Tuesday, February 25, 2014

ಜನಪ್ರತಿನಿಧಿಗಳ ಅಧಿಕಾರ ಹಾಗೂ ಕರ್ತವ್ಯಗಳು ಮತ್ತು ಮೌಲ್ಯಮಾಪನ


(ಪ್ರಕಟಿತ: ಪುಂಗವ 1/3/2013)
      ಲೋಕಸಭೆಯ ಚುನಾವಣೆ ಹತ್ತಿರ ಬಂದಂತೆ ಹಾಲೀ ಎಂಪಿಗಳು ತಮ್ಮ ಐದು ವರ್ಷಗಳ ಸಾಧನೆಗಳನ್ನು ಪಟ್ಟಿಮಾಡಿ ಮತದಾರರನ್ನು ಮತ್ತೆ ಓಲೈಸಲು ಪ್ರಾರಂಭಿಸಿಯಾಗಿದೆ. ತಮ್ಮ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯ ಏನೂ ಕೆಲಸ ಮಾಡಲಿಲ್ಲ ಎಂದು ದೂಷಿಸುವುದು ಅಥವಾ ಆತನ ಕಾರ್ಯವನ್ನು ಹೊಗಳುವುದು ಸಾರ್ವಜನಿಕ ಚರ್ಚೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಯಾವ ಯಾವ ಅಂಶಗಳ ಆಧಾರದ ಮೇಲೆ ಓರ್ವ ಜನಪ್ರತಿನಿಧಿಯ ಸಾಧನೆಯ ಮೌಲ್ಯಮಾಪನ ಮಾಡಬಹುದು? ಆತನ ಕ್ಷೇತ್ರದಲ್ಲಿ ಎಷ್ಟು ರಸ್ತೆಗಳು ಅಭಿವೃದ್ಧಿಯಾದವು, ಎಷ್ಟು ಚರಂಡಿಗಳು ದುರಸ್ತಿಯಾದವು, ಎಷ್ಟು ನೀರಾವರಿ ಕಾಲುವೆಗಳು ತೋಡಲ್ಪಟ್ಟವು, ಎಷ್ಟೆಷ್ಟು ಸಾರ್ವಜನಿಕ ಸಮಾರಂಭಗಳಲ್ಲಿ ಆತ ಕಾಣಿಸಿಕೊಂಡ, ಎಷ್ಟು ಜನ ನೌಕರರ ವರ್ಗಾವಣೆಯಲ್ಲಿ ಸಹಾಯ ಮಾಡಿದ, ಇನ್ನೆಷ್ಟು ಜನರಿಗೆ ಶಿಫಾರಸ್ಸು ಪತ್ರ ನೀಡಿದ, ಲಂಚವನ್ನು ತೆಗೆದುಕೊಳ್ಳುವವನೇ ಅಥವಾ ಅಲ್ಲವೇ, ಇತ್ಯಾದಿಗಳು ಒಬ್ಬ ಜನಪ್ರತಿನಿಧಿಯ ಕೆಲಸವನ್ನು ಅಳೆಯಲು ಮಾಪದಂಡಗಳಾಗಬಲ್ಲವೇ? ತಾನು ಪ್ರತಿನಿಧಿಸುವ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವುದು, ಸವಲತ್ತುಗಳನ್ನು ಅಭಿವೃದ್ಧಿಪಡಿಸುವುದು ಇವುಗಳು ಮಾತ್ರ ಒಬ್ಬ ಎಂಪಿ ಅಥವಾ ಎಮ್‍ಎಲ್‍ಎಯ ಕೆಲಸವೇ ಅಥವಾ ಆತನಿಗೆ ಇನ್ನೂ ಹೆಚ್ಚಿನ ಕರ್ತವ್ಯವಿದೆಯೇ? ಅಷ್ಟಕ್ಕೂ ನಮ್ಮ ಎಂಪಿ/ಎಮ್‍ಎಲ್‍ಎಯ ಕರ್ತವ್ಯಗಳೇನು? ಎಂದು ಪ್ರಶ್ನೆ ಮಾಡಿದರೆ ಕುತೂಹಲಕಾರಿಯಾದ ಉತ್ತರ ಸಿಗುವುದು. “ಸಂವಿಧಾನ ಅಥವಾ ಸದನದ ಕಾರ್ಯಕಲಾಪ ನಿಯಮಗಳ ಯಾವುದೇ ಪ್ರಾವಧಾನದಲ್ಲೂ ಸಂಸತ್ಸದಸ್ಯರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿರ್ದಿಷ್ಟವಾಗಿ ಹೇಳಲಾಗಿಲ್ಲ ಹಾಗೂ ಸರಿಯಾಗಿ ಕಾರ್ಯನಿರ್ವಹಿಸದ ಸಂಸತ್ಸದಸ್ಯರನ್ನು ಉತ್ತರದಾಯಿಯನ್ನಾಗಿ ಮಾಡುವ ಯಾವುದೇ ವಿಧಾನವನ್ನೂ ಉಲ್ಲೇಖಿಸಲಾಗಿಲ್ಲ.” ಇದು ಮಾಹಿತಿ ಹಕ್ಕು ಕಾಯಿದೆಯನ್ವಯ ಕೇಳಲಾದ ಪ್ರಶ್ನೆಗೆ ಲೋಕಸಭೆಯ ಕಾರ್ಯಾಲಯ ನೀಡಿದ ಉತ್ತರ! ಅಂದರೆ ನಮ್ಮ ಜನಪ್ರತಿನಿಧಿಗಳಿಗೆ ಕಾನೂನು ಪ್ರಕಾರ ನಿರ್ದಿಷ್ಟವಾದ ಕರ್ತವ್ಯ ಮತ್ತು ಜವಾಬ್ದಾರಿಗಳೇ ಇಲ್ಲ! ಆದ್ದರಿಂದ ಓರ್ವ ಚುನಾಯಿತ ಜನಪ್ರತಿನಿಧಿಯು ಅಂಗವಾಗಿರು ಶಾಸನಸಭೆಯ ಕಾರ್ಯಕಲಾಪಗಳು ಮತ್ತು ಆತನಿಗೆ ನೀಡಲಾಗಿರುವ ಅಧಿಕಾರಗಳನ್ನು ಅವಲೋಕಿಸಿದರೆ ಆತನ ಕರ್ತವ್ಯಗಳೇನು ಎನ್ನುವುದು ಸ್ಪಷ್ಟವಾಗುವುದು. 

     ಉದಾಹರಣೆಗೆ ಸಂಸತ್ತು(ಲೋಕಸಭೆ ಮತ್ತು ರಾಜ್ಯಸಭೆ) ನಿರ್ವಹಿಸಬೇಕಾದ ಕೆಲವು ಪ್ರಮುಖ ಕಾರ್ಯಗಳನ್ನು ಸಂವಿಧಾನದಲ್ಲಿ ಉಲ್ಲೇಖಿಸಿಲಾಗಿದೆ.
  • ಕಾನೂನು ರಚನೆ: ಕಾನೂನುಗಳನ್ನು ರೂಪಿಸುವುದು ಸಂಸತ್ತಿನ ಪ್ರಥಮ ಕರ್ತವ್ಯ. ಎಲ್ಲ ಬಗೆಯ ಮಸೂದೆಗಳು ಲೋಕಸಭೆಯಲ್ಲಿ ಮಂಡನೆಗೊಂಡು ಒಪ್ಪಿಗೆ ಪಡೆದನಂತರ ರಾಜ್ಯಸಭೆಯಲ್ಲೂ ಅನುಮೋದನೆಗೊಂಡರೆ ಕಾನೂನಾಗಬಹುದು. ರಾಜ್ಯಸಭೆಯಲ್ಲಿ ಮಂಡನೆಯಾದ ಮಸೂದೆಗಳು ಲೋಕಸಭೆಯ ಒಪ್ಪಿಗೆಯ ನಂತರ ಕಾನೂನಾಗುವುವು. ಎರಡು ಸದನಗಳಲ್ಲಿ ಭಿನ್ನಾಭಿಪ್ರಾಯ ಬಂದರೆ ಜಂಟಿ ಅಧಿವೇಶನದ ಮೂಲಕ ಮಸೂದೆಯನ್ನು ಅಂಗೀಕರಿಸಲು ಅವಕಾಶವಿದೆ. ಆದರೆ ಹಣಕಾಸಿಗೆ ಸಂಭಂಧಿಸಿದ ವಿಷಯಗಳಲ್ಲಿ ಲೋಕಸಭೆಗೆ ಮಾತ್ರ ಕಾನೂನು ರೂಪಿಸುವ ಅಧಿಕಾರವಿದೆ.
  • ಆರ್ಥಿಕ ನಿಯಂತ್ರಣ: ಲೋಕಸಭೆಯು ಕೇಂದ್ರ ಸರ್ಕಾರದ ಎಲ್ಲ ಆರ್ಥಿಕ ವ್ಯವಹಾರಗಳನ್ನು ನಿಯಂತ್ರಿಸುತ್ತದೆ. ಕೇಂದ್ರ ಸರ್ಕಾರದ ಖರ್ಚುವೆಚ್ಚಗಳಿಗೆ ಲೋಕಸಭೆಯ ಅನುಮೋದನೆ ಅತ್ಯಗತ್ಯ. ಜೊತೆಗೆ ಬಜೆಟ್ ಮೇಲಿನ ಚರ್ಚೆಗಳು ಮತ್ತು ಸದನ ಸಮೀತಿಗಳ ಪರಿಶೀಲನೆಗಳ ಮೂಲಕ ಲೋಕಸಭೆಯು ಸರ್ಕಾರದ ಆರ್ಥಿಕ ವ್ಯವಹಾರಗಳ ಮೇಲೆ ನಿಯಂತ್ರಣ ಸಾಧಿಸುತ್ತದೆ.
  • ಕಾರ್ಯಾಂಗದ ನಿಯಂತ್ರಣ: ಕೇಂದ್ರ ಸರ್ಕಾರದ ಮಂತ್ರಿಮಂಡಳ ಅಥವಾ ಕಾರ್ಯಾಂಗ ತನ್ನ ಕಾರ್ಯ ಹಾಗೂ ಲೋಪಗಳಿಗೆ ಲೋಕಸಭೆಗೆ ಉತ್ತರದಾಯಿಯಾಗಿದೆ. ಅವಿಶ್ವಾಸ ಸೂಚಕ ಗೊತ್ತುವಳಿಯನ್ನು ಅಂಗೀಕರಿಸುವುದರ ಮೂಲಕ ಮಂತ್ರಿಮಂಡಳವು ರಾಜೀನಾಮೆ ನೀಡುವಂತೆ ಮಾಡುವ ಅಧಿಕಾರ ಲೋಕಸಭೆಗಿದೆ. ಜೊತೆಗೆ ಪ್ರಶ್ನೆಗಳು, ಗಮನಾಕರ್ಷಣ ಮೋಶನ್, ಅಡ್ಜರ್ನಮೆಂಟ್ ಮೋಶನ್, ಆಯವ್ಯಯದ ಮೇಲಿನ ಚರ್ಚೆಗಳು, ಮಸೂದೆಗಳ ಮೇಲಿನ ಚರ್ಚೆಗಳು ಮುಂತಾದ ಹಲವಾರು ಸಾಧನಗಳ ಮೂಲಕ ಲೋಕಸಭೆಯ ಸದಸ್ಯರು ಸರ್ಕಾರವನ್ನು ಬಾಧ್ಯಗೊಳಿಸಬಹುದು. ಅಲ್ಲದೇ ಸದನದ ಅನೇಕ ಸಮೀತಿಗಳ ಮೂಲಕ ಸರ್ಕಾರದ ಯೋಜನೆ ಮತ್ತು ಕಾರ್ಯಕ್ರಮಗಳ ಅನುಷ್ಠಾನವನ್ನು ಗಮನಿಸಬಹುದು.
  • ಕುಂದುಕೊರತೆಗಳ ಪ್ರಕಟೀಕರಣ: ದೇಶದ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಸಂಸತ್ಸದಸ್ಯರು ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಪ್ರಶ್ನೆಯೆತ್ತಬಹುದು, ಕುಂದುಕೊರತೆಗಳನ್ನು ಪ್ರಸ್ತಾಪಸಿಬಹುದು. ಸಂಸತ್ತಿನಲ್ಲಿ ತಾವು ಪ್ರತಿನಿಧಿಸುವ ಪ್ರಜೆಗಳ ದನಿಯಾಗಬಹುದು.
  • ಸಂವಿಧಾನ ತಿದ್ದುಪಡಿ: ಸಂವಿಧಾನವನ್ನು ತಿದ್ದುಪಡಿ ಮಾಡುವುದು ಸಂಸತ್ತಿಗಿರುವ ಇನ್ನೊಂದು ಪ್ರಮುಖ ಅಧಿಕಾರ.
  • ಸಾರ್ವಜನಿಕ ಶಿಕ್ಷಣ: ಇವೆಲ್ಲದರ ಜೊತೆಗೆ ಸಂಸತ್ತಿನಲ್ಲಿ ಪ್ರಸ್ತಾಪವಾಗುವ ವಿಷಯಗಳು ಸಾರ್ವಜನಿಕ ಚರ್ಚೆಗೊಳಗಾಗಿ ಪ್ರಜೆಗಳ ರಾಜಕೀಯ ಚಿಂತನೆಯನ್ನು ಬೆಳೆಸುತ್ತದೆ. ದೂರದರ್ಶನಾದಿ ಮಾಧ್ಯಮಗಳ ಮೂಲಕ ಜನರನ್ನು ತಲುಪುವ ಲೋಕಸಭೆ ರಾಜ್ಯಸಭೆಗಳ ಚರ್ಚೆಗಳು ಪ್ರಜೆಗಳಿಗೆ ಮಾಹಿತಿಯನ್ನು ನೀಡುವುದರ ಜೊತೆಗೆ ಪ್ರಜಾಪ್ರಭುತ್ವದ ಶಿಕ್ಷಣವನ್ನೂ ನೀಡುತ್ತವೆ. ಅಲ್ಲದೇ ಸಂಸತ್ತು ನಮ್ಮ ಒಟ್ಟೂ ರಾಜಕೀಯ ಪ್ರಜ್ಞೆಯ ಪ್ರತಿಬಿಂಬವಾಗಿದೆ.
  • ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಆಯಾ ಶಾಸನಸಭೆಗಳ ಸಭಾಧ್ಯಕ್ಷರನ್ನು ಚುನಾಯಿಸುವ ಅಧಿಕಾರಗಳನ್ನು ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ನೀಡಲಾಗಿದೆ. ಜೊತೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯಗಳ ನ್ಯಾಯಧೀಶರುಗಳನ್ನು ವಾಗ್ದಂಡನೆಗೊಳಪಡಿಸುವ ಅಧಿಕಾರವನ್ನೂ ಸಂಸತ್ತಿಗೆ ನೀಡಲಾಗಿದೆ. ಅಲ್ಲದೇ ಸಂಸತ್ತಿನ ಹಕ್ಕು ಉಲ್ಲಂಘನೆಗಾಗಿ ಯಾವುದೇ ವ್ಯಕ್ತಿಯನ್ನು ದಂಡನೆಗೊಳಪಡಿಸುವ ಅಧಿಕಾರವನ್ನೂ ಸಹ ಸಂಸತ್ಸಭೆಗಳಿಗೆ ನೀಡಲಾಗಿದೆ. ಜೊತೆಗೆ ಯುಪಿಎಸ್‍ಸಿ, ಸಿಎಜಿ, ಫೈನಾನ್ಸ್ ಕಮಿಶನ್, ಲಾ ಕಮಿಶನ್ ಮೊದಲಾದ ಸಂಸ್ಥೆಗಳ ವರದಿಯನ್ನು ಪರಿಶೀಲಿಸುವ ಅಧಿಕಾರವೂ ಸಂಸತ್ತಿಗಿದೆ.
  • ಸಂಸತ್ತಿನ ಅನೇಕ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ಅನೇಕ ಸದನ ಸಮೀತಿಗಳನ್ನು ರಚಿಸಲಾಗುತ್ತದೆ. ಅಂತಹ ಸಮೀತಿಗಳಿಗೆ ಎಂಪಿಗಳು ಸದಸ್ಯರಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.
  • ಸಂಸತ್ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯ ಅನ್ವಯ ಓರ್ವ ಸಂಸತ್ಸದಸ್ಯನು ತನ್ನ ಕ್ಷೇತ್ರದಲ್ಲಿ ವಾರ್ಷಿಕ 5ಕೋಟಿ ರೂಗಳ ವೆಚ್ಚದ ಸಾರ್ವಜನಿಕ ಉಪಯೋಗಿ ಕೆಲಸಗಳನ್ನು ಮಾಡಿಸಬಹುದಾಗಿದೆ.
  • ಈ ಉದ್ಧೇಶಗಳಿಗಾಗಿ ರಚಿತವಾಗುವ ಸಂಸತ್ತಿನ ಕಾರ್ಯಕಲಾಪಗಳು ಸಮರ್ಪಕವಾಗಿ ನಡೆಯಲು ಬೇಕಾದ ಎಲ್ಲ ಅಧಿಕಾರಗಳು ಸಂಸತದಸ್ಯರಿಗೆ ಲಭ್ಯವಿದೆ. ಮೇಲಿನ ಅಂಶಗಳನ್ನು ಗಮನಿಸಿದರೆ ಓರ್ವ ಸಂಸತ್ಸದಸ್ಯನ ನಿಜವಾದ ಕರ್ತವ್ಯ ವ್ಯಾಪ್ತಿಯ ಅರಿವಾಗಬಹುದು. 

      ಈ ಹಿನ್ನೆಲೆಯಲ್ಲಿ 15ನೇ ಲೋಕಸಭೆಯ ಕಾರ್ಯವನ್ನು ಸ್ಥೂಲವಾಗಿ ಗಮನಿಸಿದರೆ ನಾವು ಚುನಾಯಿಸಿದ ಪ್ರತಿನಿಧಿಗಳ ಕಾರ್ಯವನ್ನು ಅಳೆಯಲು ಸಾಧ್ಯವಾಗಬಹುದು. ವರ್ಷದಲ್ಲಿ ಮೂರುಬಾರಿ ನಡೆಯುವ ಸಂಸತ್ ಅಧಿವೇಶನ ಕಳೆದ ಐದು ವರ್ಷಗಳಲ್ಲಿ ಸರಾಸರಿ ವಾರ್ಷಿಕ 60 ದಿನಗಳ ಕಾಲ ಮಾತ್ರ ನಡೆದಿದೆ. ಹಿಂದಿನ ಲೋಕಸಭೆಗಳ ಸರಾಸರಿ 120 ದಿನಗಳು ನಡೆದದ್ದನ್ನು ಗಮನಿಸಬಹುದು. ಅಧಿವೇಶನಗಳಲ್ಲಿ ಅನೇಕ ಸದಸ್ಯರ ಹಾಜರಾತಿ ಮತ್ತು ಚರ್ಚೆಗಳಲ್ಲಿ ಪಾಲ್ಗೊಳ್ಳುವಿಕೆ 50%ಕ್ಕಿಂತಲೂ ಕಡಿಮೆಯಿದೆ. ಇದುವರೆಗೂ ಸಂಸತ್ತಿನ ಇತಿಹಾಸದಲ್ಲೇ ಅತ್ಯಂತ ಕಡಿಮೆ 118 ಮಸೂದೆಗಳು ಮಾತ್ರ ಅಂಗೀಕಾರವಾಗಿದ್ದು ಇನ್ನೂ 72ಕ್ಕೂ ಹೆಚ್ಚು ಬಾಕೀ ಇವೆ. ಅದರಲ್ಲೂ ಕೇವಲ 27 ಮಸೂದೆಗಳು ಮಾತ್ರ 2-3 ಗಂಟೆ ಚರ್ಚೆಗೊಳಗಾಗಿ ಅಂಗೀಕೃತವಾಗಿವೆ. ಉಳಿದವು ಚರ್ಚೆ ಮಾಡದೆ 4-5 ನಿಮಿಷಗಳಲ್ಲೇ ಅಂಗೀಕಾರಗೊಂಡಿವೆ. ಬಹುತೇಕ ಸಂಸತ್ಸದಸ್ಯರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡುವುದರಲ್ಲಿ ವಿಫಲರಾಗಿದ್ದಾರೆ.

    ಇವುಗಳನ್ನು ಗಮನಿಸಿದಾಗ ಚುನಾಯಿತ ಪ್ರತಿನಿಧಿಗಳಿಗೇ ತಮ್ಮ ಅಧಿಕಾರವ್ಯಾಪ್ತಿ ಮತ್ತು ಕರ್ತವ್ಯಗಳ ಮಾಹಿತ ಇಲ್ಲವೆನ್ನುವ ಸಂಶಯ ಮೂಡಿವುದು ದುರದೃಷ್ಟಕರವಾದರೂ ಅಸಹಜವಲ್ಲ. ಆದ್ದರಿಂದ ಚುನಾಯಿತ ಪ್ರತಿನಿಧಿಯ ಸಾಧನೆಗಳನ್ನು ಸರಿಯಾದ ಮಾನದಂಡಗಳ ಮೇಲೆ ಮೌಲ್ಯಾಂಕನ ಮಾಡುವುದರ ಜೊತೆಗೆ ಓರ್ವ ಸಂಸತ್ಸದಸ್ಯನಿಂದ ಅಪೇಕ್ಷಿತವಾದ ಕಾರ್ಯಗಳನ್ನು ನಿರ್ವಹಿಸುವ ಸಾಮಥ್ರ್ಯವುಳ್ಳವರನ್ನು ಆರಿಸುವ ಜವಾಬ್ದಾರಿಯೂ ಮತದಾರರ ಮೇಲಿದೆ.

ಹೀಗೂ ಉಂಟು                                                                                                              
ಒಬ್ಬ ಸಂಸತ್ಸದಸ್ಯನಿಗೆ 50000ರೂ ಸಂಬಳ, 40000 ಕ್ಷೇತ್ರ ಭತ್ಯೆ, 40000 ಕಛೇರಿ ನಿರ್ವಹಣಾ ವೆಚ್ಚ ಇವುಗಳು ಸೇರಿ ಮಾಸಿಕ ನಿಕ್ಕಿ 1.3 ಲಕ್ಷ ಮೊತ್ತ ದೊರೆಯುತ್ತದೆ. ಇದಲ್ಲದೇ ಪ್ರಯಾಣ ಭತ್ಯೆ, ದೂರವಾಣಿ ವೆಚ್ಚ,ರೇಲ್ವೆ, ಬಸ್ಸು, ವಿಮಾನಗಳಲ್ಲಿ ಉಚಿತ ಪ್ರಯಾಣ, ದೆಹಲಿಯಲ್ಲಿ ವಸತಿ ಸೌಕರ್ಯ ಇನ್ನೂ ಅನೇಕ ಸೌಲಭ್ಯಗಳು ಎಂಪಿಗೆ ಲಭ್ಯವಿದೆ. ಇಷ್ಟೇ ಅಲ್ಲದೇ ಅಧಿವೇಶನದ ಸಂದರ್ಭದಲ್ಲಿ ಪ್ರತಿದಿನ 2000ರೂಗಳ ಭತ್ಯೆಯ ಜೊತೆಗೆ ಸಬ್ಸಿಡಿ ದರದಲ್ಲಿ ಕ್ಯಾಂಟೀನ್ ಸೌಕರ್ಯ, ಅಂಗಡಿ ಸಾಮಾನುಗಳೂ ದೊರೆಯುತ್ತವೆ. ಇವೆಲ್ಲದರ ಜೊತೆಗೆ ಓರ್ವ ಎಂಪಿಯು ತನ್ನ ಜೀವಿತದವರೆಗೆ ಮಾಸಿಕ 20000ರೂಗಳ ನಿವೃತ್ತಿ ವೇತನವನ್ನೂ ಪಡೆಯುತ್ತಾನೆ.                                      

Tuesday, February 11, 2014

ಪ್ರಸ್ತುತ ಸರ್ಕಾರಿ ವ್ಯವಸ್ಥೆಯಲ್ಲಿ ಸುಶಾಸನ ಸಾಧ್ಯವೇ?

(ಪ್ರಕಟಿತ : ಪುಂಗವ 15/02/2014)

        ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ(UNDP) ವ್ಯಾಖ್ಯೆಯ ಪ್ರಕಾರ ಒಂದು ದೇಶದ ಎಲ್ಲ ಹಂತಗಳ ವ್ಯವಹಾರಗಳನ್ನು ಆರ್ಥಿಕ, ರಾಜಕೀಯ ಮತ್ತು ಆಡಳಿತಾತ್ಮಕ ಅಧಿಕಾರಗಳ ಬಲದೊಂದಿಗೆ ನಿರ್ವಹಿಸುವುದನ್ನು ಶಾಸನ(governance) ಎನ್ನಬಹುದು. ಸ್ಥೂಲವಾಗಿ ನೋಡುವುದಾದರೆ ನಿರ್ಣಯಿಸುವ ಮತ್ತು ನಿರ್ಣಯಗಳನ್ನು ಅನುಷ್ಠಾನಗೊಳಿಸುವ (ಅನುಷ್ಠಾನಗೊಳಿಸದೇ ಇರುವ) ಪ್ರಕ್ರಿಯೆಯನ್ನೇ ಶಾಸನ ಅಥವಾ ಆಡಳಿತ ಎನ್ನಬಹುದು. ಆಡಳಿತದ ವ್ಯಾಖ್ಯೆಯು ಕಾರ್ಪೋರೇಟ್‍ಗಳಿಂದ ಹಿಡಿದು ಎಲ್ಲ ರಾಷ್ಟ್ರೀಯ, ಅಂತರರಾಷ್ಟ್ರೀಯ, ಸ್ಥಳೀಯ ಸರ್ಕಾರೀ ಮತ್ತು ಸರ್ಕಾರೇತರ ಸಂಸ್ಥೆಗಳ ನಿರ್ವಹಣೆಗೂ ಅನ್ವಯಿಸುತ್ತದೆ. ಈಗಿರುವ ಬಹುತೇಕ ಸ್ವಾರ್ಥಪರ ಕಲುಷಿತ ರಾಜಕೀಯ ವಾತಾವರಣದಲ್ಲಿ ಯಾವುದೇ ಸಂಸ್ಥೆಯ ಶಾಸನ ವ್ಯವಸ್ಥೆಯು ಪರಿಣಾಮಕಾರಿಯಾಗಿ ತನ್ನ ಕಾರ್ಯವನ್ನು ನಿರ್ವಹಿಸಬಲ್ಲುದೇ? ಎನ್ನುವ ಸಂದೇಹ ಸಹಜವಾಗಿ ಉದ್ಭವಿಸುತ್ತದೆ. ಅದರಲ್ಲೂ ರಾಜಕೀಯ ಮತ್ತು ನೌಕರಶಾಹಿಗಳ ನಡುವೆ ನಲುಗುತ್ತಿರುವ ಸರ್ಕಾರೀ ಸಂಸ್ಥೆಗಳ ನಿರ್ವಹಣೆ, ಕಾರ್ಯಶೈಲಿ ಮತ್ತು ಯೋಜನೆಗಳ ಸಮರ್ಪಕ ಅನುಷ್ಠಾನದ ವಿಷಯಕ್ಕೆ ಬಂದಾಗ ಶಾಸನ ವ್ಯವಸ್ಥೆಯು ಸಮರ್ಥವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಪ್ರತಿಪಾದಿಸಬಲ್ಲವರಂತೂ ವಿರಳಾತಿವಿರಳ. 

        ಈ ಹಿನ್ನೆಲೆಯಲ್ಲಿ ಆಡಳಿತ ಪ್ರಭಾವಿ ಮತ್ತು ಪರಿಣಾಮಕಾರಿಯಾಗಬೇಕಾದ ನಿಟ್ಟಿನಲ್ಲಿ ಕೆಲವು ವರ್ಷಗಳಿಂದೀಚೆಗೆ ಸುಶಾಸನ ಅಥವಾ good governance ಪರಿಕಲ್ಪನೆ ಪ್ರಚುರಗೊಳ್ಳುತ್ತಿದೆ. ಸಮರ್ಥ ಮತ್ತು ಪರಿಣಾಮಕಾರಿ, ಜನಸಹಯೋಗಿ, ಉತ್ತರದಾಯೀ, ಪಾರದರ್ಶಕ, ಪ್ರತಿಸ್ಪಂದನಶೀಲ, ಎಲ್ಲರನ್ನೂ ಒಳಗೊಳ್ಳುವ, ಒಮ್ಮತದ ಆಧಾರಿತ, ನ್ಯಾಯಸಮ್ಮತ, ಇತ್ಯಾದಿ ಗುಣಲಕ್ಷಣಗಳನ್ನು ಒಳಗೊಂಡ ಆಡಳಿತ ಸುಶಾಸನ ಎನಿಸಿಕೊಳ್ಳುವುದು. ಒಟ್ಟಿನಲ್ಲಿ ಸುಶಾಸನ ಪರಿಕಲ್ಪನೆಯಲ್ಲಿ ಆಡಳಿತವು ಜವಾಬ್ದಾರಿಯುತವಾಗಿದ್ದು ಕೇವಲ ಕೆಲವರ ಲಾಭಕ್ಕಾಗಿರದೇ ಜನಸಾಮಾನ್ಯರ ಅಗತ್ಯಗಳನ್ನು ಪೋರೈಸುವಂತಿರಬೇಕು.

        ನಮ್ಮ ದೇಶದಲ್ಲೇ ಸುಶಾಸನದ ಅನೇಕ ಉದಾಹರಣೆಗಳನ್ನು ಕಾಣಬಹದು. 
  • ದಶಕದ ಹಿಂದೆಯೇ ಯಶಸ್ವಿಯಾಗಿ ಜಾರಿಗೆ ಬಂದ ಕರ್ನಾಟಕ ಸರ್ಕಾರದ ಪಹಣಿ ಪತ್ರಗಳ ಡಿಜಿಟಲೀಕರಣಗೊಳಿಸುವ ‘ಭೂಮಿ’ ಯೋಜನೆ. 
  • ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ಸಲುವಾಗಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯಿದೆ. 
  • ರಾಷ್ಟ್ರಕ್ಕೇ ಮಾದರಿಯಾಗಿವ ಛತ್ತೀಸಗಢದ ಪಡಿತರ ವಿತರಣಾ ಯೋಜನೆ. 
  • ಗುಜರಾತಿನ ವಿದ್ಯುತ್, ಕೃಷಿ, ಸಮೂಹ ಸಾರಿಗೆ, ಕೈಗಾರಿಕೋದ್ಯಮಗಳಲ್ಲಿನ ಸಾಧನೆಗಳು. 
  • ನಾಗರಿಕ ಸೇವೆಗಳನ್ನು ನಿಗದಿತ ಕಾಲದೊಳಗೆ ದೊರಕಿಸುವ ಸಲುವಾಗಿ ಕರ್ನಾಟಕದಲ್ಲಿ ಜಾರಿಗೆ ಬಂದ ‘ಸಕಾಲ’
  • ಮಧ್ಯಪ್ರದೇಶ ರಾಜ್ಯದ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಳು 

        ಇವುಗಳನ್ನು ಗಮನಿಸಿದರೆ ಎಲ್ಲ ನ್ಯೂನತೆಗಳ ಹೊರತಾಗಿಯೂ ಸಮರ್ಪಕ ಆಡಳಿತ ಹಾಗೂ ಯೋಜನೆಗಳ ಅನುಷ್ಠಾನ ಸಾಧ್ಯ ಎನ್ನವುದನ್ನು ತೋರಿಸುತ್ತವೆ.

ಗುಜರಾತಿನ ವಿದ್ಯುತ್ ಕ್ರಾಂತಿ

      ನಿರ್ವಹಣೆಯಲ್ಲಿ ಶಿಸ್ತು ತರುವುದರಿಂದ ಗುಜರಾತಿನ ವಿದ್ಯುತ್ ಕ್ಷೇತ್ರದಲ್ಲಾದ ಅದ್ವಿತೀಯ ಪ್ರಗತಿ ಸುಶಾಸನದ ಒಂದು ಉತ್ತಮ ಉದಾಹರಣೆ. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 2001ರಲ್ಲಿ ಗುಜರಾತ್ ವಿದ್ಯುತ ಪ್ರಸರಣ ನಿಗಮಗಳು ಒಟ್ಟೂ 2246 ಕೋಟಿ ರೂಗಳ ನಷ್ಟದಲ್ಲಿದ್ದು ಯಾವುದೇ ಹೊಸ ವಿದ್ಯುದುತ್ಪಾದನಾ ಯೋಜನೆಯನ್ನು ಕೈಗೆತ್ತಿಕೊಳ್ಳದ ಸ್ಥಿತಿ ನಿರ್ಮಾಣವಾಗಿತ್ತು. ಪ್ರಸರಣ ಮತ್ತು ಹಂಚಿಕೆ ನಷ್ಟ(T&D losses) ಶೇ.35.27 ರಷ್ಟಿತ್ತು. ವಿದ್ಯುತ್ ಕ್ಷೇತ್ರದ ದು:ಸ್ಥಿತಿ ಇತರೇ ಕ್ಷೇತ್ರಗಳ ಮೇಲೆ ಬೀರಬಹುದಾದ ಪರಿಣಾಮಗಳನ್ನು ಮನಗಂಡ ಗುಜರಾತ ಸರ್ಕಾರ ಈ ಕ್ಷೇತ್ರ ಸುಧಾರಣೆಯನ್ನು ಆದ್ಯತೆಯಾಗಿ ಪರಿಗಣಿಸಿ ಕಾರ್ಯಪ್ರವೃತ್ತವಾಯಿತು. ಗುಜರಾತ್ ವಿದ್ಯುತ್ ಬೋರ್ಡಿನ ಆಡಳಿತದಲ್ಲಿ ಸಮರ್ಥರನ್ನು ನೇಮಿಸಲಾಯಿತು. ಗುಜರಾತ್ ವಿದ್ಯುತ್ ನಿಗಮದ ಛೇರ್‍ಮನ್ ಮತ್ತು ಇಂಧನ ಕಾರ್ಯದರ್ಶಿಯಾಗಿ ಹೊಸದಾಗಿ ನೇಮಕಗೊಂಡ ಗುಜರಾತ್ ಕೇಡರ್‍ನ ಐಎಎಸ್ ಅಧಿಕಾರಿ ಮಂಜುಳಾ ಸುಬ್ರಮಣಿಯನ್ ನೇತೃತ್ವದಲ್ಲಿ ಕಾರ್ಯದಲ್ಲಿ ದಕ್ಷತೆ ಮತ್ತು ಅನುಶಾಸನವನ್ನು ತರಲಾಯಿತು. ಆರ್ಥಿಕ ಹೊಣೆಗಾರಿಕೆ ಮತ್ತು ವಿತರಣೆಯನ್ನು ಪುನರ್ರಚಿಸಲಾಯಿತು. ವಿದ್ಯುತ ನಿಗಮದ ನೌಕರರು ಮತ್ತು ಸಂಭಂಧಿತ ಖಾಸಗೀ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯದಲ್ಲಿ ಜೋಡಿಸಿಕೊಳ್ಳಲಾಯಿತು. ಹಂಚಿಕೆಯಲ್ಲಿ ವಿದ್ಯುತ್ ಕಳ್ಳತನದಿಂದಾಗುವ ನಷ್ಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕಾನೂನನ್ನು ಜಾರಿಗೊಳಿಸಿ ಅಪರಾಧಿಗಳನ್ನು ಕಾನೂನಿನ ಪರಿಧಿಗೆ ತರಲಾಯಿತು. ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಗೃಹಬಳಕೆ, ಕೈಗಾರಿಕೆ ಮತ್ತು ಕೃಷಿಬಳಕೆಯ ಪ್ರಸರಣ ಲೈನ್‍ಗಳನ್ನು ಪ್ರತ್ಯೇಕಗೊಳೊಸಿ ವಿದ್ಯುತ್ ಹಂಚಿಕೆಯ ಗುಣಮಟ್ಟವನ್ನು ಹೆಚ್ಚಿಸಲಾಯಿತು. ವಿದ್ಯುತ್ ಉತ್ಪಾದನೆಯನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಜಲ ಮತ್ತು ಉಷ್ಣವಿದ್ಯುತ ಸ್ಥಾವರಗಳ ಜೊತೆಗೆ ಸೌರಶಕ್ತಿ ಪವನಶಕ್ತಿ ಮೊದಲಾದ ನವೀಕರಿಸಬಹುದಾದ ಮೂಲಗಳಿಗೂ ಹೆಚ್ಚಿನ ಮಹತ್ವ ನೀಡಲಾಯಿತು. ಇವೆಲ್ಲ ಕ್ರಮಗಳ ಫಲವಾಗಿ ಗುಜರಾತ ಇಂದು ವಿದ್ಯುತ್ ಹೆಚ್ಚುವರಿಯುಳ್ಳ ರಾಜ್ಯವಾಗಿದೆ. ಕೈಗಾರಿಕಗಳಿಗೊಂದೇ ಅಲ್ಲ ಗೃಹಬಳಕೆ ಕೃಷಿಗೂ 24x7 ಘಂಟೆಗಳ ಕಾಲ ವಿದ್ಯುತ್ ಪೋರೈಕೆಯಾಗುತ್ತಿದೆ. ಅಂದು ನಷ್ಟದಲ್ಲಿದ್ದ ಗುಜರಾತ ವಿದ್ಯುತ್ ನಿಗಮ ಇಂದು ಸಾವಿರ ಕೋಟಿಗಳ ನಿವ್ವಳ ಲಾಭಗಳಿಸುತ್ತಿದೆ. ಗುಜರಾತ್ ವಿದ್ಯುತ್ ಸರಬರಾಜು ಕಂಪನಿಗಳು ಕೇಂದ್ರ ಸರ್ಕಾರದ ಪ್ರಶಸ್ತಿಯೂ ಸೇರಿದಂತೆ ಅನೇಕ ಸಮ್ಮಾನಗಳನ್ನು ಬಾಚಿಕೊಂಡಿವೆ. ಗುಜರಾತಿನಲ್ಲಿ ಉತ್ಪಾದನೆಯಾದ ವಿದ್ಯುತ್ತಿನಿಂದಾಗಿ ನೆರೆಯ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಬೆಳಕು ಉರಿಯುತ್ತಿದೆ.

        ನಮ್ಮ ಮುಂದಿರುವ ಇನ್ನೂ ಅನೇಕ ಉದಾಹರಣೆಗಳನ್ನು ಗಮನಿಸಿದರೆ ಪ್ರಬಲ ಇಚ್ಛಾಶಕ್ತಿಯಿರುವ ನಾಯಕತ್ವವಿದ್ದರೆ ಅನೇಕ ನ್ಯೂನತೆಗಳಿರುವ ಸರ್ಕಾರಿ ವ್ಯವಸ್ಥೆಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು ಎನ್ನುವುದು ಸ್ಪಷ್ಟವಾಗುತ್ತದೆ. ಪ್ರತಿಯೊಂದಕ್ಕೂ ‘ಸಿಸ್ಟಮ್ಮ’ನ್ನು ದೂರುವ ಮತ್ತು ಎಲ್ಲದಕ್ಕೂ ರಾಜಕೀಯವನ್ನು ಅಧಿಕಾರಶಾಹಿಯನ್ನು ಜರೆಯುವುದಕ್ಕಿಂತಲೂ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಹೇಗೆ ಪರಿಣಾಮಕಾರಿಯಾಗಿ ಮಾಡಬಹುದು ಎನ್ನುವ ಚಿಂತನೆ ನಡೆಯಬೇಕಾದ ಅಗತ್ಯ ಅಧಿಕವಾಗಿದೆ.

                                   ಸುಶಾಸನದ ಪ್ರಬಲ ಪ್ರತಿಪಾದಕ, ನಮೋ                              
        ಸುಶಾಸನವನ್ನು ಪ್ರಬಲವಾಗಿ ಪ್ರತಿಪಾದಿಸುವವರಲ್ಲಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾರೆ. ಇಂಟರ್ನೆಟ್ ತಂತ್ರಜ್ಞಾನದ ಬಳಕಯಿಂದ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿರುವ ಸಾರ್ವಜನಿಕ ಸಮಸ್ಯಾ ಪರಿಹಾರ ವ್ಯವಸ್ಥೆ(Statewide Attention on Grievances with Application of Technology (SWAGAT)) ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿಗೆ ಭಾಜನವಾಗಿದೆ. ದೇಶದ ಉಳಿದ ರಾಜ್ಯಗಳಲ್ಲಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿರುವಾಗ ಜಲಸಂವರ್ಧನೆಯಲ್ಲಿ ಕೈಗೊಂಡ ಕ್ರಮಗಳಿಂದಾಗಿ ಕಳೆದ ಎಂಟು ವರ್ಷಗಳಲ್ಲಿ ಗುಜರಾತಿನಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡಿದೆ. ಸಮರ್ಪಕ ಕೈಗಾರಿಕಾ ನೀತಿಯ ಅನುಷ್ಠಾನದಿಂದಾಗಿ ಸಣ್ಣ ಕೈಗಾರಿಕೆಗಳ ಉತ್ಪಾದನೆಯಲ್ಲಿ ಏರಿಕೆ ಕಂಡಿರುವುದಷ್ಟೇ ಅಲ್ಲದೇ ಅನೇಕ ಉದ್ಯಮಗಳು ಗುಜರಾತಿನತ್ತ ಮುಖ ಮಾಡಿವೆ. ಸೌರಶಕ್ತಿ ಮೊದಲಾದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಗುಜರಾತ ರಾಜ್ಯ ಮಾದರಿಯಾಗಿದೆ. ಭಾರತದ ರಾಷ್ಟ್ರೀಯ ಕೃಷಿ ಕ್ಷೇತ್ರದ ಅಭಿವೃದ್ಧಿದರ ತೆವಳುತ್ತಿದ್ದರೆ ಗುಜರಾತ ಸತತವಾಗಿ ಎರಡಂಕಿ ದಾಟುತ್ತಿದೆ. ಹನ್ನರಡು ವರ್ಷಗಳ ಹಿಂದೆ 2200 ಕೋಟಿ ರೂ ನಷ್ಟದಲ್ಲಿದ್ದ ಗುಜರಾತಿನ ವಿದ್ಯುತ್ ನಿಗಮ 2010ರ ವೇಳೆಗೇ 550ಕೋಟಿ ರೂಗಳ ನಿವ್ವಳ ಲಾಭ ದಾಖಲಿಸಿದೆ. ಅನೇಕ ರಾಜ್ಯಗಳಲ್ಲಿ ನೆಲಕಚ್ಚಿರುವ ನಗರ ಸಮೂಹ ಸಾರಿಗೆ ವ್ಯವಸ್ಥೆ ಬಿಆರ್‍ಟಿಎಸ್ ಗುಜರಾತಿನ ಅಹಮದಾಬಾದಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಇನ್ನೂ ಅನೇಕ ಸಾಧನೆಯ ಗರಿಗಳು ಗುಜರಾತ ಮತ್ತು ನರೇಂದ್ರ ಮೋದಿಯವರ ಸರ್ಕಾರದ ಕಿರೀಟವನ್ನಲಂಕರಿಸಿದ್ದರ ಹಿಂದೆ, ಇರುವ ವ್ಯವಸ್ಥಯಲ್ಲೇ ಸುಧಾರಣೆ ತಂದು ಸಮರ್ಪಕ ಆಡಳಿತ ನೀಡುವ ಪ್ರಯತ್ನ ಎದ್ದು ಕಾಣುತ್ತದೆ.                                                                                

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...