Tuesday, November 11, 2014

ಬಂಗಾಲದ ಭೂಮಿಯಲ್ಲಿ ಇಳಿಯುತ್ತಿವೆ ಭಯೋತ್ಪಾದನೆಯ ಬೇರುಗಳು

(ಪುಂಗವ 15/11/2014)

      ಬರ್ದ್ವಾನ್ ಪಶ್ಚಿಮ ಬಂಗಾಳ ರಾಜ್ಯದ ಅದೇ ಹೆಸರಿನ ಜಿಲ್ಲೆಯ ಜಿಲ್ಲಾಕೇಂದ್ರ. 24ನೇ ಜೈನ ತೀರ್ಥಂಕರ ವರ್ಧಮಾನ ಮಹಾವೀರ ಇಲ್ಲಿ ಕೆಲ ಕಾಲ ತಂಗಿದ್ದ ನೆನಪಿಗಾಗಿ ಬರ್ಧಮಾನ ಎಂಬ ಹೆಸರು ಹೊತ್ತು ಬ್ರಿಟಿಷರ ಕಾಲದಲ್ಲಿಬರ್ದ್ವಾನ್’ ಆಗಿ ಬದಲಾದ ನಗರಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಇದೇ ಬರ್ದ್ವಾನ್ನ ಖಾಗ್ರಾಘರ್ ಪ್ರದೇಶದಲ್ಲಿ ಕಳೆದ ಅಕ್ಟೋಬರ್ 2ರಂದು ನಡೆದ ಬಾಂಬ್ ಸ್ಫೋಟ ಬಂಗಾಲದ ನೆಲದಲ್ಲಿ ಕಳೆದ ಹಲವಾರು ವರ್ಷಗಳಿಂದ ಬೇರುಬಿಡುತ್ತಿರುವ ಇಸ್ಲಾಮೀ ಭಯೋತ್ಪಾದನೆಯ ಎಳೆಗಳನ್ನು ಹೊರಹಾಕಿದೆ.

ಹಿನ್ನೆಲೆ
      ಬರ್ದ್ವಾನ್ನ ಖಾಗ್ರಾಘರ್ ಪ್ರದೇಶದಲ್ಲಿ ನುರುಲ್ ಹಸನ್ ಚೌಧರಿ ಎಂಬ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕನಿಗೆ ಸೇರಿದ ಎರಡಂತಸ್ತಿನ ಕಟ್ಟಡದಲ್ಲಿ ಕಳೆದ ಅಕ್ಟೋಬರ್ 2ರಂದು ಸಂಭವಿಸಿದ ಸ್ಫೋಟದಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಮೃತಪಟ್ಟು ಇನ್ನೊಬ್ಬನಿಗೆ ಗಂಭೀರ ಗಾಯಗಳಾದವು. ನಂತರ ನಡೆದ ಪೋಲೀಸ್ ತನಿಖೆಯಲ್ಲಿ 50ಕ್ಕೂ ಹೆಚ್ಚು ಬಾಂಬ್‍ಗಳು(IED), ದೊಡ್ಡ ಪ್ರಮಾಣದ ಆರ್‍ಡಿಎಕ್ಸ್, ಕೈಗಡಿಯಾರದ ಡಯಲ್‍ಗಳು, ಸಿಮ್ ಕಾರ್ಡ, ನಕಾಶೆಗಳು, ಮೆಮರಿ ಕಾರ್ಡಗಳು, ನಕಲಿ ಪಾಸ್‍ಪೋರ್ಟ, ಮತದಾರರ ಗುರತಿನ ಪತ್ರ, ಅಲ್‍ಕೈದಾ ಮೊದಲಾದ ಇಸ್ಲಾಮೀ ಸಂಘಟನೆಗಳ ವೀಡಿಯೋ, ಕರಪತ್ರ ಮುಂತಾದವುಗಳನ್ನು ವಶಪಡಿಸಿಕೊಳ್ಳಲಾಯಿತು. ಪೋಲೀಸರಿಗೆ ಬಂದೂಕು ತೋರಿಸಿ ತನಿಖೆಗೆ ಅಡ್ಡಿಪಡಿಸಿ ದಾಖಲೆಗಳನ್ನು ನಾಶಪಡಿಸುವ ಯತ್ನ ಮಾಡಿದ ಉಗ್ರರ ಪತ್ನಿಯರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

      ಇದೇ ಕಟ್ಟಡದ ನೆಲೆಮಹಡಿ ಚುನಾವಣೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಾಲಯವಾಗಿತ್ತು. ಇಂಡಿಯನ್ ಮುಜಾಹಿದ್ದೀನ್‍ನ ಉಗ್ರ ಶಕೀಲ್ ಅಹ್ಮದ್ ಇದನ್ನು ಬಾಡಿಗೆಗೆ ಪಡೆದಿದ್ದು ಇಲ್ಲೊಂದು ಬಾಂಬ್ ತಯಾರಿಕಾ ಕಾರ್ಖಾನೆ ಕಾರ್ಯನಿರ್ವಹಿಸುತ್ತಿತ್ತು.


ಬಾಂಗ್ಲಾದೇಶದ ಜಮಾತ-ಉಲ್-ಮುಜಾಹಿದ್ದೀನ್ ನಂಟು
      ಬರ್ದ್ವಾನ್ ಸ್ಪೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾದಳ (NIA) ನಡೆಸುತ್ತಿರುವ ತನಿಖೆಯಿಂದ ಹೊರಬರುತ್ತಿರುವ ತಥ್ಯಗಳು ಪಶ್ಚಿಮ ಬಂಗಾಳದಲ್ಲಿ ಇಸ್ಲಾಮೀ ಮೂಲಭೂತವಾದ ಆತಂಕಕಾರಿ ಬೆಳವಣಿಗೆ ಮತ್ತು ರಾಜಕೀಯ ಲಾಭಕ್ಕಾಗಿ ದೇಶದ ಸುರಕ್ಷತೆಯನ್ನೆ ಬಲಿಕೊಡುವ ರಾಜ್ಯದ ಅಪ್ರಬುದ್ಧ ನಾಯಕತ್ವದ ಧೋರಣೆಯನ್ನು ಬಿಚ್ಚಿಡುತ್ತಿದೆ. ಬಾಂಗ್ಲಾದೇಶದ ಜಮಾತ್--ಇಸ್ಲಾಮಿ ಸಂಘಟನೆಯ ಭಯೋತ್ಪಾದಕ ಅಂಗವಾಗ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶದ (JMB) ಉಗ್ರ ಚಟುವಟಿಕೆಗಳಿಗೆ ಪಶ್ಚಿಮ ಬಂಗಾಲದ ಬದ್ರ್ವಾನ್, ಬಿರ್ಭುಮ್ ಮತ್ತು ಮುರ್ಶಿದಾಬಾದ್ ಜಿಲ್ಲೆಗಳಿಂದ ಸ್ಫೋಟಕಗಳ ಪೋರೈಕೆಯಾಗುತ್ತಿತ್ತು ಎಂದು ಕಂಡುಬಂದಿದೆ. ಅಂದರೆ ಬಾಂಗ್ಲಾದೇಶದ ಪ್ರಸಕ್ತ  ಶೇಖ್ ಹಸೀನಾ ನೇತೃತ್ವದ ಆವಾಮಿ ಲೀಗ್ ಸರ್ಕಾರದ ಕಠಿಣ ನಿರ್ಧಾರಗಳಿಂದ ಉಗ್ರ ಚಟುವಟಿಕೆಗಳಿಗೆ ಹಿನ್ನೆಡೆಯಾದಾಗ ಪಶ್ಚಿಮ ಬಂಗಾಳವನ್ನು ತಮ್ಮ ಕಾರಸ್ಥಾನವನ್ನಾಗಿ ಮಾಡಿಕೊಂಡು ಬಾಂಗ್ಲಾದೇಶದ ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ ನಡೆದದ್ದು ಸ್ಫಷ್ಟವಾಗುತ್ತದೆ. 2013ರಲ್ಲಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ  9000ಕ್ಕೂ ಹೆಚ್ಚು ಬಾಂಬ್‍ಗಳನ್ನು ಮತ್ತು 2285ಕೆಜಿಯಷ್ಟು ಆರ್‍ಡಿಎಕ್ಸ್‍ನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳಲ್ಲಿ 80ಪ್ರತಿಶತ ಬರ್ದ್ವಾನ್, ಬಿರ್ಭುಮ್ ಮತ್ತು ಮುರ್ಶಿದಾಬಾದ್ ಜಿಲ್ಲೆಗಳಲ್ಲಿ ದೊರಕಿವೆ. ತನಿಖೆಗೆ ಸಂಬಂಧಿಸಿದಂತೆ ಬದ್ರ್ವಾನಿನ ಸಿಮುಲಿಯಾದ ಹೆಣ್ಣುಮಕ್ಕಳ ಮದರಸಾವನ್ನು ಹುಡುಕಾಡಿದಾಗ ಅಲ್ಲಿ ಬಾಂಬ್‍ಗಳನ್ನು ಜೋಡಿಸಲಾಗುತ್ತಿತ್ತೆಂಬುದು ಕಂಡುಬಂದಿದೆ.

ಶಾರದಾ ಚಿಟ್‍ಫಂಡ, ಜಮಾತ ಮತ್ತು ಮಮತಾ ಬ್ಯಾನರ್ಜಿ
      ಬಡ ಮತ್ತು ಮಧ್ಯಮ ವರ್ಗದ ಆದಾಯವುಳ್ಳ ಸುಮಾರು 17ಲಕ್ಷ ಹೂಡಿಕೆದಾರರಿಗೆ ಪಂಗನಾಮ ಹಾಕಿದ ಸುಮಾರು 5000ಕೋಟಿ ರೂಪಾಯಿಗಳ ಶಾರದಾ ಚಿಟ್ ಫಂಡ್ ಹಗರಣ ರಾಷ್ಟ್ರವ್ಯಾಪಿ ಚರ್ಚೆಯಾಗಿದೆ. ಆದರೆ ಶಾರದಾ ಹಗರಣದಿಂದ ಗಳಿಸಿದ ಹಣ ಜಮಾತ-ಉಲ್-ಮುಜಾಹಿದ್ದೀನ ಉಗ್ರಚಟುವಟಿಕೆಗಳಿಗೆ ರವಾನೆಯಾಗಿದೆ ಎಂಬ ವಿಷಯವನ್ನು ಬಂಗಾಲದ ಪ್ರಸಿದ್ಧ ಆನಂದಬಾಜಾರ್ ಪತ್ರಿಕೆ ವರದಿ ಮಾಡಿದೆ. ತೃಣಮೂಲ ಕಾಂಗ್ರೆಸ್ ಮುಖಂಡ ಸುದಿಪ್ತೋ ಸೇನ್‍ಗೆ ಸೇರಿದ ಶಾರದಾ ಗ್ರುಪ್‍ನ ಚಿಟ್‍ಫಂಡ್ ಹಣವನ್ನು ಬಾಂಗ್ಲಾದೇಶಕ್ಕೆ ಸಾಗಿಸುವ ಕೆಲಸವನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಅಹ್ಮದ್ ಹಸನ್ ಇಮ್ರಾನ ನಿರ್ವಹಿಸರುವುದನ್ನು ಪತ್ರಿಕೆ ವರದಿ ಮಾಡಿದೆ. ವಿದ್ಯಾರ್ಥಿ ದೆಸೆಯಲ್ಲಿ ನಿಷೇಧಿತ ಸಂಘಟನೆ ಸಿಮಿಯ ಕಾರ್ಯಕರ್ತ ಮತ್ತು ಅಧ್ಯಕ್ಷನೂ ಆಗಿದ್ದ ಅಹ್ಮದ್ ಹಸನ್ ಬಾಂಗ್ಲಾದೇಶದ ಜಮಾತ ಜೊತೆ ನಿಕಟ ಸಂಬಂಧವನ್ನು ಹೊಂದಿದ್ದಾನೆ. ಹಸನ್ ಸಂಪಾದಕನಾಗಿರುವ ಬಂಗಾಲಿ ದಿನಪತ್ರಿಕೆದೈನಿಕ್ ಕಲಮ್ಜಿಹಾದಿ ಸಂದೇಶವನ್ನು ಹರಡವಲ್ಲಿ ನಿರತವಾಗಿದೆಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಆಪ್ತನಾಗಿರುವ ಅಹ್ಮದ್ ಹಸನ್ ಪಕ್ಷದ ಟಿಕೆಟ್ ಮೇಲೆ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾಗಿದ್ದಾನೆ. ಜೊತೆಗೆ ಬಾಂಗ್ಲಾದೇಶದ ಜಮಾತ್ ಸಂಘಟನೆ 2011 ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್‍ನ ವೆಚ್ಚಕ್ಕಾಗಿ ಧನಸಹಾಯ ಮಾಡಿತ್ತು ಎಂಬ ಗಂಭೀರ ಮಾಹಿತಿಯು ವರದಿಯಾಗಿದೆ. ಬದ್ರ್ವಾನ ಸ್ಫೋಟದ ತನಿಖೆಯಲ್ಲಿ ರಾಜ್ಯ ಸರ್ಕಾರವು ತನಿಖೆಗೆ ಅಸಹಕಾರ ನೀಡುತ್ತಿರುವುದರ ಜೊತೆಗೆ ರಾಷ್ಟ್ರೀಯ ತನಿಖಾದಳದ ತನಿಖೆಯನ್ನು ವಿರೋಧಿಸಿದೆ. ರಾಜ್ಯದ ಭಯೋತ್ಪಾದಕ ಸೆಲ್‍ಗಳು, ಗಡಿಯಲ್ಲಿ ಹೆಚ್ಚುತ್ತಿರುವ ಬಾಂಗ್ಲಾದೇಶೀಯರ ಒಳನುಸುಳುವಿಕೆ, ದಿನೇ ದಿನೇ ಹೊರಬರುತ್ತಿರವ ಸ್ಫೊಟಕ ಮಾಹಿತಿಗಳ ವಿಷಯದಲ್ಲಿ ಮೌನ ವಹಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರು, ಭಾರತೀಯ ಜನತಾ ಪಾರ್ಟಿ ಮತ್ತು ಕಮ್ಯುನಿಸ್ಟ್ ಪಕ್ಷಗಳು ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಎಂದು ದೂರಿದ್ದಾರೆ. ಇವುಗಳನ್ನು ಗಮನಿಸಿದರೆ ಪಶ್ಚಿಮ ಬಂಗಾಳ ಸರ್ಕಾರ ಉಗ್ರರನ್ನು ರಕ್ಷಿಸುತ್ತಿದೆಯೇ? ಬಾಂಗ್ಲಾದೇಶ ವಿರೋಧಿ ಉಗ್ರ ಸಂಘಟನೆಗಳನ್ನು ಪೋಷಿಸುತ್ತಿದೆಯೇ? ಎಂಬ ಸಂದೇಹ ಬರುವುದರ ಜೊತೆಗೆ, ತೃಣಮೂಲ ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ದೇಶದ ಸುರಕ್ಷೆಯನ್ನೇ ಬಲಿಕೊಡಲು ಮುಂದಾಯಿತೇ? ಎಂಬ ಸಂಶಯ ಸಹಜವಾಗಿ ಮೂಡುತ್ತದೆ.

ಬೃಹತ್ ಬಾಂಗ್ಲಾದೇಶದ ಸ್ಥಾಪನೆಯೇ ಗುರಿ
      ಬರ್ದ್ವಾನ್ ಸ್ಫೋಟಕ್ಕೆ ಸಂಬಂಧಿಸಿದಂತೆ ಭಾರತ ಬಾಂಗ್ಲಾದೇಶ ಸರ್ಕಾರಕ್ಕೆ ನೀಡಿದ ಕಡತದಲ್ಲಿ ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶದಲ್ಲಿ ವಿಲೀನಗೊಳಿಸಿ ಬೃಹತ್ ಬಾಂಗ್ಲಾದೇಶವನ್ನು ಸ್ಥಾಪಿಸುವುದು ಉಗ್ರ ಸಂಘಟನೆಗಳ ಗುರಿ ಎಂದು ಹೇಳಿದೆ. ಇದರ ಮೊದಲ ಹೆಜ್ಜೆಯೇ ಪಶ್ಚಿಮ ಬಂಗಾಳ, ಆಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ಉಗ್ರಗಾಮಿ ಸೆಲ್‍ಗಳನ್ನು ಆರಂಭಿಸಿ ಅನೇಕ ಮಿನಿ ಬಾಂಗ್ಲಾದೇಶಗಳನ್ನು ಸ್ಥಾಪಿಸುವುದು. ಬಾಂಗ್ಲದೇಶದ ಬಂದರ್‍ಬನ್ ಮತ್ತು ಚಿತಗೊಂಗ್‍ಗಳಲ್ಲಿರುವ ಜಮಾತ್-ಉಲ್-ಮುಜಾಹಿದ್ದೀನಿನ ಕ್ಯಾಂಪ್‍ಗಳನ್ನು ಭಾರತದಲ್ಲಿ ಭಯೋತ್ಪಾದಕತೆಯನ್ನು ಬೆಳೆಸಲು ಲಾಂಚ್ ಪ್ಯಾಡ್‍ಗಳನ್ನಾಗಿ ಬಳಸಲಾಗುತ್ತಿದೆ. ಬಾಂಗ್ಲಾದೇಶದ ಅನ್ಸಾರುಲ್ಲಾ ಬಾಂಗ್ಲಾ, ಜಮಾಯತುಲ್ ಮುಸ್ಲಿಮೀನ್, ಹೆಪಾಜತ್ ಇಸ್ಲಾಮ್, ತಂಜಿಮ್ ತಮಿರುದ್ದೀನ ಮುಂತಾದ ಸಂಘಟನೆಗಳು ಜಮಾತ್‍ನ ಕೆಲಸದಲ್ಲಿ ಸಹಕಾ ನೀಡುತ್ತಿವೆ ಎಂದು ಭಾರತ ಬಾಂಗ್ಲಾ ಸರ್ಕಾರಕ್ಕೆ ತಿಳಿಸಿದೆ. ಅಲ್ಲದೇ ಜಮಾತ್ ಬೃಹತ್ ಬಾಂಗ್ಲಾದೇಶದ ಸಾಕಾರಕ್ಕಾಗಿ ಅಲ್‍ಕೈದಾ ಮೊದಲಾದ ಸಂಘಟನೆಗಳೊಡನೆ ಕೈಜೋಡಿಸುತ್ತಿದೆ.

       ಭಾರತದ ಪರವಾಗಿರುವ ಶೇಖ ಹಸೀನಾ ನೇತೃತ್ವದ ಬಾಂಗ್ಲಾದೇಶದ ಪ್ರಸಕ್ತ ಸರ್ಕಾರ ಭಯೋತ್ಪಾದಕ ಸಂಘಟನೆಗಳನ್ನು ಮಟ್ಟ ಹಾಕಲು ಎಲ್ಲ ಸಹಕಾರಗಳನ್ನು ನೀಡಲು ಸಿದ್ಧವಾಗಿರುವಾಗಲೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸ್ವಾರ್ಥ, ಮತಬ್ಯಾಂಕ್ ರಾಜಕೀಯ ಮತ್ತು ಮೊಂಡುತನದಿಂದಾಗಿ ಪಶ್ಚಿಮ ಬಂಗಾಳ ಇಸ್ಲಾಮೀ ಉಗ್ರರ ಕಾರಸ್ಥಾನವಾಗಿ ಬದಲಾಗುತ್ತಿದೆ. ಎರಡೂ ದೇಶಗಳ ರಾಷ್ಟ್ರೀಯ ಸುರಕ್ಷೆಗೆ ಕಂಟಕವಾಗಿರುವ ಜಮಾತ್‍ನಂತಹ ಭಯೋತ್ಪಾದಕ ಸಂಘಟನೆಗಳನ್ನು ಮಟ್ಟಹಾಕಲು ಸರ್ಕಾರಗಳ ನಡುವೆ ಸಹಕಾರ ಅನಿವಾರ್ಯವಾಗಿದೆ. ಹಾಗೆಯೇ ರಾಜಕೀಯ ಲಾಭದ ಲೆಕ್ಕಾಚಾರದಿಂದ ಹೊರಬಂದು ದೇಶದ ಸುರಕ್ಷೆಯ ಮಹತ್ವವನ್ನು ಅರಿಯುವುದನ್ನು ಮಮತಾರಂತಹ ರಾಜಕೀಯ ನಾಯಕರು ರೂಢಿಸಿಕೊಳ್ಳಬೇಕಾಗಿದೆ.

Tuesday, October 28, 2014

ಶುಚಿಯಾಗಲಿ ಭಾರತ

ಸ್ವಚ್ಛತೆಯೆಡೆಗೆ ಒಂದು ಹೆಜ್ಜೆ

(ಪುಂಗವ 01/11/2014)

            ಮಹಾತ್ಮಾ ಗಾಂಧಿಯವರ 150ನೇ ಜಯಂತಿಯ ಸಂದರ್ಭದ (2019) ಹೊತ್ತಿಗೆ ಕೊಳೆಯನ್ನು ತೊಳೆದು ಸ್ವಚ್ಛ ಭಾರತ ನಿರ್ಮಿಸುವ ಮಹತ್ವಾಕಾಂಕ್ಷಿ ಆಂದೋಲನಕ್ಕೆ ದೇಶದೆಲ್ಲೆಡೆ ದೊಡ್ಡ ಪ್ರಮಾಣದ ಬೆಂಬಲ ವ್ಯಕ್ತವಾಗುತ್ತಿದೆ. ಬಾಹ್ಯ ಶುಚಿಯ ಜೊತೆಗೆ ಅಂತರಂಗದ ನೈರ್ಮಲ್ಯಕ್ಕೂ ಒತ್ತು ಕೊಟ್ಟ ಶ್ರೇಷ್ಠ ಪರಂಪರೆಯುಳ್ಳ ಭಾರತದಲ್ಲಿ ಸ್ವಚ್ಛತೆಗಾಗಿ ಸರ್ಕಾರವೇ ಒಂದು ರಾಷ್ಟ್ರವ್ಯಾಪಿ ಯೋಜನೆ ರೂಪಿಸಬೇಕಾಗಿ ಬಂದಿರುವುದು ವಿಪರ್ಯಾಸವಾಗಿ ಕಂಡರೂ, ಹೆಚ್ಚುತ್ತಿರುವ ನಗರೀಕರಣ ಮತ್ತು ನಿತ್ಯ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣವನ್ನು ಗಮನಿಸಿದರೆ ನೈರ್ಮಲ್ಯೀಕರಣ ಜನಾಂದೋಲನವಾಗಬೇಕಾದ ಅನಿವಾರ್ಯತೆಯನ್ನು ಮನಗಾಣಬಹುದು. 

ಕಸ ಮಾಡದೇ ಇರುವುದೇ ಮೊದಲ ಹೆಜ್ಜೆ
           ಕೊಳೆಯನ್ನು ಸ್ವಚ್ಛಗೊಳಿಸುವುದು ಒಂದು ಕೆಲಸವಾದರೆ ಕಸದ ಉತ್ಪತ್ತಿಯನ್ನು ಮಿತಗೊಳಿಸುವುದೂ ಸ್ವಚ್ಛತೆಯ ಭಾಗವೇ ಆಗಿದೆ. ಉದಾಹರಣೆಗೆ ಪ್ಲಾಸ್ಟಿಕ್ ಬಳಕೆಯನ್ನು ಬಿಡುವುದು, ಎಲ್ಲೆಂದರಲ್ಲಿ ಕಸವನ್ನು ಎಸೆಯದೇ ಇರುವುದು, ಕಂಡಕಂಡಲ್ಲಿ ಉಗುಳದೇ ಇರುವುದು, ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಂಗಡನೆ ಮಾಡಿ ಪುನರ್ಬಳಕೆ ಮಾಡುವುದು ಮೊದಲಾದ ಚಿಕ್ಕ ಚಿಕ್ಕ ಕ್ರಮಗಳಿಂದಲೇ ಸಾಕಷ್ಟುಮಟ್ಟಿಗೆ  ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು. 

ಮಿತಬಳಕೆ ಮತ್ತು ಸರಳ ಜೀವನ 
           ಕೊಳ್ಳುಬಾಕತನ ಮತ್ತು ಐಶಾರಾಮಿ ಜೀವನಶೈಲಿಗಳು ಪರಿಸರದ ಮೇಲೆ ಅತಿಯಾದ ಒತ್ತಡ ಹೇರುತ್ತಿರುವುದು ಒಂದೆಡೆಯಾದರೆ, ಅಂತಹ ಜೀವನಶೈಲಿಗೆ ಬೇಕಾಗುವ ವಸ್ತುಗಳ ಉತ್ಪಾದನೆ, ಸಾಗಾಣಿಕೆಗಳು ಗಣನೀಯ ಪ್ರಮಾಣದ ತ್ಯಾಜ್ಯಗಳನ್ನು ಉತ್ಪಾದಿಸುತ್ತವೆ. ಆದ್ದರಿಂದ ಮಿತಬಳಕೆ ಮತ್ತು ಶಿಸ್ತುಬದ್ಧ ಸರಳ ಜೀವನವನ್ನು ಮೈಗೂಡಿಸಿಕೊಳ್ಳುವ ಸಂದೇಶವೂ ಸ್ವಚ್ಛ ಭಾರತ ಆಂದೋಲನದಿಂದ ಜನಮಾನಸವನ್ನು ತಲುಪಲಿ.

ಮಕ್ಕಳಿಗೂ ಸಿಗಲಿ ಶುಚಿತ್ವದ ಶಿಕ್ಷಣ
         ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳಲ್ಲಿ ಪ್ರತಿದಿನ ಮುಂಜಾನೆಯ ಪ್ರಾರ್ಥನೆಯ ಮೊದಲು ವಿದ್ಯಾರ್ಥಿಗಳು ಕೊಠಡಿಯನ್ನು, ಶಾಲಾ ಮೈದಾನವನ್ನು ಸ್ವಚ್ಛಗೊಳಿಸುವುದು ಕಡ್ಡಾಯವಾಗಿತ್ತು. ಇಂದಿಗೂ ಅನೇಕ ಶಾಲೆಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಅಂದರೆ ಸ್ವಚ್ಛತೆ ಶಾಲೆಯಲ್ಲಿ ಮಗುವಿಗೆ ಸಿಗುವ ಮೊದಲನೇ ಪಾಠ. ಆದರೆ ಕಾರಣಾಂತರಗಳಿಂದ ಈ ಪದ್ಧತಿ ಕಣ್ಮರೆಯಾಗಿರುವದಷ್ಟೇ ಅಲ್ಲ ಅಪರೂಪಕ್ಕೆ ಮಕ್ಕಳ ಕೈಯಲ್ಲಿ ಕಸ ಸ್ವಚ್ಛಗೊಳಿಸಿದ ಶಿಕ್ಷಕರನ್ನು ಕಟಕಟೆಯಲ್ಲಿ ನಿಲ್ಲಿಸಿದ ಉದಾಹರಣೆಗಳೂ ವರದಿಯಾಗಿವೆ. ಸ್ವಚ್ಛತೆಯೂ ಮಗುವಿನ ಶಿಕ್ಷಣದ ಒಂದು ಅಂಗ. ಈ ನಿಟ್ಟಿನಲ್ಲಿ ಮಕ್ಕಳ ದಿನಾಚರಣೆ ನವಂಬರ್ 14ರಿಂದ ಒಂದು ವಾರಗಳ ಕಾಲ ದೇಶದಾದ್ಯಂತ ಶಾಲೆಗಳನ್ನು ನೈರ್ಮಲ್ಯೀಕರಣದ ಕಾರ್ಯದಲ್ಲಿ ತೊಡಗಿಸುವ ಬಾಲ ಸ್ವಚ್ಛತಾ ಅಭಿಯಾನವನ್ನು ರೂಪಿಸಲಾಗಿದೆ. ನಮ್ಮ ಮಕ್ಕಳ ಶುಚಿತ್ವದ ಶಿಕ್ಷಣ ಇಲ್ಲಿಂದ ಪ್ರಾರಂಭವಾಗಲಿ.

ನಿರ್ಮಲವಾಗಲಿ ಮನ
         ಪರಿಸರ ಶುಚಿಗೊಳ್ಳುವುದರ ಜೊತೆಗೆ ಜನರ ಮನೋಬುದ್ಧಿಗಳೂ ನಿರ್ಮಲಗೊಳ್ಳಬೇಕಾದ ಅಗತ್ಯವಿದೆ. ನಾವು ವಾಸಿಸುವ ಪ್ರದೇಶ ಪರಿಸರವನ್ನು ಕಲಿಷಿತಗೊಳಿಸಬಾರದೆಂಬ ಸಾಮಾಜಿಕ ಪ್ರಜ್ಞೆ ಸದಾ ಜಾಗೃತವಾಗಿರದ ಹೊರತು ಒಮ್ಮೆ ಸರ್ಕಾರ ಅಥವಾ ಯಾರದೋ ಪ್ರಯತ್ನದಿಂದ ಸ್ವಚ್ಛಗೊಂಡ ಪ್ರದೇಶ ಯಾವಾಗಲೂ ಶುಚಿಯಾಗಿಯೇ ಇರಲಾರದು. ನಮ್ಮ ಮನೆಗಳನ್ನು ಸ್ವಚ್ಛವಾಗಿರಿಸಿ ಕಸವನ್ನು ತಂದು ಬೀದಿಯಲ್ಲಿ ಸುರಿಯುವ ಮಾನಸಿಕತೆಯು ಜವಾಬ್ದಾರಿಯುತ ನಾಗರಿಕರಲ್ಲಿರಬಾರದು. ಸ್ವಚ್ಛ ಭಾರತ ಅಭಿಯಾನ ಸ್ಥಳದ ಸ್ವಚ್ಛತೆಯ ಜೊತೆಗೆ ಶಿಸ್ತು ಮತ್ತು ಶುಚಿತ್ವನ್ನು ಕಾಪಾಡಿಕೊಳ್ಳವಲ್ಲಿ ನಾಗರಿಕರನ್ನು ಶಿಕ್ಷಿತರನ್ನಾಗಿಸಲಿ. 

          ದೇಶವನ್ನು ಕಸಮುಕ್ತಗೊಳಿಸುವ ನಿಟ್ಟನಲ್ಲಿ ಸರ್ಕಾರಿ ಯೋಜನೆಯನ್ನು ಜನಾಂದೋಲನವಾಗಿ ಪರಿವರ್ತಿಸಿ ನಾಗರಿಕರ ಹೊಣೆಗಾರಿಕೆಯನ್ನು ಎಚ್ಚರಿಸುವತ್ತ ನಡೆದಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಕಾರ್ಯದಲ್ಲಿ ಸಾಂಕೇತಿಕವಾಗಿಯಾದರೂ ಜೋಡಿಕೊಂಡ ಸಮಾಜದ ಅನೇಕ ಪ್ರಭಾವಿ ವ್ಯಕ್ತಿಗಳು, ಸೆಲೆಬ್ರಿಟಿಗಳು ಸ್ವಚ್ಛತೆಯ ವಿಷಯವನ್ನು ಜನಮಾನಸಕ್ಕೆ ತಲುಪಿಸಲು ಯತ್ನಿಸುತ್ತಿದ್ದಾರೆ. ಆದರೆ ಸ್ವಚ್ಛತೆಯ ಕೆಲಸ ಒಂದೆರಡು ದಿನದ್ದಲ್ಲ. ನಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಕಾರ್ಯ ನಮ್ಮ ಬದುಕಿನ ಅಂಗವೇ ಆಗಿದೆ. ಸೀಮಿತ ಅವಧಿಯ ಸರ್ಕಾರಿ ಯೋಜನೆಯನ್ನು ಸಮಾಜ ನಿರಂತರವಾಗಿ ಮುಂದೊಯ್ದರೆ ಮಾತ್ರ ಒಳಿತಾದ ಪರಿವರ್ತನೆ ಸ್ಥಿರವಾಗಬಲ್ಲದು. ಜಾಗೃತ ದೇಶಭಕ್ತ ಸಮಾಜವೇ ದೇಶದ ಭವಿಷ್ಯದ ನಿರ್ಮಾತೃವಾಗಿದೆ.



ನಾವು ಹೀಗೆ ಮಾಡಬಹುದೇ?
  • ನಮ್ಮ ಊರಿನ ಶಾಲೆಗೆ ಶೌಚಾಲಯ ಕಟ್ಟಿಸಿ ಅದರ ನಿರ್ವಹಣೆಗೆ ಬೇಕಾದ ವ್ಯವಸ್ಥೆ ಮಾಡುವುದು.
  • ನಮ್ಮ ಊರಿನ ಕೇಂದ್ರ ಸ್ಥಾನ-ಅಂಗಡಿ ಮುಂಗಟ್ಟು, ಪಂಚಾಯತಿ ಕಟ್ಟೆಯ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಿಸುವುದು, ಕಸದ ತೊಟ್ಟಿಗಳನ್ನು ಇಡುವುದು.
  • ಊರಿನ ಯುವಕರು ಒಟ್ಟುಗೂಡಿ ಸ್ವಚ್ಛತೆಗಾಗಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಶ್ರಮದಾನ ಮಾಡುವುದು.
  • ನಮ್ಮ ನಮ್ಮ ಮನೆಗಳಲ್ಲಿ ತ್ಯಾಜ್ಯಗಳ ವಿಂಗಡನೆ ಮಾಡಿ, ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳನ್ನು ಪುನರ್ನವೀಕರಣಕ್ಕೆ ನೀಡುವುದು. ಜೈವಿಕ ತ್ಯಾಜ್ಯಗಳು, ತರಕಾರಿ ಸಿಪ್ಪೆ ಇತ್ಯಾದಿಗಳನ್ನು ಕಂಪೋಸ್ಟ ಮಾಡಲು, ಗೊಬ್ಬರದ ಅನಿಲ ತಯಾರಿಕೆಗೆ ಅಥವಾ ನೇರವಾಗಿ ಮರಗಳ ಬುಡಕ್ಕೆ ಗೊಬ್ಬರವಾಗಿ ಬಳಸುವುದು.
  • ವಿಶೇಷ ಕಾರ್ಯಕ್ರಮಗಳು, ಪೂಜೆ, ಉತ್ಸವಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಸಮರ್ಪಕ ವಿಲೇವಾರಿಯ ಬಗ್ಗೆ, ಆವರಣದ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದು.
  • ನೈರ್ಮಲ್ಯದ ಮಹತ್ವ, ನಮ್ಮ ಸುತ್ತಲಿನ ಪರಿಸರವನ್ನು ಕೊಳಕುಮಾಡದಿರುವುದು, ನಿತ್ಯ ಜೀವನದಲ್ಲಿ ಅನುಸರಿಸಬೇಕಾದ ಶಿಸ್ತಿನ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವುದು


ಸ್ವಚ್ಛ ಭಾರತ ಅಭಿಯಾನದ ಪ್ರತಿಜ್ಞಾವಿಧಿ.

ಭಾರತ ದೇಶವು ರಾಜಕೀಯ ಮುಕ್ತವಾಗಿರಬೇಕೆಂಬುದಷ್ಟೇ ಅಲ್ಲ ಕಸ ಮತ್ತು ಕೊಳಕಿನಿಂದಲೂ ಮುಕ್ತವಾಗಿರಬೇಕೆಂಬುದು ಗಾಂಧೀಜಿಯ ಕನಸಾಗಿತ್ತು.

ಗಾಂಧೀಜಿ ನಮ್ಮ ದೇಶವನ್ನ ಮುಕ್ತಗೊಳಿಸಿದರು. ಈಗ ನಮ್ಮ ದೇಶವನ್ನ ಕೊಳಕುಮುಕ್ತವಾಗಿ ಮಾಡುವುದು ನಮ್ಮ ಕರ್ತವ್ಯ.
ಸ್ವಚ್ಛತೆಗಾಗಿ ನಮಗೆ ಕೈಲಾಗಿದ್ದನ್ನ ಮಾಡುತ್ತೇನೆ ಮತ್ತು ಅದಕ್ಕಾಗಿ ಸಮಯ ಮೀಸಲಿರಿಸುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ.

ಪ್ರತೀ ವರ್ಷ 100 ಗಂಟೆ ಅಥವಾ ವಾರಕ್ಕೆ 2 ಗಂಟೆ ಈ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ.

ನಾನು ಎಲ್ಲೆಂದರಲ್ಲಿ ಕಸ ಬಿಸಾಡುವುದಿಲ್ಲ, ಬೇರೆಯವರಿಗೂ ಮಾಡಲು ಬಿಡುವುದಿಲ್ಲ.

ಈ ಸ್ವಚ್ಛತಾ ಕಾರ್ಯವನ್ನ ನನ್ನಿಂದಲೇ ಆರಂಭಿಸಿ, ನನ್ನ ಕುಟುಂಬ, ನನ್ನ ಸುತ್ತಮುತ್ತಲ ಪ್ರದೇಶ, ನನ್ನ ಗ್ರಾಮ ಮತ್ತು ನನ್ನ ಕಚೇರಿ ಸ್ಥಳವನ್ನೂ ಈ ಕೆಲಸಕ್ಕೆ ತೊಡಗಿಸುತ್ತೇನೆ.

ಕೆಲ ರಾಷ್ಟ್ರಗಳು ತುಂಬಾ ಸ್ವಚ್ಛವಾಗಿರುವುದು ಯಾಕೆಂದರೆ ಆ ದೇಶದ ನಾಗರಿಕರು ಕಸ ಹರಗುವುದಿಲ್ಲ, ಬಿಸಾಡುವುದಿಲ್ಲ, ಬೇರೆಯವರಿಗೂ ಆ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂಬುದು ನನಗೆ ಗೊತ್ತು.

ಈ ವಿಷಯವನ್ನ ಗಮನದಲ್ಲಿರಿಸಿಕೊಂಡು ಬೀದಿಯಿಂದ ಬೀದಿಗೆ, ಗ್ರಾಮದಿಂದ ಗ್ರಾಮಕ್ಕೆ ಸಂದೇಶ ಹರಡುತ್ತೇನೆ.

ನಾನು ಶತಥ ಪಡೆಯುತ್ತಿರುವಂತೆಯೇ ಇನ್ನೂ 100ಕ್ಕೂ ಹೆಚ್ಚು ಜನರಿಗೂ ಪ್ರತಿಜ್ಞಾವಿಧಿ ಸಿಗುವಂತೆ ಮಾಡುತ್ತೇನೆ. ಅವರೂ ಕೂಡ ಸ್ವಚ್ಛತಾ ಕಾರ್ಯದಲ್ಲಿ ನೂರು ಗಂಟೆಯಾದರೂ ಮೀಸಲಿಡುವಂತೆ ಮಾಡುತ್ತೇನೆ.

ನನ್ನ ಈ ಮೊದಲ ಹೆಜ್ಜೆಯು ದೇಶವನ್ನ ಸ್ವಚ್ಛವಾಗಿಡಲು ಸಹಾಯವಾಗುತ್ತದೆ ಎಂಬ ನಂಬಿಕೆ ಇದೆ.


Saturday, September 27, 2014

ನೆರೆಹೊರೆಯ ಏಷಿಯ ದೇಶಗಳ ನೇತೃತ್ವ ವಹಿಸುವತ್ತ ಭಾರತ "ಅಸಾಧ್ಯವಲ್ಲ ಅಖಂಡ ಭಾರತ"


(ಪುಂಗವ: 01/10/2014)

        ವಿಷ್ಣುಪುರಾಣದಲ್ಲಿ ಉಲ್ಲಿಖಿತವಾಗಿರುವಂತೆ ‘ಉತ್ತರಮ್ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಮ್| ವರ್ಷಂ ತದ್ ಭಾರತಮ್ ನಾಮ ಭಾರತೀ ಯತ್ರ ಸಂತತಿಃ|| ಅಂದರೆ ಉತ್ತರದ ಹಿಮಾಲಯ ಮತ್ತು ದಕ್ಷಿಣದ ಸಾಗರದ ಪರ್ಯಂತ ಪಸರಿಸಿರುವ ಪ್ರದೇಶವನ್ನು ಭಾರತವರ್ಷ ಎಂದು ಕರೆಯಲಾಗುತ್ತದೆ. ಹಾಗೆಯೇ ಬ್ರಹಸ್ಪತಿ ಆಗಮದ ಒಂದು ಶ್ಲೋಕದಲ್ಲಿ ‘ಹಿಮಾಲಯಂ ಸಮಾರಭ್ಯ ಯಾವತ್ ಇಂದು ಸರೋವರಮ್| ತಂ ದೇವನಿರ್ಮಿತಮ್ ದೇಶಮ್ ಹಿಂದುಸ್ತಾನಮ್ ಪ್ರಚಕ್ಷತೇ||’ - ಹಿಮಾಲಯದಿಂದ ಆರಂಭಗೊಂಡು ಹಿಂದೂ ಮಹಾಸಾಗರದ ನಡುವಿನ ದೇವನಿರ್ಮಿತ ದೇಶವನ್ನು ಹಿಂದುಸ್ತಾನವೆಂದು ಕರೆಯಲಾಗುತ್ತದೆ ಎಂದು ಹೇಳಲಾಗಿದೆ. ಧಾರ್ಮಿಕ ವಿಧಿವಿಧಾನಗಳ ಆರಂಭದಲ್ಲಿ ಸಂಕಲ್ಪಮಾಡುವಾಗ ಜಂಬೂದ್ವೀಪೇ, ಭರತಖಂಡೇ ಭಾರತವರ್ಷೇ ಹೀಗೆ ಸ್ಥಳನಿರ್ದೇಶವನ್ನು ಹೇಳಲಾಗುತ್ತದೆ. ವಿಶ್ವದ ನಕ್ಷೆಯನ್ನು ನಮ್ಮ ಕಣ್ಣಮುಂದಿರಿಸಿದರೆ ಸುಮಾರು 5000 ಶಿಖರಗಳು ಮತ್ತು 6000ಕ್ಕೂ ಹೆಚ್ಚು ನದಿಗಳ ಮೂಲವಾದ ಹಿಮಾಲಯ ಪರ್ವತ ಶ್ರೇಣಿಯು ಪೂರ್ವದಲ್ಲಿ ಇಂದಿನ ಇಂಡೋನೇಶಿಯವರೆಗೆ ಮತ್ತು ಪಶ್ಚಿಮದಲ್ಲಿ ಇಂದಿನ ಇರಾನಿನವರೆಗೆ ವ್ಯಾಪಿಸಿರುವುದು ತಿಳಿಯುತ್ತದೆ. ಅಂತೆಯೇ ಹಿಂದೂ ದಕ್ಷಿಣದ ಮಹಾಸಾಗರವೂ ಕೂಡ ಈ ಎರಡು ದೇಶಗಳ ಗಡಿಯವರೆಗೆ ವಿಸ್ತರಿಸಿದೆ. ಇದರಿಂದ ಪುರಾಣಗಳಲ್ಲಿ ಹೇಳಲಾದ ಅಖಂಡ ಭಾರತವು ಪೂರ್ವದ ಜಾವಾ ಸುಮಾತ್ರಾ, ಬಾಲಿ ದ್ವೀಪಗಳನ್ನೊಳಗೊಂಡ ಇಂಡೋನೇಶಿಯಾದಿಂದ ಪಶ್ಚಿಮದ ಇರಾನಿನವರೆಗೆ ವ್ಯಾಪಿಸಿರುವುದು ಸ್ಫಷ್ಟವಾಗಿ ಗೋಚರವಾಗುತ್ತದೆ. ಸಹಸ್ರಾರು ವರ್ಷಗಳಲ್ಲಿ ವಿಕಾಸಗೊಂಡ ಶ್ರೇಷ್ಟ ನಾಗರಿಕ ಪರಂಪರೆಯ ಚರಿತ್ರೆ ಈ ನೆಲಕ್ಕಿದೆ. ಕಳೆದ 2500 ವರ್ಷಗಳಲ್ಲಿ ಯವನ, ಹೂಣ, ಶಕ, ತುರ್ಕ, ಮೊಘಲರಾದಿಯಾಗಿ ಪೋರ್ಚುಗೀಸ್ ಇಂಗ್ಲೀಷರವರೆಗೆ ವಿದೇಶಿ ಆಕ್ರಮಣಕಾರರ ದಾಳಿ ಈ ನೆಲದ ಮೇಲಾಯಿತು. ಆದರೆ ಇತಿಹಾಸದ ಪುಸ್ತಕಗಳಲ್ಲಿ ಭಾರತ ಅಥವಾ ಹಿಂದುಸ್ತಾನದ ಮೇಲೆ ಆಕ್ರಮಣವಾಯಿತು ಎಂದು ಬರೆಯಲಾಗಿದೆಯೇ ಹೊರತು ಪ್ರತ್ಯೇಕವಾಗಿ ಅಪಘಾನಿಸ್ತಾನ, ಬರ್ಮಾ, ಸಿಂಹಳಗಳ ಮೇಲೆ ದಾಳಿಯಾಯಿತೆಂದು ಎಲ್ಲಿಯೂ ಹೇಳಲಾಗಿಲ್ಲ.

ಬ್ರಿಟಿಷ್ ಆಡಳಿತದಿಂದ ಸ್ವತಂತ್ರಗೊಂಡ ಹೊಸ್ತಿಲಲ್ಲಿ ಭಾರತ ವಿಭಜನೆಗೊಂಡ ಇತಿಹಾಸ ಎಲ್ಲರಿಗೂ ಪರಿಚಿತವಿದೆ. ಆದರೆ ವಿಶಾಲ ಭಾರತವರ್ಷ ಇದುವರೆಗೂ 24 ಬಾರಿ ವಿಭಜನೆಗೊಂಡಿದೆ. 1857ರಲ್ಲಿ ಭಾರತದ ವಿಸ್ತೀರ್ಣ 83ಲಕ್ಷ ಚದರ ಕಿಮೀ ಇತ್ತು. ಇಂದಿನ ಭಾರತದ 33ಲಕ್ಷ ಚಕಿಮೀ ವಿಸ್ತೀರ್ಣ ಹೊಂದಿದ್ದರೆ ನೆರೆಹೊರೆಯ ದೇಶಗಳ ಒಟ್ಟೂ ವಿಸ್ತೀರ್ಣ ಸುಮಾರು 50ಲಕ್ಷ ಚಕಿಮೀ ಆಗಿದೆ. 1800ಕ್ಕೂ ಮೊದಲು ಇಂದು ಭಾರತದ ನೆರೆಹೊರೆಯಾಗಿರುವ ಯಾವ ದೇಶವೂ ಅಸ್ತಿತ್ವದಲ್ಲಿರಲಿಲ್ಲ. ಇಡೀ ಅಖಂಡ ಭಾರತವು ಒಂದು ರಾಜಕೀಯ ಆಡಳಿತಕ್ಕೆ ಒಳಗಾಗಗಿರಲಿಲ್ಲ ನಿಜ, ಈ ಪ್ರದೇಶಗಳಲ್ಲಿ ಸ್ವತಂತ್ರ ಆಡಳಿತಗಳಿದ್ದವು. ಆದರೆ ಸಾಂಸ್ಕøತಿಕವಾಗಿ ಈ ಎಲ್ಲ ರಾಜ್ಯಗಳು ಭಾರತವರ್ಷದ ಅಂಗಗಳಾಗಿದ್ದವು, ಅವುಗಳ ನಡುವೆ ವ್ಯಾಪಾರ ವಹಿವಾಟು, ತೀರ್ಥ ಪರ್ಯಟನೆ, ಜನಸಂಪರ್ಕ ಅವ್ಯಾಹತವಾಗಿ ನಡೆದಿತ್ತು. ಅಲ್ಲದೇ ಆಗ್ನೇಯ ಏಷಿಯ ದೇಶಗಳು, ಚೀನಾ ಮತ್ತು ಜಪಾನ್ ದೇಶಗಲೂ ಸಹ ವಿಶಾಲ ಭಾರತೀಯ ಸಂಸ್ಕøತಿಯ ಪ್ರಭಾವದಲ್ಲಿದ್ದವು.  1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ರಷಿಯ ಮತ್ತು ಚೀನಾ ದೇಶಗಳ ನಡುವೆ ತಡೆ ದೇಶಗಳನ್ನು (buffer state) ನಿರ್ಮಿಸುವ ಬ್ರಿಟಿಷರ ಕೂಟನೀತಿಯು ಅಪಘಾನಿಸ್ತಾನ, ನೇಪಾಳ, ಟಿಬೇಟ್, ಭೂತಾನ್, ಬರ್ಮಾ ಮೊದಲಾದ ದೇಶಗಳ ಜನ್ಮಕ್ಕೆ ಕಾರಣವಾಯಿತು.  

        ರಾಜಕೀಯವಾಗಿ ಬೇರೆ ಬೇರೆಯಾಗಿರುವ ನೆರೆಹೊರೆಯ ದೇಶಗಳಿಗೆ ಭಾರತ ಮಾತೃಸ್ಥಾನದಲ್ಲಿದೆ. ಅಮೇರಿಕ ಮತ್ತು ಯೂರೋಪಿನ ರಾಷ್ಟ್ರಗಳ ದೊಡ್ಡಣ್ಣನ ನೀತಿ ಹಾಗೂ ಚೀನಾದ ವಿಸ್ತರಣಾವಾದಗಳ ನಡುವೆ ತಮ್ಮತಮ್ಮ ದೇಶಗಳ ಸಾರ್ವಭೌಮತೆ ಮತ್ತು ಹಿತವನ್ನು ಕಾಯ್ದುಕೊಳ್ಳುವ ಸಲುವಾಗಿ ಈ ಎಲ್ಲ ದೇಶಗಳು ಇಂದಿಗೂ ಭಾರತದತ್ತ ಆಶಾಭಾವದಿಂದ ಮುಖಮಾಡುತ್ತಿವೆ. ಈ ನಿಟ್ಟಿನಲ್ಲಿ ಧನಾತ್ಮಕವಾಗಿ ಸ್ಪಂದಿಸಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿದೇಶಿ ನೀತಿಯು ಬೃಹತ್ ಭಾರತವೆಂದು(Greater India) ಕರೆಯಬಹುದಾದ ದಕ್ಷಿಣ ಏಷಿಯ ಮತ್ತು ಆಗ್ನೇಯ ಏಷಿಯ ದೇಶಗಳ ನಡುವೆ ಸಂಬಂಧಗಳನ್ನು ವರ್ಧಿಸುವಲ್ಲಿ ಪೂರಕವಾಗಿದೆ. ಸರ್ಕಾರದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಾರ್ಕ(South Asian Association for Regional Cooperation) ದೇಶಗಳ ನಾಯಕರನ್ನು ಆಹ್ವಾನಿಸಲಾಯಿತು. ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ ತಮ್ಮ ಅರಂಭಿಕ ವಿದೇಶ ಯಾತ್ರೆಗಳಿಗಾಗಿ ಭೂತಾನ ಮತ್ತು ನೇಪಾಳವನ್ನು ಆಯ್ದುಕೊಂಡರು. ಇಸ್ರೋದ ಯಶಸ್ವೀ ಉಪಗ್ರಹ ಉಡಾವಣೆಯ ನಂತರ ಮಾತನಾಡಿದ ಪ್ರಧಾನಿ ಸಾರ್ಕದೇಶಗಳಿಗಾಗಿ ಉಪಗ್ರಹವೊಂದನ್ನು ನಿರ್ಮಿಸುವ ಮತ್ತು ಸಾರ್ಕದೇಶಗಳ ದೂರಸಂಪರ್ಕ ಪ್ರಗತಿಯಲ್ಲಿ ನೆರವು ನೀಡುವ ಭರವಸೆ ನೀಡಿದರು. ಅಮೇರಿಕ ರಷಿಯ ಮತ್ತು ಯೂರೋಪಿನ ದೇಶಗಳನ್ನು ಬಿಟ್ಟು ಭಾರತದೊಂದಿಗೆ ಸಾಂಸ್ಕøತಿಕ ನಿಕಟತೆಯುಳ್ಳ ಜಪಾನ ಹಾಗೂ ಚೀನಾಗಳೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಪ್ರಾಮುಖ್ಯತೆ ನೀಡಲಾಯಿತು. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇದುವರೆಗೂ ಏಷಿಯಾ ಸುತ್ತಲಿನ ಐದು ರಾಷ್ಟ್ರಗಳ ಪ್ರವಾಸ ಮಾಡಿ ಪ್ರಾದೇಶಿಕ ಸಹಕಾರಗಳನ್ನು ವರ್ಧಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಪ್ರಧಾನಿ ಮೋದಿಯವರ ಪ್ರತಿಯೊಂದು ವಿದೇಶ ಪ್ರವಾಸವೂ ವಿಶೇಷವಾಗಿ ಜಪಾನ್ ಪ್ರವಾಸವು ಭಾರತದ ಗೌರವನ್ನು ಎತ್ತಿ ಹಿಡಿಯುವುದರ ಜೊತೆಗೆ ಏಷಿಯ ದೇಶಗಳ ಪ್ರಗತಿಯಲ್ಲಿ ಭಾರತ ಪ್ರಮುಖ ಪಾತ್ರವಹಿಸಬೇಕಾದುದನ್ನು ಒತ್ತಿಹೇಳಿವೆ.

        ಭಾರತದಿಂದ ಬೇರೆಯಾದ ಯಾವ ದೇಶವೂ ಶಾಂತಿ-ಸಮೃದ್ಧಿಯನ್ನು ಹೊಂದಿಲ್ಲ. ಅಷ್ಟೇ ಅಲ್ಲದೇ ಅನೇಕ ನೆರೆಹೊರೆಯ ದೇಶಗಳು ರಾಜಕೀಯ ಸ್ಥಿರತೆ ಮತ್ತು ಸ್ವತಂತ್ರ ಅಸ್ತಿತ್ವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ತಾಯಿಯಿಂದ ಬೇರೆಯಾದ ಮಕ್ಕಳಂತೇ ದಿಕ್ಕುದೆಸೆಯಿಲ್ಲದ, ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿ ಈ ದೇಶಗಳದ್ದಾಗಿದೆ. ಅವುಗಳಿಗೆ ಇಂದು ತಾಯಿಯ ಅಭಯ ಸ್ನೇಹ ಸ್ಪರ್ಶದ ಅಗತ್ಯವಿದೆ. ಈ ದೇಶಗಳ ರಾಜಕೀಯ ನಾಯಕರ ಚಿಂತನೆಗಳು ಏನೇ ಇರಲಿ, ಜನಸಾಮಾನ್ಯರಲ್ಲಿ ಭಾರತದ ಬಗ್ಗೆ ಒಳ್ಳೆಯ ಭಾವನೆ ಇದೆ, ಭಾರತ ತಮಗೆ ಸಹಾಯ ಮಾಡಬಹುದೆಂಬ ಆಶಾಭಾವವಿದೆ. 

        ಭರತಖಂಡದ ದೇಶಗಳೆಲ್ಲವೂ ಒಂದಾಗಿ ಶಕ್ತಿಯನ್ನು ವರ್ಧಿಸಿಕೊಂಡು ವಿಕಾಸದ ಮಾರ್ಗದಲ್ಲಿ ಸಾಗಬೇಕಾದುದು ವರ್ತಮಾನ ಕಾಲದ ಅಗತ್ಯವಾಗಿದೆ. ಸಾಂಸ್ಕøತಿಕ ಹಿನ್ನೆಲೆಯಲ್ಲಿ ನೆರೆಹೊರೆಯ ಏಷಿಯಾದ ದೇಶಗಳ ನಡುವಿನ ಜನರನ್ನು ಬೆಸೆಯುವ ಸದವಕಾಶ ಈಗ ನಮಗಿದೆ. ಯುರೋಪಿನ ದೇಶಗಳೆಲ್ಲಾ ಒಂದಾಗಿ ಏಕರೂಪ ಕರೆನ್ಸಿ(ಯುರೋ)ಯನ್ನು ಚಲಾವಣೆಗೆ ತಂದಂತೆ ಅಖಂಡ ಭಾರತದ ದೇಶಗಳೂ ಏಕರೂಪ ಕರೆನ್ಸಿ-ವ್ಯಾಪಾರ-ವ್ಯವಹಾರಗಳ ವ್ಯವಸ್ಥೆಯನ್ನು ಜಾರಿತರಬಾರದೇಕೆ? ಅಮೆರಿಕಾ ಅಫಘಾನಿಸ್ತಾನವನ್ನು ಧ್ವಂಸ ಮಾಡಿದ ಕಳಂಕ ಹೊತ್ತಿರುವಾಗ ಭಾರತ ಆ ದೇಶದ ಪುನರ್ನಿರ್ಮಾಣದ ನೇತೃತ್ವವಹಿಸಬಾರದೇಕೆ? ಮ್ಯಾನ್ಮಾರಿಗೆ ಪ್ರಜಾಪ್ರಭುತ್ವದ ಪಾಠ ಹೇಳಿಕೊಡಬಾರದೇಕೆ? ನೇಪಾಳಕ್ಕೆ ಸಂವಿಧಾನ ರಚನೆಯಲ್ಲಿ ಸಹಾಯ ಮಾಡಬಾರದೇಕೆ? ಹೀಗೆ ಭರತಖಂಡದ ದೇಶಗಳನ್ನು ಕೈಹಿಡಿದು ನಡೆಸುವ ಅವಕಾಶ ಮತ್ತು ಸಾಮಥ್ರ್ಯ ಭಾರತಕ್ಕಿದೆ. ರಾಜಕೀಯವಾಗಿ ಸದ್ಯದಲ್ಲೇ ಸಾಧ್ಯವಿಲ್ಲವಾದರೂ ಸಾಂಸ್ಕøತಿಕ ಹಿನ್ನೆಲೆ, ವ್ಯಾವಹಾರಿಕ ವಹಿವಾಟುಗಳು ಮತ್ತು ಸಾಮಾಜಿಕ ಸಂಪರ್ಕಗಳ ನೆಲೆಯಲ್ಲಿ ಅಖಂಡ ಭಾರತ ಖಂಡಿತ ಅಸಾಧ್ಯವಲ್ಲ. 

Thursday, August 28, 2014

ಕರ್ನಾಟಕದಲ್ಲಿ ಸಂಘದ ಆದ್ಯಪ್ರವರ್ತಕ : ಯಾದವರಾವ್ ಜೋಶಿ

(ಪುಂಗವ : 01/9/2014)
(ಆಧಾರ : “ಜನಮನಶಿಲ್ಪಿ” - ಲೇ: ಚಂದ್ರಶೇಖರ ಭಂಡಾರಿ)


          ಜನವರಿ 20, 1929ರಂದು ನಾಗಪುರದ ಶ್ರೀ ವೆಂಕಟೇಶ ಥಿಯೇಟರಿನಲ್ಲಿ ಸಂಗೀತದ ಖ್ಯಾತ ಗುರು ಶಂಕರರಾವ್‍ರವರ ‘ಅಭಿನವ ಸಂಗೀತ’ ಶಾಲೆಯ ಆಶ್ರಯದಲ್ಲಿ ಸಂಗೀತ ಸಮಾರಾಧನೆ ಏರ್ಪಾಡಾಗಿತ್ತು. ಅಂದು ತಮ್ಮ ಮಧುರ ಕಂಠದಶ್ರೀಯಿಂದ ಕೇಳುಗರ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಇಬ್ಬರು ಎಳೆಯರು- ಯಾದವ ಜೋಶಿ ಮತ್ತು ಪ್ರಭಾಕರ ಜೋಶಿ. ಯಾದವ ಜೋಶಿ ಆಗ ಇನ್ನೂ ಕಿಶೋರ. ಪ್ರತಿಭಾಶಾಲಿ ಸಂಗೀತಪಟು ಎಂದು ಪ್ರಸಿದ್ಧಿ ಗಳಿಸಿದ್ದ. ‘ಸಂಗೀತ ಬಾಲ ಭಾಸ್ಕರ’ ಎಂದು ಬಿರುದಿನಿಂದ ಊರಿಗೆಲ್ಲ ಪರಿಚಿತನಾಗಿದ್ದ. ಅಂದು ಯಾದವನ ಸಂಗೀತಸುಧೆಗೆ ಮಂತ್ರಮುಗ್ಧರಾದವರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾಕ್ಟರ್ ಹೆಡಗೆವಾರರೂ ಒಬ್ಬರು. ಆವತ್ತಿನ ಸಂಗೀತ ಕಛೇರಿಯ ನಂತರ ಯಾದವ ಡಾ. ಹೆಡಗೆವಾರರ ಆಪ್ತಬಳಗದಲ್ಲಿ ಒಬ್ಬನಾದ. ಅವರ ಚುಂಬಕ ವ್ಯಕ್ತಿತ್ವಕ್ಕೆ ಕ್ರಮೇಣ ಮಾರುಹೋದ. ಕೆಲ ದಿನಗಳ ನಂತರ ಶಂಕರರಾವ್ ಅವರನ್ನು ಕಾಣಲು ಬಂದ ಡಾ ಹೆಡಗೆವಾರರು, “ಮಾಸ್ತರ್, ಈ ಯಾದವನನ್ನು ನಾನೀಗ ನಮ್ಮ ಸಂಘಕಾರ್ಯಕ್ಕಾಗಿ ಪಡೆದುಕೊಂಡಿರುವೆ. ಅವನು ನಿಮ್ಮ ಅತ್ಯಂತ ಪ್ರಿಯ ಉದಯೋನ್ಮುಖ ಶಿಷ್ಯ ಎಂಬುದು ನನಗೆ ಗೊತ್ತು. ಈ ಕಾರಣಕ್ಕಾಗಿ ನೀವು ಮನನೊಂದುಕೊಳ್ಳುವುದು ಸಹಜವೇ. ಆದರೂ ನೀವು ಇಂತಹ ಅನೇಕ ‘ಯಾದವ’ರನ್ನು ತರಬೇತಿಗೊಳಿಸಬಲ್ಲಿರಿ ಎಂಬ ಭರವಸೆ ನನಗಿದೆ” ಎಂದರು. ತಮ್ಮ ಸಂಗೀತವಾರಸಿಕೆಯನ್ನು ಯಾದವ ಮುಂದುವರಿಸಬೇಕೆಂಬ ತಮ್ಮ ಕನಸನ್ನು ಬದಿಗೊತ್ತಿ ಶಂಕರರಾಯರು ಉದಾರ ಮನಸ್ಸಿನಿಂದ ಹರಸಿ ಯಾದವನ್ನು ಡಾ ಹಡಗೆವಾರರ ಕೈಗೊಪ್ಪಿಸಿದರು. ಬಾಲಕೀರ್ತಿಯ ಶಿಖರ ತಲುಪಿದ್ದ ಯಾದವ ಅಂದಿನಿಂದ ಸಂಗೀತ ಸಂನ್ಯಾಸ ಸ್ವೀಕರಿಸಿದ, ಸಂಘ ತಪಸ್ವಿಯಾದ, ದೇಶ ಕಾರ್ಯಕ್ಕೆ ತನ್ನನ್ನು ತಾನು ಸಂಪೂರ್ಣ ಸಮರ್ಪಿಸಿಕೊಂಡ. ಸಂಘದ ಸ್ವರ, ತಾಳ, ಲಯ ಇವೇ ಯಾದವನ ಜೀವನಶ್ರುತಿಯಾಯಿತು.

      ಸ್ವಯಂ ಡಾ ಹೆಡಗೆವಾರರ ಮಾರ್ಗದರ್ಶನ ಮತ್ತು ಹಿರಿಯರಾದ ಬಾಬಾಸಾಹೇಬ್ ಆಪ್ಟೆಯವರ ಗರಡಿಯಲ್ಲಿ ಯಾದವರಾವ್ ಓರ್ವ ಪ್ರಬುದ್ಧ ಸ್ವಯಂಸೇವಕನಾಗಿ, ಸಂಘಟಕ, ಪ್ರಭಾವೀ ವಾಗ್ಮಿಯಾಗಿ ಬೆಳೆದರು. ಅಂದಿನ ಸಮಯದಲ್ಲಿ ನಾಗಪುರದಲ್ಲಿ ನಡೆಯತ್ತಿದ್ದ ಶಾಖೆಗಳಲ್ಲಿ ಯಾದವರಾವ್ ನಡೆಸುತ್ತಿದ್ದ ಶಾಖೆ ಅತ್ಯಂತ ಪ್ರಭಾವಿಯಾಗಿತ್ತು. ಕಿರಿಯ ಸಹಕಾರಿಗಳ ಚಿಂತನಾಶೈಲಿಗೆ ಆಕಾರ ನೀಡಿ ಅದನ್ನು ಒಪ್ಪ ಓರಣಗೊಳಿಸುವಲ್ಲಿ ಡಾ ಹೆಡಗೆವಾರರು ಅನುಸರಿಸುತಿದ್ದ ವಿಶಿಷ್ಟ ರೀತಿಯು ಯಾದವರಾಯರ ಮೇಲೆ ಗಾಢ ಪರಿಣಾಮ ಬೀರಿತು. ಎಲ್‍ಎಲ್‍ಬಿ ವ್ಯಾಸಂಗ ನಡೆಸುತ್ತಿದ್ದ ದಿನಗಳಲ್ಲಿ ಡಾ ಹೆಡಗೆವಾರರ ಜತೆ ಅವರ ಸಂಬಂಧ ಇನ್ನಷ್ಟು ಆಳವಾಯಿತು. ತಮ್ಮ ಎಮ್‍ಎ ಎಲ್‍ಎಲ್‍ಬಿ ವಿದ್ಯಾಭ್ಯಾಸದ ನಂತರ ಡಾ ಹೆಡಗೆವಾರರ ಆಶಯದಂತೆ ಪ್ರಚಾರಕನಾಗಿ ಸಂಘಕಾರ್ಯದ ವಿಸ್ತರಣೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡರು.

ಜೀವನಚಿತ್ರ
  • 3 ಸೆಪ್ಟೆಂಬರ್ 1914, ಅನಂತ ಚತುರ್ದಶಿಯ ದಿನ, ಶ್ರೀ ಕೃಷ್ಣ ಜೋಶಿ-ಸೌ ಸತ್ಯಭಾಮಾ ದಂಪತಿಗಳ ಒಬ್ಬನೇ ಮಗನಾಗಿ, ನಾಗಪುರದಲ್ಲಿ ಜನನ.
  • ಬಾಲ್ಯದಲ್ಲೇ ಸಂಗೀತ ಅಭ್ಯಾಸ, “ಸಂಗೀತ ಬಾಲ ಭಾಸ್ಕರಬಿರುದಾಂಕಿತ.
  • 1929ರಲ್ಲಿ ಸಂಗೀತ ಕಛೇರಿ ನೀಡುತ್ತಿರುವಾಗ ಆರೆಸ್ಸೆಸ್ ಸಂಸ್ಥಾಪಕ ಡಾ. ಹೆಡಗೆವಾರ್‍ರ ದೃಷ್ಟಿಗೆ ಬಿದ್ದರು, ಸ್ವಯಂಸೇವಕನಾಗಿ ಸಂಘಕಾರ್ಯದ ಆರಂಭ; ಸಂಗೀತಸಂನ್ಯಾಸ ಸ್ವೀಕಾರ.
  • ಎಮ್‍ಎ ಎಲ್‍ಎಲ್‍ಬಿ ಪದವಿ ಪ್ರಾಪ್ತಿಯ ನಂತರ ಸಂಘದ ಪೂರ್ಣಾವಧಿ ಪ್ರಚಾರಕರಾಗಿ ದೇಶಸೇವೆಗೆ ಸಂಪೂರ್ಣ ಸಮರ್ಪಣೆ.
  • 1941ರಲ್ಲಿ ಕರ್ನಾಟಕ ಪ್ರಾಂತ ಪ್ರಚಾರಕರಾಗಿ ಪಾದಾರ್ಪಣೆ.
  • ಮುಂದಿನ 5 ದಶಕಗಳ ಕಾಲ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಸಂಘಕಾರ್ಯದ ವಿಸ್ತರಣೆಗೆ ಅವಿರತ ದುಡಿಮೆ.
  • 20 ಅಗಸ್ಟ 1992, ಗೋಕುಲಾಷ್ಟಮಿಯ ದಿವಸ ವಿಧಿಲೀನ.

       

          ಬೇರೆ ಬೇರೆ ಊರುಗಳಿಗೆ ಸಂಘಕಾರ್ಯಕ್ಕಾಗಿ ಹೊರಡುವ ಯೋಜನೆಯಂತೆ ಯಾದವರಾಯರು 1941ರಲ್ಲಿ ಕರ್ನಾಟಕಕ್ಕೆ ಮೊದಲಬಾರಿಗೆ ಪ್ರಾಂತಪ್ರಚಾರಕರಾಗಿ ಬಂದರು. ಕರ್ನಾಟಕದೊಂದಿಗೆ ಅಂದು ಆರಂಭವಾದ ಈ ನಂಟು ಮುಂದಿನ 51 ವರ್ಷಗಳ ಕಾಲ ಸತತವಾಗಿ ಬೆಳೆದು ಬಂದಿತು. ಕರ್ನಾಟಕ ಅವರ ಕರ್ಮಭೂಮಿಯಾಯಿತು. ಮುಂದೆ ಅವರ ಕಾರ್ಯಕ್ಷೇತ್ರವು ಆಂಧ್ರ, ತಮಿಳುನಾಡು ಮತ್ತು ಕೇರಳದವರೆಗೆ ವಿಸ್ತಾರಗೊಂಡಾಗಲೂ, ಅಖಿಲ ಭಾರತ ಸ್ತರದ ಜವಾಬ್ದಾರಿ ಇದ್ದಾಗಲೂ ಅವರ ಕೇಂದ್ರವಾಗಿದ್ದುದು ಬೆಂಗಳೂರೇ. ಕರ್ನಾಟಕದಲ್ಲಿ 1940ರ ಹೊತ್ತಿಗೆ ಕೆಲವೇ ಕೆಲವು ಶಾಖೆಗಳಿಂದ ಆರಂಭವಾದ ಆರೆಸ್ಸೆಸ್ಸಿನ ಕಾರ್ಯ ಯಾದವರಾಯರ ಪ್ರಯತ್ನದಿಂದ ವೇಗ ಪಡೆದುಕೊಂಡಿತು. ಓರ್ವ ಸಾಮಾನ್ಯ ಪ್ರಚಾರಕನಾಗಿ ಅತ್ಯಂತ ಪ್ರಾಥಮಿಕ ಹಂತದಿಂದ ಇಲ್ಲಿ ಸಂಘಕಾರ್ಯದ ಕೃಷಿ ಆರಂಭಿಸಿದ ಅವರು, ಕೆಲವೇ ವರ್ಷಗಳಲ್ಲಿ ಪ್ರಾಂತ್ಯದ ಎಲ್ಲ ಜಿಲ್ಲೆಗಳವರೆಗೆ ಸಂಘಶಾಖೆಗಳ ಕಾರ್ಯಜಾಲವನ್ನು ಹರಡಿಸಿದರು. ಅವರ ಕಾರ್ಯಕೌಶಲ್ಯದಿಂದಾಗಿ ಸಮಾಜದಲ್ಲಿನ ಎಲ್ಲ ವರ್ಗದವರನ್ನು ಒಳಗೊಂಡು ಸಂಘದ ಕಾರ್ಯ ಬೆಳೆಯಿತು. ಸಂಘಟನೆಗೆ ಸಂಬಂಧಿಸಿದ ಯಾವುದೇ ಪೂರ್ವಪರಂಪರೆಗಳೇ ಇಲ್ಲದ ಅಪರಿಚಿತ ಕಾರ್ಯಕ್ಷೇತ್ರದಲ್ಲಿ ತಮ್ಮ ಚಿಂತನೆ, ಮಾತು, ನಡವಳಿಕೆ ಹಾಗೂ ಧ್ಯೇಯನಿಷ್ಠೆ ಇವುಗಳ ಮೇಲ್ಪಂಕ್ತಿಯಿಂದ ತಾವೇ ಹೊಸ ಪರಂಪರೆಗಳ ರೂವಾರಿಯಾದರು. ಮುಂದೆ 50ರ ದಶಕದಲ್ಲಿ ಮೊದಲ ನಿಷೇಧದ ಅನನುಕೂಲ ಸಂದರ್ಭದಲ್ಲಿ ಹಲವು ವಿಧ ಸವಾಲುಗಳ ನಡುವೆ ಓರ್ವ ಯಶಸ್ವೀ ಕಪ್ತಾನನಂತೆ ಸಂಘನೌಕೆಯನ್ನು ಮುನ್ನಡೆಸಿದರು.

         ಸಮಾಜ ಸುಧಾರಣೆ ಹಾಗೂ ಸಂಘಟನೆಯ ಕಾರ್ಯದಲ್ಲಿ ತಮ್ಮ ಮನದ ಕಲ್ಪನೆಗಳಿಗೆ ಕಾರ್ಯರೂಪ ನೀಡಲು ಅವರು ಕರ್ನಾಟಕವನ್ನು ಪ್ರಯೋಗಭೂಮಿಯಾಗಿ ಮಾಡಿಕೊಂಡರು. ವಿವಿಧ ಸೇವಾಕಾರ್ಯಗಳ ಮೂಲಕ ಸಮಾಜ ಪರಿವರ್ತನೆಯ – ವಿಶೇಷವಾಗಿ ಅಸ್ಪøಷ್ಯತೆಯ ನಿವಾರಣೆಯ - ಸಲುವಾಗಿ ಮುಂದಾಗುವಂತೆ ಸ್ವಯಂಸೇವಕರ ಮನೋಭೂಮಿಕೆಯನ್ನು ರೂಪಿಸುವುದು ಅವರ ವಿಶೇಷ ಆಸಕ್ತಿಯ ವಿಷಯವಾಗಿತ್ತು. ಸಮಾಜಸೇವೆಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಸುವಂತಹ ಪ್ರೇರಣೆಯನ್ನು ಸಾವಿರಾರು ಕಿರಿಯರ ಮನದಲ್ಲಿ ತುಂಬಿದುದಲ್ಲದೇ ಅವರ ಜೀವನವನ್ನು ತಿದ್ದಿ ತೀಡಿ ರೂಪಿಸಿದರು. ಯಾದವರಾಯರಿಂದ ಪ್ರೇರಣೆ ಪಡೆದ ಅದೆಷ್ಟೋ ಯುವಕರು ಸಂಘದ ಪ್ರಚಾರಕರಾಗಿ, ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಸಮರ್ಪಿಸಿಕೊಂಡು ಔನ್ನತ್ಯವನ್ನು ಪಡೆದರು. ಹಿಂದೂ ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದಕರಾಗಿದ್ದ ಅವರು ಸಂಸ್ಕøತ ಪ್ರಚಾರ, ಹಿಂದೂ ಸಮಾಜೋತ್ಸವ, ಪುಂಗವ ಜಾಗರಣ ಪತ್ರಿಕೆ, ಜಾಗರಣ ಪ್ರಕಾಶನ, ಕರ್ನಾಟಕ ಆರೆಸ್ಸೆಸ್ಸಿನ ಮೂರು ಬೃಹತ್ ಶಿಬಿರಗಳು, ತಮಿಳು ನಾಡಿನ ಹಿಂದು ಮುನ್ನಾನಿ, ಕೇರಳದ ಬಾಲಗೋಕುಲ, ತಪಸ್ಯಾ  ಮೊದಲಾದ ಹತ್ತು ಹಲವು ವಿಧದ ಹಿಂದು ಜಾಗೃತಿಯ ಕಾರ್ಯಕ್ರಮಗಳ ನೇಪಥ್ಯದ ಶಕ್ತಿಯಾದರು. ಸದಾ ಪ್ರಯೋಗಶೀಲರು ಹಾಗೂ ಲೋಕಸಂಗ್ರಹದಲ್ಲಿ ವಿಶ್ವಾಸವಿದ್ದ ಅವರು ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ವಿದ್ಯಾಕೇಂದ್ರ, ಹಿಂದು ಸೇವಾ ಪ್ರತಿಷ್ಠಾನ, ಸಂಸ್ಕøತ ವಿಭಾಗ ಮೊದಲಾದ ಅನೇಕ ಸಂಸ್ಥೆಗಳ ಆರಂಭದ ಹಿಂದಿನ ಪ್ರೇರಕ ಸ್ಫೂರ್ತಿಯಾಗಿದ್ದರು.  ಅವರ ಕೈಗಳಲ್ಲಿ ತಯಾರಾದ ಕಿರಿಯರು ಅವರಿಗಿಂತ ಹೆಚ್ಚಿನ ಜವಾಬ್ದಾರಿ ಹೊರುವಂತಹರಾದಾಗ  ಉತ್ಕಟ ಅಭಿಮಾನಪಟ್ಟರು. ‘ಸ್ವದೇಶೋ ಭುವನತ್ರಯಂ’ ಎಂಬ ಕಲ್ಪನೆಗನುಗುಣವಾಗಿ ತಮ್ಮ ಬದುಕಿನಶೈಲಿ ನಿರ್ವಹಿಸುವಂತೆ ನಾಡಿನಗಡಿಯಾಚೆಯ ಹಿಂದುಗಳಿಗೆ ಅವರು ನೀಡಿದ ಕರೆ, ಅಲ್ಲನವರಿಗೊಂದು ಹೊಸ ಜೀವನದೃಷ್ಟಿಯೇ ಆಯಿತು. ತಮ್ಮ ಧ್ಯೇಯದೇವ ಡಾಕ್ಟರ್ ಹೆಡಗೆವಾರರ ಜನ್ಮಶತಮಾನೋತ್ಸವದಲ್ಲಿ ಹಿಂದುತ್ವದ ಜಯಭೇರಿ ದಿಗಂತ ದೂರದ ತನಕ ಅನುರಣಿತವಾಗುತ್ತಿರುವುದನ್ನು ಕಂಡು, ಕೇಳಿ ಅವರು ಧನ್ಯತೆಯ ಪುಳಕ ಅನುಭವಿಸಿದರು.


    
ನಾಗಪುರದಿಂದ ತಾವು ಹೊರಟ ದಿನಂದಿಂದ (25 ಜೂನ 1941) ಆರಂಭಿಸಿ ದಿನಾಂಕಕ್ಕನುಗುಣವಾಗಿ ತಮ್ಮ ಸಂಚಾರದ ಊರಿನ ಹೆಸರನ್ನು ಗುರುತು ಹಾಕಿಡುವಲ್ಲಿ ಯಾದವರಾಯರು ಒಂದು ದಿನವೂ ತಪ್ಪುತ್ತಿರಲಿಲ್ಲ. 1992ರಲ್ಲಿ ಅಂತಿಮ ಕಾಯಿಲೆಯಿಂದ ಹಾಸಿಗೆ ಹಿಡಿಯುವವರೆಗೂ ಈ ರೀತಿ 51 ವರ್ಷಗಳ ಕಾಲ ಅವರು ತಮ್ಮ ಕೈಬರಹದಲ್ಲಿ ಬರೆದಿರುವ ಸುಮಾರು 18 ಸಾವಿರಕ್ಕೂ ಹೆಚ್ಚಿನ ‘ದಿನಾಂಕ-ಊರು’ ವಿವರಗಳನ್ನೊಳಗೊಂಡ ಹಲವು ಪುಸ್ತಕಗಳಿವೆ.


ವರಕವಿ ದ ರಾ ಬೇಂದ್ರೆಯವರ ಜೊತೆ ಯಾದವರಾಯರ ಮೊದಲ ಭೇಟಿ ಬಹು ಮಾರ್ಮಿಕವಾಗಿತ್ತು. ಧಾರವಾಡಕ್ಕೆ ಬಂದ ಹೊಸತರಲ್ಲಿ ಅವರು ಭೇಟಿಗಾಗಿ ಬೇಂದ್ರೆಯವರಲ್ಲಿಗೆ ಹೋದರು. ನಾಗಪುರದ ತರುಣನಿಂದ ಸಂಘದ ವಿಚಾರ, ಕೆಲಸದ ವಿವರ ಇತ್ಯಾದಿಗಳನ್ನೆಲ್ಲ ವಿಚಾರಿಸಿದ ಕವಿವರ್ಯರು, ಆನಂದಿತರಾಗಿ “ವಿಚಾರವೇನೋ ಒಳ್ಳೆಯದೇ, ಆದರೆ ಇದನ್ನು ಕರ್ನಾಟಕದ ಜನರಿಗೆ ನೀವು ಹೇಗೆ ತಲುಪಿಸುವಿರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಯಾದವರಾಯರು “ನಾನಂತೂ ಇಲ್ಲಿನ ಜನರ ಸೇವೆಗಾಗಿ ಬಂದವನು, ಸೇವೆಯ ಜೊತೆ ನನಗೆ ತಿಳಿದಷ್ಟು ಹೇಳುವೆ” ಎಂದು ವಿನಮ್ರವಾಗಿ ಉತ್ತರಿಸಿದರು. ಅವರ ಮಾತುಗಳನ್ನು ಕೇಳಿ ಇನ್ನೂ ಮಾರು ಹೋದ ಬೇಂದ್ರೆಯವರು “ಜನರನ್ನು ಉಪದೇಶದಿಂದ ಮರಳುಗೊಳಿಸಲು ಪ್ರಯತ್ನಿಸಬೇಡಿ ಅವರ ಹೃದಯವನ್ನು ಗೆಲ್ಲಲು ಪ್ರಯತ್ನಿಸಿ (Don’t try to cap them, but try to capture their hearts)” ಎಂದು ಕಿವಿಮಾತು ಹೇಳಿದರು. ಅವರು ಹೇಳಿದ ಕಿವಿಮಾತು ಯಾದವರಾಯರಿಗೆ ದಾರಿದೀಪವೇ ಆಯಿತು, ಅಲ್ಲದೇ ಈ ಭೇಟಿಯ ಪ್ರಸಂಗ ಅವರಿಬ್ಬರ ನಡುವಣ ಗಾಢವಾದ ಸ್ನೇಹಕ್ಕೆ ನಾಂದಿಯಾಯಿತು.


  ಬದುಕಿನುದ್ದಕ್ಕೂ ರಾಜಿಯಿಲ್ಲದ ಸಂಘನಿಷ್ಠೆಯ ಮೈವೆತ್ತ ರೂಪವಾಗಿದ್ದವರು ಯಾದವರಾವ್ ಜೋಶಿ. ಶರೀರ ಜರ್ಜರಿತವಾಗಿದ್ದ ಬಾಳಸಂಜೆಯಲ್ಲೂ ‘ತ್ವದರ್ಥೇ ಏಷಃ ಕಾಯಃ ಪತತು’ ಎಂಬ ಅವರ ಜೀವನಶ್ರದ್ಧೆಗೆ ಕಿಂಚಿತ್ತೂ ಚ್ಯುತಿ ಬರಲಿಲ್ಲ. ಇಂತಹ ಬಹುಮುಖ ಕರ್ತೃತ್ವಶಾಲಿ ಯಾದವರಾಯರ ಜನ್ಮಶತಮಾನ ವರ್ಷ ಇದೀಗ ಬಂದಿದೆ. ಓರ್ವ ಕರ್ತೃತ್ವಶಾಲಿ ಧ್ಯೇಯವಾದಿ ಕಾಯವಳಿದಮೇಲೂ ತನ್ನ ಕೃತಿಯ ಮೂಲಕವೇ ಬದುಕುತ್ತಾನೆ ಎನ್ನುವುದು ಒಂದು ನಿತ್ಯಸತ್ಯ. ಕಾಯ ಕಳೆದು ಕಾರ್ಯರೂಪವಾದವರು ಯಾದವರಾವ್ ಜೋಶಿ.

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...