Monday, October 10, 2016

ಜಮ್ಮು ಕಾಶ್ಮೀರದ ಕುರಿತು ತಿಳಿದುಕೊಳ್ಳಬೇಕಾದ ಒಂದಿಷ್ಟು

(ವಿಕ್ರಮ, ವಿಜಯದಶಮಿ ವಿಶೇಷಾ೦ಕ 2016 )

        ಸ್ವತಂತ್ರ ಭಾರತ ಉಗಮಗೊಂಡು ಏಳು ದಶಕಗಳು ಕಳೆದರು ದೇಶದ ಒಂದು ಪ್ರಮುಖ ರಾಜ್ಯ ಸಮಸ್ಯೆಯಾಗಿ ಉಳಿದಿದೆ ಹಾಗೂ ಇಂದಿಗೂ ಅದರ ವಿಲೀನದ ಪ್ರಶ್ನೆಯನ್ನು ಎತ್ತಲಾಗುತ್ತಿದೆ ಎನ್ನುವ ಅಂಶವೇ ಜಮ್ಮು ಕಾಶ್ಮೀರವನ್ನು ಕುರಿತು ಕುತೂಹಲವನ್ನು ಹುಟ್ಟಿಸುತ್ತದೆ. ಮಗ್ಗುಲ ಮುಳ್ಳು ಎಂದೇ ಕರೆಯಬಹುದಾದ ನೆರೆಯ ಪಾಕಿಸ್ತಾನ ಅವಕಾಶ ಸಿಕ್ಕಾಗಲೆಲ್ಲ ಭಾರತಕ್ಕೆ ಮಸಿಬಳಿಯಲು ಕಾಶ್ಮೀರ ವಿಷಯವನ್ನು ಎತ್ತುತ್ತದೆ. ಭಾರತದೊಂದಿಗಿನ ನಡೆಸಿದ ನೇರ ಯುದ್ಧದಲ್ಲಿ ಸೋಲುಂಡ ಪಾಕಿಸ್ತಾನ ಭಯೋತ್ಪಾದನೆಯ ಮೂಲಕ ಛಾಯಾ ಸಮರಮಾರ್ಗವನ್ನು ಹಿಡಿದಿದ್ದು ಕಾಶ್ಮೀರ ಅದರ ಪ್ರಥಮ ಗುರಿ ಎನ್ನುವುದು ಸುಸ್ಪಷ್ಟವಾಗಿದೆ. ಇನ್ನೊಂದೆಡೆ ಪೂರ್ವದ ಅರುಣಾಚಲವು ತನ್ನದು ಎಂದು ಹೇಳುವ ಚೀನಾ ಲಢಾಕ್ ಪ್ರದೇಶದ ಭೂಭಾಗವನ್ನು ಕಬಳಿಸಿದ್ದಲ್ಲದೇ ಆಗಾಗ ಗಡಿಯಲ್ಲಿ ತಂಟೆ ನಡೆಸುತ್ತದೆ. ಪಾಕಿಸ್ತಾನ, ಅಪಘಾನಿಸ್ತಾನ, ಚೀನಾ-ಟಿಬೇಟ್ ದೇಶಗಳೊಡನೆ ಗಡಿಹಂಚಿಕೊಂಡಿರುವ ಜಮ್ಮು ಕಾಶ್ಮೀರ ಪ್ರದೇಶ ಸರ್ವವಿಧದಲ್ಲೂ ಅತ್ಯಂತ ಆಯಕಟ್ಟಿನ ಪ್ರದೇಶ. ಮಧ್ಯ ಏಷಿಯಾ ಮತ್ತು ಯೂರೋಪಗಳಿಗೆ ಕಾಶ್ಮೀರದ ಮೂಲಕ ರಸ್ತೆ ಸಂಪರ್ಕ ಸಾಧ್ಯವಿದೆ. ಇತಿಹಾಸ ಪ್ರಸಿದ್ಧ ವ್ಯಾಪಾರಿ ಮಾರ್ಗ ಸಿಲ್ಕ್ ರೂಟ್ ಕಾಶ್ಮೀರದ ಗಿಲ್ಗಿಟ್ ಮೂಲಕವೇ ಹಾದುಹೋಗುವುದು. ದಕ್ಷಿಣ ಏಷಿಯಾಕ್ಕೆ ನೀರುಣಿಸುವ ಅನೇಕ ನದಿಗಳ ಉಗಮ ಸ್ಥಾನ ರಾಜ್ಯದ ಹಿಮಾಲಯ ಪ್ರದೇಶ. ಒಂದು ರೀತಿಯಲ್ಲಿ ಈ ಆಯಕಟ್ಟಿನ ಪ್ರದೇಶವನ್ನು ನಿಯಂತ್ರಿಸುವವರು ಇಡೀ ಏಷಿಯಾವನ್ನು ಪ್ರಭಾವಿಸಬಲ್ಲರು. ಆದ್ದರಿಂದ ಜಮ್ಮು ಕಾಶ್ಮೀರ ಭಾರತದ ಮಟ್ಟಿಗೆ ಅತ್ಯಂತ ಮಹತ್ವದ ಪ್ರದೇಶವಾಗಿದೆ.


      ಇದಲ್ಲದೇ ಜಮ್ಮು ಕಾಶ್ಮೀರದ ಕುರಿತು ತಿಳಿದುಕೊಳ್ಳಲು ಇನ್ನೂ ಕೆಲವು ಕಾರಣಗಳಿವೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಾನವ ಹಕ್ಕು ಉಲ್ಲಂಘನೆಯ ವಿಷಯ ಬಂದಾಗಲೆಲ್ಲ ಭಾರತಕ್ಕೆ ಮಸಿ ಬಳಿಯಲು ಕಾಶ್ಮೀರದ ವಿಷಯ ತರಲಾಗುತ್ತದೆ. ಭಾರತೀಯ ಸೇನೆ ಕಾಶ್ಮೀರದಲ್ಲಿ ಅಕ್ಷಮ್ಯ ಅಪರಾಧವನ್ನೆಸಗಿದೆ ಎಂದು ಗುಲ್ಲೆಬ್ಬಿಸಲಾಗುತ್ತದೆ. ಮಾನವ ಹಕ್ಕು ವಿಷಯವನ್ನೇ ವ್ಯಪಾರಿ ಬಂಡವಾಳ ಮಾಡಿಕೊಂಡಿರುವ ಕೆಲವು ಸಂಸ್ಥೆಗಳು ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲೂ ಕಾಶ್ಮೀರಿ ವಿಷಯವನ್ನಿಟ್ಟುಕೊಂಡು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿವೆ. ಜೊತೆಗೆ ನಮ್ಮದೇ ದೇಶದ ಒಂದು ವರ್ಗದ ಬುದ್ಧಿಜೀವಿಗಳು ಶೈಕ್ಷಣಿಕ, ರಾಜಕೀಯ ಹಾಗೂ ನೀತಿ ನಿರೂಪಕ ವರ್ಗದ ವ್ಯಕ್ತಿಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಜಮ್ಮು ಕಾಶ್ಮೀರ ರಾಜ್ಯವನ್ನು ಕುರಿತು ತಪ್ಪು ಮಾಹಿತಿಯನ್ನು ಹರಡುವಲ್ಲಿ ಸಕ್ರಿಯರಾಗಿದ್ದಾರೆ. ನಿಯಂತ್ರಣ ರೇಖೇಯನ್ನೆ ಭಾರತ ಪಾಕಿಸ್ತಾನದ ಶಾಶ್ವತ ಗಡಿಯನ್ನಾಗಿ ಮಾಡಬೇಕೆನ್ನುವುದರಿಂದ ಹಿಡಿದು, ಕಾಶ್ಮೀರ ಸ್ವಾಯತ್ತವಾಗಲಿ, ಪಾಕಿಸ್ತಾನಕ್ಕೇ ಸೇರಲಿ ಎಂದು ಪ್ರತಿಪಾದಿಸುವವರೂ ನಮ್ಮಲ್ಲಿದ್ದಾರೆ.
        ಎರಡನೆಯದಾಗಿ ಜಮ್ಮು ಕಾಶ್ಮೀರ ರಾಜ್ಯದ ಜನಸಂಖ್ಯೆ 1.2ಕೋಟಿ. ಅಂದರೆ ದೇಶದ ಜನಸಂಖ್ಯೆಯ ಶೇ 1ರಷ್ಟು ಮಾತ್ರ ಆದರೆ 2000ದಿಂದ 2014ರವರೆಗಿನ ಕಾಲದಲ್ಲಿ ಕೇಂದ್ರದಿಂದ ಜಮ್ಮು ಕಾಶ್ಮೀರ ಪಡೆದ ಅನುದಾನ ಶೇ 10ರಷ್ಟು (ಸುಮಾರು 1.14ಲಕ್ಷ ಕೋಟಿ ರೂಪಾಯಿಗಳು), ತಲಾವಾರು ಲೆಕ್ಕ ಮಾಡಿದಾಗ ಇದು ಉತ್ತರಪ್ರದೇಶದಂತಹ ರಾಜ್ಯದ ತುಲನೆಯಲ್ಲಿ 21 ಪಟ್ಟು ಹೆಚ್ಚು. ಜೊತೆಗೆ ಕಣಿವೆಯಲ್ಲಿನ ಭಯೋತ್ಪಾದನೆ ನಿಗ್ರಹ ಮತ್ತು ಶಾಂತಿ ಸ್ಥಾಪನೆಯ ಸಲುವಾಗಿ ಸೇನೆಯನ್ನು ನಿಯೋಜಿಸಿದ್ದರ ವೆಚ್ಚವನ್ನೂ ಸೇರಿಸಬಹುದು. ರಾಜ್ಯವೊಂದರಲ್ಲಿ ಆಗಾಗ ಭುಗಿಲೇಳುವ ವಿರೋಧಿ ಶಕ್ತಿಗಳನ್ನು ಸಂತೈಸಲು ಇಷ್ಟೊಂದು ಸಂಪನ್ಮೂಲ ಪೋಲಾಗಬೇಕೆ? ಎನ್ನುವುದು ಒಂದು ಗಹನವಾದ ಪ್ರಶ್ನೆ.
      ಮೂರನೆಯದಾಗಿ, ಭಯೋತ್ಪಾದನಾ ಚಟುವಟಿಕೆಗಳ ಮಾಹಿತಿ ಕಲೆಹಾಕುವ ಸಂಸ್ಥೆ ಸೌತ್ ಏಷಿಯಾ ಟೆರರಿಸಂ ಪೋರ್ಟಲ್‌ನ ಅಂಕಿ ಅಂಶಗಳ ಪ್ರಕಾರ 1988ರಿಂದ ಇಂದಿನವರೆಗೆ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಭಯೋತ್ಪಾದನೆಯ ಹುಸಿಯುದ್ಧದಲ್ಲಿ 6229 ಯೋಧರು ಪ್ರಾಣಾರ್ಪಣೆಗೈದಿದ್ದಾರೆ. ಇತ್ತೀಚೆಗೆ ಹುತಾತ್ಮರಾದ ಗೋಕಾಕಿನ ಬಸವರಾಜ ಚನ್ನಪ್ಪಾ ಪಾಟಿಲ್, ನವಲಗುಂದದ ಹಸನಸಾಬ್  ಕುಡವಂದ್‌ರಂತಹ ಕರ್ನಾಟಕದ ಯೋಧರು ದೂರದ ಕಾಶ್ಮೀರದಲ್ಲಿ ಉಗ್ರಗಾಮಿಗಳ ಹೋರಾಟದಲ್ಲಿ ಪ್ರಾಣ ತೆತ್ತಿದ್ದಾರೆ. ಜೊತೆಗೆ ಸುಮಾರು 14 ಸಾವಿರಕ್ಕೂ ಹೆಚ್ಚು ನಾಗರಿಕರು, 23 ಸಾವಿರಕ್ಕೂ ಹೆಚ್ಚು ಉಗ್ರಗಾಮಿಗಳು ಬಲಿಯಾಗಿದ್ದಾರೆ. ಭಯೋತ್ಪಾದನೆಯ ಮೂಲಕ ಭಾರತದ ಮೇಲೆ ಛಾಯಾ ಸಮರದ ಮಾರ್ಗ ಹಿಡಿದಿರುವ ಪಾಕಿಸ್ತಾನದ ಪ್ರಮುಖ ಗುರಿ ಕಾಶ್ಮೀರ. ಕೊನೆಯದಾಗಿ ಒಂದು ಪ್ರದೇಶ ಮುಸಲ್ಮಾನ ಬಹುಸಂಖ್ಯವಾಗಿ ಪರಿವರ್ತಿತವಾದಾಗ ಉಂಟಾಗುವ ಸನ್ನಿವೇಶದ ಅಧ್ಯಯನ ಮಾದರಿಯನ್ನು ಕಾಶ್ಮೀರ ಕಣಿವೆಯಲ್ಲಿ ಕಾಣಬಹುದು.

ಜಮ್ಮು ಮತ್ತು ಕಾಶ್ಮೀರದ ಭೌಗೋಳಿಕ ಹರಹು ಮತ್ತು ಜನಸಮುದಾಯ
        2,22,236ಚದರ ಕಿಮೀ ವ್ಯಾಪ್ತಿಯ ಜಮ್ಮು ಕಾಶ್ಮೀರದಲ್ಲಿ ಮೂರು ಪ್ರಾಂತಗಳಿವೆ. 36 ಸಾವಿರ ಚದರ ಕಿಮೀ ವಿಸ್ತೀರ್ಣದ ಜಮ್ಮು, ಸುಮಾರು 22 ಸಾವಿರ ಚದರ ಕಿಮೀ ವಿಸ್ತೀರ್ಣದ ಕಾಶ್ಮೀರ ಹಾಗೂ 1 ಲಕ್ಷದ 64 ಸಾವಿರ ಚದರ ಕಿಮೀ ವಿಸ್ತೀರ್ಣವುಳ್ಳ ಲಢಾಕ್. ಇದರಲ್ಲಿ 78 ಸಾವಿರ ಚದರ ಕಿಮೀ (ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಪಿಒಕೆ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ) ಪಾಕಿಸ್ತಾನದ ವಶದಲ್ಲಿಯೂ ಹಾಗೂ ಲಢಾಕ ಪ್ರಾಂತದ 27.5 ಸಾವಿರ ಚದರ ಕಿಮೀ ಮತ್ತು ಪಾಕಿಸ್ತಾನದಿಂದ ಉಡುಗೊರೆಯಾಗಿ ಪಡೆದ ಉತ್ತರ ಭಾಗದ 5 ಸಾವಿರ ಚದರ ಕಿಮೀ ಚೀನಾದ ವಶದಲ್ಲಿಯೂ ಇದೆ. ಅಂದರೆ ವಾಸ್ತವವಾಗಿ ಕಾಶ್ಮೀರ ಬ್ರಿಟಿಷರ ಕಾಲದ ಅಥವಾ ಮಹಾರಾಜ ಹರಿಸಿಂಗ್‌ರ ಆಳ್ವಿಕೆಗೆ ಒಳಪಟ್ಟಿದ್ದ ಜಮ್ಮು ಕಾಶ್ಮೀರ ರಾಜ್ಯದ 7.16% ಕ್ಷೇತ್ರ ಹಾಗೂ ಪ್ರಸ್ತುತ ಭಾರತೀಯ ಆಡಳಿತಕ್ಕೊಳಪಟ್ಟ ರಾಜ್ಯದ 15.63% ಕ್ಷೇತ್ರ ಮಾತ್ರ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಜಮ್ಮು ಕಾಶ್ಮೀರ ಮುಸಲ್ಮಾನ ಜನಸಂಖ್ಯಾ ಬಾಹುಳ್ಯವಿದೆ ಎನ್ನುವುದು ನಿಜವಾದರು ಅದು ಕೇವರ ಕಾಶ್ಮೀರ ಕಣಿವೆಯಲ್ಲಿ ಮಾತ್ರ. ಜಮ್ಮು ಕಾಶ್ಮೀರದಲ್ಲಿ ಸುನ್ನಿ ಮುಸಲ್ಮಾನರನ್ನು ಹೊರತುಪಡಿಸಿ ಶಿಯಾ, ಡೋಗ್ರಾ, ಕಾಶ್ಮೀರಿ ಪಂಡಿತ, ಸಿಖ್, ಬೌದ್ಧ, ಗುಜ್ಜರ, ಬಕರ್‌ವಾಲಾ, ಪಹಾರಿ,ಬಾಲ್ಟಿ, ಕ್ರಿಶ್ಚಿಯನ್ ಇತ್ಯಾದಿ ಬೇರೆ ಬೇರೆ ಮತೀಯ ಸಂಪ್ರದಾಯಗಳಿಗೆ ಸೇರಿದ 14 ಪ್ರಮುಖ ಕೋಮುಗಳಿವೆ. ಲಢಾಕಿನಲ್ಲಿ ಲೇಹ್ ಮತ್ತು ಕಾರ್ಗಿಲ್ ಎರಡು ಪ್ರಮುಖ ಪ್ರದೇಶಗಳು. ಲೆಹ್‌ನಲ್ಲಿ 77% ಬೌದ್ಧ ಸಮುದಾಯ ಹಾಗೂ ಇತರೆ ಷಿಯಾ ಮುಸ್ಲಿಂ ಮತ್ತು ಹಿಂದೂ ಜನವಸತಿಯಿದೆ. ಕಾರ್ಗಿಲ್ ಜಿಲ್ಲೆಯಲ್ಲಿ 80% ಪಹಾರಿ, ಗುಜ್ಜರ್ ಇತ್ಯಾದಿ ಗುಡ್ಡಗಾಡು ಮುಸ್ಲಿಂ ಸಮುದಾಯ ಹಾಗೂ ಇತರೆ ಅಲ್ಪಸಂಖ್ಯೆಯಲ್ಲಿ ಬೌದ್ಧರಿದ್ದಾರೆ. ಜಮ್ಮು ಪ್ರಾಂತದಲ್ಲಿ ಹಿಂದೂ-ಸಿಖ್ ಮತ್ತು ಮುಸ್ಲಿಂ ಜನಸಂಖ್ಯೆಯ ಅನುಪಾತ 70:30 ಪ್ರತಿಶತದಷ್ಟಿದೆ. ಇವರಲ್ಲಿ 15 ಲಕ್ಷಕ್ಕೂ ಅಧಿಕ ನಿರ್ವಸಿತರಿದ್ದಾರೆ. ಕಾಶ್ಮೀರ ಪ್ರಮುಖವಾಗಿ ಎರಡು ಪ್ರದೇಶಗಳನ್ನು ಒಳಗೊಂಡಿದೆ; ೭೦% ಭೂಭಾಗವುಳ್ಳ ಗುಡ್ಡಗಾಡು ಪ್ರದೇಶ ಮತ್ತು ಉಳಿದಂತೆ ಕಾಶ್ಮಿರಿ ಕಣಿವೆ ಪ್ರದೇಶ. ಗುಡ್ಡಗಾಡು ಪ್ರದೇಶದಲ್ಲಿ ಜನಾಂಗೀಯವಾಗಿ ಕಾಶ್ಮೀರಿಗಳಲ್ಲದ ಗುಜ್ಜರ, ಬಾಕೆರ್ವಾಲ್, ದಾರ್ದ, ಬಾಲ್ಟಿ ಇತ್ಯಾದಿ ಬುಡಕಟ್ಟು ಮುಸ್ಲಿಂ ಜನಾಂಗಗಳು ವಾಸವಾಗಿದ್ದರೆ ಕಾಶ್ಮೀರ ಕಣಿವೆಯಲ್ಲಿ ಬಹುಸಂಖೈಯಲ್ಲಿ ಸುನ್ನಿ ಮುಸ್ಲಿಂ ವಸತಿಯಿದೆ. ಅಂದರೆ ಕಾಶ್ಮೀರದಲ್ಲಿ 97% ಮುಸ್ಲಿಂ ಸಮುದಾಯವಿದ್ದರೂ ಪಂಗಡಗಳಾಗಿ ವಿಂಗಡನೆಗೊಂಡಿವೆ.
       ಕಾಶ್ಮೀರದ ಬಹುಸಂಖ್ಯೆಯ ಜನರು ಕಾಶ್ಮೀರಿ ಭಾಷೆಯನ್ನು ಮಾತನಾಡುವುದಿಲ್ಲ. ಲಢಾಕಿನ ಮುಖ್ಯ ಭಾಷೆ ಬಾಲ್ಟಿ ಮತ್ತು ಲಢಾಕಿ. ಹಾಗೆಯೇ ಜಮ್ಮುವಿನ ಮುಖ್ಯ ಭಾಷೆ ಡೋಗ್ರಿ.  ಇನ್ನೊಂದು ಆಸಕ್ತಿಕರ ವಿಷಯವೆಂದರೆ ರಾಜ್ಯದ ಬಳಕೆಯಲ್ಲಿರುವ ಭಾಷೆಗಳ ಶೇಕಡಾವಾರು ಪ್ರಮಾಣವನ್ನು ನೋಡಿದರೆ ಕಾಶ್ಮೀರಿ 35%, ಡೊಗ್ರಿ 21%, ಹಿಂದಿ 18%ರಷ್ಟಿದೆ. ಆದರೂ 1%ಕ್ಕಿಂತಲೂ ಕಡಿಮೆ ಜನರ ಬಳಕೆಯ ಭಾಷೆಯಾದ ಉರ್ದು ರಾಜ್ಯದ ಅಧಿಕೃತ ಭಾಷೆಯಾಗಿದೆ. ಉರ್ದು ದಕ್ಷಿಣ ಏಷಿಯಾ ದೇಶಗಳಲ್ಲಿರುವ ಮುಸ್ಲಿಮರೊಟ್ಟಿಗೆ ಗುರುತಿಸಿಕೊಂಡಿದೆ ಎನ್ನುವುದನ್ನು ಗಮನಿಸಬಹುದು.
ಕಾಶ್ಮೀರ, ಲಢಾಕ್ ಮತ್ತು ಜಮ್ಮು ಈ ಮೂರೂ ಪ್ರದೇಶಗಳು ಭೌಗೋಲಿಕವಾಗಿ, ಐತಿಹಾಸಿಕವಾಗಿ, ಸಂಪ್ರದಾಯ, ಧಾರ್ಮಿಕ ಆಚರಣೆ, ಭಾಷೆಗಳ ದೃಷ್ಟಿಯಿಂದ ಒಂದಕ್ಕಿಂತ ಇನ್ನೊಂದು ಭಿನ್ನ, ಇವುಗಳ ನಡುವೆ ಯಾವುದರಲ್ಲೂ ಹೋಲಿಕೆಯಿಲ್ಲ. ಜಮ್ಮು ಮತ್ತು ಲಢಾಕ್ ಪ್ರಾಂತಗಳು ಆರ್ಥಿಕ ಅಭೀವೃದ್ಧಿಯ ದೃಷ್ಟಿಯಿಂದಲೂ ಕಡೆಗಣಿಸಲ್ಪಟ್ಟಿವೆ.

ಪ್ರತ್ಯೇಕತೆಯೆ ಧ್ವನಿ ಇರುವುದು ಕಾಶ್ಮೀರ ಪ್ರಾಂತದ ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ
       ಪ್ರತೀ ಬಾರಿ ಪ್ರತ್ಯೇಕತೆಯ ಕೂಗು ಹೆಚ್ಚಾಗಿ ಹಿಂಸಾಚಾರ ಬುಗಿಲೆದ್ದಾಗಲೂ ಇಡೀ ಜಮ್ಮು ಕಾಶ್ಮೀರ ಹೊತ್ತುರಿಯುತ್ತಿದೆ ಎಂದು ಮಾಧ್ಯಮಗಳು ಬಿಂಬಿಸುತ್ತವೆ. ಆದರೆ ಇದು ಭಾರತವಿರೋಧಿ ಬೇರಿರುವುದು ರಾಜ್ಯದ ಒಂದು ಸೀಮಿತ ಪ್ರದೇಶದಲ್ಲಿ ಎನ್ನುವುದ ತಥ್ಯ. ಜಮ್ಮು ಕಾಶ್ಮೀರದಲ್ಲಿ ಒಟ್ಟೂ 22 ಜಿಲ್ಲೆಗಳಿವೆ ಅವುಗಳಲ್ಲಿ ಕೇವಲ ಶ್ರೀನಗರ, ಬಾರಾಮುಲ್ಲಾ, ಅನಂತನಾಗ್, ಕುಲ್‌ಗಾಮ್, ಪುಲ್‌ವಾಮಾ ಈ ಐದು ಜಿಲ್ಲೆಗಳಲ್ಲಿ ಮಾತ್ರ ಪ್ರತ್ಯೇಕತೆಯ ಚಳುವಳಿ ಹೋರಾಟ ನಡೆಯುವುದು. ಉಳಿದ 17 ಜಿಲ್ಲೆಗಳಲ್ಲಿ ಇದುವರೆಗೆ ಒಮ್ಮೆಯೂ ಭಾರತ ವಿರೋಧಿ ಪ್ರದರ್ಶನ ಹರತಾಳಗಳು ನಡೆದಿಲ್ಲ. ಇನ್ನೊಂದು ಮುಖ್ಯ ಅಂಶ ಎಂದರೆ ಈ ಐದು ಜಿಲ್ಲೆಗಳು ಪಾಕಿಸ್ತಾನದ ಗಡಿ ಮತ್ತು ಗಡಿನಿಯಂತ್ರಣ ರೇಖೆಯಿಂದ ಸಾಕಷ್ಟು ದೂರದಲ್ಲಿವೆ. ಗಡಿನಿಯಂತ್ರಣ ರೇಖೆಗೆ ತಾಗಿರುವ ಪೂಂಛ್ ಮತ್ತು ಕಾರ್ಗಿಲ್ ಜಿಲ್ಲೆಗಳು ಶೇ. 90ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿವೆ. ಆದರೆ ಈ ಜಿಲ್ಲೆಗಳಲ್ಲಿ ಇದುವರೆಗೆ ಒಬ್ಬನೇ ಒಬ್ಬ ಪ್ರತ್ಯೇಕತಾವಾದಿ ನಾಯಕ ಹುಟ್ಟಿಲ್ಲ, ಎಂದೂ ಭಾರತವಿರೋಧಿ ಪ್ರದರ್ಶನ ನಡೆದಿಲ್ಲ.
      1947ರ ಸಂತರದ ಕಾಶ್ಮೀರದ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಸುನ್ನಿ ಮುಸಲ್ಮಾನ ಕೇಂದ್ರಿತ ರಾಜಕೀಯ ವ್ಯವಸ್ಥೆ ತನ್ನ ಬೇರನ್ನು ಆಳವಾಗಿ ಇಳಿಸಿದೆ ಎನ್ನುವುದನ್ನು ಸ್ಪಷ್ಟವಾಗಿ ಕಾಣುಬಹುದು. ರಾಜ್ಯದ ಶೇ 15ರಷ್ಟು ಪ್ರದೇಶದ ಮೂಲದಲ್ಲಿರುವ ಸುಮಾರು 33%ರಷ್ಟಿರುವ ಕಾಶ್ಮೀರಿ ಮಾತನಾಡುವ ಸುನ್ನಿ ಮುಸಲ್ಮಾನ ಸಮುದಾಯಕ್ಕೆ ಸೇರಿದ ಜನರು ಜಮ್ಮು ಕಾಶ್ಮೀರ ಆಡಳಿತ, ವ್ಯಾಪಾರ ವಹಿವಾಟು, ಕೃಷಿ ಎಲ್ಲವನ್ನೂ ನಿಯಂತ್ರಿಸುತ್ತಾರೆ. ಪ್ರತ್ಯೇಕತಾವಾದಿ ಹುರಿಯತ್ ಕಾನ್ಪರೆನ್ಸ್ ಹಾಗೂ ರಾಜ್ಯದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ(ಪಿಡಿಪಿ) ಮತ್ತು ನ್ಯಾಶನಲ್ ಕಾನ್ಫರೆನ್ಸ್(ಎನ್‌ಸಿ)ಗಳ ನೀತಿಗಳನ್ನು ಇದೇ ಗುಂಪು ನಿರೂಪಿಸುತ್ತದೆ. ಕಾಂಗ್ರೆಸ್‌ನ ನೀತಿಯನ್ನು ಕೂಡ ಪ್ರಭಾವಿಸುತ್ತದೆ.
        ಹುರಿಯತ್ ಕಾನ್ಫರೆನ್ಸ್ ಮುಂತಾದ ಪ್ರತ್ಯೇಕತಾವಾದಿ ಸಂಘಟನೆಗಳು, ಸ್ವಾಯತ್ತತೆಯ ಬೇಡಿಕೆಯಿಡುವ ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ ಮೊದಲಾದ ರಾಜಕೀಯ ಪಕ್ಷಗಳು, ಪಾಕಿಸ್ತಾನಿ ಭಯೊತ್ಪಾದಕರ ಒಳನುಸುಳುವಿಕೆಗೆ ಸಹಾಯ ಮಾಡುವ ಗುಂಪುಗಳು, ಪ್ರತಿಭಟನೆಯ ಹೆಸರಿನಲ್ಲಿ ಕಲ್ಲೆಸೆದು ಹಿಂಸಾಚಾರ ಮಾಡುವವರು, ದೆಹಲಿಯ ಬುದ್ದಿಜೀವಿ ವರ್ಗಗಳಲ್ಲಿ ಪ್ರತ್ಯೇಕತೆಯ ಭಾಷಣ ಬಿಗಿಯುವವರು, ಮಾಧ್ಯಮಗಳಲ್ಲಿ ಕಾಶ್ಮೀರವನ್ನು ಪ್ರತಿನಿಧಿಸುವವರು ಇವರೆಲ್ಲರೂ ಕಾಶ್ಮೀರಿ ಕಣಿವೆಯ ಸುನ್ನಿ ಮುಸಲ್ಮಾನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜಮ್ಮು ಕಾಶ್ಮೀರದ ನಾಯಕರೆಂದು ಪ್ರತಿಬಿಂಬಿಸಲ್ಪಡುವ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಮಂತ್ರಿ ನ್ಯಾಶನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲ, ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸೈಫ್ ಉದ್ದೀನ ಸೋಜ್, ಗುಲಾಮ್ ನಬೀ ಆಜಾದ್, ಮಾಜಿ ಪ್ರತ್ಯೇಕತಾ ಹೋರಾಟಗಾರ ರಾಜ್ಯಸಂಪುಟದಲ್ಲಿ ಹಾಲಿ ಮಂತ್ರಿ ಸಜಾದ್ ಲೋನ್, ಪ್ರತ್ಯೇಕತಾವಾದಿ ಮುಂದಾಳುಗಳಾದ ಅಬ್ದುಲ್ ಗನಿ ಭಟ್, , ಯಾಸಿನ್ ಮಲಿಕ, ಶಬ್ಬೀರ್ ಶಾ, ಗ್ರ್ಯಾಂಡ್ ಮುಫ್ತಿ, ಹುರಿಯತ್ ಕಾನ್ಫರೆನ್ಸ್‌ನ ಸೈಯ್ಯದ್ ಅಲಿ ಶಾ ಗಿಲಾನಿ, ಮಿರ್ಜ್ವಾ ಉಮರ್ ಫಾರೂಕ್ ಇವರೆಲ್ಲ ಒಂದೇ ಪಂಗಡಕ್ಕೆ ಸೇರಿದವರು, ’ಕಾಶ್ಮೀರಿ ಸುನ್ನಿ ಮುಸಲ್ಮಾನ’. ಅದಲ್ಲದೆ ಜಮ್ಮು ಕಾಶ್ಮೀರ ಹೈಕೋರ್ಟ ಬಾರ್ ಅಸೋಸಿಯೇಶನ್ ಅಧ್ಯಕ್ಷ, ಜಮ್ಮು ಕಾಶ್ಮೀರ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ಅಧ್ಯಕ್ಷ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಇವರೆಲ್ಲ ಕಾಶ್ಮೀರಿ ಸುನ್ನಿ ಸಮುದಾಯಕ್ಕೆ ಸೇರಿದವರೇ. 99% ಕಾಶ್ಮೀರಿ ವ್ಯಾಖ್ಯಾನಕಾರರು, ವರದಿಗಾರರು ಸುನ್ನಿ ಮುಸ್ಲಿಮರು, ಕಾಶ್ಮೀರದ ಬಹುತೇಕ ಎಲ್ಲಾ ಸಾಮಾಜಿಕ ಜನಸಂಘಟನೆಗಳು ಸುನ್ನಿ ಮುಸಲ್ಮಾನರ ನಿಯಂತ್ರಣದಲ್ಲೇ ಇದೆ. ರಾಜ್ಯದ ಆಡಳಿತ ಮತ್ತು ಆಡಳಿತಾತ್ಮಕ ಸೇವೆಗಳಲ್ಲಿ ಕಾಶ್ಮೀರಿ ಕಣಿವೆಯ ಸುನ್ನಿ ಮುಸ್ಲಿಮರದೇ ಪ್ರಾಬಲ್ಯವಿದೆ. ಆದರೆ, ಉಳಿದಂತೆ ಷಿಯಾ ಮತ್ತು ಗುಡ್ಡಗಾಡು ಪ್ರದೇಶದ ಗುಜ್ಜರ, ಪಹಾಡಿ ಇತ್ಯಾದಿ ಮುಸ್ಲಿಂ ಜನರ ನಡುವಿನಿಂದ ಅಥವಾ ರಾಜ್ಯದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ೮೫%ಗೂ ಮಿಕ್ಕಿ ಭೂಭಾಗ ಹೊಂದಿರುವ ಜಮ್ಮು ಮತ್ತು ಲಢಾಕ್ ಪ್ರಾಂತಗಳ ಜನರಿಗೆ ರಾಜ್ಯದ ಆಡಳಿತ, ವ್ಯಾಪಾರ, ಪ್ರವಾಸೋದ್ಯಮಗಳಲ್ಲಿ ಸರಿಯಾದ ಪ್ರಾತಿನಿಧ್ಯ ಇದುವರೆಗೂ ದೊರಕಿಲ್ಲ.

ಸಂವಿಧಾನದ 370ನೇ ವಿಧಿ ತಾತ್ಕಾಲಿಕ, ನಮಗೆ ಗೊತ್ತಿರದ 35A!
ಭಾರತದೊಂದಿಗಿನ ಜಮ್ಮು ಕಾಶ್ಮೀರ ವಿಲೀನವೇ ಪೂರ್ಣವಾಗಿಲ್ಲ, ರಾಜ್ಯದಲ್ಲಿ ಜನಮತಗಣನೆ ನಡೆಸಬೇಕು ಮತ್ತು ಸ್ವಾಯತ್ತv ನೀಡಬೇಕು ಮುಂತಾದ ಬೇಡಿಕೆಗಳನ್ನು ಆಗಾಗ ಮುಂದಿಡಲಾಗುತ್ತದೆ. ಕಾಶ್ಮೀರ ಭಾರತ ರಾಷ್ಟ್ರದ ಅಭಿನ್ನ ಅಂಗವಾಗಿತ್ತು ಎನ್ನುವುದು ಐತಿಹಾಸಿಕ ಸತ್ಯ. 1947 ಆಗಸ್ಟ 15ರ ಮಧ್ಯರಾತ್ರಿಗೆ ಭಾರತೀಯ ಸ್ವಾತಂತ್ರ್ಯ ಕಾಯಿದೆ 1947 (India Independence Act 1947)ರ ಅನ್ವಯ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟ ಪ್ರಾಂತಗಳ ಮೇಲೆ ಬ್ರಿಟನ್ನಿನ ಸಾರ್ವಭೌಮತೆ ಕೊನೆಗೊಂಡುಹೊಸದಾಗಿ ನಿರ್ಮಿತವಾದ ಡೊಮಿನಿಯನ್‌ಗಳಾದ ಭಾರತ ಮತ್ತು ಪಾಕಿಸ್ತಾನಗಳಿಗೆ ಅಧಿಕಾರ ಹಸ್ತಾಂತರಗೊಂಡಿತು. ಹಾಗೆಯೇ ಸಾರ್ವಭೌಮತೆ ಪಡೆದ ಸಂಸ್ಥಾನ ರಾಜ್ಯಗಳು ಒಂದೊಂದಾಗಿ ಭಾರತ ಮತ್ತು ಪಾಕಿಸ್ತಾನಗಳಲ್ಲಿ ವಿಲೀನಗೊಂಡವು. ಮೈಸೂರು, ಟ್ರಾವಾಂಕುರ್, ಪಟಿಯಾಲ ಮೊದಲಾದ ಸಂಸ್ಥಾನಗಳು ಭಾರತದೊಂದಿಗೆ ವಿಲಯನ ಒಪ್ಪಂದಕ್ಕೆ ಸಹಿಹಾಕಿದ ಮಾದರಿಯಲ್ಲೇ ಮಹಾರಾಜ ಹರಿಸಿಂಗ್ ಆಳ್ವಿಕೆಗೆ ಒಳಪಟ್ಟಿದ್ದ ಜಮ್ಮು ಕಾಶ್ಮೀರ 1947ರ ಅಕ್ಟೋಬರ್ 26ರಂದು ಭಾರತದಲ್ಲಿ ವಿಲೀನವಾಯಿತು. ಆದ್ದರಿಂದ ಜಮ್ಮು ಕಾಶ್ಮೀರದ ವಿಲೀನ ಅಂತಿಮ ಮತ್ತು ರಾಜ್ಯವು ಭಾರತ ಗಣತಂತ್ರದ ಅವಿಭಾಜ್ಯ ಅಂಗವಾಗಿದೆ. 1947ರಲ್ಲಿ ಪಾಕಿಸ್ತಾನ ಜಮ್ಮು ಕಾಶ್ಮೀರದ ಮೇಲೆ ಆಕ್ರಮಣ ನಡೆಸಿ ರಾಜ್ಯದ ಒಂದಿಷ್ಟು ಭಾಗವನ್ನು ಕಬಳಿಸಿತು. ಪ್ರಧಾನಿ ನೆಹರು ಈ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದ ಪರಿಣಾಮವಾಗಿ ಈ ವಿಷಯಕ್ಕೆ ಶೀಘ್ರ ಪರಿಹಾರ ಸಾಧ್ಯವಿರಲಿಲ್ಲ. 1950ರಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದ್ದರಿಂದ ಯುದ್ಧಪೀಡಿತ ಪ್ರದೇಶವಾದ ಜಮ್ಮು ಕಾಶ್ಮೀರ ರಾಜ್ಯಕ್ಕೆ ಭಾರತದ ಸಂವಿಧಾನವನ್ನು ವಿಸ್ತರಿಸುವ ಸಲುವಾಗಿ ರಾಜ್ಯದ ಶಾಸಕಾಂಗ ಸಭೆಯನ್ನು ರಚಿಸಿ ಒಪ್ಪಿಗೆ ಪಡೆಯುವುದು ಸಾಧ್ಯವಿರಲಿಲ್ಲ. ಆದ್ದರಿಂದ ರಾಜ್ಯದಲ್ಲಿ ಭಾರತ ಗಣತಂತ್ರದ ಸಂವಿಧಾನವನ್ನು ಜಾರಿಗೆ ತರುವ ತಾತ್ಕಾಲಿಕ ಮತ್ತು ಸಂಕ್ರಮಣ ಮಾರ್ಗವಾಗಿ 370ನೇ ವಿಧಿಯನ್ನು ಸೇರಿಸಿ ರಾಷ್ಟ್ರಾಧ್ಯಕ್ಷರಿಗೆ ಸಂವಿಧಾನ ಮತ್ತು ಸಂಸತ್ತು ಅಂಗೀಕರಿಸಿದ ಇತರ ಕಾನೂನುಗಳನ್ನು ಜಾರಿಗೊಳಿಸುವ ಪರಮಾಧಿಕಾರವನ್ನು ನೀಡಲಾಯಿತು. 370ನೇ ವಿಧಿಯಲ್ಲಿ ಶೇಖ್ ಅಬ್ದುಲ್ಲನ ಅಣತಿಯಂತೆ ಕೇಂದ್ರದ ಯಾವುದೇ ಕಾನೂನನ್ನು ಜಾರಿಗೊಳಿಸಬೇಕಾದರೆ ರಾಜ್ಯ ಶಾಸನಸಭೆಯ ಒಪ್ಪಿಗೆ ಪಡೆಯಬೇಕೆಂಬ ವಿಷಯವನ್ನೂ ಸೇರಿಸಲಾಯಿತು. 370ನೇ ವಿಧಿಯು ಕೇವಲ ತಾತ್ಕಾಲಿಕ ಮತ್ತು ಇದು ಜಮ್ಮು ಕಾಶ್ಮೀರ ರಾಜ್ಯಕ್ಕೆ ಸ್ವಾಯುತ್ತತೆಯನ್ನು ನೀಡುತ್ತದೆ ಎನ್ನುವುದು ಸತ್ಯಕ್ಕೆ ದೂರವಾದುದು. ದುರದೃಷ್ಟದ ವಿಷಯವೆಂದರೆ ಶೇಖ್ ಅಬ್ದುಲ್ಲ ಹಾಗೂ ತದನಂತರದ ಜಮ್ಮು ಕಾಶ್ಮೀರದ ಸರ್ಕಾರಗಳು 370ನೇ ವಿಧಿಯ ದುರುಪಯೋಗವನ್ನು ನಿರಂತರವಾಗಿ ನಡೆಸಿಕೊಂಡು ಬಂದಿವೆ. ತಾತ್ಕಾಲಿಕ ಪ್ರಾವಧಾನವಾಗಿದ್ದ 370ನೇ ವಿಧಿ ಇನ್ನೂ ರದ್ದಾಗಿಲ್ಲ. ಇದರ ಜೊತೆಗೆ ನೆಹರು ಶೇಖ್ ಸ್ನೇಹದ ಕೊಡುಗೆಯಾಗಿ 1954ರಲ್ಲಿ ಸಂವಿಧಾನ ತಿದ್ದುಪಡಿಯ ಸಂಸತ್ತಿನ ಪರಮಾಧಿಕಾರವನ್ನೂ ಬೈಪಾಸ್ ಮಾಡಿ ಸಂವಿಧಾನ ಆಜ್ಞೆಯ ಮೂಲಕ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಭಂಧಿಸಿದಂತೆ 35A ಎನ್ನುವ ಹೊಸ ವಿಧಿಯನ್ನು ಸಂವಿಧಾನಕ್ಕೆ ಸೇರಿಸಲಾಯಿತು. ಈ ವಿಧಿಯಲ್ಲಿ ಹೇಳಿದಂತೆ ರಾಜ್ಯ ಸರ್ಕಾರದ ನೌಕರಿ, ರಾಜ್ಯದಲ್ಲಿ ಸ್ಥರಾಸ್ತಿಯನ್ನು ಖರೀದಿಸುವುದು, ನಿವಾಸ ಮಾಡುವುದು, ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ ಮೊದಲಾದ ವಿಷಯಗಳಲ್ಲಿ ರಾಜ್ಯ ಮಾಡುವ ಕಾನೂನುಗಳು ಭಾರತ ಸಂವಿಧಾನ ನೀಡುವ ಮೂಲಭೂತ ಹಕ್ಕುಗಳ ವ್ಯಾಪ್ತಿಯಿಂದ ಪ್ರಶ್ನಾತೀತವಾಗಿವೆ. ಉದಾಹರಣೆಗಾಗಿ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಬೇರೆ ರಾಜ್ಯದ ಜನರು ಭೂಮಿ ಖರೀದಿಸ ವಾಸ ಮಾಡವುದು ಸಾಧ್ಯವಿಲ್ಲ ಎಂದು ಕಾನೂನು ಮಾಡಲಾಗಿದೆ. ಇದು ಭಾರತದ ಸಂವಿಧಾನದ ಪ್ರಕಾರ ಮೂಲಭೂತ ಹಕ್ಕಿಗೆ ವಿರುದ್ಧವಾದುದು ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಾಗಿಲ್ಲ. ಹೀಗೆ ಸಂವಿಧಾನ 370 ಮತ್ತು 35A ವಿಧಿಗಳ ದುರ್ಬಳಕೆಯಿಂದ ಜಮ್ಮು ಕಾಶ್ಮೀರದಲ್ಲಿ ಘೋರ ತಾರತಮ್ಯ ನಿರಂತರ ನಡೆದು ಬಂದಿದೆ. ಆಸಕ್ತಿಯ ವಿಷಯವೆಂದರೆ 35A ವಿಧಿ ಸಂವಿಧಾನದ ಪಠ್ಯದಲ್ಲೆಲ್ಲೂ ಕಾಣಸಿಗುವುದಿಲ್ಲ.

ನಿರಾಶ್ರಿತರ ಕೇಂದ್ರ ಜಮ್ಮು
ಸಾಮಾನ್ಯವಾಗಿ ಕಾಶ್ಮೀರದಲ್ಲಿ ಹಿಂದೂಗಳ ಮೇಲಾಗುವ ದೌರ್ಜನ್ಯದ ವಿಷಯ ಬಂದಾಗ ಕಣಿವೆ 1985ರಿಂದ 95ರ ಕಾಲದಲ್ಲಿ ಇಸ್ಲಾಂ ಮೂಲಭೂತವಾದಿಗಳ ತೀವ್ರ ಹಿಂಸೆ ಅತ್ಯಾಚಾರಕ್ಕೊಳಗಾಗಿ ಕಾಶ್ಮೀರಿ ಕಣಿವೆಯಲ್ಲಿ ತಮ್ಮ ಮನೆ ಆಸ್ತಿಪಾಸ್ತಿ ತೊರೆದ ಜೀವವನ್ನು ಕೈಹಿಡಿದು ಓಡಿಬಂದ ಸಹಸ್ರಾರು ಕಾಶ್ಮೀರಿ ಪಂಡಿತ ಕುಟುಂಬಗಳನ್ನು ಉಲ್ಲೇಖಿಸಲಾಗುತ್ತದೆ. ಈಗಲೂ ಜಮ್ಮು ಮತ್ತು ದೆಹಲಿಯ ನಿರಾಶ್ರಿತ ಶಿಬಿರಗಳಲ್ಲಿ ಪುನಃ ತಮ್ಮ ಮನೆಗೆ ವಾಪಸ್ಸು ಹೋಗುವ ಕನಸನ್ನು ಇಟ್ಟುಕೊಂಡಿರುವ ಲಕ್ಷಾಂತರ ಮಂದಿ ಪಂಡಿತ ಸಮುದಾಯದ ಸಂತ್ರಸ್ತರಿದ್ದಾರೆ. ಆದರೆ ಪಂಡಿತ ಸಮುದಾಯಕ್ಕೆ ಸೇರಿರದ ಸುಮಾರು 15 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ದಶಕಗಳಿಂದ ಜಮ್ಮುವಿನ ನಿರಾಶ್ರಿತ ಶಿಬಿರಗಳಲ್ಲಿ ದಯನೀಯ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದಾರೆ. ಇವರಲ್ಲಿ ಏಳು ದಶಕಗಳ ಹಿಂದೆ ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಿಂದ ವಲಸೆ ಬಂದ ಸುಮಾರು 2 ಲಕ್ಷ ಜನರಲ್ಲಿ ಮೂರನೇ ತಲೆಮಾರು ಈಗ ನಡೆದಿದೆ. ಪಾಕಿಸ್ತಾನದೊಂದಿಗೆ ಪ್ರತಿಬಾರಿ ಯುದ್ಧವಾದಾಗಲೂ ಅನಿವಾರ್ಯವಾಗಿ ಹೊರದೂಡಲ್ಪಟ್ಟ ಗಡಿ ಪ್ರದೇಶದ ನಿವಾಸಿಗಳು ತಮ್ಮ ರಾಜ್ಯದಲ್ಲೇ ನಿರಾಶ್ರಿತರು! ಇವರ ಸಂಖ್ಯೆ ಸುಮಾರು 3.5ಲಕ್ಷ. ಇನ್ನೂ 1947ರಲ್ಲಿ ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆಯ ಮೂಲಕ ಆಕ್ರಮಿಸಿಕೊಂಡ ಪ್ರದೇಶದ ನಿರಾಶ್ರಿತರು ಸುಮಾರು 12ಲಕ್ಷ, ಇವರೊಟ್ಟಿಗೆ ಕಣಿವೆಯಿಂದ ಹೊರದಬ್ಬಲ್ಪಟ್ಟು ಜಮ್ಮುವಿನಲ್ಲಿ ಆಶ್ರಯ ಪಡೆದ ಸುಮಾರು ೩ಲಕ್ಷ ಜನರನ್ನು ಸೇರಿಸಿದರೆ ರಾಜ್ಯದಲ್ಲಿ ಸುಮಾರು 20ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದು ಜಮ್ಮುವನ್ನು ನಿರಾಶ್ರಿತರ ಕೇಂದ್ರವೆಂದೇ ಕರೆಯಬಹುದೇನೋ!.

      ಇವುಗಳಲ್ಲದೇ ಜಮ್ಮು ಕಾಶ್ಮೀರಕ್ಕೆ ಸಂಭಂಧಿಸಿದ ಇನ್ನೂ ಅನೇಕ ಸತ್ಯಗಳು, ಬೆಳಕು ಕಾಣದ ನೋವಿನ ಕಥೆಗಳು ಕಾಲಗರ್ಭದಲ್ಲಿ ಅಡಗಿವೆ. ದುರದೃಷ್ಟವೆಂದರೆ ಮಿಥ್ಯಾವಾದಗಳೇ ಇನ್ನೂ ತನ್ನ ಪ್ರಭಾವವನ್ನು ಉಳಿಸಿಕೊಂಡಿವೆ ಮತ್ತು ಜಮ್ಮು ಕಾಶ್ಮೀರದ ರಾಜಕೀಯ ಹಾಗೂ ಆಡಳಿತಾತ್ಮಕ ನೀತಿಗಳನ್ನು ದಾರಿತಪ್ಪಿಸುತ್ತಿವೆ. ವಾಸ್ತವದ ನೆಲೆಗಟ್ಟಿನ ಮೇಲೆ ಜಮ್ಮು ಕಾಶ್ಮೀರವನ್ನು ಕಾಣುವುದು ದೇಶಹಿತದ ದೃಷ್ಟಿಯುಂದ ಅತ್ಯಂತ ಅಗತ್ಯವಾಗಿದೆ

Wednesday, June 29, 2016

ವಿಶ್ವದಂಗಳದಲ್ಲಿ ಭಾರತದ ಹೆಜ್ಜೆಗುರುತುಗಳು

(ಪುಂಗವ  01/07/2016)

     ಇಂದಿನ ವೈಶ್ವಿಕ ಸನ್ನಿವೇಶದಲ್ಲಿ ಯಾವುದೇ ದೇಶವು ಇನ್ನೊಂದು ದೇಶದ ಮೇಲೆ ಅವಲಂಬಿಸದೇ, ಪರಸ್ಪರ ಸಹಕಾರವಿಲ್ಲದೇ, ಒಂದು ಇನ್ನೊಂದರ ಪ್ರಭಾವಕ್ಕೊಳಗಾಗದೇ ಸರ್ವಸ್ವತಂತ್ರವಾಗಿ ತನ್ನ ಆಗುಹೋಗುಗಳನ್ನು ನಿರ್ವಹಿಸುವುದು ಅಸಾಧ್ಯ. ಜಾಗತೀಕರಣವು ಆಳವಾಗುತ್ತಿರುವಂತೆ ತನ್ನ ಆಂತರಿಕ ನೀತಿಗಳನ್ನು ವೈಶ್ವಿಕ ಆಯಾಮದಲ್ಲಿ ನೋಡುವುದು, ಅದಕ್ಕನುಗುಣವಾಗಿ ತನ್ನ ವಿದೇಶೀ ನೀತಿಯನ್ನು ರೂಪಿಸುವುದು ಪ್ರತಿಯೊಂದು ದೇಶಕ್ಕೂ ಅನಿವಾರ್ಯ. ಅದರಲ್ಲೂ ಭಾರತದಂತಹ ಅಘಾದ ಜನಬಾಹುಳ್ಯ, ಸಾಮಾಜಿಕ ವೈವಿಧ್ಯ, ಭೌಗೋಳಿಕ ವಿಸ್ತಾರ, ಆರ್ಥಿಕ ಪ್ರಗತಿಯ ತುರ್ತು, ಹೊರದೇಶಗಳಿಗೆ ವಲಸೆ ಹೋದ ವಿಶಾಲ ಜನಸಮೂಹವುಳ್ಳ ದೇಶದಲ್ಲಿ ವಿದೇಶೀ ನೀತಿ ಸರಿಯಾದ ದಿಕ್ಕಿನಲ್ಲಿ ಸಾಗುವುದು ಅತ್ಯಂತ ಮಹತ್ವವಾಗಿದೆ. 

     ಬಾಹ್ಯ ವಾತಾವರಣವನ್ನು ರಾಷ್ಟ್ರೀಯ ಹಿತಾಸಕ್ತಿಗೆ ಅನುಕೂಲಕರವಾಗಿ ರೂಪಿಸಿಕೊಳ್ಳವುದರ ಮೇಲೆ ಭಾರತದ ದೇಶೀಯ ಪ್ರಗತಿಯ ಪ್ರಯತ್ನದ ಯಶಸ್ಸು ಅವಲಂಬಿತವಾಗಿದೆ ಎನ್ನವುದು ಪ್ರಥಮ ಪ್ರಧಾನಿ ನೆಹರೂರವರಿಂದ ಹಿಡಿದು ಇದುವರೆಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಎಲ್ಲ ನೇತಾರರರಿಗೂ ಅರ್ಥವಾಗಿದ್ದರೂ, ವಿಶ್ವದಲ್ಲಿ ಭಾರತದ ಪ್ರಭಾವ ಮತ್ತೆ ಮುಂಚೂಣಿಗೆ ಬರುವಂತೆ ವಿದೇಶಾಂಗ ವ್ಯವಹಾರವನ್ನು ನಿರೂಪಿಸವವಲ್ಲಿ ಇದುವರೆಗಿನ ಸರ್ಕಾರಗಳಿಗೆ ನಿರೀಕ್ಷಿತ ಯಶಸ್ಸು ದೊರಕಿರಲಿಲ್ಲ. ದೇಶದ ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಸ್ಥಿತಿಗಳ ಜೊತೆಗೆ ದೃಢ ನಿರ್ಧಾರ ಕೈಗೊಳ್ಳಬಲ್ಲ ಸಾಮರ್ಥ್ಯವುಳ್ಳ ನಾಯಕತ್ವದ ಕೊರತೆಯೂ ಇದಕ್ಕೆ ಕಾರಣವಿರಬಹುದು.
     ಆದರೆ ಕಳೆದ ಎರಡು ವರ್ಷಗಳಲ್ಲಿ ಭಾರತದ ಬಗ್ಗೆ ಪ್ರಪಂಚದ ದೇಶಗಳ ಅಭಿಪ್ರಾಯದಲ್ಲಿ ಧನಾತ್ಮಕ ಧೋರಣೆ, ಬೇರೆ ಬೇರೆ ದೇಶಗಳು ಭಾರತದೊಡನೆ ಪರಸ್ಪರ ಸಹಕಾರ ಹಾಗೂ ವ್ಯವಹಾರ ವರ್ಧಿಸುವಲ್ಲಿ ತೋರಿಸುತ್ತಿರುವ ಆಸಕ್ತಿ, ವೈಶ್ವಿಕ ನಿರ್ಣಯಗಳಲ್ಲಿ ಭಾರತದ ಪಾತ್ರ, ಆರ್ಥಿಕ ಬೆಳವಣಿಗೆಯ ದರದಲ್ಲಿ ಪ್ರಥಮ ಸ್ಥಾನದಲ್ಲಿ ನಿಂತಿರುವ ಭಾರತಕ್ಕೆ ಹರಿದು ಬರುತ್ತಿರುವ ಬಂಡವಾಳ ಹೂಡಿಕೆಗಳು, ವಿಶ್ವದೆಲ್ಲೆಡೆ ಹರಡಿರುವ ಭಾರತೀಯ ಮೂಲದ ಜನರಲ್ಲಿ ಮಾತೃದೇಶದ ಕುರಿತು ಹೆಚ್ಚುತ್ತಿರುವ ಪ್ರೀತಿ ಇವನ್ನೆಲ್ಲ ಗಮನಿಸಿದಾಗ ವಿಶ್ವದ ದೊಡ್ಡಣ್ಣನಾಗಿ ಮೆರೆಯುತ್ತಿರುವ ಅಮೇರಿಕ ಮತ್ತು ಅದರೊಂದಿಗೆ ಪೈಪೋಟಿಗಿಳಿದಿರುವ ಚೀನಾ ದೇಶಗಳ ಮಧ್ಯ ಮುನ್ನಡೆಯುತ್ತಿರುವ ಶಕ್ತಿಯಾಗಿ (ಟeಚಿಜiಟಿg ಠಿoತಿeಡಿ) ಭಾರತ ರೂಪುಗೊಳ್ಳುತ್ತಿರುವುದು ಗೋಚರವಾಗುತ್ತದೆ.

ಆರಂಭದ ಹೆಜ್ಜೆಗಳು
     ಹೊಸ ಸರ್ಕಾರದ ಪ್ರಮಾಣವಚನ ಸಮಾರಂಭಕ್ಕೆ ಸಾರ್ಕ ದೇಶದ ಪ್ರಮುಖರಿಗೆ ಆಹ್ವಾನ ತನ್ಮೂಲಕ ನೆರೆ ಹೊರೆಯ ಸಂಬಂಧ ವರ್ಧನೆಗೆ ನಾಂದಿ. ಪ್ರಧಾನಿಯಾದ ಬಳಿಕೆ ಮೊದಲ ವಿದೇಶಿ ಯಾತ್ರೆಗಾಗಿ ಭೂತಾನ್ ದೇಶದ ಪ್ರವಾಸ ಕೈಗೊಂಡಿದ್ದು ದಕ್ಷಿಣ ಏಷಿಯಾ ದೇಶಗಳ ನೇತೃತ್ವ ವಹಿಸುವ ಭಾರತದ ಇರಾದೆಯನ್ನು ತೋರಿಸುತ್ತದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಭಾಂಗ್ಲಾದೇಶದ ಗಡಿವಿವಾದ ಮತ್ತು ವಸತಿಗಳ ವಿನಿಮಯ ವಿವಾದವನ್ನು ಬಗೆಹರಿಸಿದ್ದು ಮಹತ್ವದ್ದಾಗಿದೆ.

ವಿಶ್ವದಲ್ಲಿ ಭಾರತೀಯ ವಿಚಾರಗಳಿಗೆ ಮನ್ನಣೆ
      ಮಾಹಿತಿ ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಯಲ್ಲಿರುವಂತೆಯೇ, ಯೋಗ, ಆಯುರ್ವೇದಗಳಿಗೆ ವೈಶ್ವಿಕ ಮನ್ನಣೆ ದೊರೆತಿದೆ. ಪ್ರಧಾನಿ ಮೋದಿ  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತ ಜೂನ್ ೨೧ರಂದು ಅಂತರಾಷ್ಟ್ರೀಯ ಯೋಗ ದಿನದ ಆಚರಣೆ ಮಾಡುವ ಪ್ರಸ್ತಾಪಕ್ಕೆ ನೂರೈವತ್ತಕ್ಕೂ ಹೆಚ್ಚು ದೇಶಗಳು ಬೆಂಬಲ ಸೂಚಿಸಿದ್ದು ಕಳೆದ ವರ್ಷ ವಿಶ್ವದೆಲ್ಲಡೆ ಯೋಗದ ವಾತಾವರಣ ಹರಡಿದೆ. ಅದಕ್ಕಿಂತ ಇಮ್ಮಡಿ ಉತ್ಸಾಹ ಈ ವರ್ಷವೂ ಕಾಣುತ್ತಿದೆ. ಹಾಗೆಯೇ ಹೆಚ್ಚು ಹೆಚ್ಚು ವಿದೇಶೀ ಮೂಲದ ಜನರು ಭಾರತೀಯ ಜೀವನಶೈಲಿಯತ್ತ ಆಕರ್ಷಿತರಾಗುತ್ತಿದ್ದಾರೆ.
        ಭಯೋತ್ಪಾದನೆ ವಿಷಯದಲ್ಲಿ ದೃಢವಾದ ಕ್ರಿಯಾತ್ಮಕ ಅಭಿಪ್ರಾಯ  ರೂಪಿಸುವುದು, ಹವಾಮಾನ ಬದಲಾವಣೆ, ಸೈಬರ್ ಅಪರಾಧಗಳು, ನ್ಯೂಕ್ಲಿಯರ್ ಎನರ್ಜಿ  ವಿಷಯಗಳ ನೀತಿರೂಪಿಸುವಲ್ಲಿ  ಸಕ್ರಿಯ ಪಾತ್ರ ವಹಿಸಿದುದು, ವಿಶ್ವಸಂಸ್ಥೆಯ ಸುಧಾರಣೆಗಳು, ವಿಶ್ವ ವ್ಯಾಪಾರ ಸಂಸ್ಥೆ (Wಖಿಔ) ಮಾತಕತೆ ಮುಂತಾದ ವಿಷಯಗಳಲ್ಲಿ ಭಾರತ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದೆ.
     ಸೋಲಾರ ಶಕ್ತಿಯ ಬಳಕೆಯ ಕುರಿತು ಸಂಶೋಧನೆ ನಡೆಸುವ ನೂರಕ್ಕೂ ಹೆಚ್ಚು ದೇಶಗಳು ಹಾಗೂ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಸದಸ್ಯರಾಗಿರುವ ಗುಂಪಿಗೆ ಭಾರತ ನೇತೃತ್ವ ವಹಿಸಿದೆ.
ಅಪಘಾನಿಸ್ತಾನ, ಬಾಂಗ್ಲಾದೇಶ, ಮಂಗೋಲಿಯ, ನೇಪಾಳ, ಭೂತಾನ್ ಮುಂತಾದ ನೆರೆ ಹೊರೆಯ ದೇಶಗಳ ಅಭಿವೃದ್ಧಿಯಲ್ಲಿ ನೆರವಾಗುವ ಮೂಲಕ ಪ್ರಾದೇಶಿಕ ಅಭಿವೃದ್ಧಿಗೆ ಒತ್ತು ನಿಡಿದೆ.

ವಿವಿಧ ದೇಶಗಳ ಸಂಬಂಧ ಮತ್ತು ಸಹಕಾರದಲ್ಲಿ  ಪ್ರಗತಿ
      ಭಾರತ ಸರ್ಕಾರದ ಸಕ್ರಿಯ ವಿದೇಶೀ ನೀತಿಯಿಂದಾಗಿ ವಿವಿಧ ದೇಶಗಳ ಸಖ್ಯದಲ್ಲಿ ಲಾಭವಾಗಿದ್ದು ಕೇವಲ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಮಾತ್ರವಲ್ಲ ರಕ್ಷಣೆ, ಮಿಲಿಟರಿ ಸಹಕಾರ, ಸಾಮಾಜಿಕ ಅಭಿವೃದ್ಧಿಯ ವಿಷಯಗಳಲ್ಲೂ ಗಣನೀಯ ಅನುಕೂಲವಾಗಿದೆ.
        ವ್ಯಾಪಾರಿ ಜಗತ್ತಿನಲ್ಲಿ ಭಾರತದ ಬಗ್ಗೆ ಧನಾತ್ಮಕ ಧೋರಣೆ ಬೆಳೆದ ಪರಿಣಾಮ ವಿದೇಶೀ ನೇರ ಬಂಡವಾಳದ ಹೂಡಿಕೆಯ ಹರಿವು ಹೆಚ್ಚಾಗಿದ್ದು ಇಂದು ಭಾರತ ಅತಿಹೆಚ್ಚು ವಿದೇಶೀ ಬಂಡವಾಳ ಹೂಡಿಕೆಯಾಗುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಹಾಗೆಯೇ ಆರ್ಥಿಕ ಅಭಿವೃದ್ಧಿ ದರದಲ್ಲಿ ಅತಿಹೆಚ್ಚು ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಜಪಾನ್ ದೇಶ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ವೇ ಯೋಜನೆ ಸೇರಿದಂತೆ ಅಪಾರ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಹಾಗೆಯೇ ಫ್ರಾನ್ಸ್ ಸ್ಮಾರ್ಟ ಸಿಟಿಗಳ ನಿರ್ಮಾಣದಲ್ಲಿ ಸಹಕಾರ ನೀಡಲಿದೆ. ಅಮೇರಿಕ ದೇಶದೊಂದಿಗೆ ರಕ್ಷಣಾ ಸಂಭಂಧಿತ ವ್ಯವಹಾರದಲ್ಲಿ ವೇಗದಲ್ಲಿ ಪ್ರಗತಿಯಾಗಿತ್ತಿದ್ದು ಪರಿಣಾವಾಗಿ ಹಿಂದೂ ಮಹಾಸಾಗರ ಮತ್ತು ಸುತ್ತಲಿನ ಪ್ರದೇಶದ ರಕ್ಷಣೆಯ ವಿಷಯದಲ್ಲಿ ಭಾರತ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ. ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಭಾರತದಲ್ಲಿ ಯುದ್ಧ ವಿಮಾನಗಳನ್ನು ತಯಾರಿಸಲು ಬೋಯಿಂಗ್ ಮುಂತಾದ ಸಂಸ್ಥೆಗಳು ಮಾತುಕತೆ ನಡೆಸಿವೆ. ಭಾರತದ ಸಾಂಸ್ಕೃತಿಕ ಪ್ರಭಾವಕ್ಕೊಳಗಾಗಿರುವ ಪೂರ್ವದ ದೇಶಗಳ ಸಂಭಂಧ ಇನ್ನೂ ನಿಕಟವಾಗಿದೆ.
         ಇತ್ತೀಚೆಗೆ ಅಪಘಾನಿಸ್ತಾನ್ ಭೇಟಿ ನೀಡಿದ ಮೋದಿ ಹೇರತ್ ಪ್ರದೇಶದಲ್ಲಿ ಭಾರತದ ಸಹಕಾರದಲ್ಲಿ ನಿರ್ಮಿಸಿದ ಸಲ್ಮಾ ಅಣೆಕಟ್ಟನ್ನು ಅಪಘಾನಿಸ್ತಾನಕ್ಕೆ ಅರ್ಪಿಸಿದರು. 42ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿರುವ ಈ ಅಣೆಕಟ್ಟು ೭೫ ಸಾವಿರ ಹೆಕ್ಟೇರಿನಷ್ಟು ಭೂಮಿಯನ್ನು ನೀರಾವರಿಗೆ ತರುತ್ತದೆ. ಹಾಗೆಯೇ ಇರಾನ್ ಪ್ರವಾಸದ ವೇಳೆ ಚಬಹರ್ ಬಂದರನ್ನು ಅಭಿವೃದ್ಧಿಪಡಿಸುವ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದರು ಈ ಬಂದರು ಅಪಘಾನಿಸ್ತಾನಕ್ಕೆ ಇರಾನಿನ ಮುಖಾಂತರ ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ ಹಾಗೆಯೇ ಭಾರತಕ್ಕೆ ಮಧ್ಯ ಏಷಿಯ ದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ.
       ಪೃಥ್ವಿಯ ಮೇಲೆ ಕ್ಷಿಪಣಿಗಳ ಹರಡುವುದನ್ನು ನಿಯಂತ್ರಿಸುವ ಮಿಸೈಲ್ ಟೆಕ್ನೊಲೊಜಿ ಕಂಟ್ರೋಲ್ ಗ್ರುಪ್‌ನ ಮೂವತ್ತೈದನೇ ಸದಸ್ಯನಾಗಿ ಭಾರತ ಸೇರ್ಪಡೆಯಾಗಿದೆ. ಇದು ಪರಮಾಣು ಇಂಧನವನ್ನು ಪೋರೈಸುವ ನ್ಯೂಕ್ಲಿಯರ್ ಎನರ್ಜಿ ಸಪ್ಲಯರ್ ಸಮೂಹಕ್ಕೆ ಭಾರತ ಸೇರ್ಪಡೆಯಾಗಲು ಹತ್ತಿರವಾದಂತೆ. ಮುಂದುವರೆದು ನ್ಯೂಕ್ಲಿಯರ್ ಸಮೂಹಕ್ಕೆ ಭಾರತವನ್ನು ಸೇರಿಸಕೊಳ್ಳಲು ಅಮೇರಿಕಾ, ರಷಿಯ, ಯುನೈಟೆಡ್ ಕಿಂಗ್‌ಡಮ್, ಮೆಕ್ಸಿಕೋ, ಸ್ವಿಟ್ಜರಲೆಂಡ್ ಮೊದಲಾದ ಅನೇಕ ಸದಸ್ಯ ರಾಷ್ಟ್ರಗಳು ಬೆಂಬಲ ಸೂಚಿಸಿವೆ.


ಭಾರತೀಯ ಮೂಲದ ವಲಸಿಗರು
      2015ರ ಏಪ್ರಿಲ್ ತಿಂಗಳಿನಲ್ಲಿ ಯೆಮೆನ್ ದೇಶದಲ್ಲಿ ಸೌದಿ ಅರೇಬಿಯ ಮತ್ತು ಮಿತ್ರದೇಶಗಳು ಸೈನಿಕ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ನಿರಾಶ್ರಿತರಾದ ಭಾರತೀಯ ಮೂಲದ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನರು ಮತ್ತು ನಲವತ್ತೊಂದು ದೇಶಗಳ ಒಂಭೈನೂರಕ್ಕೂ ಹೆಚ್ಚು ಜನರನ್ನು ಭಾರತ ರಕ್ಷಿಸಿತು. ಆಪರೇಶನ್ ರಾಹತ್ ಹೆಸರಿನಲ್ಲಿ   ಯುದ್ಧಪ್ರದೇಶದಿಂದ ಜನರನ್ನು ಸಂರಕ್ಷಿಸುವ ಇಂತಹ ಅಪಾಯಕಾರಿ ಕಾರ್ಯಾಚರಣೆ ಸಡೆಸುವ ಎದೆಗಾರಿಕೆ ತೋರಿದ ಭಾರತೀಯ ಸೇನೆ ವಿಶ್ವದ ಶ್ಲಾಘನೆಗೆ ಪಾತ್ರವಾಯಿತು. ಅಮೇರಿಕ ಹಾಗೂ ಯೂರೋಪಿನ ಬೇರೆ ಬೇರೆ ದೇಶಗಳೂ ತಮ್ಮ ದೇಶದ ನಾಗರಿಕರ ರಕ್ಷಣೆಗಾಗಿ ಭಾರತವನ್ನು ಕೇಳಿಕೊಂಡವು.
       ಅಷ್ಟೇ ಅಲ್ಲದೇ ಪ್ರಪಂಚದ ಯಾವುದೇ ಮೂಲೆಯಲ್ಲಿ ಭಾರತೀಯ ಮೂಲದ ಜನರು ಸಂಕಷ್ಟದಲ್ಲಿದ್ದರು ಅವರ ಸಹಾಯಕ್ಕೆ ವಿದೇಶಾಂಗ ವ್ಯವಹಾರಗಳ ವಿಭಾಗವು ತ್ಚರಿತವಾಗಿ ಹಾಗೂ ಧನಾತ್ಮಕವಾಗಿ ಸ್ಪಂದಿಸಿರುವ ಅನೇಕ ಘಟನೆಗಳು ಮಾಧ್ಯಮದಲ್ಲಿ ವರದಿಯಾಗಿವೆ.
    ಪ್ರಧಾನಿ ಮೋದಿ ಪ್ರತಿಯೊಂದು ದೇಶಕ್ಕೆ ಭೇಟಿ ನೀಡಿದಾಗಲೂ ಅಲ್ಲಿ ನೆಲೆಸಿರುವ ಭಾರತೀಯ ಮೂಲದ ಜನರು ಅಭೂತಪೂರ್ವ ಸ್ವಾಗತ ನೀಡುತ್ತಿದ್ದು ಅವರ ಭಾರತಪ್ರೇಮದಲ್ಲಿ ಹೊಸ ಹುಮ್ಮಸ್ಸು ಕಾಣುತ್ತಿದೆ. 

ವಿದೇಶಾಂಗ ನೀತಿಯ ಚಾಲಕ ಪ್ರಧಾನಿ ನರೇಂದ್ರ ಮೋದಿ
     ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಲವತ್ತಕ್ಕೂ ಹೆಚ್ಚು ಬಾರಿ ವಿದೇಶಿ ಪ್ರವಾಸಗಳನ್ನು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಂದು ಭೇಟಿಯಲ್ಲೂ ವೈಶ್ವಿಕ ವಾತಾವರಣವನ್ನು ಭಾರತದ ಪರವಾಗಿ ರೂಪಿಸಲು ಗಮನವನ್ನು ಕೇಂದ್ರಿಸಿದ್ದಾರೆ. ಪ್ರತಿ ಬಾರಿಯ ವಿದೇಶಿ ಪ್ರವಾಸದಲ್ಲೂ ಮೂರು ನಾಲ್ಕು ದೇಶಗಳಿಗೆ ಭೇಟಿ ನೀಡುತ್ತಿರುವ ಪ್ರಧಾನಿ ದಿನಪೂರ್ತಿ ಬಿಡುವಿರದ ಕಾರ್ಯಕ್ರಮಗಳಲ್ಲಿ ತೊಡಗುತ್ತಾರೆ. ಅಗತ್ಯವದ್ದರೆ ಮಾತ್ರ ಭೇಟಿ ನೀಡಿದ ದೇಶದಲ್ಲಿ ರಾತ್ರಿ ತಂಗುವ ಮೋದಿ, ಸಮಯ ಉಳಿಸುವ ಸಲುವಾಗಿ ರಾತ್ರಿಯಲ್ಲಿ ಪ್ರಯಾಣ ಮಾಡುತ್ತಾರೆ. ಮಾರಿಶಸ್, ಸಿಚೆಲೆಸ್‌ನಂತಹ ಪುಟ್ಟ ದೇಶಗಳಿಗೂ ಪ್ರಧಾನಿ ಭೇಟಿ ನೀಡಿದರು. ಮಾರ್ಚ ೨೦೧೫ರ ಶ್ರೀಲಂಕಾ ಭೇಟಿ 1982ನಂತರ ಭಾರತದ ಪ್ರಧಾನಿಯ ಮೊದಲ ಶ್ರೀಲಂಕಾ ಪ್ರವಾಸವಾಗಿತ್ತು. 2015 ಏಪ್ರಿಲ್ ತಿಂಗಳ ಕೆನಡಾ ಭೇಟಿ 42 ವರ್ಷಗಳ ನಂತರ ಭಾರತೀಯ ಪ್ರಧಾನಿಯ ಪ್ರವಾಸವಾಗಿತ್ತು.

     ಪ್ರತಿಯೊಂದು ದೇಶಕ್ಕೆ ಭೇಟಿ ನೀಡಿದಾಗಲೂ ಅಲ್ಲಿ ನೆಲೆಸಿರುವ ಭಾರತೀಯ ಮೂಲದ ಜನರನ್ನು ಭೇಟಿಯಾಗಲೂ ಎಂದೂ ಮರೆಯುವುದಿಲ್ಲ. ಅಮೇರಿಕದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನ ಅಭೂತಪೂರ್ವ ಸ್ವಾಗತದಿಂದ ಹಿಡಿದು ಇತ್ತೀಚೆಗೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕೆಲಸಕ್ಕಾಗಿ ವಲಸೆ ಹೋದ ಕೂಲಿ ಕಾರ್ಮಿಕರೊಂದಿಗೆ ಉಪಹಾರ ಸೇವಿಸುವವ ವರೆಗೆ ಮೋದಿಯವರ ಭಾರತೀಯ ಮೂಲದ ಜನರ ಬಗೆಗಿನ ಕಾಳಜಿ ವ್ಯಕ್ತವಾಗುತ್ತದೆ. 
      ಮೊದಲು ಭಾರತದ ರಾಷ್ಟ್ರಪತಿ, ಪ್ರಧಾನಿ ವಿದೇಶೀ ಯಾತ್ರೆಗೆ ಹೋದಾಗ ಪಾಶ್ಚಾತ್ಯ ಉಡುಗೆಯಾದ ಟೈ ಕೋಟ್‌ಗಳನ್ನು ಅಥವಾ ಬಂದ್‌ಗಲಾವನ್ನು ಧರಿಸುವುದು ಸಾಮಾನ್ಯವಾಗಿತ್ತು. ಆದರೆ ಈ ಪದ್ಧತಿಯನ್ನು ಮುರಿದಿರುವ ಮೋದಿ ವಿದೇಶಿ ನೆಲದಲ್ಲೂ ಭಾರತೀಯ ಉಡುಗಯನ್ನೇ ತೊಡುತ್ತಾರೆ. ಇತ್ತೀಚೆಗೆ ಅಮೇರಿಕಾದ ಕಾಂಗ್ರೆಸ್‌ನಲ್ಲಿ ಭಾಷಣ ಮಾಡುವಾಗಲೂ ಮೋದಿ ಎಂದಿನಂತೆ  ಕುರ್ತಾ ಜಾಕೇಟ್‌ನಲ್ಲಿ ಕಂಗೊಳಿಸಿದರು.

       ಉಪನಿಷತ್ತಿನಲ್ಲ ಹೇಳಿದ ವಸುಧೈವ ಕುಟುಂಬಕಮ್ ಇಡೀ ವಿಶ್ವವೇ ಒಂದು ಕುಟುಂಬ ಎನ್ನುವ ಆದರ್ಶ ಭಾರತದ ವಿದೇಶ ವ್ಯವಹಾರವನ್ನು ನಿರ್ದೇಶಿಸಬೇಕು. ಈ ವಾಕ್ಯವನ್ನು ಪ್ರಧಾನಿ ಮೋದಿ ಅನೇಕ ಬಾರಿ ತಮ್ಮ ಭಾಷಣಗಳಲ್ಲಿ ಹೇಳಿದ್ದಾರೆ. ಜಗದ ಮಾತೆಯಾಗಿದ್ದ ಪ್ರಾಚೀನ ಭಾರತ ಜ್ಞಾನದ ಬೆಳಕನ್ನು ಪ್ರಪಂಚಕ್ಕೆ ನೀಡಿತ್ತು. ಇಂದು ಪ್ರಮುಖ ಶಕ್ತಿಯಾಗಿ ಪುನಃ ಹೊರಹೊಮ್ಮುವತ್ತ ಮುನ್ನಡೆಯತ್ತಿರುವ ಭಾರತ ವಿಶ್ವಶಾಂತಿಯನ್ನು ಸ್ಥಾಪಿಸ ಮಾನವತೆಯ ಪ್ರಗತಿಯನ್ನು ನಿರ್ದೇಸುವತ್ತ ಸಾಗಲಿ.

ಯೋಗದಲ್ಲಿ ಒಂದುಗೂಡಲಿ ವಿಶ್ವ

(ಪುಂಗವ  15/06/2016)      

      ಪ್ರಾಚೀನ ಭಾರತದಲ್ಲಿ ವಿಕಸನಗೊಂಡ ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ಸಾಧನೆಯ ಒಂದು ಅಭ್ಯಾಸಮಾರ್ಗ ಯೋಗ. ಸಂಸ್ಕೃತಮೂಲದ ಯುಜ್ ಶಬ್ದದಿಂದ ’ಯೋಗ’ ಹುಟ್ಟದೆ. ಈ ಪದಕ್ಕೆ ಒಂದುಗೂಡಿಸುವುದು, ಸೇರಿಸುವುದು, ಐಕ್ಯವಾಗುವುದು, ಒಗ್ಗಟ್ಟಾಗುವುದು ಮೊದಲಾದ ಅರ್ಥವಿದೆ. ಹಿಂದೂ ತತ್ವಶಾಸ್ತ್ರ, ಉಪನಿಷತ್ತುಗಳು, ಸಂಹಿತೆಗಳು, ಬಗವದ್ಗೀತೆ ಮುಂತಾದ ಗ್ರಂಥಗಳಲ್ಲಿ ಯೊಗದ ವಿವರಗಳಿವೆ. ಜೈನ ಹಾಗೂ ಬೌದ್ಧ ಸಾಹಿತ್ಯವಷ್ಟೇ ಅಲ್ಲದೇ ಮಹರ್ಷಿ ಪತಂಜಲಿ ರಚಿಸಿದ ಯೋಗಸೂತ್ರಗಳು, ಹಠಯೋಗ ಪ್ರದೀಪಿಕೆ, ಶಿವಸಂಹಿತೆ ಮೊದಲಾದ ಗ್ರಂಥಗಳು ಯೋಗ ಸಾಧನೆಯ ಕುರಿತು ವಿವರಗಳನ್ನು ನೀಡುತ್ತವೆ. ಪ್ರಾಚೀನ ಕಾಲದಿಂದ ಭಾರತೀಯ ಜನಜೀವನದಲ್ಲಿ ಶರೀರ ಮನೋಬುದ್ಧಿಗಳ ವಿಕಸನದ ಶಿಕ್ಷಣ ಹಾಗೂ ಸಾಧನೆಯ ಅಭ್ಯಾಸ ಪದ್ಧತಿ ಯೋಗವಾಗಿತ್ತು ಎನ್ನುವುದು ಇದರಿಂದ ತಿಳಿಯುತ್ತದೆ. ಜನರ ಆಡುಭಾಷೆಯಲ್ಲಿಯೂ ’ಯೋಗ’ ಎನ್ನುವ ಈ ಪದವು ಎಷ್ಟು ಪ್ರಚಲಿತದಲ್ಲಿದೆ ಎಂದರೆ ಮಾನವ ಪ್ರಯತ್ನ ಮತ್ತು ದೈವಾನುಗ್ರಹ ಒಂದುಗೂಡಿ ಏನೇ ಒಳ್ಳೆಯದಾದರೂ ಎಂತಹ ಸುಯೋಗ, ಆತನ ಯೋಗ ಚೆನ್ನಾಗಿತ್ತು, ಯೋಗಾಯೋಗದಿಂದ ಒಳ್ಳೆಯದಾಯಿತು ಇತ್ಯಾದಿಯಾಗಿ ಹೇಳಲಾಗುತ್ತದೆ. ಅಂದರೆ ಭಾರತೀಯರ ಮಟ್ಟಿಗೆ ಯೋಗದ ಅರ್ಥವ್ಯಾಪ್ತಿ ತುಂಬಾ ವಿಶಾಲವಾಗಿರುವುದು ತಿಳಿಯುತ್ತದೆ.
       ಬೌತಿಕ ಹಾಗೂ ಬೌದ್ಧಿಕ ಸ್ವಾಸ್ಥ್ಯ ಯೋಗಾಭ್ಯಾಸದಿಂದ ಸಿಗುತ್ತದೆ ಎನ್ನುವುದು ಇಂದು ಎಲ್ಲರೂ ಅರಿತಿರುವ ವಿಚಾರ. ಆದರೆ ಯೋಗವೆಂದರೆ ಕೇವಕ ಶಾರೀರಿಕ ಕಸರತ್ತಲ್ಲ. ಸ್ವಸ್ಥ ಸಮಾಜಜೀವವನ್ನು ಸ್ಥಾಪಿಸುವ ಮಾರ್ಗವೂ ಹೌದು. ವ್ಯಕ್ತಿಯ ಶಾರೀರಿಕ ಮಾನಸಿಕ ಆರೋಗ್ಯ ಸರಿ ಇದ್ದರೆ, ಆತನ ಬುದ್ಧಿಗೆ ಸುಸಂಸ್ಕೃತ ಸಂಸ್ಕಾರ ದೊರಕಿದರೆ ತನ್ನಿಂದ ತಾನೆ ಕುಟುಂಬದಲ್ಲಿ ನೆಮ್ಮದಿ ಹಾಗೂ ಉತ್ತಮ ವಾತಾವರಣ ನೆಲೆಸುತ್ತದೆ. ಅಂತಹ ಕುಟುಂಬದ ಪ್ರಭಾವ ನೆರೆಹೊರೆಯಲ್ಲೂ ಹರಡುವುದರ ಮೂಲಕ ಸುಸಂಸ್ಖೃತ ಸಮಾಜ ನೆಲೆಯಾಗಲು ಸಾಧ್ಯವಾಗುತ್ತದೆ. ದೇಶವು ಸ್ವಸ್ಥ ಹಾಗೂ ಸುದೃಢವಾದಾಗ ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸಲು ನೇತೃತ್ವವಹಿಸಬಲ್ಲದು.


ಈ ಹಿನ್ನೆಲೆಯಲ್ಲಿ ರಾಜಕೀಯ ವೈಶಮ್ಯ, ಜಾತೀಯತೆ, ಮತಾಂಧತೆ, ಭ್ರಷ್ಟಾಚಾರಗಳಲ್ಲಿ ಹಂಚಿರುವ ನಮ್ಮ ಸಮಾಜವನ್ನು ಒಂದುಗೂಡಿಸುವುದು ಯೋಗಮಾರ್ಗದಿಂದ ಸಾಧ್ಯ. ಆರ್ಥಿಕ ವಿಷಮತೆ, ಭಯೋತ್ಪಾದನೆ, ಯುದ್ಧಸನ್ನಾಹದ ಶಸ್ತ್ರಾಸ್ತ್ರ ಸಂಗ್ರಹಣೆಗಳ ಮೂಲಕ ಸದಾ ಒಂದು ರೀತಿಯ ಭಯದ ನೆರಳಲ್ಲಿರುವ ವಿಶ್ವದಲ್ಲಿ ಶಾಂತಿಯನ್ನು ನೆಲೆಸಲು ಅಂತರರಾಷ್ಟ್ರೀಯ ಯೋಗದಿವಸ ಪ್ರೇರಣೆಯಾಗಲಿ. ವಿಶ್ವ ಯೋಗದಲ್ಲಿ ಒಂದುಗೂಡಲಿ.

ಸಮತ್ವವೇ ಯೋಗ 
ಯೋಗಸ್ಥಃ ಕುರು ಕರ್ಮಾಣಿ ಸಂಗಮ್ ತ್ಯಕ್ತ್ವಾ ಧನಂಜಯ| 
ಸಿದ್ಧಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಮ್ ಯೋಗ ಉಚ್ಯತೇ||   ...... ಶ್ರೀಮದ್ ಭಗವದ್ಗೀತೆ
ಕರ್ಮಫಲದ ಆಸಕ್ತಿಯನ್ನು ತ್ಯಜಿಸಿ ಯಶಸ್ಸು ಅಪಯಶಸ್ಸುಗಳನ್ನು ಸಮಾನವಾಗಿ ಸ್ವೀಕರಿಸಿ ಯೋಗ ಮನಸ್ಥಿತಿಯಲ್ಲಿ ನೆಲೆನಿಂತು ಕರ್ತವ್ಯವನ್ನು ನಿರ್ವಹಿಸು. ಎಲ್ಲವನ್ನೂ ಸಮದ್ಥಷ್ಟಿಯಲ್ಲಿ, ಏಕರೀತಿಯಲ್ಲಿ ಕಾಣುವುದೇ ಯೋಗ. 
ಶ್ರೀಕೃಷ್ನನು ಅರ್ಜುನನಿಗೆ ರಣಾಂಗಣದ ನಟ್ಟನಡುವೆ ಹೇಳಿದಂತೆ ಎಲ್ಲ ತರಹದ ಸನ್ನಿವೇಶದಲ್ಲೂ ಸಮಚಿತ್ತರಾಗಿ ಪ್ರತಿಫಲದ ಬಗ್ಗೆ ಅನಾಸಕ್ತರಾಗಿ ಲಾಭ ನಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಸಿನಿಂದ ಕೆಲಸ ಮಾಡಬೇಕು. ಹಾಗಾದಾಗ ಬದುಕು ಅರ್ಥಪೂರ್ಣ ಹಾಗೂ ಆನಂದಮಯವಾಗುವುದರಲ್ಲಿ ಸಂಶಯವಿಲ್ಲ. ಅಂತಹ ಮನಸ್ಸಿನ ಸಮತ್ವದ ಸ್ಥಿತಿ ಯೋಗಸಾಧನೆಯಿಂದ ಲಭಿಸುತ್ತದೆ. ಇಂತಹ ಸಮತೋಲಿತ ಜೀವನವೇ ಯೋಗ.

ಮಹರ್ಷಿ ಪತಂಜಲಿ
ಒಂದಾನೊಂದು ಕಾಲದಲ್ಲಿ ಪೃಥ್ವಿಯ ಮೇಲಿನ ಋಷಿಗಳೆಲ್ಲ ಸೇರಿ ಮಹಾವಿಷ್ಣುವಿನ ಬಳಿ ಸಮಸ್ಯೆಯೊಂದನ್ನು ತೆಗೆದುಕೊಂಡು ಹೋದರು. ಮಹಾವಿಷ್ಣುವೇ ಧನ್ವಂತರಿಯ ರೂಪದಲ್ಲಿ ಅವತರಿಸಿ ರೋಗ ರುಜಿನಗಳ ನಿವಾರಣೆಗಾಗಿ ಆಯುರ್ವೇದವನ್ನು ನೀಡಿದರೂ ಜನರು ಮತ್ತೆ ಮತ್ತೆ ಕಾಯಿಲೆಗೆ ಬೀಳುತ್ತಿರುವರು. ಇದಕ್ಕೆ ಪರಿಹಾರವನ್ನು ನೀನೇ ನೀಡಬೇಕುಎನ್ನುವುದು ಅವರ ಅಳಲಾಗಿತ್ತು. ಹಾಗೆಯೇ ಕೇವಲ ಶಾರೀರಿಕ ವ್ಯಾಧಿಗಳಷ್ಟೇ ಅಲ್ಲದೇ, ಮಾನಸಿಕ ಕ್ಲೇಷಗಳು, ಸಿಟ್ಟು, ಅಸೂಯೆ, ಅಹಂಕಾರ, ಮಾತ್ಸರ್ಯ ಮುಂತಾದವುಗಳಿಂದ ಮುಕ್ತಿಯನ್ನು ಪಡೆದು ಶ್ರೇಯಸ್ಸಿನ ಕಡೆ ನಡೆಯುವ ಮಾರ್ಗ ಯಾವುದು ಎನ್ನುವುದು ಅವರ ಹುಡುಕಾಟವಾಗಿತ್ತು. 

ಸಾವಿರ ಹೆಡಗಳ ಆದಿಶೇಷನ ಮೇಲೆ ಮಲಗಿದ್ದ ಮಹಾವಿಷ್ಣುವು ಋಷಿಗಳ ಅಳಲಿಗೆ ಸ್ಪಂದಿಸಿ ಜಾಗೃತ ಪ್ರಜ್ಞೆಯ ಪ್ರತೀಕವಾದ ಆದಿಶೇಷನನ್ನೇ ಭೂಲೋಕಕ್ಕೆ ಕಳುಹಿಸಿಕೊಟ್ಟನು. ಆದಿಶೇಷನೇ ಮಹರ್ಷಿ ಪತಂಜಲಿಯ ರೂಪದಲ್ಲಿ ಅವತರಿಸಿದನು. ಹೀಗೆ ಜನಿಸಿದ ಪತಂಜಲಿಯು ಶರೀರ ಮನೋಬುದ್ಧಿಗಳ ಸರ್ವಾಂಗೀಣ ವಿಕಾಸ ಸಾಧನಾ ಮಾರ್ಗವಾದ ಯೋಗವನ್ನು ನೀಡಿ ಜಗತ್ತನ್ನು ಉದ್ಧರಿಸಿದನು. ಕೇವಲ ಯೋಗಸೂತ್ರಗಳನ್ನಷ್ಟೇ ಅಲ್ಲದೇ ವೈದ್ಯಕೀಯ ಸೂತ್ರದ ಮೂಲಕ ಶರೀರವನ್ನೂ, ವ್ಯಾಕರಣದ ಮೂಲಕ ಭಾಷೆಯನ್ನು ಶುದ್ಧಗೊಳಿಸಿದ ಶ್ರೇಯಸ್ಸು ಮಹರ್ಷಿ ಪತಂಜಲಿಗೆ ಸಲ್ಲುತ್ತದೆ. ಅಂತಹ ಮಹರ್ಷಿ ಪತಂಜಲಿಗೆ ಮಾನವಕುಲ ಸದಾ ಋಣಿಯಾಗಿದೆ.




ಯೋಗೇನ ಚಿತ್ತಸ್ಯ ಪದೇನ ವಾಚಾಮ್, ಮಲಂ ಶರೀರಸ್ಯ ಚ ವೈದ್ಯಕೇನ| 
ಯೋಪಾಕರೋತ್ತಂ ಪ್ರವರಮ್ ಮುನೀನಾಮ್, ಪತಂಜಲಿಮ್ ಪ್ರಾಂಜಲಿರಾನತೋಸ್ಮಿ||

Wednesday, December 9, 2015

ತಲೆಯ ಮೇಲಿನ ತೂಗುಗತ್ತಿ - ಜಾಗತಿಕ ಹವಾಮಾನ ಬದಲಾವಣೆ


(ಪುಂಗವ 15/12/2015)

            ಒಂದು ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಸಮಾನವಾಗಿ ನಡೆದುಬಂದಿರುವ ಋತುಚಕ್ರವನ್ನೇ ಹವಾಮಾನ ಎನ್ನಲಾಗುವುದು. ಇದಕ್ಕನುಗುಣವಾಗಿ ಅಲ್ಲಿನ ಜೀವನಕ್ರಮ ರೂಪುಗೊಂಡಿರುತ್ತದೆ. ಆರ್ಥಿಕ ಪ್ರಗತಿಯ ಹಿಂದೆ ಬಿದ್ದಿರುವ ಮಾನವನ ಚಟುವಟಿಕೆಗಳಿಂದ ಜಾಗತಿಕ ಹವಾಮಾನದಲ್ಲಿ ಏರುಪೇರಾಗುತ್ತಿದ್ದು ಕಳೆದ ಕೆಲವು ವರ್ಷಗಳಿಂದ ಗಮನಿಸಿರುವಂತೆ ಹವಾಮಾನ ಬದಲಾವಣೆ ಮತ್ತು ತಾಪಮಾನ ಹೆಚ್ಚಳ ಪೃಥ್ವಿಯ ಭವಿಷ್ಯದ ಜೀವನಕ್ಕೆ ಕಂಟಕಪ್ರಾಯವಾಗಿದೆ. ಹವಾಮಾನ ಬದಲಾವಣೆಯ ಪ್ರಮುಖ ಕಾರಣ ಪೃಥ್ವಿಯ ಹೊರಮೈ ತಾಪಮಾನದಲ್ಲಿ ಹೆಚ್ಚಳ. ಇಂಗಾಲಾಮ್ಲ (ಕಾರ್ಬನ್ ಡೈ ಆಕ್ಸೈಡ್), ಮೀಥೇನ್, ನೈಟ್ರಸ್ ಆಕ್ಸೈಡ್ ಮೊದಲಾದ ಅನಿಲಗಳ ಪ್ರಮಾಣ ವಾತಾವರಣದಲ್ಲಿ ಹೆಚ್ಚುವುದರಿಂದ ಪೃಥ್ವಿಯ ತಾಪಮಾನದಲ್ಲಿ ಹೆಚ್ಚಳ ಉಂಟಾಗುವುದು, ಇದನ್ನು ಹಸಿರುಮನೆ ಪರಿಣಾಮ ಎಂದು ಕರಯಲಾಗುತ್ತದೆ. ಹವಾಮಾನ ಬದಲಾವಣೆ ಮತ್ತು ತಾಪಮಾನದ ಹೆಚ್ಚಳದಿಂದಾಗುವ ಪರಿಣಾಮವನ್ನು ವಿಶೇಷವಾಗಿ ವಿವರಿಸಬೇಕಾಗಿಲ್ಲ. ಒಂದೆರಡು ದುಃಷ್ಪರಿಣಾಮಗಳೆಂದರೆ, ಧ್ರುವಪ್ರದೇಶ, ಹಿಮಾಲಯ ಪ್ರದೇಶಗಳ ಹಿಮಗುಡ್ಡಗಳು ಕರಗಿ ಸಮುದ್ರಮಟ್ಟ ಏರುವುದರಿಂದ ತೀರಪ್ರದೇಶದ ಬಹುದೊಡ್ಡ ಭೂಭಾಗ ಹಾಗೂ ಅನೇಕ ನಡುಗಡ್ಡೆಗಳು ಮುಳುಗಿಹೋಗುವ ಆತಂಕ ವಿಶ್ವವನ್ನು ಕಾಡುತ್ತಿದೆ. ಹವಾಮಾನದ ವೈಪರಿತ್ಯದಿಂದ ಮಳೆಯ ಹಂಚಿಕೆಯಲ್ಲಿ ಏರುಪೇರು, ಋತುಚಕ್ರದಲ್ಲಿ ಬದಲಾವಣೆ, ಅತಿವೃಷ್ಟಿ ಅನಾವೃಷ್ಟಿ, ಆ ಮೂಲಕ ನೀರಿನ ಕೊರತೆ, ಆಹಾರೋತ್ಪಾನೆಯಲ್ಲಿ ಕಡಿತ ಮೊದಲಾದ ಸವಾಲುಗಳ ಸರಮಾಲೆ ವಿಶ್ವದೆದುರು ನಿಲ್ಲಲಿದೆ. 
             ಹವಾಮಾನ ಬದಲಾವಣೆಯ ಸಮಸ್ಯೆ ಜಾಗತಿಕ ಮಟ್ಟದ್ದು. ಕೈಗಾರಿಕಾ ಪ್ರಧಾನ ಐರೋಪ್ಯ ರಾಷ್ಟ್ರಗಳು, ಅರಬ್ ದೇಶಗಳು, ಅಮೇರಿಕ, ಚೀನಾ, ಕೊರಿಯ, ಜಪಾನ್, ಮೊದಲಾದ ರಾಷ್ಟ್ರಗಳು ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಸಿರುಮನೆ ಅನಿಲಗಳನ್ನು ಸೇರಿಸುತ್ತಿದ್ದರೂ ಅದರಿಂದಾಗುವ ದುಃಷ್ಪರಿಣಾಮ ಕೇವಲ ಈ ದೇಶಗಳಿಗೆ ಸೀಮಿತವಾಗಿಲ್ಲ. ಆಫ್ರಿಕ ಮತ್ತು ಏಷಿಯ ಖಂಡಗಳ ಆರ್ಥಿಕವಾಗಿ ಹಿಂದುಳಿದ ದೇಶಗಳು ಜಾಗತಿಕ ಹವಾಮಾನ ಬದಲಾವಣೆಯಿಂದಾಗುವ ಪರಿಣಾಮದ ಬಲಿಪಶುಗಳಾಗುತ್ತಿವೆ.
                   ಆದ್ದರಿಂದ ಈ ಗಂಭೀರ ಸವಾಲನ್ನು ಎದುರಿಸಲು ವಿಶ್ವಸಮುದಾಯ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಬೇಸರದ ಸಂಗತಿ ಎಂದರೆ ಕಳೆದ ಇಪ್ಪತ್ತೈದು ವರ್ಷಗಳಿಂದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (United Nations Environment Program) ಅಡಿಯಲ್ಲಿ ಮಾತುಕತೆ ಶೃಂಗಸಭೆಗಳು ಸಡೆಯುತ್ತಿದ್ದರೂ ಒಂದು ಸೂಕ್ತ ಮಾರ್ಗದರ್ಶಿ ಸೂತ್ರ ಇನ್ನೂ ಒಪ್ಪಂದ ರೂಪಕ್ಕೆ ಬಂದಿಲ್ಲ. ಕೈಗಾರಿಕಾ ಕೇಂದ್ರಿತ ಅರ್ಥವ್ಯವಸ್ಥೆಯಿಂದ ಶ್ರೀಮಂತವಾಗಿರುವ ಐರೋಪ್ಯ ದೇಶಗಳು, ಅಮೇರಿಕ, ತೈಲೋತ್ಪನ್ನಗಳಿಂದ ಶ್ರೀಮಂತ ಅರಬ್ ದೇಶಗಳು ಇನ್ನೂ ಅತಿಹೆಚ್ಚಿನ ಪ್ರಮಾಣದಲ್ಲಿ ವಾತಾವರಣವನ್ನು ಕಲಿಷಿತಗೊಳಿಸುತ್ತಿವೆ, ಆದರೆ ಗುಲಾಮಗಿರಿಯ ಕಾಲದಲ್ಲಿ ಇವರೇ ಲೂಟಿ ಮಾಡಿದ ಏಷಿಯ-ಆಫ್ರಿಕದ ಬಡದೇಶಗಳ ಸಮಸ್ಯೆಯನ್ನು ಪರಿಹರಿಸುವತ್ತ ಗಮನ ಹರಿಸುತ್ತಿಲ್ಲ. ಜೊತೆಗೆ ವಿಶ್ವದ ಆರ್ಥಿಕ ಶಕ್ತಿಯಾಗಿ ಮೆರೆಯುವ ಕನಸು ಕಾಣುತ್ತಿರುವ ಚೀನಾ, ಬಡತನದಲ್ಲಿರುವ ಜನಸಂಖ್ಯೆಯ ಬಹುದೊಡ್ಡ ಭಾಗವನ್ನು ಮೇಲೆತ್ತಲು ಹರಸಾಹಸಪಡುತ್ತಿರುವ ಭಾರತ, ಬ್ರಾಸಿಲ್ ಮೊದಲಾದ ದೇಶಗಳಲ್ಲಿ ವಾತಾವರಣಕ್ಕೆ ಸೇರುವ ಹಸಿರುಮನೆ ಅನಿಲಗಳ ಪ್ರಮಾಣ ಏರುತ್ತಿದೆ.
            ಈ ಸಂಕಷ್ಟದಿಂದ ಹೊರಬರಲು ಮಾರ್ಗವೊಂದೇ. ಪಾಶ್ಚಾತ್ಯ ಕೊಳ್ಳುಬಾಕ ಸಂಸ್ಕೃತಿ, ಮಾರುಕಟ್ಟೆ ಆಧಾರಿತ ಜೀವನಶೈಲಿಯಿಂದ ಸರಳ ಜೀವನಶೈಲಿಯನ್ನು ಅಳವಡಿಸಕೊಳ್ಳುವುದು. ಪ್ರಾಕೃತಿಕ ಸಂಪನ್ಮೂಲಗಳಿರುವುದು ಕೇವಲ ಮನುಷ್ಯನ ಭೋಗಕ್ಕೆ ಮಾತ್ರವಲ್ಲ ಪ್ರತಿಯೊಂದು ಜೀವಿಯ ಬದುಕನ್ನೂ ಪೋಷಿಸಲು ಹಾಗೂ ಭವಿಷ್ಯದ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎನ್ನುವ ಸತ್ಯವನ್ನು ಅರಿತು ನಡೆದರೆ ಭವಿಷ್ಯದಲ್ಲಿ ಈ ಭೂಮಿಯ ಮೇಲೆ ಜೀವಜಗತ್ತೂ ಜೀವನ ಇನ್ನೊಂದಿಷ್ಟು ಕಾಲ ಉಳಿಯುವ ಸಾಧ್ಯತೆಯಿದೆ.



ಎಚ್ಚರ ವಹಿಸಬೇಕಿದೆ ಭಾರತ

           ತಾಪಮಾನ ಏರಿಕೆಗೆ ಕಾರಣವಾದ ಹಸಿರುಮನೆ ಅನಿಲಗಳನ್ನು ಅತಿಹೆಚ್ಚು ಹೊರಸೂಸುವ ದೇಶಗಳ ಸಾಲಿನಲ್ಲಿ ಭಾರತ ಮೂರನೇ ಸ್ಥಾದದಲ್ಲಿದೆ. ಆದರೆ ತಲಾವಾರು ಅಂಕಿಅಂಶಗಳನ್ನು ತೆಗೆದುಕೊಂಡರೆ ಬಹುತೇಕ ಪಾಶ್ಚಾತ್ಯ ದೇಶಗಳು ಮತ್ತು ತೈಲ ಉತ್ಪಾದಿಸುವ ಅರಬ್ ದೇಶಗಳು ಮೊದಲ ಸ್ಥಾನಗಳಲ್ಲಿದ್ದರೆ ಚೀನಾ ಹಾಗೂ ಭಾರತ ಕ್ರಮವಾಗಿ 54 ಮತ್ತು 133ನೇ ಸ್ಥಾನಗಳಲ್ಲಿವೆ.

     2030ರ ಹೊತ್ತಿಗೆ ವಿಶ್ವದ ಜನಸಂಖ್ಯೆ 9 ಶತಕೋಟಿಯಾಗಲಿದ್ದು ಅದರಲ್ಲಿ 6ಶತಕೋಟಿಯಷ್ಟು ನಗರವಾಸಿಗಳಾಗಲಿದ್ದಾರೆ. ಭಾರತದಲ್ಲಿ ಜನಸಂಖ್ಯೆಯ ಅರ್ಧದಷ್ಟು (ಸುಮಾರು 60 ಕೋಟಿ) ಒಟ್ಟೂ 68ನಗರಗಳಲ್ಲಿ ವಾಸಿಸಲಿದ್ದಾರೆ. ಆತಂಕದ ಸಂಗತಿಯೆಂದರೆ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಅತಿಯಾಗಿ ಮಲಿನಗೊಂಡ ವಿಶ್ವದ ಇಪ್ಪತ್ತು ನಗರಗಳಲ್ಲಿ ಹದಿಮೂರು ನಗರಗಳು ಭಾರತದಲ್ಲಿವೆ. ಮಾಲಿನ್ಯಗೊಂಡ ನಗರಗಳ ಯಾದಿಯಲ್ಲಿ ದೇಶದ ರಾಜಧಾನಿ ನವದೆಹಲಿ ಅಗ್ರಸ್ಥಾನ ಪಡೆದರೆ ಪಟ್ನಾ, ಗ್ವಾಲಿಯರ್ ಮತ್ತು ರಾಯಪುರ್‌ಗಳು ನಂತರದ ಸ್ಥಾನಗಳಲ್ಲಿವೆ.

           ಬಡತನ ರೇಖೆಯ ಕೆಳಗಿರುವ ಜನಸಂಖ್ಯೆಯ ದೊಡ್ಡ ಭಾಗದ ಆರ್ಥಿಕ ಪ್ರಗತಿಗೆ ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಟಿಸುವುದು ಭಾರತದಂತಹ ದೇಶದಲ್ಲಿ ಅನಿವಾರ್ಯ.  ಆದರೆ ಆರ್ಥಿಕ ಪ್ರಗತಿಯ ಜೊತೆಗೆ ಪರಿಸರದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮಹತ್ವದ್ದಾಗಿದೆ. ಏಕೆಂದರೆ ಪರಿಸರ ಕಾಳಜಿಯಿಲ್ಲದ ಯೋಜನೆಗಳು ಭವಿಷ್ಯದಲ್ಲಿ ದೇಶದ ಆರ್ಥಿಕತೆಗೂ ಮಾರಕವಾಗಲಿವೆ. ಆದ್ದರಿಂದ ಪರಿಸರಸ್ನೇಹಿಯಾಗುವ ಅಭಿವೃಧ್ಧಿ ಯೋಜನೆಗಳನ್ನು ಜಾರಿಗೊಳಿಸುವುದು, ತಂತ್ರಜ್ಞಾನದ ಸದ್ಬಳಕೆಯಿಂದ ವಾತಾವರಣ ಪ್ರದೂಷಣೆಯನ್ನು ಕಡಿಮೆಗೊಳಿಸುವದಕ್ಕೆ ಆದ್ಯತೆ ನೀಡಬೇಕು. ಜೊತೆಗೆ ಗ್ರಾಮೀಣ ಜನಜೀವನವನ್ನು ಸುದೃಢಗೊಳಿಸಿ ನಗರಗಳಿಗೆ ವಲಸೆ ಹೋಗುವುದನ್ನು ನಿಯಂತ್ರಿಸವುದಕ್ಕೂ ಗಮನ ಹರಿಸಬೇಕಾಗಿದೆ. ಹಾಗೆಯೇ ಗ್ರಾಮಗಳು ನಗರಗಳಿಗೆ ಸಾಮಾನು ಸರಂಜಾಮುಗಳನ್ನೊದಗಿಸಿ ಪೋಷಿಸುವ ಕೇಂದ್ರಗಳಷ್ಟೇ ಆಗದಿರುವಂತೆ ನೋಡಿಕೊಳ್ಳಬೇಕಿದೆ.


ಪ್ಯಾರಿಸ್ ಶೃಂಗಸಭೆ - COP21

2015ನೇ ಸಾಲಿನ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆ ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್‌ನಲ್ಲಿ ನವಂಬರ್ 30ರಿಂದ ಡಿಸೆಂಬರ್ 11ರವರೆಗೆ ನಡೆಯಿತು. 1992ರಲ್ಲಿ ಬ್ರೆಸಿಲ್ ದೇಶದ ರಿಯೋ-ಡೆ-ಜನರಿಯೋದಲ್ಲಿ ನಡೆದ ಅರ್ಥ ಸಮಿಟ್ ಹೆಸರಿನ ಶೃಂಗಸಭೆಯ ವೈಶ್ವಿಕ ಪರಿಸರ ಒಪ್ಪಂದ (United Nations Framework Convention on Climate Change)  ಅನ್ವಯ ನಡೆಯುತ್ತಿರುವ ವಾರ್ಷಿಕ ಶೃಂಗಸಭೆಯ ಇಪ್ಪತ್ತೊಂದನೇ ಆವೃತ್ತಿಯಾದ ಈ ಸಮ್ಮೇಳನದಲ್ಲಿ ವಿಶ್ವದ 196 ದೇಶಗಳು ಪಾಲ್ಗೊಂಡಿವೆ. ಜಾಗತಿಕ ಹವಾಮಾನ ಬದಲಾವಣೆ ಮತ್ತು ತಾಪಮಾನ ಹೆಚ್ಚಳವನ್ನು ನಿಗರಹಿಸುವ ನಿಟ್ಟಿನಲ್ಲಿ ವೈಶ್ವಿಕ ಒಪ್ಪಂದವನ್ನು ಜಾರಿಗೆ ತರುವುದು ಈ ಸಭೆಯ ಮುಖ್ಯ ಉದ್ಧೇಶವಾಗಿದೆ. ಪ್ರಮುಖವಾಗಿ ಪೆಟ್ರೋಲಿಯಂ ತೈಲ, ಕಲ್ಲಿದ್ದಲು ಮೊದಲಾದ ಫಾಸಿಲ್ ಇಂಧನಗಳನ್ನು ಉರಿಸುವುದರಿಂದ ವಾತಾವರಣಕ್ಕೆ ಸೇರಲ್ಪಡುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಕಡಿತಗೊಳಿಸಿ ಸರಾಸರಿ ಜಾಗತಿಕ ತಾಪಮಾನ ಕೈಗಾರಿಕಾ ಕ್ರಾಂತಿಯ ಪೂರ್ವ ಕಾಲದ (ಅಂದರೆ 1750ನೇ ಇಸವಿಗಿಂತ ಹಿಂದೆ) ಸರಾಸರಿ ತಾಪಮಾನಕ್ಕಿಂತ 2 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಮಾತ್ರ ಹೆಚ್ಚಳವಾಗುವಂತೆ ನಿಯಂತ್ರಿಸಲು ಜಾಗತಿಕ ಮಟ್ಟದಲ್ಲಿ ಕ್ರಮಕೈಗೊಳ್ಳುವ ವಿಷಯದ ಕುರಿತು ಈ ಸಭೆ ಚರ್ಚಿಸಿತು.


ವಿಶ್ವ ಸೌರಶಕ್ತಿ ಗುಂಪಿಗೆ ಭಾರತದ ನೇತೃತ್ವ

ಪ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಬದಲಾವಣೆ ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅಂತರರಾಷ್ಟ್ರೀಯ ಸೌರಶಕ್ತಿ ಒಕ್ಕೂಟಕ್ಕೆ ಚಾಲನೆ ನೀಡಿದರು. ಸೌರಶಕ್ತಿಯ ತಂತ್ರಜ್ಞಾನದಲ್ಲಿ ಹೆಚ್ಚಿನ ಸಂಶೋಧನೆಯನ್ನು ಕೈಗೊಳ್ಳುವ ಸಲುವಾಗಿ ಈ ಗುಂಪಿಗೆ ಭಾರತ ನೇತೃತ್ವ ವಹಿಸಲಿದ್ದು ವಿಶ್ವದ 120ದೇಶಗಳು ಕೈಜೋಡಿಸಿವೆ. ಅಲ್ಲದೇ ಅನೇಕ ಉದ್ಯಮಪತಿಗಳು ಬಹುರಾಷ್ಟ್ರೀಯ ಕಂಪನಿಗಳು ಸಹಾಯಹಸ್ತ ನೀಡಿವೆ. ನವದೆಹಲಿಯಲ್ಲಿ ಈ ಒಕ್ಕೂಟದ ಕೇಂದ್ರ ಸ್ಥಾಪನೆಗೊಳ್ಳಲಿದೆ. 2030ರ ಹೊತ್ತಿಗೆ ವಾತಾವರಣವನ್ನು ಕಲುಷಿತಗೊಳಿಸದೇ ಪುನರುಜ್ಜೀವನಗೊಳಿಸಬಲ್ಲ ಮೂಲಗಳಿಂದ ಹೆಚ್ಚಿನ ವಿದ್ಯುತ್‌ನ್ನು ಉತ್ಪಾದನೆ ಮಾಡುವತ್ತ ಈ ಯೋಜನೆ ಪ್ರಯತ್ನ ಮಾಡಲಿದ್ದು, ಇದೊಂದು ಗೇಮ್ ಚೇಂಜರ್ ಎಂದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ. ಹಾಗೂ 2030ರವೇಳೆಗೆ ಭಾರತದ ಒಟ್ಟೂ ಅಗತ್ಯ ಶಕ್ತಿಯ ಶೇ. 40ರಷ್ಟು ಭಾಗವನ್ನು ಪುನರುಜ್ಜೀವನಗೊಳಿಸುವ ಮೂಲಗಳಿಂದ ಪೋರೈಸುವುದಾಗಿ ಭಾರತ ಘೋಷಿಸಿದೆ.


Sunday, November 15, 2015

ಗೋಸಂಪತ್ತಿನ ಸಂರಕ್ಷಣೆ - ಸಂವರ್ಧನೆಗಾಗಿ ಗೋಶಾಲೆಗಳು


(ಪುಂಗವ 15/11/2015)

ವಿಶ್ವದಲ್ಲೇ ಅತಿಹೆಚ್ಚು ಪಶುಸಂಪತ್ತುಳ್ಳ ದೇಶ ಭಾರತ. ಗೋವಂಶದಿಂದ ಮನುಷ್ಯನಿಗಾಗುವ ಪ್ರಯೋಜನವನ್ನು ಮನಗಂಡದ್ದಿಂದಲೇ ನಮ್ಮ ಪೂರ್ವಜರು ದನಕರುಗಳ ಸಂರಕ್ಷಣೆಗೆ ಮಹತ್ವ ನೀಡಿದ್ದಲ್ಲದೇ ಗೋವಿಗೆ ಪೂಜ್ಯ ಸ್ಥಾನವನ್ನೂ ನೀಡಿದ್ದರು. ಪ್ರಸಕ್ತ ಸನ್ನಿವೇಶದಲ್ಲಿ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಯ ಕುರಿತ ರಾಜಕೀಯ ಮೇಲಾಟಗಳ ನಡುವೆಯೂ ನಮ್ಮ ದೇಶದ ಹೆಚ್ಚಿನ ಮನೆಗಳಲ್ಲಿ ಇಂದಿಗೂ ಗೋಸೇವೆಯೊಂದಿಗೇ ದಿನನಿತ್ಯದ ಚಟುವಟಿಕೆಗೆಳು ಆರಂಭವಾಗುವುದು. ಹಾಗೆಯೇ ಭಾರತೀಯ ಗೋವಂಶ ಉಳಿವಿಗಾಗಿ ಸಾವಿರಾರು ಸಂರಕ್ಷಣಾ ಕೇಂದ್ರಗಳು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಕರ್ನಾಟಕ ರಾಜ್ಯದಲ್ಲೇ ಸುಮಾರು ಎಂಭತ್ತು ಗೋಶಾಲೆಗಳಿವೆ. ದೇಸೀ ಗೋತಳಿಗಳ ಸಂರಕ್ಷಣೆ ಈ ಎಲ್ಲ ಗೋಶಾಲೆಗಳ ಮೂಲ ಉದ್ಧೇಶವಾದರೂ ಪ್ರತಿಯೊಂದು ಕೇಂದ್ರದ ಕಾರ್ಯವಿಧಾನವೂ ತನ್ನದೇ ಆದ ವಿಶೇಷತೆ ಹಾಗೂ ಹೊಸತನವನ್ನು ಅಳವಳಡಿಸಿಕೊಳ್ಳುವ ಮೂಲಕ ಭಿನ್ನವಾಗಿದೆ. ಈ ಹಿನ್ನೆಲೆಯಲ್ಲಿ ಒಂದೆರಡು ಗೋಶಾಲೆಗಳ ಕಿರುಪರಿಚಯವನ್ನು ಇಲ್ಲಿ ನೀಡಲಾಗಿದೆ. 
ಭುಕ್ತ್ವಾ  ತೃಣಾನಿ ಶುಷ್ಕಾನಿ ಪೀತ್ವಾ ತೋಯಂ ಜಲಾಶಯಾತ್ | ದುಗ್ಧಂ ದದಾತಿ ಲೋಕೇಭ್ಯಃ ಗಾವೋ ವಿಶ್ವಸ್ಯ ಮಾತರಃ ||
ಒಣ ಹುಲ್ಲನ್ನು ತಿಂದು, ಜಲಾಶಯದ ನೀರನ್ನು ಕುಡಿದು ಲೋಕದ ಜನರಿಗೇ ಹಾಲನ್ನು ಕೊಟ್ಟು ಸಲಹುವ ಗೋವುಗಳೇ ವಿಶ್ವದ ಮಾತೆಯರು.


ರಾಷ್ಟ್ರೋತ್ಥಾನ ಗೋಶಾಲೆ - ಗೋಸಂರಕ್ಷಣೆ - ಸಂವರ್ಧನೆ - ಸಂಶೋಧನೆ

ರಾಜಸ್ಥನದ ಕಾಂಕ್ರೇಜ್ 

ಹಳ್ಳಿಕಾರ್ 
ದೊಡ್ಡಬಳ್ಳಾಪುರ ಜಿಲ್ಲೆಯ ಘಾಟಿ ಸುಬ್ರಮಣ್ಯದ ಹತ್ತಿರ ಸುಮಾರು ನೂರೈವತ್ತು ಎಕರೆ ವಿಶಾಲವಾದ ಪ್ರದೇಶದಲ್ಲಿ ರಾಷ್ಟ್ರೋತ್ಥಾನ ಗೋಶಾಲೆ ಕಾರ್ಯನಿರ್ವಹಿಸುತ್ತಿದ್ದು ದೇಸಿ ತಳಿಯ ಸುಮಾರು ಐದುನೂರು ದನಕರುಗಳು ಇಲ್ಲಿ ಆಶ್ರಯ ಪಡೆದಿವೆ. ದೂರದ ರಾಜಸ್ಥಾನದಿಂದ ಕಾಂಕ್ರೇಜ್, ಗುಜರಾತಿನಿಂದ ಗೀರ್, ಮಧ್ಯಭಾರತದಿಂದ ಸಾಹೀವಾಲ್ ಮಹಾರಾಷ್ಟ್ರದಿಂದ ದೇವನಿ ಮೊದಲಾದ ತಳಿಗಳನ್ನು ತರಿಸಲಾಗಿದ್ದು ಸ್ಥಳೀಯ ವಾತಾವರಣಕ್ಕೆ ಅವುಗಳು ಹೊಂದಿಕೊಳ್ಳುವಂತೆ ವಿಶೇಷ ಕಾಳಜಿವಹಿಸಿ ಸಾಕಲಾಗುತ್ತಿದೆ. ಕೇವಲ ಗೋಸಂರಕ್ಷಣೆಗಷ್ಟೇ ಸೀಮಿತವಾಗದೇ ಪ್ರತಿಯೊಂದು ತಳಿಯ ಭೌತಿಕ ಅಗತ್ಯಗಳು, ಆಹಾರ, ಹಾಲು ಮೊದಲಾದ ಗೋಉತ್ಪನ್ನಗಳ ಪ್ರಮಾಣ ಪ್ರಯೋಜನಗಳು ಮೊದಲಾದ ವಿಷಯಗಳಲ್ಲಿ ಸಂಶೋಧನೆ ಇಲ್ಲಿ ನಡೆಯುತ್ತಿದೆ. ಉದಾಹರಣೆ ಅತಿ ಹೆಚ್ಚು ಹಾಲು ಕೊಡುವ ಗುಜರಾತಿನ ಗೀರ್ ಮತ್ತು ರಾಜಸ್ಥಾನದ ಕಾಂಕ್ರೇಜ್ ತಳಿಗಳನ್ನು ತಂದು ಅವು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗಿದೆ. ಈ ತಳಿಗಳು ದಿನಕ್ಕೆ 15ರಿಂದ 18 ಲೀಟರಿನವರೆಗೆ ಹಾಲನ್ನು ನೀಡುವುದ ಇಲ್ಲಿನ ಸಂಶೋಧನೆಯಿಂದ ದೃಢಪಟ್ಟಿದೆ.

ಗುಜರಾತಿನ ಗೀರ್ 
ಸುತ್ತಲಿನ ಗ್ರಾಮಗಳ ರೈತರಿಗೆ ಹೋರಿಗಳನ್ನು ಸಾಕಲು ನೀಡುವದು, ಗ್ರಾಮವನ್ನು ದತ್ತು ತೆಗೆದುಕೊಂಡು ಗೋಕೇಂದ್ರಿತ ಉಳುಮೆ ಹಾಗೂ ಸಾವಯವ ಕೃಷಿಯ ಮೂಲಕ ಅಭಿವೃದ್ಧಿಪಡಿಸುವುದು, ಗೋಬರ್ ಗ್ಯಾಸ ಘಟಕವನ್ನು ನಿರ್ಮಿಸುವುದು ಮೊದಲಾದ ಅನೇಕ ಕಾರ್ಯಗಳನ್ನು ರಾಷ್ಟ್ರೋತ್ಥಾನ ಗೋಶಾಲೆ ಹಮ್ಮಿಕೊಂಡಿದೆ. ಜನಪರ ಸಂಸ್ಥೆಯೊಂದು ಸಮರ್ಥವಾಗಿ ನಡೆಸುವ ಗೋಸಂರಕ್ಷಣಾ ಕಾರ್ಯದ ಮಾದರಿಯನ್ನು ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಕಾಣಬಹುದು.



ನಾಟಿ ಗೋಶಾಲೆ - ಗೋ ಆಧಾರಿತ ಕಿರು ಉದ್ಯಮದ ಪ್ರಾಯೋಗಿಕ ಮಾದರಿ

ನಾಟಿ ಗೋಶಾಲೆ 
ಚಿಕ್ಕ ಪ್ರದೇಶದಲ್ಲಿ ದೇಸಿ ಗೋ ಉತ್ಪನ್ನಗಳನ್ನೇ ಆಧರಿಸಿ ನಡೆಸಬಹುದಾದ ಯಶಸ್ವೀ ಉದ್ಯಮದ ಮಾದರಿಯನ್ನು ನಾಟಿ ಗೋಶಾಲೆಯಲ್ಲಿ ನೋಡಬಹುದು. ಸುಮಾರು ಒಂದೂವರೆ ಎಕರೆ ವಿಸ್ತೀರ್ಣದ ಹರಡಿಕೊಂಡಿರುವ ನಾಟಿ ಗೋಶಾಲೆಯ ಕಂಪೌಂಡಿನೊಳಗೆ ಕಾಲಿಡುತ್ತಿದ್ದಂತೇ ಗ್ರಾಮೀಣ ಪ್ರದೇಶದ ಹಟ್ಟಿಯ ಶುದ್ಧ ಸುಗಂಧ ಮೂಗಿಗೆ ಬಡಿಯುತ್ತದೆ. ವೃತ್ತಿಯಲ್ಲಿ ಚಾರ್ಟರ್ಡ ಅಕೌಂಟಂಟ್ ಆಗಿರುವ ಶ್ರೀ ಸುಧೀಂದ್ರರವರು ತಾಯಿ ಶ್ರೀಮತಿ ಪಾರ್ವತಮ್ಮನವರ ಒತ್ತಾಸೆಯ ಮೇಲೆ ಆರಂಭಿಸಿರುವ ಈ ಗೋಶಾಲೆಯಲ್ಲಿ ಗೀರ್, ಸಾಹಿವಾಲ್, ಹಳ್ಳಿಕಾರ್, ಮಲೆನಾಡ ಗಿಡ್ಡ, ವಚ್ಚೂರ್ ಮೊದಲಾದ ವಿವಿಧ ತಳಿಗಳ ನೂರಕ್ಕೂ ಹೆಚ್ಚು ದನಗಳನ್ನು ಸಾಕಿ ಸಲಹಲಾಗುತ್ತಿದೆ. ದನಗಳಿಗಾಗಿ ಸ್ನಾನದ ಕೊಳ, ಬಿಸಿಲಿನ ಪ್ರದೇಶ, ಗೋಬರ್ ಗ್ಯಾಸ್ ಘಟಕ, ಬಯೋಫೀನ್- ಹುಲ್ಲು ಮೇವಿನ ಘಟಕ, ಜಲ ಶುದ್ಧೀಕರಣ ಘಟಕ ಇವೆಲ್ಲದ ಜೊತೆಗೆ ಅವರು ವಾಸವಾಗಿರುವ ಮನೆ, ಕೆಲಸಮಾಡುವ ಆಳುಗಳ ವಸತಿ ಇವೆಲ್ಲವೂ ಕೇವಲ ಒಂದೂವರೆ ಎಕರೆ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಹರಡಿವೆ.  

ಸುವ್ಯವಸ್ಥಿತ ನಾಟಿ ಗೋಶಾಲೆ 
ಗೋಮೂತ್ರ, ಗೋಮಯಗಳಿಂದ ಘನಜೀವಾಮೃತ, ಅಗ್ನಿ ಅಸ್ತ್ರ, ಪಂಚಾಮೃತ ಮೊದಲಾದ ಹಲವಾರು ಸಾವಯವ ಕೃಷಿಗೆ ಉಪಯೋಗಿಸಬಹುದಾದ ಗೊಬ್ಬರ ಔಶಧಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ. ಹಾಲು ಆಕಳಿಂದ ಸಿಗುವ ಉಪ ಉತ್ಪನ್ನ ಗೋಮಯ ಗೋಮೂತ್ರಗಳೇ ದನದಿಂದ ಸಿಗುವ ಪ್ರಮುಖ ಉತ್ಪನ್ನಗಳು ಎನ್ನುವುದು ಅವರ ಅನಿಸಿಕೆ.


ಆನ್‍ಲೈನ್ ಮೂಲಕ ಗೋ ಉತ್ಪನ್ನಗಳನ್ನು ಮಾರಾಟಮಾಡಲು http://www.pasuthai.com/ ಎನ್ನುವ ವೆಬ್‍ಸೈಟನ್ನು ನಿರ್ವಹಿಸುತ್ತಿದ್ದಾರೆ. ISO 2008-9001  ಮಾನ್ಯತೆ ಪಡೆದುಕೊಂಡ ಮೊದಲ ಗೋಶಾಲೆ ಎಂಬ ಹೆಗ್ಗಳಿಕೆಗೆ ನಾಟಿ ಗೋಶಾಲೆ ಪಾತ್ರವಾಗಿದೆ. ಹಾಗೆಯೇ ಸಾವಯವ ಉತ್ಪನ್ನ ಪ್ರಮಾಣಪತ್ರವನ್ನೂ ಕೂಡ ಈ ಗೋಶಾಲೆ ಗಳಿಸಿದೆ. 


ಸುರಭೀ ಗೋ-ಸಂರಕ್ಷಣಾ ಕೇಂದ್ರ ಮಧುಗಿರಿ
ಮಧುಗಿರಿಯ ಸುರಭಿ ಗವ್ಯೋತ್ಪನ್ನ ಕೆಂದ್ರ 
ಮಧುಗಿರ ತಪ್ಪಲಿನ ರಮಣೀಯ ಪ್ರದೇಶ ಶ್ರೀರಾಮಕ್ಷೇತ್ರದಲ್ಲಿ 2006ರಿಂದ ಸುರಭಿ ಗೋಶಾಲೆ ಕಾರ್ಯನಿರ್ವಹಿಸುತ್ತಿದೆ. ದೇಸೀ ಗೋತಳಿಗಳನ್ನೇ ಸಾಕಿ ಸ್ವಾವಲಂಬಿಯಾದಂತಹ ಗೋಶಾಲೆಯನ್ನು ನಡೆಸಬೇಕೆಂಬ ಉದ್ಧೇಶದಿಂದ ಶ್ರೀ ಮಧುಸೂದನರವರು ಆರಂಭಿಸಿದ ಸುರಭಿ ಗೋಶಾಲೆಯಲ್ಲಿ ಇದುವರೆಗೂ ಕಟುಕರಿಂದ ರಕ್ಷಿಸಲ್ಪಟ್ಟ ನೂರಾರು ದನಗಳು ಆಶ್ರಯ ಪಡೆದಿವೆ. ವಿವಿಧ ದೇಸೀ ತಳಿಯ ದನಗಳ ಜೊತೆಗೆ ಗಾಯಗೊಂಡಿರುವ, ಮುದಿಯಾದ, ಮಾನಸಿಕವಾಗಿ ಅಸ್ವಸ್ಥಗೊಂಡಿರುವ, ವಿಕಲಾಂಗ ಹೀಗೆ ಅನೇಕ ತರಹದ ದನಕರುಗಳನ್ನು ಶ್ರೀ ಮಧುಸೂದನ ದಂಪತಿ ತಮ್ಮ ಗೋಶಾಲೆಯಲ್ಲಿ ಆರೈಕೆ ನೀಡಿ ಸಲಹುತ್ತಿದ್ದಾರೆ. ಹಾಲಿನ ಹೊರತಾಗಿ ಗೋಮೂತ್ರ, ಗೋಮಯ ಗೊಬ್ಬರ ಮುಂತಾದ ಉಪ ಉತ್ಪನ್ನಗಳಿಂದ ಆದಾಯಗಳಿಸಿ ಸ್ವಾವಲಂಬಿ ಗೋಶಾಲೆಯನ್ನು ನಡೆಸಬಹುದು ಎಂದು ಅವರು ಪ್ರತಿಪಾದಿಸುತ್ತಾರೆ. ಇಲ್ಲಿ ಸುಮಾರು ಒಂಭತ್ತು ಬಗೆಯ ಗೋ ಉತ್ಪನ್ನಗಳನ್ನು ತಯಾರಿಸಿ ಮಾರಾಟಮಾಡಲಾಗುತ್ತದೆ, ಅಲ್ಲದೇ ಆಸಕ್ತರಗೆ ಈ ಕುರಿತು ತರಬೇತಿಯನ್ನೂ ನೀಡಲಾಗುತ್ತದೆ.


ಸುರಭಿ ಗೋಶಾಲೆಯ ರಮಣೀಯ ಪರಿಸರ 
ರಮಣೀರ ಪ್ರಾಕೃತಿಕ ಪ್ರದೇಶದಲ್ಲಿರುವ ಸುರಭಿ ಗೋಶಾಲೆ ಒಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಪಕ್ಕದಲ್ಲಿರುವ ಬೃಹತ್  ಶಿಲಾಬೆಟ್ಟದಿಂದ ಹರಿದು ಬರುವ ನೀರನ್ನು ಸಂಗ್ರಹಿಸಲು ಕೊಳವೊಂದನ್ನು ನಿರ್ಮಿಸಲಾಗಿದ್ದು ನಟ್ಟನಡುವಿನಲ್ಲಿ ಪಂಚಮುಖ ಶ್ರೀ ಪಶುಪತಿನಾಥ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶಾಲಾವಿದ್ಯಾರ್ಥಿಗಳು ಗೋವಿನ ಬಗ್ಗೆ ಶೈಕ್ಷಣಿಕ ಮಾಹಿತಿ ಪಡೆಯುವುದರ ಜೊತೆಗೆ ಪರಿಸರದ ಸೌಂದರ್ಯವನ್ನು ಸವಿಯುಲು, ಕುಟುಂಬ ಸಮೇತ ಒಂದು ದಿನದ ಪ್ರವಾಸ ಕೈಗೊಳ್ಳಲು ಹಾಗೆಯೇ ಕಸುವುಳ್ಳವರಿಗೆ ಚಾರಣ ಮಾಡಲು ಇದು ಹೇಳಿ ಮಾಡಿಸಿದಂತಹ ಸ್ಥಳ.


ರೈತರಿಗೆ ಉಚಿತವಾಗಿ ಎತ್ತುಗಳನ್ನು ಕೊಡುವ ಯೋಜನೆ
ಕಾಂಕ್ರೇಜ್ ಹೋರಿ 
ಅರ್ಹ ರೈತರಿಗೆ ಉಳುಮೆಗಾಗಿ ಎತ್ತಿನ ಜೋಡಿಯನ್ನು ಉಚಿತವಾಗಿ ಕೊಡುವ ಯೋಜನೆ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಜಾರಿಯಲ್ಲಿದೆ. ರೈತರಿಂದ ಅರ್ಜಿಯನ್ನು ಪಡೆದು ಯೋಗ್ಯತಾ ಪರೀಕ್ಷೆಯ ನಂತರ ಎತ್ತಿನ ಜೋಡಿಯನ್ನು ಉಚಿತವಾಗಿ ನೀಡಲಾಗುತ್ತದೆ. ಅಂತಹ ಫಲಾನುಭವಿ ರೈತರಿಗೆ ನೀಡಿದ ಜಾನುವಾರಿನ ಆರೋಗ್ಯ ಹಾಗೂ ಬಳಕೆಯ ಕುರಿತು ಕಾಲಕಾಲಕ್ಕೆ ಅಧಿಕೃತ ತಪಾಸಣೆ ನಡೆಸಿ ವೀಡಿಯೋ ಚಿತ್ರೀಕರಣದ ದಾಖಲೆಗಳನ್ನು ಮಾಡಲಾಗುತ್ತದೆ. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಯುವವರಿಗೆ ಮಾತ್ರ ಎತ್ತಿನ ಜೋಡಿಗಳನ್ನು ನೀಡುವುದು ಇನ್ನೊಂದು ವಿಶೇಷತೆ. ಇದುವರೆಗೂ ನೂರಕ್ಕೂ ಹೆಚ್ಚು ಎತ್ತಿನ ಗೋಡಿಗಳನ್ನು ಉಳುಮೆಗಾಗಿ ನೀಡಲಾಗಿದ್ದು ಹತ್ತಾರು ರೈತಾಪಿ ಕುಟುಂಬಗಳು ಪ್ರಯೋಜನ ಪಡೆದಿವೆ. 


ಸ್ಥಳೀಯ ರೈತರೊಂದಿಗೆ ಹುಲ್ಲು ಮೇವಿನ ಬದಲಾಗಿ ಗೊಬ್ಬರದ ವಿನಿಮಯ
ದೊಡ್ಡ ಸಂಖ್ಯೆಯಲ್ಲಿ ದನಗಳಿದ್ದಾಗ ಅಗತ್ಯವಿರುವ ಮೇವನ್ನು ಕಾಲಕಾಲಕ್ಕ ಒದಗಿಸುವುದು ಗೋಶಾಲೆ ನಡೆಸುವವರ ಮುಂದಿರುವ ಸವಾಲುಗಳಲ್ಲೊಂದು. ಅದರಲ್ಲೂ ಬರಗಾಲ ಅನಾವೃಷ್ಠಿ ಬೆಳೆನಾಶ ಮೊದಲಾದ ಸಮಯಗಳಲ್ಲಿ ಹುಲ್ಲಿನ ದರವೂ ಗಗನಕ್ಕೇರುವುದರಿಂದ ಮೇವನ್ನು ಹೊಂದಿಸುವುದು ಕಷ್ಟವಾಗುವ ಸಂಧರ್ಭವೊದಗುತ್ತದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಸುರಭಿ ಗೋಶಾಲೆಯಲ್ಲಿ ಸರಳವಾದ ಉಪಾಯವನ್ನು ಕಂಡುಕೊಂಡಿದ್ದಾರೆ. ಸುತ್ತಲಿನ ಗ್ರಾಮಗಳ ರೈತರೊಂದಿಗೆ ಹುಲ್ಲಿನ ಬದಲಾಗಿ ಗೊಬ್ಬರವನ್ನು ವಿನಿಮಯ ಮಾಡಿಕೊಳ್ಳುವ ಪದ್ಧತಿಯನ್ನು ಬೆಳೆಸಿಕೊಂಡಿದ್ದಾರೆ. ಗೋಶಾಲೆಯಲ್ಲೊಂದು ಟ್ರಾಕ್ಟರ್ ಇದೆ. ಟ್ರಾಕ್ಟರಿಗೆ ಗೊಬ್ಬರ ತುಂಬಿಸಿ ಕಳುಹಿಸುವುದು ಗೋಶಾಲೆಯ ಜವಾಬ್ದಾರಿಯಾದರೆ, ಮಾರ್ಗ ವೆಚ್ಚದ ಡೀಸೆಲ್ ತುಂಬಿಸಿ ಹುಲ್ಲನ್ನು ತುಂಬಿಸಿ ಕಳುಹಿಸುವ ಜವಾಬ್ದಾರಿ ರೈತರದು. ಇದರಿಂದ ಗೋಶಾಲೆಯ ದನಗಳಿಗೆ ಅಗತ್ಯ ಮೇವು ಕಾಲಕಾಲಕ್ಕೆ ಪೋರೈಕೆಯಾಗುವುದು ಒಂದಾದರೆ ರೈತರ ಹೊಲಗಳಿಗೆ ಸಮೃದ್ಧ ಸಾವಯವ ಗೊಬ್ಬರವು ದೊರಕಿ ಬಂಗಾರದ ಬೆಳೆ ಬರುತ್ತಿದೆ. ಜೊತೆಗೆ ಸ್ಥಳೀಯ ರೈತರಿಗೆ ಗೋಶಾಲೆಯೊಂದಿಗೆ ಭಾವನಾತ್ಮಕ ಸಂಭಂಧವೂ ಬೆಳೆದಿದೆ.


ಗ್ರಾಮಕ್ಕೊಂದು ಗೋಶಾಲೆ - ಹೀಗೊಂದು ಪ್ರಯೋಗ ಮಾಡಬಹುದೇ?
ಕೃಷಿಯೇ ಪ್ರಧಾನ ಉದ್ಯೋಗವಾಗಿದ್ದ ನಮ್ಮ ದೇಶದಲ್ಲಿ ಅದರ ಅಗತ್ಯಕ್ಕೆ ತಕ್ಕಂತೇ ಗೊಬ್ಬರ, ಉಳುಮೆ ಹಾಗೂ ಹಾಲು ಮೊದಲಾದವುಗಳಿಗಾಗಿ ಗ್ರಾಮೀಣ ಪ್ರದೇಶದ ಬಹುತೇಕ ಮನೆಗಳಲ್ಲಿ ದನಕರುಗಳನ್ನು ಸಾಕುವ ಪದ್ಧತಿ ಬೆಳೆದುಬಂದಿದೆ. ಇಂದು ಆರ್ಥಿಕ ಪ್ರಗತಿಯ ಹಾದಿಯಲ್ಲಿ ಬದಲಾದ ಕಾಲಕ್ಕನುಗುಣವಾಗಿ ಜೀವನ ನಿರ್ವಹಣೆಗಾಗಿ ಹೆಚ್ಚಿನ ಜನರು ಕೃಷಿಯೇತರ ಉದ್ಯೋಗವನ್ನು ಅವಂಬಿಸಬೇಕಾದುದು ಅನಿವಾರ್ಯವಾಗಿದೆ. ಅದರಿಂದಾಗಿ ಬೇರೆ ಊರುಗಳಿಗೆ ವಲಸೆ ಹೋಗುವುದು, ಚಿಕ್ಕ ಕುಟುಂಬ, ಸಮಯದ ಅಭಾವ ಮುಂತಾದ ಕಾರಣಗಳಿಂದ ಮುಂಚಿನಂತೆ ಮನೆಮನೆಗಳಲ್ಲೂ ದನಕರುಗಳನ್ನು ಸಾಕುವುದು ಇಂದಿನ ಪರಿಸ್ಥಿತಿಯಲ್ಲಿ ಕಷ್ಟಕರ. ಅಂತೆಯೇ ಹತ್ತಿಪ್ಪತ್ತು ದನಕರುಗಳಿಂದ ತುಂಬಿರುತ್ತಿದ್ದ ಕೊಟ್ಟಿಗೆಗಳಲ್ಲಿ ಕೇವಲ ಒಂದೆರಡು ದನಗಳು ಅಥವಾ ಜೆರ್ಸಿ ಆಕಳುಗಳು ಇರುವುದನ್ನು ನಾವು ಇಂದು ಕಾಣಬಹುದು. ಇದರಿಂದಾಗಿ ದೇಸಿ ಪಶುಸಂಪತ್ತು ಅಳಿವನಂಚಿಗೆ ಸಾಗುತ್ತಿದೆ ಎನ್ನುವ ಕಳವಳ ಒಂದು ಕಡೆಯಾದರೆ ಗೋವಿನಿಂದ ಸಿಗುವ ಪ್ರಯೋಜನ, ಆಕಳ ಹಾಲಿನಿಂದ ಸಿಗುವ ಪೋಷಣೆ, ಗೋಮೂತ್ರದ ಔಶಧೀಯ ಗುಣಗಳಿಂದ ಸಿಗುವ ಲಾಭ, ಗೊಬ್ಬರ, ಗೋಬರ್ ಗ್ಯಾಸ್ ಮುಂತಾದವುಳಿಂದ ಸಿಗುವ ಆರ್ಥಿಕ ಲಾಭದಿಂದ ನಾವು ವಂಚಿತರಾಗುತ್ತಿದ್ದೇವೆ.

ಆದ್ದರಿಂದ ದನಕರುಗಳನ್ನು ಸಾಕುವ ಸಲುವಾಗಿ ಸಮಾನ ಮನಸ್ಕರು ಕೈಜೋಡಿಸಿ ಸೇರಿ ಗ್ರಾಮಕ್ಕೊಂದು ಗೋಶಾಲೆಯನ್ನು ನಡೆಸಬಹುದು. ಹಲವು ಜನರ ಸಹಭಾಗಿತ್ವದಲ್ಲಿ ನಡೆಸುವ ಗೋಶಾಲೆಯು ನಮ್ಮ ಗ್ರಾಮಕ್ಕೆ ಬೇಕಾದ ಹಾಲು ಮತ್ತು ಹಾಲಿನ ಉತ್ಪನ್ನಗಳ ಅಗತ್ಯವನ್ನು ಪೋರೈಸುವುದು. ಜೊತೆಗೆ ಗೋ ಉತ್ಪನ್ನಗಳನ್ನು ತಯಾರಿಸುವ ಕಿರು ಉದ್ಯಮವನ್ನು ನಡೆಸಿ ಕೆಲವರಿಗೆ ಉದ್ಯೋಗ ನೀಡಬಹುದು, ಗೋಬರ್ ಗ್ಯಾಸ್ ಅದರ ಮೂಲಕ ವಿದ್ಯುತ್ ಉತ್ಪಾದನೆ, ಸಾವಯವ ಗೊಬ್ಬರ ತಯಾರಿ ಹೀಗೆ ಅನೇಕ ಗೋಶಾಲೆ ಕೇಂದ್ರಿತ ಆರ್ಥಿಕ ಚಟುವಟಿಕೆಗಳನ್ನು ನಡೆಸಬಹುದು. 

Friday, September 4, 2015

ಮರೆಯಲಾಗದ ಮಹಾಕದನ

(ಪುಂಗವ – 15/9/2015)


1965ರ ಭಾರತ - ಪಾಕ್ ಯುದ್ಧಕ್ಕೆ 50 ವರ್ಷಗಳು

            ದೇಶದ ಏಕತೆ ಮತ್ತು ಸಮಗ್ರತೆಯನ್ನು ಗಟ್ಟಿಯಾಗಿರಿಸುವಲ್ಲಿ ಭೌಗೋಳಿಕ ಗಡಿಗಳು ಸುರಕ್ಷಿತವಾಗಿರುವುದರ ಜೊತೆಗೆ ಜನಮಾನಸದಲ್ಲಿ ರಾಷ್ಟ್ರದ ಆತ್ಮಗೌರವವನ್ನು ಎತ್ತಿಹಿಡಿಯಬೇಕೆಂಬ ಪ್ರಜ್ಞೆ ಜಾಗೃತವಾಗಿರುವುದೂ ಅತ್ಯಗತ್ಯವಾಗಿದೆ. ಒಚಿದು ರಾಷ್ಟ್ರದ ಇತಿಹಾಸದ ಭಾಗವಾದ ಶೌರ್ಯ ಮತ್ತು ವಿಜಯಗಳ ಗಾಥೆಗಳು ರಾಷ್ಟ್ರಾಭಿಮಾನದ ಭಾವನೆಯನ್ನು ಹೆಚ್ಚಿಸುತ್ತವೆ. ಆದರೆ ಭಾರತ ವಿರೋಧಿ ಶಕ್ತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾದ ನಮ್ಮ ಸಾಧನೆಗಳನ್ನು ತಗ್ಗಿಸಿ ದೇಶದ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಸದಾ ಪ್ರಯತ್ನ ನಡೆಸುವುದು ಹೊಸದೇನಲ್ಲ. ಇಂದಿಗೆ ಐವತ್ತು ವರ್ಷಗಳ ಹಿಂದೆ 1965ರಲ್ಲಿ ಅತಿಕ್ರಮಣದ ಸಾಹಸಕ್ಕೆ ಮುಂದಾದ ಪಾಕಿಸ್ತಾನ ಸೈನ್ಯವನ್ನು ಹಿಮ್ಮೆಟ್ಟಿಸಿ ತಕ್ಕ ಪಾಠ ಕಲಿಸಿದ ನಮ್ಮ ವೀರಯೋಧರ ಸಾಧನೆಯನ್ನು, ಇದೊಂದು ಅನಿರ್ಣಾಯಕವಾದ ಸಂಘರ್ಷ ಎಂದು ಬಿಂಬಿಸಿ ಜನರ ನೆನಪಿನಿಂದ ಮರೆಯಾಗುವಂತೆ ಮಾಡಿದ್ದು ಅಪಚಾರವೇ ಸರಿ. ಈ ಹಿನ್ನೆಲೆಯಲ್ಲಿ 1965ರ ಆಗಸ್ಟ್ 5ರಿಂದ ಸೆಪ್ಟೆಂಬರ್ 22ರವರೆಗೆ ನಡೆದ ಪಾಕಿಸ್ತಾನ ಯುದ್ಧದ 50ನೇ ವರ್ಷಾಚರಣೆಯನ್ನು ಕೇಂದ್ರ ಸರ್ಕಾರ ನಿರ್ಧರಿಸಿರುವುದು ದೇಶದ ರಕ್ಷಣೆಯಲ್ಲಿ ಪ್ರಾಣತೆತ್ತ ಸಹಸ್ರಾರು ಸೈನಿಕರಿಗೆ ಸಲ್ಲಿಸುವ ಸೂಕ್ತ ಗೌರವವಾಗಿದೆ.


ನಡೆದದ್ದಿಷ್ಟು...
ಎರಡನೇ ವಿಶ್ವಯುದ್ಧದ ನಂತರ ಅತ್ಯಂತ ನಡೆದ ಅತ್ಯಂತ ಉಗ್ರವಾದ ಸಮರವೆಂದೇ ಬಣ್ಣಿಸಲಾಗುವ 1965 ಭಾರತ-ಪಾಕಿಸ್ತಾನ ಕದನ ಕಛ್‍ದಿಂದ ಕಾಶ್ಮೀರದವರೆಗಿನ ಭಾರತದ ಪಶ್ಚಿಮದಗಡಿಯುದ್ಧಕ್ಕೂ ನಡೆಯಿತು. 
1962ರ ಚೀನಾ ಯುದ್ಧದ ಸೋಲಿನಿಂದ ಭಾರತ ಸೈನ್ಯ ಶಕ್ತಿ ಮತ್ತು ಆರ್ಥಿಕವಾಗಿ ದುರ್ಬಲವಾಗಿದೆ, ಇದರ ಲಾಭ ಪಡೆದು ಕಾಶ್ಮೀರವನ್ನು ಕಬಳಿಸಬೇಕೆಂಬ ಪಾಕಿಸ್ತಾನದ ಹುನ್ನಾರವೇ ಈ ಯುದ್ಧದ ಮೂಲಕಾರನ. ಪಾಕಿಸ್ತಾನಿ ಮಿಲಿಟರಿ ಗುಪ್ತಚರ ಇಲಾಖೆ ಮತ್ತು ವಿದೇಶಾಂಗ ಮಂತ್ರಿ ಝುಲ್ಫಿಕರ್ ಅಲಿ ಭುಟ್ಟೋ ನೇತೃತ್ವದ ಸಚಿವಾಲಯ ಈ ವಿಷಯಗಳನ್ನು ಮುಂದಿಟ್ಟುಕೊಂಡು, ಕಾಶ್ಮೀರದಲ್ಲಿ ಪ್ರಬಲವಾದ ಭಾರತ ವಿರೋಧಿ ಅಲೆ ಇದೆ, ಅಲ್ಲಿನ ಜನರು ಪಾಕಿಸ್ತಾನ ಸೇರಲು ಉತ್ಸುಕರಾಗಿದ್ದಾರೆ ಎಂಬ ವಾದವನ್ನು ಮಂಡಿಸಿ ಕಾಶ್ಮೀರವನ್ನು ಆಕ್ರಮಿಸಲು ಇದು ಸುಸಂದರ್ಭ ಎಂದು ಅಂದಿನ ರಾಷ್ಟ್ರಪತಿ ಅಯೂಬ್ ಖಾನ್‍ನನ್ನು ಒಪ್ಪಿಸುವಲ್ಲಿ ಯ

ಅತಿಕ್ರಮಣಕ್ಕೆ ಮುನ್ನ ಪಾಕಿಸ್ತಾನದ ಸಿದ್ಧತೆ 
  • ಅಮೇರಿಕದೊಂದಿಗೆ ರಕ್ಷಣಾ ಒಪ್ಪಂದಕ್ಕೆ ಸಹಿಹಾಕಿ ಅಮೆರಿಕದ ನೆರವಿನಿಂದ ಸೈನ್ಯ ಶಕ್ತಿಯನ್ನು ಬೆಳೆಸಿಕೊಂಡಿತು. 
  • 1954 ರಿಂದ 1965ರವರೆಗೆ ಅಮೆರಿಕದಿಂದ ಪಾಟನ್ ಟ್ಯಾಂಕ್, ಯುದ್ಧ ವಿಮಾನಗಳು, ಜೆಟ್‍ಗಳು, ಮೆಶಿನ್ ಗನ್, ಆಧುನಿಕ ರೈಫಲ್‍ಗಳು ಮುಂತಾದವನ್ನು  ದೊಡ್ಡ ಪ್ರಮಾಣದಲ್ಲಿ ಪಡೆದು ತನ್ನ ಯುದ್ಧ ಸಾಮಗ್ರಿಗಳನ್ನು ಸಂಪೂರ್ಣ ಆಧುನಿಕಗೊಳಸಿಕೊಂಡಿತು.
  • ಪಾಕಿಸ್ತಾನದ ಸೈನ್ಯಾಧಿಕಾರಿಗಳು ಅಮೇರಿಕ ಮತ್ತು ಬ್ರಿಟನ್‍ಗಳಿಂದ ತರಬೇತಿ ಪಡೆದು ಜಂಟಿ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿದರು.
  • ಆಜಾದ್ ಕಾಶ್ಮೀರ ಎಂದು ಕರೆಯುವ ಪಾಕ್ ಆಕ್ರಮಿತ ಕಾಶ್ಮೀರದ ಸೈನ್ಯಬಲವನ್ನು ಹೆಚ್ಚಿಸಿತು.
  • ಚೀನಾದೊಂದಿಗೆ ಆರ್ಥಿಕ ಮತ್ತು ಮಿಲಿಟರಿ ಸಹಕಾರದ ಒಪ್ಪಂದವನ್ನೂ ಮಾಡಿಕೊಂಡಿತು. 



      1965ರ ಜನವರಿಯಲ್ಲಿ ಕಛ್ ಪ್ರದೇಶದಲ್ಲಿ 'ಆಪರೇಶನ್ ಡೆಸರ್ಟ ಹಾಕ್' ಹೆಸರಿನಲ್ಲಿ ಪಾಕಿಸ್ತಾನ ಸೈನ್ಯ ನುಗ್ಗುವುದರೊಂದಿಗೆ ಅತಿಕ್ರಮಣ ಪ್ರಾರಂಭವಾಯಿತು. ಭಾರತೀಯ ಸೈನ್ಯದ ಗಮನವನ್ನು ಕಛ್‍ನತ್ತ ಸೆಳೆದು ಕಾಶ್ಮೀರದ ಕಡೆ ಒಳನುಸುಳುವುದು ಪಾಕಿಸ್ತಾನದ ಮೂಲ ಉದ್ಧೇಶವಾಗಿತ್ತು. ಆರಂಭಿಕ ಗುಂಡಿನ ದಾಳಿಯ ವಿನಿಮಯದ ನಂತರ ಪಾಕಿಸ್ತಾನ ಕೆಲವು ಪೋಸ್ಟಗಳನ್ನು ಆಕ್ರಮಿಸಿಕೊಂಡು, ಮಾತುಕತೆಗೆ ಆಹ್ವಾನ ನೀಡಿತು. ಪಾಕಿಸ್ತಾನ ಆಕ್ರಮಿಸಿದ ಪ್ರದೇಶವನ್ನು ತೆರವುಗೊಳಿಸದ ಹೊರತೂ ಯಾವುದೇ ಮಾತುಕತೆಗೆ ಸಿದ್ಧವಿಲ್ಲವೆಂದು ಭಾರತ ಹೇಳಿದರೂ ಬ್ರಿಟಿನ್ನಿನ ಒತ್ತಡಕ್ಕೆ ಮಣಿದು ಕದನವಿರಾಮಕ್ಕೆ ಒಪ್ಪಿತು. ಜೂನ್ 30ರ ಕದನವಿರಾಮ ಒಪ್ಪಂದದಂತೆ ಪಾಕಿಸ್ತಾನ ಅತಿಕ್ರಮಣ ಮಾಡಿದ ಪ್ರದೇಶದಿಂದ ಹಿಂತೆಗೆಯಲೇನೋ ಒಪ್ಪಿತು ಆದರೆ ಭಾರತ ಸರ್ಕಾರ ಮತ್ತು ಸೈನ್ಯ ಯುದ್ಧಕ್ಕೆ ಸಿದ್ಧವಿಲ್ಲ ಎಂದು ಭಾವಿಸಿ ಎದೆಯುಬ್ಬಿಸಿಕೊಂಡಿತು. “ಮುಂದಿನ ಬಾರಿ ಪಾಕಿಸ್ತಾನ ಯುದ್ಧ ಬಯಸಿದರೆ ಭಾರತ ತನ್ನ ಆಯ್ಕೆಯ ಸಮಯದಲ್ಲಿ ತಾನು ಆರಿಸಿದ ಪ್ರದೇಶದ ಮೇಲೆ ದಾಳಿ ಮಾಡುತ್ತದೆ” ಎಂದ ಪ್ರಧಾನಿ ಲಾಲ ಬಹಾದ್ದೂರ್ ಶಾಸ್ತ್ರಿಯವರ ಮಾತನ್ನು ಪಾಕಿಸ್ತಾನ ಲಘುವಾಗಿ ಪರಿಗಣಿಸಿತು.

        ಈ ನಡುವೆ ಕಾಶ್ಮೀರದ ನಿಯಂತ್ರಣ ರೇಖೆಗುಂಟ ಶೆಲ್ಲಿಂಗ, ಗುಂಡಿನ ದಾಳಿಗಳು, ಒಳನುಸುಳುವುದು ಮುಂತಾದ ಪ್ರಚೋದನಕಾರಿ ಚಟುವಟಿಕೆಗಳು ಹೆಚ್ಚಾಗಿದ್ದಲ್ಲದೇ, ಆಗಸ್ಟ ತಿಂಗಳಿನಲ್ಲಿ ಪಾಕಿಸ್ತಾನದಿಂದ ಸುಮಾರು 30000ಕ್ಕೂ ಹೆಚ್ಚು ನುಸುಳುಕೋರರು, ಅವರಲ್ಲಿ ಬಹುತೇಕ ಪಾಕಿಸ್ತಾನಿ ಸೈನಿಕರು, ನಿಯಂತ್ರಣ ರೇಖೆಯನ್ನು ದಾಟಿ ಒಳನುಸುಳಿದರು. ದೊಡ್ಟ ಪ್ರಮಾಣದಲ್ಲಿ ಗಲಭೆಯನ್ನು ಎಬ್ಬಿಸಿ ಸ್ಥಳೀಯ ಜನರ ಅನುಕಂಪಗಳಿಸುವುದು ಇದರ ಉದ್ಧೇಶವಾಗಿತ್ತು. ಆಪರೇಶನ್ ಜಿಬ್ರಾಲ್ಟರ್ ಹೆಸರಿನ ಈ ಅತಿಕ್ರಮಣದ ಮಾಹಿತಿ ದುರದೃಷ್ಟವಶಾತ್ ಒಂದು ವಾರ ತಡವಾಗಿ ಭಾರತೀಯ ಸೇನೆಗೆ ದೊರಕಿತು. ಸ್ಥಳೀಯ ಜನರೊಡನೆ ಬೆರೆತು ಆಗಸ್ಟ 8ರಂದು ಪೀರ್ ದಸ್ತಗೀರ್ ಸಾಹಿಬ್ ಉತ್ಸವ ಹಾಗೂ ಮರುದಿನ ಶೇಖ್ ಅಬ್ದುಲ್ಲಾ ಬಂಧನದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ತಮ್ಮ ಕಾರ್ಯವನ್ನು ಸಾಧಿಸುವ ಯೋಜನೆಗೆ ಭಾರತೀಯ ಸೈನ್ಯದ ಜಾಗರೂಕತೆಯಿಂದ ಹಿನ್ನೆಡೆಯಾಯಿತು. ಅನೇಕ ಒಳನುಸುಳುಕೋರರು ಬಂಧಿಸಲ್ಪಟ್ಟರು. ರಾಜ್ಯಾಂದ್ಯಂತ ಸುರಕ್ಷತೆಯನ್ನು ಬಿಗಿಗೊಳಿಸಲಾಯಿತು. ಒಳನುಸುಳುಕೋರರ ವಿರುದ್ಧ ಕಾರ್ಯಚರಣೆ ನಡೆಸಲಾಯಿತು. ಸ್ಥಳೀಯರ ಸಹಾಯ ಸಿಗದೆ ಅನೇಕರು ಬಂಧನಕ್ಕೊಳಗಾದರು, ಅನೇಕರು ಶರಣಾದರು, ಕೆಲವರು ಗಡಿದಾಟಿ ಪರಾರಿಯಾದರು. 
ಆಗಸ್ಟ 28ರಂದು ನಿಯಂತ್ರಣ ರೇಖೆಯನ್ನು ದಾಟಿದ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಹಾಜಿ ಪೀರ್ ಪಾಸ್ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಇದೊಂದು ಬಹುಮುಖ್ಯ ವಿಜಯ ಏಕೆಂದರೆ ಹಾಜಿ ಪೀರ್ ಮೇಲಿನ ನಿಯಂತ್ರಣವೆಂದರೆ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಪ್ಪರಾಬಾದ್‍ನ್ನು ವಶಕ್ಕೆ ತೆಗೆದುಕೊಂಡಂತೆ.
ಈ ನಡುವೆ ಪಾಕಿಸ್ತಾನವು ಛಂಬ್ ಮತ್ತು ಆಖ್‍ನೂರ್ ಪ್ರದೇಶಗಳಲ್ಲಿ ಆಪರೇಶನ್ ಗ್ರಾಂಡ್ ಸ್ಲಾಮ್ ಹೆಸರಿನಲ್ಲಿ ತೀವ್ರ ದಾಳಿಯನ್ನು ಆರಂಭಿಸಿತು. 

        ಪರಿಸ್ಥಿತಿಯ ತೀವ್ರತೆಯನ್ನು ಮನಗಂಡ ಪ್ರಧಾನಿ ಶಾಸ್ತ್ರಿ ಎರಡು ಪ್ರಮುಖ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡರು. ಒಂದು ವಾಯುಸೇನೆಯನ್ನು ಯುದ್ಧದಲ್ಲಿ ತೊಡಿಗಿಸುವುದು. ಭಾರತೀಯ ವಾಯುಸೇನೆಯ 45ನೇ ಸ್ಕ್ವಾಡ್ರನ್‍ನ್ನು ನಿಯೋಜಿಸಿ ಪಾಕಿಸ್ತಾನ ಸೇನೆಯ ಮೇಲೆ ನೇರ ಸಮರ ಸಾರಲಾಯಿತು. ಇನ್ನೊಂದು ಭಾರತೀಯ ಭೂಸೇನೆಗೆ ಪಾಕಿಸ್ತಾನದ ಮೇಲೆ ಯುದ್ಧ ಸಾರುಲು ಆದೇಶಿಸಲಾಯಿತು. ಮೊದಲನೇ ಬಾರಿಗೆ ಭಾರತೀಯ ಸೇನೆಯು ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಲಾಹೋರ್ ಮತ್ತು ಸಿಯಾಲ್ಕೊಟ್‍ಗಳತ್ತ ನುಗ್ಗಿತು. ಭಾರತೀಯ ವಾಯುಸೇನೆಯ ದಾಳಿಗೆ ಅಮೇರಿಕದಿಂದ ಆಮದಾದ ಶಸ್ತ್ರಾಸ್ತ್ರಗಳು ನಾಶವಾಗಿ, ಯುದ್ಧವಿಮಾನಗಳು ನೆರವಿಗೆ ಬಾರದೇ, ಅನೇಕ ಯುದ್ಧಟ್ಯಾಂಕುಗಳು ಭಾರತದ ವಶವಾಗಿ, ಪಾಕಿಸ್ತಾನದ ಹೃದಯದಂತಿರುವ ಲಾಹೋರ್ ನಗರವೂ ಭಾರತದ ಸೈನ್ಯದ ದಾಳಿಗೆ ತುತ್ತಾದಾಗ ಗಾಬರಿಗೊಂಡ ಪಾಕಿಸ್ತಾನ ನಡುಗಿ ಮಂಡಿಯೂರಲೇ ಬೇಕಾಯಿತು.
ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಲ್ಲದೇ ಹೋಗಿದ್ದರೆ ಪಾಕಿಸ್ತಾನಕ್ಕೆ ಸಂಪೂರ್ಣ ಶರಣಾಗತಿಯ ಹೊರತು ಅನ್ಯ ಮಾರ್ಗವೇ ಇರುತ್ತಿರಲಿಲ್ಲ. ವಿಶ್ವಸಂಸ್ಥೆಯ ಒತ್ತಡದಿಂದಾಗಿ ಭಾರತ ಸಂಘರ್ಷ ವಿರಾಮಕ್ಕೆ ಒಪ್ಪಿತು. ಯುದ್ಧ ನಿರ್ಣಾಯಕವೆಂದು ಕಾಣದಿದ್ದರೂ ಭಾರತ ಶಕ್ತಿಶಾಲಿಯಾಗಿ ಹೊರಹೊಮ್ಮಿತು.

ಯುದ್ಧೋತ್ತರ
          ಸಂಘರ್ಷ ವಿರಾಮದ ನಂತರ ಸೋವಿಯತ್ ಯೂನಿಯನ್‍ನ ತಾಷ್ಕೆಂಟ್‍ನಲ್ಲಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಜನರಲ್ ಅಯೂಬ್ ಖಾನ್ ತಾಷ್ಕೆಂಟ್ ಒಪ್ಪಂದಕ್ಕೆ ಸಹಿಹಾಕಿದರು. ಇದರ ಅನ್ವಯ ಎರಡೂ ಪಕ್ಷಗಳು ತಮ್ಮ ತಮ್ಮ ವಶದಲ್ಲಿರುವ ಪ್ರದೇಶಗಳಿಂದ ಹಿಂತೆಗೆಯಬೇಕು ಮತ್ತು ಯುದ್ಧಪೂರ್ವ ಆಗಸ್ಟ ಸ್ಥಿತಿಗೆ ಮರಳಬೇಕು ಎನ್ನುವ ಷರತ್ತಿಗೆ ಒಪ್ಪಿದವು. ಇದರರ್ಥ ಪಾಕಿಸ್ತಾನಿ ನುಸುಳುಕೋರರು ದಾಟಿಬಂದ ಆಯಕಟ್ಟಿನ ಹಾಜಿ ಪೀರ್ ಪಾಸ್‍ನ ನಿಯಂತ್ರಣ ಮೊದಲಾದ ಅನೇಕ ತಾಂತ್ರಿಕ ಲಾಭಗಳನ್ನು ಭಾರತ ಕಳೆದುಕೊಂಡಿತು. ತಾಷ್ಟೆಂಟ್‍ನಲ್ಲಿ ಪ್ರಧಾನಿ ಶಾಸ್ತ್ರಿಯವರ ಹಠಾತ್ ಮೃತ್ಯುವಿನಿಂದ ತಾಷ್ಟೆಂಟ್ ಭಾರತದ ಪಾಲಿಗೆ ಕಹಿಯಾಯಿತು.

      1965ರ ಯುದ್ಧದ ನಂತರ ನಡೆದ ಇನ್ನೆರಡು ಪಾಕಿಸ್ತಾನಕ್ಕೆ ಸಂಬಂಧಿಸಿದ ಬೆಳವಣಿಗೆಗಳು ಮಹತ್ಚದ್ದಾಗಿವೆ. ಪಾಕಿಸ್ತಾನದೊಂದಿಗೆ ರಕ್ಷಣಾ ಸಹಕಾರ ಒಪ್ಪಂದ ಹೊಂದಿದ್ದ ಅಮೇರಿಕ ಯುದ್ಧದಲ್ಲಿ ತಟಸ್ಥ ಧೊರಣೆಯನ್ನು ಅನುಸರಿಸಿತು. ಇದರಿಂದ ಪಾಕಿಸ್ತಾನ ಮತ್ತು ಅಮೇರಿಕದ ಸಂಬಂಧಗಳು ಸ್ವಲ್ಪ ಹಳಸಿದುದು ಒಂದಾದರೆ, ಪಾಠ ಕಲಿತ ಪಾಕಿಸ್ತಾನ ಚೀನಾ ಮತ್ತು ಸೋವಿಯತ್‍ಗಲ ಸಖ್ಯವನ್ನು ಬೆಳೆಸುವತ್ತ ಹೆಜ್ಜೆಯಿಟ್ಟಿತು. ಹಾಗೆಯೇ ಸೋಲಿನ ಬಾಗಿಲಿಗೆ ಬಂದು ನಿಂತರೂ ತಾನೇ ಯುದ್ಧದಲ್ಲಿ ವಿಜಯಿ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿರುವುದು ಇನ್ನೊಂದು ವಿಪರ್ಯಾಸ. 

           1965ರ ಯುದ್ಧವು ಅತ್ಯಂತ ಕಷ್ಟಕರ ಸನ್ನಿವೇಶದಲ್ಲಿ ಭಾರತದ ಮೇಲೆ ಅನಿವಾರ್ಯವಾಗಿ ಹೇರಲ್ಪಟ್ಟದ್ದಾದರೂ ಭಾರತ ಸಂದರ್ಭೋಚಿತವಾಗಿ ಎದುರಿಸಿತು. ಈ ಸಂಘರ್ಷದ ಗೆಲುವು 1962ರಲ್ಲಿ ಚೀನಾ ವಿರುದ್ಧದ ಸೋಲಿನಿಂದಾದ ಸಾಮರಿಕ, ಆರ್ಥಿಕ ಆಘಾತದಿಂದÀ ಚೇತರಿಸಿಕೊಂಡು ಹೊಸ ಆತ್ಮವಿಶ್ವಾಸದ ಮೂಡಿಸುವಲ್ಲಿ ಸಹಕಾರಿಯಾಯಿತು. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಒತ್ತಿ ಹೇಳುವುದರ ಜೊತೆಗೆ ಭಾರತ ತನ್ನ ನೆಲದ ಯಾವುದೇ ಅತಿಕ್ರಮಣವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಿತು. ಹಾಗೆಯೇ ಈ ವಿಜಯವು 1971ರ ಯುದ್ಧದಲ್ಲಿ ಪಾಕಿಸ್ತಾನ ಸೈನ್ಯ ಸಂಪೂರ್ಣ ನೆಲಕಚ್ಚಿ ಶರಣಾಗುವ ಘಟನೆಗೆ ಮುನ್ನುಡಿಯಾಯಿತು. 

Monday, June 8, 2015

ಜಾಗತೀಕರಣದ "ಯೋಗ"

(ಪುಂಗವ 15/06/2015)


ಭಾರತದ ಪ್ರಧಾನಿ ನರೇಂದ್ರ ಮೋದಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಸಾಮಾನ್ಯ ಸಭೆಯನ್ನುದ್ಧೇಶಿಸಿ ಮಾತನಾಡುವಾಗ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿವಸವನ್ನಾಗಿ ಆಚರಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. (ಜೂನ್ 21 ಉತ್ತರ ಗೋಳಾರ್ಧದಲ್ಲಿ ಅತಿ ದೊಡ್ಡ ಹಗಲಿರುವ ದಿನ.) ಪ್ರಸ್ತಾವನೆಗೆ ವಿಶ್ವದ 175 ದೇಶಗಳು ಸಹ ಪ್ರಾಯೊಜಕರಾಗಿದ್ದಲ್ಲದೇ ಒಟ್ಟೂ 193 ದೇಶಗಳ ಸಹಮತಿಯೊಂದಿಗೆ ಅಂಗೀಕಾರಗೊಂಡಿದ್ದು ವಿಶ್ವಸಂಸ್ಥೆಯ ಇತಿಹಾಸದಲ್ಲೊಂದು ಮೈಲಿಗಲ್ಲು. ಶರೀರ ಮನ ಬುದ್ಧಿಗಳ ಸಮಗ್ರ ವಿಕಾಸದ ಯೋಗ ಪದ್ಧತಿಯಾದ ಆರು ಸಾವಿರ ವರ್ಷಗಳಿಗೂ ಹಿಂದಿನ ಇತಿಹಾಸವುಳ್ಳ ಭಾರತೀಯ ಮೂಲದ ಯೋಗ ಪದ್ಧತಿಗೆ ವಿಶ್ವದೆಲ್ಲೆಡೆ ಮಾನ್ಯತೆ ದೊರೆಯುತ್ತಿರುವದು ಹಾಗೂ ಭಾರತೀಯ ಜೀವನ ಶೈಲಿಯ ಬಗ್ಗೆ ವಿಶ್ವದ ಜನರ ಆಸಕ್ತಿ ಘಟನೆಯಿಂದ ಪ್ರತಿಬಿಂಬಿತವಾಗುವುದರ ಜೊತೆಗೆ, ಭಾರತೀಯ ರಾಜತಾಂತ್ರಿಕ ಕ್ಷಮತೆಯ ಪರಿಣತಿ ಹಾಗೂ ವಿಶ್ವದ ಆಗುಹೋಗುಗಳ ಮೇಲೆ ಭಾರತದ ಪ್ರಭಾವವೂ ಸ್ಪಷ್ಟವಾಗುತ್ತದೆ.

       ಯೋಗವೆಂದರೆ ಕೇವಲ ಆಸನಗಳು ಮತ್ತು ಪ್ರಾಣಾಯಾಮ ಎಂಬುದು ಸಾಮಾನ್ಯವಾಗಿ ಜನಜನಿತವಾದ ನಂಬಿಕೆ. ಆದರೆ ಯೋಗ ಕೇವಲ ಶರೀರ ಮನಗಳ ನಿಯಂತ್ರಣ ಸಾಧನೆಯ ತಂತ್ತಕ್ಕ್ಕೆ ಸೀಮಿತವಾದುದಲ್ಲ. ಯೋಗ ಎನ್ನವುದು ಭಾರತೀಯ ಆಧ್ಯಾತ್ಮಿಕ ಚಿಂತನೆಯ ಒಂದು ತತ್ತ್ವದರ್ಶನದ ಹೆಸರು. ಯೋಗಸೂತ್ರಗಳನ್ನು ಬರೆದ ಪತಂಜಲಿ ಮುನಿಯಿಂದ ಮೊದಲ್ಗೊಂಡು, ಭಗವದ್ಗೀತೆಯ ಯೋಗತತ್ವ, ಬುದ್ಧ, ಜೈನ ಶೈವ ಮುಂತಾದ ಪರಂಪರೆಯ ಯೋಗತತ್ವಗಳು, ಜೀವನಶೈಲಿ ಮತ್ತು ಆರೊಗ್ಯವನ್ನು ಪ್ರಧಾನವಾಗಿರಿಸಿರುವ ಪ್ರಚಲಿತ ವರ್ಷಗಳ ಯೋಗಾಭ್ಯಾಸಗಳವರೆಗೆ ಯೋಗ ಪರಂಪರೆ ಆಗಾಧ ವಿಸ್ತಾರದಲ್ಲಿ ಬೆಳೆದಿದೆ.

        ಯೋಗಕ್ಕೆ ಸಂಬಂಧಿಸಿದ ಮೂರು ವಾಕ್ಯಗಳು  ಪ್ರಸಿದ್ಧವಾಗಿವೆ, ಮೊದಲನೆಯದು  ಪತಂಜಲಿ ಯೋಗ ದರ್ಶನದ ವಾಕ್ಯ  ಯೋಗಃ ಚಿತ್ತವೃತ್ತಿ ನಿರೋಧಃ (ಮನಸ್ಸಿನ ಚಂಚಲ ವೃತ್ತಿಗಳನ್ನು ನಿಯಂತ್ರಿಸುವುದು). ಇನ್ನೆರಡು  ಭಗವದ್ಗೀತಯ ವಾಕ್ಯಗಳು,ಯೋಗಃ ಕರ್ಮಸು ಕೌಶಲಮ್  (ಕೆಲಸದಲ್ಲಿನ ಕುಶಲತೆಯೇ ಯೋಗ) ಮತ್ತು ಸಮತ್ವಮ್ ಯೋಗ ಉಚ್ಯತೇ (ಮನಸ್ಸಿನ ಸಂತುಲನವನ್ನು ಯೋಗವೆನ್ನುವರು).  ಮೂರು ಉಕ್ತಿಗಳು ಸಾಮಾನ್ಯ ವ್ಯಕ್ತಿಗೆ ಯೋಗವೆಂದರೇನು ಎನ್ನುವುದನ್ನು ತಿಳಿಸುತ್ತವೆಚಿತ್ತದ ವೃತ್ತಿಗಳನ್ನು ನಿರೋಧವನ್ನು ಏಕೆ ಮಾಡಬೇಕು ಅಂದರೆ, ಚಿತ್ತದ ವೃತ್ತಿಗಳನ್ನು ನಿಯಂತ್ರಿಸಿದ ಮೇಲೆ ಬರುವ ದೃಷ್ಟಿ ಸ್ಪಷ್ಟತೆಯಿಂದ ಸತ್ಯದ ದರ್ಶನವಾಗುತ್ತದೆ. ಇದು ಸಾಧ್ಯವಾಗಬೇಕು ಎಂದಾದರೆ ಪ್ರತಿ ಕೆಲಸವನ್ನೂ ಕುಶಲತೆಯಿಂದ ಮಾಡುವುದನ್ನು ಕಲಿಯಬೇಕಾಗುತ್ತದೆ. ಇದರಿಂದ ಸಿಗುವ ಉಪಲಬ್ಧಿ ಅಂತಿಮ ಸತ್ಯದ ದರ್ಶನ. ಅಂತಿಮ ಸತ್ಯದ ದರ್ಶನದಿಂದ ನಮಗೆ ತಿಳಿಯುವುದೆಂದರೆ ಅದೊಂದೇ ಸತ್ಯ ಬೇರೇನೂ ಅಲ್ಲ, ಕಾಣುವುದೆಲ್ಲವೂ ಸತ್ಯದ ವಿವಿಧ ರೂಪಗಳು, ಆದ್ದರಿಂದ ಎಲ್ಲರ ಬಗ್ಗೆ, ಎಲ್ಲ ವಿವಿಧ ರೂಪಗಳ ಬಗ್ಗೆ ಮನಸ್ಸಿನಲ್ಲಿ ಒಂದು ಸಮತ್ವ ಮೂಡುತ್ತದೆ. ವಿಭಿನ್ನ ಪರಿಸ್ಥಿತಿಗಳಲ್ಲೂ ಸಮತೆ ಮನಸ್ಸಿನಲ್ಲಿ ಕಾಣುತ್ತದೆ. ನಂತರ ವ್ಯಕ್ತಿಯುಸುಖೇ ದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ  ಎನ್ನುವಂತೆ ಎಲ್ಲ ಪರಿಸ್ಥಿತಿಯಲ್ಲೂ ಸಮನಾಗಿರುತ್ತಾನೆ.

       ಭಾರತೀಯರಾದ ನಾವು ಯೋಗವು ಜಗತ್ತಿಗೆ ಮಾನ್ಯವಾಗುವಂತೆ ನಾವು ಮಾಡಬೇಕು. ವೈಜ್ಞಾನಿಕವಾಗಿ ಅದನ್ನು ಜಗತ್ತಿನ ಮುಂದಿರಿಸಬೇಕು. ಎಷ್ಟರಮಟ್ಟಿಗೆ ಅಂದರೆ ಯೋಗವಂತು ಸತ್ಯ ಅದನ್ನು ವೈಜ್ಞಾನಿಕವಾಗಿ ಪ್ರಸ್ತುತ ಪಡಿಸಬೇಕು ಎಂದು ಇಂದು ನಾವು ಹೇಳುವಂತೆ, ನಾಳೆ ವಿಜ್ಞಾವಂತೂ ಸತ್ಯ ಆದರೆ ಅದನ್ನು ಯೋಗದ ಆಧಾರದ ಮೇಲೆ ಮಂಡಿಸಿದರೆ ನಾವು ಒಪ್ಪುತ್ತೇವೆ - ಎಂದು ಜಗತ್ತು ಹೇಳುವಂತೆ ಯೋಗ ವಿಚಾರವನ್ನು ಬೆಳೆಸಬೇಕು

     ಯೋಗ ಎಂದರೆ ಸೇರಿಸುವುದು, ಒಂದುಗೂಡಿಸುವುದು ಎನ್ನುವ ಅರ್ಥವಿದೆ. ಮಾನವನನ್ನು ದೈವತ್ವದೊಂದಿಗೆ ಜೋಡಿಸುವ ಯೋಗವು ಭಿನ್ನತೆಯಲ್ಲಿ ಒಡೆದಿರುವ ಸಮಾಜವನ್ನು ಹಾಗೂ ವಿವಿಧ ವಿಷಮತೆಗಳಿಂದಾಗಿ ವಿಘಟಿತವಾಗಿರುವ ವಿಶ್ವವನ್ನು ಒಂದುಗೂಡಿಸಲಿ.

ಯೋಗದ ಹಂತಗಳು
ಯೋಗಸೂತ್ರಗಳನ್ನು ರಚಿಸಿದ ಪತಂಜಲಿ ಮುನಿಯು  ಆತ್ಮಸಾಧನೆಗಾಗಿ ಅಷ್ಟ ಅಂಗಗಳಿರುವ ಯೋಗವನ್ನು ಹೇಳಿದ್ದಾನೆ.

ಯಮ- ಅಹಿಂಸೆ, ಸತ್ಯವನ್ನು ನುಡಿಯುವುದು, ಕಳ್ಳತನ ಮಾಡದಿರುವುದು, ಬ್ರಹ್ಮಚರ್ಯ, ಅತಿಯಾಗಿ ಸಂಗ್ರಹ ಮಾಡದ ಸರಳ ಜೀವನ ಇವೇ  ಸಾರ್ವತ್ರಿಕ ನೀತಿ ನಿಯಮಗಳು
ನಿಯಮ -ದೇಹದ ಶುಚಿತ್ವ, ಮನಸ್ಸಿನ ತೃಪ್ತಿ ಹಾಗೂ ಸಂತೋಷ, ತಪಸ್ಸು, ಸ್ವಾಧ್ಯಾಯ, ದೈವಭಕ್ತಿ ಮುಂತಾದ  ವ್ಯಕ್ತಿಯ ನಡವಳಿಕೆಗೆ ಸಂಬಂಧಪಟ್ಟ ಆತ್ಮ ಶುದ್ಧೀಕರಣದ ನಿಬಂಧನೆಗಳು .
ಆಸನ- ದೇಹದ ನಿಲುಮೆ, ದೇಹಕ್ಕೆ ಆರೋಗ್ಯ ಮತ್ತು ಲಘುತ್ವವನ್ನು ನೀಡಬಲ್ಲ ವ್ಯಾಯಾಮಗಳು
ಪ್ರಾಣಾಯಾಮ-ಉಸಿರಾಟದ ಕ್ರಮಬದ್ಧ ಹತೋಟಿ
ಪ್ರತ್ಯಾಹಾರ-ಇಂದ್ರಿಯಗಳ ಮತ್ತು ಇಂದ್ರಿಯಾರ್ಥಗಳ ಪ್ರಾಬಲ್ಯದಿಂದ ಮನಸ್ಸಿನ ಬಿಡುಗಡೆ
ಧಾರಣ-ಕೇಂದ್ರೀಕರಣ, ಮನಸ್ಸನ್ನು ಏಕಾಗ್ರಗೊಳಿಸುವುದು.
ಧ್ಯಾನ-ಜಪ, ಚಿತ್ತವನ್ನು ಅವಿಚ್ಛಿನ್ನವಾಗಿ ಧ್ಯೇಯದಲ್ಲಿ ನೆಲೆನಿಲ್ಲಿಸುವುದು
ಸಮಾಧಿ-ಜಪದ ಧ್ಯೇಯವಾದ ಪರಮಾತ್ಮನಲ್ಲಿ ಸಾಧಕನ ಐಕ್ಯ


     ಯಮ ನಿಯಮಗಳು ವ್ಯಕ್ತಯಲ್ಲಿ ಕಾಮ ಮತ್ತು ಉದ್ವೇಗಗಳನ್ನು ನಿಗ್ರಹಿಸಿ ಸಮಾಜದ ಇತರರೊಡನೆ ಸಮರಸವಾಗಿರುವಂತೆ ಮಾಡುತ್ತವೆ. ಆಸನವು ದೇಹವನ್ನು ಆರೋಗ್ಯಕರವಾಗಿ ಮತ್ತು ಬಲಯುತವಾಗಿರಿಸಿ ಪ್ರಕೃತಿಯೊಡನೆ ಸಮರಸವಾಗಿರುವಂತೆ ಮಾಡುತ್ತದೆ. ಪ್ರಾಣಯಾಮ ಮತ್ತು ಪ್ರತ್ಯಾಹಾರಗಳು ಉಸಿರಾಟವನ್ನು  ಕ್ರಮಬದ್ಧಗೊಳಿಸಿ ಮನಸ್ಸಿನ ಮೇಲೆ ಹತೋಟಿಯನ್ನು ಕೊಡುತ್ತವೆ. ಇದರಿಂದ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆ. ಧಾರಣ, ಧ್ಯಾನ ಮತ್ತು ಸಮಾಧಿ ಇವು ಯೋಗಸಾಧಕನ್ನು ಆತ್ಮನ ಅಂತರಂಗದೊಳಕ್ಕೆ  ಕೊಂಡೊಯ್ಯುತ್ತವೆ. ಧ್ಯಾನಪರನಾದ ಯೋಗಿಯು ತಾನೇ ತಾನಾಗಿ ಸ್ವ- ಭಾವವನ್ನು ಹೊಂದಿ ಪರಮಾತ್ಮನ ಅಂಶವಾದ ತನ್ನ ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಯಜ್ಞಾತ್ವಾ ಸರ್ವಮಿದಂ ವಿಜ್ಞಾತೋ ಭವತಿ - ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ ಆಗುವುದೋ, ಎನ್ನುವ ಸ್ಥಿತಿಯೆಡೆಗೆ ಯೋಗಿಯು ಸಾಗುತ್ತಾನೆ.

ಹಿಂದೂ ಹೃದಯ ಸಾಮ್ರಾಟನಾದ ಮರಾಠಿ ಮಾಣೂಸ್‌

 (ವಿಕ್ರಮ - 25 ಜನವರಿ 2026) ಸುದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿ ನಿರಂತರ ಸಕ್ರಿಯರಾಗಿದ್ದು, ಜೊತೆಗೆ ಪ್ರಸ್ತುತರೂ ಆಗಿದ್ದು ತಮ್ಮ ಬದುಕಿನ ನಂತರವೂ ಪ್ರಭಾವಿಯಾಗಿರು...