Monday, June 8, 2015

ಜಾಗತೀಕರಣದ "ಯೋಗ"

(ಪುಂಗವ 15/06/2015)


ಭಾರತದ ಪ್ರಧಾನಿ ನರೇಂದ್ರ ಮೋದಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಸಾಮಾನ್ಯ ಸಭೆಯನ್ನುದ್ಧೇಶಿಸಿ ಮಾತನಾಡುವಾಗ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿವಸವನ್ನಾಗಿ ಆಚರಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. (ಜೂನ್ 21 ಉತ್ತರ ಗೋಳಾರ್ಧದಲ್ಲಿ ಅತಿ ದೊಡ್ಡ ಹಗಲಿರುವ ದಿನ.) ಪ್ರಸ್ತಾವನೆಗೆ ವಿಶ್ವದ 175 ದೇಶಗಳು ಸಹ ಪ್ರಾಯೊಜಕರಾಗಿದ್ದಲ್ಲದೇ ಒಟ್ಟೂ 193 ದೇಶಗಳ ಸಹಮತಿಯೊಂದಿಗೆ ಅಂಗೀಕಾರಗೊಂಡಿದ್ದು ವಿಶ್ವಸಂಸ್ಥೆಯ ಇತಿಹಾಸದಲ್ಲೊಂದು ಮೈಲಿಗಲ್ಲು. ಶರೀರ ಮನ ಬುದ್ಧಿಗಳ ಸಮಗ್ರ ವಿಕಾಸದ ಯೋಗ ಪದ್ಧತಿಯಾದ ಆರು ಸಾವಿರ ವರ್ಷಗಳಿಗೂ ಹಿಂದಿನ ಇತಿಹಾಸವುಳ್ಳ ಭಾರತೀಯ ಮೂಲದ ಯೋಗ ಪದ್ಧತಿಗೆ ವಿಶ್ವದೆಲ್ಲೆಡೆ ಮಾನ್ಯತೆ ದೊರೆಯುತ್ತಿರುವದು ಹಾಗೂ ಭಾರತೀಯ ಜೀವನ ಶೈಲಿಯ ಬಗ್ಗೆ ವಿಶ್ವದ ಜನರ ಆಸಕ್ತಿ ಘಟನೆಯಿಂದ ಪ್ರತಿಬಿಂಬಿತವಾಗುವುದರ ಜೊತೆಗೆ, ಭಾರತೀಯ ರಾಜತಾಂತ್ರಿಕ ಕ್ಷಮತೆಯ ಪರಿಣತಿ ಹಾಗೂ ವಿಶ್ವದ ಆಗುಹೋಗುಗಳ ಮೇಲೆ ಭಾರತದ ಪ್ರಭಾವವೂ ಸ್ಪಷ್ಟವಾಗುತ್ತದೆ.

       ಯೋಗವೆಂದರೆ ಕೇವಲ ಆಸನಗಳು ಮತ್ತು ಪ್ರಾಣಾಯಾಮ ಎಂಬುದು ಸಾಮಾನ್ಯವಾಗಿ ಜನಜನಿತವಾದ ನಂಬಿಕೆ. ಆದರೆ ಯೋಗ ಕೇವಲ ಶರೀರ ಮನಗಳ ನಿಯಂತ್ರಣ ಸಾಧನೆಯ ತಂತ್ತಕ್ಕ್ಕೆ ಸೀಮಿತವಾದುದಲ್ಲ. ಯೋಗ ಎನ್ನವುದು ಭಾರತೀಯ ಆಧ್ಯಾತ್ಮಿಕ ಚಿಂತನೆಯ ಒಂದು ತತ್ತ್ವದರ್ಶನದ ಹೆಸರು. ಯೋಗಸೂತ್ರಗಳನ್ನು ಬರೆದ ಪತಂಜಲಿ ಮುನಿಯಿಂದ ಮೊದಲ್ಗೊಂಡು, ಭಗವದ್ಗೀತೆಯ ಯೋಗತತ್ವ, ಬುದ್ಧ, ಜೈನ ಶೈವ ಮುಂತಾದ ಪರಂಪರೆಯ ಯೋಗತತ್ವಗಳು, ಜೀವನಶೈಲಿ ಮತ್ತು ಆರೊಗ್ಯವನ್ನು ಪ್ರಧಾನವಾಗಿರಿಸಿರುವ ಪ್ರಚಲಿತ ವರ್ಷಗಳ ಯೋಗಾಭ್ಯಾಸಗಳವರೆಗೆ ಯೋಗ ಪರಂಪರೆ ಆಗಾಧ ವಿಸ್ತಾರದಲ್ಲಿ ಬೆಳೆದಿದೆ.

        ಯೋಗಕ್ಕೆ ಸಂಬಂಧಿಸಿದ ಮೂರು ವಾಕ್ಯಗಳು  ಪ್ರಸಿದ್ಧವಾಗಿವೆ, ಮೊದಲನೆಯದು  ಪತಂಜಲಿ ಯೋಗ ದರ್ಶನದ ವಾಕ್ಯ  ಯೋಗಃ ಚಿತ್ತವೃತ್ತಿ ನಿರೋಧಃ (ಮನಸ್ಸಿನ ಚಂಚಲ ವೃತ್ತಿಗಳನ್ನು ನಿಯಂತ್ರಿಸುವುದು). ಇನ್ನೆರಡು  ಭಗವದ್ಗೀತಯ ವಾಕ್ಯಗಳು,ಯೋಗಃ ಕರ್ಮಸು ಕೌಶಲಮ್  (ಕೆಲಸದಲ್ಲಿನ ಕುಶಲತೆಯೇ ಯೋಗ) ಮತ್ತು ಸಮತ್ವಮ್ ಯೋಗ ಉಚ್ಯತೇ (ಮನಸ್ಸಿನ ಸಂತುಲನವನ್ನು ಯೋಗವೆನ್ನುವರು).  ಮೂರು ಉಕ್ತಿಗಳು ಸಾಮಾನ್ಯ ವ್ಯಕ್ತಿಗೆ ಯೋಗವೆಂದರೇನು ಎನ್ನುವುದನ್ನು ತಿಳಿಸುತ್ತವೆಚಿತ್ತದ ವೃತ್ತಿಗಳನ್ನು ನಿರೋಧವನ್ನು ಏಕೆ ಮಾಡಬೇಕು ಅಂದರೆ, ಚಿತ್ತದ ವೃತ್ತಿಗಳನ್ನು ನಿಯಂತ್ರಿಸಿದ ಮೇಲೆ ಬರುವ ದೃಷ್ಟಿ ಸ್ಪಷ್ಟತೆಯಿಂದ ಸತ್ಯದ ದರ್ಶನವಾಗುತ್ತದೆ. ಇದು ಸಾಧ್ಯವಾಗಬೇಕು ಎಂದಾದರೆ ಪ್ರತಿ ಕೆಲಸವನ್ನೂ ಕುಶಲತೆಯಿಂದ ಮಾಡುವುದನ್ನು ಕಲಿಯಬೇಕಾಗುತ್ತದೆ. ಇದರಿಂದ ಸಿಗುವ ಉಪಲಬ್ಧಿ ಅಂತಿಮ ಸತ್ಯದ ದರ್ಶನ. ಅಂತಿಮ ಸತ್ಯದ ದರ್ಶನದಿಂದ ನಮಗೆ ತಿಳಿಯುವುದೆಂದರೆ ಅದೊಂದೇ ಸತ್ಯ ಬೇರೇನೂ ಅಲ್ಲ, ಕಾಣುವುದೆಲ್ಲವೂ ಸತ್ಯದ ವಿವಿಧ ರೂಪಗಳು, ಆದ್ದರಿಂದ ಎಲ್ಲರ ಬಗ್ಗೆ, ಎಲ್ಲ ವಿವಿಧ ರೂಪಗಳ ಬಗ್ಗೆ ಮನಸ್ಸಿನಲ್ಲಿ ಒಂದು ಸಮತ್ವ ಮೂಡುತ್ತದೆ. ವಿಭಿನ್ನ ಪರಿಸ್ಥಿತಿಗಳಲ್ಲೂ ಸಮತೆ ಮನಸ್ಸಿನಲ್ಲಿ ಕಾಣುತ್ತದೆ. ನಂತರ ವ್ಯಕ್ತಿಯುಸುಖೇ ದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ  ಎನ್ನುವಂತೆ ಎಲ್ಲ ಪರಿಸ್ಥಿತಿಯಲ್ಲೂ ಸಮನಾಗಿರುತ್ತಾನೆ.

       ಭಾರತೀಯರಾದ ನಾವು ಯೋಗವು ಜಗತ್ತಿಗೆ ಮಾನ್ಯವಾಗುವಂತೆ ನಾವು ಮಾಡಬೇಕು. ವೈಜ್ಞಾನಿಕವಾಗಿ ಅದನ್ನು ಜಗತ್ತಿನ ಮುಂದಿರಿಸಬೇಕು. ಎಷ್ಟರಮಟ್ಟಿಗೆ ಅಂದರೆ ಯೋಗವಂತು ಸತ್ಯ ಅದನ್ನು ವೈಜ್ಞಾನಿಕವಾಗಿ ಪ್ರಸ್ತುತ ಪಡಿಸಬೇಕು ಎಂದು ಇಂದು ನಾವು ಹೇಳುವಂತೆ, ನಾಳೆ ವಿಜ್ಞಾವಂತೂ ಸತ್ಯ ಆದರೆ ಅದನ್ನು ಯೋಗದ ಆಧಾರದ ಮೇಲೆ ಮಂಡಿಸಿದರೆ ನಾವು ಒಪ್ಪುತ್ತೇವೆ - ಎಂದು ಜಗತ್ತು ಹೇಳುವಂತೆ ಯೋಗ ವಿಚಾರವನ್ನು ಬೆಳೆಸಬೇಕು

     ಯೋಗ ಎಂದರೆ ಸೇರಿಸುವುದು, ಒಂದುಗೂಡಿಸುವುದು ಎನ್ನುವ ಅರ್ಥವಿದೆ. ಮಾನವನನ್ನು ದೈವತ್ವದೊಂದಿಗೆ ಜೋಡಿಸುವ ಯೋಗವು ಭಿನ್ನತೆಯಲ್ಲಿ ಒಡೆದಿರುವ ಸಮಾಜವನ್ನು ಹಾಗೂ ವಿವಿಧ ವಿಷಮತೆಗಳಿಂದಾಗಿ ವಿಘಟಿತವಾಗಿರುವ ವಿಶ್ವವನ್ನು ಒಂದುಗೂಡಿಸಲಿ.

ಯೋಗದ ಹಂತಗಳು
ಯೋಗಸೂತ್ರಗಳನ್ನು ರಚಿಸಿದ ಪತಂಜಲಿ ಮುನಿಯು  ಆತ್ಮಸಾಧನೆಗಾಗಿ ಅಷ್ಟ ಅಂಗಗಳಿರುವ ಯೋಗವನ್ನು ಹೇಳಿದ್ದಾನೆ.

ಯಮ- ಅಹಿಂಸೆ, ಸತ್ಯವನ್ನು ನುಡಿಯುವುದು, ಕಳ್ಳತನ ಮಾಡದಿರುವುದು, ಬ್ರಹ್ಮಚರ್ಯ, ಅತಿಯಾಗಿ ಸಂಗ್ರಹ ಮಾಡದ ಸರಳ ಜೀವನ ಇವೇ  ಸಾರ್ವತ್ರಿಕ ನೀತಿ ನಿಯಮಗಳು
ನಿಯಮ -ದೇಹದ ಶುಚಿತ್ವ, ಮನಸ್ಸಿನ ತೃಪ್ತಿ ಹಾಗೂ ಸಂತೋಷ, ತಪಸ್ಸು, ಸ್ವಾಧ್ಯಾಯ, ದೈವಭಕ್ತಿ ಮುಂತಾದ  ವ್ಯಕ್ತಿಯ ನಡವಳಿಕೆಗೆ ಸಂಬಂಧಪಟ್ಟ ಆತ್ಮ ಶುದ್ಧೀಕರಣದ ನಿಬಂಧನೆಗಳು .
ಆಸನ- ದೇಹದ ನಿಲುಮೆ, ದೇಹಕ್ಕೆ ಆರೋಗ್ಯ ಮತ್ತು ಲಘುತ್ವವನ್ನು ನೀಡಬಲ್ಲ ವ್ಯಾಯಾಮಗಳು
ಪ್ರಾಣಾಯಾಮ-ಉಸಿರಾಟದ ಕ್ರಮಬದ್ಧ ಹತೋಟಿ
ಪ್ರತ್ಯಾಹಾರ-ಇಂದ್ರಿಯಗಳ ಮತ್ತು ಇಂದ್ರಿಯಾರ್ಥಗಳ ಪ್ರಾಬಲ್ಯದಿಂದ ಮನಸ್ಸಿನ ಬಿಡುಗಡೆ
ಧಾರಣ-ಕೇಂದ್ರೀಕರಣ, ಮನಸ್ಸನ್ನು ಏಕಾಗ್ರಗೊಳಿಸುವುದು.
ಧ್ಯಾನ-ಜಪ, ಚಿತ್ತವನ್ನು ಅವಿಚ್ಛಿನ್ನವಾಗಿ ಧ್ಯೇಯದಲ್ಲಿ ನೆಲೆನಿಲ್ಲಿಸುವುದು
ಸಮಾಧಿ-ಜಪದ ಧ್ಯೇಯವಾದ ಪರಮಾತ್ಮನಲ್ಲಿ ಸಾಧಕನ ಐಕ್ಯ


     ಯಮ ನಿಯಮಗಳು ವ್ಯಕ್ತಯಲ್ಲಿ ಕಾಮ ಮತ್ತು ಉದ್ವೇಗಗಳನ್ನು ನಿಗ್ರಹಿಸಿ ಸಮಾಜದ ಇತರರೊಡನೆ ಸಮರಸವಾಗಿರುವಂತೆ ಮಾಡುತ್ತವೆ. ಆಸನವು ದೇಹವನ್ನು ಆರೋಗ್ಯಕರವಾಗಿ ಮತ್ತು ಬಲಯುತವಾಗಿರಿಸಿ ಪ್ರಕೃತಿಯೊಡನೆ ಸಮರಸವಾಗಿರುವಂತೆ ಮಾಡುತ್ತದೆ. ಪ್ರಾಣಯಾಮ ಮತ್ತು ಪ್ರತ್ಯಾಹಾರಗಳು ಉಸಿರಾಟವನ್ನು  ಕ್ರಮಬದ್ಧಗೊಳಿಸಿ ಮನಸ್ಸಿನ ಮೇಲೆ ಹತೋಟಿಯನ್ನು ಕೊಡುತ್ತವೆ. ಇದರಿಂದ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆ. ಧಾರಣ, ಧ್ಯಾನ ಮತ್ತು ಸಮಾಧಿ ಇವು ಯೋಗಸಾಧಕನ್ನು ಆತ್ಮನ ಅಂತರಂಗದೊಳಕ್ಕೆ  ಕೊಂಡೊಯ್ಯುತ್ತವೆ. ಧ್ಯಾನಪರನಾದ ಯೋಗಿಯು ತಾನೇ ತಾನಾಗಿ ಸ್ವ- ಭಾವವನ್ನು ಹೊಂದಿ ಪರಮಾತ್ಮನ ಅಂಶವಾದ ತನ್ನ ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಯಜ್ಞಾತ್ವಾ ಸರ್ವಮಿದಂ ವಿಜ್ಞಾತೋ ಭವತಿ - ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ ಆಗುವುದೋ, ಎನ್ನುವ ಸ್ಥಿತಿಯೆಡೆಗೆ ಯೋಗಿಯು ಸಾಗುತ್ತಾನೆ.

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...