Saturday, April 1, 2017

ನವಭಾರತದ ರಾಜಕೀಯಕ್ಕೆ ಮುನ್ನುಡಿ ಬರೆದಿದೆ ಪಂಚರಾಜ್ಯ ಚುನಾವಣೆ

(ಪುಂಗವ 01/04/2017)

ಕೇವಲ ಹೊಸ ಸರ್ಕಾರಗಳನ್ನು ಆರಿಸುವುದಷ್ಟೇ ಚುನಾವಣೆಗಳ ಕೆಲಸವಲ್ಲ. ರಾಜಕೀಯ ಪಕ್ಷಗಳ ಬಲಾಬಲಗಳನ್ನು ಅಳೆಯವುದರ ಜೊತೆಗೆ ಒಟ್ಟಾರೆಯಾಗಿ ಸಮಾಜದ ಮನಸ್ಥಿತಿ(ಪಬ್ಲಿಕ್ ಮೂಡ್), ಅಪೇಕ್ಷೆ ಮತ್ತು ಆದ್ಯತೆಗಳು ಯಾವ ದಿಸೆಯಲ್ಲಿವೆ ಎಂದು ತಿಳಿಯಲೂ ಚುನಾವಣಾ ಫಲಿತಾಂಶಗಳು ಮಾನದಂಡವಾಗುತ್ತವೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ವಿಷಯ ಸ್ಫಷ್ಟವಾಗುತ್ತದೆ. ಅದರಲ್ಲೂ ವಿಶೇಷವಾಗಿ ಜನಸಂಖ್ಯಾ ದೃಷ್ಟಿಯಿಂದ ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶ ರಾಜ್ಯದ ಫಲಿತಾಂಶ ಮತದಾರರನ್ನು ಸಮೀಪಿಸುವಲ್ಲಿ ರಾಜಕೀಯ ಪಕ್ಷಗಳ ಧೋರಣೆ ಮತ್ತು ವಿಶ್ಲೇಷಣೆಯ ವಿಧಾನವನ್ನೇ  ಬದಲಾಯಿಸಿದೆ ಎಂದರೆ ಅತಿಶಯವಲ್ಲ.

ರಾಜ್ಯವಾರು ಚುನಾವಣಾ ಫಲಿತಾಂಶವನ್ನು ಗಮನಿಸಿದರೆ ಒಂದು ರೀತಿಯ ಸಾಮಾನ್ಯ ನಮೂನೆ ಕಂಡುಬರುತ್ತದೆ.
ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ಈ ರಾಜ್ಯಗಳಲ್ಲಿ ಆಯ್ಕೆಯಾದ ಪಕ್ಷಗಳು ಆಯಾ ರಾಜ್ಯಗಳಲ್ಲಿ 3/4ಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ರಾಜ್ಯವ್ಯಾಪಿ ಬೆಂಬಲ ಪಡೆದದ್ದು ಕಂಡುಬರುತ್ತದೆ. (ಉಪ್ರ: ಬಿಜೆಪಿ+ 324/403, ಉತ್ತರಾಖಂಡ: ಬಿಜೆಪಿ 57/70, ಪಂಜಾಬ್: ಕಾಂಗ್ರೆಸ್ 77/117).

ಪರ್ವತರಾಜ್ಯ ಉತ್ತರಾಖಂಡದ ಫಲಿತಾಂಶ ಅಸ್ಥಿತ ಸರ್ಕಾರ ಮತ್ತು ಕಾಂಗ್ರೆಸ್ ದುರಾಡಳಿತದ ವಿರುದ್ಧ ಮತದಾರ ನೀಡಿದ ತೀರ್ಪು ಎಂದೇ ಹೇಳಲಾಗುತ್ತದೆ. ಪಂಜಾಬದಲ್ಲಿ ನಿರೀಕ್ಷಿತ ಫಲಿತಾಂಶ ವ್ಯಕ್ತವಾಗಿದ್ದು ಅಧಿಕಾರದಲ್ಲಿರುವ ಪಕ್ಷದ ವಿರುದ್ಧ ನೀಡಿದ ಫಲಿತಾಂಶವಾಗಿದೆ. ಜೊತೆಗೆ ಅಕಾಲಿದಳದ ವಂಶವಾದ, ರಾಜ್ಯವನ್ನು ಕ್ಯಾನ್ಸರಿನಂತೆ ಕಾಡುತ್ತಿರುವ ಡ್ರಗ್ ಮಾಫಿಯ ವಿರುದ್ಧ ನೀಡಿದ ಮತವಾಗಿದೆ. ಪಂಜಾಬ್ ಗೆಲುವನ್ನು ಕಾಂಗ್ರೆಸ್ ಪಕ್ಷದ ಗೆಲುವು ಅನ್ನುವುದಕ್ಕಿಂತ ಕ್ಯಾ. ಅಮರಿಂದರ್ ಸಿಂಗ್ ಗೆಲುವು ಎನ್ನುವುದು ಹೆಚ್ಚು ಸೂಕ್ತ, ಅಕಾಲಿದಳದಿಂದಲೇ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ರಾಜವಂಶಸ್ಥ ಅಮರಿಂದರ್ ಸಿಂಗ್ ಭ್ರಷ್ಟಾಚಾರದ ಕಳಂಕ ಇಲ್ಲದ ವ್ಯಕ್ತಿ ಎನ್ನುವ ಇಮೇಜ್ ಹೊಂದಿದ್ದಾರೆ.

ಕರಾವಳಿಯ ಪುಟ್ಟ ರಾಜ್ಯ ಗೋವಾದಲ್ಲಿ ಮುಖ್ಯಮಂತ್ರಿ ಪರ್ಸೇಕರ್ ಸೇರಿದಂತೆ ಬಿಜೆಪಿ ಸರ್ಕಾರದ ೮ರಲ್ಲಿ ೬ ಮಂತ್ರಿಗಳು ಚುನಾವಣೆಯಲ್ಲಿ ಸೋತಿದ್ದಾರೆ. ಯಾವುದೇ ಪಕ್ಷಕ್ಕೆ ಬಹುಮತ ನೀಡದ ಫಲಿತಾಂಶ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿದೆ. ಜೊತೆಗೆ ಶೇಕಡಾವಾರು ಮತಗಳಿಕೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಬಿಜೆಪಿ ಜನಪ್ರಿಯ ಪಕ್ಷವಾಗಿ ಹೊರಹೊಮ್ಮಿದೆ.

ಇನ್ನೊಂದು ಪ್ರಮುಖ ಅಂಶವೆಂದರೆ ಪಂಜಾಬಿನಲ್ಲಿ ಸರ್ಕಾರ ಸ್ಥಾಪಿಸುವ ಕನಸು ಕಾಣುತ್ತಿದ್ದ ಆಮ್ ಆದ್ಮೀ ಪಕ್ಷ ಗೆದ್ದ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಶೆಕಡಾವಾರು ಮತಗಳಿಕೆಯಲ್ಲಿ ದೂರದ ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ನು ಗೋವಾ ರಾಜ್ಯದಲ್ಲಿ ಒಂದೂ ಅಭ್ಯರ್ಥಿಯನ್ನು ಗೆಲ್ಲಲಾಗದೇ ಅತೀ ಕಡಿಮೆ ಮತವನ್ನು ಆಪ್ ಪಡೆದಿದೆ.  ಇದರೊಂದಿಗೆ ಅರಾಜಕ ರಾಜಕಾರಣವನ್ನು ಈ ದೇಶದ ಮತದಾರ ಸಹಿಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಮಣಿಪುರ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ್ನು ತಿರಸ್ಕರಿಸಿರುವ ಶೇಕಡಾವಾರು ಮತಗಳಿಕೆಯಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. (ಬಿಜೆಪಿ : 34.2%, ಕಾಂಗ್ರೆಸ್ 31.2%). ಒಟ್ಟೂ 60ರಲ್ಲಿ 21 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ಮೊದಲ ಬಾರಿಗೆ ನಾರ್ಥ ಈಸ್ಟರ್ನ ಡೆಮೊಕ್ರಾಟಿಕ್ ಅಲಯನ್ಸ್ (ಓಇಆಂ) ಮಿತ್ರಪಕ್ಷಗಳೊಂದಿಗೆ ಮಣಿಪುರದಲ್ಲಿ ಸರ್ಕಾರ ಸ್ಥಾಪಿಸಿದೆ. ಇದರೊಂದಿಗೆ ಮೇಘಾಲಯ ಮತ್ತು ತ್ರಿಪುರವನ್ನು ಹೊರತುಪಡಿಸಿ ಉಳಿದ ಕಡೆ ಬಿಜೆಪಿ ಆಡಳಿತ ಸ್ಥಾಪನೆಯಾಗಿದ್ದು ದಶಕಗಳಿಂದ ನಿರ್ಲಕ್ಷಕ್ಕೊಳಗಾಗಿರುವ ಸಪ್ತ ಸೋದರಿಯರ ನಾಡು ಎಂದೂ ಕರೆಯಲ್ಪಡುವ ಈಶಾನ್ಯ ಭಾರತ ಪ್ರದೇಶದಲ್ಲಿ ಅಭಿವೃದ್ಧಿಯ ಆಶಾಭಾವನೆ ಜೀವ ತಳೆದಿದೆ.

ಜನಬಾಹುಳ್ಯದಿಂದ ದೇಶದ ಅತಿದೊಡ್ಡ ರಾಜ್ಯವಾದ  ಉತ್ತರಪ್ರದೇಶ ರಾಷ್ಟ್ರರಾಜಕೀಯದಲ್ಲಿ ಪ್ರಮುಖಸ್ಥಾನದಲ್ಲಿದೆ. ದೆಹಲಿಯ ಅಧಿಕಾರದ ಗದ್ದುಗೆಯ ಮಾರ್ಗ ಉತ್ತರಪ್ರದೇಶದ ಮೂಲಕವೇ ಹಾದುಹೊಗುವದು ಎನ್ನುವದು ರಾಜಕೀಯ ಪಡಸಾಲೆಯಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಮಾತು. ಕಾರಣ ರಾಷ್ಟ್ರ ರಾಜಕಾರಣದಲ್ಲಿ ಸ್ಥಿತ್ಯಂತರಗಳನ್ನೇ ಸೃಷ್ಟಿಸಬಲ್ಲ ವಿಷಯಗಳಾದ ವಿಸ್ತೃತ ಮತ್ತು  ಫಲವತ್ತಾದ ಗಂಗಾ ನದಿಮುಖಜ ಭೂಮಿಯಲ್ಲಿನ ಕೃಷಿಕರ ಕೋಟಲೆಗಳಿಂದ ಮೊದಲ್ಗೊಂಡು ನೆರೆಯ ಪಾಕಿಸ್ತಾನ, ನೇಪಾಳಗಳೊಡನೆ ಭಾರತದ ಸಂಬಂಧ, ಗೋಮಾಂಸ ವ್ಯಾಪಾರದ ಸಾವಿರಾರು ಕೋಟಿ ವ್ಯವಹಾರ, ಹಿಂದೂಗಳ ಶ್ರದ್ಧಾಕೇಂದ್ರ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯಮಂದಿರದ ನಿರ್ಮಾಣ, ಅಧಿಕಾರಾರೂಢ ಸಪಾದ ಕೊನೆಗಾಣದ ಪರಿವಾರವಾದ ಮತ್ತು  ಬಸಪಾದ ಜಾತಿ ರಾಜಕಾರಣ, ಹದಗೆಟ್ಟಿದ್ದ ರಾಜ್ಯದ ಕಾನೂನು ಸುವ್ಯವಸ್ಥೆ, ಮುಗಿಲುಮುಟ್ಟಿದ್ದ ಮುಸ್ಲಿಂ ಓಲೈಕೆ ಹೀಗೆ ಹತ್ತು ಹಲವಾರು ವಿಷಯಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡು ಚುನಾವಣೆಗೆ ತಯಾರಾಗಿದ್ದ ರಾಜ್ಯವದು. ಈ ಪ್ರಮುಖ ರಾಜ್ಯದಲ್ಲಿ ಗೆಲುವು ಸಾಧಿಸಲು ರಾಜಕೀಯ ಪಕ್ಷಗಳು ಶತಾಯಗತಾಯ ಎಲ್ಲ ತರಹದ ತಂತ್ರಗಳನ್ನೂ ನಡೆಸಿದವು.

ಆದರೆ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸಿದರೆ ಒಂದಿಷ್ಟು ಅಂಶಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ರಾಜ್ಯದ ಮತದಾರನ ಒಲವು ಜಾತಿಮತಗಳ ವಿಭಜನೆ ಅಥವಾ ಪೊಳ್ಳು ಆಶ್ವಾಸನೆಗಿಂತ ಇದುವರೆಗೆ ಕೇಂದ್ರ ಸರ್ಕಾರದ ಜನಪರ ಆಡಳಿತದಿಂದ ಆಗುತ್ತಿರುವ ಪರಿವರ್ತನೆ, ಓರ್ವ ಸಮರ್ಥ ನಾಯಕನಾಗಿ ಹೊರಹೊಮ್ಮಿರುವ ಪ್ರಧಾನಿ ಮೋದಿಯವರ ವ್ಯಕ್ತಿತ್ವ, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಗತಶೀಲ ಸ್ಥಿರ ಸರ್ಕಾರವನ್ನು ಸ್ಥಾಪಿಸಬಲ್ಲ ಪಕ್ಷದ ಕಡೆಗಿದ್ದದ್ದು ಸ್ಪಷ್ಟವಾಗಿ ಕಾಣುತ್ತದೆ. ಉದಾಹರಣೆಗೆ ಸ್ವಾತಂತ್ರದ 7 ದಶಕಗಳ ನಂತರವೂ ರಾಜ್ಯದ 1529 ವಿದ್ಯುತ್ ಸಂಪರ್ಕರಹಿತ ಹಳ್ಳಿಗಳ ಪೈಕಿ 1464 ಹಳ್ಳಿಗಳಿಗೆ ಬೆಳಕುಕಾಣಿಸಿದ ಕೇಂದ್ರ ಸರ್ಕಾರದ ಕೆಲಸ ಇಂದು ಗುರುತಿಸಲ್ಪಡುತ್ತಿದೆ. ಉಜ್ವಲಾ ಯೋಜನೆಯ ಅನ್ವಯ ಬಡ ಮಧ್ಯಮ ವರ್ಗದ ಕುಟುಂಬಗಳೂ ಗ್ಯಾಸ್ ಸಂಪರ್ಕ ಪಡೆದು ಮಹಿಳೆಯರು ಒಲೆಯ ಹೊಗೆ ಸೇವನೆಯಿಂದ ಮುಕ್ತವಾದರು. ಇಂತಹ ಜನಪರ ಯೋಜನೆಗಳು ಸಾಮಾನ್ಯರಲ್ಲಿ ಜನಹಿತದ ಪಕ್ಷ ಯಾವುದು ಎಂದು ಚಿಂತಿಸುವಂತೆ ಮಾಡಿದವು. ನೋಟು ಅಮಾನ್ಯೀಕರಣ, ಸರ್ಜಿಕಲ್ ಸ್ಟ್ರೈಕ್ ಮೊದಲಾದ ದಿಟ್ಟ ನಡೆಗಳನ್ನು ತೆಗೆದುಕೊಂಡಿದ್ದು ಕೇಂದ್ರದ ಆಡಳಿತ ಪಕ್ಷ ಸಮರ್ಥ ಸರ್ಕಾರ ನೀಡಬಲ್ಲದು ಎಂದು ಮತದಾರರಲ್ಲಿ ವಿಶ್ವಾಸ ಮೂಡಿಸಿತ್ತು.

ಹಾಗೆಯೇ ಚುನಾವಣಾ ರಣತಂತ್ರ ರೂಪಿಸಿ ಅದನ್ನು ಕಾರ್ಯಗತಗೊಳಿಸಿ ಯಶಸ್ವಿಗೊಳಿಸುವಲ್ಲಿ ಬಿಜೆಪಿ ಪಕ್ಷಾಧ್ಯಕ್ಷ ಅಮಿತ್ ಶಾ ಮತ್ತು ಅವರ ತಂಡದ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಸಿದ ಅವಿರತ ಕಾರ್ಯ ಶ್ಲಾಘನೀಯವಾಗಿದೆ. ಪ್ರಧಾನಿ ಮೋದಿಯವರೂ ಸೇರಿದಂತೆ ತಾರಾ ಪ್ರಚಾರಕ ರ‍್ಯಾಲಿಗಳಿಂದ ಹಿಡಿದು ಬೂತ್ ನಿರ್ವಹಣೆಯವರೆ ವ್ಯವಸ್ಥಿತ ಕಾರ್ಯತಂತ್ರದಿಂದ ಬಿಜೆಪಿ ಇಂತಹ ಬೃಹತ್ ಜನಾದೇಶ ಪಡೆಯಲು ಸಾಧ್ಯವಾಯಿತು. ಹಾಗೆಯೇ ಬಿಜೆಪಿ ಮತ್ತೊಮ್ಮೆ ಅಖಿಲ ಭಾರತೀಯ ರಾಜಕೀಯದಲ್ಲಿ ಪ್ರಬಲವಾಗಿ ಸ್ಥಾಪಿತವಾಯಿತು.

ಒಟ್ಟಾರೆಯಾಗಿ ಪಂಚರಾಜ್ಯಗಳ ಚುನಾವಣೆಯಿಂದ ಸಾಂಪ್ರದಾಯಿಕ, ಜಾತಿ ಮತ್ತು ಮತಬ್ಯಾಂಕ್ ಆಧಾರಿತ ರಾಜಕಾರಣದಿಂದ ಅಭಿವೃದ್ಧಿಶೀಲ ಹಾಗೂ ದೇಶಹಿತದ ಕಾರ್ಯಕ್ರಮಗಳನ್ನು ಮುಂದಿಡುವ ಪಕ್ಷಗಳನ್ನು ಬೆಂಬಲಿಸುವುದು ಸ್ಪಷ್ಟವಾಗಿದೆ. ಹಾಗೆಯೇ ದೇಶದ ಮತದಾರರೂ ಪ್ರಬುದ್ಧರಾಗುತ್ತಿದ್ದಾರೆ.


ಬಿಜೆಪಿಯತ್ತ ಮುಸ್ಲಿಮರು?


2011ರ ಜನಗಣತಿಯ ಪ್ರಕಾರ ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ 19.3% ಮುಸ್ಲಿಮರಿದ್ದಾರೆ. ಸಾಮಾನ್ಯವಾಗಿ ಇದುವರೆಗಿನ ಚುನಾವಣೆಗಳ ಮತದಾನ ಮಾದರಿಗಳನ್ನು ಅವಲೋಕಿಸಿದರೆ ಮುಸಲ್ಮಾನ ಸಮುದಾಯ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ತಥಾಕಥಿತ ಸೆಕ್ಯುಲರ್ ಪಕ್ಷಗಳ ಮತಬ್ಯಾಂಕ್ ಆಗಿದೆ. ಮತ್ತು ಮುಸ್ಲಿಂ ಸಮಾಜ ಮುಲ್ಲಾ ಮೌಲ್ವಿಗಳ ಫತ್ವಾದ ಆದೇಶದಂತೆ ದೊಡ್ಡ ಪ್ರಮಾಣದಲ್ಲಿ ಒಂದು ಪಕ್ಷಕ್ಕೇ ಗುಂಪು ಗುಂಪಾಗಿ ಮತ ನೀಡಿದ್ದು ಕಂಡು ಬರುತ್ತದೆ. ಹಾಗೆಯೇ ಉಳಿದ ಸಮುದಾಯಗಳಿಗೆ ಹೋಲಿಸಿದರೆ ಮುಸ್ಲಿಮರ ಮತದಾನದ ಪ್ರಮಾಣವೂ ಹೆಚ್ಚು. ಭಾರತೀಯ ಜನತಾ ಪಕ್ಷವನ್ನು ಹಿಂದುತ್ವವಾದಿ ಮುಸ್ಲಿಂ ವಿರೋಧಿ ಎಂದೇ ಪ್ರಚಾರ ಮಾಡಲಾಗುತ್ತದೆ. ಹೀಗಿರುವ ಹೊರತಾಗಿಯೂ ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯದ ಮತ್ತು ಆ ಸಮುದಾಯವೇ ನಿರ್ಣಾಯಕವಾಗಿರುವ ಮುಝಾಪರ್‌ನಗರ, ಶಾಮ್ಲಿ, ಸಹರಾನ್‌ಪುರ, ಬರೇಲಿ, ಬಿಜ್‌ನೊರ್, ಮೀರತ್‌ನ ಸರ್ದಾನಾ, ಗೋರಖ್‌ಪುರದ ಖಲೀದಾಬಾದ್, ಮೊರಾದಾಬಾದ್ ಮೊದಲಾದ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಇದನ್ನು ಅನೇಕ ರೀತಿಯಲ್ಲಿ ರೀತಿಯಲ್ಲಿ ಅರ್ಥೈಸಬಹುದು. ಒಂದು ಇದುವರೆಗಿನ ನಡೆದುಬರುತ್ತಿರುವ ಮುಸ್ಲಿಂ ತುಷ್ಟೀಕರಣ ಮತ್ತು ಮತಬ್ಯಾಂಕ್ ವಿರುದ್ಧ ಧೃವೀಕರಣಗೊಂಡು ಬಿಜೆಪಿಯ ಪರವಾಗಿ ಮತ ಚಲಾವಣೆಯಾಗಿರಬಹುದು. ತಥಾಕಥಿತ ಸೆಕ್ಯುಲರ್ ಪಕ್ಷಗಳು ಇಂತಹ ಕ್ಷೇತ್ರಗಳಲ್ಲಿ ಮುಸಲ್ಮಾನ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದುದರ ಪರಿಣಾಮ ಮುಸ್ಲಿಂ ಮತವಿಭಜನೆ ಮತ್ತು ಹಿಂದೂ ಮತಗಳ ಏಕತ್ರೀಕರಣದಿಂದ ಬಿಜೆಪಿಗೆ ಲಾಭವಾಗಿರಬಹುದು. ಇವೆಲ್ಲವೂ ಅಲ್ಲದೇ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮುಸ್ಲಿಂ ಸಮುದಾಯದ ಮತದಾರರು, ಅದರಲ್ಲೂ ಮುಸ್ಲಿಂ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಿದ್ದು ಕಂಡು ಬಂದಿದೆ. ಉದಾಹರಣೆಗೆ ಶೇ. 65ರಷ್ಟು ಮುಸಲ್ಮಾನ ಜನಸಂಖ್ಯೆಯುಳ್ಳ ಸಪಾ ಅಥವಾ ಬಸಪಾಗಳ ಭದ್ರಕೋಟೆಯಾದ ದೇವಬಂದ್ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ 29 ಸಾವಿರಕ್ಕು ಹೆಚ್ಚು ಅಂತರದಿಂದ ಜಯಗಳಿಸಿಸದ್ದಾರೆ. ಬಿಜೆಪಿಯ ಅಭ್ಯರ್ಥಿ 1.02ಲಕ್ಷದಷ್ಟು ಮತಗಳಿಸಿದ್ದರೆ, ಸಮೀಪದ ಪ್ರತಿಸ್ಪರ್ಧಿಗಳಾದ ಸಪಾ ಮತ್ತು ಬಸಪಾ ಆಭ್ಯರ್ಥಿಗಳು ಗಳಿಸಿದ ಒಟ್ಟೂ ಮತ 1.28ಲಕ್ಷದಷ್ಟು, ಉಳಿದ ಎಲ್ಲ ಅಭ್ಯರ್ಥಿಗಳು ಗಳಿಸಿದ ಒಟ್ಟೂ ಮತ ಸುಮಾರು 3ಸಾವಿರ. ಮುಸ್ಲಿಂ ಮತದಾರರೂ ಬಿಜೆಪಿಯನ್ನು ಬೆಂಬಲಿಸದ ಹೊರತು ಈ ಕ್ಷೇತ್ರದಲ್ಲಿ ಗೆಲ್ಲುವುದು ಅಸಾಧ್ಯ. ಮುಸಲ್ಮಾನ ಸಮಾಜ ಜಾಗೃತಗೊಂಡಿದ್ದು ಮತೀಯ ಮತಬ್ಯಾಂಕ ರಾಜನೀತಿಗೆ ಬಲಿಯಾಗದೇ ಪ್ರಗತಿಯ ದಾರಿಯಲ್ಲಿ ನಡೆಯುವ ರಾಜಕೀಯವನ್ನು ಬೆಂಬಲಿಸುತ್ತಿರುವುದನ್ನು ಇದು ತೋರಿಸುತ್ತದೆ.

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...