Friday, November 11, 2016

ಆಂತರಿಕ ಭದ್ರತೆಗೆ ಜಿಹಾದಿಗಳ ಸವಾಲು

(ಪುಂಗವ  15/11/2016)

ರಾಜಕೀಯ ಹಿಂಸಾಚಾರಕ್ಕೆ ಮತೀಯ ಉಗ್ರವಾದದ ನಂಟು  -  ರಾಜ್ಯದಲ್ಲಿ ನಡೆದಿದೆ ಆರೆಸ್ಸೆಸ್ ಕಾರ್ಯಕರ್ತರ ಸರಣಿ ಕೊಲೆಗಳು

ರಾಜ್ಯದಲ್ಲಿ ಕಳೆದ ಇಪ್ಪತ್ತೊಂದು ತಿಂಗಳುಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ಪರಿವಾರ ಸಂಘಟನೆಗಳಿಗೆ ಸೇರಿದ ಎಂಟು ಮಂದಿಯ ಹತ್ಯೆಯಾಗಿದೆ. 2015ರ ಫೆಬ್ರುವರಿ 19ರಂದು ಶಿವಮೊಗ್ಗದಲ್ಲಿ ಚೂರಿ ಇರತಕ್ಕೆ ಬಲಿಯಾದ ವಿಶ್ವನಾಥ, 2015 ನವಂಬರ 10ರಂದು ಟಿಪ್ಪು ಜಯಂತಿ ಮೆರವಣಿಗೆಯ ದೊಂಬಿಯಲ್ಲಿ ಹಲ್ಲೆಗೀಡಾಗಿ ಮೃತರಾದ ಕೊಡಗಿನ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ, 2016ರ ಅಕ್ಟೋಬರ್ 16ರಂದು ವಿಜದಶಮಿಯ ಪಥಸಂಚಲ ಮುಗಿಸಿ ಮನೆಗೆ ಹೊರಟಿದ್ದಾಗ ಸಂಘದ ಗಣವೇಶದಲ್ಲೇ ಕೊಲೆಯಾದ ಬೆಂಗಳೂರಿನ ಶಿವಾಜಿನಗರದ ರುದ್ರೇಶ್ ಇವರೆಲ್ಲರ ಕೊಲೆಯ ಸಂಚಿನ ಹಿಂದೆ ಪ್ರಮುಖವಾಗಿ ಒಂದೇ ಸಂಘಟನೆಯ ಹೆಸರು ಕೇಳಿ ಬರುತ್ತಿದೆ.. ಮೂಡುಬಿದಿರೆಯ ಬಜರಂಗದಳ ಕಾರ್ಯಕರ್ತ ಪ್ರಶಾಂತ ಪೂಜಾರಿ, ಮೈಸೂರಿನ ಉದಯಗಿರಿ ಬಡಾವಣೆಯಲ್ಲಿ ಹತ್ಯೆಗೀಡಾದ ಬಿಜೆಪಿಯ ಕ್ಯಾತಮಾರನಹಳ್ಳಿ ರಾಜು, ಕುಶಾಲನಗರದ ಪ್ರವೀಣ ಪೂಜಾರಿ, ಮಂಗಳೂರಿನ ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ ರಾಜ್, ಮೈಸೂರಿನ ಬಿಜೆಪಿ ಮುಖಂಡ ಮಾಗಳಿ ರವಿ ಇವರುಗಳ ಹತ್ಯೆಯ ಹಿಂದೆಯೂ ಒಂದೇ ಸಂಘಟನೆಗೆ ಸೇರಿದ ಜನರ ಹೆಸರು ಬಲವಾಗಿ ಕೇಳಿಬರುತ್ತಿದೆ. ಅಲ್ಲದೇ ಹಲವಾರು ಬಾರಿ ಸಂಘದ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿವೆ. ಬೆಂಗಳೂರಿನ ರುದ್ರೇಶ್ ಹತ್ಯೆಯಲ್ಲಿ ಬಂಧಿತರಾದ ನಾಲ್ವರು ಪ್ರಮುಖ ಆರೋಪಿಗಳಾದ ವಾಸೀಂ ಅಹ್ಮದ್, ಮುಜೀಬ್, ಮೊಹಮದ್ ಮಜರ್ ಮತ್ತು ಇರ್ಫಾನ್ ಪಾಷಾ ವಿಚಾರಣಾ ಸಂದರ್ಭದಲ್ಲಿ ಪೋಲೀಸರಿಗೆ ನೀಡಿದ ಮಾಹಿತಿಯಿಂದ ಸಂಘಪರಿವಾರದ ಕಾರ್ಯಕರ್ತರ ಹತ್ಯೆಯ ವ್ಯವಸ್ಥಿತ ಸಂಚು ಮತ್ತು ಇವೆಲ್ಲದರೊಡನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಅಥವಾ ಪಿಎಫ್‌ಐ ಹೆಸರಿನ ಈ ಸಂಘಟನಯೊಂದಿಗಿನ ನಂಟು ದೃಢಗೊಂಡಿದೆ. ರುದ್ರೇಶ್ ಹತ್ಯೆಯನ್ನು ಕಾರ್ಯಗತಗೊಳಿಸಿದ ಈ ನಾಲ್ವರು ಪಿಎಫ್‌ಐ ಮತ್ತು ಎಸ್‌ಡಿಪಿಐನ ಸದಸ್ಯರಾಗಿದ್ದಲ್ಲದೇ ಇವರಿಗೆ ಸೂಚನೆ ನೀಡಿದ ಪಿಎಫ್‌ಐ ಸಂಘಟನೆಯ ಬೆಂಗಳೂರು ಜಿಲ್ಲಾಧ್ಯಕ್ಷ ಅಸೀಂ ಷರೀಫ್ ಕೂಡ ಬಂಧನಕ್ಕೊಳಗಾಗಿದ್ದಾನೆ. ಈ ಹಿಂದೆ ಮೂಡುಬಿದಿರೆಯ ಪ್ರಶಾಂತ ಪೂಜಾರಿ ಹತ್ಯೆಯಲ್ಲಿ ಬಂಧಿತರಾದ ಏಳು ಜನ ಪಿಎಫ್‌ಐ ಸದಸ್ಯರಾಗಿದ್ದರು, ಅವರಲ್ಲೊಬ್ಬ ವಲಯ ಅಧ್ಯಕ್ಷನೂ ಸೇರಿದ್ದ. ಕುಟ್ಟಪ್ಪ ಹತ್ಯೆ, ರಾಜು ಹತ್ಯೆಯ ಆರೋಪಿಗಳಿಗೂ, ಅನೇಕ ಬಾರಿ ಸಂಘದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರಿಗೂ ಪಿಎಫ್‌ಐ ನಂಟಿದ್ದಿದು ಸಾಬೀತಾಗಿದೆ. ಹಾಗೆಯೇ ಈ ಎಲ್ಲ ಕೊಲೆಗಳಲ್ಲೂ ಒಂದು ರೀತಿ ಸಾಮ್ಯತೆ ಕಾಣುತ್ತದೆ.

ರುದ್ರೇಶ್ ಕೊಲೆ ಪ್ರಕರಣದಲ್ಲಿ ಬಂಧಿತರಾದ ನಾಲ್ವರು ನೀಡಿದ ಮಾಹಿತಿಗಳು ಇನ್ನೂ ಬೆಚ್ಚಿ ಬೀಳಿಸುವಂತವು. ತನಿಖೆ ನಡೆಸುತ್ತಿರುವ ಪೋಲೀಸರೇ ಹೇಳುವಂತೆ ಹತ್ಯೆಗೂ ಮೊದಲು ಅವರು ಉಗ್ರ ಸಂಘಟನೆಯಿಂದ ತರಬೇತಿ ಪಡೆದಿದ್ದರು. ಅವರ ಮನೆಯವರೇ ಪೋಲೀಸರಿಗೆ ನೀಡಿದ ಮಾಹಿತಿಯಂತೆ ಆಗಾಗ ಕೆಲವು ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೇರಳ ಮತ್ತು ಆಂಧ್ರ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಹಾಗೆಯೇ ರುದ್ರೇಶ್ ಜೊತೆಗೆ ಇನ್ನೋರ್ವ ಆರೆಸ್ಸೆಸ್ ಕಾರ್ಯಕರ್ತನನ್ನು ಕೊಲೆ ಮಾಡಿ ಸಂಘದ ಕಾರ್ಯಕರ್ತರಲ್ಲಿ ಭಯವನ್ನು ಹುಟ್ಟಿಸಲು ಬಯಸಿದ್ದರು ಎನ್ನುವ ಮಾಹಿತಿಯನ್ನು ಅವರು ನೀಡಿದ್ದಾರೆ. ಜೊತೆಗೆ ಮೈಸೂರಿನ ಸಂಸದ ಪ್ರತಾಪ ಸಿಂಹ ಸೇರಿದಂತೆ ಇನ್ನು ಕೆಲವು ಮುಖಂಡರನ್ನು ಕೊಲ್ಲಲು ಸಂಚು ನಡೆದಿತ್ತು ಎನ್ನುವ ವರದಿಗಳೂ ಬಂದಿವೆ. ಇವುಗಳಿಂದ ಸಂಘ ಪರಿವಾರಗಳಿಗೆ ಸೇರಿದ ಕಾರ್ಯಕರ್ತರ ಕೊಲೆ ಮತ್ತು ಹಲ್ಲೆಗಳ ಹಿಂದೆ ಸಂಘವನ್ನು ಬೆದರಿಸುವ ಒಂದು ವ್ಯವಸ್ಥಿತ ಸಂಚು ನಡೆದಿದ್ದು ಸ್ಪಷ್ಟ. ಜೊತೆಗೆ ಈ ಹಿಂಸೆಯ ಹಿಂದೆ ರಾಜಕೀಯ ಕುತಂತ್ರವೂ ಅಡಗಿದ್ದು ಪಿಎಫ್‌ಐನ ರಾಜಕೀಯ ಅಂಗವಾದ ಸೊಷಯಲಿಸ್ಟ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ (ಎಸ್‌ಡಿಪಿಐ) ವನ್ನು ಮುಸ್ಲಿಮರ ಪಕ್ಷವಾಗಿ ದಕ್ಷಿಣ ಭಾರತದಲ್ಲಿ ನೆಲೆಗೊಳಿಸುವ ಹುನ್ನಾರವೂ ಅಡಗಿದೆ. 

ಟಿಪ್ಪು ಜಯಂತಿ ಆಚರಣೆಯ ವಿರೋಧದಲ್ಲಿ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದ್ದು ಸಂಘ ಅದರ ಮುಂಚೂಣಿಯಲ್ಲಿರುವುದೂ ಇತ್ತೀಚಿಗೆ ಸಂಘರಿವಾರದ ಕಾರ್ಯಕರ್ತರ ಮೇಲೆ ಹಿಂಸಾಚಾರ ಹೆಚ್ಚಾಗಲು ಇನ್ನೊಂದು ಕಾರಣ. ಇದೇ ನವೆಂಬರ ೪ರಂದು ಮೈಸೂರಿನ ಪಿರಿಯಾಪಟ್ಟಣದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಂಭಂಧಿಸಿದ ಶಾಂತಿ ಸಭೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗಲೇ ಮಾಗಳಿ ರವಿ ಸಂಶಯಾಸ್ಪದ ರೀತಿಯಲ್ಲಿ ಮರಣ ಹೊಂದಿದರು, ಸನ್ನಿವೇಶವನ್ನು ನೋಡಿದರೆ ಇದು ವ್ಯವಸ್ಥಿತ ಕೊಲೆ ಎನ್ನುವುದು ಗೋಚರವಾಗುತ್ತದೆ. ಟಿಪ್ಪು ಜಯಂತಿ ಆಚರಣೆ ಮುಸ್ಲಿಂ ಮತಗಳನ್ನು ಸೆಳೆಯುವ ರಾಜಕೀಯ ಲಾಭಕ್ಕಾಗಿ ದುರುದ್ಧೇಶದಿಂದ ಕೂಡಿದ್ದು ಎನ್ನುವುದು ಸ್ಪಷ್ಟ. ಕ್ರೂರಿ ಮತಾಂಧ ಟಿಪ್ಪುವಿನ ಐತಿಹಾಸಿಕ ನಿಜಸ್ವರೂಪವನ್ನು ಬಯಲು ಮಾಡಿದ್ದಲ್ಲದೆ ಆತನ ಜಯಂತಿ ಆಚರಣೆಯ ಹಿಂದಿನ ರಾಜಕೀಯ ದುರದ್ಧೇಶದ ವಿರುದ್ಧ ಪ್ರಬಲವಾದ ಜನಾಭಿಪ್ರಾಯವು ರೂಪುಗೊಂಡಿದ್ದು ಅವರನ್ನು ಕೆರಳಿಸಿದೆ. ದುರದೃಷ್ಟದ ಸಂಗತಿಯೆಂದರೆ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರ ಇಂತಹ ಸಮಾಜಘಾತುಕ ಶಕ್ತಿಗಳ ರಕ್ಷಣೆಗೆ ನಿಂತಿರುವಂತೆ ಕಾಣುತ್ತಿದೆ. ಪ್ರತಿಯೊಂದು ಬಾರಿ ಸಂಘಪರಿವಾರದ ಕಾರ್ಯಕರ್ತರ ಕೊಲೆಯಾದಾಗಲೂ ವೈಯಕ್ತಿಕ ದ್ವೇಷದಿಂದ ಕೊಲೆ, ಅಪಘಾತದಿಂದ ಸಾವು ಇತ್ಯಾದಿ ವಾದಗಳನ್ನು ತೇಲಿಬಿಟ್ಟು ತನಿಖೆಯ ದಾರಿತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಹತ್ಯೆಗೀಡಾದವರಿಗೆ ಮಸಿ ಬಳಿಯುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.

ಪಿಎಫ್‌ಐನಂತಹ ಉಗ್ರವಾದಿ ಸಂಘಟನೆಯ ರಕ್ಷಣೆ ಅಥವಾ ಮತೀಯ ಮೂಲಭೂತವಾದವನ್ನು ಪೋಷಿಸುವ ನೀತಿಯಿಂದ ಮುಸ್ಲಿಂ ಮತಗಳ ಧ್ರುವೀಕರಣದಿಂದ ರಾಜಕೀಯ ಲಾಭವಾಗಬಹುದೆಂದು ಕಾಂಗ್ರೆಸ್ ಮತ್ತಿತರ ತಥಾಕಥಿತ ಸೆಕ್ಯುಲರ್ ಪಕ್ಷಗಳು ಭಾವಿಸಬಹುದು. ಆದರೆ ಇಂತಹ ನೀತಿಯು ಸಮಾಜಘಾತುಕ ದೇಶವಿರೋಧಿ ಎನ್ನುವ ಎಚ್ಚರಿಕೆ ಇರಬೇಕು. ಹಾಗೆಯೇ ಇಂತಹ ಹಿಂಸಾಚಾರ ವಿರೋಧಗಳಿಂದ ಸಂಘ ಇನ್ನಷ್ಟು ಬಲಗೊಳ್ಳುವುದೇ ವಿನಹ ಎಂದಿಗೂ ಬೆದರಿಸಲಾರವು. ಏಕೆಂದರೆ ಸಂಘ ಸಮಾಜ ಸಂಘಟನೆ ಮತ್ತು ರಾಷ್ಟ್ರೀಯ ಮುನರುತ್ಥಾನದ ಉನ್ನತ ಧ್ಯೇಯಕ್ಕಾಗಿ ಕಾರ್ಯ ಮಾಡುತ್ತಿದೆಯೇ ಹೊರತು, ಯಾವುದೇ ರಾಜಕೀಯ ಅಧಿಕಾರದ ಆಕಾಂಕ್ಷೆಗಳಿಗಲ್ಲ.


ಏನಿದು ಪಿಎಫ್‌ಐ?
ಕೇರಳದಲ್ಲಿ ಮೂಲವನ್ನು ಹೊಂದಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಥವಾ ಪಿಎಫ್‌ಐ ೨೦೦೬ರಲ್ಲಿ ಪ್ರಾರಂಭಗೊಂಡ ಒಂದು ಮುಸ್ಲಿಂ ಮೂಲಭೂತವಾದಿ ಸಂಘಟನೆಯಾಗಿದೆ. ನಿಷೇಧಿತ ಉಗ್ರ ಸಂಘಟನೆ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ ಇಂಡಿಯಾ- ಸಿಮಿಯ ಹೊಸ ರೂಪ ಎಂದೇ ಹೇಳಬಹುದಾದ ಪಿಎಫ್‌ಐನ ಮುಖಂಡರು ಬಹುತೇಕ ಸಿಮಿಯ ಕಾರ್ಯಕರ್ತರೇ ಆಗಿದ್ದಾರೆ. ಉದಾಹರಣೆಹೆ ಪಿಎಫ್‌ಐನ ಸಂಸ್ಥಾಪಕರಲ್ಲೊಬ್ಬ ಅಬ್ದುಲ್ ರೆಹಮಾನ್ ಸಿಮಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ, ಕೇರಳದ ಸೆಕ್ರೆಟರಿ ಅಬ್ದುಲ್ ಹಮೀದ್ ಮಾಸ್ಟರ್ ಸಿಮಿಯ ಕೇರಳ ಸೆಕ್ರೆಟರಿಯಾಗಿದ್ದ.  ಈ ಸಂಘಟನೆ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ಸಮಾಜಘಾತುಕ ಮತ್ತು ದೇಶವಿರೋಧಿ ಕಾರ್ಯಗಳಿಗಾಗಿ ಸದಾ ಸುದ್ದಿಯಲ್ಲಿದೆ. ಕಿಡ್ನಾಪ್, ಕೊಲೆ, ಬೆದರಿಕೆ ಹಾಕುವುದು, ಗಲಭೆ ಹುಟ್ಟಿಸುವುದು, ದ್ವೇಷದ ಹರಡುವುದು ಮೊದಲಾದವುಗಳಿಂದ ಹಿಡಿದು ಮತೀಯ ಮೂಲಭೂತವಾದ, ಲವ್ ಜಿಹಾದ್, ಇಸ್ಲಾಂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಭಂಧ ಇವೆ ಎನ್ನುವವರೆಗೆ ಅನೇಕ ಆರೋಪಗಳು ಪಿಎಫ್‌ಐ ಮೇಲೆ ನಿರಂತರ ಕೇಳಿ ಬಂದಿವೆ. ನ್ಯಾಶನಲ್ ಡೆವೆಲೊಪ್‌ಮೆಂಟ್ ಫ್ರಂಟ್(ಎನ್‌ಡಿಎಫ್), ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ(ಕೆಎಫ್‌ಡಿ), ಮನಿತ ನೀತಿ ಪಸರೈ(ಎಮ್‌ಎನ್‌ಪಿ) ಮೊದಲಾದ ಸಂಘಟನೆಗಳು ಪಿಎಫ್‌ಐನಲ್ಲಿ ವಿಲೀನಗೊಂಡು ದಕ್ಷಿಣ ಭಾರತದ ರಾಜ್ಯಗಳಿಗೆ ಪಿಎಫ್‌ಐ ಹರಡಿಕೊಂಡಿದೆ. ನ್ಯಾಶನಲ್ ವುಮನ್ಸ್ ಫ್ರಂಟ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮೊದಲಾದ ವಿವಿಧ ಮೋರ್ಚಾಗಳ ಮೂಲಕ ತನ್ನ ಜಾಲವನ್ನು ವಿಸ್ತರಿಸಿದ್ದು ೮೦ ಸಾವಿರಕ್ಕು ಹೆಚ್ಚು ಸದಸ್ಯತ್ವ ಇದೆ ಎಂದು ಹೇಳಿಕೊಳ್ಳುತ್ತದೆ. ಸಮಾನತೆಯ ಸಮಾಜ ಸ್ಥಾಪನೆಗಾಗಿ ಹೋರಾಡುವ ಸಾಮಾಜಿಕ ಸಂಘಟನೆ ಎಂದು ಹೇಳಿಕೊಳ್ಳುವ ಈ ಸಂಘಟನೆಯ ಸದಸ್ಯರೆಲ್ಲರೂ ಮುಸ್ಲಿಮರೇ. ಸೋಷಯಲಿಸ್ಟ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಅಥವಾ ಎಸ್‌ಡಿಪಿಐ ಪಿಎಫ್‌ಐ ಹುಟ್ಟುಹಾಕಿದ ರಾಜಕೀಯ ಪಕ್ಷವಾಗಿದ್ದು ಆಸ್ಸಾಮಿನ ಬದ್ರುದ್ದೀನ ಅಜ್ಮಲ್‌ನ ಏಐಯುಡಿಎಫ್ ಮತ್ತು ಹೈದರಾಬಾದಿನ ಓವೈಸಿಯ ಎಮ್‌ಐಎಮ್ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮುಸಲ್ಮಾನರ ಪಕ್ಷವಾಗಿ ನೆಲೆಗೊಳ್ಳಲು ಪ್ರಯತ್ನಿಸುತ್ತಿದೆ. 

ಏಪ್ರಿಲ್ 2013ರಲ್ಲಿ ಕೇರಳದ ಕಣ್ಣೂರಿನ ನಾರತ್‌ನಲ್ಲಿ ಪಿಎಫ್‌ಐ ತರಬೇತಿ ಕೇಂದ್ರದಲ್ಲಿ ಪೋಲಿಸರು ದಾಳಿ ಮಾಡಿದಾಗ ನಾಡಬಾಂಬುಗಳು, ಮಚ್ಚು ಮೊದಲಾದ ಆಯುಧಗಳು, ಬಾಂಬ್ ತಯಾರಿಕಾ ಕಚ್ಚಾವಸ್ತುಗಳು ದೊರೆತವು, 21 ಪಿಎಫ್‌ಐ ಕಾರ್ಯಕರ್ತರು ಬಂಧಿತರಾದರು. 2011ರಲ್ಲಿ ಮೈಸೂರಿನಲ್ಲಿ ಇಬ್ಬರು ಹುಡುಗರನ್ನು ಅಪಹರಿಸಿದ ಕೆಎಫ್‌ಡಿಯ ಕಾರ್ಯಕರ್ತರು ಸಂಘಟನೆಯ ಫಂಡಿಗಾಗಿ ೫ಕೋಟಿ ಒತ್ತೆ ಹಣದ ಬೇಡಿಕೆ ಇಟ್ಟಿದ್ದರು. ಆ ಇಬ್ಬರೂ ಹುಡುಗರನ್ನು ಸಾಯಿಸಲಾಯಿತು. 2012ರಲ್ಲಿ ಕೇರಳ ಸರ್ಕಾರ ಉಚ್ಛ ನ್ಯಾಯಾಲಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಪಿಎಫ್‌ಐ ಆರೆಸ್ಸೆಸ್ ಮತ್ತು ಸಿಪಿಐ(ಎಮ್)ನ ಕಾರ್ಯಕರ್ತರ ಕೊಲೆಯ ೨೭ ಪ್ರಕರಣಗಳಲ್ಲಿ ಪಿಎಫ್‌ಐ ಕೈವಾಡ ಇದೆ ಎಂದು ಹೇಳಿದೆ. ೨೦೧೨ರಲ್ಲಿ ಪುನಾ, ಚೆನ್ನೈ, ಹೈದರಾಬಾದ ದೆಹಲಿಗಳಿಂದ ಲಕ್ಷಾಂತರ ಎಸ್‌ಎಮ್‌ಎಸ್‌ಗಳನ್ನು ಕಳುಹಿಸಿ ಇತರ ನಗರಗಳಲ್ಲಿ ನೆಲೆಸಿರುವ ಪೂರ್ವೋತ್ತರ ರಾಜ್ಯದ ಜನರನ್ನು ಬೆದರಿಸುವ ಪ್ರಚಾರಕಾರ್ಯದ ಹಿಂದೆ ಪಿಎಫ್‌ಐನ ಅಂಗ ಸಂಸ್ಥೆಗಳಾದ ಕೆಎಫ್‌ಡಿ, ಎಮ್‌ಎನ್‌ಪಿಗಳಿದ್ದವು. ಇವುಗಳಲ್ಲಿ ಕೆಲವು ಎಸ್‌ಎಮ್‌ಎಸ್‌ಗಳು ಪಾಕಿಸ್ತಾನದಿಂದಲೂ ಕಳುಹಿಸಲ್ಪಟ್ಟಿದ್ದವು. ಇತ್ತೀಚಿನ  ಪಿಎಫ್‌ಐಗೆ ಸೇರಿದ ಕೆಲವು ಉಗ್ರರು ಐಎಸ್‌ಐಎಸ್‌ನ್ನು ಸೇರಿದ್ದು ವರದಿಯಾಗಿವೆ.

Wednesday, November 2, 2016

ಜಮ್ಮು ಮತ್ತು ಕಾಶ್ಮೀರ : ಎಂದೋ ಬಗೆಹರಿದ ಕಥೆ

(ವಿಶ್ವವಾಣಿ  26/10/2016)

ಅಕ್ಟೋಬರ್ 26 ಜಮ್ಮು ಕಾಶ್ಮೀರ ಭಾರತದಲ್ಲಿ ವಿಲೀನಗೊಂಡ ದಿವಸ, ತನ್ನಿಮಿತ್ತ ರಾಜ್ಯದ ವಿಲೀನವನ್ನು ವಿಶ್ಲೇಷಿಸುವ ಈ ಲೇಖನ.
1947ರ ಭಾರತದ ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ನೇರ ಆಡಳಿತಕ್ಕೊಳಪಟ್ಟ ಬ್ರಿಟಿಷ್ ಇಂಡಿಯ ಮತ್ತು ಬ್ರಿಟಿಷರ ಸಾರ್ವಭೌಮತೆಯ ಅಡಿಗೆ ರಾಜರುಗಳ ಆಡಳಿತಕ್ಕೊಳಪಟ್ಟ ಪ್ರದೇಶ ಹೀಗೆ ಎರಡು ಭಾಗಗಳಾಗಿತ್ತು. ಭಾರತ ಸ್ವಾತಂತ್ರ್ಯ ಅಧಿನಿಯಮ 1947ರಂತೆ ಭಾರತ ಬ್ರಿಟಿಷರ ಆಡಳಿತದಿಂದ ಮುಕ್ತವಾದಮೇಲೆ ರಾಜರ ಆಡಳಿತವಿದ್ದ ಪ್ರದೇಶಗಳ ಮೇಲೆಯೂ ಬ್ರಿಟಿಷರ ಸಾರ್ವಭೌಮತೆ ಕೊನೆಗೊಂಡಿತು. ಹಾಗೆಯೇ ದೇಶದ ವಿಭಜನೆಯು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಭೂಭಾಗಕ್ಕೆ ಮಾತ್ರ ಅನ್ವಯವಾಗಿತ್ತು. ರಾಜಾಡಳಿತ  ಸಂಸ್ಥಾನಗಳು ಮತ್ತು ಬ್ರಿಟಿಷ್ ಅಧಿಪತ್ಯದ ಸಂಬಂಧ ಬ್ರಿಟಿಷ್ ಸಾರ್ವಭೌಮತೆಯ ಸೂತ್ರ ಮತ್ತು ಅನೇಕ ಒಪ್ಪಂದಗಳಿಂದ ನಿಯಂತ್ರಣಕ್ಕೊಳಪಟ್ಟಿದ್ದವು, ಆದ್ದರಿಂದ ಬ್ರಿಟಿಷ್ ಸಾರ್ವಭೌಮತೆ ಕೊನೆಯಾಗುವುದರೊಂದಿಗೆ ಈ ಒಪ್ಪಂದಗಳು ಕೊನೆಗೊಂಡವು. ಹೊಸ ಆಡಳಿತದೊಂದಿಗೆ ಈ ಒಪ್ಪಂದಗಳು ಮುಂದುವರಿಯುವಂತಿರಲಿಲ್ಲ. ಬ್ರಿಟಿಷ್ ಸಾರ್ವಭೌಮತೆ ಕೊನೆಯಾಗುವುದೆಂದರೆ ರಾಜಾಡಳಿತ ರಾಜ್ಯಗಳ ಮೇಲೆ ಬ್ರಿಟಿಷ್ ಅಧಿಪತ್ಯಕ್ಕೆ ಇದ್ದ ಅಧಿಕಾರಗಳೆಲ್ಲವೂ ಪುನಃ ರಾಜ್ಯಕ್ಕೆ ಮರಳಿ ಅವು ಸ್ವತಂತ್ರಗೊಂಡವು. ಜೊತೆಗೆ ಭಾರತ ಮತ್ತು ಪಾಕಿಸ್ತಾನ ಡೊಮಿನಿಯನ್‌ಗಳೆಂಬ ಎರಡು ಹೊಸ ವ್ಯವಸ್ಥೆಗಳೊಡನೆ ಮಾತುಕತೆ ನಡೆಸಲು ಅವು ಮುಕ್ತವಾಗಿದ್ದವು. ರಾಜಾಡಳಿತ ಪ್ರಾಂತಗಳು ಸ್ವತಂತ್ರವಾಗಿ ಉಳಿಯುವುದು ಎಂದರೆ ಸನಾತನ ಕಾಲದಿಂದ ಒಂದು ರಾಷ್ಟ್ರವಾಗಿದ್ದ ಭಾರದ ಏಕತೆ ಭಂಗವಾದಂತೆ. ಮತ್ತು ಎರಡು ಶತಮಾನಗಳ ಬ್ರಿಟಿಷ ಆಡಳಿತದ ಸಮಯದಲ್ಲಿ ವ್ಯಾಪಾರ, ವ್ಯವಹಾರ ಅಭಿವೃದ್ಧಿ, ಸಂಪರ್ಕ ಸಾಧನಗಳು, ರೈಲು, ಬಂದರು, ನೀರಾವರಿ ವ್ಯವಸ್ಥೆ ಮೊದಲಾದ ಹಲವು ವಿಷಯಗಳಲ್ಲಿ ಬ್ರಿಟಿಷ್ ಆಡಳಿತ ಮತ್ತು ರಾಜ್ಯಗಳ ನಡುವೆ ಅನೇಕ ಒಪ್ಪಂದಗಳ ಸಂಕೀರ್ಣ ವ್ಯವಸ್ಥೆ ರೂಪುಗೊಂಡಿತ್ತು. ಆದ್ದರಿಂದ ಐದುನೂರ ಐವತ್ತಕ್ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಸಣ್ಣಪುಟ್ಟ ರಾಜ್ಯಗಳು ಭಾರತ ಅಥವಾ ಪಾಕಿಸ್ತಾನ ಒಕ್ಕೂಟವನ್ನು ಸೇರದೆ ಸ್ವತಂತ್ರವಾಗಿ ಆಳ್ವಿಕೆ ನಡೆಸುವುದು ಅಸಾಧ್ಯವಾಗಿತ್ತು. ಆದ್ದರಿಂದ ಭೌಗೋಳಿಕ ನಿರಂತರತೆಯನ್ನು ಗಮನದಲ್ಲಿಟ್ಟುಕೊಂಡು ತಿದ್ದುಪಡಿಗೊಂಡ ಭಾರತ ಸರ್ಕಾರ ಅಧಿನಿಯಮ 1935 ಅನ್ವಯವಾಗುವಂತೆ ಭಾರತ ಅಥವಾ ಪಾಕಿಸ್ತಾನ ಒಕ್ಕೂಟವನ್ನು ಸೇರುವಂತೆ ಸಂಸ್ಥಾನಗಳಿಗೆ ಸಲಹೆ ನೀಡಲಾಯಿತು. ಭಾರತ ಸ್ವಾತಂತ್ರ ಅಧಿನಿಯಮ 1947ರಲ್ಲಿ ಯಾವುದೇ ಸಂಸ್ಥಾನವು ಸ್ವತಂತ್ರವಾಗಿರುವ ಆಯ್ಕೆ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ರಾಜಾಡಳಿತ ಸಂಸ್ಥಾನಳೊಂದಿಗೆ ಭಾರತದ ರಾಜತಾಂತ್ರಿಕ ಸಂಭಂಧವನ್ನು ನಿರ್ಧರಿಸುವ ಸಲುವಾಗಿ ಅಂದಿನ ಗೃಹ ಮಂತ್ರಿ ಸರ್ದಾರ ಪಟೆಲ್ ಮತ್ತು ಕಾರ್ಯದರ್ಶಿ ವಿ ಪಿ ಮೆನನ್ ಎರಡು ಕರಾರು ಪತ್ರಗಳನ್ನು ತಯಾರಿಸಿದರು. ಮೊದಲನೆಯದು ಬ್ರಿಟಿಷ್ ಸಾರ್ವಭೌಮತೆ ಮತ್ತು ಸಂಸ್ಥಾನಗಳ ನಡುವೆ ಇದ್ದ ಆಡಳಿತ ವ್ಯವಸ್ಥೆಗಳು ಹೊಸದಾಗಿ ಸ್ಥಾಪನೆಗೊಂಡ ಭಾರತ ಡೊಮಿನಿಂiನ್ನಿನೊಡನೆ ಮುಂದುವರಿಯುತ್ತವೆ ಎನ್ನುವ ಸ್ಥಾಯಿ ಒಪ್ಪಂದ. ಎರಡನೆಯದು ರಾಜನು ತನ್ನ ರಾಜ್ಯವನ್ನು ಭಾರತದೊಂದಿಗೆ ವಿಲೀನಗೊಳಿಸುವ ವಿಲಯನ ಒಪ್ಪಂದ. ಈ ವಿಲಯನ ಒಪ್ಪಂದದ ಅಡಿಯಲ್ಲೇ ಮೈಸೂರು, ಟ್ರಾವಾಂಕೂರ್, ಪಟಿಯಾಲ, ಗ್ವಾಲಿಯರ್ ಮೊದಲಾದ ದೊಡ್ಡ ಪ್ರಾಂತಗಳೂ ಸೇರಿದಂತೆ ಇತರ ಐದುನೂರ ಐವತ್ತಕ್ಕೂ ಹೆಚ್ಚು ಸಣ್ಣಪುಟ್ಟ ರಾಜ್ಯಗಳು ಭಾರತ ಒಕ್ಕೂಟದಲ್ಲಿ ಸೇರ್ಪಡೆಯಾದವು. ಇದೇ ವಿಲಯನ ಒಪ್ಪಂದಕ್ಕೆ ತಮ್ಮ ಸಾರ್ವಭೌಮ ಅಧಿಕಾರವನ್ನು ಬಳಸಿ ಸಹಿ ಹಾಕುವ ಮೂಲ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಹಾರಾಜ ಹರಿಸಿಂಗ್ ತನ್ನ ರಾಜ್ಯವನ್ನು ಅಕ್ಟೋಬರ್ 26 1947ರಂದು ಭಾರತದಲ್ಲಿ ವಿಲೀನಗೊಳಿಸಿದರು.

ಜಮ್ಮು ಕಾಶ್ಮೀರ ನರೇಶ ಹಾಗೂ ಟಿಬೇಟ್ ಆದಿ ದೇಶಾಧಿಪತಿ ಎಂದು ಬಿರುದಿದ್ದ ಮಹಾರಾಜ ಹರಿಸಿಂಗ್ ಆಡಳಿತಕ್ಕೊಳಪಟ್ಟ ಕ್ಷೇತ್ರ 1947ರಲ್ಲಿ ಸುಮಾರು 2ಲಕ್ಷ 22ಸಾವಿರ ಚದರ ಕಿಮೀ. ಸುಮಾರು ಶೇ 76ರಷ್ಟು ಮುಸಲ್ಮಾನ ಜನಸಂಖ್ಯೆಯಿದ್ದ ಈ ಪ್ರಾಂತ ಪಾಕಿಸ್ತಾನ, ಅಪಘಾನಿಸ್ತಾನ, ತಜಕಿಸ್ತಾನ, ಟಿಬೇಟ್, ಚೀನ ಈ ಐದು ದೇಶಗಳೊಡನೆ ತನ್ನ ಗಡಿಯನ್ನು ಹಂಚಿಕೊಂಡಿತ್ತು. ಅತ್ಯಂತ ಆಯಕಟ್ಟಿನ ಪ್ರದೇಶವಾಗಿದ್ದ ಈ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪಾಕಿಸ್ತಾನ ಬಯಸಿತ್ತು ಹಾಗೂ ಮಹಾರಾಜ ಹರಿಸಿಂಗರನ್ನು ಬಗ್ಗಿಸುವ ಎಲ್ಲ ಪ್ರಯತ್ನಗಳನ್ನು ಮಹಮ್ಮದ್ ಅಲಿ ಜಿನ್ನಾ ಮಾಡಿದ್ದರು. ಎಲ್ಲ ಪ್ರಯತ್ನಗಳು ಫಲ ನೀಡದಿದ್ದಾಗ ಅಕ್ಟೋಬರ ೨೨ರಂದು ರಾಜ್ಯದ ಮೇಲೆ ಆಕ್ರಮಣ ಮಾಡಿದ ಪಾಕಿಸ್ತಾನ ಬಲಪೂರ್ವಕವಾಗಿ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಯಿತು. ಈ ಸಂದರ್ಭದಲ್ಲಿ ರಾಜ್ಯದ ರಕ್ಷಣೆಗಾಗಿ ಭಾರತೀಯ ಸೇನೆಯ ಸಹಾಯ ಬಯಸಿದ ಮಹಾರಾಜ ಹರಿಸಿಂಗ್ ವಿಲಯನ ಒಪ್ಪಂದಕ್ಕೆ ಸಹಿ ಹಾಕಿದರು. ಅಕ್ಟೋಬರ್ 27 1947ರಂದು ಭಾರತದ ಗವರ್ನರ್ ಜನರಲ್ ಮೌಂಟಬ್ಯಾಟನ್ ಅಂಕಿತದೊಂದಿಗೆ ಜಮ್ಮು ಕಾಶ್ಮೀರ ರಾಜ್ಯ ಭಾರತದಲ್ಲಿ ಸೇರ್ಪಡೆಯಾಯಿತು.

ಜಮ್ಮು ಕಾಶ್ಮೀರದ ಪ್ರತ್ಯೇಕತೆ ವಿಶೇಷ ಸ್ಥಾನಮಾನಗಳನ್ನು ಪ್ರತಿಪಾದಿಸುವವರು, ರಾಜ್ಯದ ವಿಲೀನವನ್ನೇ ಪ್ರಶ್ನಿಸುವವರು ಕೆಲವು ವಿಷಯಗಳನ್ನು ಗಮನಿಸಬೇಕು. ಉಳಿದ ರಾಜ್ಯಗಳ ವಿಲೀನದ ಮಾದರಿಯಲ್ಲೇ ಜಮ್ಮು ಕಾಶ್ಮೀರ ರಾಜ್ಯವೂ ಕೂಡ ಭಾರತ ಒಕ್ಕೂಟದಲ್ಲಿ ಸೇರ್ಪಡೆಯಾಯಿತು. ಮೈಸೂರು, ಟ್ರಾವಾಂಕೂರ, ಗ್ವಾಲಿಯರ್ ಮೊದಲಾದ ಸಂಸ್ಥಾನಗಳ ರಾಜರು ಅಂಕಿತ ಹಾಕಿದ ಯಾವುದೇ ಷರತ್ತಿಗೆ ಒಳಪಟ್ಟಿರದ ವಿಲಯನ ಒಪ್ಪಂದಕ್ಕೇ ಮಹಾರಾಜ ಹರಿಸಿಂಗ್ ಸಹಿ ಹಾಕಿದರು. ಈ ವಿಲೀನ ಒಪ್ಪಂದದ ಒಂದನೇ ವಿಧಿಯಲ್ಲ್ಲಿ ಭಾರತ ಅಧಿಪತ್ಯದ ಶಾಸಕಾಂಗ, ಒಕ್ಕೂಟದ ನ್ಯಾಯಾಂಗ ಮತ್ತು ಅಧಿಪತ್ಯದ ಉದ್ಧೇಶಗಳಿಗಾಗಿ ಸ್ಥಾಪಿತವಾಗುವ ಯಾವುದೇ ಅಧಿಕರಣಗಳಿರುವ ಭಾರತದ ಅಧಿಪತ್ಯಕ್ಕೆ ಸೇರಿಕೊಳ್ಳುವುದನ್ನು ಮತ್ತು ಸಂಭಂಧಿಸಿದ ಷರತ್ತುಗಳಿಗೆ ಅನುಗುಣವಾಗಿರಲು ಅಂಗೀಕರಿಸಿದ್ದೇನೆ. 9ನೇ ವಿಧಿಯಲ್ಲಿ ಹೇಳಿರುವಂತೆ ಈ ಒಪ್ಪಂದವನ್ನು ರಾಜ್ಯದ ಪರವಾಗಿ ಜಾರಿಗೊಳಿಸುವುದಾಗಿ ಮತ್ತು ಈ ಒಪ್ಪಂದದಲ್ಲಿನ ಉಲ್ಲೇಖ ನನ್ನನ್ನು ಅಥವಾ ರಾಜ್ಯದ ಆಡಳಿತಗಾರರನ್ನು ಮತ್ತು ನಂತರದ ವಾರಸುದಾರರಿಗೂ ಅನ್ವಯವಾಗುದು ಎಂದು ಜಾಹೀರುಪಡಿಸುತೇನೆ. ಎಂದು ಹೇಳಿದೆ.

ತನ್ನ ರಾಜ್ಯವನ್ನು ಸೇರ್ಪಡೆಗೊಳಿಸುವಲ್ಲಿ ಹರಿಸಿಂಗ್ ವಿಳಂಬ ಮಾಡಿದರು, ಅವರು ಜಮ್ಮು ಕಾಶ್ಮೀರವನ್ನು ಸ್ವತಂತ್ರವಾಗಿರಿಸ ಬಯಸಿದ್ದರು ಎಂದು ಆರೋಪ ಮಾಡಲಾಗುತ್ತದೆ. ಆದರೆ ವಾಸ್ತವದಲ್ಲಿ ಭಾರತದ ಸ್ವಾತಂತ್ರವನ್ನು ಪ್ರಬಲವಾಗಿ ಪ್ರತಿಪಾದಿಸುವವರಲ್ಲಿ ಹರಿಸಿಂಗ್ ಮುಂಚೂಣಿಯಲ್ಲಿದ್ದರು. 1947ರ ಜುಲೈ 18ರಂದು ಸರ್ದಾರ್ ಪಟೇಲರಿಗೆ ಬರೆದ ಪತ್ರದಲ್ಲಿ ಹರಿಸಿಂಗ್ ಭಾರತ ಒಕ್ಕೂಟವನ್ನು ಸೇರಲು ಉತ್ಸುಕರಾಗಿದ್ದರು ಎನ್ನುವ ಅಂಶ ಸ್ಪಷ್ಟವಾಗಿದೆ. ಆದರೆ ಪ್ರಥಮ ಪ್ರಧಾನಿ ನೆಹರು ಜಮ್ಮು ಕಾಶ್ಮೀರದ ಆಡಳಿತವನ್ನು ಶೇಖ್ ಅಬ್ದುಲ್ಲರಿಗೆ ಹಸ್ತಾಂತರಿಸಬೇಕೆಂಬ ಷರತ್ತು ಹಾಕಿದ್ದರು! ವಿಲೀನದ ನಂತರ ರಾಜ್ಯದ ಮಧ್ಯಂತರ ಆಡಳಿತ ಚುಕ್ಕಾಣಿಯನ್ನು ಶೇಖ್‌ಗೆ ಕೊಡಿಸುವಲ್ಲಿ ಯಶಸ್ವಿಯೂ ಆದರು. ನಂತರದ ಕಾಲಘಟ್ಟದಲ್ಲಿ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಭಂಧಿಸಿದಂತೆ ನೆಹರು-ಶೇಖ್, ಇಂದಿರಾ-ಶೇಖ್, ರಾಜೀವ್-ಪಾರೂಕ್ ಮುಂತಾದ ಒಪ್ಪಂದಗಳು ನಡೆದವು. ಶೇಖ್ ಮತ್ತವರು ಕುಟುಂಬದ ಮೇಲೆ ನೆಹರು-ಗಾಂಧಿ ಪರಿವಾರಕ್ಕಿದ್ದ ವ್ಯಾಮೋಹ ಇನ್ನೂ ನಿಗೂಢವಾಗಿದೆ. 

1951ರಲ್ಲಿ ರಾಜ್ಯದಲ್ಲಿ ಸಂವಿಧಾನ ಸಭೆ ರಚನೆಯಾಯಿತು. ಇದರ ಎಲ್ಲ 75 ಸದಸ್ಯರೂ ಶೇಖ್ ನೇತೃತ್ವದ ನ್ಯಾಶನಲ್ ಕಾನ್ಫರೆನ್ಸ್‌ಗೆ ಸೇರಿದವರಾಗಿದ್ದರು. ಇದೇ ಶಾಸನ ಸಭೆಯು 1954ರ ಫೆಬ್ರುವರಿ 6ರಂದು ಭಾರತದಲ್ಲಿ ಜಮ್ಮು ಕಾಶ್ಮೀರದ ವಿಲೀನವನ್ನು ಊರ್ಜಿಗೊಳಿಸಿತು.  ಇದೇ ಶಾಸನ ಸಭೆಯು ರಾಜ್ಯದ ಸಂವಿಧಾನವನ್ನು ರಚಿಸಿತು. ಜಮ್ಮು ಕಾಶ್ಮೀರ ರಾಜ್ಯದ ಸಂವಿಧಾನದ ಪ್ರಿಯಾಂಬಲ್ ಮತ್ತು ಮೂರನೇ ವಿಧಿಯಲ್ಲಿ ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಹೇಳಲಾಗಿದೆ. ಹಾಗೆಯೇ ವಿಧಿ ೪ರಲ್ಲಿ ರಾಜ್ಯದ ಭೌಗೋಳಿಕ ವಿಸ್ತಾರವು 17 ಆಗಸ್ಟ 1947ರಂದು ಇರುವಂತೆ ರಾಜರ ಆಳ್ವಿಕೆಗೆ ಸೇರಿದ ಪ್ರದೇಶ ಎಂದು ಹೇಳಲಾಗಿದೆ. ಅಂದರೆ ಇದರಲ್ಲಿ ಜಮ್ಮು, ಕಾಶ್ಮೀರ, ಪಾಕ್ ಆಕ್ರಮಿತ ಪ್ರದೇಶ, ಗಿಲ್ಗಿಟ್-ಬಾಲ್ಟಿಸ್ತಾನ, ಚೀನಾ ಆಕ್ರಮಿಸಿಕೊಂಡಿರುವ ಭೂಭಾಗವೂ ಸೇರಿದ ಲಢಾಕ್ ಈ ಎಲ್ಲ ಭಾಗಗಳೂ ಸೇರುತ್ತವೆ. ೫ನೇ ವಿಧಿಯು ರಾಜ್ಯಕ್ಕೆ ಸಂಭಂಧಿಸಿ ವಿಷಯಗಳಲ್ಲಿ ಸಂಸತ್ತಿಗೆ ಕಾನೂನು ರೂಪಿಸುವ ಅಧಿಕಾರವನ್ನು ನೀಡುತ್ತದೆ. ೧೪೭ನೇ ವಿದಿಯು ೩ನೇ ಮತ್ತು ೫ನೇ ವಿಧಿಯ ತಿದ್ದುಪಡಿಯನ್ನು ನಿಷೇಧಿಸಿದೆ. ಇದರಿಂದ ರಾಜ್ಯದ ಸಂವಿಧಾನ ಸಭೆಯ ಇಚ್ಛೆಯಂತೆ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಭಾರತದ ಸಾರ್ವಭೌಮತೆಯ ಅಂಗೀಕಾರ ಮತ್ತು ಇದನ್ನು ಅಪರಿವರ್ತನೀಯ ಎನ್ನುವ ಅಂಶ ಸ್ಪಷ್ಟವಾಗುತ್ತದೆ. ಭಾರತದ ಸಂಸತ್ತು ಅನೇಕ ಬಾರಿ ಜಮ್ಮು ಕಾಶ್ಮೀರದ ಮೇಲೆ ಭಾರತದ ಸಾರ್ವಭೌಮತೆಯನ್ನು ಎತ್ತಿ ಹಿಡಿದದ್ದಲ್ಲದೇ 1962 ಮತ್ತು 1994ರ ಠರಾವಿನಲ್ಲಿ ಸಂಪೂರ್ಣ ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎನ್ನುವ ನಿರ್ಣಯವನ್ನು ಅಂಗೀಕರಿಸಿದೆ. 

ಇವೆಲ್ಲವುಗಳ ಜೊತೆಗೆ ರಾಜ್ಯದ ವಿಲೀನವನ್ನು ಪ್ರಶ್ನಿಸಿ ಜನಮತಗಣನೆ ನಡೆಸಬೇಕೆಂದು ವಿಶ್ವಸಂಸ್ಥೆಯ ನಿರ್ಣಯವನ್ನು ಉಲ್ಲೇಖಿಸುವವರು ಒಂದರೆಡು ಅಂಶಗಳನ್ನು ಗಮನಿಸುವುದು ಒಳಿತು. ಪಾಕ್ ಆಕ್ರಮಣದ ನಂತರ ಯುದ್ಧವಿರಾಮದ ಮಧ್ಯಸ್ಥಿಕೆವಹಿಸಿದ ವಿಶ್ವಸಂಸ್ಥೆಯ ರಕ್ಷಣಾ ಪರಿಷತ್ತು ತನ್ನ 47ನೇ ನಿರ್ಣಯದಲ್ಲಿ ರಾಜ್ಯದಲ್ಲಿ ಜನಮತಗಣನೆಯನ್ನು ನಡೆಸುವ ಮೊದಲು ಪಾಕಿಸ್ತಾನವು ತನ್ನ ಸೇನೆಯನ್ನು ಹಿಂತೆಗೆಯಬೇಕು ಮತ್ತು ಕಾನೂನು ಸುವ್ಯವಸ್ಥೆಗೆ ಬೇಕಾಗುವಷ್ಟು ಬಲವನ್ನು ಭಾರತ ನಿಯೋಜನೆಗೊಳಿಸಬೇಕು ಎಂದು ಹೇಳಿದೆ. ಆದರೆ ಆಜಾದ್ ಕಾಶ್ಮೀರ ಎಂದು ಕರೆಯುವ ಆಕ್ರಮಿತ ಪ್ರದೇಶದಿಂದ ಪಾಕ್ ಸೇನೆ ಇನ್ನೂ ಹೊರಹೋಗಿಲ್ಲ. ಪಾಕಿಸ್ತಾನ ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶವನ್ನು ತನ್ನ ಒಂದು ಪ್ರಾಂತವನ್ನಾಗಿ ಮಾಡಿಕೊಂಡಿದೆ. ಅಲ್ಲದೇ ಕಳೆದ ಆರೂವರೆ ದಶಕಗಳಲ್ಲಿ ರಾಜ್ಯದ ವ್ಯವಸ್ಥಿತವಾಗಿ ಜನಸಂಖ್ಯೆಯಲ್ಲಿ ಏರುಪೇರು ಮಾಡಲಾಗಿದೆ. ಹಾಗೆಯೇ ಇದುವರೆಗೆ ನಡೆದ ಚುನಾವಣೆಗಳಲ್ಲಿ ಪ್ರತ್ಯೇಕತಾವಾದಿಗಳ ಬಹಿಷ್ಕಾರದ ನಡುವೆಯೂ ಹೆಚ್ಚು ಪ್ರಮಾಣದ ಮತದಾನ ನಡೆಯುತ್ತಿದೆ. 2014ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 76 ಪ್ರತಿಶತ ಮತದಾನವಾಗಿದ್ದು ಇದಕ್ಕೇ ಸಾಕ್ಷಿ. ಇವುಗಳನ್ನು ಗಮನಿಸಿದಾಗ ಜನಮತಗಣನೆಯ ಕೂಗಿನ ಹಿಂದಿನ ಪೊಳ್ಳುತನ ಅರಿವಾಗುತ್ತದೆ.

ಯಾವ ದೃಷ್ಟಿಯಿಂದ ನೋಡಿದರೂ ಭಾರತದಲ್ಲಿ ಜಮ್ಮು ಕಾಶ್ಮೀರ ರಾಜ್ಯದ ಸಂಪೂರ್ಣ ವಿಲೀನ ಪ್ರಶ್ನಾತೀತ ಮತ್ತು ಅಪರಿವರ್ತನೀಯ. ಈ ವಿಷಯವನ್ನಿಟ್ಟುಕೊಂಡು ತಮ್ಮ ರಾಜಕೀಯ ಲಾಭವನ್ನು ಸಾಧಿಸುವವರು ದೇಶದ ಏಕತೆಗೆ ಭಂಗ ತರುವುದಷ್ಟೇ ಅಲ್ಲ ಕಾಶ್ಮೀರ ಕಣಿವೆಯ ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ ಇನ್ನೂ ಜೀವಂತವಾಗಿರುವ ಪ್ರತ್ಯೇಕತೆಯನ್ನು ಪೋಷಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಹುಳ್ಯದ ರಾಜ್ಯವೆಂದು ನಡೆಯುವ ತುಷ್ಟೀಕರಣದ ರಾಜಕೀಯವಾಗಲೀ ಅಥವಾ ಮಾಹಿತಿಯ ಕೊರತೆಯಿಂದ ಮಿಥ್ಯಾವಾದಗಳನ್ನೇ ನಂಬಿರುವ ಪ್ರತಿಪಾದನೆಗಳಾಗಲೀ ಜಮ್ಮು ಕಾಶ್ಮೀರದ ಹಿತದೃಷ್ಟಿಯಿಂದ ಕೊನೆಗೊಳ್ಳಬೇಕು.

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...