Saturday, April 1, 2017

ಪ್ರತಿಗಾಮಿಗಳ ಬಿಗಿಹಿಡಿತದಿಂದ ಪ್ರಗತಿಯ ಹಾದಿಗೆ ತೆರೆದುಕೊಳ್ಳುತ್ತಿದೆಯೇ ಭಾರತೀಯ ಮುಸ್ಲಿಂ ಸಮಾಜ?

(ವಿಕ್ರಮ 02/04/2017) 

ಉತ್ತರ ಪ್ರದೇಶದ ಸಹಾರಾನ್‌ಪುರ ಜಿಲ್ಲೆಯ ದೇವಬಂದ್‌ನಲ್ಲಿ ದಾರುಲ್ ಉಲೂಮ್ ಹೆಸರಿನ ಇಸ್ಲಾಂ ಅಧ್ಯಯನ ಕೇಂದ್ರವಿದೆ. ಹತ್ತೊಂಭತ್ತನೇ ಶತಮಾನದ 1866ರಲ್ಲಿ ಆರಂಭವಾದ ಈ ಕೇಂದ್ರ ಇಸ್ಲಾಂ ಸಂಪ್ರದಾಯಗಳ ವಿಷಯದಲ್ಲಿ ಕಟ್ಟರ್ ಎಂದು ಗುರುತಿಸಿಕೊಂಡಿದೆ. ಭಾರತದ ಅತ್ಯಂತ ಹಳೆಯ ಇಸ್ಲಾಂ ಅಧ್ಯಯನ ಕೇಂದ್ರಗಳಲ್ಲೊಂದಾದ ದಾರುಲ್ ಉಲೂಮ್ ಬೇರೆ ಬೇರೆ ರಾಜ್ಯಗಳಲ್ಲಿ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು ಏಳುಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ. 2011ರಲ್ಲಿ ಈ ಸಂಸ್ಥೆಯ ಉಪಕುಲಪತಿಯಾಗಿ ನಿಯುಕ್ತರಾದ ಗುಜರಾತ್ ಮೂಲದ ಗುಲಾಮ್ ಮೊಹಮ್ಮದ್ ವಸ್ತಾನವಿ ಈ ಕಟ್ಟರ್ ಸಾಂಪ್ರದಾಯಿಕ  ವಾದದಿಂದ ಸ್ವಲ್ಪ ಹೊರಬಂದು ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ, ಇಂಜಿನಿಯರಿಂಗ್, ಕಲೆ, ಸಾಹಿತ್ಯ, ಸಂಗೀತ ವಿಷಯಗಳನ್ನು ಪರಿಚಯಿಸಿ, ಇಸ್ಲಾಮಿನ ಅಧ್ಯಯನದ ಜೊತೆಗೆ ಆಧುನಿಕ ಶಿಕ್ಷಣವನ್ನೂ ನೀಡಲು ಪ್ರಯತ್ನಿಸಿದರು. ವೈಶ್ವಿಕ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣ ನೀಡುವ ಜ್ಞಾನವೂ ಅಗತ್ಯ ಎನ್ನುವುದು ಅವರ ನಂಬಿಕೆಯಾಗಿತ್ತು. ಆದರೆ ಅವರ ಜಾರಿಗೆ ತಂದ ಶಿಕ್ಷಣ ಪದ್ಧತಿ ಇಸ್ಲಾಂ ಶಿಕ್ಷಣವೇ ಎಲ್ಲಕ್ಕಿಂತ ಶ್ರೇಷ್ಠ ಎಂದು ಪ್ರತಿಪಾದಿಸುತ್ತಿದ್ದ ಮುಸ್ಲಿಂ ಮುಲ್ಲಾಗಳ ಕೆಂಗಣ್ಣಿಗೆ ಗುರಿಯಾಯಿತು. ವಸ್ತಾನವಿ ಗುಜರಾತ್ ದಂಗೆಯ ವಿಷಯದಲ್ಲಿ ನರೇಂದ್ರ ಮೋದಿಯವರ ಪರ ಮಾತನಾಡಿದರು ಎಂದು ಕುಂಟು ನೆಪ ಹೊರಿಸಿ ಅವರನ್ನು ಉಪಕುಲಪತಿ ಸ್ಥಾನದಿಂದ ಕೆಳಗಿಳಿಸಲಾಯಿತು. ಆದರೆ ಮುಂದೆ ನಡೆದ ಬೆಳವಣಿಗೆಗಳು ಮುಸ್ಲಿಂ ಸಮಾಜದ ಯುವಕರ ಬದಲಾಗುತ್ತಿರುವ ಮನೋಸ್ಥಿತಿಯನ್ನು ಮತ್ತು ಅವರ ಇಂದಿನ ಆಯ್ಕೆಗಳು ಏನು ಎನ್ನುವುದನ್ನು ಸೂಚಿಸುತ್ತದೆ. ವಸ್ತಾನವಿಯವರ ಬೆಂಬಲಕ್ಕೆ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ನಿಂತರು. ಜೊತಗೆ ಮಾಧ್ಯಮದಲ್ಲಿಯೂ ಅವರ ಪರ ಬೆಂಬಲ ವ್ಯಕ್ತವಾಯಿತು. ದಾರುಲ್ ಉಲೂಮ್‌ನ ಆಡಳಿತ ಮಂಡಳಿ ಮಜ್ಲಿಸ್ ಎ ಶೂರಾ ಬಗ್ಗಲೇ ಬೇಕಾಯಿತು. ಅವರ ಮೋದಿಪರ ಹೇಳಿಕೆಯ ಕುರಿತು ತನಿಖೆ ಆದೇಶವಾಯಿತಾದರೂ ಗುಲಾಮ್ ಮೊಹಮ್ಮದ್ ವಸ್ತಾನವಿ ದಾರುಲ್ ಉಲೂಮ್‌ನ ಉಪಕುಲಪತಿಯಾಗಿ ಪುನಃ ನಿಯುಕ್ತರಾದರು.

ಹಾಗೆ ನೋಡಿದರೆ ಮೂಲಭೂತವಾದ ಮತ್ತು ಆಧುನಿಕ ಸಾಮಾಜಿಕ ಜೀವನಕ್ಕೆ ತೆರೆದುಕೊಳ್ಳಬಯಸುವ ಇಬ್ಬಗೆಯ ಸಂಕೀರ್ಣ ವ್ಯವಸ್ಥೆ ಮುಸ್ಲಿಂ ಸಮಾಜದಲ್ಲಿ ಮೇಲುನೋಟಕ್ಕೆ ಕಾಣಸಿಗುತ್ತದೆ. ಮಧ್ಯಮ ವರ್ಗದ ಮುಸ್ಲಿಂ ಕುಟುಂಬಗಳ ಆಶೋತ್ತರಗಳು ಉಳಿದವರಿಗಿಂತ ಬೇರೆಯೇನಿಲ್ಲ. ಮತೀಯ ಕಟ್ಟರ್‌ವಾದ ಮತ್ತು ತಾರ್ಕಿಕ ಕಾರಣಗಳಿಗೆ ನಿಲುಕದ ನಂಬಿಕೆ ಮತ್ತು ಕೆಲವೇ ಕೆಲವರ ವ್ಯಾಖ್ಯಾನಗಳ ನಿಯಮಗಳ ನಿರ್ಭಂಧದಲ್ಲಿ ನಡೆಯುವ ಇಸ್ಲಾಂ ಸಮಾಜ ಈ ಹಿಡಿತದಿಂದ ಹೊರಬರಲು ಯತ್ನಿಸಿರುವುದು ಇತಿಹಾಸದಲ್ಲಿ ಅಲ್ಲಲ್ಲಿ ಕಾಣಿಸುತ್ತದೆ. ಹಾಗೆಯೇ ಪ್ರಸ್ತುತ ಕಾಲದಲ್ಲಿಯೂ ಇಂತಹ ಸನ್ನಿವೇಶವನ್ನು ಗಮನಿಸಬಹುದು.


ಉಗ್ರವಾದ ಮತ್ತು ಇಸ್ಲಾಂ
ವಿಶ್ವಶಾಂತಿಗೆ ಕಂಟಕವಾಗಿರುವ ಪ್ರಮುಖ ಸಮಸ್ಯೆಗಳಲ್ಲಿ ಮೂಲಭೂತವಾಗಿ ಇಸ್ಲಾಂ ಉಗ್ರವಾದ ಮೊದಲನೆಯದು. ಅಪಘಾನಿಸ್ತಾನದ ತಾಲಿಬಾನನಿಂದ ಮೊದಲುಗೊಂಡು, ಒಸಾಮಾ ಬಿನ್ ಲಾಡನ್‌ನ ಅಲ್ ಖೈದಾ, ಪಾಕಿಸ್ತಾನದಲ್ಲಿ ಬೇರು ಬಿಟ್ಟಿರುವ ಉಗ್ರ ಸಂಘಟನೆಗಳು, ಬಾಂಗ್ಲಾದೇಶದ ಜಮಾತೆಯಂತಹ ತೀವ್ರವಾದಿ ಸಂಘಟನೆಗಳ ಪುಂಡರು, ಯೂರೋಪಿನಲ್ಲಿ ನಿಧಾನವಾಗಿ ಬೇರಿಳಿಸುತ್ತಿರುವ ಮೂಲಭೂತವಾದ, ಜೊತೆಗೆ ಇತ್ತೀಚಿನ ಕೆಲವರ್ಷಗಳಲ್ಲಿ ಪೆಡಂಭೂತವಾಗಿ ಬೆಳದು ಭದ್ರ ನೆಲೆಯನ್ನು ಸ್ಥಾಪಿಸಿಕೊಂಡ ಇಸ್ಲಾಮಿಕ್ ಸ್ಟೇಟ್ (ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಆಂಡ್ ಇರಾಕ್ ಅಥವಾ ಐಎಸ್‌ಐಎಸ್) ಮೊದಲಾದವು ಇಸ್ಲಾಮಿನ ಜಿಹಾದ್ ಹೆಸರಿನಲ್ಲಿ ಮಾನವಕುಲವನ್ನು ವಿನಾಶದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿವೆ. ಪಾಕಿಸ್ತಾನ, ಮಧ್ಯಪ್ರಾಚ್ಯ ಮತ್ತು ಅರಬ್ ದೇಶಗಳು, ಉತ್ತರ ಆಫ್ರಿಕದ ಕೆಲವು ದೇಶಗಳು ಇಂತಹ ದುಷ್ಟಕೂಟಗಳಿಗೆ ಆಶ್ರಯವನ್ನು ನೀಡುತ್ತಿವೆ. ಹಾಗೆಯೇ ಮುಸ್ಲಿಂ ರಾಷ್ಟ್ರವಾಗಿದ್ದರೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದ ಮಲೇಷಿಯ, ಇಂಡೋನೇಷಿಯದಂತಹ ದೇಶಗಳು ಕಟ್ಟರ್ ವಹಾಬಿ ಮೂಲಭೂತವಾದದತ್ತ ವಾಲುತ್ತಿರುವುದು ಕಂಡುಬರುತ್ತಿದೆ. ಅಷ್ಟೇ ಅಲ್ಲದೇ ಚೀನಾದ  ಕಮ್ಯುನಿಸ್ಟ್ ಸರ್ಕಾರದ ಬಿಗಿಹಿಡಿತದ ಹೊರತಾಗಿಯೂ ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ನೆಲೆಸಿರುವ ಉಯ್‌ಗುರ್ ಮುಸಲ್ಮಾನ ಉಗ್ರವಾದ ಚಿಗುರುತ್ತಿದೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಐಎಸ್‌ಐಎಸ್ ಪ್ರಭಾವ ಹರಡುತ್ತಿರುವ ವಿಷಯ ವರದಿಯಾಗಿದೆ.

ಇತ್ತೀಚಿನ ಸಮಯದಲ್ಲಿ ಐಎಸ್‌ಐಎಸ್ ಪ್ರಭಾವಕ್ಕೊಳಗಾದ ಮಧ್ಯಪ್ರಾಚ್ಯ ಪ್ರದೇಶವನ್ನು ಬಿಟ್ಟರೆ ಜಿಹಾದಿ ಭಯೋತ್ಪಾದನೆ ಬಲಿಯಾದ ಇನ್ನೊಂದು ಪ್ರದೇಶ ಸ್ವಯಂ ಮತೀಯ ಉಗ್ರವಾದವನ್ನೇ ಪೋಷಿಸುತ್ತಿರುವ ಪಾಕಿಸ್ತಾನ. 2017ರ ಕಳೆದ ಮೂರು ತಿಂಗಳಿನಲ್ಲಿ ಹದಿನೈದಕ್ಕೂ ಹೆಚ್ಚು ಭಯೋತ್ಪಾದಕ ದಾಳಿಗಳು ಬಾಂಬ್ ವಿಸ್ಫೋಟಗಳು ಪಾಕಿಸ್ತಾನದಲ್ಲಿ ನಡೆದಿದ್ದು ನಾಗರಿಕರು, ಭದ್ರತಾ ಪಡೆಯ ಸಿಬ್ಬಂದಿ ಸೇರಿದಂತೆ ೩೫೦ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 2004ರಿಂದ ಪಾಕಿಸ್ತಾನದಲ್ಲಿ ನಿರಂತರ ಉಗ್ರ ಚಟುವಟಿಕೆ ನಡೆಯುತ್ತಿದ್ದು ಪ್ರತಿವರ್ಷ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 

ಇಸ್ಲಾಂ ಮೂಲಭೂತವಾದ ಅದರಲ್ಲೂ ಪಾಕಿಸ್ತಾನ ಪ್ರೇರಿತ ಗಡಿಯಾಚೆಗಿನ ಭಯೋತ್ಪಾದನೆಯನ್ನು ಭಾರತ ದಶಕಗಳಿಂದ ಎದುರಿಸುತ್ತ ಬಂದಿದೆ. ಇಸ್ಲಾಮಿಗೂ ಉಗ್ರವಾದಕ್ಕೂ ಸಂಭಂಧವಿಲ್ಲ, ಭಾರತೀಯ ಮುಸಲ್ಮಾನರು ಐಎಸ್‌ಐಎಸ್‌ನಂತಹ ಉಗ್ರ ಸಂಘಟನೆ ಸೇರಿಲ್ಲ ಎಂದು ರಾಜಕೀಯ ನೇತಾರರು ಮಾಧ್ಯiದ ಬುದ್ಧಿಜೀವಿಗಳು ಎಷ್ಟೇ ಹೇಳಿದರೂ ಕಳೆದ ಒಂದು ವರ್ಷದಲ್ಲಿ ರಾಷ್ಟ್ರೀಯ ತನಿಖಾದಳ (ಎನ್‌ಐಎ) ಪ್ರತಿಬಾರಿ ಉಗ್ರರನ್ನು ಬಂಧಿಸಿದಾಗ ಹೊರಬೀಳುವ ಮಾಹಿತಿಯನ್ನು ನೋಡಿದರೆ ಜಿಹಾದಿ ಭಯೋತ್ಪಾದಕ ಸಂಘಟನೆಗಳಿಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುವ ಸ್ಲೀಪರ್ ಸೆಲ್‌ಗಳು ಅಲ್ಲಲ್ಲಿ ಕೆಲಸ ಮಾಡುತ್ತಿರುವುದು ಹಾಗೆಯೇ ಸ್ಥಳೀಯರನ್ನೇ ಬಳಸಿಕೊಂಡು ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲು ಯೋಜನೆ ಹಾಕಿರುವುದು ಕಾಣಿಸುತ್ತದೆ. ಇದೇ ಮಾರ್ಚ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ರೇಲ್ವೆಯ ಮೇಲೆ ನಡೆದ ಉಗ್ರ ದಾಳಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಇನ್ನು ಸಾಮಾಜಿಕ ಜಾಲತಾಣಗಳನ್ನೂ ಬಳಸಿಕೊಂಡು ಭಯ ಬಿತ್ತುವ ಕೆಲಸವೂ ನಡೆಯುತ್ತಿದೆ. ಅಂತರರಾಷ್ಟ್ರೀಯ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಪ್ರಭಾವಕ್ಕೆ ಭಾರತೀಯ ಮುಸ್ಲಿಂ ಯುವಕರು ಬಲಿಯಾಗುವರೇ? ಎನ್ನುವುದು ಮುಸ್ಲಿಂ ಸಮಾಜವೇ  ಪರಿಹಾರ ಕಂಡುಹಿಡಿಯಬೇಕಾದ ಪ್ರಶ್ನೆಯಾಗಿದೆ.


ಮುಸ್ಲಿಂ ಮಹಿಳೆಯರು ಮತ್ತು ಸಮಾನತೆ
ವ್ಯಕ್ತಿಸ್ವಾತಂತ್ರ್ಯ ಮತ್ತು ಸಮಾನತೆಗಳ ವಿಷಯದಲ್ಲಿ ಮುಸ್ಲಿಂ ಮಹಿಳೆಯರಷ್ಟು ತಾರತಮ್ಯಕ್ಕೊಳಗಾದ ಗುಂಪು ಇನ್ನೊಂದು ಇರಲಿಕ್ಕಿಲ್ಲ. ಕೆಲವು ಶ್ರೀಮಂತ ವರ್ಗದ ಉದಾಹರಣೆಗಳನ್ನು ನೀಡಿ ಮುಸ್ಲಿಂ ಮಹಿಳೆಯರಿಗೆ ಸಮಾನ ಆಧಿಕಾರ ಇದೆ ಎಂದು ವಾದಿಸಲಾಗುತ್ತದೆಯಾದರೂ ಇಸ್ಲಾಂ ಸಮಾಜದ ದೊಡ್ಡ ವರ್ಗ ಮಹಿಳೆಯರನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಿರುವುದೂ ಅಷ್ಟೇ ಸತ್ಯ. ಉಡುಗೆ ತೊಡುಗೆಗಳಿಂದ ಹಿಡಿದು ಮಹಿಳೆಯರ ಸಾರ್ವಜನಿಕ ವ್ಯವಹಾರದವರೆಗೆ ಮತೀಯ ವಿಧಿನಿಷೇಧಗಳನ್ನು ಪುರುಷಪ್ರಧಾನ ಕಟ್ಟರ್‌ವಾದಿ ಮುಸ್ಲಿಂ ಸಮಾಜ ಹೇರುತ್ತಲೇ ಇದೆ. ಮಾವನಿಂದ ಅತ್ಯಾಚಾರಕ್ಕೊಳಗಾದ ಮಹಿಳೆಗೆ ಗಂಡನಿಂದ ವಿಚ್ಛೇದನ ನೀಡಿಸಿ, ಇನ್ನು ಗಂಡನನ್ನು ಮಗನಂತೇ ಕಾಣಬೇಕೇಂದು ತಲೆಬುಡವಿಲ್ಲದ ತೀರ್ಪಿತ್ತಂತಹ ಘಟನೆಗಳೂ ನಡೆದಿವೆ.

ಉದಾಹರಣೆಗೆ ವಿವಾಹದ ವಿಷಯವನ್ನೇ ತೆಗೆದುಕೊಳ್ಳಬಹುದು. ಇಸ್ಲಾಮಿನಲ್ಲಿ ವಿವಾಹ ಎನ್ನುವುದು ಪುರುಷ ಮತ್ತು ಮಹಿಳೆಯ ನಡುವಿನ ಒಂದು ಒಪ್ಪಂದವೇ ಹೊರತು ಭಾರತೀಯ ಪದ್ಧತಿಯಂತೆ ಒಂದು ಪವಿತ್ರ ಬಂಧನವಲ್ಲ. ಮುಸ್ಲಿಂ ಕಾನೂನಿನಂತೆ ಓರ್ವ ಪುರುಷ ಒಟ್ಟಿಗೆ ನಾಲ್ಕು ಪತ್ನಿಯರನ್ನು ಹೊಂದಲು ಅವಕಾಶವಿದೆ. ಆತ ಇನ್ನೊಂದು ಸ್ತ್ರೀಯನ್ನು ಮದುವೆಯಾಗಲು ಬಯಸಿದರೆ, ನಾಲ್ವರಲ್ಲಿ ಓರ್ವಳನ್ನು ತ್ಯಜಸಿ ಇನ್ನೊಂದು ವಿವಾಹವಾಗಬಹುದು. ವಿವಾಹವಾಗಲು ಸ್ತ್ರೀಪುರುಷರಿಗೆ 18 ಮತ್ತು ೨೧ವರ್ಷ ವಯಸ್ಸಾಗಿರಬೇಕು ಎಂಬ ಕಾನೂನಿದ್ದರೂ ಮುಸ್ಲಿಂ ವೈಯಕ್ತಿಕ ಕಾನೂನಿನಂತೆ ೧೫ ವರ್ಷಕ್ಕೆ ಮುಸ್ಲಿಂ ಹುಡುಗಿಯ ಮದುವೆ ಮಾಡಬಹುದು. ಒಂದು ಸೀಮಿತ ಅವಧಿಗಷ್ಟೇ ಮದುವೆಯಾಗಿರಬಹುದಾದ ಮುಟಾ ವಿವಾಹವೂ ಇಸ್ಲಾಮಿನಲ್ಲಿದೆ. ಮುಸ್ಲಿಂ ಪುರುಷ ತ್ರಿವಳಿ ತಲಾಖ್ ಮೂಲಕ ಯಾವುದೇ ಕಾರಣ ಹಾಗೂ ಜೀವನಾಂಶವನ್ನೂ ನೀಡದೆ ಪತ್ನಿಗೆ ವಿಚ್ಛೇದನ ನೀಡಬಹುದು. 2011 ಜನಗಣತಿಯ ಅಂಕಿಅಂಶಗಳ ಪ್ರಕಾರ 1000 ಮದುವೆಗಳಲ್ಲಿ ವಿಚ್ಛೇದನದ ಪ್ರಮಾಣ ರಾಷ್ಟ್ರೀಯ ಸರಾಸರಿ 3.1ರಷ್ಟು ಇದ್ದರೆ ಮುಸಲ್ಮಾನರಲ್ಲಿ 5.63ರಷ್ಟಿದೆ. ಅವರಲ್ಲಿ 20-34 ವರ್ಷ ವಯೋಮಾನದ ಮಹಿಳೆಯರೇ ಹೆಚ್ಚು ಎನ್ನುವುದು ಇನ್ನೂ ಕಳವಳಕಾರಿಯಾದ ವಿಷಯವಾಗಿದೆ. ಬುರ್ಖಾದ ಪರದೆಯ ಹಿಂದೆ ತಮ್ಮ ಜೀವಮಾನವನ್ನು ಕಳೆಯುವ ಮಹಿಳೆಂiರಿಗೆ ಸಿಗುವ ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಏನು ಎಷ್ಟು? ಎನ್ನುವುದನ್ನು ಮುಸಲ್ಮಾನ ಸಮಾಜವೇ ಹೇಳಬೇಕು.

ಒಂದಿಷ್ಟು ಧನಾತ್ಮಕ ಸೂಚನೆಗಳು
ಇವೆಲ್ಲದರ ನಡುವೆ ಭಾರತೀಯ ಮುಸ್ಲಿಂ ಸಮಾಜ ಬದಲಾವಣೆಯಾಗುತ್ತಿರುವ ಹಾಗೂ ಸಂಪ್ರದಾಯವಾದಿಗಳ ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲುತ್ತಿರುವ ಕೆಲವೊಂದು ಧನಾತ್ಮಕ ಸೂಚನೆಗಳೂ ಕಾಣುತ್ತವೆ.

ಇತ್ತೀಚೆಗೆ ಕನ್ನಡದ ಪ್ರಸಿದ್ಧ ದೂರದರ್ಶನ ವಾಹಿನಿ ನಡೆಸುವ ಸರೆಗಮಪ ಎಂಬ ಹೆಸರಿನ ರಿಯಾಲಿಟಿ ಶೋನಲ್ಲಿ ತನ್ನ ಸುಮಧುರ ಕಂಠದಿಂದ ಭಕ್ತಿಗೀತೆಯನ್ನು ಹಾಡಿ ಜನಮೆಚ್ಚುಗೆ ಗಳಿಸಿದ ಸುಹಾನಾ ಸೈಯದ್ ಎಂಬ ಹುಡುಗಿ ಕಟ್ಟರ್ ವಾದಿಗಳ ಕೆಂಗಣ್ಣಿಗೆ ಗುರಿಯಾದಳು. ಸಾಮಾಜಿಕ ಜಾಲತಾಣಗಳಲ್ಲಿ ಅವಳನ್ನು ಬೇಕಾಬಿಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಯಿತು. ಅವೆಲ್ಲವನ್ನೂ ಧೈರ್ಯಗುಂದದೇ ಎದುರಿಸಿದ ಸುಹಾನಾ ಹಾಡುವುದನ್ನು ನಿಲ್ಲಿಸಲಿಲ್ಲ. ಅವಳ ಕುಟುಂಬವೂ ಸುಹಾನಾಳ ಬೆಂಬಲಕ್ಕೆ ನಿಂತಿತು. ಕರ್ನಾಟಕ ರಾಜ್ಯದ  ಮಂತ್ರಿ ಯು ಟಿ ಖಾದರ್ ಸೇರಿದಂತೆ ಮುಸಲ್ಮಾನ ಸಮಾಜದ ಅನೇಕ ಪ್ರಗತಿಪರರೂ ಅವಳ ಬೆಂಬಲಕ್ಕೆ ನಿಂತರು.

ಕರ್ನಾಟಕದ ಸುಹಾನಾಳಂತೆ ಆಸ್ಸಾಮಿನ ೧೬ವರ್ಷದ ಹುಡುಗಿ ನಾಹಿದ್ ಆಫ್ರಿನ್ ಕೂಡ ಸಾರ್ವಜನಿಕ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಡಿದ್ದಕ್ಕಾಗಿ ಮೌಲ್ವಿಗಳ ಕ್ರೋಧಕ್ಕೆ ಗುರಿಯಾದಳು. ಪ್ರಸಿದ್ಧ ಇಂಡಿಯನ್ ಐಡಲ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಎರಡನೇ ಸ್ಥಾನ ವಿಜೇತಳಾದ ನಾಹಿದ್ ಕಳೆದ ಮಾರ್ಚ ೨೫ರಂದು ಆಸ್ಸಾಮಿನ ಉಡಲಿ ಸೊನಾಯ್ ಬೀಬಿ ಕಾಲೇಜ್ ಆವರಣದಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಹಾಡುವುದನ್ನು ನಿಷೇಧಿಸ ೪೫ ಮೌಲ್ವಿಗಳು ಫತ್ವಾ ಹೊರಡಿಸಿದರು. ’ಮಸೀದಿ, ಮದರಸಾ, ಖಬರ್‌ಸ್ಥಾನ, ಈದಗಾ ಮೈದಾಗಳು ಇರುವ ಪ್ರದೇಶದ ಆವರಣದಲ್ಲಿ ಸಂಗೀತ ಕಾರ್ಯಕ್ರಮ ನಡೆಸುವುದು ಶರಿಯಾಕ್ಕೆ ವಿರುದ್ಧ, ಇದರಿಂದ ನಮ್ಮ ಮುಂದಿನ ತಲೆಮಾರುಗಳು ಅಲ್ಲಾನ ಕ್ರೋಧಕ್ಕೆ ಗುರಿಯಾಗುತ್ತಾರೆ ಎಂದು ಫತ್ವಾ ಹೊರಡಿಸಲಾಗಿತ್ತು. ಇದಕ್ಕೆ ಬಗ್ಗದ ನಾಹಿದ್ ಸಂಗೀತ ನನಗೆ ದೇವರು ನೀಡಿದ ಉಡುಗೊರೆ, ಆದ್ದರಿಂದ ಹಾಡದೇ ಇರುವುದ ದೇವರಿಗೆ ಮಾಡುವ ಅವಮಾನ’ ಎಂದು ಕಡಕ್ ಉತ್ತರ ನೀಡಿದಳು. ಇವರಿಬ್ಬರಿಗೂ ಪ್ರಗತಿಪರ ಮುಸ್ಲಿಂ ಸಮಾಜವೂ ಸೇರಿದಂತೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಖ್ಯಾತ ಚಲನಚಿತ್ರ ಗೀತಕಾರ ಚಿಂತಕ ಜಾವೇದ್ ಆಖ್ತರ್ ಸಾಂಪ್ರದಾಯವಾದಿಗಳನ್ನು ಬಲವಾಗಿ ಖಂಡಿಸಿದರು.

ಕೆಲವು ದಿನಗಳ ಹಿಂದೆ ಲಖನೌನ ಠಾಕುರ್‌ಗಂಜ್‌ನಲ್ಲಿ ಅಡಗಿ ಕೂತ ಉಗ್ರರ ತಂಡವನ್ನು ಭೇದಿಸಲು ನಡೆದ ಭಯೋತ್ಪಾದನ ನಿಗ್ರಹ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಉಗ್ರ ಸೈಫುಲ್ಲಾಹ್‌ನ ಶವವನ್ನು ಪಡೆಯಲು ಸ್ವಯಂ ಆತನ ತಂದೆಯಾದ ಸರ್ತಾಜ್ ನಿರಾಕರಿಸಿದರು. ಎರಡೂವರೆ ತಿಂಗಳ ಹಿಂದೆ ಮನೆ ಬಿಟ್ಟಿದ್ದ ಮಗ ಭಯೋತ್ಪಾದಕನಾಗಿದ್ದನ್ನು ತಿಳಿದ ಆತ ಓರ್ವ ದೇಶದ್ರೋಹಿ ನನ್ನ ಮಗನಾಗಲಾರ. ನಾವು ಮೊದಲು ಭಾರತೀಯರು. ನಾನು ಹುಟ್ಟಿದ್ದು ಇಲ್ಲಿ, ನಮ್ಮ ಪೂರ್ವಜರೂ ಇಲ್ಲಿಯೇ ಹುಟ್ಟಿದ್ದು ಎಂದರು.

ತ್ರಿವಳಿ ತಲಾಖ್‌ನಿಂದ ಮುಸ್ಲಿಂ ಮಹಿಳೆಯರಿಗೆ ಬಹಳ ಅನ್ಯಾಯವಾಗುತ್ತಿದ್ದು ಅದನ್ನು ಕಾನೂನಾತ್ಮಕವಾಗಿ ರದ್ದುಗೊಳಿಸಬೇಕೆಂಬ ಬಲವಾದ ಬೇಡಿಕೆ ಮುಸಲ್ಮಾನ ಸಮಾಜದಿಂದಲೇ ಕೇಳಿಬರುತ್ತಿದೆ. ಇತ್ತಿಚೆಗೆ ದೆಹಲಿಯಲ್ಲಿ ಸೇರಿ ಪ್ರದರ್ಶನ ನಡೆಸಿದ ದೇಶದಾದ್ಯಂತದಿಂದ ಬಂದ ಮುಸ್ಲಿಂ ಮಹಿಳೆಯರು ಪ್ರಧಾನಿ ಮೋದಿಯವರನ್ನು ತ್ರಿವಳಿ ತಲಾಖ್ ಕೊನೆಗೊಳಿಸಲು ಕಾನೂನು ತರುವಂತೆ ಒತ್ತಾಯಿಸಿದರು. ತ್ರಿವಳಿ ತಲಾಖ್ ವಿರುದ್ಧ ಮುಸ್ಲಿಂ ರಾಷ್ಟ್ರೀಯ ಮಂಚ್ ಎನ್ನುವ ಸಂಘಟನೆ ನಡೆಸಿದ ಸಹಿ ಅಭಿಯಾನವನ್ನು ಹತ್ತು ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಬೆಂಬಲಿಸಿದ್ದಾರೆ. ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಎನ್ನುವ ಸಂಘಟನೆ ನಡೆಸಿದ ಸಮೀಕ್ಷೆಯ ಪ್ರಕಾರ ಶೇ 92.1ರಷ್ಟು ಮಹಿಳೆಯರು ತ್ರಿವಳಿ ತಲಾಖ್ ನಿಷೇಧವನ್ನು ಬೆಂಬಲಿಸಿದ್ದಾರೆ, ಶೇ. 91.7 ಮಹಿಳೆಯರು ಬಹುಪತ್ನಿತ್ವವನ್ನು ವಿರೋಧಿಸಿದ್ದು ಮತ್ತು ಶೇ. 83.3ರಷ್ಟು ಮಹಿಳೆಯರು ಸಮಾನತೆ ಮತ್ತು ನ್ಯಾಯ ಸಿಗಲು ಮುಸ್ಲಿಂ ವಿವಾಹ ಕಾನೂನನ್ನು ಲಿಖಿತ ರೂಪಕ್ಕೆ ತರಬೇಕು ಎಂದು ಬಯಸುವುದು ಕಂಡುಬಂದಿದೆ. ಮುಸ್ಲಿಂ ಸಮಾಜದ ಅನೇಕ ಯುವಕರು ಮತ್ತು ಚಿಂತಕರು ತ್ರಿವಳಿ ತಲಾಖ್ ಮತ್ತು ಬಹುಪತ್ನಿತ್ವದ ವಿರುದ್ಧ ದನಿಯೆತ್ತುತ್ತಿರುವುದನ್ನು ಗಮನಿಸಬಹುದು.

ಇತ್ತೀಚೆಗೆ ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಮುಸ್ಲಿಂ ಜನಸಂಖ್ಯಾ ಬಾಹುಳ್ಯದ ಮತ್ತು ಮುಸ್ಲಿಂ ಮತದಾರರೇ ನಿರ್ಣಾಯಕವಾಗಿರುವ ೪೨ ವಿಧಾನಸಭಾ ಕ್ಷೇತ್ರಗಳ ಪೈಕಿ 32ರಲ್ಲಿ ಉಳಿದ ಪಕ್ಷಗಳು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಹೊರತಾಗಿಯೂ ಭಾರತೀಯ ಜನತಾ ಪಾರ್ಟಿ ಬಿಜೆಪಿಯ ಅಭ್ಯರ್ಥಿಗಳು ದೊಡ್ಡ ಮತಗಳ ಅಂತರದಿಂದ ಜಯಗಳಿಸಿದರು. ಅದರಲ್ಲೂ ಮುಸ್ಲಿಂ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಿದ್ದಾಗಿ ಅನೇಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಯನ್ನು ಸಾಮಾನ್ಯವಾಗಿ ಮುಸ್ಲಿಂ ವಿರೋಧಿಯೆಂದು ಪ್ರಚಾರ ಮಾಡಿದ್ದನ್ನು ನಾವು ಗಮನಿಸಿರಬಹುದು. ಈ ಫಲಿತಾಂಶ ಇದುವರೆಗೂ ತಥಾಕಥಿತ ಸೆಕ್ಯುಲರ್ ಪಕ್ಷಗಳ ಮತಬ್ಯಾಂಕ್ ಆಗಿದ್ದ ಮುಸ್ಲಿಂ ಸಮಾಜ ಜಾಗೃತವಾಗಿದ್ದು ದೇಶಹಿತದಲ್ಲಿ ಮೌಲ್ವಿಗಳ ಫತ್ವಾವನ್ನು ಮೀರಿ ಮತಹಾಕುತ್ತಿರುವುದನ್ನು ಸೂಚಿಸುತ್ತದೆ.

ಪ್ರತ್ಯೇಕತಾವಾದಿಗಳೂ ಮತ್ತು ಪಾಕ್ ಮೂಲದ ಜಿಹಾದಿ ಭಯೋತ್ಪಾದಕರ ಬೆದರಿಕೆಗಳ ಹೊರತಾಗಿಯೂ ಭಾರತೀಯ ಸೇನೆಯನ್ನು ಸೇರಲು ಕಾಶ್ಮೀರದ ಯುವಕರು ಸಾಲುಗಟ್ಟಿ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಮಾರ್ಚನಲ್ಲಿ ಬಾರಾಮುಲ್ಲಾದಲ್ಲಿ ನಡೆದ ಸೇನಾಭರ್ತಿ ಮೇಳದಲ್ಲಿ ಸಾವಿರಾರು ಕಾಶ್ಮೀರಿ ಯುವಕರು ಪಾಲ್ಗೊಂಡರು.


ಮುನ್ನೋಟ
ಈ ಮೇಲೆ ಉಲ್ಲೇಖಿಸಿದ ಘಟನೆಗಳು ಒಂದಿಷ್ಟು ಸಮಾಧಾನಕರವಾಗಿದ್ದರೂ ಮುಸ್ಲಿಂ ಸಮಾಜ ಎದುರಿಸಬೇಕಾದ ಸವಾಲುಗಳು ಇನ್ನೂ ಬಹಳವಾಗಿವೆ. ಮುಸ್ಲಿಂ ಸಮಾಜದ ಒಳಗಿಂದಲೇ ಕಟ್ಟರ್ವಾದಿಗಳು ಮತ್ತು ಮೂಲಭೂತವಾದಿಗಳ ವಿರುದ್ಧ ಹೋರಾಡುವ ಶಕ್ತಿ ಸಜ್ಜಾಗಬೇಕಿದೆ. ಒಂದುಕಡೆ ಅಮೆರಿಕ ಬೆಂಬಲದ ನ್ಯಾಟೋ, ಕುರ್ದಿಶ್ ಮತ್ತು ಇರಾಕಿ ಸೇನೆ ಹಾಗೂ ಇನ್ನೊಂದು ಕಡೆಗೆ ರಷ್ಯಾ ಇರಾನ್ ಬೆಂಬಲದ ಸಿರಿಯಾ ಬಲದ ದಾಳಿಗೆ ಐಎಸ್‌ಐಎಸ್ ಸೌಧ ನಿಧಾನವಾಗಿ ಕುಸಿದು ಬೀಳುತ್ತಿದೆ, ಆದರೆ ಅಲ್ಲಿ ನೆಲೆ ಕಳೆದುಕೊಂಡು ಈ ಪಿಡುಗು ದೊಡ್ಡ ಸಂಖ್ಯೆಯ ಮುಸಲ್ಮಾನ ಜನಸಂಖ್ಯೆ ಇರುವ ಏಷಿಯಾದತ್ತ ಮುಖ ಮಾಡುತ್ತಿವೆ. ಈ ಐಎಸ್‌ಐಎಸ್‌ನ ಪ್ರಭಾವಕ್ಕೆ ಮುಸಲ್ಮಾನ ಯುವಕರು ಬಲಿಯಾಗದಂತೆ ತಡೆಯುವ ಜವಾಬ್ದಾರಿಯೂ ಇದೆ.

ಅಮೇರಿಕ ಪ್ಯೂ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನ ಹೇಳುವಂತೆ ೨೦೫೦ರ ಹೊತ್ತಿಗೆ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯುಳ್ಳ ದೇಶವಾಗಲಿದೆ. ಭಾರತದ ಜನಸಂಖ್ಯೆಯ ಶೇ ೭೭ರಷ್ಟು ಹಿಂದೂಗಳೇ ಇದ್ದರೂ ಸುಮಾರು ೩೧ ಕೋಟಿಯಷ್ಟಾಗು ಮುಸ್ಲಿಂ ಜಸಂಖ್ಯೆ ೨೦೫೦ರ ಹೊತ್ತಿಗೆ ಭಾರತದಲ್ಲಿರಲಿದೆ. ಆದರೆ ಶೇ೧೮ ರಷ್ಟು ಜನಸಂಖ್ಯೆಯಿದ್ದರೂ ಅಲ್ಪಸಂಖ್ಯಾತರೆಂದೇ ಗುರುತಿಸಲ್ಪಡುವ ಮುಸ್ಲಿಂ ಸಮುದಾಯ ಸಾಂಪ್ರದಾಯಿಕ ಕಟ್ಟರ್‌ಪಂಥದಿಂದ ಬಿಡಿಸಿಕೊಂಡು ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳದಿದ್ದರೆ ದೊಡ್ಡ ಗಂಡಾಂತರವನ್ನು ತಂದೊಡ್ಡವುದರಲ್ಲಿ ಸಂಶಯವಿಲ್ಲ. ಏಕೆಂದರೆ ಇಷ್ಟು ದೊಡ್ಡ ಸಮುದಾಯ ಒಂದು ಸಣ್ಣ ಪ್ರತಿಶತ ಭಾಗ ಮತೀಯ ಮೂಲಭೂತವಾದ ಭಯೋತ್ಪಾದನೆಯ ಮಾರ್ಗ ಹಿಡಿದರೂ ಸಮಾಜದ ಶಾಂತಿ ಕೆಡಿಸಲು ಸಾಕು. ದಶಕಗಳಿಂದ ನಡೆದಿರುವ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಉಗ್ರವಾದ, ಕೆಲವು ವರ್ಷಗಳ ಹಿಂದೆ ಆಸ್ಸಾಂನಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಮತ್ತು ಪಶ್ಚಿಮ ಬಂಗಾಳದ ಇತ್ತೀಚಿನ ಬೆಳವಣಿಗೆಗಳು ಇದಕ್ಕೆ ಉದಾಹರಣೆಗಳು. 

ಆದ್ದರಿಂದ ಮುಸ್ಲಿಮರ ಹಕ್ಕಿನ ಪರವಾಗಿ ಹೋರಾಡುತ್ತೇವೆ ಎನ್ನುವ ಬುದ್ಧಿಜೀವಿಗಳು, ತಥಾಕಥಿತ ಸೆಕ್ಯುಲರ್‌ವಾದಿ ರಾಜಕೀಯ ಪಕ್ಷಗಳು ಗಮನಹರಿಸಬೇಕಾದುದು ಮುಸ್ಲಿಂ ಸಮಾಜ ಅಲ್ಪಸಂಖ್ಯಾತರೆಂದು ಪ್ರತ್ಯೇಕ ಸವಲತ್ತುಗಳನ್ನು ನೀಡುವ ಕಡೆಗಲ್ಲ. ಬದಲಾಗಿ ಮುಸಲ್ಮಾನ ಸಮಾಜದಲ್ಲೇ ಇರುವ, ಅಲ್ಲಿಂದಲೇ ಹುಟ್ಟಿ ಬರುವ ಪ್ರಗತಿಶೀಲ ದನಿಗಳನ್ನು ಪ್ರೋತ್ಸಾಹಿಸುವುದು, ಸುಧಾರಣೆಗೊಳಪಡಿಸಿ ಆಧುನಿಕ ಕಾಲಕ್ಕೆ ತಮ್ಮ ಸಮಾಜವನ್ನು ತಯಾರುಮಾಡಲು ಪ್ರೇರಣೆ ಪ್ರೋತ್ಸಾಹ ನೀಡುವುದು,  ಮತೀಯ ತೀವ್ರವಾದ  ಮತ್ತು ಜಿಹಾದಿ ಉಗ್ರವಾದಗಳ ಕಡೆಗೆ ಮುಸ್ಲಿಂ ಯುವಜನರು ಆಕರ್ಷಿತರಾಗುವುದನ್ನು ತಡೆಯಲು ಕ್ರಮ ಕೈಗೊಳ್ಳುವುದು ಇಂದಿನ ಆದ್ಯತೆಯಾಗಬೇಕು. ಏಕೆಂದರೆ ಕಾಲಕಾಲಕ್ಕೆ ಪರಿಷ್ಕರಣೆಗೆ ಒಳಗಾಗದ ಮತೀಯ ನಿಯಮಗಳ ಚೌಕಟ್ಟಿನ ಮಿತಿಯ ಹೊರಗೆ ವಿಚಾರಮಾಡದ ಹೊರತು ಭಾರತೀಯ ಇಸ್ಲಾಮ್ ಸಮಾಜದ ಉತ್ಕರ್ಷ ಅಸಾಧ್ಯ, ಹಾಗೆಯೇ ದೇಶದ ಪ್ರಗತಿಯೂ ಸಹ.

 
 

ನವಭಾರತದ ರಾಜಕೀಯಕ್ಕೆ ಮುನ್ನುಡಿ ಬರೆದಿದೆ ಪಂಚರಾಜ್ಯ ಚುನಾವಣೆ

(ಪುಂಗವ 01/04/2017)

ಕೇವಲ ಹೊಸ ಸರ್ಕಾರಗಳನ್ನು ಆರಿಸುವುದಷ್ಟೇ ಚುನಾವಣೆಗಳ ಕೆಲಸವಲ್ಲ. ರಾಜಕೀಯ ಪಕ್ಷಗಳ ಬಲಾಬಲಗಳನ್ನು ಅಳೆಯವುದರ ಜೊತೆಗೆ ಒಟ್ಟಾರೆಯಾಗಿ ಸಮಾಜದ ಮನಸ್ಥಿತಿ(ಪಬ್ಲಿಕ್ ಮೂಡ್), ಅಪೇಕ್ಷೆ ಮತ್ತು ಆದ್ಯತೆಗಳು ಯಾವ ದಿಸೆಯಲ್ಲಿವೆ ಎಂದು ತಿಳಿಯಲೂ ಚುನಾವಣಾ ಫಲಿತಾಂಶಗಳು ಮಾನದಂಡವಾಗುತ್ತವೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ವಿಷಯ ಸ್ಫಷ್ಟವಾಗುತ್ತದೆ. ಅದರಲ್ಲೂ ವಿಶೇಷವಾಗಿ ಜನಸಂಖ್ಯಾ ದೃಷ್ಟಿಯಿಂದ ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶ ರಾಜ್ಯದ ಫಲಿತಾಂಶ ಮತದಾರರನ್ನು ಸಮೀಪಿಸುವಲ್ಲಿ ರಾಜಕೀಯ ಪಕ್ಷಗಳ ಧೋರಣೆ ಮತ್ತು ವಿಶ್ಲೇಷಣೆಯ ವಿಧಾನವನ್ನೇ  ಬದಲಾಯಿಸಿದೆ ಎಂದರೆ ಅತಿಶಯವಲ್ಲ.

ರಾಜ್ಯವಾರು ಚುನಾವಣಾ ಫಲಿತಾಂಶವನ್ನು ಗಮನಿಸಿದರೆ ಒಂದು ರೀತಿಯ ಸಾಮಾನ್ಯ ನಮೂನೆ ಕಂಡುಬರುತ್ತದೆ.
ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ಈ ರಾಜ್ಯಗಳಲ್ಲಿ ಆಯ್ಕೆಯಾದ ಪಕ್ಷಗಳು ಆಯಾ ರಾಜ್ಯಗಳಲ್ಲಿ 3/4ಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ರಾಜ್ಯವ್ಯಾಪಿ ಬೆಂಬಲ ಪಡೆದದ್ದು ಕಂಡುಬರುತ್ತದೆ. (ಉಪ್ರ: ಬಿಜೆಪಿ+ 324/403, ಉತ್ತರಾಖಂಡ: ಬಿಜೆಪಿ 57/70, ಪಂಜಾಬ್: ಕಾಂಗ್ರೆಸ್ 77/117).

ಪರ್ವತರಾಜ್ಯ ಉತ್ತರಾಖಂಡದ ಫಲಿತಾಂಶ ಅಸ್ಥಿತ ಸರ್ಕಾರ ಮತ್ತು ಕಾಂಗ್ರೆಸ್ ದುರಾಡಳಿತದ ವಿರುದ್ಧ ಮತದಾರ ನೀಡಿದ ತೀರ್ಪು ಎಂದೇ ಹೇಳಲಾಗುತ್ತದೆ. ಪಂಜಾಬದಲ್ಲಿ ನಿರೀಕ್ಷಿತ ಫಲಿತಾಂಶ ವ್ಯಕ್ತವಾಗಿದ್ದು ಅಧಿಕಾರದಲ್ಲಿರುವ ಪಕ್ಷದ ವಿರುದ್ಧ ನೀಡಿದ ಫಲಿತಾಂಶವಾಗಿದೆ. ಜೊತೆಗೆ ಅಕಾಲಿದಳದ ವಂಶವಾದ, ರಾಜ್ಯವನ್ನು ಕ್ಯಾನ್ಸರಿನಂತೆ ಕಾಡುತ್ತಿರುವ ಡ್ರಗ್ ಮಾಫಿಯ ವಿರುದ್ಧ ನೀಡಿದ ಮತವಾಗಿದೆ. ಪಂಜಾಬ್ ಗೆಲುವನ್ನು ಕಾಂಗ್ರೆಸ್ ಪಕ್ಷದ ಗೆಲುವು ಅನ್ನುವುದಕ್ಕಿಂತ ಕ್ಯಾ. ಅಮರಿಂದರ್ ಸಿಂಗ್ ಗೆಲುವು ಎನ್ನುವುದು ಹೆಚ್ಚು ಸೂಕ್ತ, ಅಕಾಲಿದಳದಿಂದಲೇ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ರಾಜವಂಶಸ್ಥ ಅಮರಿಂದರ್ ಸಿಂಗ್ ಭ್ರಷ್ಟಾಚಾರದ ಕಳಂಕ ಇಲ್ಲದ ವ್ಯಕ್ತಿ ಎನ್ನುವ ಇಮೇಜ್ ಹೊಂದಿದ್ದಾರೆ.

ಕರಾವಳಿಯ ಪುಟ್ಟ ರಾಜ್ಯ ಗೋವಾದಲ್ಲಿ ಮುಖ್ಯಮಂತ್ರಿ ಪರ್ಸೇಕರ್ ಸೇರಿದಂತೆ ಬಿಜೆಪಿ ಸರ್ಕಾರದ ೮ರಲ್ಲಿ ೬ ಮಂತ್ರಿಗಳು ಚುನಾವಣೆಯಲ್ಲಿ ಸೋತಿದ್ದಾರೆ. ಯಾವುದೇ ಪಕ್ಷಕ್ಕೆ ಬಹುಮತ ನೀಡದ ಫಲಿತಾಂಶ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿದೆ. ಜೊತೆಗೆ ಶೇಕಡಾವಾರು ಮತಗಳಿಕೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಬಿಜೆಪಿ ಜನಪ್ರಿಯ ಪಕ್ಷವಾಗಿ ಹೊರಹೊಮ್ಮಿದೆ.

ಇನ್ನೊಂದು ಪ್ರಮುಖ ಅಂಶವೆಂದರೆ ಪಂಜಾಬಿನಲ್ಲಿ ಸರ್ಕಾರ ಸ್ಥಾಪಿಸುವ ಕನಸು ಕಾಣುತ್ತಿದ್ದ ಆಮ್ ಆದ್ಮೀ ಪಕ್ಷ ಗೆದ್ದ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಶೆಕಡಾವಾರು ಮತಗಳಿಕೆಯಲ್ಲಿ ದೂರದ ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ನು ಗೋವಾ ರಾಜ್ಯದಲ್ಲಿ ಒಂದೂ ಅಭ್ಯರ್ಥಿಯನ್ನು ಗೆಲ್ಲಲಾಗದೇ ಅತೀ ಕಡಿಮೆ ಮತವನ್ನು ಆಪ್ ಪಡೆದಿದೆ.  ಇದರೊಂದಿಗೆ ಅರಾಜಕ ರಾಜಕಾರಣವನ್ನು ಈ ದೇಶದ ಮತದಾರ ಸಹಿಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಮಣಿಪುರ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ್ನು ತಿರಸ್ಕರಿಸಿರುವ ಶೇಕಡಾವಾರು ಮತಗಳಿಕೆಯಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. (ಬಿಜೆಪಿ : 34.2%, ಕಾಂಗ್ರೆಸ್ 31.2%). ಒಟ್ಟೂ 60ರಲ್ಲಿ 21 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ಮೊದಲ ಬಾರಿಗೆ ನಾರ್ಥ ಈಸ್ಟರ್ನ ಡೆಮೊಕ್ರಾಟಿಕ್ ಅಲಯನ್ಸ್ (ಓಇಆಂ) ಮಿತ್ರಪಕ್ಷಗಳೊಂದಿಗೆ ಮಣಿಪುರದಲ್ಲಿ ಸರ್ಕಾರ ಸ್ಥಾಪಿಸಿದೆ. ಇದರೊಂದಿಗೆ ಮೇಘಾಲಯ ಮತ್ತು ತ್ರಿಪುರವನ್ನು ಹೊರತುಪಡಿಸಿ ಉಳಿದ ಕಡೆ ಬಿಜೆಪಿ ಆಡಳಿತ ಸ್ಥಾಪನೆಯಾಗಿದ್ದು ದಶಕಗಳಿಂದ ನಿರ್ಲಕ್ಷಕ್ಕೊಳಗಾಗಿರುವ ಸಪ್ತ ಸೋದರಿಯರ ನಾಡು ಎಂದೂ ಕರೆಯಲ್ಪಡುವ ಈಶಾನ್ಯ ಭಾರತ ಪ್ರದೇಶದಲ್ಲಿ ಅಭಿವೃದ್ಧಿಯ ಆಶಾಭಾವನೆ ಜೀವ ತಳೆದಿದೆ.

ಜನಬಾಹುಳ್ಯದಿಂದ ದೇಶದ ಅತಿದೊಡ್ಡ ರಾಜ್ಯವಾದ  ಉತ್ತರಪ್ರದೇಶ ರಾಷ್ಟ್ರರಾಜಕೀಯದಲ್ಲಿ ಪ್ರಮುಖಸ್ಥಾನದಲ್ಲಿದೆ. ದೆಹಲಿಯ ಅಧಿಕಾರದ ಗದ್ದುಗೆಯ ಮಾರ್ಗ ಉತ್ತರಪ್ರದೇಶದ ಮೂಲಕವೇ ಹಾದುಹೊಗುವದು ಎನ್ನುವದು ರಾಜಕೀಯ ಪಡಸಾಲೆಯಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಮಾತು. ಕಾರಣ ರಾಷ್ಟ್ರ ರಾಜಕಾರಣದಲ್ಲಿ ಸ್ಥಿತ್ಯಂತರಗಳನ್ನೇ ಸೃಷ್ಟಿಸಬಲ್ಲ ವಿಷಯಗಳಾದ ವಿಸ್ತೃತ ಮತ್ತು  ಫಲವತ್ತಾದ ಗಂಗಾ ನದಿಮುಖಜ ಭೂಮಿಯಲ್ಲಿನ ಕೃಷಿಕರ ಕೋಟಲೆಗಳಿಂದ ಮೊದಲ್ಗೊಂಡು ನೆರೆಯ ಪಾಕಿಸ್ತಾನ, ನೇಪಾಳಗಳೊಡನೆ ಭಾರತದ ಸಂಬಂಧ, ಗೋಮಾಂಸ ವ್ಯಾಪಾರದ ಸಾವಿರಾರು ಕೋಟಿ ವ್ಯವಹಾರ, ಹಿಂದೂಗಳ ಶ್ರದ್ಧಾಕೇಂದ್ರ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯಮಂದಿರದ ನಿರ್ಮಾಣ, ಅಧಿಕಾರಾರೂಢ ಸಪಾದ ಕೊನೆಗಾಣದ ಪರಿವಾರವಾದ ಮತ್ತು  ಬಸಪಾದ ಜಾತಿ ರಾಜಕಾರಣ, ಹದಗೆಟ್ಟಿದ್ದ ರಾಜ್ಯದ ಕಾನೂನು ಸುವ್ಯವಸ್ಥೆ, ಮುಗಿಲುಮುಟ್ಟಿದ್ದ ಮುಸ್ಲಿಂ ಓಲೈಕೆ ಹೀಗೆ ಹತ್ತು ಹಲವಾರು ವಿಷಯಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡು ಚುನಾವಣೆಗೆ ತಯಾರಾಗಿದ್ದ ರಾಜ್ಯವದು. ಈ ಪ್ರಮುಖ ರಾಜ್ಯದಲ್ಲಿ ಗೆಲುವು ಸಾಧಿಸಲು ರಾಜಕೀಯ ಪಕ್ಷಗಳು ಶತಾಯಗತಾಯ ಎಲ್ಲ ತರಹದ ತಂತ್ರಗಳನ್ನೂ ನಡೆಸಿದವು.

ಆದರೆ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸಿದರೆ ಒಂದಿಷ್ಟು ಅಂಶಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ರಾಜ್ಯದ ಮತದಾರನ ಒಲವು ಜಾತಿಮತಗಳ ವಿಭಜನೆ ಅಥವಾ ಪೊಳ್ಳು ಆಶ್ವಾಸನೆಗಿಂತ ಇದುವರೆಗೆ ಕೇಂದ್ರ ಸರ್ಕಾರದ ಜನಪರ ಆಡಳಿತದಿಂದ ಆಗುತ್ತಿರುವ ಪರಿವರ್ತನೆ, ಓರ್ವ ಸಮರ್ಥ ನಾಯಕನಾಗಿ ಹೊರಹೊಮ್ಮಿರುವ ಪ್ರಧಾನಿ ಮೋದಿಯವರ ವ್ಯಕ್ತಿತ್ವ, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಗತಶೀಲ ಸ್ಥಿರ ಸರ್ಕಾರವನ್ನು ಸ್ಥಾಪಿಸಬಲ್ಲ ಪಕ್ಷದ ಕಡೆಗಿದ್ದದ್ದು ಸ್ಪಷ್ಟವಾಗಿ ಕಾಣುತ್ತದೆ. ಉದಾಹರಣೆಗೆ ಸ್ವಾತಂತ್ರದ 7 ದಶಕಗಳ ನಂತರವೂ ರಾಜ್ಯದ 1529 ವಿದ್ಯುತ್ ಸಂಪರ್ಕರಹಿತ ಹಳ್ಳಿಗಳ ಪೈಕಿ 1464 ಹಳ್ಳಿಗಳಿಗೆ ಬೆಳಕುಕಾಣಿಸಿದ ಕೇಂದ್ರ ಸರ್ಕಾರದ ಕೆಲಸ ಇಂದು ಗುರುತಿಸಲ್ಪಡುತ್ತಿದೆ. ಉಜ್ವಲಾ ಯೋಜನೆಯ ಅನ್ವಯ ಬಡ ಮಧ್ಯಮ ವರ್ಗದ ಕುಟುಂಬಗಳೂ ಗ್ಯಾಸ್ ಸಂಪರ್ಕ ಪಡೆದು ಮಹಿಳೆಯರು ಒಲೆಯ ಹೊಗೆ ಸೇವನೆಯಿಂದ ಮುಕ್ತವಾದರು. ಇಂತಹ ಜನಪರ ಯೋಜನೆಗಳು ಸಾಮಾನ್ಯರಲ್ಲಿ ಜನಹಿತದ ಪಕ್ಷ ಯಾವುದು ಎಂದು ಚಿಂತಿಸುವಂತೆ ಮಾಡಿದವು. ನೋಟು ಅಮಾನ್ಯೀಕರಣ, ಸರ್ಜಿಕಲ್ ಸ್ಟ್ರೈಕ್ ಮೊದಲಾದ ದಿಟ್ಟ ನಡೆಗಳನ್ನು ತೆಗೆದುಕೊಂಡಿದ್ದು ಕೇಂದ್ರದ ಆಡಳಿತ ಪಕ್ಷ ಸಮರ್ಥ ಸರ್ಕಾರ ನೀಡಬಲ್ಲದು ಎಂದು ಮತದಾರರಲ್ಲಿ ವಿಶ್ವಾಸ ಮೂಡಿಸಿತ್ತು.

ಹಾಗೆಯೇ ಚುನಾವಣಾ ರಣತಂತ್ರ ರೂಪಿಸಿ ಅದನ್ನು ಕಾರ್ಯಗತಗೊಳಿಸಿ ಯಶಸ್ವಿಗೊಳಿಸುವಲ್ಲಿ ಬಿಜೆಪಿ ಪಕ್ಷಾಧ್ಯಕ್ಷ ಅಮಿತ್ ಶಾ ಮತ್ತು ಅವರ ತಂಡದ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಸಿದ ಅವಿರತ ಕಾರ್ಯ ಶ್ಲಾಘನೀಯವಾಗಿದೆ. ಪ್ರಧಾನಿ ಮೋದಿಯವರೂ ಸೇರಿದಂತೆ ತಾರಾ ಪ್ರಚಾರಕ ರ‍್ಯಾಲಿಗಳಿಂದ ಹಿಡಿದು ಬೂತ್ ನಿರ್ವಹಣೆಯವರೆ ವ್ಯವಸ್ಥಿತ ಕಾರ್ಯತಂತ್ರದಿಂದ ಬಿಜೆಪಿ ಇಂತಹ ಬೃಹತ್ ಜನಾದೇಶ ಪಡೆಯಲು ಸಾಧ್ಯವಾಯಿತು. ಹಾಗೆಯೇ ಬಿಜೆಪಿ ಮತ್ತೊಮ್ಮೆ ಅಖಿಲ ಭಾರತೀಯ ರಾಜಕೀಯದಲ್ಲಿ ಪ್ರಬಲವಾಗಿ ಸ್ಥಾಪಿತವಾಯಿತು.

ಒಟ್ಟಾರೆಯಾಗಿ ಪಂಚರಾಜ್ಯಗಳ ಚುನಾವಣೆಯಿಂದ ಸಾಂಪ್ರದಾಯಿಕ, ಜಾತಿ ಮತ್ತು ಮತಬ್ಯಾಂಕ್ ಆಧಾರಿತ ರಾಜಕಾರಣದಿಂದ ಅಭಿವೃದ್ಧಿಶೀಲ ಹಾಗೂ ದೇಶಹಿತದ ಕಾರ್ಯಕ್ರಮಗಳನ್ನು ಮುಂದಿಡುವ ಪಕ್ಷಗಳನ್ನು ಬೆಂಬಲಿಸುವುದು ಸ್ಪಷ್ಟವಾಗಿದೆ. ಹಾಗೆಯೇ ದೇಶದ ಮತದಾರರೂ ಪ್ರಬುದ್ಧರಾಗುತ್ತಿದ್ದಾರೆ.


ಬಿಜೆಪಿಯತ್ತ ಮುಸ್ಲಿಮರು?


2011ರ ಜನಗಣತಿಯ ಪ್ರಕಾರ ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ 19.3% ಮುಸ್ಲಿಮರಿದ್ದಾರೆ. ಸಾಮಾನ್ಯವಾಗಿ ಇದುವರೆಗಿನ ಚುನಾವಣೆಗಳ ಮತದಾನ ಮಾದರಿಗಳನ್ನು ಅವಲೋಕಿಸಿದರೆ ಮುಸಲ್ಮಾನ ಸಮುದಾಯ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ತಥಾಕಥಿತ ಸೆಕ್ಯುಲರ್ ಪಕ್ಷಗಳ ಮತಬ್ಯಾಂಕ್ ಆಗಿದೆ. ಮತ್ತು ಮುಸ್ಲಿಂ ಸಮಾಜ ಮುಲ್ಲಾ ಮೌಲ್ವಿಗಳ ಫತ್ವಾದ ಆದೇಶದಂತೆ ದೊಡ್ಡ ಪ್ರಮಾಣದಲ್ಲಿ ಒಂದು ಪಕ್ಷಕ್ಕೇ ಗುಂಪು ಗುಂಪಾಗಿ ಮತ ನೀಡಿದ್ದು ಕಂಡು ಬರುತ್ತದೆ. ಹಾಗೆಯೇ ಉಳಿದ ಸಮುದಾಯಗಳಿಗೆ ಹೋಲಿಸಿದರೆ ಮುಸ್ಲಿಮರ ಮತದಾನದ ಪ್ರಮಾಣವೂ ಹೆಚ್ಚು. ಭಾರತೀಯ ಜನತಾ ಪಕ್ಷವನ್ನು ಹಿಂದುತ್ವವಾದಿ ಮುಸ್ಲಿಂ ವಿರೋಧಿ ಎಂದೇ ಪ್ರಚಾರ ಮಾಡಲಾಗುತ್ತದೆ. ಹೀಗಿರುವ ಹೊರತಾಗಿಯೂ ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯದ ಮತ್ತು ಆ ಸಮುದಾಯವೇ ನಿರ್ಣಾಯಕವಾಗಿರುವ ಮುಝಾಪರ್‌ನಗರ, ಶಾಮ್ಲಿ, ಸಹರಾನ್‌ಪುರ, ಬರೇಲಿ, ಬಿಜ್‌ನೊರ್, ಮೀರತ್‌ನ ಸರ್ದಾನಾ, ಗೋರಖ್‌ಪುರದ ಖಲೀದಾಬಾದ್, ಮೊರಾದಾಬಾದ್ ಮೊದಲಾದ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಇದನ್ನು ಅನೇಕ ರೀತಿಯಲ್ಲಿ ರೀತಿಯಲ್ಲಿ ಅರ್ಥೈಸಬಹುದು. ಒಂದು ಇದುವರೆಗಿನ ನಡೆದುಬರುತ್ತಿರುವ ಮುಸ್ಲಿಂ ತುಷ್ಟೀಕರಣ ಮತ್ತು ಮತಬ್ಯಾಂಕ್ ವಿರುದ್ಧ ಧೃವೀಕರಣಗೊಂಡು ಬಿಜೆಪಿಯ ಪರವಾಗಿ ಮತ ಚಲಾವಣೆಯಾಗಿರಬಹುದು. ತಥಾಕಥಿತ ಸೆಕ್ಯುಲರ್ ಪಕ್ಷಗಳು ಇಂತಹ ಕ್ಷೇತ್ರಗಳಲ್ಲಿ ಮುಸಲ್ಮಾನ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದುದರ ಪರಿಣಾಮ ಮುಸ್ಲಿಂ ಮತವಿಭಜನೆ ಮತ್ತು ಹಿಂದೂ ಮತಗಳ ಏಕತ್ರೀಕರಣದಿಂದ ಬಿಜೆಪಿಗೆ ಲಾಭವಾಗಿರಬಹುದು. ಇವೆಲ್ಲವೂ ಅಲ್ಲದೇ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮುಸ್ಲಿಂ ಸಮುದಾಯದ ಮತದಾರರು, ಅದರಲ್ಲೂ ಮುಸ್ಲಿಂ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಿದ್ದು ಕಂಡು ಬಂದಿದೆ. ಉದಾಹರಣೆಗೆ ಶೇ. 65ರಷ್ಟು ಮುಸಲ್ಮಾನ ಜನಸಂಖ್ಯೆಯುಳ್ಳ ಸಪಾ ಅಥವಾ ಬಸಪಾಗಳ ಭದ್ರಕೋಟೆಯಾದ ದೇವಬಂದ್ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ 29 ಸಾವಿರಕ್ಕು ಹೆಚ್ಚು ಅಂತರದಿಂದ ಜಯಗಳಿಸಿಸದ್ದಾರೆ. ಬಿಜೆಪಿಯ ಅಭ್ಯರ್ಥಿ 1.02ಲಕ್ಷದಷ್ಟು ಮತಗಳಿಸಿದ್ದರೆ, ಸಮೀಪದ ಪ್ರತಿಸ್ಪರ್ಧಿಗಳಾದ ಸಪಾ ಮತ್ತು ಬಸಪಾ ಆಭ್ಯರ್ಥಿಗಳು ಗಳಿಸಿದ ಒಟ್ಟೂ ಮತ 1.28ಲಕ್ಷದಷ್ಟು, ಉಳಿದ ಎಲ್ಲ ಅಭ್ಯರ್ಥಿಗಳು ಗಳಿಸಿದ ಒಟ್ಟೂ ಮತ ಸುಮಾರು 3ಸಾವಿರ. ಮುಸ್ಲಿಂ ಮತದಾರರೂ ಬಿಜೆಪಿಯನ್ನು ಬೆಂಬಲಿಸದ ಹೊರತು ಈ ಕ್ಷೇತ್ರದಲ್ಲಿ ಗೆಲ್ಲುವುದು ಅಸಾಧ್ಯ. ಮುಸಲ್ಮಾನ ಸಮಾಜ ಜಾಗೃತಗೊಂಡಿದ್ದು ಮತೀಯ ಮತಬ್ಯಾಂಕ ರಾಜನೀತಿಗೆ ಬಲಿಯಾಗದೇ ಪ್ರಗತಿಯ ದಾರಿಯಲ್ಲಿ ನಡೆಯುವ ರಾಜಕೀಯವನ್ನು ಬೆಂಬಲಿಸುತ್ತಿರುವುದನ್ನು ಇದು ತೋರಿಸುತ್ತದೆ.

ಮೀಸಲಾತಿ, ಆರೆಸ್ಸೆಸ್ ಮತ್ತು ಮಾಧ್ಯಮದ ಸುಳ್ಳು

(ವಿಕ್ರಮ 05/02/2017)

ನಮ್ಮ ಬ್ರೇಕಿಂಗ್ ನ್ಯೂಸ್ ಮಾಧ್ಯಮಗಳಿಗೆ ಅತ್ಯಂತ ಪ್ರಿಯ ವಿಷಯ ಎಂದರೆ ವಿವಾದಗಳು. ಮನಬಂದಂತೆ ತಿರುಚಿ ವರದಿ ಸಿದ್ಧಮಾಡಿ ವಿವಾದ ಎಬ್ಬಿಸುವ ಕಲೆಂiನ್ನು ಕರಗತ ಮಾಡಿಕೊಂಡ ಒಂದು ವರ್ಗ ಮಾಧ್ಯಮದಲ್ಲಿ ಸಕ್ರಿಯವಾಗಿದೆ. ಸುಳ್ಳನ್ನು ಒಕ್ಕೊರಲಿನಿಂದ ಮತ್ತೆ ಮತ್ತೆ ಹೇಳಿ ಅದನ್ನು ಸತ್ಯವೆಂದು ನಂಬಿಸುವ ಇವರ ಪ್ರಯತ್ನ ಹೊಸತೇನಲ್ಲ. ಇದಕ್ಕೆ ಇನ್ನೊಂದು ನಿದರ್ಶನ ಸಿಕ್ಕಿದ್ದು ರಾಜಸ್ಥಾನದ ಜೈಪುರದಲ್ಲಿ ನಡದ ವಿಶ್ವಪ್ರಸಿದ್ಧ ಸಾಹಿತ್ಯೋತ್ಸವದಲ್ಲಿ. ಜೈಪುರ ಸಾಹಿತ್ಯೋತ್ಸವದಲ್ಲಿ ಸ್ಯಾಫ್ರಾನ್ ಮತ್ತು ಸಂಘ ಎನ್ನುವ ಚರ್ಚೆಯಲ್ಲಿ ಮೀಸಲಾತಿಯ ಕುರಿತ ಪ್ರಶ್ನೆಗೆ ಉತ್ತರಿಸುತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ ಡಾ ಮನಮೋಹನ ವೈದ್ಯರವರು ನೀಡಿದ ಉತ್ತರವನ್ನು ತಪ್ಪಾಗಿ ವರದಿ ಮಾಡಲಾಯತಲ್ಲದೇ ಮೀಸಲಾತಿಯನ್ನು ಸಮಾಪ್ತಗೊಳಿಸಬೇಕು ಎನ್ನುವುದು ಸಂಘದ ನಿಲುವಾಗಿದೆ ಎಂದೇ ಅಪಪ್ರಚಾರ ಮಾಡಲಾಯಿತು.

ಅಷ್ಟಕ್ಕೂ ನಡದಿದ್ದೇನು? ಪರಿಶಿಷ್ಟ ಜಾತಿ ಪಂಗಡಗಳಿಗೆ ಮೀಸಲಾತಿ ನೀಡಿದಂತೆ ಅಲ್ಪಸಂಖ್ಯಾತರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳಿಗೆ ಮೀಸಲಾತಿ ಪರಿಹಾರವೇ ಎನ್ನುವ ಪ್ರಶ್ನೆಗೆ ಕೇಳಲಾದ ಪ್ರಶ್ನೆಗೆ ಡಾ ಮನಮೋಹನ ವೈದ್ಯ ಹೀಗೆ ಉತ್ತರಿಸಿದರು. -  ’ಭಾರತದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿಯನ್ನು ಒಂದು ವಿಶೇಷ ಕಾರಣದಿಂದ ನೀಡಲಾಗಿದೆ. ನಮ್ಮ ಸಮಾಜದ ಒಂದು ವರ್ಗವನ್ನು ಶಿಕ್ಷಣ ಅವಕಾಶಗಳಿಂದ ವಂಚಿತರನ್ನಾಗಿಡಲಾಯಿತು. ಇದನ್ನು ಸರಿ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲೆ ಇದೆ. ಕೇವಲ ಒಂದು ಜಾತಿಯಲ್ಲಿ ಹುಟ್ಟಿದ ಕಾರಣದಿಂದ ಅವರನ್ನು ದೂರ ಇರಸಿದ್ದು ತಪ್ಪು. ಆದ್ದರಿಂದ ಅವರನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಸಂವಿಧಾನದಲ್ಲಿ ಆರಂಭದಿಂದಲೇ ಮೀಸಲಾತಿಯನ್ನು ಜಾರಿಗೆ ತರಲಾಯಿತು. ಯಾವುದೇ ರಾಷ್ಟ್ರದಲ್ಲಿ ಶಾಶ್ವತವಾಗಿ ಮೀಸಲಾತಿ ಇರುವುದು ಒಳ್ಳೆಯದಲ್ಲ, ಆದಷ್ಟು ಬೇಗ ಇದರ ಅಗತ್ಯ ಕೊನೆಗೊಂಡು ಎಲ್ಲರಿಗೂ ಸಮಾನ ಅವಕಾಶ ಸಿಗುವಂತಾಗಬೇಕು ಎಂದು ಡಾ ಅಂಬೇಡ್ಕರ್‌ರವರೇ ಹೇಳಿದ್ದಾರೆ. ಆದ್ದರಿಂದ ಮೀಸಲಾತಿಯ ಬದಲು ಹೆಚ್ಚಿನ ಶಿಕ್ಷಣ ಅವಕಾಶಗಳನ್ನು ನೀಡುವ ಪ್ರಯತ್ನವೂ ನಡೆಯಬೇಕು. ಇದನ್ನೂ ಮೀರಿ [ಅಲ್ಪಸಂಖ್ಯಾತರಿಗೆ] ಮೀಸಲಾತಿಯನ್ನು ನೀಡುವುದರಿಂದ ಪ್ರತ್ಯೇಕತೆಯ ಭಾವ ಬೆಳಯಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಿಂದೆ ಇರುವುದಕ್ಕೆ ವರ್ಷಗಳಿಂದ ನಡೆದುಬಂದ ಅನ್ಯಾಯ ಕಾರಣವಾಗಿದೆ. ಆದರೆ ಉಳಿದವರ ವಿಷಯದಲ್ಲಿ ಹೀಗಿಲ್ಲ. ಆದ್ದರಿಂದ [ಅಲ್ಪಸಂಖ್ಯಾತರ] ಸ್ಥಿತಿಗಳಿಗೆ ಬೇರೆ ರೀತಿಯಲ್ಲಿ ಪರಿಹಾರ ಹುಡುಕಬೇಕು ಎಂದು ನನಗನ್ನಿಸುತ್ತದೆ.’
ಒಂದೂವರೆ ಗಂಟೆಗೂ ಮೀರಿದ ಸಂವಾದದ ಒಂದು ಸಾಲನ್ನು ತಮಗೆ ಬೇಕಾದಂತೆ ಅರ್ಥ ಮಾಡಿಕೊಂಡ ಮಾಧ್ಯಮಗಳು ತಮಗೆ ಅನುಕೂಲವಾದಂತೆ ವರದಿ ಮಾಡಿದವು. ಮೀಸಲಾತಿಯನ್ನು ಕೊನೆಗೊಳಿಸಬೇಕೆಂದು ಆರೆಸ್ಸೆಸ್ ಹೇಳುತ್ತದೆ, ಮೀಸಲಾತಿ ಪ್ರತ್ಯೇಕತೆಯನ್ನು ಬೆಳೆಸುವುದೆಂದು ಆರೆಸ್ಸೆಸ್ ಹೇಳುತ್ತದೆ, ಆರೆಸ್ಸೆಸ್ ಮೀಸಲಾತಿ ವಿರೋಧಿ ಇತ್ಯಾದಿಯಾಗಿ ಮಾಧ್ಯಮಗಳಲ್ಲಿ ಹುಯಿಲೆಬ್ಬಿಸಲಾಯಿತು. ಟಿವಿ ಚಾನೆಲ್‌ಗಳಲ್ಲಿ ಚರ್ಚೆಗಳು ನಡೆದವು. ಉತ್ತರ ಪ್ರದೇಶ ಚುನಾವಣೆಗೆ ಇದನ್ನು ಜೋಡಿಸಿ ಒಂದರ ಮೇಲೊಂದು ವಿಶ್ಲೇಷಣೆಗಳು ನಡೆದವು. ತತ್‌ಕ್ಷಣಕ್ಕೆ ಚುರುಕಾದ ಬಿಜೆಪಿಯ ವಿರೋಧಿ ಪಕ್ಷಗಳ ನೇತಾರರು ರಾಜಕೀಯ ಲಾಭ ಪಡೆದುಕೊಳ್ಳಲು ಧಾವಿಸಿದರು. ಅಂತರ್ಜಾಲದ ಸುದ್ದಿ ಪೋರ್ಟಲ್‌ಗಳಲ್ಲಿ ವಿಶ್ಲೇಷಣೆಯ ಲೇಖನಗಳು ಬಂದವು. ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್‌ಗಳು ಹರಿದಾಡಿದವು. ಒಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮೀಸಲಾತಿಯ ವಿರೋಧಿ ಹಾಗೂ ಸಂಘದೊಂದಿಗೆ ಸಂಬಂಧವುಳ್ಳ ಬಿಜೆಪಿ ಪಕ್ಷವೂ ಮೀಸಲಾತಿಯ ಪರವಾಗಿಲ್ಲ ಎನ್ನುವ ಸಮೀಕರಣವನ್ನು ಸಾಧಿಸುವ ಎಲ್ಲ ಪ್ರಯತ್ನವನ್ನು ನಡೆಸಲಾಯಿತು.

ಮೀಸಲಾತಿಯ ವಿಷಯದಲ್ಲಿ ವಿವಾದ ಎಬ್ಬಿಸುವುದು ಇಂದಿನದಲ್ಲ. ಕೆಲ ಕಾಲದ ಹಿಂದೆ ಬಿಹಾರ ಚುನಾವಣೆಗೆ ಮೊದಲು ಸಂಘದ ಸರಸಂಘಚಾಲಕ ಶ್ರೀ ಮೋಹನ ಭಾಗವತ್‌ರವರು ಈ ವಿಷಯದಲ್ಲಿ ಹೇಳಿದ್ದನ್ನು ತಿರುಚಿ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದನ್ನು ಇಲ್ಲ ನೆನಪಿಸಿಕೊಳ್ಳಬಹುದು. ನಮ್ಮ ದೇಶದಲ್ಲಿ ಮೀಸಲಾತಿಯ ವಿಷಯವನ್ನಿಟ್ಟುಕೊಂಡೇ ರಾಜಕೀಯ ಬೆಳೆ ತೆಗೆಯುವ ಪಕ್ಷಗಳೂ ಇವೆ. ಆದರೆ ರಚನಾತ್ಮಕ ಹಾಗೂ ದೇಶಹಿತದ ಕಾರ್ಯದಲ್ಲಿ ನಿರತವಾಗಬೇಕಿದ್ದ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಭಾವಿಸಲಾಗುವ ಮಾಧ್ಯಮ ಅಸತ್ಯದ ಪ್ರಚಾರ ಮತ್ತು ರಾಜಕೀಯ ಮೇಲಾಟದ ದಾಳವಾಗಿ ಬಳಕೆಯಾಗುತ್ತಿರುವುದು ಅತ್ಯಂತ ಖೇದಕರವಾಗಿದೆ.

ಮತ್ತೆ ಮತ್ತೆ ಮರುಕಳಿಸುತ್ತಿರುವ ಇಂತಹ ಘಟನೆಗಳಿಂದ ಕೆಲವು ಕಳವಳಕಾರಿಯಾದ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಒಂದೂವರೆ ಗಂಟೆಗೂ ಹೆಚ್ಚಿನ ಕಾಲ ಗಂಭೀರ ವಿಷಯಗಳ ಮೇಲೆ ನಡೆದ ಸಂವಾದದಲ್ಲಿ ಉಳಿದೆಲ್ಲವನ್ನು ಒಂದೆರಡು ಸಾಲನ್ನು ತನಗೆ ಬೇಕಾದಂತೆ ಅರ್ಥೈಸಿಕೊಳ್ಳುವ ವರದಿಗಾರನ ಗ್ರಹಿಕೆಯ ಮಟ್ಟ ಹೇಗಿರಬಹುದು? ದೇಶ, ಸಮಾಜ ಹಾಗೂ ಜನಹಿತವನ್ನು ಕುರಿತಂತೆ ಆತನಿಗೆ ಜವಾಬ್ದಾರಿಯ ಅರಿವಿದೆಯೇ?  ತಂತ್ರಜ್ಞಾನ ಬೆಳೆದಿರುವ ಇಂದಿನ ಮಾಹಿತಿಯ ಯುಗದಲ್ಲಿ  ಈ ರೀತಿಯ ಅಸತ್ಯವನ್ನು ಹೆಚ್ಚು ಕಾಲ ಉಳಿಸಲು ಸಾಧ್ಯವಿಲ್ಲ. ಪ್ರಜ್ಞಾವಂತ ನಾಗರಿಕರು ಸತ್ಯವನ್ನು ಅರಿಯಲು ತಂತ್ರಜ್ಞಾನ ಸಹಕಾರಿಯಾಗಿದೆ. ಹಾಗಾಗಿ ಅಸತ್ಯ ಪ್ರಚಾರದ ಆಧಾರದಲ್ಲಿ ನಿಂತ ಮಾಧ್ಯಮಗಳು ದಿನದಿಂದ ದಿನಕ್ಕೆ ತಮ್ಮ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವುದನ್ನೂ ನಾವು ಕಾಣುತ್ತಿದ್ದೇವೆ.

ಈ ವರ್ಷ ದಶಕವನ್ನು ಪೋರೈಸಿದ ಜೈಪುರ ಸಾಹಿತ್ಯೋತ್ಸವದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಅಧಿಕಾರಗಳಾದ ಸಹಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ, ಪ್ರಚಾರ ಪ್ರಮುಖ್ ಡಾ. ಮನಮೋಹನ ವೈದ್ಯ ಆಹ್ವಾನಿನತರಾಗಿ ಪಾಲ್ಗೊಂಡರು.  ಸಂಘಕ್ಕೆ ಆಹ್ವಾನ ನೀಡಿದ್ದಕ್ಕೆ ಎಡಪಂಥೀಯ ವಿಚಾರದವರು ವಿರೋಧ ವ್ಯಕ್ತಪಡಿಸಿದರು.  ಹಿಂದುಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿರುವಂತೆ ಭಾರತೀಯ ಜನತಾಪಾರ್ಟಿಯ ವೈಚಾರಿಕತೆ ಮೂಲವಾದ ಹಾಗೂ ಯಾವುದೇ ಸ್ಪಷ್ಟ ಸಾಹಿತ್ಯಿಕ ಮೌಲ್ಯವಿಲ್ಲದ ಆರೆಸ್ಸೆಸ್ ವಿಶ್ವದ ಅತಿದೊಡ್ಡ ಸಾಹಿತ್ಯ ಪ್ರದರ್ಶನದಲ್ಲಿ ಚೊಚ್ಚಲ ಬಾರಿಗೆ ಪಾಲ್ಗೊಳ್ಳುತ್ತಿದೆ? ಅದೂ ಸಾಹಿತ್ಯೋತ್ಸವವು ಹತ್ತನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ! ಇದು ಸಂಘಕ್ಕೆ ಆಹ್ವಾನ ನೀಡಿದ್ದನ್ನು ವಿರೋಧಿಸುವವರ ಚಿಂತೆ.  ಇವರಲ್ಲಿ ಅವಾರ್ಡ ವಾಪಸಿ ತಂಡದ ಲೇಖಕರುಗಳೇ ಪ್ರಮುಖರು.  ಇವರು ಮತ್ತು ಎಡಪಕ್ಷಗಳಿಗೆ ಸೇರಿದ ಕೆಲವರು ಆರೆಸ್ಸೆಸ್‌ಗೆ ನೀಡಿದ ಆಹ್ವಾನವನ್ನು ವಿರೋಧಿಸ ಸಾಹಿತ್ಯೋತ್ಸವವನ್ನು ಬಹಿಷ್ಕರಿಸಿ ಪಲಾಯನಗೈದರು.  ಇದು ದೇಶದಲ್ಲಿ ಅಸಹಿಷ್ಣುತೆ ಇದೆಯೆಂದು ಗುಲ್ಲೆಬ್ಬಿಸುವವರು ಇನ್ನೊಂದು ವಿಚಾರಧಾರೆಯ ಜನರನ್ನು ಸ್ವೀಕರಿಸುವ ರೀತಿ.  ಈ ಅಸಹಿಷ್ಣುತೆಯೂ ಸಹ ಹೊಸತೇನಲ್ಲ, ಉದಾಹರಣೆಗೆ 2012ರಲ್ಲಿ ಲೇಖಕ ಸಲ್ಮಾನ್ ರಶ್ದಿ ಜೈಪುರ ಸಾಹಿತ್ಯೋತ್ಸವಕ್ಕೆ ಬರದಂತೆ ತಡೆಯಲಾಗಿತ್ತು. ಆದರೆ ಜನಜೀವನದ ಪ್ರತಿಬಿಂಬವಾದ ಸಾಹಿತ್ಯ ಕಲೆ ಸಂಸ್ಕೃತಿಗಳಿಗೆ ಸಂಬಂಧಿಸಿದ ಉನ್ನತ ಮಟ್ಟದ ಚರ್ಚೆಗೆ ವೇದಿಕೆಗಳಾಗಬೇಕಿದ್ದ ಸಾಹಿತ್ಯ ಸಮ್ಮೇಳನಗಳು ರಾಜಕೀಯ ಗುಂಪುಗಾರಿಕೆಗೆ ಬಲಿಯಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ. 




ಎಸ್ ಗುರುಮೂರ್ತಿ ಕಂಡಂತೆ 'ಗುರೂಜಿ ಮತ್ತು ಸಮಕಾಲೀನ ಭಾರತ'

(ಪುಂಗವ 15/03/2017)


ಆರೆಸ್ಸೆಸ್ ಮತ್ತು ಗೋಳ್ವಲ್ಕರ್‌ರನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವಿಲ್ಲ ಏಕೆಂದರೆ ಆರೆಸ್ಸೆಸ್ಸಿನ ಸಿದ್ಧಾಂತ, ಕಾರ್ಯಪದ್ಧತಿ, ಚರಿತ್ರೆ, ಶಿಸ್ತು, ತರಬೇತಿಯ ಮಾದರಿ, ಸಾರ್ವಜನಿಕ ಚಿತ್ರಣ ಇವೆಲ್ಲ ಒಟ್ಟಿಗೆ ಹೊಂದಿಕೊಂಡಿವೆ. ಕಳೆದ ಅನೇಕ ದಶಕಗಳಲ್ಲಿ  ಬಹುಶಃ ಅತಿಹೆಚ್ಚು ಪ್ರಶಂಸೆಗೆ ಮತ್ತು ಅಷ್ಟೇ ಪ್ರಮಾಣದ ತೆಗಳಿಕೆಗೆ ಒಳಗಾದ ಸಂಘಟನೆ ಆರೆಸ್ಸೆಸ್ ಹಾಗೆಯೇ ಗುರೂಜೀ ಗೋಳ್ವಲ್ಕರ್ ಕೂಡ. ಸಾಮಾಜಿಕವಾಗಿ ಪ್ರಶಂಸಿಲ್ಪಡುವ ಆರೆಸ್ಸೆಸ್ ರಾಜಕೀಯ ಕಾರಣಗಳಿಂದಾಗಿ ವಿರೋಧಕ್ಕೆ ಒಳಗಾಗಿದೆ. ಇದೇ ರೀತಿ ಗುರೂಜೀಯವರು ಸತ್ಯ ಅಥವಾ ಅಪಾರ್ಥಕ್ಕೆ, ಪ್ರಶಂಸೆ ಅಥವಾ ಟೀಕೆಗೆ ಒಳಗಾದರು. ಆದರೆ ಪ್ರಶಂಸೆ ಅಥವಾ ಟೀಕೆಯ ಮಿತಿಯನ್ನು ದಾಟದ ಹೊರತು ಕೇವಲ ತನ್ನ ತಾಯ್ನಾಡಿಗಷ್ಟೇ ಅಲ್ಲ ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲ ದೃಷ್ಟಿಕೋನ ಹೊಂದಿದ್ದ ಶ್ರೇಷ್ಟ ತತ್ವಜ್ಞ ಚಿಂತಕರಾಗಿದ್ದ ಗುರೂಜಿಯವರ ಪೂರ್ಣ ವ್ಯಕ್ತಿತ್ವದ ಪರಿಚಯ ದೊರಕುವುದಿಲ್ಲ. ಹಾಗೆಯೇ ಗುರೂಜಿಯವರನ್ನು ಕೇವಲ ಭಾರತಕ್ಕೆ ಸೀಮಿತಗೊಳಿಸುವ ಪ್ರಯತ್ನವನ್ನು ಕೆಲವರು ಮಾವುತ್ತಾರೆ, ಇದೂ ಸರಿಯಾದುದಲ್ಲ. ಸಂಘವನ್ನು ವಿಶ್ಲೇಷಣೆ ಮಾಡದೇ ಗುರೂಜೀಯವರ ವ್ಯಕ್ತಿತ್ವವನ್ನು ವಿಶ್ಲೇಷಣೆ ಮಾಡುವುದು ಸಾಧ್ಯವಿಲ್ಲ, ಈ ಎರಡು ವ್ಯಕ್ತಿತ್ವಗಳು ಬೇರ್ಪಡಿಸಲಾರದಂತೆ ಬೆರೆತಿವೆ. 33 ವರ್ಷಗಳ ಕಾಲ ಅತ್ಯಂತ ಕಠಿಣ ಸಮಯದಲ್ಲಿ ಅವರು ಸಂಘಕ್ಕೆ ಮಾರ್ಗದರ್ಶನ ನೀಡಿದರು. ದೇಶಹಿತ, ಹಿಂದೂ ಹಿತದಲ್ಲಿ ಸಂಘವನ್ನು ರೂಪಿಸಿದರು. 

ಯಾವುದೇ ವ್ಯಕ್ತಿ ಅಥವಾ ಸಿದ್ಧಾಂತವನ್ನು ಟೀಕೆಗೆ ಒಳಪಡಿಸಬೇಕಾದಾಗ ಅವರ ಬಗ್ಗೆ ಆಳವಾಗಿ ಅಧ್ಯಯನ ಮಾಡಿರಬೇಕು ಇಲ್ಲವಾದರೆ ಟೀಕಿಸುವ ಅಧಿಕಾರ ನಮಗೆ ಬರುವುದಿಲ್ಲ. ಆದರೆ ಗೋಲ್ವಲ್ಕರ್ ಮತ್ತು ಸಂಘದ ಮೇಲಿನ ಎಲ್ಲಾ ಟೀಕೆಗಳ ಹಿಂದೇ ಯಾವುದೇ ಅಧ್ಯಯನವೇ ಇಲ್ಲ. ಇದನ್ನು ಕಮ್ಯುನಿಸ್ಟ ಚಿಂತಕರೇ ಒಪ್ಪಿಕೊಂಡಿದ್ದಾರೆ.

1940ರವರೆಗೆ ಆರೆಸ್ಸೆಸ್ ವಿಚಾರಧಾರೆ ಮತ್ತು ದೇಶದ ಉಳಿದ ರಾಜಕೀಯ, ಸಾಮಾಜಿಕ, ಆರ್ಥಿಕ ಚಿಂತಕರ ವಿಚಾರಗಳಲ್ಲಿ ಬಹುತೇಕ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಭಾರತದ ಹೊರಗೂ ಸಹ ಬೇರೆ ಬೇರೆ ಎಡಪಂಥೀಯ ಚಿಂತಕರು ಭಾರತವನ್ನು ನೋಡಿದ ದೃಷ್ಟಿಯು ಆರೆಸ್ಸೆಸ್ ವಿಚಾರಕ್ಕಿಂತ ಬರಳ ಭಿನ್ನವಾಗಿರಲಿಲ್ಲ. 1940ರವರೆಗೆ ಕಮ್ಯುನಿಸ್ಟರು, ಗಾಂಧೀಜೀ, ನೆಹರು ಇವರೆಲ್ಲರ ವಿಚಾರಗಳಲ್ಲಿ ಭಾರತದ ಹಿಂದೂ ಗುರುತಿನ ಬಗ್ಗೆ ಒಮ್ಮತವಿತ್ತು. ಈ ದಾಖಲೆಗಳನ್ನು ಪುನಃ ಬರೆದು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ 1940ರಲ್ಲಿ ಮುಸ್ಲಿಂ ಲೀಗ್ ಪಾಕಿಸ್ತಾನವನ್ನು ನಿರ್ಮಿಸುವ ನಿರ್ಣಯವನ್ನು ಅಂಗೀಕರಿಸಿದ ನಂತರ ಇವೆಲ್ಲವೂ ಬದಲಾದವು. ಇದರಿಂದ ಇಡೀ ರಾಜಕೀಯ ಚರ್ಚೆಯೇ ಬದಲಾಯಿತು. ಹಿಂದು, ಹಿಂದುತ್ವದ ತತ್ವ ಮತ್ತು ಸಂಸ್ಕೃತಿಯೊಂದಿಗೆ ಭಾರತದ ಗುರುತು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತ ಸಂಪೂರ್ಣ ಭಾರತಕ್ಕಲ್ಲ ಎನ್ನುವ ರಾಜಕೀಯ ವ್ಯಾಖ್ಯೆ 1940ರ ನಂತರ ಆರಂಭವಾಯಿತು. ಭಾರತದ ಹಿಂದೂ ಗುರುತಿನ ಕುರಿತು ಸಾಮಾನ್ಯ ಒಮ್ಮತವಿದ್ದ ವಿಚಾರ ಬದಲಾಗುತ್ತಿರುವ ಸಮಯದಲ್ಲಿ ಗೋಳ್ವಲ್ಕರ್ ಸಂಘದ ನೇತೃತ್ವ ವಹಿಸಿಕೊಂಡರು. ಇಂತಹ ನಿರ್ಣಾಯಕ ಕಾಲದಲ್ಲಿ ಅವರು ಸಂಘವನ್ನು ಮುನ್ನಡೆಸಿದರು. ಸಂಘ 1940ರವರೆಗೆ ಭಾರತದ ಹಿಂದೂ ಅಸ್ಮಿತೆಯ ಕುರಿತು ಇಡೀ ದೇಶದಲ್ಲೇ ಸ್ಥಾಪಿತವಾಗಿದ್ದ ವಿಚಾರದ ಪರವಾಗಿ ಆರೆಸ್ಸೆಸ್ ನಿಂತಿದೆಯೇ ಹೊರತು ಹೊಸದೊಂದು ವಿಚಾರವನ್ನು ಹುಟ್ಟುಹಾಕಿಲ್ಲ. ಆರೆಸ್ಸೆಸ್ ಹಿಂದೂ ರಾಷ್ಟ್ರೀಯತೆಯೆ ವಿಚಾರವನ್ನು ಹುಟ್ಟುಹಾಕಿಲ್ಲ, ಬದಲಿಗೆ 1940ರವರೆಗೆ ಸಾಮಾನ್ಯವಾಗಿ ಎಲ್ಲ ವರ್ಗದವರೂ ಒಪ್ಪಿದ್ದ ಭಾರತದ ಹಿಂದೂ ರಾಷ್ಟ್ರೀಯತೆಯ ಗುರುತನ್ನೇ ಪ್ರತಿಪಾದಿಸಿತು. ಆರೆಸ್ಸೆಸ್ ಗುರೂಜಿಯವರ ನೇತೃತ್ವದಲ್ಲಿ ಭಾರತದ ಪುರಾತನ ಏಕತೆಯನ್ನು ಪುನಃ ಸ್ಥಾಪಿಸಲು ಕಾರ್ಯಮಾಡತೊಡಗಿತು. 


ಅಮೇರಿಕದ ಶಿಕಾಗೋ ವಿಶ್ವವಿದ್ಯಾಲಯ ನಡೆಸಿದ "ಫಂಡಮೆಂಟಲಿಸಂ" ಹೆಸರಿನಲ ಅಧ್ಯಯದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ವಿವಿಧ ಮತ ಮತ್ತು ಆರೆಸ್ಸೆಸ್  ಸೇರಿದ್ಂತೆ ವಿವಿಧ್ ಸಂಘಟನೆಗಳಲ್ಲಿ ಮತೀಯ ಮೂಲಭೂತವಾದವನ್ನು ಕುರಿತು ಅಧ್ಯಯನ ನಡೆಸಿತು. ಈ ಅಧ್ಯಯನವು ಹಿಂದುತ್ವ, ಹಿಂದೂರಾಷ್ಟ್ರ, ಹಿಂದೂ ಸಾಂಸ್ಕೄತಿಕ ರಾಷ್ಟ್ರೀಯತೆ ಈ ವಿಷಯಗಳ ಕುರಿತಾದ ಗುರೂಜಿಯವರ ವಿಚಾರಗಳಿಗೆ ಬೆಂಬಲ ಸೂಚಿಸಿದೆ. 


ಆರೆಸ್ಸೆಸ್ ಕುರಿತು ಮಾತನಾಡುವಾಗಲೆಲ್ಲ ಇದೊಂದು ಹಿಂದೂ ಪುನರುತ್ಥಾನ ಮಾಡುವ, ಪ್ರತಿಕ್ರಿಯಾತ್ಮಕ ಸಂಘಟನೆ ಎಂದು ಹೇಳಲಾಗುತ್ತಿತ್ತು, ಆದರೆ ಈ ವ್ಯಾಖ್ಯಾನಗಳು ಹಿಂದುತ್ವಕ್ಕೆ ಒಪ್ಪುವಂತವಲ್ಲ ಏಕೆಂದರೆ ಯಾರಿಗೂ ಪ್ರತಿಕ್ರಿಯೆ ನೀಡುವವರಲ್ಲ, ನಾವು ಸರ್ವವೂ ಸೇರಿರುವ ಸಂಘಟನೆ, ನಾವು ಎಲ್ಲರನ್ನೂ ಒಪ್ಪುತ್ತೇವೆ. ಎನ್ನುವುದು ಗುರೂಜೀಯವರ ಅಭಿಪ್ರಾಯವಾಗಿತ್ತು. ರಾಷ್ಟ್ರ ಮತ್ತು ರಾಜ್ಯ (ನೇಶನ್ ಮತ್ತು ಸ್ಟೇಟ್) ಇವೆರಡೂ ಬೇರೆ ಬೇರೆ, ಉಳಿದೆಲ್ಲ ದೇಶಗಳಲ್ಲಿ ರಾಜ್ಯವು ರಾಷ್ಟ್ರವನ್ನು ನಿರ್ಮಿಸಿದರೆ ನಮ್ಮಲ್ಲಿ ರಾಜ್ಯವಿಲ್ಲದೆಯೇ ರಾಷ್ಟ್ರವಿತ್ತು, ವಿರೋಧೀ ರಾಜ್ಯವಿದ್ದರೂ ರಾಷ್ಟ್ರವಿತ್ತು. ರಾಷ್ಟ್ರ ಎನ್ನುವುದು ಪ್ರೇಮ ಮತ್ತು ಏಕತೆಯ ಮೇಲೆ ನಿಂತಿರುವ ಮಾನಸಿಕ ಸ್ಥಿತಿ, ಅದು ಎರಡು ಸಾವಿರ ವರ್ಷಗಳಿಂದ ರಾಜ್ಯವಿಲ್ಲದೇ ನಿಲ್ಲಬಲ್ಲದ್ದು, ಇಸ್ರೇಲಿನ ಯಾವುದೇ ಭೂಭಾಗವು ನಿಯಂತ್ರಣದಲ್ಲಿರದಿದ್ದರೂ ಜ್ಯೂ ರಾಷ್ಟ್ರವು ಜ್ಯೂಗಳ ಹೃದಯದಲ್ಲಿ ನೆಲೆಸಿತ್ತು. ರಾಷ್ಟ್ರ ಎನ್ನುವುದು ಜನರ ಮನೋಬುದ್ಧಿ ಹೃದಯಗಳಲ್ಲಿ ಜೀವಂತವಾಗಿರುತ್ತದೆ, ಆದರೆ ರಾಜ್ಯಕ್ಕೆ ಸ್ವತಂತ್ರವಾದ ಅಸ್ತಿತ್ವ ಇದೆ ಎನ್ನುವುದು ಗುರೂಜೀಯವರ ಅಭಿಪ್ರಾಯವಾಗಿತ್ತು.

ಗುರೂಜೀಯವರ ವಿಚಾರಗಳು ಶಿಕಾಗೋ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಪ್ರತಿಧ್ವನಿತವಾಗಿವೆ. ಹಾಗೆಯೇ ಭಾರತದ ಸರ್ವೋಚ್ಛ ನ್ಯಾಯಾಲಯದ ಹಿಂದುತ್ವ ಜಡ್ಜಮೆಂಟಿನಲ್ಲಿಯೂ ಗುರೂಜೀಯವರು ಬಂಚ್ ಆಫ್ ಥಾಟ್ನಜಲ್ಲಿ ಹೇಳಿರುವ ಶಬ್ದಗಳೇ ಉಲ್ಲೇಖಗೊಂಡಿವೆ. 

ಪರಿಪೂರ್ಣ ವ್ಯಕ್ತಿತ್ವದ ಗುರೂಜೀ ಕೇವಲ ಆರೆಸ್ಸೆಸ್ಸಿಗ್ನಷ್ಟೇ ಅಲ್ಲ ಸಂದಿಗ್ದ ಕಾಲದಲ್ಲಿ ದೇಶಕ್ಕೂ ಮಾರ್ಗದರ್ಶನ ನೀಡಿದರು. ಅವರ ಸಾತ್ವಿಕ ಶಕ್ತಿ ಮತ್ತು ಪರಿಶುದ್ಧತೆ ಎಷ್ಟು ಶ್ರೇಷ್ಟವಾಗಿತ್ತೆಂದರೆ ಆರೆಸ್ಸೆಸ್ ವಿರೋಧೀ ವಾತಾವರಣ ತೀವ್ರವಾಗಿದ್ದ ಸಮಯದಲ್ಲಿ ಗುರೂಜೀ ಮೃತರಾದಾಗ ಸಂಸತ್ತು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು, ಸಂಸತ್ತಿನಲ್ಲಿ ಚರ್ಚೆಯ ನೇತೃತ್ವ ವಹಿಸಿದ್ದವರು ಗುರೂಜೀಯವರೊಂದಿಗೆ ಬಹಳ ವೈಚಾರಿಕ ಭಿನ್ನಾಭಿಪ್ರಾಯ ಹೊಂದಿದ್ದ ಸ್ವಯಂ ಇಂದಿರಾ ಗಾಂಧಿ. ಅವರು ಎಷ್ಟು ಪ್ರಸ್ತುತ ಎಂದರೆ ಸಂಘವಷ್ಟೇ ಅಲ್ಲ ದೇಶದ ವಿಷಯದಲ್ಲಿ  ಅವರ ಪರಿಕಲ್ಪನೆಯಲ್ಲಿ ಮೂಡಿದ, ಹೇಳಿದ, ಮಂಡಿಸಿದ್, ರೂಪಗೊಳಿಸಿದ ವಿಚಾರಗಳನ್ನು  ತದನಂತರದ ಸಮಯದಲ್ಲಿ ನಡೆದ ಘಟನೆಗಳು ಪುಷ್ಟೀಕರಿಸಿವೆ. ಉದಾಹರಣೆಗೆ ಚೀನಾದ ಕುರಿತು ಕೇಳಿದ ಪ್ರಶ್ನೆಗೆ ’ಕಮ್ಯುನಿಸ್ಟ ಚೀನಾದಿಂದ ಕನ್ಫ್ಯೂಶಿಯನ್ ಚೀನಾ ಹುಟ್ಟುವುದು, ಆದರೆ ಅದರ ಸಾಮ್ರಾಜ್ಯಶಾಹಿ ಪ್ರವೃತ್ತಿ ಹಾಗೇ ಬೆಳೆಯುವುದು’ ಎಂದು ಹೇಳಿದ್ದರು. ಹಾಗೆಯೇ ಪಾಕಿಸ್ತಾನದ ಕುರಿತು ’ಅದು ವಿಶ್ವಕ್ಕೆ ಸದಾ ಉಪದ್ರವಕಾರಿಯಾಗಿರಲಿದೆ’ ಎಂದು ಹೇಳಿದ್ದರು. ಇಂದು ನಾವು ಇದನ್ನೇ ಕಾಣುತ್ತಿದ್ದೇವೆ. ಅವರು ಕೇವಲ ಆಯಾ ಸಾಂದರ್ಭಿಕ ಸನ್ನಿವೇಶಕ್ಕೆ ಸೀಮಿತರಾಗಿರಲಿಲ್ಲ. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಅವರೊಬ್ಬರು ಋಷಿಯಾಗಿದ್ದರು.


(ಆರೆಸ್ಸೆಸ್ ದ್ವಿತೀಯ ಸರಸಂಘಚಾಲಕ ಶ್ರೀ ಗುರೂಜಿ(ಮಾಧವ ಸದಾಶಿವರಾವ್ ಗೋಳ್ವಲ್ಕರ್) ಜನ್ಮದಿನದ ನಿಮಿತ್ತ ಬೆಂಗಳೂರಿನ ಮಂಥನ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಆರ್ಥ ತಜ್ಞ, ಹಿರಿಯ ಪತ್ರಕರ್ತ ಎಸ್ ಗುರುಮೂರ್ತಿ ನೀಡಿದ ಉಪನ್ಯಾಸದ ತುಣುಕುಗಳು)

ಬರದ ಬಿಸಿಯಲ್ಲಿ ಬಸವಳಿಯುತ್ತಿದೆ ಬದುಕು, ಇನ್ನೂ ಎಚ್ಚರಗೊಳ್ಳದಿದ್ದರೆ ವಿನಾಶ ಖಚಿತ

(ಪುಂಗವ 01/03/2017)

ಬರಗಾಲ ಬರದ ವರ್ಷವನ್ನೇ ನಾವು ಇತ್ತೀಚೆಗೆ ನೋಡಿಲ್ಲ, ಕರ್ನಾಟಕದ ಮಟ್ಟಿಗೆ ಅನಾವೃಷ್ಠಿ ಮತ್ತು ಬರ ಅಷ್ಟು ಸಾಮಾನ್ಯವಾಗಿ ಹೋಗಿದೆ. ವರ್ಷದಿಂದ ವರ್ಷಕ್ಕೆ ಬರದ ತೀವ್ರತೆ ಮಾತ್ರ ಹೆಚ್ಚಾಗುತ್ತಿದೆ. ಈ ವರ್ಷದ ಬರಗಾಲವನ್ನು ಕಳೆದ ೪೫  ವರ್ಷಗಳಲ್ಲೇ ಅತ್ಯಂತ ಭೀಕರ ಎನ್ನಲಾಗುತ್ತಿದೆ. ಬೇಸಿಗೆ ಸರಿಯಾಗಿ ಆರಂಭವಾಗುವ ಮೊದಲೇ ಬಿಸಿಲಿನ ಬೇಗೆ ತೀವ್ರವಾಗಿ  ಹೆಚ್ಚುತ್ತಿದೆ. ನಗರಗಳಲ್ಲಿ ನೀರಿನ ಟ್ಯಾಂಕರ್‌ಗಳ ಓಡಾಟ ಹೆಚ್ಚುತ್ತಿರುವಂತೆಯೇ ಹಳ್ಳಿಗಳ ಸಾರ್ವಜನಿಕ ಹ್ಯಾಂಡ್‌ಪಂಪ್‌ಗಳು, ನೀರಿನ ಟ್ಯಾಂಕ್‌ಗಳ ಮುಂದೆ ಪ್ಲಾಸ್ಟಿಕ್ ಕೊಡಪಾನಗಳ ಸಾಲು ಬೆಳೆಯುತ್ತಿದೆ. ಅನೇಕ ಊರುಗಳಲ್ಲಿ ಇಡೀ  ಗ್ರಾಮಕ್ಕೇ ನೀರುಣಿಸುತ್ತಿದ್ದ  ತೆರೆದ ಬಾವಿಗಳು ಬತ್ತಿಹೋಗಿ ವರ್ಷಗಳೇ ಕಳೆದವು.  ಕೊಳವೆ ಬಾವಿಗಳ ಆರ್ಭಟಕ್ಕೆ ಅಂತರ್ಜಲದ ಮಟ್ಟ ದಿನೇದಿನೇ ಕುಸಿಯುತ್ತಿದೆ. ಹಸುರಿನಿಂದ ಸಮೃದ್ಧವಾಗಿರುತ್ತಿದ್ದ ಮಲೆನಾಡು ಪ್ರದೇಶವೂ ನೀರಿನ ಬರಕ್ಕೆ ತುತ್ತಾಗುತ್ತಿರುವುದು ಕಳವಳಗೊಳಿಸುವ ವಿಷಯವಾಗಿದೆ.

ಈ ವರ್ಷ ರಾಜ್ಯದ 176 ತಾಲೂಕುಗಳಲ್ಲಿ 139 ತಾಲೂಕುಗಳು ಬರಪೀಡಿತ ಎಂದು ಈಗಾಗಲೇ ಘೋಷಿಸಲಾಗಿದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಮೀಕ್ಷೆ ನಡಸಿದೆ ಕೇಂದ್ರೀಯ ಅಂತರ್ಜಲ ಮಂಡಲಿಯು ಅಂತರ್ಜಲ ಮಟ್ಟದಲ್ಲಿ ೨ರಿಂದ ೪ ಮೀಟರಿನಷ್ಟು ಕುಸಿತವಾಗಿದೆ ಎಂದು ವರದಿ ನೀಡಿದೆ. ಇದಕ್ಕೆ ಮಳೆಯ ಕೊರತೆ ಒಂದು ಕಾರಣವಾದರೆ ಅಂತರ್ಜವನ್ನು ಅತಿಯಾಗಿ ಹೊರತೆಗೆಯುತ್ತಿರುವ ಕಾರಣವೂ ಇದೆ.

ಅನೇಕ ಕಡೆ ಕಾಳ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು ನಾಗರಹೊಳೆ ಬಂಡಿಪುರ ರಕ್ಷಿತ ಅರಣ್ಯ ಪ್ರದೇಶದಲ್ಲಿಯೇ ಕಾಳ್ಗಿಚ್ಚಿನಿಂದ ನೂರಾರು ಎಕರೆ ಅರಣ್ಯ ನಾಶವಾಗಿದ್ದು ವರದಿಯಾಗಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಕಲ್ಕೆರೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚನ್ನು ನಂದಿಸುವ ಸಂದರ್ಭದಲ್ಲಿ ಅರಣ್ಯಾಧಿಕಾರಿಯೋರ್ವರು ಮೃತಪಟ್ಟಿದ್ದೂ ವರದಿಯಾಗಿದೆ. ಒಣಗಿ ಗರಿಗರಿಯಾಗಿರುವ ಮರ ಹುಲ್ಲು ತರಗೆಲೆಗಳ ನಡುವೆ ಬಿದಿರುಗಳ ತಿಕ್ಕಾಟದಿಂದ ಒಂದು ಸಣ್ಣ ಕಿಡಿ ಹುಟ್ಟಿದರೂ ಅದರಿಂದ ಭಗ್ಗೆಂದು ಹೊತ್ತಿಕೊಂಡು ಉರಿಯುವ ಕಾಳ್ಗಿಚ್ಚನಿಂದ ಅರಣ್ಯವನ್ನು ರಕ್ಷಿಸುವುದು ವನಪಾಲಕರಿಗೆ ದೊಡ್ಡ ಸವಾಲಾಗಿದೆ. ಕಾಡಂಚಿನ ಗ್ರಾಮಗಳೂ ಕಾಳ್ಗಿಚ್ಚಿನ  ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಇದರ ಜೊತೆಗೆ ಕಾಡಿನಲ್ಲಿರುವ ಜಲಮೂಲಗಳು ಕೆರೆತೊರೆಗಳು ಬತ್ತಿ ವನ್ಯಜೀವಿಗಳು ನೀರಿಲ್ಲದೇ ಪರಿತಪಿಸುತ್ತಿರುವುದು ಇನ್ನೊಂದು ಸಮಸ್ಯೆಯಾಗಿದೆ. ಹುಲಿ ಸಂರಕ್ಷಿತ ಅರಣ್ಯವಾದ ಸುಮಾರು ೯೦೦ ಚದರ ಕೀಮೀ ವ್ಯಾಪ್ತಿಯ ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿದ್ದ ೧೫೦ ಕೆರೆಕಟ್ಟೆಗಳ ಪೈಕಿ ೧೨೦ರಷ್ಟು ಬತ್ತಿಹೋಗಿವೆ.ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮ, ಕಬಿನಿ ರಾಷ್ಟ್ರೀಯ ಉದ್ಯಾನ, ಬಿಳಿಗಿರಿರಂಗಸ್ವಾಮಿ ವನ್ಯಧಾಮ, ಮಲೆಮಹದೇಶ್ವರ ಬೆಟ್ಟ ಪ್ರದೇಶಗಳಲ್ಲಿಯೂ ನೀರಿನ ಬರ ತೀವ್ರವಾಗಿದೆ. ವನ್ಯಜೀವಿಗಳಿಗೂ ಬೋರ್‌ವೆಲ್ ನೀರನ್ನು ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಬೇಕಾದ ಸನ್ನಿವೇಶ ಬಂದಿದೆಯೆಂದರೆ ಬರ ತಂದೊದಗಿದ ಪರಿಸ್ಥಿತಿಯನ್ನು ಊಹಿಸಬಹುದು.

ಒಟ್ಟಿನ ತಾತ್ಪರ್ಯವಿಷ್ಟೇ. ನೀರು, ಜಲಮೂಲಗಳು  ಮತ್ತು ಕಾಡಿನ ಸಂರಕ್ಷಣೆಗೆ  ಇನ್ನೂ ನಾವುಎಚ್ಚೆತ್ತುಕೊಳ್ಳದಿದ್ದರೆ ಮನುಕುಲ ವಿನಾಶದ ಕಡೆಗೆ ನಡೆಯುವುದನ್ನು ತಪ್ಪಿಸುವುದು ಸಾಧ್ಯವಿಲ್ಲ. ಭೂಮಿಯನ್ನು ಕೊರೆದು ಅಂತರ್ಜಲವನ್ನು ಹೊರತೆಯುವಲ್ಲಿ ಬೆಳೆದಿರುವ ತಂತ್ರಜ್ಞಾನ ಮತ್ತು ಶ್ರಮ ಮಳೆಯ ನೀರಿನ ಸಂಗ್ರಹ, ನೀರಿಂಗಿಸುವಿಕೆ, ನೀರಿನ ಮಿತಬಳಕೆಯಲ್ಲೂ ಆಗಬೇಕು.ಕಾಡನ್ನು ಕಡಿದು ಮತ್ತು  ಕಾಡಿನ ಉತ್ಪನ್ನಗಳನ್ನು  ತಂದು ನಗರಗಳನ್ನು ನಿರ್ಮಿಸುವಲ್ಲಿ  ವ್ಯಯಗೊಳಿಸುವ ಹಣ ಹಾಗೂ ಶಕ್ತಿ ಕಾಡನ್ನು ಬೆಳೆಸುವಲ್ಲಿಯೂ ವೆಚ್ಚವಾಗಬೇಕು.  ಏಕೆಂದರೆ  ಆರ್ಥಿಕ ಪ್ರಗತಿಯೆಡೆಗಿನ ಧಾವಂತ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾದಾಗ ಅದು ಬದುಕಿಗೇ ಮಾರಕವಾಗುವುದು ಎನ್ನುವ ವಾಸ್ತವವನ್ನು ಅರಿಯದಿದ್ದಲ್ಲಿ ವಿನಾಶ ಖಚಿತ.

ಮೇವಿನ ಬರದಿಂದ ಸಂಕಷ್ಟದಲ್ಲಿರುವ ಗೋವುಗಳು
ಬರದ ನೇರ ಪರಿಣಾಮ ಉಂಟಾಗುವುದು ಜಾನುವಾರುಗಳ ಮೇವಿನ ಮೇಲೆ ಮತ್ತು ದನಗಳನ್ನೇ ಆಶ್ರಯಿಸಿರುವ ರೈತಾಪಿಗಳ ಮೇಲೆ. ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿರುವ ಸುಮಾರು 4 ಸಾವಿರ ದನಗಳು ನೀರು ಮತ್ತು ಮೇವಿನ ಕೊರತೆಯಿಂದ ಸಂಕಷ್ಟಕ್ಕೊಳಗಾಗಿರುವುದನ್ನು ರಾಜ್ಯದ ಪ್ರಮುಖ ದಿನಪತ್ರಿಕೆಯೊಂದು ವರದಿ ಮಾಡಿದೆ. ಇದು ಕೇವಲ ಒಂದು ಪ್ರದೇಶದ ಸಮಸ್ಯೆಯಲ್ಲಿ. ಬರಗಾಲದಿಂದ ಗುಳೆ ಹೋಗುವ ಉತ್ತರ ಕರ್ನಾಟಕದ ಅನೇಕ ಊರುಗಳಲ್ಲಿನ ಜಾನುವಾರುಗಳ ಕಥೆ ಇನ್ನೂ ಕರುಣಾಜನಕ. ಪೌಷ್ಟಿಕ ಮೇವಿನ ಕೊರತೆಯಿಂದ ಹಾಲಿನ ಉತ್ಪಾದನೆಯೂ ಕಡಿಮೆಯಾಗುತ್ತಿದ್ದು  ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತಾಪಿ ವರ್ಗವು ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿದೆ. ಮೇವಿನ ಕೊರತೆ ದನಗಳಿಗಷ್ಟೇ ಅಲ್ಲಿದೆ ಕುರಿಮಂದೆಗಳನ್ನು ಊರಿಂದ ಊರಿಗೆ ಹೊಡೆದುಕೊಂಡು ಹೋಗುವ ಕುರಿಗಾಹಿಗಳನ್ನೂ ತಟ್ಟಿದೆ.

ಅನೇಕ ಕಡೆಗಳಲ್ಲಿ ಸರ್ಕಾರ ತಾತ್ಕಾಲಿಕ ಗೋಶಾಲೆಗಳನ್ನು ತೆರೆದು ಮೇವು ಮತ್ತು ನೀರನ್ನು ಒದಗಿಸುವ ಪ್ರಯತ್ನ ನಡೆಸಿದ್ದರೂ ಬರದ ತೀವ್ರತೆಗೆ ಇದು ಏನೂ ಸಾಲದಾಗಿದೆ. ಮಲೆಮಹದೇಶ್ವರ ಬೆಟ್ಟದಂತೆಯೇ ಅನೇಕ ಅರಣ್ಯ ಪ್ರದೇಶಗಳಲ್ಲಿ ಮೇವಿದ್ದರೂ ಅರಣ್ಯ ಇಲಾಖೆಯು ದನಗಳನ್ನು ಮೇಯಿಸುವುದಕ್ಕೆ ನಿರ್ಭಂದ ಹೇರಿರುವ ಕಾರಣದಿಂದ ಮೊದಲು ಕಾಡಿನಲ್ಲಿ ದೊಡ್ಡಿಗಳನ್ನು ನಿರ್ಮಿಸಿ ದನಗಳನ್ನು ಮೇಯಿಸುತ್ತಿದ್ದ ದನಗಾಹಿಗಳು ದಾರಿಕಾಣದಾಗಿದ್ದಾರೆ. ಅತಿಯಾಗಿ ಮೇಯಿಸುವುದರಿಂದ ಕಾಡು ಹಾಳಾಗಬಹುದೆಂಬ ಅರಣ್ಯ ಇಲಾಖೆಯ ಆತಂಕ ಸರಿಯಾದರೂ ಅರಣ್ಯದ ಮೇವನ್ನೇ ಆಶ್ರಯಿಸಿರುವ ಜಾನುವಾರುಗಳ ಕಷ್ಟವನ್ನು ಗಮನಿಸಬೇಕು. ಆಫ್ರಿಕ ಮತ್ತು ದಕ್ಷಿಣ ಅಮೇರಿಕದ ಪ್ರದೇಶಗಳಲ್ಲಿ ದನಗಳ ಓಡಾಟದಿಂದ ಭೂಮಿ ಸಡಿಲಗೊಂಡು ಮತ್ತು ಅವು ಚೆಲ್ಲುವ ಗಂಜಲ ಸೆಗಣಿಗಳಿಂದ ಕಾಡು ಬೆಳೆದಿರುವ ಉದಾಹರಣೆಗಳು ಇವೆ. ಆದ್ದರಿಂದ ಅರಣ್ಯ ಪ್ರದೇಶದಲ್ಲಿ ದನಗಳನ್ನು ಮೇಯಿಸುವುದಕ್ಕೆ ನಿರ್ಭಂದ ಹೇರುವ ಬದಲು ಸರಿಯಾದ ನಿಯಮಗಳನ್ನು ರೂಪಿಸಿ ಜಾನುವಾರುಗಳನ್ನು ಮೇಯಿಯಸುವುದಕ್ಕೆ ಅವಕಾಶ ಮಾಡಿಕೊಡುವುದು ಸೂಕ್ತ.

ಗೋಪ್ರೇಮಿಗಳು  ಮತ್ತು ಗೋವಂಶದ ರಕ್ಷಣೆಗಾಗಿ ಹೋರಾಡುತ್ತಿರುವ ಸಜ್ಜನರು ಗೋವಿನ ಹಾಗೂ ಗೋಪಾಲಕರ ನೆರವಿಗೆ ಬರಲು ಇದು ಸಕಾಲವಾಗಿದೆ. ಹೈನುಗಾರಿಕೆಯನ್ನು ಅವಲಂಬಿಸಿರುವ ಹಾಗೂ ಕೃಷಿಯೊಂದಿಗೆ ದನಗಳನ್ನು ಸಾಕುವ ದೊಡ್ಡ ಕೃಷಿಕ ವರ್ಗ ನಮ್ಮ ರಾಜ್ಯದಲ್ಲಿದೆ. ಹಾಗೆಯೇ ಮುದಿ ಆಶಕ್ತ ದನಗಳನ್ನು ಸಾಕುವ ಪಿಂಜಾರಪೋಳ್ ಸಂಸ್ಥಯಂತೆ, ದೇಶಿ ಹಸುತಳಿಗಳ ಸಂವರ್ಧನೆಯಲ್ಲಿ ತೊಡಗಿಸಿಕೊಂಡಿರುವ ಸುಮಾರು 140ಕ್ಕೂ ಹೆಚ್ಚು ಗೋಶಾಲೆಗಳು ನಮ್ಮ ರಾಜ್ಯದಲ್ಲಿ ಸಕ್ರಿಯವಾಗಿವೆ. ಎಲ್ಲವೂ ಆರ್ಥಿಕವಾಗಿ ಸುದೃಢವಾಗಿಲ್ಲ, ಹೆಚ್ಚು ಹಣವನ್ನು ತೆತ್ತು ಮೇವನ್ನು ಹೊಂದಿಸುವ ಶಕ್ತಿ ಎಲ್ಲರಲ್ಲೂ ಇಲ್ಲ. ಆದ್ದರಿಂದ ಇಂತಹ ರೈತರ ಹಾಗೂ ಗೋಶಾಲೆಗಳಿಗೆ ಮೇವಿನ ನೆರವು ನೀಡುವುದರ ಮೂಲಕ ಸಹಾಯ ಮಾಡಬಹುದು. ಹಾಗೆಯೇ ಮೇವಿನ ದಾಸ್ತಾನು ಇರುವ ಮಾಹಿತಿ ಹಂಚಿಕೊಂಡು ಹಾಗೂ ಸಾಗಾಣಿಕೆಗೆ ಸಹಕಾರ ನೀಡಬಹುದು. ಅಗತ್ಯವಿದ್ದಲ್ಲಿ ಗೋಶಾಲೆ ಮೇವು ಬ್ಯಾಂಕ್‌ಗಳನ್ನು ಆರಂಭಿಸಿ ನೆರವಾಗಬಹುದು. ಆಹಾರದ ಕೊರತೆಯಿಂದ ಅಶಕ್ತಗೊಂಡು ಸಾವನ್ನಪ್ಪುವ ಅಥವಾ ಕಟುಕರ ಪಾಲಾಗುವ ಗೋವನ್ನು ಸಂರಕ್ಷಿಸಲು ಸಮಾಜ ಮುಂದಾಗಬೇಕಿದೆ.

ಗೋಮಾಳ ಜಮೀನಿನ ಕಬಳಿಕೆಯ ಸಕ್ರಮವೇಕೆ?
ರಾಜ್ಯದಲ್ಲಿ ಗೋಮಾಳ, ಹುಲ್ಲುಗಾವಲು ಸೇರಿದಂತೆ ಸುಮಾರು 12 ಲಕ್ಷ ಎಕರೆಯಷ್ಟು ಸರಕಾರಿ ಜಮೀನು ಒತ್ತುವರಿಯಾಗಿದೆಯೆಂದು ಸರ್ಕಾರ ಹೇಳಿದೆ. ಒತ್ತುವರಿಯಿಂದ ಕಬಳಿಕೆ ಮಾಡಿದ ಗೋಮಾಳಗಳ ಭೂಮಿಯನ್ನು ಸಕ್ರಮ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಗೋವಿನ ಮೇವನ್ನು ಕಸಿಯುವ ಸರ್ಕಾರದ ಈ ನಿರ್ಧಾರವು ಅತ್ಯಂತ ಖಂಡನೀಯವಾಗಿದೆ. ಹೆಚ್ಚಿನ ದೇಸಿ ಗೋ ತಳಿಗಳನ್ನು ಬಯಲಿನಲ್ಲಿ ಮೇಯಿಸಿ ಸಾಕಲಾಗುತ್ತದೆ, ವಿದೇಶಿ ತಳಿಗಳಂತೆ ಹಟ್ಟಿಯಲ್ಲಿ ಕಟ್ಟಿ ಹಾಕಲಾಗುದಿಲ್ಲ. 2012ರ ಜಾನುವಾರು ಗಣತಿಯ ಪ್ರಕಾರ ಕರ್ನಾಟಕದಲ್ಲಿ ಕಳೆದ ಎರಡು ದಶಕಗಳಲ್ಲಿ ಭಾರತೀಯ ತಳಿಯ ಗೋವುಗಳ ಸಂಖ್ಯೆ 64 ಲಕ್ಷದಿಂದ 38 ಲಕ್ಷಕ್ಕೆ ಇಳಿದಿದೆ, ಆದರೆ ವಿದೇಶ ಮತ್ತು ಮಿಶ್ರ ತಳಿಗಳ ಸಂಖ್ಯೆ 6ರಿಂದ 29 ಲಕ್ಷಕ್ಕೆ ಏರಿದೆ. ಸರ್ಕಾರದ ಈ ನಿರ್ಧಾರದಿಂದ ದನಗಳನ್ನು ಮೇಯಿಸುವ ಜಾಗ ಕಡಿಮೆಯಾಗಿ ಭಾರತೀಯ  ಗೋತಳಿಗಳ ಸಂವರ್ಧನೆಗೆ ಹೊಡೆತ ಬೀಳಲಿದೆ. ಇದರಿಂದ ನೇರವಾಗಿ ತೊಂದರೆಗೀಡಾಗುವವರು ಮನೆಗಳಲ್ಲಿ ಒಂದಿಷ್ಟು ದನಸಾಕುವ ಗ್ರಾಮೀಣ ಕೃಷಿಕರು  ಮತ್ತು ಹೈನುಗಾರಿಕೆಯನ್ನೇ ಅವಲಂಬಿಸಿರುವ ದನಗಾಹಿಗಳು. 

ಕಪ್ಪು ಹಣದ ವಿರುದ್ಧ ಅಪನಗದೀಕರಣದ ಅಸ್ತ್ರ

(ಪುಂಗವ 01/12/2016)

ಕಳೆದ ಕೆಲವು ದಿನಗಳಿಂದ ಎಲ್ಲೆಡೆ 500ಹಾಗೂ 1000ರೂ ನೋಟು ಅಪನಗದೀಕರಣ ಮತ್ತು ಕಪ್ಪು ಹಣದ ಸುದ್ದಿಗಳೇ ಹರಿದಾಡುತ್ತಿವೆ. ರಾಜಕೀಯ ಅಪಸ್ವರಗಳನ್ನು ಹೊರತುಪಡಿಸಿ ಹೆಚ್ಚಿನ ಜನರು ಸರ್ಕಾರದ ಈ ಕ್ರಮವನ್ನು ಶ್ಲಾಘಿಸಿದ್ದಾರೆ, ಕಪ್ಪು ಹಣ ನಿಯಂತ್ರಣದಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆ ಎಂದೇ ವಿಶ್ವದ ಅನೇಕ ಆರ್ಥಿಕ ತಜ್ಞರು ಬಣ್ಣಿಸಿದ್ದಾರೆ. ಜೊತೆಗೆ ಬ್ಯಾಂಕು ಎಟಿಎಮ್‌ಗಳ ಸರತಿ ಸಾಲಿನಲ್ಲಿ ಸೋತು ಸ್ವಲ್ಪ ಬೇಸರಿಸಿಕೊಂಡವರು, ಬಚ್ಚಿಟ್ಟಿದ್ದ ಹಣವನ್ನು ದಾಟಿಸಲಾಗದೆ ಒಳಗೊಳಗೇ ಸಂಕಟಪಡುವವರೂ, ನ್ಯಾಯವಾಗಿ ಗಳಿಸಿದ ಹಣವಾದರೂ ಬ್ಯಾಂಕ್‌ನಲ್ಲಿಡದೇ ಮನೆಯಲ್ಲೇ ನಗದಿನ ರೂಪದಲ್ಲಿ ಕಾಪಿಟ್ಟುಕೊಂಡು ತಲೆಕೆಡಿಸಿಕೊಂಡವರೂ ಕೆಲವರಿದ್ದಾರೆ. ಜೊತೆಗೆ ಇದೇ ಸಮಯ ಎಂದು ದೊಡ್ಡ ಮೊತ್ತದ ಕಪ್ಪು ಹಣವನ್ನು ದಾಟಿಸಿ ಬಿಳಿ ಮಾಡಿಸಿಕೊಟ್ಟು ಕಮೀಷನ್ ವ್ಯವಹಾರ ಕುದುರಿಸುವವರೂ ಇದ್ದಾರೆ. ಆದರೆ ಸರ್ಕಾರದ ಈ ನಿರ್ಧಾರ ಕಾಳಧನಿಕರ, ಸುಳ್ಳು ಲೆಕ್ಕ ತೋರಿಸಿ ತೆರಿಗೆ ವಂಚನೆ ಮಾಡುತ್ತಿದ್ದವರ, ಭ್ರಷ್ಟ ಲಂಚಕೋರರು ಮತ್ತು ರಾಜಕೀಯ ನೇತಾರರ ನಿದ್ದೆ ಕೆಡಿಸಿದ್ದಂತೂ ನಿಜ.

ಒಟ್ಟೂ ಚಲಾವಣೆ ಅಥವಾ ಕೂಡಿಟ್ಟ ಸುಮಾರು 16.5 ಲಕ್ಷ ಕೋಟಿ ನಗದಿನ ಪೈಕಿ ಸುಮಾರು 86 ಶೇಕಡ ಐದುನೂರು ಮತ್ತು ಒಂದು ಸಾವಿರ ಮುಖಬೆಲೆಯ ನೋಟುಗಳಾಗಿದ್ದು ಸುಮಾರು 14 ಲಕ್ಷ ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ನಗದನ್ನು ಬದಲಾಯಿಸುವ ಕಾರ್ಯ ಒಂದು ಸವಾಲೇ ಸರಿ. ಹಾಗೆಯೇ ಅತ್ಯಂತ ಕ್ಲಿಷ್ಟ ಹಾಗೂ ಸವಾಲಿನ ಈ ಯೋಜನೆಯ ಅನುಷ್ಟಾನಕ್ಕೆ ಮುಂಚೆ ಗೋಪ್ಯತೆ ಕಾಯ್ದುಕೊಂಡು ವಂಚಕರಿಗೆ ಸರಿಯಾದ ಸಮಯದಲ್ಲಿ ಬಲವಾದ ಪೆಟ್ಟು ನೀಡಿದ ಪ್ರಧಾನಿ ಮೋದಿ ನೇತೃತ್ವದ ತಂಡದ ಕಾರ್ಯ ಪ್ರಶಂಸನೀಯವಾಗಿದೆ.

ಅಷ್ಟಕ್ಕೂ ಏಕೆ ಈ ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕಾಯಿತು? ಚಲಾವಣೆಯಲ್ಲಿರುವ ಹಣದ ಶೇ ೮೬ ರಷ್ಟಾಗುವ ನೋಟುಗಳನ್ನು ವಿನಿಮಯ ಮಾಡುವಂತಂತಹ ಬೃಹತ್ ಕಾರ್ಯದಿಂದಾಗುವ ಲಾಭವಾದರೂ ಏನು? ಅಥವಾ ವ್ಯವಹಾರ ವ್ಯಾಪಾರದಲ್ಲಷ್ಟೇ ಅಲ್ಲದೇ ಸಾಮಾನ್ಯ ಜನಜೀವನದಲ್ಲೂ ಏರುಪೇರು ಮಾಡುತ್ತಿರುವುದು ಈ ನಿರ್ಣಯ ಸಮಂಜಸವೇ? ಇದೊಂದು ನಿಃಷ್ಪ್ರಯೋಜಕ ಪ್ರಯತ್ನವೇ? ಇಂತಹ ಪ್ರಶ್ನೆಗಳು ಸಾಮಾನ್ಯ ನಾಗರಿಕರಲ್ಲಿ ಏಳುವುದು ಸಹಜ.
ಕೆಲವೊಂದು ಪ್ರಮುಖ ಕಾರಣಗಳನ್ನು ಗಮನಿಸುವುದಾದರೆ,
  • ಲಂಚ, ಭ್ರಷ್ಟಾಚಾರ ಹಾಗೂ ಅಕ್ರಮ ವ್ಯವಹಾರಗಳಿಂದ ಅಗಾಧ ಪ್ರಮಾಣದಲ್ಲಿ ನಗದಿನ ರೂಪದಲ್ಲಿ ಕೂಡಿಟ್ಟಿದ್ದ ಕಪ್ಪು ಹಣ ಸರ್ಕಾರದ ಬೊಕ್ಕಸಕ್ಕೆ ಅಥವಾ ಮುಖ್ಯವಾಹಿನಿಗೆ ಬರುವಂತೆ ಮಾಡುವುದು.
  • ದೇಶದ ಆರ್ಥಿಕ ವ್ಯವಸ್ಥೆಗೇ ಧಕ್ಕೆಯಾಗುವ ಲೆಕ್ಕಕ್ಕೆ ಸಿಗದ ಸಮಾನಾಂತರ ಆರ್ಥಿಕತೆ, ಹವಾಲಾ ಧಂದೆಗಳನ್ನು ನಿಯಂತ್ರಿಸುವುದು. ವಿಶ್ವಬ್ಯಾಂಕ್ ೨೦೦೭ರಲ್ಲೇ ಅಂದಾಜಿಸಿದಂತೆ ದೇಶದ ಜಿಡಿಪಿಯ 22.2 ಶೇಕಡರಷ್ಟು - ಸುಮಾರು 35 ಸಾವಿರ ಶತಕೋಟಿ ರೂಪಾಯಿಗಳಷ್ಟು ಕಪ್ಪು ಆರ್ಥಿಕತೆ ಬೃಹತ್ತಾಗಿ ಬೆಳೆದಿದೆ.
  • ಭೂಮಿ, ಚಿನ್ನ, ಆಸ್ತಿ, ಷೇರು, ವಿದೇಶಿ ಕರೆನ್ಸಿ ಮುಂತಾದ ರೂಪದಲ್ಲಿಯೂ ಕಪ್ಪು ಹಣ ಇದೆ, ಆದರೆ ನಗದಿನ ರೂಪದಲ್ಲಿಯೂ ಗಣನೀಯ ಪ್ರಮಾಣದಲ್ಲಿದೆ. ಜೊತೆಗೆ ನಗದು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಗೆ ಸಿಗುವಂಥದ್ದಾಗಿದ್ದು ಕಪ್ಪು ವ್ಯವಹಾರದ ಬೆಳವಣಿಗೆಗೆ ಸಹಕಾರಿಯಾಗಿದೆ.
  • ಹೆಚ್ಚಿನ ವ್ಯವಹಾರಗಳು ಬ್ಯಾಂಕುಗಳ ಮೂಲಕ ಪಾರದರ್ಶಕವಾಗಿ ನಡೆಯುವಂತೆ ಮಾಡಿ ಸರ್ಕಾರಿ ಬೊಕ್ಕಸದಿಂದ ತೆರಿಗೆ ಸೋರಿಕೆಯಾಗುವುದನ್ನು ತಪ್ಪಿಸುವುದು. ಕಳೆದ ಸಪ್ಟಂಬರ್‌ವರೆಗೆ ಜಾರಿಯಲ್ಲಿದ್ದ ಸ್ವಯಂಪ್ರೇರಿತ ಕಪ್ಪು ಹಣ ಘೋಷಣೆ ಯೋಜನೆಯ ಅಡಿಯಲ್ಲಿ ಸರ್ಕಾರ ಬೊಕ್ಕಸಕ್ಕೆ 29 ಸಾವಿರ ಕೋಟಿ ರೂ ನಷ್ಟು ಸಂಗ್ರಹವಾಗಿದೆ. ಇದರಿಂದ ತೆರಗೆ ವಂಚನೆ ಎಷ್ಟು ಆಳವಾಗಿದೆ ಎನ್ನುವುದನ್ನು ಅಂದಾಜಿಸಬಹುದು. 
  • ಒಂದು ಅಂದಾಜಿನ ಪ್ರಕಾರ ಎರಡು ಲಕ್ಷ ನೋಟುಗಳಲ್ಲಿ 250ರಷ್ಟು ನಕಲಿ ಚಲಾವಣೆಯಲ್ಲಿದ್ದು ಇವುಗಳಲ್ಲಿ ಬಹುತೇಕ ಐದುನೂರು ಮತ್ತು ಸಾವಿರ ಮುಖಬೆಲೆಯವಾಗಿವೆ. ನಕಲಿ ನೋಟುಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ನುಸುಳಿ ಬರುತ್ತಿದ್ದು ಭಯೋತ್ಪಾದಕ ಚಟುವಟಿಗೆ ಬಂಡವಾಳವನ್ನು ಓದಗಿಸುತ್ತಿರುವುದು ತನಿಖೆಗಳಿಂದ ಸ್ಪಷ್ಟವಾಗಿದೆ. ಪಶ್ಚಿಮ ಬಂಗಾಳದ ಮಾಲ್ಡಾದಂತಹ ಗಡಿಯ ಜಿಲ್ಲೆಗಳು ನಕಲಿ ನೋಟು ತಯಾರಿಕೆಯ ಕಾರ್ಖಾನೆಗಳಾಗಿವೆ.
  • ಗಡಿಯಾಚೆಯಿಂದ ಅದರಲ್ಲೂ ವಿಶೇಷವಾಗಿ ಪಾಕಿಸ್ತಾನದಿಂದ ಭಯೋತ್ಪಾದಕ ಚಟುವಟಿಕೆಗಳಿಗೆ ಅಗಾಧ ಪ್ರಮಾಣದ ಹಣ ಪೋರೈಕೆಯಾಗುತ್ತಿದ್ದು ಇತ್ತೀಚಿನ ಕಾಶ್ಮೀರ ಕಣಿವೆಯ ಹಿಂಸಾಚಾರಗಳ ಮೂಲ ಇದರಲ್ಲಡಗಿದೆ. ಜೊತೆಗೆ ನಕ್ಸಲ್-ಮಾವೋವಾದಿ ಭಯೋತ್ಪಾದನೆಗಳಿಗೆ ಕಪ್ಪು ಹಣ ಬಳಕೆಯಾಗುತ್ತಿದೆ.
  • ಚುನಾವಣೆಗಳಲ್ಲಿ ಕಪ್ಪು ಹಣದ ಆಟ ತುಂಬಾ ಜೋರಾಗಿ ನಡೆಯವುದು ಸ್ಪಷ್ಟವಾಗಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ.
  • ಮಾದಕದ್ರವ್ಯ ಸಾಗಣೆಯ ಜಾಲ ನಿಂತಿರುವುದ ಕಪ್ಪು ಹಣದ ಮೇಲೆ, ವಿಶೇಷವಾಗಿ ಪಂಜಾಬ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ವ್ಯವಸ್ಥಿತವಾಗಿ ಹರಡಿರುವ ಈ ಜಾಲ ದೇಶದ ಯುವಜನತೆಯ ಬದುಕನ್ನೇ ನಾಶಮಾಡುತ್ತದೆ.
  • ರಿಯಲ್ ಎಸ್ಟೇಟ್ ಮಾಫಿಯ, ಸ್ಮಗ್ಲಿಂಗ್ ಮಾಫಿಯಾ, ಫೈನಾನ್ಸ್ ಲೇವಾದೇವಿ ಮಾಫಿಯ, ಕಳ್ಳಭಟ್ಟಿ, ಶಸ್ತ್ರಾಸ್ತ್ರ ಕಳ್ಳಸಾಗಣೆ ಮೊದಲಾದ ವ್ಯವಹಾರಗಳಿಗೆ ಕಪ್ಪು ಹಣವೇ ಆಧಾರ.


ಸರ್ಕಾರದ ಈ ದಿಟ್ಟ ಕ್ರಮದಿಂದ ಈಗಲೇ ಅನೇಕ ಧನಾತ್ಮಕ ಪರಿಣಾಮಗಳು ಗೋಚರವಾಗುತ್ತಿವೆ.
  • ಕೇವಲ ಏಳು ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಜಮೆಯಾಗಿರುವ ಮೊತ್ತ 4 ಲಕ್ಷ ಕೋಟಿ ರೂಪಾಯಿಗೂ ಅಧಿಕ
  • ಭಯೋತ್ಪಾದಕ ಕೃತ್ಯಗಳಿಗೆ ಬಳಕೆಯಾಗುತ್ತಿದ್ದ ಕಪ್ಪು ಹಣಕ್ಕೆ ನಿಯಂತ್ರಣ ಹಾಕಿದಂತಾಗಿದೆ. ಹಾಗಯೇ ನಕ್ಸಲ್ ಚಟುವಟಿಕೆಗಳಿಗೂ ಲಗಾಮು ಹಾಕಿದಂತಾಗಿದೆ. ಇದ್ದಕ್ಕಿದ್ದಂತೇ ಕಾಶ್ಮೀರದ ಕಲ್ಲೆಸೆತಗಾರರು ಮಾಯವಾಗಿದ್ದು ಕಣಿವೆಯಲ್ಲಿ ಶಾಂತಿ ಮರುಕಳಿಸಿದೆ, ಜನಜೀವನ ಸಹಜವಾಗಿದೆ.
  • ಆದಾಯ ತೆರಿಗೆ ಇಲಾಖೆಯ ದಾಳಿಗಳಲ್ಲಿ ಅಡಗಿಸಿಟ್ಟ ಅಪಾರ ಪ್ರಮಾಣದ ಕಪ್ಪು ಹಣ ಸಿಗುತ್ತಿದೆ, ಅನೇಕ ಧನಿಕ ಖುಳಗಳು ಬೆತ್ತಲಾಗುತ್ತಿದ್ದಾರೆ. ಕಪ್ಪು ಹಣ ಕಳ್ಳಸಾಗಣೆಯ ವೇಳೆ ಪೋಲೀಸರ ಕೈವಶವಾದ ಅನೇಕ ಪ್ರಕರಣಗಳು ವರದಿಯಾಗಿವೆ.
  • ಒಂದೇ ಹೊಡೆತಕ್ಕೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಹರಿದು ಬರುತ್ತಿದ್ದ ಖೋಟಾ ನೋಟುಗಳು ನಿಃಷ್ಪ್ರಯೋಜಕಗೊಂಡಿವೆ .
  • ಕಾನೂನು ಬಾಹಿರವಾಗಿ ಮತಾಂತರದಲ್ಲಿ ತೊಡಗಿದ್ದ ಹಲವು ಸಂಘಟನೆಗಳ ಹಣದ ಓಳಹರಿವಿನ ಮೂಲಗಳಿಗೆ ಕೊಡಲಿ ಏಟು ನೀಡಿದಂತಾಗಿದೆ.
  • ವಿದ್ಯುತ್ ಬಿಲ್ ಹಾಗೂ ಭೂ ಕಂದಾಯ ಪಾವತಿಸಲು ಹಳೇ ನೋಟನ್ನು ಸ್ವೀಕರಿಸುತ್ತಿರುವುದರಿಂದ, ಬಾಕಿಯಿದ್ದ ತೆರಿಗೆ, ಕಂದಾಯ, ವಿದುಯುತ್ ಬಿಲ್ ಇತ್ಯಾದಿಗಳು ದಾಖಲೆಯ ವೇಗದಲ್ಲಿ ಪಾವತಿಯಾಗುತ್ತಿವೆ.
  • ಮುಂದಿನ ದಿನಗಳಲ್ಲಿ ನಿವೇಶನಗಳು ಹಾಗೂ ಮನೆಗಳ ಬೆಲೆಗಳು ಇಳಿಕೆಯಾಗಲಿದ್ದು, ಹೂಡಿಕೆಗಾಗಿ ಖರೀದಿಸುವವರಿಗಿಂತ, ಸ್ವಂತ ಸೂರಿಗಾಗಿ ಖರೀದಿಸುವವರಿಗೆ ಇದರ ಹೆಚ್ಚಿನ ಲಾಭ ದೊರೆಯಲಿದೆ ಎನ್ನುವುದು ತಜ್ಞರ ಅಭಿಪ್ರಾಯ
  • ಹಣಕಾಸಿನ ವ್ಯವಹಾರಗಳು ನಗದಿನ ಬದಲು ಬ್ಯಾಂಕ್‌ಗಳ ಮೂಲಕ ಹೆಚ್ಚಾಗಿ ನಡೆಯುದರಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಉತ್ತೇಜನ  ದೊರಕಲಿದ್ದು, ಸಾಲಗಳ ಮೇಲಿನ ಬಡ್ಡಿದರಗಳೂ ಕಡಿಮೆಯಾಗುವ ಸಾದ್ಯತೆಯಿದೆ. ಸರ್ಕಾರ ಇದರ ಸೂಚನೆಯನ್ನು ನೀಡಿದೆ
  • ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆ ಮೊಬೈಲ್ ಮುಖಾಂತರ ಹಣಕಾಸಿನ ವಿನಿಮಯ ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಬಳಕೆ ಗಣನೀಯವಾಗಿ ಏರಿಕೆಯಾಗಲಿದ್ದು ಆರ್ಥಿಕ ವ್ವವಸ್ಥೆ ಕ್ಯಾಶ್‌ಲೆಸ್ ಆಗುವತ್ತ ಮುನ್ನಡೆಯಲಿದೆ.
  • ಆದಾಯ ತೆರಿಗೆ ಪಾವತಿದಾರರ ಸಂಖ್ಯೆ ಪ್ರಸ್ತುತ ಕೆವಲ 3% ಆಗಿದ್ದು ಈ ಸಂಖ್ಯೆಯಲ್ಲಿ ಮಹತ್ತರ ಏರಿಕೆಯಾಗಲಿದೆ. ಇದರಿಂದ ಒಟ್ಟಾರೆ ತೆರಿಗೆ ದರದಲ್ಲಿ ಇಳಿಕೆಯಾಗಲಿದ್ದು  ಪ್ರಾಮಾಣಿಕ ತೆರಿಗೆದಾರರ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
  • ಸರ್ಕಾರಕ್ಕೆ ಬರುವ ಹೆಚ್ಚಿನ ಆಧಾಯದಿಂದಾಗಿ ರಕ್ಷಣೆ, ವಿದ್ಯುತ್, ಶಿಕ್ಷಣ, ಆರೋಗ್ಯ ಹಾಗೂ ವಸತಿ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಸಾದ್ಯತೆಯಿದ್ದು, ಸಮಾಜ ಕಲ್ಯಾಣ ಯೋಜನೆಗಳಿಗೆ ನೀಡುವ ಅನುದಾನದಲ್ಲಿ ವೃದ್ಧಿಯಾಗಲಿದೆ.
  • ಕಳೆದ ಎರಡು ವರ್ಷಗಳಿಂದ ಆರ್ಥಿಕ ಸಮಾನತೆ ಗುರಿಯೊಂದಿಗೆ ಸರ್ವರಿಗೂ ಬ್ಯಾಂಕ್ ಖಾತೆ ತೆರೆಯಲು ಫ್ರಧಾನಿ ನೀಡಿದ್ದ ಕರೆ ಹಾಗೂ ಜನ್-ಧನ್ ಯೋಜನೆಯಡಿ ತೆರೆಯಲಾಗಿದ್ದ 25 ಕೋಟಿ ಬ್ಯಾಂಕ್ ಖಾತೆಗಳ ಬಳಕೆ ಹೆಚ್ಚಾಗಿದೆ.
  • ನಗದು ಬದಲಾವಣೆ ಅಥವಾ ಠೇವಣಿಗಳ ಮೂಲಕ 14 ಲಕ್ಷ ಕೋಟಿಗಳಲ್ಲಿ ಶೇಕಡ 75ರಷ್ಟು ಬ್ಯಾಂಕುಗಳಿಗೆ ಜಮೆಯಾದರೂ ಸುಮಾರು 10.5 ಲಕ್ಷ ಕೋಟಿಯಷ್ಟು ಅಗಾಧ ಪ್ರಮಾಣದ ಹಣ ಬ್ಯಾಂಕಿಂಗ್ ಕ್ಷೇತ್ರದ ವ್ಯವಹಾರಕ್ಕೆ ಸಿಕ್ಕಿದಂತೆ ಆಗುತ್ತದೆ. ಉಳಿದ ಕಪ್ಪು ಹಣ ನಷಿಸಿ ಹೋಗುವುದರಿಂದ ಕಪ್ಪು ಆರ್ಥಿಕತೆಗೆ ದೊಡ್ಡ ನಷ್ಟವಾಗುವುದಂತೂ ನಿಜ. 


ಅಪನಗದೀಕರಣದಿಂದಾಗಿ ನಗದಿನ ನಡೆಯುವ ವಹಿವಾಟುಗಳು ಮಂದಗತಿಯಲ್ಲಿ ಸಾಗುವುದು ಮತ್ತು ಸಾಮಾನ್ಯ ನಾಗರಿಕರಿಗೆ ಕೆಲವು ಕಾಲ ತೊಂದರೆಯಾಗುವುದು ನಿಜವಾದರೂ ಒಟ್ಟಾರೆ ದೇಶದ ಆರ್ಥಿಕ ಪ್ರಗತಿಗೆ ಮತ್ತು ಭವಿಷ್ಯದಲ್ಲಿ ಎಲ್ಲ ವರ್ಗಗಳಿಗೂ ಇದು ಹಿತವಾಗಿ ಪರಿಣಮಿಸುವುದು ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ಜೊತೆಗೆ ಕಪ್ಪು ಹಣದ ವಿರುದ್ಧದ ಹೋರಾಟದ ಗೆಲುವು ಸೋಲು ದೇಶದ ನಾಗರಿಕರು ಹೇಗೆ ಸ್ಪಂದಿಸುತ್ತಾರೆ ಎನ್ನುವುದರ ಮೇಲೂ ನಿಂತಿದೆ.

ಜಮ್ಮು ಕಾಶ್ಮೀರದ ನಿರಾಶ್ರಿತರ ದಶಕಗಳ ನೋವಿಗೆ ಒಂದಿಷ್ಟು ಸಾಂತ್ವನ

(ವಿಕ್ರಮ 22/01/2017)

ವಿಶ್ವಸಂಸ್ಥೆಯ ನಿರಾಶ್ರಿತರ ಕಲ್ಯಾಣ ಸಂಸ್ಥೆ (UNHRC) ಪ್ರಕಾರ ಶೋಷಣೆ, ಯುದ್ಧ ಅಥವಾ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ತನ್ನ ದೇಶ ಬಿಟ್ಟು ವಲಸೆಹೋಗುವವರನ್ನು ನಿರಾಶ್ರಿತರು ಎನ್ನಲಾಗುತ್ತದೆ. ಈ ವಲಸೆಗೆ ಜನಾಂಗೀಯ, ಮತೀಯ ಅಥವಾ ರಾಜಕೀಯ ಹಿಂಸೆಗಳು ಕಾರಣವಾಗಿರಬಹುದು. ಇಂತಹ ವಲಸೆ ಬಹುತೇಕ ಅವರು ಪುನಃ ತಮ್ಮ ಸ್ಥಳಗಳಿಗೆ ಮರಳಲು ಅಸಾಧ್ಯವಾಗಿರುವ ಸನ್ನಿವೇಶ ನಿರ್ಮಾಣವಾದಾಗ ನಡೆಯುತ್ತದೆ.  ಹಾಗೆಯೇ ಆಂತರಿಕ ಸ್ಥಳಾಂತರ ಒಳಗಾದ ವ್ಯಕ್ತಿಗಳು(internal displaced persons) ಎನ್ನುವ ಇನ್ನೊಂದು ರೀತಿಯ ನಿರಾಶ್ರಿತರು ಈ ಮೇಲಿನ ಕಾರಣಗಳಿಗೆ ತಮ್ಮ ಮನೆಗಳನ್ನು ಬಿಟ್ಟು ಅದೇ ದೇಶದ ಬೇರೆ ಪ್ರದೇಶಕ್ಕೆ ವಲಸೆ ಹೋಗಿರುತ್ತಾರೆ, ಅಂದರೆ ಅಂತರರಾಷ್ಟ್ರೀಯ ಗಡಿಯನ್ನು ದಾಟಿರುವುದಿಲ್ಲ. ಇನ್ನೊಂದು ರೀತಿಯ ನಿರಾಶ್ರಿತರನ್ನು ಸ್ಟೇಟ್‌ಲೆಸ್ ಸಿಟಿಜನ್ ಎನ್ನಲಾಗುತ್ತದೆ. ಯಾವುದೇ ದೇಶದ ನಾಗರಿಕತೆಯನ್ನು ಹೊಂದಿರದ ಇವರನ್ನೂ ನಿರಾಶ್ರಿತರ ಪಟ್ಟಿಯೊಳಗೆ ಸೇರಿಸಬಹುದು. ಇಂತಹ ಲಕ್ಷಾಂತರ ಜನರು ನಿರಾಶ್ರಿತರಾಗಿ ಕಳೆದ ಎಪ್ಪತ್ತು ವರ್ಷಗಳಿಂದ ಮೂಲಭೂತ ಹಕ್ಕುಗಳಿಂದ ವಂಚಿತರಾಗಿ ನಮ್ಮದೇ ದೇಶದ ಜಮ್ಮು ಕಾಶ್ಮೀರದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಒಂದು ರೀತಿಯಲ್ಲಿ ಜಮ್ಮುವನ್ನು ನಿರಾಶ್ರಿತರ ಕೇಂದ್ರ ಎಂದೇ ಕರೆಯಬಹುದು. ಜಮ್ಮುವಿನ ನಿರಾಶ್ರಿತರ ಒಟ್ಟೂ ಸಂಖ್ಯೆ ಇಪ್ಪತ್ತು ಲಕ್ಷಕ್ಕೂ ಹೆಚ್ಚು. ಇವರಲ್ಲಿ 1947 ದೇಶ ವಿಭಜನೆ, 1965, 1971ರ ಯುದ್ಧ ಸಂದರ್ಭಗಳಲ್ಲಿ ಪಶ್ಚಿಮ ಪಾಕಿಸ್ತಾನದಿಂದ ಪಲಾಯನಗೈದು ಬಂದ ಹಿಂದೂ ಹಾಗೂ ಸಿಖ್ ನಿರಾಶ್ರಿತರು, ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಪ್ರದೇಶದಿಂದ ಹೊರದಬ್ಬಲ್ಪಟ್ಟವರು, ಪೂಂಛ್ ಮೊದಲಾದ ಗಡಿಪ್ರದೇಶಗಳಲ್ಲಿ ಯುದ್ಧ ಸಮಯದಲ್ಲಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದವರು, 1985ರಿಂದ 1995ರವರೆಗೆ ಕಾಶ್ಮೀರ ಕಣಿವೆಯ ಮತಾಂಧ ಮುಸಲ್ಮಾನರ ದೌರ್ಜನ್ಯಕ್ಕೆ ಬಲಿಯಾಗಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡ ಕಾಶ್ಮೀರಿ ಪಂಡಿತರು ಸೇರಿದ್ದಾರೆ. ಇವರ ಜೊತೆಗೆ, 1957ರಲ್ಲಿ ಸಫಾಯಿ ಕರ್ಮಚಾರಿ ಕೆಲಸಕ್ಕೆಂದು ಹೊರರಾಜ್ಯಗಳಿಂದ ವಾಲ್ಮೀಕಿ ದಲಿತ ಸಮುದಾಯದ 70 ಕುಟುಂಬಗಳನ್ನು ರಾಜ್ಯಕ್ಕೆ ಕರೆಸಿಕೊಳ್ಳಲಾಯಿತು. ಇಂದು ಈ ಸಮುದಾಯಕ್ಕೆ ಸೇರಿದ 500 ಕುಟುಂಬಗಳಿಗೆ ರಾಜ್ಯದ ಖಾಯಂ ನಿವಾಸಿಗಳೆಂದು ಮಾನ್ಯತೆ ಸಿಕ್ಕಿಲ್ಲ. ಅವರೂ ಒಂದು ರೀತಿಯ ನಿರಾಶ್ರಿತರೇ.

ಜಮ್ಮು ಕಾಶ್ಮೀರದ ನಿರಾಶ್ರಿತರ ಬವಣೆಗಳ ಕಥೆ ಬಗೆದಷ್ಟೂ ಆಳಕ್ಕೆ ಇಳಿಯುತ್ತದೆ. ಮುಸ್ಲಿಂ ಮೂಲಭೂತವಾದ ಪ್ರೇರಿತ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿಗಳು, ರಾಜ್ಯದ ರಾಜಕೀಯ ಮತ್ತು ದಿಕ್ಕು ದಿಸೆಯಿಲ್ಲದ ಕೇಂದ್ರ ಸರ್ಕಾರದ ನೀತಿಗಳು ಇವುಗಳ ನಡುವೆ ನಿಜವಾಗಿಯೂ ಶೋಷಣೆಗೊಳಗಾದವರು ಈ ನಿರಾಶ್ರಿತರು. ಆಗೊಮ್ಮೆ ಈಗೊಮ್ಮೆ ನಿರಾಶ್ರಿತ ಪುನರ್ವಸತಿ, ಪರಿಹಾರ, ಸ್ಟೇಟ್ ಸಬ್ಜೆಕ್ಟ್ ಪ್ರಮಾಣಪತ್ರ ನೀಡುವ ಕುರಿತು ಚರ್ಚೆಗಳು ನಡೆದರೂ ಒಂದಲ್ಲ ಒಂದೂ ನೆವ ನೀಡಿ ಯೋಜನೆಯನ್ನು ದಾರಿತಪ್ಪಿಸುವ ಕೆಲಸ ನಿರಂತರ ನಡೆದು ಬಂದಿದೆ. ಈ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಕಾರಾತ್ಮಕ ನೀತಿಯಿಂದ ಇತ್ತೀಚೆಗೆ ಎರಡು ಯೋಜನೆಗಳು ಪ್ರಚಲಿತಕ್ಕೆ ಬಂದವು. ಒಂದು ಸ್ಟೇಟ್ ಸಬ್ಜೆಕ್ಟ್ ಪ್ರಮಾಣಪತ್ರಕ್ಕಾಗಿ ಕಳೆದ ಏಳು ದಶಕಗಳಿಂದ ಹಕ್ಕೊತ್ತಾಯ ಮಾಡುತ್ತಿರುವ ಪಶ್ಚಿಮ ಪಾಕಿಸ್ತಾನದಿಂದ ನಿರಾಶ್ರಿತರಾಗಿ ವಲಸೆ ಬಂದವರಿಗೆ ನಿವಾಸಿ ಪ್ರಮಾಣಪತ್ರ ನೀಡುವ ಯೋಜನೆ. ಇನ್ನೊಂದು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಛಂಬ್ ಪ್ರದೇಶಗಳಿಂದ ಮನೆ ಮತ್ತು ಆಸ್ತಿಪಾಸ್ತಿ ಕಳೆದುಕೊಂಡು ವಲಸೆ ಬಂದವರಿಗೆ ಪರಿಹಾರ ನೀಡಲು ೨೦೦೦ ಕೋಟಿ ರೂಪಾಯಿಗಳ ಹಣ ಬಿಡುಗಡೆ.

ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರಿಗೆ ನಿವಾಸಿ ಹಾಗೂ ಗುರುತಿನ ಪ್ರಮಾಣಪತ್ರ
ದೇಶವಿಭಜನೆಯ ನಂತರ ನಡೆದ 1951ರ ಜನಗಣತಿಯಲ್ಲಿ 72 ಲಕ್ಷ 95ಸಾವಿರದಷ್ಟು ಜನ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನದಿಂದ(ಇಂದಿನ ಬಾಂಗ್ಲಾದೇಶದಿಂದ) ಭಾರತಕ್ಕೆ ವಲಸೆ ಬಂದರು. ಹೀಗೆ ಪಶ್ಚಿಮ ಪಾಕಿಸ್ತಾನದಿಂದ ವಲಸೆ ಬಂದ ಸುಮಾರು 47ಲಕ್ಷ ಜನರಲ್ಲಿ ಬಹುತೇಕ ಹಿಂದೂ ಮತ್ತು ಸಿಖ್ ಸಮುದಾಯಗಳಿಗೆ ಸೇರಿದವರು. ಇವರೆಲ್ಲ ಪಂಜಾಬ್, ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಮುಂಬೈ ಮೊದಲಾದ ದೇಶದ ವಿವಿಧ ಭಾಗಗಳಿಗೆ ಹೋಗಿ ನೆಲೆಸಿದರು. ಆದರೆ ಇವರಲ್ಲಿ 567 ಕುಟುಂಬಗಳು ನೆಲೆಗೊಳ್ಳಲು ಜಮ್ಮು ಕಾಶ್ಮೀರವನ್ನು ಆಯ್ದುಕೊಂಡರು, ಕಾರಣ ಸಿಯಾಲಕೊಟ್ ಮತ್ತು ಶಕರ್‌ಘರ್ ಪ್ರದೇಶಗಳಿಂದ ವಲಸೆ ಬಂದ ಅವರಿಗೆ ಮಾನಸಿಕವಾಗಿ ಜಮ್ಮು ಕಾಶ್ಮೀರ ಹತ್ತಿರವಾಗಿತ್ತು, ಇಲ್ಲಿದ್ದರೆ ತಮ್ಮ ಬೇರಿನೊಂದಿಗೆ ಜೋಡಿಕೊಂಡಿರಬಹುದೆಂದು ಅವರು ಭಾವಿಸಿದ್ದರು. ದೇಶದ ಉಳಿದ ರಾಜ್ಯಗಳಿಗೆ ತೆರಳಿ ವಾಸವಾದವರೆಲ್ಲ ಭಾರತದ ನಾಗರಿಕರಾದರು. ಪಾಕಿಸ್ತಾನದಿಂದಲೇ ಬಂದ ಐಕೆ ಗುಜ್ರಾಲ್, ಮನಮೋಹನ್ ಸಿಂಗ್ ದೇಶದ ಪ್ರಧಾನ ಮಂತ್ರಿಗಳೂ ಆದರು, ಇಂದು ಪಾಕಿಸ್ತಾನವಾಗಿರುವ ಪ್ರದೇಶದನಲ್ಲೇ ಜನಿಸಿದ ಲಾಲ್‌ಕೃಷ್ಣ ಆಡ್ವಾಣಿ ದೇಶದ ಉಪಪ್ರಧಾನಿಯೂ ಆದರೆ. ಇವರೊಂದಿಗೇ ವಲಸೆ ಬಂದು ಜಮ್ಮು ಕಾಶ್ಮೀರದಲ್ಲಿ ನೆಲೆಸಿದವರು ಭಾರತದ ನಾಗರಿಕರಾಗಿದ್ದಾರೆ ನಿಜ ಆದರೆ ಇನ್ನೂ ಜಮ್ಮು ಕಾಶ್ಮೀರದ ಖಾಯಂ ನಿವಾಸಿಗಳಲ್ಲ! ಜಮ್ಮು ಕಾಶ್ಮೀರ ಸಂವಿಧಾನದ ವಿಧಿ 6ರ ದುರುಪಯೋಗದಿಂದ ಇವರಿಗೆ ರಾಜ್ಯದ ಖಾಯಂ ನಿವಾಸಿ(ಸ್ಟೇಟ್ ಸಬ್ಜೆಕ್ಟ್) ಮಾನ್ಯತೆ ನೀಡದೇ ವಂಚಿಸಲಾಗಿದೆ. ಆದ್ದರಿಂದ 70 ವರ್ಷಗಳ ನಂತರ ಇವರ ಮೂರನೇ ತಲೆಮಾರಿನ 19 ಸಾವಿರಕ್ಕೂ ಹೆಚ್ಚು ಕುಟುಂಬಗಳು ಇನ್ನೂ ಯಾವುದೇ ರಾಜ್ಯದ ಆಶ್ರಯ ಸವಲತ್ತುಗಳಿಲ್ಲದೆ, ಅದಕ್ಕಿಂತ ಹೆಚ್ಚಾಗಿ ರಾಜ್ಯದ ನಿವಾಸಿಗಳೆಂಬ ಮಾನ್ಯತೆಯೇ ಇಲ್ಲದೆ ಜೀವನ ಸಾಗಿಸುತ್ತಿವೆ. ರಾಜ್ಯ ಸರ್ಕಾರದ ನೌಕರಿ, ಶಿಕ್ಷಣ, ವೈದ್ಯಕೀಯ ಹಾಗೂ ಇತರೆ ಸವಲತ್ತುಗಳನ್ನು ಪಡೆದುಕೊಳ್ಳುವ ಹಕ್ಕು ಇವರಿಗಿಲ್ಲ. ಭಾರತದ ನಾಗರಿಕರಾಗಿ ಲೋಕಸಭೆಯ ಚುನಾವಣೆಯಲ್ಲಿ ಮತ ಚಲಾಯಿಸಬಹುದು, ಸ್ಫರ್ಧಿಸಲೂ ಬಹುದು ಆದರೆ ರಾಜ್ಯ ವಿಧಾನಸಭೆ, ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಾಲ್ಗೊಳ್ಳುವಂತೆ ಇಲ್ಲ ಮತಾಧಿಕಾರವೂ ಇವರಿಗಿಲ್ಲ.

ತಮ್ಮನ್ನು ರಾಜ್ಯದ ಖಾಯಂ ನಿವಾಸಿಗಳೆಂದು ಪರಿಗಣಿಸಿ ಸ್ಟೇಟ್ ಸಬ್ಜೆಕ್ಟ್ ಮಾನ್ಯತೆ ನೀಡಬೇಕೆನ್ನುವುದು ಈ ನಿರಾಶ್ರಿತರ ದಶಕಗಳ ಬೇಡಿಕೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸರ್ಕಾರವು ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರಿಗೆ ಕೇಂದ್ರ ಗೃಹ ಮಂತ್ರಾಲಯದ ನಿರ್ದೇಶನದ ಅನ್ವಯ ನಿವಾಸಿ/ಗುರುತಿನ ಪ್ರಮಾಣಪತ್ರ (nativity/identity certificate) ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಪ್ರಮಾಣಪತ್ರವು ಇದನ್ನು ಹೊಂದಿರುವವನು ಪಶ್ಚಿಮ ಪಾಕಿಸ್ತಾನದ ನಿರಾಶ್ರಿತನಾಗಿದ್ದು ದೇಶವಿಭಜನೆಯ ನಂತರ ಜಮ್ಮು ಕಾಶ್ಮೀರದಲ್ಲಿ ನೆಲೆಸಿಸದ್ದಾನೆ ಎಂದಷ್ಟೇ ಪ್ರಮಾಣೀಕರಿಸಿಲಿದೆ. ಆದರೆ ಇದು ಜಮ್ಮು ಕಾಶ್ಮೀರದ ನಾಗರಿಕರಿಗೆ ಸಮಾನವಾದ ಸ್ಟೇಟ್ ಸಬ್ಜೆಕ್ಟ್ ಮಾನ್ಯತೆಯಲ್ಲ ಎಂದೂ ಸ್ಪಷ್ಟಪಡಿಸಿದೆ. ಏನೇ ಆದರೂ ಈ ನಿರ್ಧಾರವು ಮುಂಬರುವ ದಿನಗಳಲ್ಲಿ ಪಾಕ್ ನಿರಾಶ್ರಿತರು ರಾಜ್ಯದ ನಾಗರಿಕತ್ವ ಪಡೆಯುವ ನಿಟ್ಟಿನಲ್ಲಿ ಒಂದು ಆಶಾಭಾವವನ್ನು ಹೆಚ್ಚಿಸಿದೆ.

ಆದರೆ ದುರದೃಷ್ಟದ ಸಂಗತಿಯೆಂದರೆ ಎಂದಿನಂತೆ ಕಾಶ್ಮೀರಿ ಕಣಿವೆಯ ವಿರೋಧ ಪಕ್ಷಗಳು ಸರ್ಕಾರ ಗುರುತಿನ ಚೀಟಿ ನೀಡುವುದನ್ನೂ ವಿರೋಧಿಸಿವೆ. ಎಂದಿನಂತೆ ಪ್ರತ್ಯೇಕತಾವಾದಿಗಳು ಹರತಾಳ, ಪ್ರದರ್ಶನ, ಹಿಂಸಾಚಾರಕ್ಕೆ ಮುಂದಾಗುತ್ತಿದ್ದಾರೆ. ರಾಜ್ಯದ ಜನಸಂಖ್ಯಾ ಸಮತೋಲನವನ್ನು ಬದಲಾಯಿಸಲಾಗುತ್ತಿದೆ, ಜಮ್ಮು ಕಾಶ್ಮೀರದ ಸ್ವಾಯತ್ತತೆಗೆ ಭಂಗವಾಗುತ್ತಿದೆ, 370ನೇ ವಿಧಿಯ ಭಂಗವಾಗುತ್ತಿದೆ ಇತ್ಯಾದಿಯಾಗಿ ಬೊಬ್ಬಿರಿಯಲಾಗುತ್ತಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಆಂತರಿಕ ಸ್ಥಳಾಂತರಿತ ನಿರ್ವಸಿತರಿಗೆ ಪರಿಹಾರ
1947ರಲ್ಲಿ ಸ್ವಾತಂತ್ರ ಬಂದ ಹೊಸ್ತಿಲಲ್ಲಿ ಪಾಕಿಸ್ತಾನ ಜಮ್ಮು ಕಾಶ್ಮೀರದ ಮೇಲೆ ಆಕ್ರಮಣ ಮಾಡಿ ಮುಜಾಫರಾಬಾದ್, ಮಿರಪುರ್, ಪೂಂಛ್, ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶಗಳ ಒಂದಿಷ್ಟು ಭಾಗವನ್ನು ಆಕ್ರಮಿಸಿಕೊಂಡಾಗ ಅಲ್ಲಿನ ಬಹುತೇಕ ಹಿಂದೂ ಮತ್ತು ಸಿಖ್ ನಿವಾಸಿಗಳು ಹೊರದಬ್ಬಲ್ಪಟ್ಟರು. ಹೀಗೆ ಮನೆ ಮಠ ಆಸ್ತಿ ಪಾಸ್ತಿ ಎಲ್ಲವನ್ನೂ ಕಳೆದುಕೊಂಡ ಈ ಕುಟುಂಬಗಳಿಗೆ ಜಮ್ಮುವಿನ ನಿರಾಶ್ರಿತ ಶಿಬಿರಗಳಲ್ಲಿ ವಸತಿ ಕಲ್ಪಿಸಲಾಯಿತು. ನಂತರ ಭಾರತೀಯ ಸೇನೆಯ ಪರಾಕ್ರಮದಿಂದ ಯುದ್ಧವೇನೋ ನಿಂತಿತು. ಆದರೆ ಅಂದಿನ ಪ್ರಧಾನಿ ನೆಹರು ಪ್ರಣೀತ ವಿದೇಶಿ ನೀತಿಯಿಂದ ವಿಶ್ವಸಂಸ್ಥೆಗೆ ವಿವಾದವನ್ನು ಕೊಂಡೊಯ್ಯಲಾಗಿ ರಾಜ್ಯದ ದೊಡ್ಡ ಭಾಗ (ಇಂದಿನ ಪಾಕ್ ಆಕ್ರಮಿತ ಕಾಶ್ಮೀರ) ಪಾಕಿಸ್ತಾನದ ವಶದಲ್ಲೇ ಉಳಿಯಿತು. ಈ ಪ್ರದೇಶದಿಂದ ನಿರ್ವಸಿತರಾದವರಿಗೆ ಸಮಸ್ಯೆ ಪರಿಹಾರವಾದ ಬಳಿಕ ಮರಳಿ ತಮ್ಮ ಪ್ರದೇಶಗಳಿಗೆ ತೆರಳಬಹುದು, ಪುನಃ ತಮ್ಮ ಮನೆ ಆಸ್ತಿಗಳನ್ನು ಪಡೆದುಕೊಂಡು ಜೀವನ ಸಾಗಿಸಬಹುದೆಂದು ಹೇಳುತ್ತಲೇ ಬರಲಾಯಿತು. ಆದರೆ ಎಪ್ಪತ್ತು ವರ್ಷಗಳ ದೀರ್ಘ ಕಾಲದ ನಂತರ, ಈ ನಿರ್ವಸಿತ ಜನರ ಮೂರು ತಲೆಮಾರು ಕಳೆದರೂ ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆ ಪರಿಹಾರವಾಗಬಹುದು ಎನ್ನುವುದು ನಂಬಲರ್ಹವಲ್ಲವಾಗಿಲ್ಲ. ಇವರ ಜೊತೆಗೆ 1965 ಮತ್ತು 1971ರ ಯುದ್ಧ ಸಂದರ್ಭಗಳಲ್ಲಿ ಛಂಬ್ ಸೆಕ್ಟರ್ ಮೊದಲಾದ ಗಡಿ ಪ್ರದೇಶಗಳಿಂದ ನಿರ್ವಸಿತರಾದವರೂ ಸಹ ನಿರಾಶ್ರಿತರ ಶಿಬಿರಗಳಲ್ಲಿ ಸೇರಿಕೊಂಡರು.
ರಾಜ್ಯದ ನಾಗರಿಕರೇ(ಸ್ಟೇಟ್ ಸಬ್ಜೆಕ್ಟ್) ಆದರೂ ಆಂತರಿಕ ಸ್ಥಳಾಂತರದಿಂದ ನಿರಾಶ್ರಿತರಾದ ಇಂತಹ 36ಸಾವಿರಕ್ಕೂ ಹೆಚ್ಚು ಕುಟುಂಬಗಳು ಪರಿಹಾರದ ನಿರೀಕ್ಷೆಯಲ್ಲಿ ದಶಕಗಳನ್ನು ಕಳೆದಿವೆ.

ಈ ನಿಟ್ಟಿನಲ್ಲಿ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ ನಿರ್ವಸಿತಿರಿಗೆ ಪರಿಹಾರ ನೀಡುವ ಸಲುವಾಗಿ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೆಜ್ ಅಡಿಯಲ್ಲಿ 2000 ಕೋಟಿ ರೂಪಾಯಿಗಳ ಪುನರ್ವಸತಿ ನಿಧಿಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ನಿರಾಶ್ರಿತ ಕುಟುಂಬದ ಪ್ರತಿ ಸದಸ್ಯನಿಗೆ 5.5ಲಕ್ಷ ರೂಪಾಯಿಯಂತೆ ಅವರ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುವುದು ಹಾಗೂ ಕೇಂದ್ರ ಗೃಹ ಮಂತ್ರಾಲಯ ಇದರ ಮೇಲುಸ್ತುವಾರಿ ನೋಡಿಕೊಳ್ಳುವುದು. ಈಗಾಗಲೇ ಜಮ್ಮು ಕಾಶ್ಮೀರ ಸರ್ಕಾರವು 36384 ನಿರ್ವಸಿತ ಕುಟುಂಬಗಳನ್ನು ಗುರುತಿಸಿದೆ.

ನಿರ್ವಸಿತ ಸಮುದಾಯದವರು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದರೂ ಪ್ರತಿ ವ್ಯಕ್ತಿಗೆ 30ಲಕ್ಷದಂತೆ ಒಟ್ಟೂ 9200ಕೋಟಿ ರೂಪಾಯಿಗಳ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿವೆ. ಒಟ್ಟಿನಲ್ಲಿ ರಾಜ್ಯದ ನಾಗರಿಕರೇ ಆದ ಪಾಕ್ ಆಕ್ರಮಿತ ಪ್ರದೇಶದ ನಿರ್ವಸಿತರಿಗೆ ಈ ಯೋಜನೆಯಿಂದ ಒಂದಿಷ್ಟು ಸಾಂತ್ವದ ದೊರೆಯಲಿದೆ.

ಜಮ್ಮು ಕಾಶ್ಮೀರದ ರಾಜಕೀಯ ಅಸ್ಥರತೆ ಪ್ರತ್ಯೇಕತಾವಾದ ಭಯೋತ್ಪಾದನೆಗಳು ಕೊನೆಗೊಳ್ಳುವುದರ ಜೊತೆಗೆ ನಿರಾಶ್ರಿತರಾದವರಿಗೆ ಪರಿಹಾರ ಪುನರ್ವಸತಿ ಒದಗಿಸುವುದೂ ಅಷ್ಟೇ ಮಹತ್ವದ್ದಾಗಿದೆ. ಇಷ್ಟು ವರ್ಷಗಳ ಕಾಲ ಜಮ್ಮು ಕಾಶ್ಮೀರ ರಾಜ್ಯಕ್ಕೆ ಕೇಂದ್ರದಿಂದ ಕೋಟ್ಟಂತರ ರೂಪಾಯಿಗಳ ಆರ್ಥಿಕ ಪ್ಯಾಕೇಜ್‌ಗಳು ದೊರಕುತ್ತಿದ್ದರೂ ಅದರಲ್ಲಿ ಹೆಚ್ಚಿನ ಪಾಲು ಕಣಿವೆಯ ಪ್ರತ್ಯೇಕತಾವಾದಿಗಳನ್ನು ಸಮಾಧಾನಪಡಿಸುವುದರಲ್ಲೇ ವ್ಯಯವಾಗುತ್ತಿತ್ತು, ರಾಜ್ಯದ ಎರಡು ಪ್ರಮುಖ ಪ್ರಾಂತಗಳಾದ ಜಮ್ಮು ಮತ್ತು ಲಢಾಕ್ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿ ಭಿನ್ನ ದಾರಿಯಲ್ಲಿ ಸಾಗುತ್ತಿದ್ದು ಜಮ್ಮು ಕಾಶ್ಮೀರದ ಸಮಸ್ಯೆ ಪರಿಹಾರವಾಗಬಹುದೆಂಬ ಆಶಾಭಾವನೆ ಮೂಡುತ್ತಿದೆ

ಸಹಸ್ರಮಾನದ ಅಪೂರ್ವ ಪ್ರತಿಭೆ ಆಚಾರ್ಯ ಅಭಿನವಗುಪ್ತ


(ವಿಕ್ರಮ 22/01/2017)

(ಆಚಾರ್ಯ ಅಭಿನವಗುಪ್ತ ಸಹಸ್ರಾಬ್ದಿ ವರ್ಷಾಚರಣೆಯ ಸಮಾರೋಪ ಮತ್ತು ವಿದ್ವತ್ ಗೋಷ್ಠಿಯ ವರದಿ)

ಕಾಶ್ಮೀರಿ ಶೈವ ಸಂಪ್ರದಾಯದ ಮೂರ್ಧನ್ಯ ಆಚಾರ್ಯ ಶ್ರೇಷ್ಠ ತತ್ವಜ್ಙ ಹಾಗೂ ಭಾರತೀಯ ಕಾವ್ಯ ಕಲೆ ಸಾಹಿತ್ಯ ಸಂಸ್ಕೃತಿಗಳ ಮೇಲೆ ತನ್ನ ಅಚ್ಚಳಿಯದ ಪ್ರಭಾವನ್ನು ಬೀರಿದ ಆಚಾರ್ಯ ಅಭಿನವ ಗುಪ್ತ ಇಂದಿಗೆ ಸಾವಿರ ವರ್ಷಗಳ ಕೆಳಗೆ ಕಾಶ್ಮೀರದ ಭೈರವ ಗುಹೆಯೊಳಗೆ ತನ್ನ 1200ಶಿಷ್ಯರೊಡನೆ ಪ್ರವೇಶ ಮಾಡಿದರು. ಇಂದು ವಿಶ್ವದ ಐವತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಅಭಿನವ ಗುಪ್ತರ ಕೃತಿ ಕಾರ್ಯಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಆಚಾರ್ಯ ಅಭಿನವ ಗುಪ್ತರ ಜೀವನ ಸಾಧನೆಯನ್ನು ನೆನಪಿಸುವ ಸಹಸ್ರಾಬ್ದಿ ವರ್ಷಾಚರಣೆ ಕಳೆದ ವರ್ಷದ ಫೆಬ್ರುವರಿಯಲ್ಲಿ ಆರಂಭವಾಯಿತು. ಭಾರತೀಯ ತತ್ವ ಕಲೆ ಕಾವ್ಯ ಶಾಸ್ತ್ರಗಳಿಗೆ ಅಭಿನವ ಗುಪ್ತರ ಕೊಡುಗೆಗಳ ಜೊತೆಗೆ ಕಾಶ್ಮೀರ ಶೈವ ದರ್ಶನವನ್ನೂ ಪರಿಚಯಿಸುವ ಅಭಿನವ ಸಂದೇಶ ಯಾತ್ರೆ, ಅನೇಕ ಗೋಷ್ಠಿ ಸಂವಾದಗಳು ದೇಶದ ವಿವಿಧ ಪ್ರದೇಶಗಳಲ್ಲಿ ಆಯೋಜನೆಗೊಂಡವು. ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ವಿವಿಧ ಆಯಾಮಗಳ ಅಧ್ಯಯನ ಮತ್ತು ಜಾಗೃತಿಯ ವಿಷಯದಲ್ಲಿ ಕಾರ್ಯ ನಡೆಸುತ್ತಿರುವ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಘಟನೆಗೊಂಡ ಅಭಿನವ ಗುಪ್ತ ಸಹಸ್ರಾಬ್ದಿ ವರ್ಷಾಚರಣ ಸಮಿತಿಯ ಕಾರ್ಯಕ್ರಮಗಳ ಸಮಾರೋಪ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದ ಪರಿಸದಲ್ಲಿ ಇದೇ ಜನವರಿಯ 6 ಮತ್ತು 7ರಂದು ಸಂಪನ್ನಗೊಂಡಿತು. ಸಮಾರೋಪದ ಅಂಗವಾಗಿ ರಾಷ್ಟ್ರೀಯ ವಿದ್ವತ್ ಗೋಷ್ಠಿಯು ಆಯೋಜನೆಗೊಂಡಿತು.

ಉದ್ಘಾಟನೆ
ಅಭಿನವ ಗುಪ್ತ ಸಹಸ್ರಾಬ್ದಿ ವರ್ಷಾಚರಣಾ ಸಮಿತಿಯ ಅಧ್ಯಕ್ಷರೂ ಆದ ಅಂತರರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಸಮಾರೋಪ ಹಾಗೂ ವಿದ್ವತ್ ಗೋಷ್ಠಿಯನ್ನು ಉದ್ಘಾಟನೆ ಮಾಡಿದರು. ಸಮಾರೋಪ ಸಮಾರಂಭದಲ್ಲಿ ಜಮ್ಮು ಕಾಶ್ಮೀರದ ಉಪಮುಖ್ಯಮಂತ್ರಿ ಡಾ ನಿರ್ಮಲ್ ಸಿಂಘ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಪ್ರಚಾರ ಪ್ರಮುಖ ಜೆ ನಂದಕುಮಾರ ಹಾಗೂ ದೇಶದ ವಿವಿಧ ಮೂಲೆಗಳಿಂದ ಬಂದ ಪ್ರತಿನಿಧಿಗಳು ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ ನಿರ್ಮಲ್ ಸಿಂಗ್ ಕಾಶ್ಮೀರದ ಜನರನ್ನು ಅದರಲ್ಲೂ ವಿಶೇಷವಾಗಿ ಯುವಕರನ್ನು ಧೃವೀಕರಣಗೊಳಿಸಲು ಭಾರತ ವಿರೋಧಿ ಶಕ್ತಿಗಳು ಸತತವಾಗಿ ಪ್ರಯತ್ನಿಸುತ್ತಿವೆ. ಇತ್ತೀಚಿನ ಪ್ರಕ್ಷುಬ್ಧತೆ ಇದರ ಒಂದು ನಿದರ್ಶನ. ಹಾಗೆಯೇ ಜಮ್ಮು ಕಾಶ್ಮೀರದ ಕಳೆದ ಮೂರು ತಲೆಮಾರುಗಳ ನಾಯಕತ್ವವೂ ಸಹ ಜನರನ್ನು ದಿಕ್ಕು ತಪ್ಪಿಸಿದೆ. ಹೀಗಿದ್ದರೂ ಧನಾತ್ಮಕ ವಾತಾವರಣವನ್ನು ನಿರ್ಮಿಸಲು ಇಂದಿಗೂ ಸಾಕಷ್ಟು ಅವಕಾಶಗಳಿವೆ.ಎಂದು ನುಡಿದರು. ಆಚಾರ್ಯ ಅಭಿನವಗುಪ್ತರ ಕಾರ್ಯ ಮತ್ತು ತತ್ವಗಳು ಕಾಶ್ಮೀರದ ಸಾಂಸ್ಕೃತಿಕ ಪರಂಪರೆಯನ್ನು  ಬಿಂಬಿಸುತ್ತವೆ. ಇದನ್ನು ಸರಿಯಾದ ಸಂದರ್ಭದಲ್ಲಿ ಅರ್ಥೈಸಿಕೊಂಡು, ಸಂಶೋಧನೆಗಳನ್ನು ನಡೆಸಿ ಜನಪ್ರಿಯಗೊಳಿಸಬೇಕು. ಸಹಸ್ರ ವರ್ಷಗಳ ಹಿಂದನಂತೆ ಇಂದಿಗೂ ಸಹ ಅಭಿನವ ಗುಪ್ತರ ತತ್ವ ಹಾಗೂ ಕಾರ್ಯಗಳು  ಪ್ರಸ್ತುತವಾಗಿವೆ. ಯುವಜನತೆ ತಮ್ಮ ಬೇರಿನೊಂದಿಗೆ ಸಂಬಂಧವನ್ನು ಅರಿತಾಗ ಋಣಾತ್ಮಕ ಶಕ್ತಿಗಳನ್ನು ತಡೆಯುವ ಸಾಮರ್ಥ್ಯ ಪಡೆಯುವರು ಎಂದು ಅವರು ಅಭಿಪ್ರಾಯ ಪಟ್ಟರು.
ದಿಕ್ಸೂಚಿ ಭಾಷಣ ಮಾಡಿದ ಆರೆಸ್ಸೆಸ್‌ನ ಜೆ ನಂದಕುಮಾರ್  ಆಚಾರ್ಯ ಅಭಿನವ ಗುಪ್ತ ಭಾರತೀಯ ಋಷಿ ಪರಂಪರೆಯ ಮೂರ್ತಿವೆತ್ತಂತಿದ್ದರು. ಭಾರತದ ಇತಿಹಾಸದಲ್ಲಿ ನಿರಂತರ ನವೋದಯವನ್ನು  ನಾವು ಕಾಣಬಹುದು. ಅನೇಕ ಮಹನೀಯರು ನಮ್ಮ ಸಂಸ್ಕೃತಿ, ಮೌಲ್ಯಗಳು ಮತ್ತು ದರ್ಶನಗಳಿಗೆ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ. ಅವರಲ್ಲಿ ಆಚಾರ್ಯ ಅಭಿನವ ಗುಪ್ತ ಅಗ್ರಗಣ್ಯರಾದವರು. ಎಂದು ಹೇಳಿದರು. ಭಾರತೀಯ ದರ್ಶನ ಮತ್ತು ಪರಂಪರೆಗಳನ್ನು ಕಡೆಗಣಿಸುವ ಸತತ ಪ್ರಯತ್ನಗಳನ್ನು ನೆನಪು ಮಾಡಿಕೊಂಡ ಅವರು ಸ್ವತಂತ್ರ ಭಾರತದ ನಾಯಕರೂ ಸಹ ಬ್ರಿಟಿಷರ ಮಾರ್ಗವನ್ನು ಹಿಡಿದದ್ದು ದುರದೃಷ್ಟಕರ ಎಂದು ಹೇಳಿದರು. ಆಚಾರ್ಯ ಅಭಿನವ ಗುಪ್ತರ ಕುರಿತು ಇಂದಿಗೂ ಹೆಚ್ಚಿನ ಸಂಶೋಧನೆ ಚರ್ಚೆಗಳು ನಡೆಯುತ್ತಿಲ್ಲ. ನಮ್ಮ ಇತಿಹಾಸ ಮತ್ತು ದರ್ಶನಗಳನ್ನು ಸರಿಯಾದ ದೃಷ್ಟಿಕೋನದಲ್ಲಿ ತಿಳಿಯುವ ಅಗತ್ಯವಿದೆ. ಭಾರತೀಯ ಸಂಸ್ಕೃತಿಯು ವೇದ ತಂತ್ರ ಮತ್ತು ಯೋಗಗಳ ತ್ರಿವೇಣಿ ಸಂಗಮ. ಅಭಿನವ ಗುಪ್ತ ಇದರ ಅವಿಭಾಜ್ಯ ಅಂಗ ಎಂದು ಅವರು ಅಭಿಪ್ರಾಯಪಟ್ಟರು.

ಉದ್ಘಾಟನಾ ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀ ಶ್ರೀ ರವಿಶಂಕರ ಕಾರ್ಯಕ್ರಮದ ಯಶಸ್ಸಿಗೆ ಆಶೀರ್ವಚನ ನೀಡಿದರು.

ರಾಷ್ಟ್ರೀಯ ವಿದ್ವತ್ ಗೋಷ್ಠಿ
ಆಚಾರ್ಯ ಅಭಿನವಗುಪ್ತ ಸಹಸ್ರಾಬ್ದಿ ವರ್ಷಾಚರಣೆಯ ಸಮಾರೋಪದ ಅಂಗವಾಗಿ ಎರಡು ದಿನಗಳ ರಾಷ್ಟ್ರೀಯ ವಿದ್ವತ್ ಗೋಷ್ಠಿ ಆಯೋಜನೆಗೊಂಡಿತು. ಈ ಗೋಷ್ಠಿಗಳಲ್ಲಿ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ಜೊತೆಗೆ ಭುವನೇಶ್ವರದ ಶ್ರೀ ಶ್ರೀ ರವಿಶಂಕರ ವಿಶ್ವವಿದ್ಯಾಲಯ, ನವದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ನವದೆಹಲಿಯ ಭಾರತೀಯ ತತ್ವಶಾಸ್ತ್ರ ಸಂಶೋಧನಾ ಸಂಘ, ಭೋಪಾಲಿನ ಮಾಖನ್‌ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ಮತ್ತು ಸಂವಹನ ವಿಶ್ವವಿದ್ಯಾನಿಲಯಗಳು ಕೈಜೋಡಿಸಿದವು. ಗಂಭೀರ ವಿಷಯಗಳ ಕುರಿತು ವಿದ್ವತ್ ಪೂರ್ಣ ವಿಚಾರ ಮಂಡನೆ ಚರ್ಚೆಗಳು ನಡೆದ ದೇಶದ ವಿವಿಧೆಡೆಗಳಿಂದ ಆಗಮಿಸಿದ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಸಂಶೋಧಕರು, ವಿದ್ವಾಂಸರು, ಹಿರಿಯ ನ್ಯಾಯವಾದಿಗಳು, ಪತ್ರಕರ್ತರು, ಸಮಾಜದ ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಗಣಮಾನ್ಯ ವ್ಯಕ್ತಿಗಳು ಸೇರಿ 350ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡರು.

ಒಟ್ಟು ಐದು ಅವಧಿಗಳಲ್ಲಿ ಎಂಟು ಸಮಾನಾಂತರ ಗೋಷ್ಠಿಗಳಲ್ಲಿ ವಿಷಯ ಮಂಡನೆ, ಚರ್ಚೆ ಸಂವಾದಗಳು ನಡೆದವು. ಈ ಕೆಳಗೆ ಪಟ್ಟಿ ಮಾಡಿರುವ ವಿಷಯಗಳಲ್ಲಿ ಆಯಾ ವಿಷಯಗಳ ಪರಿಣತರು ಗೋಷ್ಠಿಗಳನ್ನು ನಡೆಸಿಕೊಟ್ಟರು.
1. ಜಮ್ಮು ಕಾಶ್ಮೀರದ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಸ್ಥಿತಿಗತಿ
2. ಇತಿಹಾಸದಲ್ಲಿ ಜಮ್ಮು ಕಾಶ್ಮೀರ
3. ಹಿಮಾಯಲ ಪ್ರದೇಶದ ಭೌಗೋಳಿಕ-ರಾಜಕೀಯ ವ್ಯವಸ್ಥೆ
4. ಆಚಾರ್ಯ ಅಭಿನವಗುಪ್ತ ಮತ್ತು ಮಾಧ್ಯಮ ಹಾಗೂ ಸಂವಹನ
5. ಆಚಾರ್ಯ ಅಭಿನವಗುಪ್ತ ಮತ್ತು ಸಾಂಸ್ಕೃತಿಕ ಅಧ್ಯಯನ
6. ಆಚಾರ್ಯ ಅಭಿನವಗುಪ್ತ ಮತ್ತು ಭಾರತೀಯ ಸಾಹಿತ್ಯ
7. ಆಚಾರ್ಯ ಅಭಿನವಗುಪ್ತ ಮತ್ತು ನಾಗರಿಕತೆಯ ಅಧ್ಯಯನ
8. ಆಚಾರ್ಯ ಅಭಿನವಗುಪ್ತ ಮತ್ತು ದರ್ಶನ, ಆಧ್ಯಾತ್ಮ ಮತ್ತು ಸಾಧನೆ

ಈ ಗೋಷ್ಠಿಗಳು ಜಮ್ಮು ಕಾಶ್ಮೀರವನ್ನಷ್ಟೇ ಅಲ್ಲದೇ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಮೆಲುಕು ಹಾಕುವ ಪ್ರಯತ್ನ ಮಾಡಿದವು. ಜೊತೆಗೆ ಆಚಾರ್ಯ ಅಭಿನವಗುಪ್ತರ ಕಾರ್ಯವನ್ನು ನೆನಪಿಸುವುದರ ಜೊತೆಗೆ ಇಂದಿನ ಸನ್ನಿವೇಶದಲ್ಲಿ ಅಭಿನವಗುಪ್ತರ ಕಾರ್ಯದ ಪ್ರಸ್ತುತತೆಯನ್ನು ಚರ್ಚಿಸಿದವು.

ಸಮಾರೋಪ

ಆರ್ಟ್ ಆಫ್ ಲಿವಿಂಗ್ ಆಶ್ರಮದ ಪರಿಸರದಲ್ಲಿ ನಡೆದ ಆಚಾರ್ಯ ಅಭಿನವ ಗುಪ್ತ ಸಹಸ್ರಾಬ್ದಿ ವರ್ಷಾಚರಣೆ ಮತ್ತು ಅದರ ಅಂಗವಾಗಿ ಆಯೋಜಿಸಲ್ಪಟ್ಟ ವಿದ್ವತ್ ಗೋಷ್ಠಿಗಳ ಸಮಾರೋಪದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಗ ಮಾನನೀಯ ಭಯ್ಯಾಜೀ(ಸುರೇಶ್) ಜೋಶಿ, ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ಪ್ರಕಾಶ ಜಾವಡೇಕರ ಪಾಲ್ಗೊಂಡರು. ಶ್ರೀ ಶ್ರೀ ರವಿಶಂಕರ ಗುರೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಚಾರ್ಯ ಅಭಿನವಗುಪ್ತರನ್ನು ಪೃಥ್ವಿಯ ಓರ್ವ ಶ್ರೇಷ್ಠ ಧಾರ್ಶನಿಕ ಎಂದು ಬಣ್ಣಿಸಿದ ಪ್ರಕಾಶ ಜಾವಡೇಕರ್, ಸಾವಿರ ವರ್ಷಗಳ ಹಿಂದೆಯೂ ಭಾರತವು ವಿಶ್ವದಲ್ಲಿ ಜ್ಞಾನದ ಕೇಂದ್ರವಾಗಿತ್ತು. ಆ ಕಾಲದಲ್ಲಿ ಅಂತರರಾಷ್ಟ್ರೀಯ ರ‍್ಯಾಂಕಿಂಗ್ ವ್ಯವಸ್ಥೆ ಇದ್ದಿದ್ದರೆ ಭಾರತೀಯ ವಿದ್ವಾಂಸರು ಒಂದರಿಂದ ಹತ್ತರವರೆಗಿನ ಎಲ್ಲ ರ‍್ಯಾಂಕಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು.  ಎಂದು ನುಡಿದರು. ಆಚಾರ್ಯ ಅಭಿನವಗುಪ್ತರ ಕುರಿತ ಸಂಶೋಧನೆಗೆ ಎಲ್ಲ ಸಹಕಾರ ನೀಡುವ ಭರವಸೆಯನ್ನು ಮಾನ್ಯ ಸಚಿವರು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರೆಸ್ಸೆಸ್ ಸರಕಾರ್ಯವಾಹ ಭಯ್ಯಾಜೀ ಜೋಶಿ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದರೆ ಅದು ರಾಜಕೀಯ ಅರ್ಥದಲ್ಲಿ ಅಲ್ಲವೇ ಅಲ್ಲ. ಸಾವಿರಾರು ವರ್ಷಗಳ ಹಿಂದಿನಿಂದಲೂ ಇದು ಎಲ್ಲ ರೀತಿಯಿಂದಲೂ ಸ್ವಾಭಾವಿಕವಾಗಿ ಭಾರತದ ಭಾಗವಾಗಿತ್ತು. ನಾವು ಇಂದು ಅಭಿನವ ಗುಪ್ತರ ಸಹಸ್ರಾಬ್ದ ವರ್ಷವನ್ನು ಆಚರಿಸುತ್ತಿದ್ದೇವೆ, ಅವರು ಶೈವ ದರ್ಶನದ ಮೂಲಕ ಭಾರತೀಯ ವಿಚಾರವನ್ನು ಉತ್ತರದ ಕಾಶ್ಮೀರದಿಂದ ದಕ್ಷಿಣದ ತುದಿಯವರೆಗೆ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಎಂದು ನುಡಿದರು. ಮಾತೆ ವೈಶ್ಣೋದೇವಿ,  ಖೀರ ಭವಾನಿ ಮಂದಿರಗಳುಳ್ಳ ಜಮ್ಮು ಕಾಶ್ಮೀರವು ಶಕ್ತಿಯ ಸ್ಥಾನ. ಇದು ಸಾಂಸ್ಕೃತಿಕ ಮೌಲ್ಯಗಳ ಭೋದನೆಗಳ ಮೂಲ ಸ್ಥಾನ. ಕಾಶ್ಮೀರವನ್ನು ಹಿಂದಿದ್ದ ರೀತಿಯ ಜ್ಞಾನ ಮತ್ತು ಶಾಂತಿಯ ಕ್ಷೇತ್ರವಾಗಿ ಪುನಃ ಎದ್ದು ನಿಲ್ಲಸಲು ಕೆಲಸ ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.

ಶತಮಾನಗಳ ನಂತರ ಒಬ್ಬ ನಿಜವಾದ ತತ್ವಜ್ಞರನ್ನು ನೆನೆಸಿಕೊಳ್ಳುತ್ತಿದ್ದೇವೆ. ಇಂದಿನ ಕಾರ್ಯಕ್ರಮವು ಕಳೆದ ಒಂದು ವರ್ಷದ ಕಾರ್ಯಕ್ರಮಗಳ ಸಮಾರೋಪವಷ್ಟೇ. ಆದರೆ ಆಚಾರ್ಯ ಅಭಿನವ ಗುಪ್ತರ ಸಂದೇಶವನ್ನು ದೇಶ ಹಾಗೂ ವಿಶ್ವದಾದ್ಯಂತ ತೆಗೆದುಕೊಂಡು ಹೋಗಬೇಕು ಎಂದು ಶ್ರೀ ಶ್ರೀ ರವಿಶಂಕರ ಗುರೂಜಿ ನುಡಿದರು. ಅವರ ಮೊದಲಿನ ಪ್ರವಚನಗಳು ಶಿವ ಸೂತ್ರಗಳ ಮೇಲೆ ಆಧರಿಸದ್ದನ್ನು ನೆನಪಿಸಿಕೊಳ್ಳುತ್ತ ಓಂ ನಮಃ ಶಿವಾಯ, ಈ ಮಂತ್ರವು ಕಾಶ್ಮೀರದಿಂದ ರಾಮೇಶ್ವರಂವರೆಗೆ ಭಾರತವನ್ನು ಜೋಡಿಸುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಆರೆಸ್ಸೆಸ್ ಪ್ರಚಾರಕ, ರಾಷ್ಟ್ರೀಯ ಕಾರ್ಯಕಾರಣಿಯ ಸದಸ್ಯ ಹಾಗೂ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರದ ನಿರ್ದೇಶಕರೂ ಆದ ಶ್ರೀ ಅರುಣಕುಮಾರ್ ಜಮ್ಮು ಕಾಶ್ಮೀರದ ಕುರಿತು ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಸಮ್ಮೇಳನದ ಉದ್ಧೇಶ ಇಲ್ಲಿ ನಡೆದ ಚರ್ಚೆಯ ವಿಷಯ ಇಡೀ ದೇಶದಲ್ಲಿ ಚರ್ಚೆಯಾಗಬೇಕು ಎನ್ನುವುದಾಗಿದೆ. ಚಿಂತಕರು, ಶೈಕ್ಷಣಿಕ ಕ್ಷೇತ್ರದ ವಿದ್ವಾಂಸರು, ಮಾಧ್ಯಮ, ನೀತಿ ನಿರೂಪಕ ಸಂಸ್ಥೆಗಳು ಇಲ್ಲಿ ಚರ್ಚಿತವಾದ ವಿಷಯಗಳನ್ನು ಅರಿಯಬೇಕು. ರಾಷ್ಟ್ರೀಯ ವಿದ್ವತ್ ಗೋಷ್ಠಿಯಲ್ಲಿ ಪರಿಣಿತರು ನಿರ್ಣಯಿಸಿದ ವಿಷಯಗಳನ್ನು ದೇಶದಾದ್ಯಂತ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ನಾವು  ಮಾಡುತ್ತೇವೆ. ಇಂದಿನ ಜಮ್ಮು ಕಾಶ್ಮೀರ ಸಮಸ್ಯೆಗೆ ಎರಡು ಪ್ರಮುಖವಾದ ಮೂಲ ಕಾರಣಗಳಿವೆ, ಒಂದು ಜಮ್ಮು ಕಾಶ್ಮೀರದಲ್ಲಿ ಹರಡಿರುವ ತಪ್ಪು ಮಾಹಿತಿ ಇನ್ನೊಂದು ದೇಶದ ಉಳಿದ ಭಾಗದಲ್ಲಿ ಮಾಹಿತಿಯ ಕೊರತೆ. ಮಾಹಿತಿಯ ಕೊರತೆ ಇದ್ದಾಗ ತಪ್ಪು ಗ್ರಹಿಕೆ ಉಂಟಾಗುತ್ತದೆ, ಈ ತಪ್ಪು ಗ್ರಹಿಕೆ ಸಮಂಜಸವಲ್ಲದ ನಿರ್ಣಯಗಳಿಗೆ ಎಡೆಮಾಡಿಕೊಡುತ್ತದೆ. ರಾಜ್ಯ ಮತ್ತು ದೇಶದ ಇತರೆಡೆ ಜಮ್ಮು ಕಾಶ್ಮೀರ ಕುರಿತ ತಪ್ಪು ಗ್ರಹಿಕೆಗಳನ್ನು ಬದಲಾಯಿಸಬೇಕೆಂಬ ಗುರಿಯನ್ನು ಇಟ್ಟುಕೊಂಡರೆ ನಾವು ಸರಿಯಾದ ಮಾಹಿತಿಯನ್ನು ಪ್ರಚುರಪಡಿಸಬೇಕು. ಇದಕ್ಕಾಗಿ ದೇಶದ ಮೂಲೆ ಮೂಲೆಗೆ ಸರಿಯಾದ ವಿಷಯ ತಲುಪಬೇಕು ಮತ್ತು ತನ್ಮೂಲಕ ಜಮ್ಮು ಕಾಶ್ಮೀರ ಕುರಿತಂತೆ ಸರಿಯಾದ ಅಭಿಪ್ರಾಯ ಮತ್ತು ಸಾರ್ವಜನಿಕ ಚರ್ಚೆ ಬೆಳೆಯಬೇಕು, ಇದು ಇಂದಿನ ಅಗತ್ಯವಾಗಿದೆ ಎಂದು ನುಡಿದರು.

ಜಮ್ಮು ಕಾಶ್ಮೀರವನ್ನು ಕುರಿತ ಎರಡು ದಿನಗಳ ಚಿಂತನಾ ಗೋಷ್ಠಿ ಕಾಶ್ಮೀರದ ಸಾಂಸ್ಕೃತಿಕ ಪರಂಪರೆಯನ್ನು ಸರಿಯಾದ ದೃಷ್ಟಿಕೋನದಲ್ಲಿ ಮುಂದಿರಿಸಿ ಪ್ರಚಾರಗೊಳಿಸುವ ಮೂಲಕ ಸಾರ್ವಜನಿಕ ಅಭಿಪ್ರಾಯ ಮತ್ತು ಚರ್ಚೆಯನ್ನು ಬದಲಿಸುವ ನಿರ್ಣಯವನ್ನು ಕೈಗೊಂಡು ಸಮಾರೋಪಗೊಂಡಿತು.

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...