Tuesday, February 16, 2010

ಮನದಲ್ಲೇ ಉಳಿದ ಮನದ ಮಾತುಗಳು

          ಮನ ಮೇ ಹಿ ರಹ ಗಯೀ
          ಮನ ಕಿ ಬಾತ್
          ಜಬ್ ದೇಖೀ ಸೋಹನ ಶ್ಯಾಮ ಕೋ
          ಗೋಪಿಕೆಯೊಬ್ಬಳ ಅಳಲು ನೋಡಿ, ಶ್ಯಾಮನಲ್ಲಿ ತನ್ನ ಪ್ರೇಮವನ್ನು ನಿವೇದಿಸಲು ಬಂದಳು, ಆದರೆ ಆತನೆದರು ಏನನ್ನೂ ಹೇಳಲಾರಳು, ಮನದ ಮಾತುಗಳು ಮನದಲ್ಲೇ ಉಳಿದವು.

          ’ಪ್ರೇಮಿಗಳ ದಿನ’. ಈ ದಿನಕ್ಕಾಗಿ ಕಾದಿದ್ದವರೆಷ್ಟೋ? ತಮ್ಮ ಮನಸೆಳೆದವರಲ್ಲಿ ಮನದ ಪಿಸುಮಾತುಗಳನ್ನು ನಿವೇದಿಸಲೆಂದು ಕಾತರಿಸಿದವರೆಷ್ಟೋ? ದಿನಗಳನ್ನೆಣಿಸುತ್ತಿದ್ದವರೆಷ್ಟೋ? ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಜಿಮ್‍ಗಳನ್ನು, ಯೋಗ ತರಗತಿಗಳನ್ನು ಸೇರಿದವರೆಷ್ಟೋ? ಕನ್ನಡಿಯಮುಂದೆ, ಬಾತ್‍ರೂಮಿನಲ್ಲಿ ತಾಲೀಮು ನಡೆಸಿದವರೆಷ್ಟೋ? ಪ್ರೇಮಪತ್ರವನ್ನು ಬರೆದು, ಮತ್ತೆ ಮತ್ತೆ ತಿದ್ದಿ ತೀಡಿ ಹರಿದು ಗೀಚಿದವರೆಷ್ಟೋ? ಇನ್ನ್ಯಾರಿಂದಲೋ ಪ್ರೇಮಪತ್ರವನ್ನು ಬರೆಯಿಸಿಕೊಂಡು ಆಗಾಗ ತೆರೆದು ನೋಡಿ ಪುಳಕಗೊಂಡವರೆಷ್ಟೋ? internetನಲ್ಲಿ Love SMSಗಾಗಿ ತಡಕಾಡಿದವರೆಷ್ಟೋ?
          ಪ್ರೇಮಿಸಿದವರು, ಪ್ರೇಮಿಸದವರು ಹಾಗೂ ಪ್ರೇಮಿಸಬಯಸುವವರು ಕಾತರದಿಂದ ಕಾಯುತ್ತಿದ ಆ ದಿನ ಬಂದಿದೆ. ಕೆಲವರ ವಿರೋಧ; ಕೆಲವರ ಪರವಾದ; ಕೆಲವರಿಗೆ ನೈತಿಕತೆಯ; ಸಂಸ್ಕೃತಿಯ ರಕ್ಷಣೆಯ ಹೋರಾಟ; ಇನ್ನು ಕೆಲವರಿಗೆ ರಾಜಕೀಯದಾಟ; ವೃತ್ತಪತ್ರಿಕೆ, TV ಮಾಧ್ಯಮದವರಿಗೆ ಸುದ್ದಿಗಳ ಭೂರಿಊಟ; ಹೋಟೆಲ್, ಮಾಲ್, ಮಲ್ಟಿಪ್ಲೆಕ್ಸ್, ಬಾರ್, ಪಬ್‍ಗಳಿಗೆ ಬಂಪರ್ ವ್ಯಾಪಾರದ ಹಬ್ಬ; ಕೆಲವರಿಗೆ ಮೋಜು; ಕೆಲವರಿಗೆ ಕಾಮ; ಕೆಲವರಿಗೆ ನಿತ್ಯದಾಂಪತ್ಯಪ್ರೇಮದ ಬಾಳಿನ ಇನ್ನೊಂದು ದಿನ; ಇನ್ನು ಕೆಲವರು ಅವರದೇ ಆದ ಕನಸಿನ ಲೋಕದಲ್ಲಿರುವವರು, ಬಹುದಿನದಿಂದ ಕಾಯುತ್ತಿದ್ದವರು ಪ್ರಥಮ ಪ್ರೇಮನಿವೇದನೆಯ ಒಂಥರ adventurous ಕ್ಷಣಕ್ಕಾಗಿ.
          ಕೆಲವರು ಸಾಹಸಿಗರು. ಹೇಳಿಬಿಟ್ಟರು, ಪ್ರೇಮಪತ್ರವನ್ನು ಇನ್ನೊಂದು ಕೈಗೆ ದಾಟಿಸಿಬಿಟ್ಟರು, SMSನ್ನು ಕಳಿಸಿಬಿಟ್ಟರು. ಪರಿಣಾಮವನ್ನು ಕಂಡು ಕೆಲವರು ನಕ್ಕರು, ದಿನವಿಡೀ ನಲಿದರು. ಇನ್ನು ಕೆಲವರು ಹೊಕ್ಕರು ಬಾರಿನೊಳಗೆ, ತಮ್ಮ ಕೋಣೆಯೊಳಗೆ, ಹಾಸಿಗೆಯ ಮುಸುಕಿನೊಳಗೆ, ತಮ್ಮ ಭಾರದ ಎದೆಯೊಳಗೆ.
          ಇನ್ನು ಕೆಲವರು ತಮ್ಮ ಪ್ರೇಮವನ್ನು ನಿವೇದಿಸಲಾರರು. ಅವರು ಪರಿಣಾಮದ ಬಗ್ಗೆ ಭಯಗೊಂಡರು. ಅನುತ್ತೀರ್ಣಗೊಂಡರೆ? ನೋವನ್ನು ತಾಳಲಾರರು, ಉತ್ತೀರ್ಣರಾದರೆ? ಸಂತಸವನ್ನು ತಡೆಯಲಾರರು. initiative ಆ ಕಡೆಯಿಂದಲೇ ಆಗಲಿ ಎಂದುಕೊಂಡರು, ಮುಂಜಾನೆಯಿಂದ ಕಾದೇ ಕಾದರು; ಒಂದು phone callಗಾಗಿ, ಒಂದು SMSಗಾಗಿ. ಆಗಾಗ missed callಏನಾದರು ಇದೆಯೇ? ಎಂದು ನೋಡಿದರು, mobile network ಸರಿಯಾಗಿದೆಯೇ ಎಂದು ಆಗಾಗ confirm ಮಾಡಿಕೊಂಡರು. ಒಂದು ಕಡೆ ಶಾಂತಿಯಿಂದ ಕೂತಿರಲಾರರು, ಗಡಿಯಾರದ ಮುಳ್ಳುಗಳು ಒಮ್ಮೊಮ್ಮೆ ವೇಗವಾದಂತೆ, ಒಮ್ಮೊಮ್ಮೆ ನಿಧಾನವಾದಂತೆ ಅನ್ನಿಸುತ್ತಿತ್ತು. ಏನೋ ಒಂಥರದ ’ಮಧುರ ಯಾತನೆ’. ರಾತ್ರಿಯಾಗಿತ್ತು, ಮಲಗಿದರೆ ನಿದ್ದೆ ಹತ್ತಿರ ಸುಳಿಯಲೊಲ್ಲದು. ಮತ್ತೆ ಮತ್ತೆ ಕೈ ಮೊಬೈಲಿನತ್ತ ಚಾಚುತ್ತಿಲಿತ್ತು, ಅರೆನಿದ್ರೆಯಲ್ಲೂ.
          ಸೂರ್ಯ ಹೊಸಬೆಳಕ ಚೆಲ್ಲಿದ್ದ. ಮರುದಿನ ಪ್ರಾರಂಭವಾಗಿತ್ತು. ಅವರ ಮನದ ಮಾತುಗಳು ಮನದೊಳಗೇ ಉಳಿದಿದ್ದವು. ಮತ್ತೆ ಆ ದಿನಕ್ಕಾಗಿ ಅವರು ಇನ್ನೂ ಒಂದು ವರುಷ ಕಾಯಬೇಕು, ತಾಲೀಮು ನಡೆಸುತ್ತ.
          ಮನ ಮೇ ಹೀ ರಹ ಗಯೀ
          ಮನ ಕಿ ಬಾತ್

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...