Saturday, December 12, 2009

ಆಧುನಿಕ ಅಸ್ಪ್ರಶ್ಯತೆ

ಕೆಲದಿನಗಳ ಹಿಂದೆ ಸ್ನೇಹಿತನೊಬ್ಬನನ್ನು ಬೀಳ್ಕೊಡುವ ಸಲುವಾಗಿ ಬೆಂಗಳೂರಿನ ಸಿಟಿ ರೇಲ್ವೆ ಸ್ಟೇಶನ್ನಿಗೆ ಹೋಗಿದ್ದೆ. ಫ್ಲಾಟ್‌ಫಾರ್ಮ್ ಟಿಕೆಟ್ ಕೊಡುವ ಮಶಿನ್ನಿನೊಳಕ್ಕೆ ನಾಣ್ಯಗಳನ್ನು ತೂರಿಸುತ್ತ ನಿಲ್ಲಲು ವಿರಾಗ ಹುಟ್ಟಿ ಕ್ಯೂನಲ್ಲೆ ನಿಂತು ಟಿಕೆಟ್ ಖರೀದಿಸಿದೆ, ಅಷ್ಟರಲ್ಲೆ ನಾಣ್ಯತೂರಿಸಿಕೊಳ್ಳುವ ಟಿಕೆಟ್ ಮಶಿನ್ನಿನ ಮುಂದೆ ಸಾಕಷ್ಟು ಜನರ ಸಾಲು ಬೆಳೆದಿತ್ತು. ಸಾಲಿನೆ ಕೊನೆಯಲ್ಲಿ ಹಳೆಯ ಕಂಪನಿಯ ಸಹೋದ್ಯೊಗಿಯೊಬ್ಬನ ಮುಖ ಗೋಚರಿಸಿತು, ನನ್ನ ಸ್ನೇಹಿತನ ರೈಲಿನ ಸಮಯವಾದರೂ ಹೊಸದಾಗಿ ಸಿಕ್ಕ ಹಳೆಯ ಸಹೊದ್ಯೋಗಿಯನ್ನು ಮಾತಾಡಿಸುತ್ತ ನಿಂತೆ, ಅವಸರದ ಉಭಯ ಕುಶಲೋಪರಿಯಲ್ಲಿ.
“don’t push me, you uncultured idiot” ಸಾಲಿನ ಮುಂದಿನಿಂದ ಒಂದು ಹೆಣ್ಣು ಗರ್ಜನೆ ಕೇಳಿಬಂತು. ಒಮ್ಮೆ ಸುತ್ತಮುತ್ತಲಿನ ಗದ್ದಲದ ಸದ್ದಡಗಿತು. ಎಲ್ಲರ ಗಮನ ’ಘರ್ಜನೆ’ ಹುಟ್ಟಿದ ಕಡೆಗೆ ಸೆಳೆಯಲ್ಪಟ್ಟಿತು ಸಹಜವಾಗಿ. ಒಬ್ಬಳು ಇಪ್ಪತ್ತು ಇಪ್ಪತ್ತೆರಡರ ಹುಡುಗಿ, ಎಜುಕೇಟೆಡ್, ಸ್ವಲ್ಪ ದಪ್ಪಗೆ ಇದ್ದಳೇನೊ? ಫ್ಲಾಟ್‌ಫಾರ್ಮ್ ಟಿಕೆಟ್ ಮಶಿನ್ನಿನ ಮುಂದಿನ ಸಾಲಿನಲ್ಲೇ ನಿಂತಿದ್ದವಳು. ಮೇಕಪ್ಪಿನ ಮುಖ ಹೊತ್ತುಕೊಂಡು ಬುಸುಬುಸು ಗುಡ್ತಾ ಇದ್ದಳು, ಕಿರುಚಿದಳು ತಾನೆ ಎಂದು ನೋಡಿದವರಿಗೆ ಕಷ್ಟಪಡದೇ ತಿಳಿಯಲಿ ಎಂಬಂತೆ. ಜೀನ್ಸ್ ಪ್ಯಾಂಟ್, ಟೀಶರ್ಟ್ ತೊಟ್ಟಿದ್ದಳು. ಜಾಕೆಟ್ಟೊ? ಸ್ವೆಟರ್ರೊ? ಸೊಂಟಕ್ಕೆ ಬಿಗಿದಿದ್ದಳು. ಕೈಯಲ್ಲಿ ವ್ಯಾನಿಟಿ ಬ್ಯಾಗ್ ಹಿಡಿದಿದ್ದಳು. ತಲೆಯ ಮೇಲೆ ಗೋಗಲ್ ಸಿಕ್ಕಿಸಿದ್ದಳು, ರಾತ್ರಿಯಲ್ಲಿ ಯಾಕೋ? ನನಗೆ ಅರ್ಥವಾಗಿಲ್ಲ, ಆಗೊಲ್ಲ. ತನ್ನ ಹಿಂದೆ ನಿಂತಿದ್ದ ಸುಮಾರು ಅವಳ ತಾಯಿಯ ವಯಸ್ಸಿನವಳಿರಬಹುದಾಗಿದ್ದ ಒಬ್ಬ ಹಳ್ಳಿ ಹೆಂಗಸಿನ, (ಅಷ್ಟೇನೂ ಅಸಂಸ್ಕ್ರಕಳಲ್ಲ) ಮೇಲೆ ಹರಿಹಾಯ್ದಿದ್ದಳು. ಎಲ್ಲೊ ಸಾಲಿನ ನೂಕುನುಗ್ಗಲಲ್ಲಿ ಆ ಹಳ್ಳಿ ಹೆಂಗಸು ಇವಳ ಮೇಲೆ ಸ್ವಲ್ಪ ಎರಗಿರಬಹುದು. ಹೇಳಿಕೇಳಿ ಹಳ್ಳಿಹೆಂಗಸು, ’uncultured’; ಎಜುಕೇಟೆಡ್ ನಾಗರಿಕರ ದ್ರಷ್ಟಿಯಲ್ಲಿ. ಆಧುನಿಕ ನಾಗರಿಕ ’cultured’ ಯುವತಿಯ ಅರ್ಭಟಕ್ಕೆ ಎರಡು ಅಡಿ ಹಿಂದೆ ಸರಿದಿದ್ದಳು, ಭಯಗೊಂಡಂತೆ, ತಪ್ಪಾಯ್ತು ಎಂಬಂತೆ. ಆಚೀಚೆಗೆ ಒಂದಿಬ್ಬರು ’ನಾಗರಿಕ’ ನವಯುವಕರು ’ಏನಾಯ್ತು ಮೇಡಮ್’ ಎನ್ನುತ್ತ ಸನ್ನದ್ಧರಾದಂತೆ ಕಂಡರು, ಯುವತಿಯ ಸಹಾಯಕ್ಕೆ, ಖಾಲಿಬಿದ್ದ ಎರಡಡಿ ಜಾಗವನ್ನು ತುಂಬಿಸಲೆಂಬಂತೆ.              
ನಾನೇನೊ ಸ್ಟೇಶನ್ನಿನೊಳಕ್ಕೆ ಹೋದೆ. ಆದರೆ, ಆ ಯುವತಿ ಅಷ್ಟೊಂದು ಕಿರುಚಬೇಕಾದ ಅಗತ್ಯವಿತ್ತೆ? ಸಹನೆ ಅಷ್ಟು ಕಷ್ಟವೆ? ಆ ಹಳ್ಳಿಯವಳೇನೊ ಅನಕ್ಷರಸ್ಥೆ, ಇವಳು ಹೇಳಿದ ಹಾಗೆ ’uncultured’. ಆದರೆ ಇಲ್ಲಿ ’cultured’ನ ಪರಿಭಾಷೆಯೇನು? ಈಕೆಯಿಂದ ಬಯ್ಯಿಸಿಕೊಂಡವಳು ಒಬ್ಬ ಇವಳ ತಾಯಿಯ ವಯಸ್ಸಿನ ಹೆಂಗಸು. ಇವಳೂ ಹೆಣ್ಣುಮಗಳೇ, ಹೆಣ್ಣಿಗಲ್ಲದ ಧ್ವನಿಯಲ್ಲಿ ಕಿರುಚಿದ್ದಳು. ’ಕ್ಷಮಯಾ ಧರಿತ್ರಿ’ ಎಂಬ ಹೆಣ್ಣಿನ ಸಹಜ ಗುಣದ ವರ್ಣನೆಗಳೆಲ್ಲ ಅರ್ಥವನ್ನು ಕಳೆದುಕೊಳ್ಳುತ್ತಿರುವುದು ನಾಗರಿಕತೆ ಲಕ್ಷಣವೇನೊ? Educated, cultured, civilized ಗಳ ಅರ್ಥ ಸಹಜ ಗುಣಗಳನ್ನು ಕಳೆದು ಕೊಳ್ಳುವುದೇ? ಸರಿ ಆಕೆ ಹಳ್ಳಿ ಹೆಂಗಸಲ್ಲದೇ ಯಾರಾಗಿದ್ದರೂ ಹಾಗೆ ಉಗಿಸಿಕೊಳ್ಳುತಿದ್ದರು ಅಂದಿಟ್ಟುಕೊಳ್ಳೋಣ. ಆದರೂ ಸಹನೆ ಮಮತೆಗಳ ಮೂರ್ತರೂಪವಾದ ಹೆಣ್ತನಕ್ಕೆ ಕಿರುಚುವಿಕೆ ಅಸಹಜವಲ್ಲವೆ? ಆಧುನಿಕತೆ ಆ ಮಟ್ಟಿಗೆ ಅಸಹನೆಯನ್ನು ಬೆಳೆಸಬಲ್ಲದೆ?  
ಅನೇಕ ಕಡೆಗಳಲ್ಲಿ ಇಂತಹ ಘಟನೆಗಳಗೆ ನಾವು ಸಾಕ್ಷಿಯಾಗಬಹುದು. ಟೆಲಿಫೋನ್, ಎಲೆಕ್ಟ್ರಿಸಿಟಿ, ವಾಟರ್ ಬಿಲ್ ತುಂಬುಲು ನಿಂತಿರುವ ಕ್ಯೂನಲ್ಲಿ, ರಾತ್ರಿ ಪ್ರಯಾಣದ ಬಸ್ಸುಗಳಲ್ಲಿ, ಟ್ರಾಫಿಕ್ ಜಾಮಾಗುವ ರಸ್ತೆಗಳಲ್ಲಿ, ಸಿನಿಮಾ ಮಂದಿರಗಳಲ್ಲಿ, ಪ್ರವಾಸಿ ತಾಣಗಳಲ್ಲಿ, ಹೋಟೆಲುಗಳಲ್ಲಿ, ದೇವಸ್ಥಾನಗಳಲ್ಲಿ, ಪಾರ್ಕ್‌ಗಳಲ್ಲಿ........ ಆರ್ಥಿಕತೆಯಿಂದ, ಆಧುನಿಕತೆಯಿಂದ ನಿರ್ದೇಶಿಸಲ್ಪಟ್ಟ ಸಾಮಾಜಿಕ ವರ್ಗಗಳ ನಡುವಿನ ಕಂದಕ ವ್ಯಕ್ತವಾಗುವ ಪರಿಗಳಿವು.  ವಿಶ್ಲೇಷಣೆಯಿಂದ ಸ್ಪಷ್ಟವಾಗುವುದು ’ಆಧುನಿಕ ಅಸ್ಪ್ರಶ್ಯತೆ’ ಚಿಗುರೊಡೆಯುತ್ತಿರುವ, ಬೆಳೆಯುತ್ತಿರುವ ರೀತಿ. ಅಸ್ಪ್ರಶ್ಯತೆಯ ಸ್ವರೂಪ, ಕಾರಣಗಳು ಬದಲಾಗಬಹುದು ಅಷ್ಟೆ. ಹಿಂದಿನ ಕಾಲದ ಜಾತೀಯ ಕಾರಣವನ್ನು ಅರ್ಥಿಕ, ಬದಲಾದ ಸಾಮಾಜಿಕ ಸ್ಥಾನಮಾನಗಳೊ, ನಗರ ಹಳ್ಳಿಗಳ ನಡುವಿನ ಕಂದಕವೊ, ಡಿಗ್ರಿ ಆಧಾರಿತ ಶೈಕ್ಷಣಿಕ ಮಾನದಂಡಗಳೊ ಅಥವಾ ಇನ್ಯಾವುದೊ, ಸ್ಥಳಾಂತರ ಮಾಡುತ್ತಿವೆ ಅಷ್ಟೆ. ನಿಜವಾಗಿಯೂ ಅಸ್ಫ್ರಶ್ಯತೆ ಒಂದು ಗುಣಮಾಡಲಾಗದ ಕುರುಹು.
ಆದರೆ ಈ ಆಧುನಿಕ ಅಸ್ಪ್ರಶ್ಯತೆಯ ಸಮರ್ಥಕರಿಗಾಗಲೀ ವಿರೋಧಿಗಳಿಗಾಗಲೀ ಮನುಸ್ಮ್ರತಿಯೊ ಇನ್ಯಾವುದೋ ಪುರಾಣ ಗ್ರಂಥವೋ ಸಹಾಯಮಾಡಲಾರದು.

Tuesday, December 1, 2009

ಅರ್ಧಹಾದಿಯಲ್ಲಿ ಈಡಿಯಟ್ಸ್ ಅ೦ದ ಕಾ(ಖಾ)ರಾ೦ಗನೆ

ನಾಲ್ಕು ಜನ ಯುವಕರು, ನೋಡಲು ಅಷ್ಟೇನು ದಷ್ಟಪುಷ್ಟವಾಗಿಲ್ಲದಿದ್ದರೂ ಫಿಟ್ ಆಗೇ ಇದ್ದರು, ಒಬ್ಬನನ್ನು ಬಿಟ್ಟು, ಬಹುಶ ಕೂಲಿ ಕೆಲಸ ಮಾಡೊವವರೊ, ಲೇಬರ್‌ಗಳಿರ್ಬೇಕು. ಅವರದು ಯಾವುದೊ ಮಲ್ಟಿಜಿಮ್‌ನಲ್ಲಿ ಬೆಳೆಸಿದ ಬಾಡಿಯಲ್ಲ, ಬದುಕಿನ ಜಿಮ್‌ನಲ್ಲಿ ಬೆಳೆದದ್ದು, ಬೆಳೆಸಬೇಕೆಂಬ ಪ್ರಯತ್ನವಿಲ್ಲದೇ. ರಸ್ತೆಯಲ್ಲಿ ಹರಟೆ ಹೊಡೀತಾ ಬರ್ತಾ ಇದ್ರು ಅಕ್ಕಪಕ್ಕ; ಸಣ್ಣ ರಸ್ತೆ ನಾಲ್ಕೆ ಜನ ಪೂರಾ ರಸ್ತೆ ಕಬಳಿಸಿ ಬಿಟ್ಟಿದ್ರು. ಒ೦ದು ಸೊಳ್ಳೇಗೂ ಒವರ್ಟೇಕ ಮಾಡೊ ಅಷ್ಟು ಜಾಗ ಇಲ್ಲ. ದಪ್ಪ ಮೀಸೆ ದುಮ್ಮಣ್ಣನ ಅ೦ಗಿ ಕಿಸೆಯಲ್ಲಿ ಮೊಬೈಲ ಇದ್ದದ್ದು ಎದೆಯ ಮೇಲೆ ಇಳಿದಿದ್ದ ಉದ್ದನೆಯ ಕ೦ಠಕ್ಕೆ ಸಿಕ್ಕಿಸುವ ಬಳ್ಳಿಯಿ೦ದ ಒತ್ತಿ ಒತ್ತಿ ಹೇಳ್ತಾ ಇತ್ತು. ಇನ್ನೊಬ್ಬ ಕುಡಿ ಮೀಸೆಯವನ ಮೊಬೈಲಿ೦ದ “ಜಿ೦ಕೆ ಮರೀನಾ ಜಿ೦ಕೆ ಮರೀನಾ...” ಹಾಡು ಕಿರ್ಚ್ತಾ ಇತ್ತು. ಒಟ್ನಲ್ಲಿ ನಾಲ್ವರು  ಬರ್ತಾ ಇದ್ರು ಬಹುಶ: ಮನೆ ಕಡೆ ದಿನದ ಕೆಲಸ ಮುಗಿಸಿ.... ದಪ್ಪ ಮೀಸೆಯ ದುಮ್ಮಣ್ಣನಿಗೆ ಒ೦ದು ದಮ್ಮ್ ಎಳೆಯುವ ಯೋಚನೆ ಬರ್ತಾ ಇರೋಹಂಗಿದೆ.... ಕುಡಿ ಮೀಸೆಯವ ಬಾಡಿ ಬಿಲ್ಡರ್‌ಗೆ ಒ೦ದ ರೌ೦ಡ್ ಗು೦ಡು ಹೊಡ್ದು ....ಆಮೇಲೆ ನೋಡೋಣ...ಅನ್ನೊ ವಿಚಾರ ಬರ್ತಾ ಇರ್ಬಹುದು. ಇನ್ನೊಬ್ಬ ಇರೋರಲ್ಲೆ ಸ್ವಲ್ಪ ರೆಸ್ಪೊನ್ಸಿಬ್ಲ ಅ೦ತ ಕಾಣ್ತಾ ಇರೋನು ... ಯೇನೊ ಸ೦ಸಾರದ ಚಿ೦ತೇಲಿರೊ ತರಹ ಇದ್ದಾನೆ... ಅಲ್ಲ.. ಅಕ್ಕಿ, ತರಕಾರಿ, ಬೇಳೆ  ರೇಟ್ ಇ೦ಗೆ ಏರಿದ್ರೆ ಜೀವನಾ ಯೆ೦ಗೆ? ಕೊನೆಯವನು ಬಡಕ್ಯಾ.... ಈಗೋ ಆಗೋ ಅನ್ನೊಹಾಗಿದ್ರು ಮುಖದಲ್ಲಿ ಮಾತ್ರ ಒಳ್ಳೆ ಸ್ಥಿತಪ್ರಜ್ನ ಕಳೆ.....
ಅಷ್ಟರಲ್ಲಿ ಎದುರಿ೦ದ  ಒಬ್ಬಳು ಬನಿಯನ್ನಿನಂತಹ ಟೀಶರ್ಟ್ ಧರಿಸಿದ್ದ ಅ೦ಗನೆ, ಮಾರುತಿ ಆಲ್ಟೊ ಕಾರ್ ಓಡಿಸಿಕೊ೦ಡು ಬುರ್ರ..... ಎ೦ದು ಬ೦ದು, ಸರಿಯಾಗಿ ನಾಲ್ವರನ್ನು ಎರಡು ಪಾಲಾಗಿರೆಂದು ಆದೇಶಿಸುವ೦ತೆ ನಡುಮಧ್ಯ ನಿಲ್ಲಿಸಿದಳು, ಬ್ರೇಕನ್ನು ಗಟ್ಟಿಯಾಗಿ ಒತ್ತಿ. ನಾಲ್ವರು ಒಮ್ಮೆಲೆ ಕ೦ಗಾಲ್. ’ಸ್ಥಿತಪ್ರಜ್ನ’ ಬಡಕ್ಯಾನು ವಿಚಲಿತನಾದ೦ತೆ ಕ೦ಡ. ಸಾವರಿಸಿಕೊ೦ಡು ಆಚೆ ಈಚೆ ಜಿಗಿದು ದಾರಿಯೇನೊ ಬಿಟ್ಟರು. ಕಾರು ಚಾಲು ಮಾಡಿ ಹೊರಟ ಕಾರಾಂಗನೆ ಸುಮ್ನೆ ದಾರಿ ಹಿಡ್ಕೊ೦ಡ್ ಹೋಗ್ಬೇಕೊ ಬೇಡ್ವೊ?... ಸ್ವಲ್ಪ ಮು೦ದೆ ಹೋದವಳು ಕಿಟಕಿಯ ಗ್ಲಾಸನ್ನು ಕೆಳಗಿಳಿಸಿ ತನ್ನ ನಗ್ನ ಮೊಣಕೈಯನ್ನು ಸ್ವಲ್ಪ ಹೊರಗೆ ತೋರಿಸುತ್ತ ತಲೆ ಹೊರಗೆಳೆದು ಹಿ೦ತಿರುಗಿ ನೋಡಿದಳು... ಸ್ವಲ್ಪ ಭಯನೂ ಇದ್ದಿರ್ಬಹುದೋ ಏನೋ?... ಏನೊ ಅ೦ದು ಹೊದಳು....ಸ್ವಲ್ಪ ಖಾರವಾಗೇ... “ಏನ೦ದ್ಲು ಇ೦ಗ್ಲೀಸ್ನಾಗೆ”..... “ಈಡಿಯಟ್ಸ್” ...... “ಯೇನ್ಲಾ ಅ೦ಗ೦ದ್ರೆ”.... “ಬಯ್ದ ಓಯ್ತಾ“.....”ಈಡಿಯಟ್ಸ್ ಅ೦ದ್ರೆ ಬಯ್ಯು ಸಬ್ದಾನಾ”....... ನಮ್ಮ ಗೆಳೆಯರ ತಲೆಯೊಳಗೆ ಪ್ರಶ್ನೆಯೊ೦ದು ತೂರಿಬಿಟ್ಟಿತ್ತು.... ಬಡಕ್ಯಾನನ್ನು ಬಿಟ್ಟು. “ಜಿ೦ಕೆ ಮರೀನಾ ...” ಹಾಡು ಮುಗಿದು ಅದ್ಯಾವ್ದೊ ಹಿ೦ದಿ ಹಾಡು ಶುರು ಆಗಿತ್ತು ಕುಡಿ ಮೀಸೆಯವನ ಮೊಬೈಲಲ್ಲಿ...ನಾಲ್ವರು ಮಾತ್ರ ಎರಡು ಪಾಲಾಗಿ ಹ೦ಚೇ ಇದ್ದರು.  

Friday, November 20, 2009

ಸಂಸತ್ತಿನ ಚಳಿಗಾಲದ ಅಧಿವೇಶನ ಮತ್ತು ಪ್ರಧಾನಿಗಳ ವಿದೇಶ ಯಾತ್ರೆ

ಈ ಬಾರಿಯ ಸಂಸತ್ತಿನ ಅಧಿವೇಶನ ಮೊನ್ನೆ ನವಂಬರ್ 19ರಿಂದ ಆರಂಭವಾಗಿದೆ. ನಮ್ಮ ಪ್ರಜಾಪ್ರತಿನಿಧಿ(ಪ್ರ.ಪ್ರ.)ಗಳಿಗೂ ಅಧಿವೇಶನಕ್ಕೊ ಏನು ಸಂಬಂಧ ಅಂತಾನಾ? ಚಳಿಗಾಲದಲ್ಲಿ ದೆಹಲಿಯಲ್ಲಿ ಇರಬೇಕಲ್ಲ ಕೆಲಸ ಇಲ್ಲದೆ. ಉತ್ತರದವರಿಗೆ, ಹಿಮಾಚಲ ಕಾಶ್ಮೀರದವರಿಗೇನೋ ಸರಿ ರೂಢಿ ಇರುತ್ತದೆ, ದಪ್ಪ ದಪ್ಪ ಸ್ವೆಟರ್ ಹೊಲಿಸಿಕೊಂಡಿರುತ್ತಾರೆ, ಅವರ ಕ್ಷೇತ್ರನೂ ಹತ್ತಿರ, ಅವರಿಗೂ ಅವರ ಕ್ಷೇತ್ರಕ್ಕೂ ಮುಂದಿನ ಚುನಾವಣೆವರೆಗೆ ಏನೂ ಸಂಬಂಧವಿಲ್ಲದಿದ್ದರೂ. ಆದ್ರೂ ಈಗ ವಿಮಾನ ಹೆಲೆಕಾಪ್ಟರ್‌ಗಳು ಜಾಸ್ತಿ ಆಗಿರುವುದರಿಂದ ವಾರವಾರ ಏನು ಎರಡೆರಡು ದಿನಕ್ಕೆ ಯಾರದೊ ಚೇಲಾ ಮಂದಿ ಮನೆಯಲ್ಲಿ ಶ್ರಾದ್ಧವೋ ಮದುವೆಯೋ ಅಥವ ಇನ್ಯಾವುದೋ ರಿಬ್ಬನ್ ಕಟಿಂಗಿಗೋ ಬೇಲಿಗುಟ್ಟ ನೆಡುವುದಕ್ಕೋ ಅಂತ ಘನಕಾರ್ಯ ಮಾಡುವ ಸಲುವಾಗಿ ನಮ್ಮ ಪ್ರ.ಪ್ರ.ಗಳು ಓಡಿಬರುವುದುಂಟು. ನಮ್ಮ ಯಡಿಯೂರಪ್ಪನವರ ಹಾಗೆ ಬೆಳಿಗ್ಗೆ ಗುಲ್ಬರ್ಗಾದಲ್ಲಿ ರಿಬ್ಬನ್ ಕಟಿಂಗು, ಮಧ್ಯಾಹ್ನ ಮೈಸೂರಲ್ಲಿ ಪ್ರೆಸ್ ಕಾನ್ಫರೆನ್ಸು, ಸಾಯಂಕಾಲ ಗೋಕರ್ಣದಲ್ಲಿ ಲಿಂಗಪೂಜೆ, ರಾತ್ರಿ ಮಂಗಳೂರಲ್ಲಿ ಯಾರದೋ ಮನೆ ಮದುವೆ ಮಂಟಪದಲ್ಲಿ, ಇನ್ನು ಸ್ವಲ್ಪ ಹೊತ್ತು ಬಿಟ್ಟು ಬೆಂಗಳೂರಲ್ಲಿ ಕ್ಯಾಬಿನೆಟ್ ಮೀಟೀಂಗು; ಏನು ಡೈನಾಮಿಕ್ ಅಲ್ಲ ನಮ್ಮ ಸಿಎಮ್ಮು, ಹೆಲಿಕಾಪ್ಟರ್ ದುಡ್ಡು ಇವರ ಅಪ್ಪ ಕೊಡ್ತಾನೆ?. ನಮ್ಮ ಪ್ರ.ಪ್ರ.ಗಳಿಗೆ TA/DA ಅಂತ ಕೊಡ್ತಾರಲ್ಲ, ಅಂದ್ರೆ ಇವರೆ ಕೊಟ್ಟುಕೊಳ್ಳುತ್ತಾರಲ್ಲ. ಪ್ರತಿವರ್ಷವೂ ಜಾಸ್ತಿ ಮಾಡಲೇಬೇಕು, ಈ ಬಿಲ್ ಮಾತ್ರ ಯಾವುದೇ ತಕರಾರಿಲ್ಲದೇ, ವಾಜಪೇಯಿ ಪ್ರಧಾನಿಯಾಗಿದ್ದಾಗ ಹೇಳ್ತಿದ್ದರಲ್ಲ “ಆಮ್ ಸಹಮತಿ”ಯಿಂದ, ಸದನದ ಸಮಯ ಹಾಳಾಗಬಾರದೂ ಎಂದು ಚರ್ಚೆ ಕೂಡ ಮಾಡದೇ ಪಾಸಾಗಿಬಿಡುತ್ತದೆ. ಆದ್ರೂ ಅಧಿವೇಶನದ ಸಮಯದಲ್ಲಿ ದೆಹಲಿನಲ್ಲಿ ಕೆಲಸ ಇರುತ್ತದಲ್ಲ. ನೆನೆಪಾದಾಗಾದರೊಮ್ಮೆ ಪಾರ್ಲಿಮೆಂಟ್‌ಕಡೆ ಹೋಗಿ ಹಾಜರಿ ಹಾಕಿ ಬರುವುದು, ಒಳಗಡೆ ಇದ್ದಾಗ ಆದಷ್ಟು ಜಾಸ್ತಿ ಕಿರುಚಾಡಿ ಅಡ್ಜರ್ನ್ ಆಗೊ ಹಾಗೆ ಮಾಡುವುದು, ಒಳಗೇ ಧರಣಿ ಮಾಡುವುದು, ಸಭಾತ್ಯಾಗ(ಯಾವತ್ತು ಸಭಾತ್ಯಾಗದಲ್ಲೇ ಇರೋವಾಗ ಇನ್ನೆಂಥ ಸಭಾತ್ಯಾಗ?, ಆದರೂ ನಮ್ಮ ಪ್ರ.ಪ್ರ.ಗಳು ಮಾಡುವ ಒಂದೇ ಒಂದು ತ್ಯಾಗ ’ಸಭಾತ್ಯಾಗ’) ಮಾಡುವುದು, ಕೂಗಾಟದಲ್ಲಿ ತಮ್ಮ ಪಕ್ಷದವರ ಪರ ಕೆಲವೊಮ್ಮೆ ಸಹಾಯಕ್ಕೆ ನಿಲ್ಲುವುದು, ಎಲ್ಲಾದರೂ ಬಿಲ್ ಪಾಸಿಂಗಿಗೋ ಇನ್ಯಾವುದೋ ಮೋಶನ್ನಿಗೊ ವೋಟಿಂಗ್ ಆದ್ರೆ ’aye’  ಅಂತನೋ ‘no’ ಅಂತನೋ ಒದರೋದು, ಪಾರ್ಟಿ ಹೇಳಿದಹಾಗೆ. ಇನ್ನೂ ಒಂದು ಅಂದ್ರೆ ಈಗ ಭಿನ್ನಮತ ಬಂಡಾಯ ಜಾಸ್ತಿ ಆಗಿ ಅಗಾಗ ಹೈಕಮಾಂಡ್ ಮುಂದೆ ಶಕ್ತಿಪ್ರದರ್ಶನ ಎಲ್ಲ ಇರುತ್ತದಲ್ಲ ಅಂತಹ ಸಂದರ್ಭದಲ್ಲಿ ಯಾವೊದೋ ಒಂದು ಭಿನ್ನಮತೀಯ ನಿಯೋಗದಲ್ಲಿ ಇರಬೇಕಾದ ಕಷ್ಟದ ಕೆಲಸ ಒಂದಿದೆಯಲ್ಲ, ದೆಹಲಿಯಲ್ಲೇ ಇರೋವಾಗ ಅನಿವಾರ್ಯ. ಹೋಗ್ಲಿ ಬಿಡಿ, ಅಧಿವೇಶನದ ಸಮಯದಲ್ಲಾದರೂ ಸ್ವಲ್ಪ ದಿವಸ ದೆಹಲಿನಲ್ಲಿ ಇದ್ದು ಕುಡಿದು ಕುಪ್ಪಳಿಸಿ ಅಲೆದು ತಿರುಗಿ ಸಾಯಲಿ ಊರ ಕಡೆ ತಲೆಹಾಕದೇ. majority ಎಲ್ಲ ಪ್ರ.ಪ್ರ.ಗಳ ಕತೆ ಇದೇ ಆದರೂ ಕೆಲವರಾದರೂ ಸ್ವಲ್ಪ ಸಂಸತ್ತಿನಲ್ಲಿ ಮಾತಾಡುತ್ತರಲ್ಲ, ಏನೇನೋ ಪ್ರಶ್ನೆ ಕೇಳಿ ಮಂತ್ರಿಗಳ ತಲೆ ತಿಂದು ಅಧಿವೇಶನ ನಡೆಸುವುದು ಅನಿವಾರ್ಯ ಮಾಡಿಬಿಡುತ್ತಾರಲ್ಲಾ. ಅಂತವರಿಂದಾಗಿ ಎಲ್ಲೋ ಅಲ್ಪಸ್ವಲ್ಪ ಪ್ರಜಾಪ್ರಭುತ್ವ ಅನ್ನೋದು ಉಳಿದುಕೊಂಡಿದೆ.
ವಿಷಯ ಅದಾ? ಅಲ್ಲ.
ನಮ್ಮ ದೇಶದಲ್ಲಿರುವುದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ(parlimentary democracy system). ಈ ವ್ಯವಸ್ಥೆಯಲ್ಲಿ ಲೋಕಸಭೆ(house of people)ಯಲ್ಲಿ ಬಹುಮತ(N/2+1) ಪಡೆದ ಪಕ್ಷ ಅಥವ ಗುಂಪು(coalition) ಸರ್ಕಾರ ರಚನೆ ಮಾಡುತ್ತದೆ. ಮಂತ್ರಿಮಂಡಳದ ಸದಸ್ಯರು ಸಂಸತ್ತಿನ ಭಾಗವಾಗಿರುತ್ತಾರೆ. ಯಾವುದೇ ಪಕ್ಷದ ಅಥವಾ ಗುಂಪಿನ ಸರ್ಕಾರ ಅಸ್ತಿತ್ವದಲ್ಲಿರಲು ಲೋಕಸಭೆಯ ’ವಿಶ್ವಾಸ’ ಅಂದರೆ ಬಹುಮತ ಹೊಂದಿರುವುದು ಅನಿವಾರ್ಯ. ಹಾಗೆಯೇ ಎಲ್ಲ ಯಾವುದೇ ಕಾನೂನಾಗಲಿ, ಆಯವ್ಯಯವಾಗಲೀ ಪತ್ರವಾಗಲೀ(budget) ಸಂಸತ್ತಿನ ಅನುಮೋದನೆ ಇಲ್ಲದೇ ಅನುಷ್ಟಾನಗೊಳ್ಳಲಾಗದು. ಸಂಸತ್ಸದಸ್ಯರು ಸರ್ಕಾರದಿಂದ ಮಂತ್ರಿಗಳಿಂದ ಪ್ರಶ್ನೆಗಳನ್ನು ಕೇಳುವ ಮುಖಾಂತರ ಮಾಹಿತಿ ಪಡೆಯುವ ಹಾಗೂ ಸಾರ್ವಜನೀನ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ, ಪರಿಹಾರಗಳನ್ನು ಪ್ರಸ್ತಾಪಿಸುವ, ವಿವಿಧ ಮೋಶನ್‌ಗಳನ್ನು ಮಂಡಿಸುವ, ಇತ್ಯಾದಿ ಅಧಿಕಾರಗಳನ್ನು ಪಡೆದಿರುತ್ತಾರೆ. ಸರ್ಕಾರ ಹಾಗೂ ಮಂತ್ರಿಗಳು ಪ್ರಶ್ನೆಗಳಿಗೆ ಹಾಗೂ ಚರ್ಚಿಸಲ್ಪಡುವ ವಿಷಯಗಳಿಗೆ ಉತ್ತರಿಸುವ ಬದ್ಧತೆಯನ್ನು ಹೊಂದಿರುತ್ತಾರೆ. ಲೋಕಸಭೆ ಅವಿಶ್ವಾಸ ಗೊತ್ತುವಳಿ ಮೊದಲಾದ instrumentಗಳ ಮುಖಾಂತರ ಬಹು ಸಂಸತ್ಸದಸ್ಯರು ಸರ್ಕಾರದಲ್ಲಿ ವಿಶ್ವಾಸ ಹೊಡಿಲ್ಲ ಎಂದು ಸಾಧಿಸಿ, ಸರ್ಕಾರವನ್ನು ಉರುಳಿಸಬಹುದು. ಈ ರೀತಿಯಲ್ಲಿ ಸಂಸತ್ತು ಅದರಲ್ಲೂ ಲೋಕಸಭೆ ಮಂತ್ರಿಮಂಡಳದ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಅಧಿವೇಶನ ಸರ್ಕಾರ(ಕಾರ್ಯಾಂಗ) ಹಾಗೂ ಪ್ರಜೆಗಳ ಪ್ರತಿನಿಧಿಗಳ(ಶಾಸಕಾಂಗ) ಮುಖಾಮುಖಿಗೆ ವೇದಿಕೆಯನ್ನು ಒದಗಿಸುತ್ತದೆ. ದೇಶದ ಪ್ರಮುಖ ಆಗುಹೋಗುಗಳ ಬಗ್ಗೆ, ಅಭಿವೄದ್ಧಿ, ಯೋಜನಾತ್ಮಕ ವಿಷಯಗಳ ಬಗ್ಗೆ ಚರ್ಚೆ ಮಾಡುವುದು, ಅಗತ್ಯವಿರುವ ಕಾನೂನುಗಳನ್ನು, ಪಾಸ್ ಮಾಡುವುದು ಮುಂತಾದವುಗಳು ಅಧಿವೇಶನದಲ್ಲಿ ನಡೆಯಬೇಕಾದ ಕಾರ್ಯಗಳು. ಆದ್ದರಿಂದ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಾದುದು ಎಲ್ಲ ಪ್ರ.ಪ್ರ.ಗಳ ಆದ್ಯ ಕರ್ತವ್ಯ. ಅದರಲ್ಲೂ ಅಧಿವೇಶನದ ಸಮಯದಲ್ಲಿ ಮಂತ್ರಿಮಂಡಲದ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಪ್ರತಿವರ್ಷ ಕನಿಷ್ಟ ಎರಡು ಬಾರಿ ಅಧಿವೇಶನ ನಡೆಯಬೇಕು, ಅಂದರೆ ಎರಡು ಅಧಿವೇಶನಗಳ ನಡುವೆ ಅರು ತಿಂಗಳಿಗಿಂತ ಹೆಚ್ಚಿನ ಕಾಲಾಂತರ ಇರಬಾರದು. ಇದು ಸಾಂವಿಧಾನಿಕ ವಿಧಿ. ನಮ್ಮ ಸಂಸತ್ ವ್ಯವಸ್ಥೆಯಲ್ಲಿ ಅಧಿವೇಶನವನ್ನು ಕರೆಯುವ ಅಧಿಕಾರ ಔಪಚಾರಿಕವಾಗಿ ಲೋಕಸಭಾ ಸ್ಪೀಕರ್‌ಗೆ ಇದ್ದರೂ, ಸರ್ಕಾರವೇ ಅಧಿವೇಶನದ ದಿನಾಂಕವನ್ನು ನಿಗದಿಮಾಡುತ್ತದೆ. ಮಂತ್ರಿಮಂಡಲದ ಸದಸ್ಯರ ಉಪಸ್ಥಿತಿಯ ಅನುಕೂಲಕ್ಕೆ ತಕ್ಕಂತೆ ಅಧಿವೇಶನ ನಡೆಸಲು ಈ ಸೌಲಭ್ಯ ಇರುವುದು. ಒಟ್ಟೂ ಉದ್ಧೇಶ ಇಷ್ಟೇ, ಯಶಸ್ವಿಯಾಗಿ ನಡೆದ ಅಧಿವೇಶನ ಪ್ರಜಾಪ್ರಭುತ್ವದ ಜೀವಂತಿಕೆಗೆಯನ್ನು ಸೂಚಿಸುತ್ತದೆ.
ಆದರೆ....
ಮೇಲೆ ಉಲ್ಲೇಖಿಸಿದ ಹಾಗೆ, ಕಳೆದ 19ರಂದು ಚಳಿಗಾಲದ ಅಧಿವೇಶನ ಆರಂಭವಾಗಿದೆ. ಹೀಗಿರುವಾಗ ನಮ್ಮ ಸರ್ಕಾರದ ನಾಯಕರಾದ ಪ್ರಧಾನಿ, ಅರ್ಥಶಾಸ್ತ್ರಜ್ಞ ಇನ್ನು ಏನೇನೋ ಬಿರುದಾಂಕಿತ( ನಾವೆಲ್ಲ ಇಂಟರ್‌ನೆಟ್‌ನಲ್ಲಿ ಓಡಾಡುವ ಬಯೋಡೆಟಾ ನೋಡಿರಬಹುದು)  ಡಾ. ಮನಮೋಹನಸಿಂಗರು ಸಪತ್ನೀಕರಾಗಿ, ವಿದೇಶ ಮಂತ್ರಿ ಎಸ್.ಎಮ್.ಕೄಷ್ಣ ಮೊದಲಾದ ಪ್ರಹಸ್ತಾದಿಗಳನ್ನು ಕೂಡಿಕೊಂಡು ಅಮೇರಿಕ ಮೊದಲಾದ ರಾಷ್ಟ್ರಗಳಿಗೆ 21ನೇ ತಾರಿಖಿನಂದು ಬಿಜಯಂಗೈದಿದ್ದಾರೆ. ದಿನನಿತ್ಯ ಡಿನ್ನರ್ ಪಾರ್ಟಿಗಳಲ್ಲಿ ಒಬಾಮಾದಿ ಚಕ್ರೆಶ್ವರ ಸಾಮಂತರೊಡನೆ (ಯಾರು ಯಾರಿಗೆ ಸಾಮಂತರೋ?) ಹಸ್ತಲಾಘವ ಮಾಡುತ್ತಿರುವ ಛಾಯಚಿತ್ರಗಳು ನಮ್ಮ ದಿನನಿತ್ಯದ ದೇಶೀಯ ವಾರ್ತಾಪತ್ರಗಳಲ್ಲಿ ವಿಜೄಂಭಿಸಿವೆ. ಹೌದು, ಇಂದಿನ ಜಾಗತೀಕರಣದ ಯುಗದಲ್ಲಿ, ರಾಷ್ಟ್ರ ರಾಷ್ಟ್ರಗಳ ಸಂಬಂಧಗಳು ಬೆಳೆಯುತ್ತಿರುವ ಇಂದಿನ ಯುಗದಲ್ಲಿ ವಿದೇಶ ಪ್ರವಾಸಗಳು, ಶೃಂಗಸಭೆಗಳಲ್ಲಿ ರಾಷ್ಟ್ರದ ಪ್ರಧಾನಿಯ ಪಾಲ್ಗೊಳ್ಳುವಿಕೆ ಅನಿವಾರ್ಯವಷ್ಟೇ ಅಲ್ಲ ಅತ್ಯಗತ್ಯ ಕೂಡ. ಹಾಗೆಯೇ ಅಧಿವೇಶನದ ಸಂದರ್ಭದಲ್ಲಿ, ಇಡೀ ದೇಶವೇ ಒಟ್ಟಾಗಿ ನಿಂತು ಒಗ್ಗಟ್ಟನ್ನು ಸಾರಬೇಕಾದ, ದೇಶದ ಜನರಲ್ಲಿ ಸ್ಥೈರ್ಯವನ್ನು ತುಂಬಬೇಕಾದ ಮುಂಬೈ ದಾಳಿಯ ವಾರ್ಷಿಕದ ಸಂದರ್ಭದಲ್ಲಿ ಸರ್ಕಾರದ ನಾಯಕನ ಉಪಸ್ಥಿತಿಯೂ ಅತ್ಯಗತ್ಯವಲ್ಲವೇ? ಅಧಿವೇಶನದ ದಿನಾಂಕವನ್ನು ನಿರ್ಧರಿಸುವ ಸಂದರ್ಭದಲ್ಲಿ ಪ್ರವಾಸದ ವಿಷಯಗಳೇಕೆ ಗಣನೆಗೆ ತೆಗೆದುಕೊಳ್ಳಲ್ಪಡುವುದಿಲ್ಲ? ನಮ್ಮ ಡಾ. ಪ್ರಧಾನಿಗೆ ತಾನು ವಹಿಸಿರುವ ಹುದ್ದೆಯ ಜವಾಬ್ದಾರಿಗಳ ಬಗ್ಗೆ ಅರಿವಿಲ್ಲವೇ? ಅಥವಾ ಹೇಗೂ ನಡೆಯುತ್ತೆ ಎಂಬ ಭಾವನೆಯೇ? ಇಲ್ಲಿ ಗಮನಿಸಬೇಕಾದದ್ದು ಗೈರುಹಾಜರಿ ಒಬ್ಬ ಸಾಮಾನ್ಯ ಸಂಸತ್ಸದಸ್ಯನದಲ್ಲ ಪ್ರಧಾನಿಯದು ಹಾಗೂ ಮಂತ್ರಿಮಂಡಳದ ಹಿರಿಯ ಸದಸ್ಯನದು.
ಎಷ್ಟಂದರೂ ನಮ್ಮ ಪ್ರಧಾನಿ appointed ತಾನೆ, elected ಅಲ್ಲವಲ್ಲ, ತನ್ನನ್ನು ತಾನು ಸರ್ಕಾರಿ ನೌಕರ ಎಂದು ತಿಳಿದುಕೊಂಡಿದ್ದಾರೋ ಏನೋ?

Sunday, November 15, 2009

ಎದೆಯೊಳಗಣ ಅಲೆಗಳು...

ಜೀವನ ಪಯಣ
ಹುಟ್ಟಿನಿಂದ ಸಾವಿನೆಡೆಗೆ
ನಡೆವ ಪಯಣ ಜೀವನ
ದಾರಿಯಿರಲಿ ಇಲ್ಲದಿರಲಿ
ನಿಲ್ಲಲಹುದು ಅರೆಕ್ಷಣ
ಸಾಗುತಿಹುದು ಅನುದಿನ
ಪಯಣ ನಿತ್ಯನೂತನ


ಪಾಡ್ಯದ ಚಂದಿರ
ದೀಪದ ಹಬ್ಬದ ಸಿಡಿ
ಮದ್ದಿನ ಸದ್ದಿಗೆ
ಬೆದರಡಗಿದ ಚ೦ದಿರ
ಅಳುಕುತ ಮರುದಿನ
ಕೊ೦ಚವೆ ಇಣುಕಿದನು



ಚಕ್ರ
ತನ್ನತಾನೇ ಹಿಂದಕಿಕ್ಕಿ
ಜಗವಗೊಳಿಸಿ ಕಕ್ಕಾಬಿಕ್ಕಿ
ನುಗ್ಗತಿಹುದು ಉರುಳುತಿಹುದು
ಕಾಲಚಕ್ರ
ಗತಿಗೆ ಸಿಕ್ಕಿ


ದಾರಿಮರೆತ ಪಯಣಿಗ
ಮರಳುಗಾಡ ಹಾದಿಯಲ್ಲಿ ನಿಂತೆಯೇಕೆ ಪಯಣಿಗ
ಮರವೆಯಾಯ್ತೆ ಕನಸಿನಲ್ಲಿ ಬಯಕೆಯಾದ ಆ ಜಗ

ಹೂವುಮುಳ್ಳು ದಿಣ್ಣೆತಗ್ಗು ಸಹಜವೇನೆ ಪಥದಲಿ
ಏಳುಬೀಳು ನೋವುನಲಿವು ನಿಯತಿತಾನೆ ಬಾಳಲಿ?

ಎಲ್ಲ ಬಲ್ಲೆ ನೀನು ಮತ್ತೆ ಮತ್ತೆ ಮರೆವೆಯೇತಕೆ?
ತಿಳಿದ ನಿಜವ ಮರೆತು ಕಳೆಕೊಂಬೆಯೇಕೆ ನಂಬಿಕೆ?

ಯಾರು ಬರುವರಿಲ್ಲ ನಿನ್ನ ರಥಕೆ ನೀನೆ ಸಾರಥಿ
ಸ್ವಯಂಪ್ರಭೆಯ ಬೆಳಗಬಲ್ಲ ಮನುಜ ಪಡೆವ ಉನ್ನತಿ

ನಿನ್ನ ಬರವ ಕಾಯುತಿಹುದು ಕನಸಿನ ವನನಂದನ
ಕನಸ ನನಸು ಮಾಡಲೆಂಬ ತುಡಿತ ತಾನೆ ಜೀವನ?

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...