Monday, May 25, 2015

ನೆಲಕ್ಕೆ ನೀರುಣಿಸಲು ನೂರಾರು ದಾರಿಗಳು

(ಪುಂಗವ 01/06/2015)

      ಪೃಥ್ವಿಯ ಮುಕ್ಕಾಲು ಪಾಲು ಜಲವಿದ್ದರೂ ಸಮಗ್ರ ಜೀವಸಂಕುಲ ನೀರಿಗಾಗಿ ಆಶ್ರಯಿಸಿದ್ದು ಮಳೆಯನ್ನೇ. ಸಮುದ್ರ, ನದಿಕೆರೆಗಳ ನೀರು ಆವಿಯಾಗಿ ಮತ್ತೆ ಮಳೆಯಾಗಿ ಭೂಮಿಯ ಮೇಲೆ ಸುರಿದು ವಿತರಣೆಯಾಗಿ, ನದಿಗಳಲ್ಲಿ ಹರಿದು, ಕೆರೆ ಬಾವಿಗಳನ್ನು ತುಂಬಿಸಿ ಮಣ್ಣಿನಲ್ಲಿ ಇಳಿದು ಅಂತರ್ಜಲಕ್ಕೆ ಮರುಪೂರಣೆಯಾಗುವ ಜಲಚಕ್ರದ ವ್ಯವಸ್ಥೆ ಜೀವಕೋಟಿಯ ನೀರಿನ ಅವಶ್ಯಕತೆಯನ್ನು ಪೋರೈಸುತ್ತಿತ್ತು. ಈ ಪ್ರಾಕೃತಿಕ ವ್ಯವಸ್ಥೆಯನ್ನು ಅರಿತಿದ್ದ ನಮ್ಮ ಪೂರ್ವಜರು ಅದಕ್ಕೆ ತಕ್ಕಂತೆ ಜಲಸಂರಕ್ಷಣೆ ಮತ್ತು ಬಳಕೆಯ ವಿಧಾನಗಳನ್ನು ವಿಕಸನಗೊಳಿಸಿದ್ದರು. ಮಳೆಯ ನೀರು ಸಂಗ್ರಹಣಾ(ಕ್ಯಾಚ್‌ಮೆಂಟ್) ಪ್ರದೇಶಗಳಿಂದ ಒಟ್ಟಾಗಿ ಹಳ್ಳ ಕೋಡಿಗಳಲ್ಲಿ ಹರಿದು ಕೆರೆಕಟ್ಟೆಗಳನ್ನು ತುಂಬಿಸುವುದು. ಹೀಗೆ ಸಂಗ್ರಹವಾದ ನೀರಿನಿಂದಾಗಿ ಕೆರೆಯ ಕೆಳಗಿನ ಪ್ರದೇಶದ ಹೊಲಗಳ ಬಾವಿ ಹಾಗೂ ಕಲ್ಯಾಣಿಗಳಲ್ಲಿ ಸದಾ ನೀರಿರುತ್ತಿದ್ದು ಕೃಷಿಗೆ, ದನಕರುಗಳು ಕುಡಿಯಲು ಹಾಗೂ ಗೃಹಕಾರ್ಯಗಳಿಗೆ ಬಳಕೆಯಾಗುತ್ತಿದ್ದವು. ಹಾಗೆಯೇ ಹೊಲ ತೋಟಗಳಲ್ಲೂ ಒಂದು ಗುಂಡಿ ಇರುತ್ತಿತ್ತು. ಮಳೆ ಬಂದಾಗ ಇವುಗಳಲ್ಲಿ ಶೇಖರವಾಗುವ ನೀರು ತರಕಾರಿ ಬೆಳೆಯಲು, ದನಗಳ ಮೈತೊಳೆಸಲು ಹೀಗೆ ವಿಧವಿಧವಾಗಿ ಬಳಕೆಯಾಗುವುದರ ಜೊತೆಗೆ ನಿಧಾನವಾಗಿ ನೆಲದಲ್ಲಿಯೂ ಇಂಗುತ್ತಿತ್ತು.


      ಆದರೆ ಇಂದು ಪ್ರಗತಿಯ ಹೆಸರಿನಲ್ಲಿ ನಡೆಯುತ್ತಿರುವ ವಿವೇಚನಾರಹಿತ ಸಂಪನ್ಮೂಲಗಳ ಬಳಕೆ, ನದಿ ಪಾತ್ರದ ಜಲಸಂಗ್ರಹಣಾ ಪ್ರದೇಶದಲ್ಲಿನ ಚಟುವಟಿಕೆಗಳು, ಕೆರೆಗಳ ಒತ್ತುವರಿ ಹಾಗೂ ನಿರ್ವಹಣೆಯ ಕೊರತೆ, ಅತಿಯಾಗಿ ಕೊಳವೆ ಬಾವಿಗಳನ್ನು ಕೊರೆಯುವುದು, ಕಾಡಿನ ನಾಶ ಮೊದಲಾದವುಗಳಿಂದ ಸಾಂಪ್ರದಾಯಿಕ ಜಲಮೂಲಗಳು ಬತ್ತಿಹೋಗುತ್ತಿವೆ. ಇದು ಒಂದೆರಡು ಊರುಗಳ ಸಮಸ್ಯೆಯಲ್ಲ. ಈ ಹಿನ್ನೆಲೆಯಲ್ಲಿ ಜಲಕ್ಷಾಮದ ಸಮಸ್ಯೆಯ ಗಂಭೀರತೆಯ ಪ್ರಜ್ಞೆ ಬೆಳೆದಿದ್ದರಿಂದ ಅನೇಕ ಪ್ರದೇಶಗಳಲ್ಲಿ ಮಳೆ ನೀರಿನ ಸಂಗ್ರಹ, ನೀರಿಂಗಿಸುವುದ ಕಾಡನ್ನು ಬೆಳೆಸುವುದು ಹೀಗೆ ಅನೇಕ ರೀತಿಯ ಜಲಸಂವರ್ಧನೆ ಕಾರ್ಯಗಳು ನಡೆಯುತ್ತಿರುವುದು ಸಮಾಧಾನಕರ ಸಂಗತಿ. ಬತ್ತಿಹೋಗಿರುವ ಕುಮುದ್ವತಿ ನದಿ ಪಾತ್ರದ ಹಳ್ಳಿಗಳಾದ ನೆಲಮಂಗಲ ತಾಲೂಕಿನ ಕಾಸರಘಟ್ಟ , ಮಹಿಮಾಪುರ, ಕೆರೆಕತ್ತಿಗನೂರು, ಆಲದಹಳ್ಳಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ನದಿ ಪುನಶ್ಚೇತನ, ಕೆರೆ ಕಲ್ಯಾಣಿ ಮುಂತಾದ ಜಲಮೂಲಗಳ ಸಂರಕ್ಷಣೆಯ ಕಾರ್ಯ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದು ಉತ್ತಮ ಪರಿಣಾಮ ಕಂಡುಬಂದಿದೆ. ಭಾರತೀಯ ಕಿಸಾನ ಸಂಘದ ಸ್ಥಳೀಯ ಕಾರ್ಯಕರ್ತರು ಗ್ರಾಮಸ್ಥರನ್ನು ಜೊತೆಗೂಡಿಸಿ ಕೆಲವು ಸಂಘಸಂಸ್ಥೆಗಳ ನೆರವಿನಿಂದ ಮಾದರಿ ಕಾರ್ಯವನ್ನು ನಡೆಸುತ್ತಿದ್ದಾರೆ. 


ಮರಗಿಡಗಳನ್ನು ಬೆಳೆಸುವ ಯೋಜನೆ
      ಮಳೆ, ಅಂತರ್ಜಲ ಹಾಗೂ ಮರಗಳಿಗೆ ತುಂಬ ಹತ್ತಿರದ ಸಂಬಂಧವಿದೆ. ಮರಗಳು ಮೋಡಗಳನ್ನು ತಡೆದು ವಾತಾವರಣವನ್ನು ತಂಪಾಗಿಸಿ ಮಳೆಸುರಿಸುವುದು ಒಂದಾದರೆ, ನೆಲದ ಆಳಕ್ಕೆ ಇಳಿಯುವ ಮರದ ಬೇರುಗಳು ನೀರು ಇಂಗಲು ಸಹಕಾರಿಯಾಗಿವೆ. ಇದನ್ನು ಅರಿತು ಮಹಿಮಾಪುರ, ಆಲದಹಳ್ಳಿ ಮತ್ತು ಸುತ್ತಲಿನ ಹಳ್ಳಿಗಳ ಗುಡ್ಡಗಾಗು ಪ್ರದೇಶದಲ್ಲಿ ದೊಡ್ಡಪ್ರಮಾಣದಲ್ಲಿ ಕಾಡನ್ನು ಬೆಳೆಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಮಹಿಮಾಪುರ ಗ್ರಾಮದ ಜಾತ್ರಾ ಮೈದಾನ, ಗುಂಡುತೋಪುಗಳಲ್ಲಿ ಗ್ರಾಮಸ್ಥರೇ ಸೇರಿ ಅತ್ತಿ, ಮಾವು, ನೇರಳೆ, ಹಿಪ್ಪಲಿ, ಆಲ, ಹಲಸು, ಸೀತಾಫಲ ಮುಂತಾದ ವಿವಿಧ ಜಾತಿಯ ಮರಗಳನ್ನು ಬೆಳೆಸುತ್ತಿದ್ದಾರೆ. ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಮೂಲಕ ಗಿಡಗಳಿಗೆ ನೀರುಣಿಸಿ ಆರೈಕೆ ಮಾಡಲಾಗುತ್ತದೆ. ಹೊಸದಾಗಿ ಕಾಡುಬೆಳಸುವುದರ ಜೊತೆಗೆ ಗುಂಡುತೋಪಿನ ಮರಗಳನ್ನು ಕಾಪಾಡುವುದಕ್ಕೂ ಆದ್ಯತೆ ನೀಡಲಾಗುತ್ತದೆ. ಬೆಂಗಳೂರು ಮುಂತಾದ ನಗರ ಪ್ರದೇಶದ ಕೆಲವು ಸ್ವಯಂಸೇವಕರು ಹಾಗೂ ಸಂಘಟನೆಗಳು ಗ್ರಾಮಸ್ಥರ ಜೊತೆಗೆ ಗಿಡನೆಡುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.


ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರು ಗ್ರಾಮದ ನಿವಾಸಿ ಪ್ರಗತಿಪರ ರೈತ, ಸಿಆಯ್‌ಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿದ ಮಾಜಿ ಯೋಧ ಶ್ರೀ ಗಂಗಣ್ಣನವರ ಪ್ರಕೃತಿ ಪ್ರೇಮ ಮತ್ತು ಅನುಭವ ಜ್ಞಾನ ವಿಸ್ಮಯವನ್ನು ಮೂಡಿಸುವಂತಹುದು. ತಮ್ಮ ಹಳ್ಳಿಯ ಸುತ್ತಲಿನ ಗುಡ್ಡಗಾಡಿನಲ್ಲಿ ಬೆಳೆಯುವ ಮರಗಳಿಂದ ಹಿಡಿದು ಸಣ್ಣ ಪೊದೆ-ಗಿಡಗಳು, ಬಳ್ಳಿ ಮೂಲಿಕೆಗಳು ಮತ್ತು ಅವುಗಳ ಔಶಧಿಯ ಗುಣಗಳನ್ನು ಆಳವಾಗಿ ತಿಳಿದುಕೊಂಡಿರುವ ಗಂಗಣ್ಣನವರು, ನೆಟ್ಟ ಪ್ರತಿಯೊಂದು ಗಿಡವನ್ನು ವಾತ್ಸಲ್ಯದಿಂದ ಆರೈಕೆ ಮಾಡಿ ಬೆಳೆಸುತ್ತಿದ್ದಾರೆ. ಅಂತರ್ಜಲದ ಕುರಿತು ಅವರು ಹೇಳುವ ಮಾತು ತುಂಬ ಪ್ರಸ್ತುತವಾಗಿದೆ: "ಅಂತರ್ಜಲ ಆಪತ್ಕಾಲದ ನಿಧಿ. ಆದ್ದರಿಂದ ಅತೀ ಅಗತ್ಯಬಿದ್ದಾಗ ಮಾತ್ರ ಬೋರವೆಲ್ ಅಗೆದು ಅದನ್ನು ಬಳಸಬೇಕು. ಇಂದು ಭೂಮಿಯ ಮೇಲ್ಪದರದಿಂದ ಮೂವತ್ತು ನಲವತ್ತು ಅಡಿ ಅಗೆದರೂ ತೇವಾಂಶ ಇರುವುದಿಲ್ಲ. ಹೀಗಾದರೆ ಗಿಡಮರಗಳು ಹೇಗೆ ಬದುಕಬಲ್ಲವು? ಆದ್ದರಿಂದ ಮೊದಲು ಭೂಮಿಯ ಮೇಲ್ಪದರದಲ್ಲಿ ನೀರನ್ನು ಇಂಗಿಸಿದರೆ ಅಂತರ್ಜಲ ತನ್ನಿಂದ ತಾನೇ ಪೂರಣವಾಗುತ್ತದೆ. ಭೂಮಿಯ ಆಳಕ್ಕೆ ಇಳಿಯುವ ಮರದ ಬೇರುಗಳು ನೀರನ್ನು ಇಂಗಿಸುವ ಕಾರ್ಯವನ್ನು ತಾವೇ ಮಾಡುತ್ತವೆ."

ನೀರಿಂಗಿಸುವ ಹೊಂಡಗಳು
      ಮಳೆಯ ನೀರನ್ನು ಸಂಗ್ರಹಿಸಿ ಭೂಮಿಯಲ್ಲಿ ಇಂಗಿಸುವ ಸಲುವಾಗಿ ತೋಪಿನಲ್ಲಿ ಅಲ್ಲಲ್ಲಿ ಹೊಂಡಗಳನ್ನು ತೋಡಲಾಗಿದೆ. ಮಹಿಮಾಪುರ ಗ್ರಾಮದ ತೋಪಿನಲ್ಲಿ ಅಗೆಯಲಾದ ಸುಮಾರು ೬೦ ಮೀ ಅಗಲ ೧೨೦ಮೀ ಇಂತಹ ಒಂದು ಹೊಂಡ ಸುಮಾರು ಎರಡು ಲಕ್ಷ ಲೀಟರಿಗೂ ಹೆಚ್ಚು ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅರ್ಧದಷ್ಟು ಆವಿಯಾದರೂ ಬಹುದೊಡ್ಡ ಪ್ರಮಾಣದಲ್ಲಿ ಹರಿದು ಹೋಗಬಹುದಾಗಿದ್ದ ನೀರು ಅಲ್ಲಿಯೇ ಮಣ್ಣಿನಲ್ಲಿ ಇಂಗಿ ಅಂತರ್ಜಲವನ್ನು ಸೇರುವುದು. ಈ ಇಂಗುಗುಂಡಿಯ ಪರಣಾಮದಿಂದಾಗಿ ಅಲ್ಲಿಯೇ ಹತ್ತಿರದಲ್ಲಿನ ಬತ್ತಿಹೋಗಿದ್ದ ಕೊಳವೆ ಬಾವಿಗೆ ಮತ್ತೆ ಜೀವ ಬಂದಿದೆ. ಹೊಂಡದ ಮಣ್ಣಿನ ಮೇಲ್ಪದರದಲ್ಲೂ ತೇವಾಂಶ ಹೆಚ್ಚಾಗಿರುವುದರಿಂದ ಸುತ್ತಲಿನ ಪರಿಸರದಲ್ಲಿ ಮರಗಳು ಮತ್ತು ಪೊದೆಗಳು ಹುಲುಸಾಗಿ ಬೆಳೆದಿವೆ.


ಸೀಡ್ ಬಾಲ್ ಗಳು ಮತ್ತು ಬೀಜ ಎರಚುವುದು


ಸೀಡ್ ಬಾಲ್ ಗಿಡಬೆಳೆಸುವ ಒಂದು ವಿಶಿಷ್ಟ ಹಾಗೂ ಸರಳ ವಿಧಾನ. ಮಣ್ಣಿನೊಂದಿಗೆ ದನದ ಸಗಣಿಯನ್ನು ಬೆರೆಸಿ ಉಂಡೆಕಟ್ಟುವ ಮಟ್ಟಿಗೆ ಹದಮಾಡಿಕೊಳ್ಳುವುದು. ಬೀಜಗಳನ್ನು ಹಾಕಿ ಮಣ್ಣಿನ ಉಂಡೆ (ಸೀಡ್‌ಬಾಲ್)ಗಳನ್ನು ಕಟ್ಟಿ ನೆರಳಿನಲ್ಲಿ ಒಣಗಿಸಿ ಸಂಗ್ರಹಿಸಿಟ್ಟುಕೊಳ್ಳುವುದು. ಮಳೆಗಾಲದ ಸಂದರ್ಭದಲ್ಲಿ ಪೊದೆಗಳ ಮಧ್ಯೆ, ಒಣಗಿ ಕಿತ್ತಿರುವ ಮರದ ಬುಡದಲ್ಲಿ, ಸಣ್ಣ ಸಣ್ಣ ಹೊಂಡಗಳಲ್ಲಿ ಹೀಗೆ ಇಂತಹ ಬೀಜ ಉಂಡೆಗಳನ್ನು ಬಿಸಾಡುವುದು. ತೇವಾಂಶ ಸಿಕ್ಕಾಗ ಉಂಡೆಯೊಳಗಿನ ಬೀಜವು ಮೊಳಕೆಯೊಡೆದು ಅಲ್ಲೇ ಬೇರು ಬಿಟ್ಟು ಗಿಡವಾಗುವುದು. ಇದು ಶಾಲಾ ಮಕ್ಕಳೂ ಆಟವಾಡುತ್ತ ಮಾಡುವ ಕೆಲಸ. ಹಾಗೆಯೇ ವಿವಿಧ ರೀತಿಯ ತರಕಾರಿ ಗಿಡಗಳು ಹಾಗೂ ಬಳ್ಳಿಗಳ ಬೀಜಗಳನ್ನು ಸಂಗ್ರಹಿಸಿ ಹದವಾದ ಮಣ್ಣಿರುವ ಕಡೆ, ಬಂಡೆಗಳ ನಡುವೆ ಹೀಗೆ ಸುಮ್ಮನೆ ಎರಚುವುದು. ಮಳೆಗಾಲದ ತೇವಾಂಶ ತಾಕಿದೊಡನೆ ಅವು ಮೊಳಕೆಯೊಡೆದು ಅಲ್ಲಿಯೇ ಬೆಳೆಯುತ್ತವೆ. ಹೀಗೆ ಬೀಜ ಎರಚುವುದರಿಂದ ಹುಟ್ಟುಕೊಂಡು ಬೆಳೆದಿರುವ ಬಳ್ಳಿಗಳು, ಗಿಡಗಳು, ಸೊಪ್ಪಿನ ಹಾಗೂ ತರಕಾರಿ ಸಸ್ಯಗಳು ಮಹಿಮಾಪುರದ ಮಹಿರಂಗ ಸ್ವಾಮಿ ದೇವಸ್ಥಾನ ಸುತ್ತಲಿನ ಪ್ರದೇಶದಲ್ಲಿ ಹುಲುಸಾಗಿ ಬೆಳೆದಿವೆ.                   

ಮಳೆನೀರಿನ ಹರಿವಿಗೆ ಅಡ್ಡದಾಗಿ ಒಡ್ಡು ಕಟ್ಟುವುದು, ಇಂಗು ಬಾವಿ
        ಮಳೆ ನೀರಿನ ಹರಿವಿಗೆ ಅಲ್ಲಲ್ಲಿ ಸಣ್ಣ ಸಣ್ಣ ಒಡ್ಡುಗಳನ್ನು ಕಟ್ಟುವುದು ಮಣ್ಣಿನಲ್ಲಿ ನೀರಿಂಗಿಸುವ ಇನ್ನೊಂದು ವಿಧಾನ. ಒಡ್ಡುಗಳಲ್ಲಿ ಸಂಗ್ರಹವಾದ ನೀರು ಸುತ್ತಲಿನ ಭೂಮಿಯ ತೇವಾಂಶವನ್ನು ಹೆಚ್ಚಿಸುವುದರಿಂದ ಆ ಪ್ರದೇಶಗಳಲ್ಲಿ ಮರಗಿಡಗಳು ಚೆನ್ನಾಗಿ ಬೆಳೆಯುವುವು. ಜೊತೆಗೆ ಆಳಕ್ಕಿಳಿದ ಬೇರುಗಳ ಸಂದಿನಲ್ಲಿ ನೀರು ಭೂಮಿಗೆ ಇಂಗುವುದು. ಒಡ್ಡುಗಳ ಜೊತೆಗೆ ಆಧುನಿಕ ಇಂಗುಬಾವಿಗಳನ್ನೂ ನಿರ್ಮಿಸಲಾಗಿದೆ. ಆದರೆ ಈ ಇಂಗುಬಾವಿಗಳ ನಿರ್ಮಾಣಕ್ಕೆ ವೆಚ್ಚ ಹೆಚ್ಚು ಆದರೆ ಪರಿಣಾಮ ಕಡಿಮೆ ಎನ್ನುವುದು ಕಾರ್ಯಕರ್ತರ ಅನಿಸಿಕೆ.

ಕಾಸರಘಟ್ಟದ ನೀರು ನಿರ್ವಹಣಾ ಸಹಕಾರಿ ಸಂಘ
      ಕಾಸರಘಟ್ಟ ಗ್ರಾಮದಲ್ಲಿ ನೀರು ನಿರ್ವಹಣೆಗಾಗಿಯೇ ಸಹಕಾರಿ ಸಂಘ ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು ಸುತ್ತಲಿನ ಕೆರೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ. ಕೆರೆಗಳಲ್ಲಿ ಮೀನು ಸಾಕಲು ವಾರ್ಷಿಕ ಗುತ್ತಿಗೆಯನ್ನು ನೀಡಲಾಗುತ್ತಿದ್ದು ಇದರಿಂದ ಕೆರಗಳು ಸ್ವಚ್ಛವಾಗಿರುವುದರ ಜೊತೆಗೆ ಸಂಘ ಆದಾಯವನ್ನೂ ಗಳಿಸುತ್ತಿದೆ. ಗ್ರಾಮಸ್ಥ ಕೃಷಿಕರೇ ಈ ಸಂಘದ ನಿರ್ದೇಶಕರಾಗಿದ್ದು ಊರಿನವರ ಸಹಕಾರದಿಂದ ಜಲಮೂಲಗಳ ಸಂರಕ್ಷಣೆಯ ಕಾರ್ಯವನ್ನು ಮಾಡುತ್ತಿದೆ. ಜೊತೆಗೆ ಕಾಡು ಬೆಳಸುವ ಯೋಜನೆ, ಗ್ರಾಮಸ್ಥರಲ್ಲಿ ನೀರಿನ ಬಳಕೆಯ ಕುರಿತು ಶಿಕ್ಷಣ ನೀಡುವ ಕಾರ್ಯದಲ್ಲೂ ಸಂಘ ತೊಡಗಿಕೊಂಡಿದೆ.

       ಇಂದು ಬಹುತೇಕ ಗ್ರಾಮಗಳು ಜಲಕ್ಷಾಮದ ಸಮಸ್ಯೆಯನ್ನು ಎದುರಿಸುತ್ತಿರುವುದಕ್ಕೆ ಕೇವಲ ಮಳೆಯ ಪ್ರಮಾಣದಲ್ಲಿನ ವ್ಯತ್ಯಾಸ ಕಾರಣವಲ್ಲ.  ನೀರಿನ ಮೂಲಗಳನ್ನು ಉಳಿಸುವುದರಲ್ಲಿನ ಉದಾಸೀನತೆ ಹಾಗೂ ವಿವೇಚನಾರಹಿತ ಬಳಕೆ ಜಲ ಸಮಸ್ಯೆಯ ಕಾರಣಗಳಲ್ಲಿ ಪ್ರಮುಖವಾದವು. ಕಾಸರಘಟ್ಟದ ಸುತ್ತಲಿನ ಗ್ರಾಮಸ್ಥರು ಅನುಸರಿಸುತ್ತಿರುವ ವಿಧಾನಗಳು ತುಂಬ ಸರಳ. ಅವರ ಪರಿಶ್ರಮದಿಂದಾಗಿ ಕೆರೆಕತ್ತಿಗನೂರಿನ ಕೆರೆಯಲ್ಲಿ ಬೇಸಿಗೆಯಲ್ಲಿಯೂ ಸಾಕಷ್ಟು ನೀರಿದೆ, ಅಲ್ಲಿನ ಕಲ್ಯಾಣಿ ಹಾಗೂ ಬಾವಿಗಳಲ್ಲಿಯೂ ನೀರಿದೆ.

         ನಮ್ಮ ನಮ್ಮ ಊರುಗಳಲ್ಲಿರುವ ಕೆರೆಗಳ ಪುನಶ್ಚೇತನ ಕಾರ್ಯದ ಜೊತೆಗೆ ಸ್ಥಳೀಯ ಪರಿಸರಕ್ಕೆ ಹೊಂದುವ ಜಲಸಂವರ್ಧನ ಕಾರ್ಯಗಳನ್ನು ಕೈಗೊಳ್ಳುವುದು ಇಂದು ಒಂದು ರೀತಿಯ ಆಂದೋಲನವಾಗಿ ನಡೆಯಬೇಕಾದ ಕೆಲಸವಾಗಿದೆ. ಏಕೆಂದರೆ ಜೀವಜಲ ಅಮೂಲ್ಯವಾದುದು.

Thursday, May 7, 2015

ಓ ಹುಡುಗಿಯರೇ ನೀವೇಕೆ ಹೀಗೆ ?

          ಕೆಲವು ವರ್ಷಗಳ ಹಿಂದಿನ ಮಾತು. ನಾನು ಕೆಲಸ ಮಾಡುವ ಸಂಸ್ಥೆಗೆ ಬಂದಿದ್ದ ಓರ್ವ ಅಮೇರಿಕದ ಕ್ಲೈಂಟ್ನೊಟ್ಟಿಗೆ ಊಟಕ್ಕೆ ಕುಳಿತಿದ್ದಾಗ ಮಾತು ಕುಟುಂಬ ಮದುವೆಗಳ ಕಡೆಗೆ ಹೊರಳಿತ್ತು. ಈಗಾಗಲೆ ಎರಡು ಮೂರು ಮದುವೆಯಾಗಿ ವಿಚ್ಛೇದನವೂ ಆಗಿ ಹೊಸ ಗರ್ಲ್ಫ್ರೆಂಡ್ ಒಟ್ಟಿಗೆ ಮುಂದಿನ ಮದುವೆಯ ಯೋಜನೆಗೆ ತೊಡಗಿದ್ದ ಆತ ಕೇಳಿದ್ದಭಾರತದಲ್ಲಿ ಯಾಕೆ ಮದುವೆಗಳು ಅಷ್ಟು ಮುರಿದು ಬೀಳುವುದಿಲ್ಲ?’ (why marriages last so long in India and will not breakup much?). ಆತನಿಗೆ ಅದೊಂದು ವಿಸ್ಮಯವಾಗಿತ್ತು. ಅಂದು ಸಹೋದ್ಯೋಗಿಯೊಬ್ಬರು ನೀಡಿದ್ದ ಉತ್ತರ ತುಂಬ ಸೂಕ್ತವಾಗಿತ್ತು. ಭಾರತದಲ್ಲಿ ಮದುವೆಗಳು ನಡೆಯುವುದು ಕೇವಲ ಗಂಡು ಹೆಣ್ಣು ಇಬ್ಬರ ನಡುವೆ ಮಾತ್ರವಲ್ಲ. ವಿವಾಹ ಎರಡು ಕುಟುಂಬಗಳ ನಡುವೆ, ಎರಡು ಪರಿವಾರಗಳ ನಡುವೆ ಸಂಬಂಧವನ್ನು ಬೆಸೆಯುತ್ತದೆ. (marriage builds relation between two families). ಇದು ನಮ್ಮ ಅನುಭವ. ಕನ್ಯಾ ವರಯತೇ ರೂಪಮ್ ಮಾತಾ ವಿತ್ತಂ ಪಿತಾ ಶ್ರುತಮ್| ಬಾಂಧವಾಃ ಕುಲಮಿಚ್ಛಂತಿ ಮೃಷ್ಟಾನ್ನಮ್ ಇತರೇ ಜನಾಃ|| - ವಧುವು ಹುಡುಗನ ರೂಪವನ್ನೂ, ವಧುವಿನ ತಾಯಿಯು ಸಂಪತ್ತನ್ನು ನೋಡಿದರೂ ತಂದೆಯಾದವನು ವರನ ಗುಣಾವಗುಣಗಳು, ಕೌಟುಂಬಿಕ ಹಿನ್ನೆಲೆಗಳ ಬಗ್ಗೆ ಜನರು ಹೇಳುವುದನ್ನು ಮತ್ತು ಬಂಧುವರ್ಗದವರು ಕುಲ ಪರಿವಾರಗಳನ್ನು ಮಹತ್ತೆಂದು ನೋಡುತ್ತಾರೆ ಎನ್ನುವಲ್ಲಿ ನಮ್ಮಲ್ಲಿ ವೈವಾಹಿಕ ಸಂಬಂಧವನ್ನು ಬೆಳೆಸುವಲ್ಲಿನ ಮಾನದಂಡದ ಅರಿವಾಗುತ್ತದೆ. ಹಾಗೇಯೇ ಗುಣಮ್ ಪೃಚ್ಛಸ್ವ ಮಾ ರೂಪಮ್ ಶೀಲಮ್ ಪೃಚ್ಛಸ್ವ ಮಾ ಕುಲಮ್ ಸಿದ್ಧಿಮ್ ಪೃಚ್ಛಸ್ವ ಮಾ ವಿದ್ಯಾಮ್ ಸುಖಮ್ ಪೃಚ್ಛಸ್ವ ಮಾ ಧನಮ್ ಎನ್ನುವ ಸುಭಾಷಿತದಲ್ಲಿ ಹೇಳುವಂತೆ ರೂಪಕ್ಕಿಂತ ಆತನ ಗುಣ, ಕುಲಕ್ಕಿಂತ ಆತನ ನಡತೆ, ವಿದ್ಯೆಗಿಂತ ಆತ ಗಳಿಸಿದ ಸಿದ್ಧಿ, ವಿದ್ಯೆಯನ್ನು ವಿನಿಯೋಗಿಸಬಲ್ಲ ಕ್ಷಮತೆ, ಧನಸಂಪತ್ತಿಗಿಂತ ಮಿಗಿಲಾಗಿ ಆತನ ಜೀವನ ಸುಖ ಇವು ಒಬ್ಬ ವ್ಯಕ್ತಿಯನ್ನು ಅಳೆಯಬಲ್ಲ ಸೂಕ್ತ ಅಳತೆಗೋಲುಗಳು. ರೀತಿಯ ಮಾನದಂಡಗಳಿಂದ ವರಸಾಮ್ಯ ಗುಣದೋಷಗಳನ್ನು ಗ್ರಹಿಬಲ್ಲ ಹಿರಿಯರಿಂದ ನಿಶ್ಚಯವಾಗಿ ಪರದೆ ಸರಿಯುವವರೆಗೂ ಒಬ್ಬರನ್ನೊಬ್ಬರು ಮುಖವನ್ನೂ ನೋಡಿರದ ಗಂಡು-ಹೆಣ್ಣುಗಳ ವೈವಾಹಿಕ ಸಂಬಂಧಗಳು ಬಹುತೇಕ ಸುಖೀ ದಾಂಪತ್ಯವಾಗುವುದು ನಮ್ಮ ನಡುವಿನ ಸಮಾಜದಲ್ಲಿ ಸಹಜವಾಗಿತ್ತು.

         ಆದರೆ ಕಾಲಾಚಾರಗಳು ಬದಲಾಗಿವೆ. ಕಾಲೇ ಕಾಲೇ ನವಾಚಾರಃ ನವಾ ವಾಣೀ ಮುಖೇ ಮುಖೇ ಎನ್ನುವಂತೆ ಆಚಾರಗಳೂ ಬದಲಾಗಿವೆ, ಬದಲಾಗತಕ್ಕದ್ದೇ, ಅದು ಪ್ರಕೃತಿಯ ನಿಯಮ. ಇಂದಿನ ಕಾಲದಲ್ಲಿ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಸಾಮಾನ್ಯವಾಗಿ ಇದೆ, ಅದರಲ್ಲೂ ಹುಡುಗಿಯರಿಗೆ ಸ್ವಲ್ಪ ಜಾಸ್ತಿಯೇ ಇದೆ. ಜೊತೆಗೆ ಕೆಲವು ಸಮುದಾಯಗಳಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆ ಕಡಿಮೆಯಿದೆ ಎಂಬ ಸ್ವಲ್ಪ ವಾಸ್ತವ ಆದರೆ ಹೆಚ್ಚಿನ ಗುಲ್ಲು ಹಬ್ಬಿದಾಗಿನಿಂದ ಹುಡುಗಿಯರ ಆಯ್ಕೆಯ ಸ್ವಾತಂತ್ರ್ಯದ ವ್ಯಾಪ್ತಿ  ಹಿಗ್ಗಿದ್ದಷ್ಟೇ ಅಲ್ಲ ಆಯ್ಕೆ ಚೌಕಾಶಿಯ ವ್ಯವಹಾರದ ಮಟ್ಟಕ್ಕೆ ಇಳಿದಿದೆಯೆಂದರೆ ಅತಿಶಯೋಕ್ತಿಯೇನೂ ಅಲ್ಲ. ಗಂಡನ್ನುಆರಿಸುವಾಗ ಹೇಗೇಗಿರಬೇಕು ಏನೇನಿರಬೇಕು ಎಂದು ಹುಡುಗಿಯೋ ಅವಳ ಹೆತ್ತವರೋ ಮುಂದಿಡುವ ಕಂಡೀಶನ್ನುಗಳು ಕಳವಳಕಾರಿಯಾದರೂ ಕೇಳಲೂ ಬಹಳ ಮಜವಾಗಿವೆ. ಕೃಷಿ ಕೆಲಸ ಮಾಡುತ್ತ ಅಥವಾ ಇನ್ನು ಯಾವುದೋ ವ್ಯವಹಾರ ಮಾಡುತ್ತ ಊರಿನ ಕಡೆ ಮನೆಯಲ್ಲಿ ತಂದೆತಾಯಿಯರೊಡನೆ ತುಂಬು ಕುಟುಂಬದಲ್ಲಿ(?) ವಾಸವಾಗಿರುವ ಮಾಣಿಗೆ ಹೆಣ್ಣು ಸಿಗುವುದಿಲ್ಲ ಎನ್ನುವುದು ಬಹಳ ಹಳೆಯ ವಿಚಾರವಾಯಿತು. ಕೆಲವು ವರ್ಷಗಳ ಕೆಳಗೆ ಸ್ಟಾರ್ ವ್ಯಾಲ್ಯೂ ಹೊಂದಿದ್ದ ಸಾಫ್ಟವೇರ್ ಗಂಡಿಗೂ ಈಗ ಸುಲಭವಿಲ್ಲ.

        ಹೀಗಿರುವ ಸನ್ನಿವೇಶದಲ್ಲಿ ಮದುವೆವ್ಯವಹಾರ  ಚೌಕಾಶಿಯ ನಡುವೆ ಅಲ್ಪಸ್ವಲ್ಪ ಸ್ವಾನುಭವ ಪಡೆದ ಆಧಾರದ ಮೇಲೆ ಇತ್ತೀಚಿಗೆ ಹಾದುಹೋದ ಒಂದು ರಿಕ್ವೈರ್ಮೆಂಟ್ನ್ನು ಸ್ಯಾಂಪಲ್ಲಿಗಾಗಿ ಉಲ್ಲೇಖಿಸುವುದಾದರೆ - ತಂದೆ ತಾಯಿಯ ಒಬ್ಬನೇ ಮಗನಾಗಿರಬೇಕು ಆದರೆ ಮನೆಯಲ್ಲಿ ಅತ್ತೆಮಾವ(ಲಗೇಜು !) ಇರಬಾರದು, ಬೆಂಗಳೂರಿನಲ್ಲಿ ಮಲ್ಟಿನ್ಯಾಶನಲ್ ಕಂಪನಿಯಲ್ಲಿ ಕೆಲಸದಲ್ಲಿರಬೇಕು. ಊರಿನಲ್ಲಿ ಮನೆ ಜಮೀನು ಇರಬೇಕು, ಆದರೆ ವಾಪಾಸು ಮನೆಗೆ ಹೋಗಿ ಜಮೀನು ಮತ್ತು ತಂದೆತಾಯಿರನ್ನು ನೋಡಿಕೊಂಡಿರುವ ವಿಷಯ ಎತ್ತಬಾರದು. ಬೆಂಗಳೂರಿನಲ್ಲಿ ಸೈಟು ಫ್ಲಾಟು ಮಾಡಬೇಕು!!

        ಇಂತಹ ಷರತ್ತುಗಳ, ಹೇಗೇಗಿರಬೇಕುಗಳ ಪಟ್ಟಿ ಮಾಡಿ ಹುಡುಗಿಯರೇ ನೀವೇಕೆ ಹೀಗೆ? ಎಂದು ಸವಾಲು ಹಾಕುವುದು ಇಲ್ಲಿ ಪ್ರಸ್ತುತವಾದರೂ ಅಪ್ರಯೋಜಕ ಮತ್ತು ಅಪೇಕ್ಷಣೀಯವಲ್ಲ. ಕಾರಣವಿಷ್ಟೇ. ತನಗೊಪ್ಪುವ ಸಂಗಾತಿಯೊಂದಿಗೆ ಬದುಕುವ, ತನಗೆ ಸರಿಯಾದ ವರನನ್ನು ವರಿಸುವುದು ವರಮಾಲೆ ಕೈಯಲ್ಲಿ ಹಿಡಿದ ಪ್ರತಿಯೊಬ್ಬ ವಧುವಿನ ಆಯ್ಕೆಗೆ, ಅವಳ ಹೆತ್ತವರ ಆಯ್ಕೆಗೆ ಬಿಟ್ಟ ವಿಷಯ. ಇಲ್ಲಿ ಸರಿತಪ್ಪುಗಳ ವಿಶ್ಲೇಷಣೆಗಿಂತ ಅವರವರ ಇಷ್ಟವನ್ನು ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯ. ಮೂರನೆಯ ವ್ಯಕ್ತಿ ಅದನ್ನು ಪ್ರಶ್ನಿಸತಕ್ಕದ್ದಲ್ಲ, ಅದಕ್ಕೆ ಆಕ್ಷೇಪಿಸತಕ್ಕದ್ದಲ್ಲ.

       ಆದರೂ ಇಂತಹಇರಬೇಕುಗಳಪಟ್ಟಿಯನ್ನು ಮುಂದಿಟ್ಟಿರುವ ಕನ್ಯಾಮಣಿ ಮತ್ತವರ ಹೆತ್ತವರು ಅರಸುತ್ತಿರುವುದೇನು? ಎಂದು ಪ್ರಶ್ನಿಸಿಕೊಳ್ಳುವುದು ಖಂಡಿತ ಅಸಾಧುವಲ್ಲ. ಸುಖೀ ಜೀವನಕ್ಕೆ ಆರ್ಥಿಕ ಸಂಪನ್ಮೂಲ, ನೌಕರಿ, ಸೌಕರ್ಯ ಸಾಧನಗಳು ಬೇಕು ನಿಜ. ಆದರೆ ಕೌಟುಂಬಿಕ ಜೀವನದ ಸುಖ ಸಂತೋಷಗಳನ್ನು ಕೇವಲ ಹಣದಿಂದ ಕೊಂಡುಕೊಳ್ಳಲು ಸಾಧ್ಯವಿದೆಯೇ? ನಗರದ ಐಶಾರಾಮಿ ಬದುಕಿನ ದೊಡ್ಡಸ್ತಿಕೆ ಕೊನೆಯವರೆಗೆ ಸಾರ್ಥಕತೆಯ ಅನುಭವವನು ನೀಡಬಲ್ಲದೇ? ಸಂಬಂಧ ಬೆಳಸುವಲ್ಲಿ ಹಣ ಐಶ್ವರ್ಯ ಅಂತಸ್ತುಗಳೇ ಪ್ರಮುಖವಾದರೆ ಪರಿವಾರದಲ್ಲಿ ಪ್ರೀತಿ ಸ್ನೇಹಗಳಿಗೆಲ್ಲಿ ಜಾಗ. ಮದುವೆ ಅನುಕೂಲಕ್ಕೆ, ಗಂಡು ಅನೂಕೂಲಸ್ಥನಾಗಿದ್ದರೆ ಸಾಕೋ? ಅಥವಾ ಅನುರೂಪನಾಗಿರಬೇಕೋ? ಇದೆಲ್ಲದರ ಜೊತೆಗೆ ಹೆಣ್ಣು ಗಂಡಿನಂತೆಯೇ ಓರ್ವ ಜೀವಂತ ವ್ಯಕ್ತಿಯೇ ಹೊರತು ಹಣವಂತನಿಗೆ ಮಾರಾಟವಾಗಬಲ್ಲ ವಸ್ತುವಲ್ಲವಲ್ಲ.

       ಬದುಕು ಹಣ-ಸಂಪತ್ತಿನಿಂದ ತುಂಬಿ ತುಳುಕುತ್ತಿರಬೇಕೆಂದಿಲ್ಲ, ಆದರೆ ಸಮೃದ್ಧವಾಗಿರಬೇಕು-ಪ್ರೀತಿ ಆತ್ಮೀಯತೆಗಳಿಂದ, ನಾವು-ನಮ್ಮವರೆಂಬ ಆರ್ದ್ರ ಸಂಬಂಧಗಳಿಂದ, ಇತರರ ಸುಖ ದುಃಖಗಳಿಗೆ ಸಂವೇದನಶೀಲವಾದ ನಡವಳಿಕೆಯಿಂದ, ಮಕ್ಕಳು ಕಿರಿಯರನ್ನು ಸರಿಯಾದ ಮಾರ್ಗದಲ್ಲಿ ನಡೆಸಬಲ್ಲ ಕರ್ತವ್ಯ ನಿರ್ವಹಣೆಯಿಂದ, ಪ್ರಕೃತಿಯ ಅಗಾಧತೆಯಲ್ಲಿ ವಿಶಾಲತೆ ಗಳಿಸಬಲ್ಲ ಬುದ್ಧಿಯಿಂದ, ನಿಸರ್ಗದ ಸೊಬಗ ಸವಿಯಬಲ್ಲ, ಕಲೆ- ಕಾವ್ಯ- ಸಂಗೀತ- ಕ್ರೀಡೆ-ಹಣ್ಣು ಹಂಪಲು ತಿಂಡಿ ತಿನಿಸುಗಳನ್ನು ಆಸ್ವಾದಿಸಬಲ್ಲ ಸಹೃದಯತೆಯಿಂದ, ಜೀವನಪ್ರೀತಿಯಿಂದ.

     ಇನ್ನು ಇಂದಿನ ನಗರೀಕೃತ ಬದುಕಿನ ಆಕರ್ಷಣೆಯ ಪ್ರಭಾವದಲ್ಲಿ ಕಳೆದುಹೋಗಿರುವ ಹುಡುಗಿಯರನ್ನೇ ಉದ್ಧೇಶಿಸಿ ನೇರವಾದ ಮಾತೊಂದನ್ನು ಹೇಳುವುದಾದರೆ - ಕೃಷಿ ಅಥವಾ ಇನ್ನು ಯಾವುದೋ ವ್ಯವಹಾರವನ್ನು ಮಾಡುತ್ತ ತಂದೆ ತಾಯಿ ಬಳಗದೊಟ್ಟಿಗೆ ಊರಿನ ಸ್ವಂತ ಮನೆಯಲ್ಲಿರುವ ಹುಡುಗನೋ ಅಥವಾ ಉದ್ಯೋಗ ನಿಮಿತ್ತ ಬೆಂಗಳೂರಿನಂತಹ ಪಟ್ಟಣದೊಳಗೆ ನೆಲೆಸಿದ್ದರೂ ಊರಿನೆಡೆಗೆ ಸೆಳೆತ ಹೊಂದಿರುವ ಹುಡುಗನೂ ಗಂಡಸೇ! ನಿಜ, ಅವನು ಜೆಹಾದಿ ಸಾಬಿಯಂತೆ ಅರೇಬಿಯಾದಿಂದ ಆಮದಾದ ಸೆಂಟಿನ ಪರಿಮಳದಿಂದ ಸೆಳೆಯಲಾರ, 250 ಸಿಸಿಯ ಬೈಕಿನ ಎತ್ತರದ ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿಕೊಂಡು ಪಾರ್ಕು ಮಾಲುಗಳಿಗೆ ಓಡಾಡಿಸಲಾರ, ಯಾರೂ ಸುಳಿಯದ ಊರಹೊರಗಿನ ಕಲ್ಲುಬಂಡೆಯ ಮೇಲೆ ಮೈಬೆಚ್ಚಾಗಾಗುವಂತೆ ತಾಗಿ ಕುಳಿತು ಸರಸ ಸಲ್ಲಾಪ ನಡೆಸಲಾರ. ಉತ್ತರದ ಹಿಂದೀ ಪ್ರದೇಶದ ತರುಣನಂತೆ ಬಾಲಿವುಡ್ಡಿನ ಹಿಂದಿ ಹಾಡಿನ ಅಂತ್ಯಾಕ್ಷರಿ ಹಾಡಿ ಮನಮೋಹಿಸಲಾರ, ಮೊಬೈಲಿಗೆ ರೊಮ್ಯಾಂಟಿಕ್ ಆದ ಶಾಯಿರಿ ಎಸ್ಸೆಮ್ಮೆಸ್ಗಳನ್ನು ಕಳಿಸಿ ಬಣ್ಣದ ಮಾತುಗಳಲ್ಲೇ ತೇಲಿಸಲಾರ. ಮೆಟ್ರೋ ನಗರದಲ್ಲಿ ಬೆಳೆದ ಯುವಕನಂತೆ ಇಂಗ್ಲಿಷ್ ಸಿನಿಮಾದ ಕತೆಯನ್ನು ಹೇಳುತ್ತಲೋ, ಗಿಟಾರಿನ ಒಂದೇ ತಂತಿಯನ್ನು ಮೀಟುತ್ತ ತಲೆಯನ್ನು ಜಾಸ್ತಿಯೇ ಅಲ್ಲಾಡಿಸಿ ರಾಕ್ ಮ್ಯೂಸಿಕ್ಕಿನ ಟ್ಯೂನನ್ನು ಗುನುಗುನಿಸಿ ಇಂಗ್ಲೀಷಿನಲ್ಲಿ ಪಟಪಟನೆ ಮಾತನಾಡಿ ಬೀಳಿಸಿಲಾರ. ಅಸಾಧ್ಯವೆಂದಲ್ಲ, ಅಸಕ್ತಿಯಿಲ್ಲ ಅಷ್ಟೇ. ಆದರೆ ನೆನಪಿರಲಿ ಗ್ರಾಮ್ಯಮನದ ಹುಡುನಲ್ಲಿಯೂ ಪ್ರೇಮಿಸಬಲ್ಲ ಹೃದಯವಿದೆ. ಸಂಸಾರದ ಸಂಕಷ್ಟಗಳಲ್ಲಿ ಭದ್ರತೆ ನೀಡಬಲ್ಲ ಸಾಮರ್ಥ್ಯವಿದೆ, ಬಾಳಕೊನೆಯವರೆಗೆ ಜೊತೆಯಾಗಿ ನಡೆಯಬಲ್ಲ ಮನವಿದೆ.

       ಎಲ್ಲರೂ ಹೀಗೆಂದಲ್ಲ. ಜೀವನಪ್ರೀತಿಯ ಪ್ರತಿಬಿಂಬದಂತಿರುವ, ಕುಟುಂಬದ ಜನರ ನಡುವಿನ ಕೊಂಡಿಯಂತೆ ಹಲವು ಸಂಕಷ್ಟಗಳ ನಡುವೆಯೂ ಆದರ್ಶ ದಾಂಪತ್ಯ ಜೀವನ ನಡೆಸುತ್ತಿರುವ ಅನೇಕ ಸೋದರಿಯರ, ಮಾತೆಯರ ಉದಾಹರಣೆಗಳನ್ನು ನಮ್ಮ ಸುತ್ತಲೇ ಕಾಣಬಹದು. ಪ್ರೇಮಕವಿಯೆಂದೇ ಪ್ರಸಿದ್ಧರಾಗಿದ್ದ ಕೆ ಎಸ್ ನರಸಿಂಹಸ್ವಾಮಿಯವರ ಒಂದು ಸುಂದರ ಕವನನೀವಲ್ಲವೇ?’ ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಸುಳಿದವರು ನೀವಲ್ಲವೇ ಎಂದು ಪ್ರಾರಂಭವಾಗುವ ಕವನದಲ್ಲಿ ಒಲ್ಮೆಯ ದಾಂಪತ್ಯದಲ್ಲಿ ಸಾರ್ಥಕ್ಯ ಕಾಣುತ್ತಿರುವ ಹೆಂಡತಿ ತನ್ನ ಗಂಡನನ್ನು ವರ್ಣಿಸುವುದನ್ನು ಕವಿ ಸುಂದರ ಸಾಲುಗಳಲ್ಲಿ ಪೋಣಿಸಿದ್ದಾರೆ. ಅದರ ಕೊನೆಯ ಚರಣದ ಕೊನೆಯ ಸಾಲು ಹೀಗಿದೆ ಗಂಡನಿಗೆ ಒಪ್ಪಾಗಿ ಕಂದನಿಗೆ ದಿಕ್ಕಾಗಿ ಪಯಣದಲಿ ಜೊತೆಯಾಗಿ ನಾನಿಲ್ಲವೇ?ನರಸಿಂಹಸ್ವಾಮಿಯವರಿಗೆನೋ ಬಾಳಪಯಣದಲ್ಲಿ ಜೊತೆಯಾಗಿ ವೆಂಕಮ್ಮನವರಿದ್ದರು. ಆದರೆ ನಾನು ನನ್ನಂತವರು . . . .? ಕಾದು ನೋಡಬೇಕು.

ಹಿಂದೆ ನಡೆದ ಹಾದಿಗಳಲಿ ಒಂದೆರಡು ಹೆಜ್ಜೆಗಳು

                ಬಹುತೇಕ ಸಂದರ್ಭಗಳಲ್ಲಿ ನಮ್ಮ ಸುತ್ತಲೂ ನಡೆದಿರುವ ದೊಡ್ಡದೊಂದು ಬದಲಾವಣೆ ಗಮನ ಸೆಳೆಯುವ ಮಟ್ಟಿಗೆ ನಮ್ಮ ಗ್ರಹಿಕೆಗೆ ಬಾರದೇ ಇರುತ್ತದೆ. ಕಾರಣವಿಷ್ಟೇ, ನಾವೂ ಆ ಪರಿವರ್ತನಾ ಪ್ರಕ್ರಿಯೆಯ ಅಂಗವಾಗಿರುತ್ತೇವೆ. ಬದಲಾವಣೆಯ ಪ್ರಕ್ರಿಯೆಯ ಏರಿಕೆಯ ಬೆಳವಣಿಗೆ –incremental change ನಮ್ಮ ಮುಂದೆಯೇ ನಡೆದು ಹಂಚಿ ದೀರ್ಘವಾಗಿ ನಮ್ಮ ಅನುಭವಕ್ಕೆ ಸಿಕ್ಕಿದ್ದರಿಂದ, ಒತ್ತಟ್ಟಿಗೇ ನಮ್ಮ ಗ್ರಹಿಕೆಗೆ ಬಂದಾಗ ಆಗುವ ಅನುಭವ ಅಂತಹ ಸಂದರ್ಭದಲ್ಲಿ ಆಗುವುದಿಲ್ಲ. ಉದಾಹರಣೆಗೆ ಮಗನೋ ಮಗಳೋ ಬೆಳೆದು ನಿಂತದ್ದು ಒಂದಿಷ್ಟು ವರ್ಷಗಳ ನಂತರ ಭೇಟಿಯಾದ ಬಂಧುವಿನ ಅಥವಾ ಸ್ನೇಹಿತನ ಗಮನಕ್ಕೆ ಬರುವಷ್ಟು ಹುಟ್ಟಿಸಿದ ತಂದೆಯ ಗ್ರಹಿಕೆಗೇ ಬಂದಿರುವುದಿಲ್ಲ. ಆದ್ದರಿಂದ ಮಾರ್ಪಾಡಾಗಿದ್ದು ಮನದ ಕದತಟ್ಟುವ ಮಟ್ಟಿಗೆ ಗಮನಕ್ಕೆ ಬರಬೇಕೂ ಅಂತಾದರೆ ದೇಶಕಾಲಗಳ ಪರಿಧಿಯಿಮದ ಒಂದು ಮಟ್ಟಿನ ಅಂತರದಲ್ಲಿ ನಿಂತು ನೋಡುವುದು ಅನಿವಾರ್ಯ.

              ಇಷ್ಟೊಂದು ಪೀಠೀಕೆ ಹಾಕಲಿಕ್ಕೂ ಕಾರಣವುಂಟು. ದಶಕದ ಹಿಂದೆ ವಿದ್ಯಾರ್ಥಿ ದೆಶೆಯಲ್ಲಿ ಆಶ್ರಯ ನೀಡಿದ್ದ ಹುಬ್ಬಳ್ಳಿಯ ಎಬಿಎಮ್‍ಎಮ್ ವಸತಿ ನಿಲಯದ ಆವರಣದಲ್ಲಿ ಹಾಗೂ ಓಡಾಡಿದ ವಿದ್ಯಾನಗರದ ಬೀದಿಗಳಲ್ಲಿ ನಾಲ್ಕಾರು ಹೆಜ್ಜೆ ನಡೆದಾಡುವ ಅವಕಾಶ ಅಚಾನಕ್ಕಾಗಿ ಇತ್ತೀಚೆಗೆ ಒದಗಿಬಂದಿತ್ತು. ಹತ್ತು ವರ್ಷಗಳಲ್ಲಿ ಹಾಸ್ಟೆಲ್ ಹಾಗೂ ವಿದ್ಯಾನಗರ ಪರಿಸರದಲ್ಲಿಯೂ ಸಾಕಷ್ಟು ಬದಲಾವಣೆಯಾಗಿದ್ದು ಸಹಜವೇ. ರಸ್ತೆಯ ಇಕ್ಕೆಲಗಲ್ಲಿ ಖಾಲಿಯಿದ್ದ ಸೈಟುಗಳಲ್ಲಿ ಬಹುಮಹಡಿ ಕಟ್ಟಡಗಳೆದ್ದಿವೆ. ಬೆರೆಳೆಣಿಕೆಯಷ್ಟೇ ಇದ್ದ ಜಾಲಿಯ ಮರಗಳೂ ಉರುಳಿವೆ. ನಾವೆಲ್ಲ ಕ್ರಿಕೆಟ್ ಆಡುತ್ತಿದ್ದ ಹಾಸ್ಟೆಲ್ ಮುಂದಿನ ಲೋಕಪ್ಪನ ಹಕ್ಕಲ ಧೂಳಿನ ಮೈದಾನವನ್ನು ಶಾಪಿಂಗ್ ಕಾಂಪ್ಲೆಕ್ಸ್, ಬೇಬಿ ಸಿಟ್ಟಿಂಗ್, ಕಿಂಡರ್‍ಗಾರ್ಡನ್ ಉದ್ಯಮಗಳು ಆಕ್ರಮಿಸಿಕೊಂಡಿವೆ. ಪಕ್ಕದ ಉದ್ಯಾನದಲ್ಲಿದ್ದ ದೇವಸ್ಥಾನದ ಸುತ್ತಲಿನ ಹಸಿರು ಕಾಣೆಯಾಗಿದೆ. ನಮ್ಮ ನಿತ್ಯ ಮುಂಜಾನೆಯ ಉಪಹಾರದ ತಾಣವಾಗಿದ್ದ ಉಡುಪಿ ದರ್ಶಿನಿಯ ಶೆಟ್ಟರು ಬೆಂಗಳೂರಿಗೆ ಸೇರಿ ಐದಾರು ವರ್ಷವೇ ಆಯಿತಂತೆ. ಅಲ್ಲೇ ಪಕ್ಕದ ಶಿವಶಕ್ತಿ ಕಾಂಡಿಮೆಂಟ ಅಂಗಡಿಯ ಅಂಕಲ್ ತಲೆಯ ಕೂದಲು ಕರ್ರಗಿದೆ ಆದರೆ ಕಿರುಗಡ್ಡ ಮೀಸೆ ಹಾಲಿನಷ್ಟು ಬೆಳ್ಳಗಾಗಿವೆ, ಜೊತೆಗೆ “ಅಂಗಡಿ ಮಾರಾಟಕ್ಕಿದೆ” ಬೋರ್ಡು ನೇತಾಡುತ್ತಿದೆ ಗೋಡೆಯ ಮೇಲೆ. ಸರತಿ ಸಾಲಿನಲ್ಲಿ ನಿಂತು ಮನೆಗೆ ಫೋನ್ ಮಾಡಲು ಕಾಯುತ್ತಿದ್ದ ಕರಿ ತೆಲುಗು ಕಿರಸ್ತನ ಟೆಲಿಫೋನ್ ಕಾಲದ ಗಾಳಿಯಲ್ಲಿ ಎಂದೋ ಉರುಳಿ ಹೋಗಿದೆ, ಎಲ್ಲಕಡೆಯಂತೆ. ಪಕ್ಕದ ಧೋಬಿ ಕುಟುಂಬದ ಹೆಣ್ಣುಮಕ್ಕಳು ಬಟ್ಟೆಯನ್ನು ಧಬಧಬನೆ ಕಲ್ಲಿನೆ ಮೇಲೆ ಕುಕ್ಕಿ ಹಿಂಡಿ ಎರಡು ಎಳೆಗಳನ್ನು ನೇಯ್ದು ಕಟ್ಟಿದ್ದ ಹಗ್ಗಕ್ಕೆ ಸಿಕ್ಕಿಸ ಒಣಗಿಸುತ್ತಿದ್ದದ್ದು ಕಾಣಸಿಗಲಿಲ್ಲ. ಮೊಯ್ನು ಪಾನ್ ಅಂಗಡಿ, ಕಿನ್ನಾಳ ಜಿಮ್ ನೋಡಲು ಮರೆತೆ!
ಇನ್ನು ನಾವು ಬದುಕಿನ ಪಾಠ ಕಲಿತ ಶಾಲೆ ಎಂದೇ ಹೇಳಬಹುದಾದ ಎಬಿಎಮ್‍ಎಮ್ ಹಾಸ್ಟೆಲಿನ ಕಂಪೌಂಡಿನೊಳಗೆ ಬಂದರೆ “ಅಭಿವೃದ್ಧಿ” “ಡೆವೆಲೊಪ್‍ಮೆಂಟ್” ಹೆಸರಿನಲ್ಲಿ ನಡೆದ ಅನೇಕ ಬದಲಾವಣೆಗಳು ಕಾಣಸಿಗುತ್ತವೆ. ಕೆಲವರ್ಷಗಳ ಕೆಳಗೆ ನಾವೆಲ್ಲ ಬಟ್ಟೆ ಒಗೆದು ಒಣಗಿಸುತ್ತಿದ್ದ ಜಾಗದಲ್ಲಿದ್ದ ಸಾಲು ತೆಂಗಿನಮರಗಳನ್ನು ಕೆಡಗಿ ಮೇಲೆಬ್ಬಿಸಿದ ಕಲ್ಯಾಣ ಮಂಟಪದ ಕಟ್ಟಡ ತೆಂಗಿನ ಮರದ ಎತ್ತರವನ್ನೂ ಮೀರಿಸಿ ತಲೆಯೆತ್ತಿದೆ. ದೊಡ್ಡಭಟ್ಟರು ಗಲಗಲ ಅಲುಗಿಸಿ ಉದುರಿಸಿದ ಹೂವನ್ನು ದೇವರ ಪೂಜೆಗೆ ಆಯ್ದುಕೊಳ್ಳುತ್ತಿದ್ದ ಪಾರಿಜಾತದ ಗಿಡ, ನಾನು ವಾಸವಾಗಿದ್ದ ರೂಮಿನ ಏಣಿಯಮೇಲೆ ಬೆಳೆದು, ಹತ್ತಿಳಿಯುವಾಗ ಪರಿಮಳ ಬೀರುತ್ತಿದ್ದ ಮಲ್ಲಿಗೆ ಬಳ್ಳಿ, ಸಂದಿಯಲ್ಲಿ ಬೆಳೆದಿದ್ದ ಸೀತಾಫಲದ ಗಿಡ ಯಾವುದೂ ಈಗ ಕಾಣಿಸುವುದಿಲ್ಲ. ಮೆಸ್ ಹಾಲಿನ ಮುಂದಿದ್ದ ಮಾವಿನ ಮರ ಹೋಮ ಮಾಡುವ ಕೋಣೆಗೆ ಜಾಗಮಾಡಿಕೊಟ್ಟಿದೆ.  ನಾವಿದ್ದಾಗ ಕೇವಲ ಐದಾರು ಟಾಯ್ಲೆಟ್ಟುಗಳಿದ್ದವು, ಈಗ ಇನ್ನೊಂದು ಮೂರ್ನಾಲ್ಕು ಜಾಸ್ತಿಯಾಗಿವೆ, ಆಗಬೇಕು, ಅತ್ಯಗತ್ಯ. ಮೆಸ್ ಹಾಲ್, ಟಿವಿ ರೂಮಿನ ಕತ್ತಲು ಇನ್ನಷ್ಟು ಹೆಚ್ಚಾಗಿದೆ. ಲೋಕಪ್ಪನ ಹಕ್ಕಲ ಮಕ್ಕಳಿಗೆಂದು ಶಾಲೆ ನಡೆಸುತ್ತಿದ್ದ ಕೋಣೆ ಕಾಣಿಸಿಲಿಲ್ಲ. ಗೇಟಿನ ಪಕ್ಕದಲ್ಲೇ ಅಂಗಡಿ ಮುಂಗಟ್ಟು ತಲೆಎತ್ತಿದೆ. 

         ಗಮನಕ್ಕೆ ಬಂದ ಇನ್ನೊಂದು ಮುಖ್ಯ ಅಂಶವನ್ನು ಇಲ್ಲಿ ಉಲ್ಲೇಖಿಸುವುದು ಒಳ್ಳೆಯದು. ಭಾನುವಾರ ಬೆಳಗಿನ ಎಂಟೂವರೆ ಒಂಭತ್ತರ ಹೊತ್ತು ಎಬಿಎಮ್‍ಎಮ್ ಹಾಸ್ಟೆಲಿನ ವಾತಾವರಣ ಹೇಗಿರುತ್ತಿತ್ತು ಅಂದರೆ- ಎರಡು ಕನ್ನಡ ಒಂದು ಇಂಗ್ಲೀಷ್ ಪೇಪರನ್ನು ಹದಿನೈದು ಮಂದಿ ಹಂಚಿಕೊಂಡು ಓದುತ್ತಿದ್ದೆವು ರೂಮ್ ನಂಬರ್ ಒಂದರ ಮುಂದೆ. ತಮ್ಮವರ ಕುಶಲವನ್ನು ಕೇಳಿ ಮನೆಗಳಿಂದ ಅಮ್ಮನೋ, ಅಪ್ಪನೋ ಅಕ್ಕನೋ ಮಾಡಿದ ಕಾಲ್‍ನಿಂದ ಮತ್ತೆ ಮತ್ತೆ ರಿಂಗಾಗುವ ಹಳೇ ಫೋನನ್ನು ಎತ್ತಿ ಮಲಗಿದ್ದವರನ್ನು ಕೂಗಿ ಕರೆದು ಎಬ್ಬಿಸುವ ಕೂಗಾಟ ಸದಾ ನಡೆಯುತ್ತಿತ್ತು. ಒಂದು ಕಡೆ ಭಾನುವಾರ ಬೆಳಗಿನ ಉಪಹಾರ ಅವಲಕ್ಕಿಗಾಗಿ ಮೆಸ್ ಹಾಲಿನ ಕಡೆಗೆ ತಾಟು ಲೋಟ ಹಿಡಿದು ಹೋಗುವವರ ಸಾಲು, ಇನ್ನೊಂದೆಡೆ ಬಾತ್‍ರೂಮ್ ಟಾಯ್ಲೆಟ್ ಕಡೆಗೆ ಬಕೆಟ್ ಟೂತ್‍ಬ್ರಶ್ ಹಿಡದು ಹೋಗಿ ಬರುವವರ ಸಾಲು, ಮಗದೊಂದು ಕಡೆ ಸಂಧ್ಯಾವಂದನೆಗೆ ಲೋಟ ಚಮಚ ಹಿಡಿದು ಹೋಗುವವರು, ಕ್ರಿಕೆಟ್ ಬ್ಯಾಟು ಬಾಲು ಹಿಡಿದು ವಾರ್ಡನ್ ಎದುರೇ ನಟ್ಟನಡುವಿನ ವರಾಂಡದಲ್ಲಿ ಆಡುವವರು, ನಡು ನಡುವೆ ಕುಶಲೋಪರಿ, ಹಾಸ್ಯ ಮಾತುಕತೆ ಒಟ್ಟಿನಲ್ಲಿ ಎಬಿಎಮ್‍ಎಮ್‍ನ ಭಾನುವಾರದ ಮುಂಜಾನೆ ಅತ್ಯಂತ ಜೀವಂತಿಕೆ ವೈಬ್ರನ್ಸಿಯಿಂದ ತುಳುಕುತ್ತಿತ್ತು. ಅಂದು ನಾನು ಎಬಿಎಮ್‍ಎಮ್ ಹಾಸ್ಟೆಲಿಗೆ ಹೋದಾಗ ಭಾನುವಾರ ಬೆಳಿಗ್ಗೆ ಸುಮಾರು ಎಂಟೂವರೆಯ ಹೊತ್ತು. ಮಾತನಾಡಿಸುವಾ ಎಂದರೆ ವರಾಂಡದಲ್ಲಿ ಒಂದು ನರಪಿಳ್ಳೆಯೂ ಕಾಣಿಸಲಿಲ್ಲ. ಟಿವಿ ಹಾಲಿನ ಕತ್ತಲೆಯಲ್ಲಿ ಮೂರ್ನಾಲ್ಕು ಮಂದಿ ಅವಲಕ್ಕಿ ಮೆಲ್ಲುತ್ತ ಅದೇ ಹಳೆ ಟಿವಿಯಲ್ಲಿ ಯಾವುದೋ ಕ್ರಿಕೆಟ್ ಮ್ಯಾಚು ನೋಡುತ್ತಿದ್ದರು. ರೂಮ್ ನಂಬರ್ ಒಂದರ ಎದುರು ಪೇಪರು ಕಾಣಲಿಲ್ಲ, ನಾವೆಲ್ಲ ಮನೆಯಿಂದ ಬರುವ ಫೋನಕರೆಗಾಗಿ ಕಾಯುತ್ತಿದ್ದ ಹಳೇ ಟೆಲಿಫೋನು ಕಾಣಿಸಲಿಲ್ಲ. 

           
            ಎಲ್ಲವೂ ಹೀಗೆ ಎಂದಲ್ಲ. ಕಾಲದ ಧಾವಂತದಲ್ಲಿ ತಮ್ಮತನವನ್ನು ಉಳಿಸಿಕೊಂಡವರೂ ಇಲ್ಲದಿಲ್ಲ. ಸುಮ್ಮನೆ ಹಾಸ್ಟಲಿನ ಅಡುಗೆ ಮನೆಯ ಕಡೆಗೆ ಇಣುಕಿ ನೋಡಿದಾಗೆ ಚಪಾತಿ ರೊಟ್ಟಿ ಮಾಡುವ ಬಾಯರು ಕಂಡು ಅವರೇ ಗುರುತಿಸಿ ‘ಆರಾಮಿದ್ದೀ ಇಲ್ಲೋ?’ ಎಂದು ವಿಚಾರಿಸಿ ಮಾತನಾಡಿಸಿದರು. ಸ್ವಲ್ಪ ವಯಸ್ಸಾಗಿದೆ, ಇನ್ನೊಂದೆರಡು ಹಲ್ಲುಗಳು ಉದುರಿವೆ, ಮುಖದ ಮೇಲಿನ ಸುಕ್ಕು ತಲೆಮೇಲಿನ ಬಿಳಿಕೂದಲುಗಳು ಜಾಸ್ತಿಯಾಗಿವೆ. ಆದರೆ ಬಾಯರ ವಾತ್ಸಲ್ಯ ಒಂಚೂರು ಕಡಿಮೆಯಾಗಿಲ್ಲ. ವಾರ್ಡನ್ನರನ್ನು ಹುಡುಕಿದೆ ಕಾಣಿಸಿಲಿಲ್ಲ. ನಮ್ಮ ವಾರ್ಡನ ರಘುಪತಿ ತಂತ್ರಿಗಳೆಂದೂ ಬದಲಾಗುವವರಲ್ಲ ಬಿಡಿ. ಹಾಗೆಯೇ ಉಡುಪಿ ದರ್ಶಿನಿಯಲ್ಲಿ ಚಹಾ ಕುಡಿಯೋಣ ಎಂದು ಬಂದೆ. ಶೆಟ್ಟರಿರಲಿಲ್ಲ, ಬೆಂಗಳೂರಿಗೆ ಹೊಗಿ ಐದು ವರ್ಷ ಆಯಿತು ಎಂದು ಪಕ್ಕದ ಶಿವಶಕ್ತಿ ಕಿರಾಣಿ ಅಂಗಡಿಯ ಅಂಕಲ್ ಹೇಳಿದರು. ಅಂಕಲ್ ನಗು ಮಾತ್ರ ಮಾಸಿಲ್ಲ, ಮೊದಲಿನಂತೇ ಮಾತು ಅದೇ ಆತ್ಮೀಯತೆ ಅವರ ಅಂಗಡಿಯಲ್ಲೂ ಅವೇ ಸಾಮಾನುಗಳು. ಎದುರಿನ ವಿಘ್ನೇಶ್ವರ ಪ್ರೌಢಶಾಲೆಯ ಕೊಠಡಿಗಳ ಸಂಖ್ಯೆ ಹೆಚ್ಚಾಗಿಲ್ಲ, ಅಷ್ಟೇ ಇದೆ. ಪ್ರೌಢಶಾಲೆಯ ಮೈದಾನದಲ್ಲಿ ಭಾನುವಾರದ ಸಂತೆ ಈಗಲೂ ನಡೆಯತ್ತಿದೆ. ಪಕ್ಕದ ಚರಂಡಿಯಲ್ಲಿ ಹೊರಳಾಡಿ ಎದ್ದ ನಾಡಹಂದಿಗಳು ಈಗಲೂ ಅದೇ ರೀತಿ ಗುಟುರು ಹಾಕುತ್ತ ಓಡುತ್ತಿವೆ ಜಾಲಿಗಿಡಗಳ ಪೊದೆಗಳ ನಡುವೆ.

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...