Monday, November 25, 2013

ಒಡಿಶಾ ಸಂತ್ರಸ್ತರ ಬದುಕಿನಲ್ಲಿ "ಚಂಡಮಾರುತ"

(ಪುಂಗವ: 1/12/2013)

ಫೈಲಿನ್ ಚಂಡಮಾರುತದ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಕರಾವಳಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದರಿಂದ ಹೆಚ್ಚಿನ ಸಾವು ನೋವು ಸಂಭವಿಸಿಲ್ಲವೆನ್ನುವುದು ನಿಜವಾದರೂ ತಮ್ಮ ಮನೆ ಆಸ್ತಿಗಳನ್ನು ಕಳೆದುಕೊಂಡ ಸಂತ್ರಸ್ತರು ತಮ್ಮ ಬದುಕನ್ನು ಪುನ: ಕಟ್ಟಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಸಾವು ನೋವಿನ ಸಂಖ್ಯೆಯನ್ನೇ ನೈಸರ್ಗಿಕ ವಿಪತ್ತಿನ ತೀವ್ರತೆಯ ಮಾನದಂಡವಾಗಿಸಿಕೊಂಡಿರುವ ಮಾನಸಿಕತೆಯಿಂದಾಗಿ ಹಾನಿಯ ನಿಜವಾದ ಗಣನೆಯಾಗದೇ ಅಗತ್ಯ ನೆರವು ಸಂತ್ರಸ್ತರನ್ನು ತಲುಪುತ್ತಿಲ್ಲ ಮತ್ತು ಪುನರ್ವಸತಿ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿವೆ.


ಕಳೆದ ಅಕ್ಟೋಬರ ತಿಂಗಳಲ್ಲಿ ಪ್ರತಿಘಂಟೆಗೆ 260ಕೀಮೀ ವೇಗದಲ್ಲಿ ಪೂರ್ವಕರಾವಳಿಯನ್ನು ಅಪ್ಪಳಿಸಿದ ಫೈಲಿನ್ ಚಂಡಮಾರುತದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಚಂಡಮಾರುತದ ಪ್ರಭಾವವಿರುವ ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಿಂದ ಹಿಂದೆಂದೂ ನಡೆದಿರದ ರೀತಿಯಲ್ಲಿ ಬೃಹತ್ ಪ್ರಮಾಣದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಸಂತ್ರಸ್ತರಿಗಾಗಿ ಸಾವಿರಕ್ಕೂ ಹೆಚ್ಚು ಕ್ಯಾಂಪಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಸರ್ಕಾರಿ ವ್ಯವಸ್ಥೆ ಮತ್ತು ಸರ್ಕಾರೇತರ ಸಂಘಟನೆಗಳು ನಿರ್ವಹಣೆಯಲ್ಲಿ ಕೈಗೊಂಡ ಕಾರ್ಯದಿಂದಾಗಿ ಅತೀ ಕಡಿಮೆ ಸಾವು ನೋವು ಸಂಭವಿಸಿತು. ಫೈಲಿನ ಚಂಡಮಾರುತ ವಿಪತ್ತು ನಿರ್ವಹಣೆ ವಿಶ್ವದ ಗಮನ ಸೆಳೆಯಿತಲ್ಲದೇ ಸರ್ವರ ಪ್ರಶಂಸೆಗೆ ಪಾತ್ರವಾಯಿತು. 1999ರಲ್ಲಿ ಇಷ್ಟೇ ತೀವ್ರತೆಯ ಚಂಡಮಾರುತ ಒಡಿಶಾದ ಕರಾವಳಿಯನ್ನು ಅಪ್ಪಳಿಸಿದಾಗ 10000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡು ರೂ. 50000 ಕೋಟಿಗೂ ಅಧಿಕ ಹಾನಿಯಾಗಿದ್ದನ್ನು ಇಲ್ಲಿ ಗಮನಿಸಬಹುದು.

ಫೈಲಿನ್ ಪ್ರಭಾವದಿಂದ ಹೆಚ್ಚಿನ ಸಾವು ನೋವು ಸಂಭವಿಸಿಲ್ಲವನ್ನುವುದು ನಿಜವಾದರೂ ಚಂಡಮಾರುತ ಮತ್ತು ತದನಂತರದ ಅತಿವೃಷ್ಟಿಯಿಂದ ಸಂಭವಿಸಿದ ಪ್ರವಾಹದಿಂದಾಗಿ ಅಪಾರವಾದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಸುಮಾರು ಒಡಿಶಾ ರಾಜ್ಯದ 30 ಜಿಲ್ಲೆಗಳಲ್ಲಿ 17 ಜಿಲ್ಲೆಗಳ ಸುಮಾರು 2ಕೋಟಿಗೂ ಹಚ್ಚು ಜನರು ಪ್ರಭಾಕ್ಕೊಳಗಾಗಿದ್ದಾರೆ. 16400 ಹಳ್ಳಿಗಳು 48 ಪಟ್ಟಣ ಪ್ರದೇಶಗಳಲ್ಲಿ ತೀವ್ರವಾದ ಹಾನಿಯಾಗಿದೆ. 3.3ಲಕ್ಷ ಮನೆಗಳು ನಾಶವಾಗಿವೆ, ಅನೇಕ ಶಾಲೆಗಳು, ಸರ್ಕಾರಿ ಮತ್ತು ಸಾರ್ವಜನಿಕ ಕಟ್ಟಡಗಳು, ಆಸ್ತಿಪಾಸ್ತಿ ನಾಶವಾಗಿವೆ, 6ಲಕ್ಷ ಹೆಕ್ಟೇರಿಗೂ ಅಧಿಕ ಕೃಷಿಭೂಮಿಯ ಫಸಲು ನಾಶವಾಗಿದೆ, 5ಲಕ್ಷ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ವಿತರಣಾ ವ್ಯವಸ್ಥೆ ತೀವ್ರ ಹದಗೊಂಡಿದೆ, ಬುಡಕಟ್ಟು ಪ್ರದೇಶದ ಅನೇಕ ಗ್ರಾಮಗಳ ರಸ್ತೆ ಸಂಪರ್ಕ ಕಡಿದುಹೋಗಿದೆ. ಪ್ರಾಥಮಿಕ ಅಂದಾಜಿನಂತೆ ರಾಜ್ಯ ವಿದ್ಯುತ್ ನಿಗಮ 900ಕೋಟಿ ರೂಗಳ ನಷ್ಟವನ್ನನುಭವಿಸಿದೆ. ಒಡಿಶಾದ ಗಂಜಾಮ ಜಿಲ್ಲೆಯೊಂದರ ನಷ್ಟವೇ 600ಕೋಟಿ ರೂಗಳಿಗಿಂತಲೂ ಹೆಚ್ಚು. ಒಂದು ಅಂದಾಜಿನಂತೆ ಫೈಲಿನ್ ಚಂಡಮಾರುತ 26ಲಕ್ಷಕ್ಕೂ ಹೆಚ್ಚು ಮರಗಳನ್ನು ಬಲಿ ತೆಗೆದುಕೊಂಡಿದೆ.

ಕೃಷಿಯೇ ಜೀವನಾಧಾರವಾಗಿರುವ ಒಡಿಶಾ ರಾಜ್ಯದಲ್ಲಿ ಚಂಡಮಾರುತದಿಂದಾದ ನಷ್ಟದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವವರು ಬಡ ಹಾಗೂ ಮಧ್ಯಮ ವರ್ಗದ ರೈತರು, ಸಣ್ಣ ಉದ್ದಿಮೆದಾರರು ಮತ್ತು ಮೀನುಗಾರರು ಅಧಿಕವಾಗಿದ್ದಾರೆ. ರಾಜ್ಯ ಸರ್ಕಾರದ ಅಂದಾಜಿನಂತೇ 2500 ಕೋಟಿ ರೂಗಳಷ್ಟು ಕೃಷಿ ಫಸಲಿನ ನಷ್ಟವಾಗಿದೆ. ಆದರೆ ಅಕ್ಕಿ, ಜೋಳ, ನೆಲಗಡಲೆ, ತರಕಾರಿ ಬೆಳೆಗಳೇ ಹೆಚ್ಚು ಹಾನಿಯಾದದ್ದರಿಂದ ಆಹಾರ ಧಾನ್ಯಗಳ ಕೊರತೆಯ ಸಂಭವವೂ ಇಲ್ಲದಿಲ್ಲ. ಜೊತೆಗೆ ಸೆಣಬು ಬೆಳೆಯುವ ಬಹುಭಾಗ ಪ್ರದೇಶವೂ ಪ್ರಭಾವಕ್ಕೊಳಗಾಗಿದ್ದು ಸೆಣಬು ಆಧಾರಿತ ಉದ್ದಿಮೆಗಳು ಸಂಕಷ್ಟಕ್ಕೆ ಸಿಕ್ಕುವ ಸಂಭವವಿದೆ. ಅತಿವೃಷ್ಟಿಯಿಂದ ನೆರೆಬಂದು ಕೃಷಿಭೂಮಿಯಲ್ಲಿ ಎರಡು ಮೂರು ಅಡಿಯಷ್ಟು ಹೂಳು ತುಂಬಿಕೊಂಡ ಪರಿಣಾಮವಾಗಿ ಬಹುತೇಕ ಹೊಲಗಳಲ್ಲಿ ಮತ್ತೆ ಬೇಸಾಯ ಆರಂಭಿಸಲು ಕನಿಷ್ಟ ಎರಡು ವರ್ಷಗಳ ಶ್ರಮ

ಚಂಡಮಾರುತದ ಮುನ್ಸೂಚನೆಯನ್ನು ಆಧರಿಸಿ ಮುಂಜಾಗ್ರತಾ ಕ್ರಮಗಳನ್ನು ಶ್ಲಾಘನೀಯ ರೀತಿಯಲ್ಲಿ ಕೈಗೊಂಡಂತೇ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನೂ ನಿರ್ವಹಿಸಬೇಕಾದ ಅಗತ್ಯವಿದೆ. ಸೌಭಾಗ್ಯದಿಂದ ಹೆಚ್ಚಿನ ಸಾವು ನೋವು ಸಂಭವಿಸದಿದ್ದರೂ ಸಂತ್ರಸ್ತರು ತಮ್ಮ ಬದುಕನ್ನು ಪುನ: ಕಟ್ಟಿಕೊಳ್ಳಲು ಎದುರಿಸುತ್ತಿರುವ ಸಂಕಷ್ಟಗಳನ್ನು ಮನಗಂಡು, ಅದರಲ್ಲೂ ಬಡ ಮತ್ತು ಮಧ್ಯಮ ಕೃಷಿಕರು ಮತ್ತು ಮಿನುಗಾರರ ಅಗತ್ಯಗಳನ್ನು ಸರಿಯಾಗಿ ಅಂದಾಜಿಸ ನೆರವಿಗೆ ಧಾವಿಸಬೇಕಾದ ಆವಶ್ಯಕತೆಯಿದೆ.
ಪಡಬೇಕಿದೆ. ರೈತರ ಕೃಷಿ ಸಲಕರಣೆಗಳು, ಜಾನುವಾರುಗಳು, ಸಂಗ್ರಹಿಸಿಟ್ಟ ಬೀಜ, ಗೊಬ್ಬರ ಇತ್ಯಾದಿಗಳ ಲೆಕ್ಕ ಅಂದಾಜಿಗೆ ನಿಲುಕದ್ದು. ಅದರಂತೇ ದೋಣಿಗಳು ಬಲೆಗಳು ಮುಂತಾದ ತಮ್ಮ ಕಸುಬಿನ ಸಲಕರಣೆಗಲನ್ನು ಕಳೆದುಕೊಂಡ ಮೀನುಗಾರರೂ ಹೇಳಿತೀರದ ಬವಣೆಯನ್ನು ಅನುಭವಿಸುತ್ತಿದ್ದಾರೆ.

ಜಿಹಾದ್ ಭಯೋತ್ಪಾದನೆಗೆ ಹಿಂದೂಗಳ ಬಳಕೆ ?

(ಪುಂಗವ: 1/12/2013)

ಬಿಹಾರದ ಪಾಟ್ನಾದಲ್ಲಿ ನಡೆದ ಬಿಜೆಪಿಯ ಹೂಂಕಾರ ಸಮಾವೇಶದ ಸಂದರ್ಭದಲ್ಲಿ ನಡೆದ ಬಾಂಬ್ ಸ್ಫೋಟಗಳಿಗೆ ಸಂಭಂದಿತ ತನಿಖೆಯ ಹಿನ್ನೆಲೆಯಲ್ಲಿ ಹೊರಬಂದ ಮಾಹಿತಿಗಳು ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿವೆ. ಇಂಡಿಯನ್ ಮುಜಾಹಿದ್ದೀನ ಮುಂತಾದ ಜಿಹಾದಿ ಭಯೋತ್ಪಾದಕ ಗುಂಪುಗಳು ತಮ್ಮ ಕಾರ್ಯಸಾಧನೆಗೆ ಹಿಂದೂ ಯುವಕ ಯುವತಿಯರನ್ನು ಬಳಸಿಕೊಳ್ಳುತ್ತಿವೆಯೇ?

ಬಿಹಾರ ಪೋಲಿಸರು ಪಾಟ್ನಾ ಸರಣಿ ಬಾಂಬ್ ಸ್ಫೋಟದ ಸಂಶಯದ ಮೇಲೆ ಕೆಲವು ಮುಸ್ಲಿಂ ಸಮುದಾಯದ ಯುವಕರನ್ನು ಬಂಧಿಸಿದ ನಂತರ ಜಾರ್ಖಂಡದ ಧನಬಾದ್ ಜಿಲ್ಲೆಯಿಂದ ರಾಜು ಸಾವೊ ಎಂಬ ಹಿಂದೂ ಯುವಕನ್ನು ಬಂಧಿಸಿದರು. ನಂತರ ರಾಷ್ಟ್ರೀಯ ತನಿಕಾ ದಳ (ಎನ್‍ಐಎ) ಮತ್ತು ಬಿಹಾರ ಪೋಲೀಸರ ತಂಡವು ಇದೇ ಘಟನೆಗೆ ಸಂಭಂದಿಸಿದಂತೆ ಗೋಪಾಲ ಕುಮಾರ ಗೋಯಲ, ವಿಕಾಸ ಕುಮಾರ, ಪವನ ಕುಮಾರ ಮತ್ತು ಗಣೇಶ ಕುಮಾರ ಎಂಬ ಯುವಕರನ್ನು ಶಂಕಿತ ಉಗ್ರರಿಗೆ ಹಣಕಾಸು ಸಹಾಯ ಒದಗಿಸಿದ ಆರೋಪದ ಮೇಲೆ ಬಂಧಿಸಿ ನೂರಾರು ಬ್ಯಾಂಕ ಪಾಸಬುಕ್, ಎಟಿಎಮ್ ಕಾರ್ಡ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡಿತು. ಪೋಲೀಸ ಮೂಲಗಳ ಪ್ರಕಾರ ಈ ಯುವಕರು ಪಾಕಿಸ್ತಾನದ ಐಎಸ್‍ಐನೊಂದಿಗೆ ಸಂಭಂಧ ಹೊಂದಿದ್ದು, ಐಎಸ್‍ಐನಿಂದ ಹಣ ಪಡೆದು ಇಲ್ಲಿನ ಭಯೋತ್ಪಾದಕ ಚಟುವಟಿಕೆಗಳಿಗೆ ತಲುಪಿಸುತ್ತಿದ್ದರು ಎಂಬ ಗುಮಾನಿಯಿದೆ. ಹಿರಿಯ ಪೋಲೀಸ ಅಧಿಕಾರಿಯೊಬ್ಬರು 'ಇಂಡಿಯನ್ ಮುಜಾಹಿದ್ದೀನ ಹಿಂದೂ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರಬಹುದು' ಎಂಬ ಗಂಭೀರ ವಿಷಯವನ್ನು ಹೊರಹಾಕಿದ್ದಾರೆ. 

ಮುಂದುವರಿದಂತೆ ಕೆಲವು ದಿನಗಳ ಹಿಂದೆ ಪಾಟ್ನಾ ಸರಣಿ ಸ್ಫೋಟದ ಕೃತ್ಯಕ್ಕೆ ಹಣ ಪೋರೈಸಿದ ಖಚಿತ ಮಾಹಿತಿಯನ್ನಾಧರಿಸಿ ರಾಜ್ಯಕ್ಕೆ ಆಗಮಿಸಿದ ಬಿಹಾರ ಪೋಲೀಸರ ತಂಡ ಮಂಗಳೂರಿನ ಪಂಜಿಮೊಗೇರಿನ ನಿವಾಸಿ ಆಯೇಷಾ ಬಾನು, ಆಕೆಯ ಪತಿ ಜುಬೇರ್ ಹುಸೇನ್ ಮತ್ತು ಅವರ ಮೂವರು ಮಕ್ಕಳನ್ನು ವಶಕ್ಕೆ ತೆಗೆದುಕೊಂಡಿತು. ಆಯೇಷಾ ಮನೆಯಿಂದ ಹಲವಾರು ಪಾಸ್‍ಬುಕ್‍ಗಳು, ಎಟಿಎಮ್ ಕಾರ್ಡ್‍ಗಳು, ಮೊಬೈಲ್ ಫೊನ್‍ಗಳನ್ನು ಜಪ್ತುಮಾಡಲಾಯಿತು. ಕೊಡಗು ಜಿಲ್ಲೆ ವಿರಾಜಪೇಟೆಯ ದೇವಣಗೆರೆ ಗ್ರಾಮದ ಪುತ್ತೋಳಿ ಹದಿನಾರು ವರ್ಷಗಳ ಹಿಂದೆ ಕಾರು ಚಾಲಕನಾಗಿದ್ದ ಜುಬೇರ್ ಹುಸೇನ್ ಎಂಬ ಮುಸ್ಲಿಂ ಯುವಕನೊಂದಿಗೆ ಓಡಿಹೋಗಿ ಮದುವೆಯಾಗಿ ಆಯೇಷಾ ಬಾನುವಾಗಿ ಮತಾಂತರವಾಗಿದ್ದಳು. ಮಂಗಳೂರಿನಲ್ಲಿ ನಿವಾಸವಾಗಿದ್ದ ಆಯೇಷಾ-ಜುಬೇರ್ ದಂಪತಿ ಬೀಡಿ ಉದ್ಯಮದಲ್ಲಿ ತೊಡಗಿದ್ದರು.1992ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಜುಬೇರ್ ಹುಸೇನ್ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ವಿಚಾರಣೆಯ ವೇಳೆ ಹೊರಬಂದಿದೆ. ಆಗಾಗ ತವರು ಮನೆಗೆ ಬರುತ್ತಿದ್ದ ಆಯೆಷಾ ತನ್ನ ಸಹೋದರ ದೇವಣಗೆರೆಯ ನಿವಾಸಿ ಎಚ್ ಬಿ ಮೋಟಪ್ಪ, ನೆರೆಯವರಾದ ಎಚ್ ಎಸ್ ಉದಯ ಮತ್ತು ರಘು ಇವರುಗಳ ಹೆಸರಿನಲ್ಲಿ ವಿರಾಜಪೇಟೆಯ ಸ್ಟೇಟ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರುಗಳಲ್ಲಿ 'ತನಗೆ ಸೌದಿಯಿಂದ ಹಣ ಬರುತ್ತದೆ' ಎಂದು ನಂಬಿಸಿ ಖಾತೆ ತೆರೆಸಿ ವ್ಯವಹರಿಸುತ್ತಿದ್ದಳು. ಇದಲ್ಲದೇ ಆಕೆ ವಿವಿಧ ಬ್ಯಾಂಕುಗಳಲ್ಲಿ ಒಟ್ಟೂ 56 ಬೇನಾಮಿ ಖಾತೆಗಳನ್ನು ತೆರೆದು ಕೋಟ್ಯಾಂತರ ಹವಾಲಾ ಹಣದ ವ್ಯವಹಾರ ನಡೆಸಿದ್ದಳು ಎಂಬ ಮಾಹಿತಿ ವಿಚಾರಣೆಯಿಂದ ತಿಳಿಯಬಂದಿದೆ. ಪುತ್ತೋಳಿ ಲವ್ ಜಿಹಾದಿಗೆ ಬಲಿಯಾಗಿ ಭಯೋತ್ಪಾದಕಳಾದಳೇ? ತನಿಖೆಯಿಂದ ವಿಷಯ ಇನ್ನೂ ಹೊರಬರಬೇಕಿದೆ.

ಈ ಘಟನೆಗಳು ಇಂಡಿಯನ್ ಮುಜಾಹಿದ್ದೀನದಂತಹ ಜಿಹಾದಿ ಭಯೋತ್ಪಾದಕ ಗುಂಪುಗಳ ಬೇರುಗಳನ್ನು ಹೊರಗೆಡಹುವುದರ ಜೊತೆಗೆ ಹಿಂದೂ ಯುವಕರೂ ಭಯೋತ್ಪಾದನೆಯ ಕಬಂಧ ಬಾಹುಗಳ ತೆಕ್ಕೆಗೆ ಬೀಳುತ್ತಿರುವ ಕಳವಳಕಾರಿ ಬೆಳವಣಿಗೆಯ ಬಗ್ಗೆ ಎಚ್ಚರಿಕೆಯನ್ನು ನೀಡುತ್ತವೆ. ಲವ್ ಜಿಹಾದಿಗೆ ಬಲಿಯಾಗಿ ಬ್ರೈನ್ ವಾಷ್‍ಗೊಳಗಾದ ಹೆಣ್ಣು ಮಕ್ಕಳು ಭಯೋತ್ಪಾದಕರಾಗಬಹುದಾದ ಹಾಗೆಯೇ ಹಣದಾಸೆಗೆ ಬಿದ್ದ ಹಿಂದೂ ಯುವಕರೂ ಧೂರ್ತ ಕೆಲಸಕ್ಕೆ ಕೈಹಾಕಬಹುದಾದ ಸಾಧ್ಯತೆಗಳನ್ನು ಮನಗಾಣಬೇಕು. ಸೌದಿ ದುಬೈ ಮುಂತಾದ ದೇಶಗಳಿಂದ ಭಾರತದ, ಅದರಲ್ಲೂ ಕರ್ನಾಟಕ ಮತ್ತು ಕೇರಳ ಕರಾವಳಿ ಜಿಲ್ಲೆಗಳ ಬೇನಾಮಿ ಖಾತೆಗಳಿಗೆ ಜಮೆಯಾಗುತ್ತಿರುವ ಹವಾಲಾ ಹಣ ಯಾವ ಯಾವ ಕೆಲಸಗಳಿಗೆ ಹರಿಯುತ್ತಿದೆ ಎನ್ನುವ ಮಾಹಿತಿ ತನಿಖೆಯಿಂದ ಹೊರಬರಬೇಕು. ಜೊತೆಗೆ ಕರಾವಳಿ ಜಿಲ್ಲೆಗಳಲ್ಲಿ ಒಂದೊಂದಾಗಿ ತಲೆಯೆತ್ತುತ್ತಿರುವ ಸುಪ್ತ ಉಗ್ರ ಸಂಘಟನೆಗಳು ಮತ್ತು ಅವುಗಳ ಕಾರ್ಯದ ನಿಜಸ್ವರೂಪದ ಬಗ್ಗೆ ಜನಜಾಗೃತಿ ಮೂಡಿಸಬೇಕಾಗಿದೆ.

Friday, November 22, 2013

ಪಟಗಾರ ಮಾಸ್ತರ್‍ರ ನೆನಪಿನಲ್ಲಿ

ಪಟಗಾರ ಮಾಸ್ತರ್‍ರು ತೀರಿಕೊಂಡ್ರಂತೆ ಎನ್ನುವ ಸುದ್ದಿ ಕೇಳಿದಾಗ ಇಪ್ಪತ್ತು ವರ್ಷಗಳ ಹಿಂದಿನಿಂದ ನೆನಪುಗಳು ಒತ್ತರಿಸಿ ಎದ್ದು ಬಂದವು. ಪಟಗಾರ ಮಾಸ್ತರರು ನಮ್ಮೂರು ವಾಲಗಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬರಾಬ್ಬರಿ ಹನ್ನೆರಡು ವರ್ಷ ಸರ್ವೀಸ್ ಮಾಡಿದವರು. ಅವರ ಪ್ರಭಾವ ಎಷ್ಟೂ ಅಂದರೆ ಇಂದಿಗೂ ನಮ್ಮೂರ ಶಾಲೆಯಲ್ಲಿ ಒಂದು ಕೋಣೆಗೆ 'ಪಟಗಾರ ಮಾಸ್ತರ್‍ರ ಕೋಲಿ' ಎಂದೇ ಕರೆಯಲಾಗುತ್ತದೆ. ಅವರ ಮನೆ ಇರುವುದು ಕುಮಟ ಹತ್ತಿರದ ಹಂದಿಗೋಣನಲ್ಲಿ. ನಮ್ಮೂರಿನಿಂದ ಹಂದಿಗೋಣ ರಸ್ತೆಯಲ್ಲಿ ದಾರಿಯಲ್ಲಿ ಎಂಟರಿಂದ ಹತ್ತು ಕಿಲೋಮೀಟರ ದೂರ ಇದೆ. ಕಾಲುದಾರಿಯಲ್ಲಿ, ಅಥವಾ ಒಳದಾರಿಯಲ್ಲಿ ಸುಮಾರು ನಾಲ್ಕರಿಂದ ಐದು ಕಿಲೋಮೀಟರ ಆಗಬಹುದು. ಈ ಒಳದಾರಿಯ ಬೇಲಿ ಪಾಗಾರದಂಚಿನ ಕಿರುಹಾದಿಯಲ್ಲಿ ದಣಪೆ, ಸೊರಗೋಲು(ಒಂದು ತರಹದ ಗೇಟ್)ಗಳನ್ನು ದಾಟಿ, ಹಾಳಿಕಂಟ (ಭತ್ತದ ಗದ್ದೆಯ ಬದು) ಕಾಲುಸಂಕಗಳ ಮೇಲೆ ನಡೆದು, ಅಲ್ಲೇ ಬೇಲಿಹಾರಿ ಗದ್ದೆಗಿಳಿಯಲು ನೋಡುತ್ತಿರುವ ಕಳ್ಳದನವನ್ನು ಓಡಿಸಿ, ಅಡಿಕೆ ತೋಟದ ದಾರಿಯಲ್ಲಿ ಬಿದ್ದ ಸೋಗೆಯನ್ನು ಕಾಲಿನಲ್ಲೇ ಬದಿಗೆ ಸರಿಸಿ, ಕರಾವಳಿಯ ಜಡಿಮಳೆಯಲ್ಲಿಯೂ ಕಾಟನ್ ಹೊದಿಕೆಯ ಬಂದೂಕು ಕೊಡೆ ಹಿಡಿದು, ಸಾಧಾರಣ ಚಳಿಗೂ ಮಪ್ಲರ ತೊಟ್ಟು, ಬೇಸಿಗೆಯ ಸುಡುಬಿಸಿಲಿನಲ್ಲಿ ತಲೆಗೆ ಕರ್ಚೀಪು ಸುತ್ತಿ ಹನ್ನೆರಡು ದೀರ್ಘ ವರ್ಷಗಳ ಕಾಲ ತಪ್ಪದೇ ಶಾಲೆಗೆ ಕಾಲ್ನಡಿಗೆಯಲ್ಲೇ ಬಂದು ನಮ್ಮೂರ ಮಕ್ಕಳಿಗೆ ಅಕ್ಷರ, ಮಗ್ಗಿ, ಲೆಕ್ಕ, ಹಾಡು ಕಲಿಸಿದವರು ಪಟಗಾರ ಮಾಸ್ತರ್‍ರು. ಅವರು ಐದು ಕಿಲೋಮೀಟರು ನಡೆದು ಬಂದರು ಒಂದು ದಿನವೂ ಬೆಳಿಗ್ಗೆ ಎಂಟುಗಂಟೆಯ ಪ್ರಾರ್ಥನೆಗೆ ತಡವಾಗಿ ಬಂದದ್ದನ್ನು ಕಂಡವರಿಲ್ಲ. ಮಧ್ಯಾಹ್ನ ಹಂದಿಗೋಣದವರೆಗೆ ಹೋಗಿಬರಲು ಸಮಯ ಮತ್ತು ತ್ರಾಣ ಸಾಕಾಗದೇ ಇರುವುದರಿಂದ ಹನ್ನೊಂದು ಗಂಟೆಗೆ ಶಾಲೆಯ ಬೆಳಗಿನ ಅವಧಿ ಮುಗಿದು ಮಕ್ಕಳು ಮತ್ತು ಉಳಿದ ಮಾಸ್ತರರು ಅಕ್ಕೋರುಗಳು ಮನೆಗೆ ಹೋದಮೇಲೆ ಪ್ಯಾಂಟು ಕಳಚಿ ಲುಂಗಿಯಟ್ಟು ಚಿಮಿಣಿ (ಸೀಮೆ) ಎಣ್ಣೆ ಸ್ಟವ್ ಹಚ್ಚಿ ಅನ್ನ ಬೇಯಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಬೇಕಾಗುವ ದಿನಸಿಯನ್ನು ಹದಿನೈದು ದಿನ ತಿಂಗಳಿಗೊಮ್ಮೆ ತಂದು ಮರದ ಪೆಟ್ಟಿಗೆಯಲ್ಲಿ ತುಂಬಿಡುತ್ತಿದ್ದರು. ಒಮ್ಮೊಮ್ಮೆ ತಿಳಿಸಾರು, ತೊವ್ವೆ ಮಾಡಿಕೊಳ್ಳುತ್ತಿದ್ದರು. ಬಾಟಲಿಯಲ್ಲಿ ಮನೆಯಿಂದ ತಂದ ಮಜ್ಜಿಗೆಯೊಂದಿಗೆ ಮಧ್ಯಾಹ್ನದ ಊಟವನ್ನು ತಮ್ಮ ಕೋಲಿಯಲ್ಲೇ ಮುಗಿಸುತ್ತಿದ್ದರು. ಎರಡು ಗಂಟೆಯ ಹೊತ್ತಿಗೆ ಮಕ್ಕಳು ಬರುವುದರ ಒಳಗೆ ಲುಂಗಿ ಬನಿಯನ್ನಿನಲ್ಲೇ ಒಂದು ನಿದ್ದೆ ತೆಗೆದು, ಎದ್ದು ಮುಖ ತೊಳೆದು, ಮತ್ತೆ ಪ್ಯಾಂಟನೇರಿಸಿ ಸಿದ್ಧರಾಗಿರುತ್ತಿದ್ದರು. ಮಾಸ್ತರ್‍ರಿಗೆ ಮಧ್ಯಾಹ್ನ ಚಹಾ ಕುಡಿಯುವ ಅಭ್ಯಾಸವಿತ್ತು. ಮೂರುವರೆಯ ಹೊತ್ತಿಗೆ ವಿಶ್ರಾಂತಿಗೆ ಬಿಟ್ಟಾಗ ಪ್ಯಾಂಟಿನಲ್ಲೇ ಸ್ಟವ್ ಹಚ್ಚಿ ಚಹಾ ತಯಾರಿಸುತ್ತಿದ್ದರು. ಪಟಗಾರ ಮಾಸ್ತರ ಈ ಅಭ್ಯಾಸದಿಂದ ಉಳಿದ ಮಾಸ್ತರು ಅಕ್ಕೋರುಗಳಿಗೂ ಚಹದ ವ್ಯವಸ್ಥೆ ಆದರೆ ಮಕ್ಕಳಾದ ನಮಗೆಲ್ಲ ಒಂದು ಸುತ್ತು ಆಟವಾಡುವಷ್ಟು ಸಮಯ ಸಿಗುತ್ತಿತ್ತು.

ಮುಲ್ಕಿ ಪಾಸಾದ ಮೇಲೆ ಪಟಗಾರರು ಮಾಸ್ತರಿಕೆ ಕೆಲಸಕ್ಕೆ ಸೇರಿದ್ದು (ಏಳನೇ ಇಯತ್ತೆಯನ್ನು ಮುಲ್ಕಿ ಎಂದು ಕರೆಯತ್ತಿದ್ದರು). ಶಾಲೆ ಕಲಿಯುವವರೇ ಅಪರೂಪವಾಗಿದ್ದ ಕಾಲದಲ್ಲಿ ಮುಲ್ಕಿ ಎಸ್‍ಎಸ್‍ಸಿ ಪಾಸಾದವರು ಶಿಕ್ಷಕರಾಗಬಹುದಿತ್ತು. ಆವಾಗ ಸಂಬಳ ಅಂತೇನೂ ಜಾಸ್ತಿ ಸಿಗುತ್ತಿರಲಿಲ್ಲ. ಪಟಗಾರ ಮಾಸ್ತರ್‍ರು ತಮ್ಮ ಸರ್ವೀಸಿನ ಉದ್ದಕ್ಕೂ ಒಂದರಿಂದ ನಾಲ್ಕನೇ ಇಯತ್ತೆ ಒಳಗೆ ಹೊರತು ಬೇರೆ ಯಾವ ಕ್ಲಾಸನ್ನೂ ತೆಗೆದುಕೊಂಡವರಲ್ಲ. ಐದನೆಯ ಇಯತ್ತೆಯಿಂದ ಇದ್ದ ಇಂಗ್ಲೀಷು ಹಿಂದಿ ವಿಷಯಗಳಿಂದ ಸ್ವಲ್ಪ ಸಮಸ್ಯೆಯಾಗುತ್ತಿದ್ದುದು ಹೌದಾದರೂ, ಒಂದನೇ ಇಯತ್ತೆಯ ಮಕ್ಕಳಿಗೆ ಅ ಆ ಇ ಈ ಬರೆಸಿ ಹಾಡು ಹೇಳಿಸಿ, ಎರಡನೇ ಮೂರನೇ ಇಯತ್ತೆಯ ಮಕ್ಕಳ ಹತ್ತಿರ ಮಗ್ಗಿ ಹೇಳಿಸಿ, ಗುಣಾಕಾರ ಭಾಗಕಾರ ಕಲಿಸಿ, ನಾಲ್ಕನೇ ಇಯತ್ತೆಯ ಮಕ್ಕಳಿಗೆ ಚರಿತ್ರೆಯ ಕತೆ ಹೇಳಿ, ಒಗಟು, ಮಾವಿನಹಣ್ಣು-ಬಾಳೆಹಣ್ಣು, ಅಂಗಡಿ ಸಾಮಾನು ಮುಂತಾದ ಲೆಕ್ಕ ಹಾಕಿ ಉತ್ತರ ಕಂಡುಹಿಡಿಯುವುದನ್ನು ಹೇಳಿಕೊಡುವುದರಲ್ಲಿ ಅವರಿಗೆ ಸಿಗುತ್ತಿದ್ದ ಆನಂದ ತೃಪ್ತಿ ಇನ್ನೆಲ್ಲೂ ಸಿಗುತ್ತಿರಲಿಲ್ಲ. ಪಟಗಾರ ಮಾಸ್ತರ್‍ರು ಬಳಪ ಹಿಡಿದು ಪಾಟಿಯ ಮೇಲೆ ಅಕ್ಷರ ತಿದ್ದಿಸಿದ ಮಕ್ಕಳೆಷ್ಟೋ? ಗಲಾಟೆ ಮಾಡಿದಾಗ ಪಟಗಾರ ಮಾಸ್ತರರ ತೆಳ್ಳಗಿನ ಕೋಲಿನಲ್ಲಿ ಕೈ ಮೇಲೆ ಕುಂಡೆಯ ಮೇಲೆ ಸಣ್ಣ ಪೆಟ್ಟು ತಿಂದವರೆಷ್ಟೋ? ಕಿವಿ ಹಿಂಡಿಸಿಕೊಂಡವರೆಷ್ಟೋ? ಒಮ್ಮೊಮ್ಮೆ ಅವರು ಪ್ರೀತಿಯಿಂದ ಕೊಟ್ಟ ಕಲ್ಲುಸಕ್ಕರೆ ಹಂದಿಗೋಣು ಶೇಂಗಾ ಮೆಲ್ಲುತ್ತ ಮಜಾಪಟ್ಟವರೆಷ್ಟೋ? ಬಗಲಲ್ಲೇ ಪಟ್ಟಿ ಪುಸ್ತಕ ತುಂಬಿದ ಪ್ಲಾಸ್ಟಿಕ್ ಚೀಲ ಹಿಡಿದು ಬರಿಗಾಲಲ್ಲಿ ಶಾಲೆಗೆ ಬರುವ ಮಕ್ಕಳನ್ನು ಕರುಣೆಯಿಂದ ವಿಚಾರಿಸಿದ್ದನ್ನು ಈಗಲೂ ನೆನಸಿಕೊಳ್ಳುವವರೆಷ್ಟೋ?

ಮಾಸ್ತರ್‍ರು, ಅಕ್ಕೋರು, ಬಾಯರು ಈ ಶಬ್ದಗಳು ಸರ್ ಮ್ಯಾಮ್‍ಗಳ ಲೋಕದಲ್ಲಿ ಕಳೆದುಹೋಗಿರುವ ಇಂದಿನ ಕಾಲದ ಸ್ಟೂಡೆಂಟ್‍ಗಳಿಗೆ ಅಪರಿಚಿತವಾಗಿದ್ದರೆ ಆಶ್ಚರ್ಯವಿಲ್ಲ. ದೌರ್ಭಾಗ್ಯವಶಾತ್ ಆ ಸಂಭೋಧನ ಶಬ್ದಗಳೊಂದಿಗೆ ಗುರು ಶಿಷ್ಯರ ನಡುವಿನ ಸಂಬಂಧದಲ್ಲಿನ ಮಾರ್ದವತೆ ಕೂಡ ಮರೆಯಾಗಿದೆ. ಮಾಸ್ತರ್‍ರಾಗಲೀ ಅಕ್ಕೋರಾಗಲೀ ಮಕ್ಕಳು ಮತ್ತವರ ಮನೆಯವರ ಪಾಲಿಗೆ ಕೇವಲ ಶಿಕ್ಷಕರಾಗಿರಲಿಲ್ಲ. ಊರಿನ ಶಾಲೆಯ ಮಾಸ್ತರುಗಳು ಇಡೀ ಊರಿನ ಹಿತೈಷಿಗಳಾಗಿ ಪರಿಗಣಿಸಲ್ಪಡುತ್ತಿದ್ದರು. ಮಾಸ್ತರ್‍ರು ಶಾಲೆಯ ಹೊರಗೂ ಮಾಸ್ತರ್‍ರೇ ಆಗಿದ್ದರು. ಹಳ್ಳಿಯಲ್ಲೇ ವಾಸವಾಗಿರುವ ಮಾಸ್ತರ್‍ರಿಗೆ ತನ್ನ ವಿದ್ಯಾರ್ಥಿಯ ಮನೆಯ ಸಂಪೂರ್ಣ ಪರಿಚಯವಿದ್ದದ್ದು ಇದರಿಂದಲೇ. ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರಗಳನ್ನು ಕಲಿಸುವವರು ಸರಿಯಾದ ದಾರಿಯಲ್ಲಿ ನಡೆಸುವವರು ಮಾಸ್ತರ್‍ರು ಎಂದು ಪಾಲಕರು ನಂಬಿದ್ದರು. ಅದಕ್ಕೇ ತನ್ನ ಮಗ ಪುಂಡು ಮಾಡಿದರೆ ಕುಂಡೆಯ ಮೇಲೆ ಎರಡು ಬಾರಿಸಿ ಎಂದು ತಂದೆಯೇ ಮಾಸ್ತರ್‍ರಿಗೆ ಅಧಿಕಾರ ಕೊಟ್ಟು ಹೋಗುತ್ತಿದ್ದ. ಮಾಸ್ತರ್‍ರ ಕೈಲಿ ಪೆಟ್ಟು ತಿಂದ ಹುಡುಗನೂ ತನ್ನ ಒಳ್ಳೆಯದಕ್ಕಾಗಿಯೇ ಮಾಸ್ತರ್‍ರು ಪೆಟ್ಟು ಕೊಟ್ಟದ್ದು ಕಿವಿ ಹಿಂಡಿದ್ದು ಎಂದು ನಂಬಿದ್ದ. ಏಕೆಂದರೆ ಶಿಕ್ಷೆಯ ಜೊತೆಗೆ ಮಾಸ್ತರ್‍ರ ಪ್ರೀತಿಯಲ್ಲೂ ವಿದ್ಯಾರ್ಥಿಗೆ ಪಾಲಿತ್ತು. ನಾನು ಮೂರನೇ ಕ್ಲಾಸಿನಲ್ಲಿದ್ದಾಗ ಮಳೆಗಾಲದಲ್ಲಿ ಬರಿಗಾಲಲ್ಲಿ ನಡೆದು ಶಾಲೆಗೆ ಹೋಗುವ ದಾರಿಯಲ್ಲಿ ಕಾಲಿಗೆ ಮುಳ್ಳು ಚುಚ್ಚಿಸಿಕೊಂಡು ಕುಂಟುತ್ತ ಕೋಣೆಯೊಳಗೆ ಬಂದದ್ದನ್ನು ಕಂಡ ನಮ್ಮ ನಾೈಕ್ ಮಾಸ್ತರ್‍ರು ನನ್ನ ಕಾಲಿನಿಂದ ಒಂಚೂರೂ ನೋವಾಗದಂತೆ ಮುಳ್ಳು ತೆಗೆದದ್ದನ್ನು ನೆನೆಸಿಕೊಂಡರೆ ನನ್ನ ಕಣ್ಣು ಒದ್ದೆಯಾಗದೇ ಇರಲು ಸಾಧ್ಯವೇ?

'ಬಾ ಬಾ ಗಿಳಿಯೇ ಬಣ್ಣದ ಗಿಳಿಯೇ, ಹಣ್ಣನು ಕೊಡುವೆನು ಬಾ ಬಾ.....' 'ಅಜ್ಜನ ಕೋಲಿದು ನನ್ನಯ ಕುದುರೆ.....' 'ಗಂಟೆಯ ನೆಂಟನೆ ಓ ಗಡಿಯಾರ....' ಇವೆಲ್ಲ ಪಟಗಾರ ಮಾಸ್ತರ್‍ರು ನಮಗೆಲ್ಲ ಶಾಲೆಯಲ್ಲಿ ಕಲಿಸಿದ ಹಾಡುಗಳು. ಇಂಗ್ಲೀಷ್ ಮೀಡಿಯಮ್‍ನಲ್ಲೇ ಅ ಆ ಇ ಈ ಕಲಿಯುವ ಇಂದಿನ ಕಾನ್ವೆಂಟ್ ಸ್ಕೂಲ್ ಮಕ್ಕಳು ಇಂತಹ ಹಾಡುಗಳನ್ನೆಲ್ಲ ಹಾಡುತ್ತಾರೋ ಇಲ್ಲವೋ? ಗೊತ್ತಿಲ್ಲ. ನಾನು ತಿಳಿದಂತೆ ಇಂಗ್ಲೀಷಿನಲ್ಲಿ 'ಟ್ವಿಂಕಲ್ ಟ್ವಿಂಕಲ್ ಲಿಟ್ಲ ಸ್ಟಾರ್...' ಬಿಟ್ಟು ಬೇರೆ ಹಾಡೇ ಇಲ್ಲ! ಅದಿರಲೀ. ತನ್ನ ಮಕ್ಕಳನ್ನು ಇಂಗ್ಲೀಷ್ ಮಿಡಿಯಮ್ಮಿನಲ್ಲಿ ಓದಿಸುವ ಸಲುವಾಗಿ ಪೇಟೆಯಲ್ಲೇ ಮನೆ ಮಾಡಿರುವ, ನಿತ್ಯ ನಾಲ್ಕು ಬಾರಿ ಮನೆಗೆ ಶಾಲೆಗೆ ಬೈಕಿನಲ್ಲೇ ಓಡಾಡುವ, ಆದರೂ ಹೆಚ್ಚಿನ ದಿವಸ ಬೆಳಿಗ್ಗಿನ ಪ್ರಾರ್ಥನೆಗೆ ತಡವಾಗಿ ಬರುವ, ಶಿಕ್ಷಕ ಸಂಘದ ಕೆಲಸ, ಗಣತಿ, ಮಧ್ಯಾಹ್ನದ ಬಿಸಿಯೂಟದ ಲೆಕ್ಕಾಚಾರಗಳ ನಡುವೆ ಪಾಠ ಮೇಡಬೇಕಾದ ಜವಾಬ್ದಾರಿಯನ್ನೂ ನಿಭಾಯಿಸುವ, ಶಾಲೆಯ ಪಾಠದ ಜೊತೆಗೆ ಟ್ಯೂಶನ್ನು ರಿಯಲ್ ಎಸ್ಟೇಟ್ ವ್ಯವಹಾರವನ್ನೂ ನಡೆಸುವ, ಅತ್ಯತ್ತಮ ಶಿಕ್ಷಕ ಪ್ರಶಸ್ತಿಯನ್ನೂ ಪಡೆದಿರುವ ಇಂದಿನ ಸರ್ಕಾರಿ ಶಾಲೆಯ ಸರ್‍ರಾದರೂ ಮಾಸ್ತರ್‍ರುಗಳಂತೆ ಹಾಡುಗಳನ್ನು ಹಾಡಿಸುತ್ತಾರೋ ಇಲ್ಲವೋ? ಗೊತ್ತಿಲ್ಲ.

Thursday, November 14, 2013

The Godly Affair



“Does God really exist? What do you think? (ಖರೇ ದೇವರು ಇದ್ದದ್ದು ಹೌದನ ? ನಿಂಗ್ ಹೆಂಗ್ ಕಾಣ್ತು ?) my aunt asked me that day afternoon while we were on a chit-chat, sitting in pooja room in our home. A septuagenarian, she is the eldest of my father’s sisters, married to uncle, fifty plus years back. Her home is in village named Uppina Pattana on the banks of river Aghanashini in my hometown Kumta. She is an elder lady among our relatives, so everybody call her as Akkayya; everybody includes her own children too. We the next generation children address her as Patnatte(Pattana + Atte); Atte means Aunt in Kannada Pattana is the second half of her village, Uppina Pattana. The names like Akkayya or Patnatte have become so unanimous with her that as of now I’m not able to recall her actual name.

Patnatte is not so religious person, I have seldom seen her visiting temples or chanting some shloka or performing japa, or even engaged in pooja-paath, unless it’s her duty as a sadgrihini. There are some rituals a Hindu Brahmin housewife  has to carryout as her duty, like putting gomaya and rangoli in front of house daily morning or lighting the sacred lamp at evening; and performing some annual vrat or pooja like Navaratri pooja, Ganesha pooja; Ganahoma, Satyanarayana vrata etc, together with husband. Or some special occasions like upanayan or marriage of children where as a mother she has lot of duties to carry out. Patnatte never showed any disinterest or laxity while carrying out her duties. With her fifty plus years of experience she is an authority on many rituals and traditional affairs. But I wonder why she doubted the very existence of God and asked me to opine! Interestingly her only son’s name is ‘Devaru’ which means God in Kannada.
 
           Millions and millions of man hours of human intellect is being spent in understanding the concept of God and deriving the theological doctrines and theories or what is called “theisms”; monotheism, polytheism, atheism, agnosticism, henotheism, pantheism etc etc. We have doctrines of no god to many gods, lovable compassionate god to jealous god, omnipresent god to only god, from an impersonate god to non-person god, from male only god to genderless god. The Hindu concept of God very rich with 33 Crore of Gods and number still growing; one can chose according to his taste; though learned tell God is one, the truth or Brahma (ekam sat vipraha 
bahudha vadanti)
 
The concept called ‘God’ is responsible for love and affection among individuals and also for hatred, violence and bloodshed of millions. The same God inspired the creation of beautiful sculptures, marvelous structures, the literature, the art forms, the mythology and what all things the intellect can produce; At the same time in the name of God or in establishing the supremacy of God one sect believes in and in spreading message of their belief the world has seen bloodshed  crusades, wars, destruction  intellectual abuse. But still the God remains unknown; understanding about him is more an imaginative perception.

Swami Vivekananda proclaimed “Whatever may be the position of philosophy, whatever may be the position of metaphysics, so long as there is such a thing as death in the world, so long as there is such a thing as weakness in the human heart, so long as there is a cry going out of the heart of man in his very weakness, there shall be a faith in God.”  (Complete Works Vol1: BUDDHISM, THE FULFILMENT OF HINDUISM). 

Whatever may be position of theological, philosophical, metaphysical or religious doctrines, Patnatte has a practical solution, off course by her own experience. She told me “he is there if you believe; no, if you don’t (ಇದ್ದ ಅಂದ್ರೆ ಇದ್ದ. ಇಲ್ಲೆ ಅಂದ್ರೆ ಇಲ್ಲೆ.)"

Monday, November 11, 2013

ವೈರುಧ್ಯಗಳ ನಡುವಿನಲ್ಲೇ ಹೊಸ ಹಾದಿ ಹಿಡಿದ ಭಿನ್ನ ಜಾಡಿನ ಯಾತ್ರಿಕರು

(ಪ್ರಕಟಿತ: ಪುಂಗವ 1/9/2013)

ಆಧುನಿಕ ಯುಗದ ಮಾಹಿತಿಯ ಮಹಾಪೂರಕ್ಕೆ ತೆರೆದುಕೊಂಡಿರುವ ನಮ್ಮ ಮನಸ್ಸು ನವ ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತಿರುವುದರ ಜೊತೆಗೆ ಪರಂಪರಾಗತವಾಗಿ ಹರಿದುಬಂದಿರುವ ಮೌಲ್ಯಗಳನ್ನು ಅನುಮಾನಿಸುತ್ತ, ಹೊಸದನ್ನು ಅನ್ವೇಷಿಸುತ್ತ ಸಾಗುತ್ತಿದೆ. ವಿಜ್ಞಾನ ತಂತ್ರಜ್ಞಾನಗಳು ಬದುಕಿನ ಅನುಕೂಲತೆ ಹೆಚ್ಚಿಸಿದರೂ, ಬುದ್ಧಿಯ ಕುತೂಹಲವನ್ನು ತಣಿಸಿದರೂ ಜನಜೀವನದ ಭಾಗವಾಗಿ ಬೆಳೆದುಬಂದ ಮೌಲ್ಯಗಳು ಭಾವವಿಕಾಸಕ್ಕೆ ಹಾಗೂ ಬದುಕಿನ ಅರ್ಥಪೂರ್ಣತೆ ಅನಿವಾರ್ಯ ಎಂಬ ನಂಬಿಕೆ ತಳದಲ್ಲಿ ನೆಲೆಯಾಗಿದೆ. ಈ ವೈರುಧ್ಯಗಳು ನಮ್ಮೆದುರಿನ ಸವಾಲುಗಳೂ ಆಗಿವೆ. ಈ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಬೆಂಗಳೂರಿನ ಬಿ ಎಮ್ ಎಸ್ ತಾಂತ್ರಿಕ ಕಾಲೇಜು ಸಭಾಂಗಣದಲ್ಲಿ 1/9/2013ರಂದು ಏರ್ಪಡಿಸಲಾಗಿದ್ದ "ಹೊಸಕಾಲದ ವೈರುಧ್ಯಗಳು" ಸಂವಾದ ಕಾರ್ಯಕ್ರಮದಲ್ಲಿ, ವೈರುಧ್ಯಗಳನ್ನೆದುರಿಸ ವೈವಿಧ್ಯಮಯ ಹಾಗೂ ಅರ್ಥಪೂರ್ಣ ಬದುಕನ್ನು ಬಾಳುತ್ತಿರುವ ಭಿನ್ನ ಜಾಡಿನ ಸಾಧಕರು ಕಲೆತಿದ್ದರು. ಅವರ ಕಾರ್ಯಹಿನ್ನೆಲೆಯ ಕಿರುಪರಿಚಯ ಇಲ್ಲಿದೆ.



ಸೌರಶಕ್ತಿ ತಂತ್ರಜ್ಞಾನದ ಹರಿಕಾರ ಡಾ| ಹರೀಶ ಹಂದೆ ಮೂಲತ: ಉಡುಪಿ ಜಿಲ್ಲೆಯ ಕುಂದಾಪುರದ ಹಂದಟ್ಟು ಎಂಬ ಗ್ರಾಮದವರು. ಖರಗಪುರದ ಐಐಟಿಯಲ್ಲಿ ಎನರ್ಜಿ ಇಂಜಿನಿಯರಿಂಗ್‍ನಲ್ಲಿ ಪದವಿ ವ್ಯಾಸಂಗ ಮಾಡಿ, ಅಮೆರಿಕದ ಪ್ರತಿಷ್ಠಿತ ಮೆಸ್ಯಾಚುಸೆಟ್ಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದವರು. ಅಪ್ರಿತಿಮ ಪ್ರತಿಭಾವಂತ ಆದರೆ ಅಷ್ಟೇ ಸರಳ, ಡಾ ಹರೀಶ ಹಂದೆಯವರ ಮನಸ್ಸು ಅಮೆರಿಕದಲ್ಲಿದ್ದು ಡಾಲರ್‍ಗಳನ್ನು ಸಂಪಾದಿಸುವ ಕಡೆಗಿದ್ದಿಲ್ಲ. ಆಧುನಿಕ ತಂತ್ರಜ್ಞಾನವನ್ನು ಬಳಸಿ ತನ್ನ ತಾಯಿನಾಡಿನ ಬಡವರ ಜೀವನಮಟ್ಟವನ್ನು ಸುಧಾರಿಸಲು ಏನನ್ನಾದರು ಮಾಡಬೇಕೆಂಬ ತುಡಿತ ಅವರಲ್ಲಿತ್ತು. ಭಾರತಕ್ಕೆ ಮರಳಿ ಸಾಮಾಜಿಕ ಕಳಕಳಿಯೊಂದಿಗೆ 1995ರಲ್ಲಿ ಸೋಲಾರ ಎಲೆಕ್ಟ್ರಿಕ್ ಕಂಪನಿ(ಸೆಲ್ಕೋ)ಯನ್ನು ಪ್ರಾರಂಭಿಸಿದರು. ಸೆಲ್ಕೋ ಪ್ರಾರಂಭಕ್ಕೆ ಮುಂಚೆ ಸುಮಾರು ಎರಡು ವರ್ಷಗಳ ಕಾಲ ಗ್ರಾಮೀಣ ಬದುಕಿನ ನಿಜವಾದ ಸಮಸ್ಯೆಗಳನ್ನು ಅರಿಯುವ ದೃಷ್ಟಿಯಿಂದ ಭಾರತ ಹಾಗೂ ಶ್ರೀಲಂಕಾಗಳ ಕುಗ್ರಾಮಗಳಲ್ಲಿ ಅಲೆದಾಡಿದರು. ಪರಿಣಾಮವಾಗಿ ವಿದ್ಯುತ್ ಸಂಪರ್ಕವಿಲ್ಲದ ಗ್ರಾಮೀಣ ಬದುಕಿನಲ್ಲಿ ಸೌರಶಕ್ತಿ ಹೇಗೆ ಬದಲಾವಣೆ ತರಬಹುದು ಎನ್ನುವುದನ್ನು ಕಂಡುಕೊಂಡರು. ಸೆಲ್ಕೋ ಸಂಸ್ಥೆ ಇದುವರೆಗೆ ಸುಮಾರು 1.35 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮನೆಗಳಿಗೆ ಸೌರಶಕ್ತಿಚಾಲಿತ ದೀಪಗಳನ್ನು ಅಳವಡಿಸಿದೆ. 2014 ಹೊತ್ತಿಗೆ 2ಲಕ್ಷ ಮನೆಗಳನ್ನು ತಲುಪುವ ಗುರಿ ಹೊಂದಿದೆ. ಸೌರಶಕ್ತಿಯ ಘಟಕಗಳ ಸ್ಥಾಪನೆಗೆ ಸಹಕಾರಿ ಬ್ಯಾಂಕ್‍ಗಳಿಂದ ಆರ್ಥಿಕ ಸಹಾಯ ದೊರೆಯುವಂತೆ ಮಾಡುವುದರಲ್ಲಿ ಕೂಡ ಸೆಲ್ಕೋ ಸಂಸ್ಥೆ ತೊಡಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ಸ್ಥಾಪಿಸಲಾಗಿರುವ ಸೆಲ್ಕೋ ಲ್ಯಾಬ್‍ನಲ್ಲಿ ಸೌರಶಕ್ತಿಯ ಸದ್ಬಳಕೆಗೆ ಸಂಭಂಧಿಸಿದ ಸಂಶೋಧನೆಗಳ ಜೊತೆಗೆ ಕೃಷಿ ಉಪಯೋಗಿ ಉಪಕರಣಗಳ ಅಭಿವೃದ್ಧಿಯನ್ನು ಕೂಡ ಮಾಡಲಾಗುತ್ತದೆ. ಅನೇಕ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ ಸೆಲ್ಕೋ ಸಂಸ್ಥೆಯಲ್ಲಿ ಅನಕ್ಷರಸ್ಥರು, ಹತ್ತನೇ ಇಯತ್ತೆ ದಾಟದವರಿಂದ ಹಿಡಿದು ವಿಶ್ವವಿದ್ಯಾಲಯದಲ್ಲಿ ಕಲಿತವರೂ ಸಮಾನಸ್ಕಂದರಾಗಿ ಸ್ವಾಭಿಮಾನದಿಂದ ದುಡಿಯುತ್ತಾರೆ. ಒಂದು ಕಾಲದಲ್ಲಿ ಆಫೀಸ್ ಬಾಯ್ ಆಗಿ ಸೆಲ್ಕೋ ಕಂಪನಿಗೆ ಸೇರಿದವರು ಇಂದು ಶಾಖೆಯೊಂದರ ಮೆನೇಜರ ಆಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ ಎಂದರೆ ಸೆಲ್ಕೋ ಸಂಸ್ಥೆಯಲ್ಲಿ ರೂಢಿಸಿರುವ ಸುಸಂಸ್ಕøತಿಯನ್ನು ಊಹಿಸಿಕೊಳ್ಳಬಹುದು. ಇವೆಲ್ಲವನ್ನು ಸಾಧಿಸಿದ ಶ್ರೀ ಹಂದೆಯವರಿಗೆ 2011ನೇ ವರ್ಷದಲ್ಲಿ ಪ್ರತಿಷ್ಠಿತ ರೇಮನ್ ಮ್ಯಾಗ್‍ಸೆಸ್ಸೇ ಪ್ರಶಸ್ತಿಯೂ ಸೇರಿದಂತೆ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮ್ಮಾನಗಳು ಸಂದಿವೆ. ಸಾವಿರಾರು ಗ್ರಾಮೀಣ ಬಡಜನರ ಬಾಳನ್ನು ಬೆಳಗಿದ ಸೌರಶಕ್ತಿಯ ಸರದಾರ ಡಾ| ಹರೀಶ ಹಂದೆ ತಾವು ಕಲಿತ ತಂತ್ರಜ್ಞಾನ ವಿದ್ಯೆಗೆ ಒಂದು ಅರ್ಥಪೂರ್ಣತೆಯನ್ನು ಒದಗಿಸಿದ್ದಾರೆ ಎಂದರೆ ಅತಿಶಯವಲ್ಲ.



ತುಮಕೂರು ಸಮೀಪದ ಗುಬ್ಬಿಯ ಬಸವನಗುಡ್ಡ ಎಂಬ ಹಳ್ಳಿಯಲ್ಲಿ ಕಡಿಮೆ ಖರ್ಚಿನ ಸರಳ ಜೀವನ (low energy lifestyle) ವನ್ನು ಒಂದು ವ್ರತದಂತೆ ಪಾಲನೆ ಮಾಡುತ್ತಿರುವವರು ಡಾ| ಪ್ರದೀಪ ಸಿ ಆರ್. ಐಐಟಿ ಖರಗಪುರದಲ್ಲಿ ಗಣಿತಶಾಸ್ತ್ರ ಪದವಿ ಪಡೆದ ಇವರು ಐಐಟಿ ಮುಂಬೈನಿಂದ ಡಾಕ್ಟರೇಟ್ ಪದವಿ ಪಡೆದರು. ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‍ನಲ್ಲಿ ಸಂಶೋಧಕರಾಗಿ ಹಾಗೂ ಕೆಲವುಕಾಲ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಪ್ರಾಧ್ಯಾಪಕರಾಗಿ ಕೂಡ ಸೇವೆ ಸಲ್ಲಿಸಿದರು. ಪ್ರಸ್ತುತ ಪೂರ್ಣಪ್ರಮಾಣದ ಕ್ರಷಿಕರು. ಬಸವನಗುಡ್ಡದ ಹಳ್ಳಿಯಲ್ಲಿ ವಾಸವಾಗಿ ಸಂಪನ್ಮೂಲಗಳ ಮಿತಬಳಕೆಯಲ್ಲಿ ಸರಳವಾಗಿ ಆದರೆ ಸಮೃದ್ಧವಾಗಿ ಹೇಗೆ ಬದುಕಬಹುದು ಎಂದು ಅಭ್ಯಾಸ ಮಾಡುತ್ತಿದ್ದಾರೆ. ಇವರ ಮನೆಗೆ ವಿದ್ಯುತ್ ಸಂಪರ್ಕವೇ ಇಲ್ಲ. ಮಳೆಕೊಯ್ಲಿನ ಮೂಲಕ ಅಗತ್ಯವಾದ ನೀರನ್ನು ಸಂಗ್ರಹಿಸುತ್ತಾರೆ. ಅತೀ ಅಗತ್ಯದಲ್ಲಿ ಮಾತ್ರ ಡೀಸೆಲ್-ಪೆಟ್ರೋಲ್ ವಾಹನಗಳನ್ನು ಬಳಸುತ್ತಾರೆ. ಚಾರಣ ಪಕ್ಷಿವೀಕ್ಷಣೆ ಮುಂತಾದ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಇವರ ಕೃಷಿಭೂಮಿಯಲ್ಲಿ ಅನೇಕ ಪ್ರಾಣಿ-ಪಕ್ಷಿಗಳು ಸ್ವಚ್ಛಂದವಾದ ಆಶ್ರಯ ಪಡೆದಿವೆ. ಹಳ್ಳಿಯ ಮಕ್ಕಳೊಡನೆ ಬೆರೆಯುತ್ತಾರೆ, ಅವರಿಗೆ ವಿಜ್ಞಾನ ಕಲಿಸುತ್ತಾರೆ. ಒಟ್ಟಿನಲ್ಲಿ ಪ್ರಕೃತಿಯ ಮಡಿಲಿನಲ್ಲಿ ಸರಳ ಆದರೆ ಸಮೃದ್ಧ ಮತ್ತು ಅರ್ಥಪೂರ್ಣ ಜೀವನ ಡಾ| ಪ್ರದೀಪ ಸಿ ಆರ್ ಅವರದು.



ಶ್ರೀಮತಿ ಗೀತಾ ಅರವಿಂದರವರು ಮುಂಬೈನ ಐಐಟಿಯಲ್ಲಿ ಶಿಕ್ಷಣ ಪೋರೈಸಿ ಸುಮಾರು 7 ವರ್ಷಗಳ ಕಾಲ ಸಾಫ್ಟವೇರ್ ಉದ್ಯೋಗಿಯಾಗಿದ್ದವರು. ನಂತರ ಕೈತುಂಬ ಸಂಬಳ ನೀಡುವ ಕೆಲಸಕ್ಕೆ ತೀಲಾಂಜಲಿಯಿತ್ತು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುವುದು ಹಾಗೂ ವಿಜ್ಞಾನದ ಕಲಿಕೆಯನ್ನು ಆಸಕ್ತಿದಾಯಕವಾಗಿ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡರು. ಈ ದೃಷ್ಟಿಯಿಂದ 'ಅನುಭವ ಸೈನ್ಸ್ ಫೌಂಡೇಶನ್' ಎಂಬ ಸಂಸ್ಥೆಯನ್ನು ಆರಂಭಿಸಿದರು. ವಿಜ್ಞಾನವನ್ನು ಪರೀಕ್ಷಾ ದೃಷ್ಟಿಯಿಂದ ಕಲಿಯುವಂತಹ ಇಂದಿನ ಪದ್ಧತಿಯನ್ನು ಬದಲಾಯಿಸಿ, ನಮ್ಮ ಅನುಭವಕ್ಕೆ ಎಟುಕುವ ರೀತಿಯಲ್ಲಿ ವಿಜ್ಞಾನವನ್ನು ಬೋಧಿಸುವ ಕ್ರಮವನ್ನು ಬೆಳಸುವುದು, ಮಕ್ಕಳಲ್ಲಿ ವಿಜ್ಞಾನದ ಕಲಿಕೆ ಆಸಕ್ತಿದಾಯಕವಾಗುವಂತೆ ಮಾಡುವುದರ ಜೊತೆಗೆ ವೈಜ್ಞಾನಿಕ ಚಿಂತನೆಯನ್ನು ಬೆಳೆಸುವುದು ಮುಂತಾದ ಕಾರ್ಯಗಳಲ್ಲಿ 'ಅನುಭವ ವಿಜ್ಞಾನ ಸಂಸ್ಥೆ' ತೊಡಗಿಕೊಂಡಿದೆ. ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷರನ್ನು ತರಬೇತುಗೊಳಿಸಿ ಅವರನ್ನೂ ಕೂಡ ಈ ಕಾರ್ಯಕ್ಕೆ ಜೋಡಿಸಲಾಗುತ್ತದೆ. 'ಅನುಭವ' ವಿಜ್ಞಾನ ವಸ್ತು ಪ್ರದರ್ಶನಗಳನ್ನೇರ್ಪಡಿಸಿ ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ಕಲಿಕೆಯ ಉತ್ಸಾಹವನ್ನು ಹೆಚ್ಚಿಸಲಾಗುತ್ತದೆ. ಖಾಸಗೀ ಶಾಲೆ, ಸರ್ಕಾರಿ ಶಾಲೆ, ಟೆಂಟ್ ಶಾಲೆಗಳೆನ್ನದ ಎಲ್ಲ ವರ್ಗದ ಮಕ್ಕಳನ್ನೂ ವಿಜ್ಞಾನದ ಸೂತ್ರದಲ್ಲಿ ಸೇರಿಸುತ್ತಿರುವ ಶ್ರೀಮತಿ ಗೀತಾರವರ ಕಾರ್ಯ ಎಲ್ಲ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಪ್ರೇರಣಾದಾಯಿ.



ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದ 40% ಹೆಚ್ಚು ಮನೆಗಳಲ್ಲಿ ಇಂದಿಗೂ ಸರಿಯಾದ ಶೌಚ ವ್ಯವಸ್ಥೆಯಿಲ್ಲ. ಈ ಸಮಸ್ಯೆಯನ್ನು ಮನಗಂಡು ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಶೌಚ ವ್ಯವಸ್ಥಯಲ್ಲಿ ಪರಿಶುದ್ಧತೆ ಹಾಗೂ ಗ್ರಾಮ ನೈರ್ಮಲ್ಯೀಕರಣದಲ್ಲಿ ಪ್ರಯತ್ನಶೀಲರಾದವರು ಶ್ರೀ ವಾಸುದೇವರಾವ್ ದೇಶಪಾಂಡೆ. ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸ್ವರ್ಣಪದಕದೊಂದಿಗೆ ಪದವಿ ಪಡೆದು ಅಮೆರಿಕದ ಮೆಸ್ಯಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದರು. ಕೆಲವು ಕಾಲ ಅಮೆರಿಕದಲ್ಲಿ ಉದ್ಯೊಗ ನಿಮಿತ್ತ ನೆಲೆಸಿದ ಶ್ರೀಯುತರು ಪ್ರಸ್ತುತ ಭಾರತದಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ ಪ್ರಬಂಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ಫೋಸಿಸ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭವಾದ ಇವರ 'ಪರಿಶುದ್ಧ' ಯೋಜನೆ 'ಬಯಲು ಶೌಚ ಮುಕ್ತ ಗ್ರಾಮದೆಡೆಗೆ ಒಂದು ದಿಟ್ಟ ಹೆಜ್ಜೆ' ಎಂಬ ಮಂತ್ರದೊಂದಿಗೆ ಗ್ರಾಮ ನೈರ್ಮಲ್ಯೀಕರಣದ ಕೆಲಸದಲ್ಲಿ ತೊಡಗಿಕೊಂಡಿದೆ. ಗ್ರಾಮಗಳ ಶೌಚ ಸಮಸ್ಯೆಯ ಪರಿಹಾರಕ್ಕಾಗಿ ಕೇವಲ 18 ತಿಂಗಳ ಅಲ್ಪಾವಧಿಯಲ್ಲಿ 11,250ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಗ್ರಾಮನೈರ್ಮಲ್ಯದಲ್ಲಿ ಸ್ಥಳೀಯರಿಗೆ ಮಾಹಿತಿ/ತರಬೇತಿಯನ್ನು ನೀಡುವುದರ ಜೊತೆಗೆ ಅವರನ್ನೂ ಕಾರ್ಯದಲ್ಲಿ ಜೋಡಿಸಲಾಗುತ್ತದೆ. ಇದುವರೆಗೆ ಸುಮಾರು 400 ಗ್ರಾಮಗಳ 5 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ನೈರ್ಮಲ್ಯದ ತರಬೇತಿ ನೀಡಿದ 'ಪರಿಶುದ್ಧ' ಯೋಜನೆಯ ಕಾರ್ಯ ಶ್ಲಾಘನೀಯ. ಇದರ ರೂವಾರಿ ಶ್ರೀ ವಾಸುದೇವರಾವ್ ದೇಶಪಾಂಡೆ ಬಿಡುವಿರದ ಐಟಿ-ಸಾಫ್ಟವೇರ್ ಜಗತ್ತಿನ ಜನರೂ ಹೇಗೆ ಸಮಾಜಹಿತ ಕಾರ್ಯಗಳಲ್ಲಿ ತೊಡಗಬಹುದು ಎನ್ನುವುದಕ್ಕೆ ಉತ್ತಮ ಮಾದರಿಯಾಗಿದ್ದಾರೆ.



ಯುವಮನಗಳನ್ನು ಸೇವೆಯೆಂಬ ಸೂತ್ರದಲ್ಲಿ ಪೋಣಿಸುತ್ತಿರುವವರು ಯೂಥ್ ಫಾರ್ ಸೇವಾ (YFS) ಸಂಸ್ಥೆಯ ಸಂಸ್ಥಾಪಕ ಸಂಯೋಜಕ ಶ್ರೀ ವೆಂಕಟೇಶಮೂರ್ತಿಯವರು. ಸುರತ್ಕಲ್ಲಿನ ಕೆಆರ್‍ಇಸಿ (ಈಗಿನ ಎನ್‍ಐಟಿ)ನಲ್ಲಿ ಇಂಜಿನಿಯರಿಂಗ ಪದವಿ ಪಡೆದ ನಂತರ ಕೆಲಕಾಲ ಪುಣೆಯಲ್ಲಿ ಮತ್ತು 15 ವರ್ಷಗಳ ಕಾಲ ಅಮೆರಿಕದಲ್ಲಿ ಸಾಫ್ಟವೇರ್ ತಂತ್ರಜ್ಞರಾಗಿ ಕಾರ್ಯನಿರ್ವಹಿಸಿದರು. ವೃತ್ತಿಯ ಜೊತೆಗೆ ಸೇವಾ ಇಂಟರ್‍ನ್ಯಾಶನಲ್, ಐಡಿಆರ್‍ಎಪ್ ಮುಂತಾದ ಅನೇಕ ಸೇವಾ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ವೆಂಕಟೇಶಮೂರ್ತಿಯವರು 1997ರಲ್ಲಿ 2 ವರ್ಷಗಳ ಕಾಲ ಟ್ರಿನಿಡಾನ್ ಮತ್ತು ಗಯಾನಾ ದೇಶಗಳಲ್ಲಿ ಸೇವಾವ್ರತಿಯಾಗಿ ಕೆಲಸ ಮಾಡಿದರು. ಬಳಿಕ ಭಾರತಕ್ಕೆ ಮರಳಿ ಯುವಜನರನ್ನು ಸೇವಾಕಾರ್ಯದಲ್ಲಿ ಜೋಡಿಸುವ ದೃಷ್ಟಿಯಿಂದ 2007ರಲ್ಲಿ ಯೂಥ್ ಫಾರ್ ಸೇವಾ ಸಂಘಟನೆಯನ್ನು ಆರಂಭಿಸಿ ಅದರಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡಿದ್ದಾರೆ. ಅಂದಿನಿಂದ ವಾಯ್‍ಎಫ್‍ಎಸ್ 5000ಕ್ಕೂ ಹೆಚ್ಚು ಯುವಕ-ಯವತಿಯರನ್ನು ಸೇವಾಕಾರ್ಯಗಳಲ್ಲಿ ಜೋಡಿಸಿದೆ. ಐಟಿ ಉದ್ಯೋಗಿಗಳು, ವೈದ್ಯರು, ಗೃಹಿಣಿಯರು, ವಿದ್ಯಾರ್ಥಿಗಳು ಹೀಗೆ ಅನೇಕರು ವಾಯ್‍ಎಫ್‍ಎಸ್‍ನ ವೇದಿಕೆಯ ಅಡಿಯಲ್ಲಿ ಬಡಮಕ್ಕಳಿಗೆ ಉಚಿತ ಪಾಠ, ಪರಿಸರ ಸಂರಕ್ಷಣೆ, ಆಸ್ಪತ್ರೆಗಳಲ್ಲಿ ಸೇವಾಕಾರ್ಯ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಾಯ್‍ಎಫ್‍ಎಸ್‍ನ 'ಸ್ಕೂಲ್ ಕಿಟ್' ಅಭಿಯಾನ, ವಿದ್ಯಾಚೇತನ, ಡಾಕ್ಟರ್ಸ ಫಾರ್ ಸೇವಾ ಮುಂತಾದ ಕಾರ್ಯಕ್ರಮಗಳು ಅನೇಕ ಮಕ್ಕಳ ಅಬಲರ ಬಾಳಿನಲ್ಲಿ ಬೆಳಕು ಮೂಡಿಸಿವೆ. ಬೆಂಗಳೂರಿನಲ್ಲಿ ಆರಂಭಗೊಂಡ ವಾಯ್‍ಎಫ್‍ಎಸ್ ಕಾರ್ಯ ಶಿವಮೊಗ್ಗ, ಮೈಸೂರು, ಬೆಳಗಾವಿ, ಚೆನ್ನೈ, ಹೈದರಾಬಾದ್, ಭೋಫಾಲ ಮುಂತಾದ ಕಡೆ ವಿಸ್ತರಿಸಿವೆ. ಯುವಜನರೂ ಸಮಾಜಹಿತ ಕಾರ್ಯಗಳಲ್ಲಿ ತೊಡಗಬಹುದೂ ಎಂದು ತೋರಿಸಿ ಅವರಿಗೆ ಒಂದು ವೇದಿಕೆಯನ್ನು ಒದಗಿಸಿದವರು ಶ್ರೀ ವೆಂಕಟೇಶಮೂರ್ತಿಯವರು.


ವೃತ್ತಿಯಲ್ಲಿ ಐಟಿ ಉದ್ಯೋಗಿ ಆದರೆ ಪ್ರವೃತ್ತಿಯಲ್ಲಿ ಪರಿಸರ ಪ್ರೇಮಿ ಶ್ರೀ ರಾಜೇಶ ಠಕ್ಕರ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಿಸರ್ಗಸ್ನೇಹಿ ಜೀವನ ಶೈಲಿ, ಸಸ್ಟೇನೇಬಲ್ ಲಿವಿಂಗ್‍ನ ಕುರಿತು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ನಿಸರ್ಗಸ್ನೇಹಿ ಜೀವನಶೈಲಿಯ ಸಂಶೋಧನೆಯಲ್ಲಿ ತೊಡಗಿರುವ ಬೆಂಗಳೂರಿನಲ್ಲಿರುವ "ಭೂಮಿ" ಕಾಲೇಜಿನ ನಿರ್ದೇಶಕರು ಹಾಗೂ ಪ್ರಾಧ್ಯಾಪಕರು ಶ್ರೀ ರಾಜೇಶ ಠಕ್ಕರರವರು. ಅವರು ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಸಂಭಂಧಿಸಿದ ಅನೇಕ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆಗೆ ಸಂಭಂದಿಸಿದ ಅನೇಕ ರಚನಾ ವಿನ್ಯಾಸಗಳನ್ನು ಮಾಡಿ ಅನುಷ್ಠಾನಗೊಳಿಸಿದ್ದಾರೆ. ಉದಾಹರಣೆಗೆ ಕಟ್ಟಡಗಳನ್ನು ಕಟ್ಟುವಲ್ಲಿ ಸ್ಥಿರವಾದ ಮಣ್ಣಿನ ಬ್ಲಾಕ್‍ಗಳನ್ನು ಬಳಸುವುದು, ಕಾಂಪೋಸ್ಟ್ ಶೌಚಾಲಯ, ಸೌರಶಕ್ತಿಯ ಬೆಳಕು ಹಾಗೂ ಗಾಳಿ ಅತಿಹೆಚ್ಚು ಬಳಕೆಯಾಗುವಂತೆ ಕಟ್ಟದ ವಿನ್ಯಾಸಗೊಳಿಸುವುದು ಇತ್ಯಾದಿ. ಪರಿಸರ ಸಂರಕ್ಷಣೆಯ ಬಗ್ಗೆ ಜಗತ್ತಿನ ನಾಯಕರುಗಳೇ ತಲೆಕೆಡಿಸಿಕೊಂಡಿರುವಾಗ ಭೂಮಿಯ ಧಾರಣ ಶಕ್ತಿಗೆ ಹೊಂದುವಂತೆ ಜೀವನಶೈಲಿ ರೂಪಿಸುವ ಮಾದರಿಗಳನ್ನು ಅನುಷ್ಠಾನಕ್ಕೆ ತರುತ್ತಿರುವವರು ಶ್ರೀ ರಾಜೇಶ ಠಕ್ಕರ.



ಪರಿಸರ ಸ್ನೇಹಿ ಸಂಚಾರಿ ವ್ಯವಸ್ಥೆಯನ್ನು ಪ್ರಚುರಗೊಳಿಸುವ ಉದ್ಧೇಶದಿಂದ ಪ್ರಾರಂಭವಾದ ಉಪಕ್ರಮ 'ನಮ್ಮ ಸೈಕಲ್'ನ ಪ್ರವರ್ತಕ ಶ್ರೀ ಮುರಳಿ ಹೆಚ್ ಆರ್. ವೃತ್ತಿಯಲ್ಲಿ ಕಾರ್ಪೋರೇಟ್ ಜಗತ್ತಿನಲ್ಲಿ ಬ್ಯುಸಿನೆಸ್ ಪ್ರೊಸೆಸ್ ಮ್ಯಾನೇಜ್‍ಮೆಂಟ್ ಮತ್ತು ಅಂತರ್ಜಾಲ ತಂತ್ರಜ್ಞಾನದ ತರಬೇತುದಾರ. ಏಷಿಯ ಮತ್ತು ಯೂರೋಪಿನ ಅನೇಕ ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ಫ್ರಾನ್ಸಿನಲ್ಲಿದ್ದಾಗ ಸೈಕಲ್ಲಿನ ಗೀಳು ಹಿಡಿಸಿಕೊಂಡರು. ಭಾರತಕ್ಕೆ ಮರಳಿ ಸೈಕಲ್‍ನ ತಾಂತ್ರಿಕ ಅಭಿವೃದ್ಧಿಯ ಜೊತೆಗೆ ನಮ್ಮ ನಗರಗಳಲ್ಲಿ ಸೈಕಲ್ ಬಳಕೆಯನ್ನು ಜನಪ್ರಿಯಗೊಳಿಸುವ ಕೆಲಸದಲ್ಲಿ ತೊಡಗಿದ್ದಾರೆ. ಈ ಉದ್ಧೇಶದಿಂದ 2012ರಲ್ಲಿ 'ನಮ್ಮ ಸೈಕಲ್' ಆರಂಭಿಸಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಮಾದರಿ ಪ್ರಕಲ್ಪವನ್ನು ಪ್ರಾರಂಭಗೊಳಿಸಿದರು. 'ನಮ್ಮ ಸೈಕಲ್' ಬಿಬಿಎಂಪಿ, ಬೆಸ್ಕಾಮ್ ಹಾಗೂ ಕೆಲವು ಖಾಸಗೀ ಸಂಸ್ಥೆಗಳ ಸಹಯೋಗದೊಂದಿಗೆ ನಗರಗಳಲ್ಲಿ ಸೈಕಲ್ ಕಿಯೋಸ್ಕ್‍ಗಳ ಸ್ಥಾಪನೆ, ರಸ್ತೆಗಳಲ್ಲಿ ಸೈಕಲ್ ಪಥವನ್ನು ನಿರ್ಮಿಸುವುದು, ಜನರಲ್ಲಿ ಜಾಗೃತಿ ಮೂಡಿಸುವುದು ಮುಂತಾದ ಕೆಲಸಗಳನ್ನು ಮಾಡುತ್ತಿದೆ. ಸೈಕಲಿನ ಬಳಕೆ ಚಿಕ್ಕ ವಿಷಯವಾದರೂ ವಾಹನ ದಟ್ಟಣೆ ದಿನೇ ದಿನೇ ಹೆಚ್ಚುತ್ತಿರುವ ನಗರಗಳಲ್ಲಿ ಹೇಗೆ ಆರೋಗ್ಯ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆಗೆ ಸಹಾಯಕವಾಗಬಹುದು ಎನ್ನುವ ಸಂದೇಶವನ್ನು ಮೊಳಗಿಸುತ್ತಿರುವವರು ಶ್ರೀ ಮುರಳಿ.

ಇವರೆಲ್ಲರ ನಡುವೆ ಕೆಲವು ಸಮಾನ ತಂತುಗಳಿವೆ. ಇವರಲ್ಲಿ ಪ್ರಕೃತಿ ಹಾಗೂ ಸಮಾಜದ ಬಗ್ಗೆ ಕಾಳಜಿಯ ಜೊತೆಗೆ ಜೀವನಪ್ರೀತಿ ತೀವ್ರವಾಗಿದೆ. ತಮ್ಮ ಬಾಳಿನ ಜೊತೆಗೆ ಸಹಯಾತ್ರಿಕರ ಬದುಕನ್ನು ಸುಗಮಗೊಳಿಸುವ ಬಲವಾದ ಇಚ್ಛೆ ಕಾಣುತ್ತದೆ. ಇವರು ಉನ್ನತ ಶಿಕ್ಷಣ ಪಡೆದು ಶ್ರೀಮಂತಿಕೆಯ ದರ್ಬಾರಿನ ಜೀವನ ನಡೆಸುವ ಅವಕಾಶ ಹೊಂದಿದ್ದರೂ ಸರಳ ಹಾಗೂ ಸಮೃದ್ಧ ಬದುಕನ್ನು ಆಯ್ದುಕೊಂಡವರು. ಎಲ್ಲರಂತೆ ಸಾವಿರ ಸಮಸ್ಯೆಗಳ ಇದಿರಿದ್ದರೂ, ಪರಿಹಾರವನ್ನು ಹುಡುಕಲು ಪ್ರಯತ್ನಿಸಿದವರು. ವೈರುಧ್ಯಗಳ ನಡುವಲ್ಲೇ ಹೊಸ ಹಾದಿ ಹಿಡಿದವರು.

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...