲೇ ಸಾಗುತ್ತಿದೆ.
ನದಿ ನೀರಿನ ಹಂಚಿಕೆ: ಸಿಂಧು, ಸಟ್ಲೆಜ್, ಬ್ರಹ್ಮಪುತ್ರ ಸೇರಿದಂತೆ ಅನೇಕ ಪ್ರಮುಖ ನದಿಗಳ ಮೂಲ ಟಿಬೆಟ್ನಲ್ಲಿದೆ. ಚೀನಾ ಈ ಪ್ರಮುಖ ನದಿಗಳ ಪಾತ್ರಗದಲ್ಲಿ ಆಣೆಕಟ್ಟುಗಳನ್ನು ನಿರ್ಮಿಸುವ ಬಿರುಸಿನ ಕಾರ್ಯವನ್ನು ಕೈಗೊಂಡಿದೆ. ಕಳೆದ ಆರು ದಶಕಗಳಲ್ಲಿ 22000 ಡ್ಯಾಂಗಳನ್ನು ಚೀನಾ ನಿರ್ಮಿಸಿದ್ದು ಪ್ರಪಂಚದ ಅರ್ಧದಷ್ಟು ಡ್ಯಾಂಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದತ್ತ ಹರಿಯುವ ನದಿ ನೀರನ್ನು ತಡೆಹಿಡಿಯುವ ಇಂತಹ ಯೋಜನೆಗಳು ನೀರಿನ ಕೊರತೆಯನ್ನುಂಟು ಮಾಡುವುದರ ಜೊತೆಗೆ ಗಡಿಪ್ರದೇಶಗಳಲ್ಲಿ ಹಠಾತ್ ಪ್ರವಾಹಕ್ಕೂ ಕಾರಣವಾಗಬಲ್ಲವು. ಭಾರತ-ಚೀನಾ ನಡುವೆ ನದಿ ನೀರಿನ ಹಂಚಿಕೆಯ ಯಾವುದೇ ಒಪ್ಪಂದಗಳಿರದ ಕಾರಣ ಚೀನಾ ನಿರ್ಮಿಸುತ್ತಿರುವ ಆಣೆಕಟ್ಟು ಯೋಜನೆಗಳ ಯಾವ ಮಾಹಿತಿಯೂ ಭಾರತಕ್ಕೆ ಸಿಗುತ್ತಿಲ್ಲ.
ಬಗೆಹರಿಯದ ಗಡಿ ತಕರಾರುಗಳು: ತನ್ನ ಗಡಿಯನ್ನು ವಿಸ್ತರಿಸುವ ಚೀನಾದ ಪ್ರವೃತ್ತಿ ಇನ್ನೊಂದು ಗಂಭಿರ ಸವಾಲಾಗಿದೆ. ಇತ್ತೀಚೆಗೆ ಲಢಾಕ್ನಲ್ಲಿ ನಡೆದ ಚೀನಾದ ಒತ್ತುವರಿ, ಅರುಣಾಚಲ ಪ್ರದೇಶದ ಗಡಿತಂಟೆ ಮೊದಲಾದುವಗಳನ್ನು ಹೇಗೆ ನಿರ್ವಹಿಸಬೇಕೆಂಬ ವಿಷಯದಲ್ಲಿ ಭಾರತಕ್ಕೆ ಮಾರ್ಗ ತೋಚದಂತೆ ಕಂಡುಬರುತ್ತದೆ.
ಬೆಳೆಯುತ್ತಿರುವ ಆಮದು-ರಫ್ತು ವ್ಯಾಪಾರಿ ಕೊರತೆ: ಚೀನಾದೊಂದಿಗಿನ ವ್ಯಾಪಾರ ವಹಿವಾಟು ಸುಮಾರು 70 ಬಿಲಿಯನ್ ಡಾಲರ್ ದಾಟಿದ್ದರು ಆಮದು ರಫ್ತಿಗಿಂದ ಎಷ್ಟೋ ಪಾಲು ಹೆಚಿದ್ದು ಸುಮಾರು 50ಬಿಲಿಯನ್ ಡಾಲರ್ಗಳ ಕೊರತೆಯನ್ನು ಎದುರಿಸುತ್ತಿದೆ. ಅದರಲ್ಲೂ ಅದಿರು ಮೊದಲಾದ ಕಚ್ಚಾವಸ್ತುಗಳು ಭಾರತದ ರಫ್ತಿನ ಪಟ್ಟಿಯಲ್ಲಿದ್ದರೆ ಸಿದ್ಧವಸ್ತುಗಳು, ಕಬ್ಬಿಣ, ಆಟಿಕೆಗಳು, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಸಾಮಗ್ರಿಗಳು ಚೀನಾದಿಂದ ಆಮದಾಗುತ್ತವೆ, ಅಷ್ಟೇ ಅಲ್ಲದೇ ಭಾರತದೊಂದಿಗೆ ಮುಕ್ತವ್ಯಾಪಾರ ಒಪ್ಪಂದ ಹೊಂದಿರುವ ಸಾರ್ಕ ದೇಶಗಳು, ಥೈಲಾಂಡ್ ಮೊದಲಾದ ದೇಶಗಳ ಮುಖಾಂತರವೂ ಚೀನಾ ನಿರ್ಮಿತ ವಸ್ತುಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಆದರೆ ಭಾರತದ ಮಾಹಿತಿ ತಂತ್ರಜ್ಞಾನ, ಇಂಜಿನಿಯರಿಂಗ್ ಕಂಪನಿಗಳು ಚೀನಾದಲ್ಲಿ ವ್ಯವಹಾರ ಪ್ರಾರಂಭ ಮಾಡಲು ಹರಸಾಹಸ ಪಡಬೇಕಾಗಿದೆ.
ಏಷಿಯಾ ಖಂಡದ ಯುಗವೆಂದು ಹೇಳಲಾಗುವ ಇಪ್ಪತ್ತೊಂದನೇ ಶತಮಾನದಲ್ಲಿ ಭಾರತ ಮತ್ತು ಚೀನಾಗಳ ನಡುವೆ ಪ್ರಬಲ ಪೈಪೋಟಿ ನಡೆಯುವುದಂತೂ ಸತ್ಯ. ಆದ್ದರಿಂದ ಭಾರತದ ಮಟ್ಟಿಗೆ ತನ್ನ ಹಿತಕಾರಿಯಲ್ಲದ ನೆರೆದೇಶವಾದ ಚೀನಾದ ಆಲೋಚನೆ, ತಂತ್ರಗಾರಿಕೆ ಮತ್ತು ಆಕ್ರಮಕ ನಡೆಗಳನ್ನು ಅರಿಯಬೇಕಾದ ಅನಿವಾರ್ಯತೆಯಿದೆ.

No comments:
Post a Comment