Monday, November 11, 2013

ವೈರುಧ್ಯಗಳ ನಡುವಿನಲ್ಲೇ ಹೊಸ ಹಾದಿ ಹಿಡಿದ ಭಿನ್ನ ಜಾಡಿನ ಯಾತ್ರಿಕರು

(ಪ್ರಕಟಿತ: ಪುಂಗವ 1/9/2013)

ಆಧುನಿಕ ಯುಗದ ಮಾಹಿತಿಯ ಮಹಾಪೂರಕ್ಕೆ ತೆರೆದುಕೊಂಡಿರುವ ನಮ್ಮ ಮನಸ್ಸು ನವ ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತಿರುವುದರ ಜೊತೆಗೆ ಪರಂಪರಾಗತವಾಗಿ ಹರಿದುಬಂದಿರುವ ಮೌಲ್ಯಗಳನ್ನು ಅನುಮಾನಿಸುತ್ತ, ಹೊಸದನ್ನು ಅನ್ವೇಷಿಸುತ್ತ ಸಾಗುತ್ತಿದೆ. ವಿಜ್ಞಾನ ತಂತ್ರಜ್ಞಾನಗಳು ಬದುಕಿನ ಅನುಕೂಲತೆ ಹೆಚ್ಚಿಸಿದರೂ, ಬುದ್ಧಿಯ ಕುತೂಹಲವನ್ನು ತಣಿಸಿದರೂ ಜನಜೀವನದ ಭಾಗವಾಗಿ ಬೆಳೆದುಬಂದ ಮೌಲ್ಯಗಳು ಭಾವವಿಕಾಸಕ್ಕೆ ಹಾಗೂ ಬದುಕಿನ ಅರ್ಥಪೂರ್ಣತೆ ಅನಿವಾರ್ಯ ಎಂಬ ನಂಬಿಕೆ ತಳದಲ್ಲಿ ನೆಲೆಯಾಗಿದೆ. ಈ ವೈರುಧ್ಯಗಳು ನಮ್ಮೆದುರಿನ ಸವಾಲುಗಳೂ ಆಗಿವೆ. ಈ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಬೆಂಗಳೂರಿನ ಬಿ ಎಮ್ ಎಸ್ ತಾಂತ್ರಿಕ ಕಾಲೇಜು ಸಭಾಂಗಣದಲ್ಲಿ 1/9/2013ರಂದು ಏರ್ಪಡಿಸಲಾಗಿದ್ದ "ಹೊಸಕಾಲದ ವೈರುಧ್ಯಗಳು" ಸಂವಾದ ಕಾರ್ಯಕ್ರಮದಲ್ಲಿ, ವೈರುಧ್ಯಗಳನ್ನೆದುರಿಸ ವೈವಿಧ್ಯಮಯ ಹಾಗೂ ಅರ್ಥಪೂರ್ಣ ಬದುಕನ್ನು ಬಾಳುತ್ತಿರುವ ಭಿನ್ನ ಜಾಡಿನ ಸಾಧಕರು ಕಲೆತಿದ್ದರು. ಅವರ ಕಾರ್ಯಹಿನ್ನೆಲೆಯ ಕಿರುಪರಿಚಯ ಇಲ್ಲಿದೆ.



ಸೌರಶಕ್ತಿ ತಂತ್ರಜ್ಞಾನದ ಹರಿಕಾರ ಡಾ| ಹರೀಶ ಹಂದೆ ಮೂಲತ: ಉಡುಪಿ ಜಿಲ್ಲೆಯ ಕುಂದಾಪುರದ ಹಂದಟ್ಟು ಎಂಬ ಗ್ರಾಮದವರು. ಖರಗಪುರದ ಐಐಟಿಯಲ್ಲಿ ಎನರ್ಜಿ ಇಂಜಿನಿಯರಿಂಗ್‍ನಲ್ಲಿ ಪದವಿ ವ್ಯಾಸಂಗ ಮಾಡಿ, ಅಮೆರಿಕದ ಪ್ರತಿಷ್ಠಿತ ಮೆಸ್ಯಾಚುಸೆಟ್ಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದವರು. ಅಪ್ರಿತಿಮ ಪ್ರತಿಭಾವಂತ ಆದರೆ ಅಷ್ಟೇ ಸರಳ, ಡಾ ಹರೀಶ ಹಂದೆಯವರ ಮನಸ್ಸು ಅಮೆರಿಕದಲ್ಲಿದ್ದು ಡಾಲರ್‍ಗಳನ್ನು ಸಂಪಾದಿಸುವ ಕಡೆಗಿದ್ದಿಲ್ಲ. ಆಧುನಿಕ ತಂತ್ರಜ್ಞಾನವನ್ನು ಬಳಸಿ ತನ್ನ ತಾಯಿನಾಡಿನ ಬಡವರ ಜೀವನಮಟ್ಟವನ್ನು ಸುಧಾರಿಸಲು ಏನನ್ನಾದರು ಮಾಡಬೇಕೆಂಬ ತುಡಿತ ಅವರಲ್ಲಿತ್ತು. ಭಾರತಕ್ಕೆ ಮರಳಿ ಸಾಮಾಜಿಕ ಕಳಕಳಿಯೊಂದಿಗೆ 1995ರಲ್ಲಿ ಸೋಲಾರ ಎಲೆಕ್ಟ್ರಿಕ್ ಕಂಪನಿ(ಸೆಲ್ಕೋ)ಯನ್ನು ಪ್ರಾರಂಭಿಸಿದರು. ಸೆಲ್ಕೋ ಪ್ರಾರಂಭಕ್ಕೆ ಮುಂಚೆ ಸುಮಾರು ಎರಡು ವರ್ಷಗಳ ಕಾಲ ಗ್ರಾಮೀಣ ಬದುಕಿನ ನಿಜವಾದ ಸಮಸ್ಯೆಗಳನ್ನು ಅರಿಯುವ ದೃಷ್ಟಿಯಿಂದ ಭಾರತ ಹಾಗೂ ಶ್ರೀಲಂಕಾಗಳ ಕುಗ್ರಾಮಗಳಲ್ಲಿ ಅಲೆದಾಡಿದರು. ಪರಿಣಾಮವಾಗಿ ವಿದ್ಯುತ್ ಸಂಪರ್ಕವಿಲ್ಲದ ಗ್ರಾಮೀಣ ಬದುಕಿನಲ್ಲಿ ಸೌರಶಕ್ತಿ ಹೇಗೆ ಬದಲಾವಣೆ ತರಬಹುದು ಎನ್ನುವುದನ್ನು ಕಂಡುಕೊಂಡರು. ಸೆಲ್ಕೋ ಸಂಸ್ಥೆ ಇದುವರೆಗೆ ಸುಮಾರು 1.35 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮನೆಗಳಿಗೆ ಸೌರಶಕ್ತಿಚಾಲಿತ ದೀಪಗಳನ್ನು ಅಳವಡಿಸಿದೆ. 2014 ಹೊತ್ತಿಗೆ 2ಲಕ್ಷ ಮನೆಗಳನ್ನು ತಲುಪುವ ಗುರಿ ಹೊಂದಿದೆ. ಸೌರಶಕ್ತಿಯ ಘಟಕಗಳ ಸ್ಥಾಪನೆಗೆ ಸಹಕಾರಿ ಬ್ಯಾಂಕ್‍ಗಳಿಂದ ಆರ್ಥಿಕ ಸಹಾಯ ದೊರೆಯುವಂತೆ ಮಾಡುವುದರಲ್ಲಿ ಕೂಡ ಸೆಲ್ಕೋ ಸಂಸ್ಥೆ ತೊಡಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ಸ್ಥಾಪಿಸಲಾಗಿರುವ ಸೆಲ್ಕೋ ಲ್ಯಾಬ್‍ನಲ್ಲಿ ಸೌರಶಕ್ತಿಯ ಸದ್ಬಳಕೆಗೆ ಸಂಭಂಧಿಸಿದ ಸಂಶೋಧನೆಗಳ ಜೊತೆಗೆ ಕೃಷಿ ಉಪಯೋಗಿ ಉಪಕರಣಗಳ ಅಭಿವೃದ್ಧಿಯನ್ನು ಕೂಡ ಮಾಡಲಾಗುತ್ತದೆ. ಅನೇಕ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ ಸೆಲ್ಕೋ ಸಂಸ್ಥೆಯಲ್ಲಿ ಅನಕ್ಷರಸ್ಥರು, ಹತ್ತನೇ ಇಯತ್ತೆ ದಾಟದವರಿಂದ ಹಿಡಿದು ವಿಶ್ವವಿದ್ಯಾಲಯದಲ್ಲಿ ಕಲಿತವರೂ ಸಮಾನಸ್ಕಂದರಾಗಿ ಸ್ವಾಭಿಮಾನದಿಂದ ದುಡಿಯುತ್ತಾರೆ. ಒಂದು ಕಾಲದಲ್ಲಿ ಆಫೀಸ್ ಬಾಯ್ ಆಗಿ ಸೆಲ್ಕೋ ಕಂಪನಿಗೆ ಸೇರಿದವರು ಇಂದು ಶಾಖೆಯೊಂದರ ಮೆನೇಜರ ಆಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ ಎಂದರೆ ಸೆಲ್ಕೋ ಸಂಸ್ಥೆಯಲ್ಲಿ ರೂಢಿಸಿರುವ ಸುಸಂಸ್ಕøತಿಯನ್ನು ಊಹಿಸಿಕೊಳ್ಳಬಹುದು. ಇವೆಲ್ಲವನ್ನು ಸಾಧಿಸಿದ ಶ್ರೀ ಹಂದೆಯವರಿಗೆ 2011ನೇ ವರ್ಷದಲ್ಲಿ ಪ್ರತಿಷ್ಠಿತ ರೇಮನ್ ಮ್ಯಾಗ್‍ಸೆಸ್ಸೇ ಪ್ರಶಸ್ತಿಯೂ ಸೇರಿದಂತೆ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮ್ಮಾನಗಳು ಸಂದಿವೆ. ಸಾವಿರಾರು ಗ್ರಾಮೀಣ ಬಡಜನರ ಬಾಳನ್ನು ಬೆಳಗಿದ ಸೌರಶಕ್ತಿಯ ಸರದಾರ ಡಾ| ಹರೀಶ ಹಂದೆ ತಾವು ಕಲಿತ ತಂತ್ರಜ್ಞಾನ ವಿದ್ಯೆಗೆ ಒಂದು ಅರ್ಥಪೂರ್ಣತೆಯನ್ನು ಒದಗಿಸಿದ್ದಾರೆ ಎಂದರೆ ಅತಿಶಯವಲ್ಲ.



ತುಮಕೂರು ಸಮೀಪದ ಗುಬ್ಬಿಯ ಬಸವನಗುಡ್ಡ ಎಂಬ ಹಳ್ಳಿಯಲ್ಲಿ ಕಡಿಮೆ ಖರ್ಚಿನ ಸರಳ ಜೀವನ (low energy lifestyle) ವನ್ನು ಒಂದು ವ್ರತದಂತೆ ಪಾಲನೆ ಮಾಡುತ್ತಿರುವವರು ಡಾ| ಪ್ರದೀಪ ಸಿ ಆರ್. ಐಐಟಿ ಖರಗಪುರದಲ್ಲಿ ಗಣಿತಶಾಸ್ತ್ರ ಪದವಿ ಪಡೆದ ಇವರು ಐಐಟಿ ಮುಂಬೈನಿಂದ ಡಾಕ್ಟರೇಟ್ ಪದವಿ ಪಡೆದರು. ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‍ನಲ್ಲಿ ಸಂಶೋಧಕರಾಗಿ ಹಾಗೂ ಕೆಲವುಕಾಲ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಪ್ರಾಧ್ಯಾಪಕರಾಗಿ ಕೂಡ ಸೇವೆ ಸಲ್ಲಿಸಿದರು. ಪ್ರಸ್ತುತ ಪೂರ್ಣಪ್ರಮಾಣದ ಕ್ರಷಿಕರು. ಬಸವನಗುಡ್ಡದ ಹಳ್ಳಿಯಲ್ಲಿ ವಾಸವಾಗಿ ಸಂಪನ್ಮೂಲಗಳ ಮಿತಬಳಕೆಯಲ್ಲಿ ಸರಳವಾಗಿ ಆದರೆ ಸಮೃದ್ಧವಾಗಿ ಹೇಗೆ ಬದುಕಬಹುದು ಎಂದು ಅಭ್ಯಾಸ ಮಾಡುತ್ತಿದ್ದಾರೆ. ಇವರ ಮನೆಗೆ ವಿದ್ಯುತ್ ಸಂಪರ್ಕವೇ ಇಲ್ಲ. ಮಳೆಕೊಯ್ಲಿನ ಮೂಲಕ ಅಗತ್ಯವಾದ ನೀರನ್ನು ಸಂಗ್ರಹಿಸುತ್ತಾರೆ. ಅತೀ ಅಗತ್ಯದಲ್ಲಿ ಮಾತ್ರ ಡೀಸೆಲ್-ಪೆಟ್ರೋಲ್ ವಾಹನಗಳನ್ನು ಬಳಸುತ್ತಾರೆ. ಚಾರಣ ಪಕ್ಷಿವೀಕ್ಷಣೆ ಮುಂತಾದ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಇವರ ಕೃಷಿಭೂಮಿಯಲ್ಲಿ ಅನೇಕ ಪ್ರಾಣಿ-ಪಕ್ಷಿಗಳು ಸ್ವಚ್ಛಂದವಾದ ಆಶ್ರಯ ಪಡೆದಿವೆ. ಹಳ್ಳಿಯ ಮಕ್ಕಳೊಡನೆ ಬೆರೆಯುತ್ತಾರೆ, ಅವರಿಗೆ ವಿಜ್ಞಾನ ಕಲಿಸುತ್ತಾರೆ. ಒಟ್ಟಿನಲ್ಲಿ ಪ್ರಕೃತಿಯ ಮಡಿಲಿನಲ್ಲಿ ಸರಳ ಆದರೆ ಸಮೃದ್ಧ ಮತ್ತು ಅರ್ಥಪೂರ್ಣ ಜೀವನ ಡಾ| ಪ್ರದೀಪ ಸಿ ಆರ್ ಅವರದು.



ಶ್ರೀಮತಿ ಗೀತಾ ಅರವಿಂದರವರು ಮುಂಬೈನ ಐಐಟಿಯಲ್ಲಿ ಶಿಕ್ಷಣ ಪೋರೈಸಿ ಸುಮಾರು 7 ವರ್ಷಗಳ ಕಾಲ ಸಾಫ್ಟವೇರ್ ಉದ್ಯೋಗಿಯಾಗಿದ್ದವರು. ನಂತರ ಕೈತುಂಬ ಸಂಬಳ ನೀಡುವ ಕೆಲಸಕ್ಕೆ ತೀಲಾಂಜಲಿಯಿತ್ತು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುವುದು ಹಾಗೂ ವಿಜ್ಞಾನದ ಕಲಿಕೆಯನ್ನು ಆಸಕ್ತಿದಾಯಕವಾಗಿ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡರು. ಈ ದೃಷ್ಟಿಯಿಂದ 'ಅನುಭವ ಸೈನ್ಸ್ ಫೌಂಡೇಶನ್' ಎಂಬ ಸಂಸ್ಥೆಯನ್ನು ಆರಂಭಿಸಿದರು. ವಿಜ್ಞಾನವನ್ನು ಪರೀಕ್ಷಾ ದೃಷ್ಟಿಯಿಂದ ಕಲಿಯುವಂತಹ ಇಂದಿನ ಪದ್ಧತಿಯನ್ನು ಬದಲಾಯಿಸಿ, ನಮ್ಮ ಅನುಭವಕ್ಕೆ ಎಟುಕುವ ರೀತಿಯಲ್ಲಿ ವಿಜ್ಞಾನವನ್ನು ಬೋಧಿಸುವ ಕ್ರಮವನ್ನು ಬೆಳಸುವುದು, ಮಕ್ಕಳಲ್ಲಿ ವಿಜ್ಞಾನದ ಕಲಿಕೆ ಆಸಕ್ತಿದಾಯಕವಾಗುವಂತೆ ಮಾಡುವುದರ ಜೊತೆಗೆ ವೈಜ್ಞಾನಿಕ ಚಿಂತನೆಯನ್ನು ಬೆಳೆಸುವುದು ಮುಂತಾದ ಕಾರ್ಯಗಳಲ್ಲಿ 'ಅನುಭವ ವಿಜ್ಞಾನ ಸಂಸ್ಥೆ' ತೊಡಗಿಕೊಂಡಿದೆ. ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷರನ್ನು ತರಬೇತುಗೊಳಿಸಿ ಅವರನ್ನೂ ಕೂಡ ಈ ಕಾರ್ಯಕ್ಕೆ ಜೋಡಿಸಲಾಗುತ್ತದೆ. 'ಅನುಭವ' ವಿಜ್ಞಾನ ವಸ್ತು ಪ್ರದರ್ಶನಗಳನ್ನೇರ್ಪಡಿಸಿ ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ಕಲಿಕೆಯ ಉತ್ಸಾಹವನ್ನು ಹೆಚ್ಚಿಸಲಾಗುತ್ತದೆ. ಖಾಸಗೀ ಶಾಲೆ, ಸರ್ಕಾರಿ ಶಾಲೆ, ಟೆಂಟ್ ಶಾಲೆಗಳೆನ್ನದ ಎಲ್ಲ ವರ್ಗದ ಮಕ್ಕಳನ್ನೂ ವಿಜ್ಞಾನದ ಸೂತ್ರದಲ್ಲಿ ಸೇರಿಸುತ್ತಿರುವ ಶ್ರೀಮತಿ ಗೀತಾರವರ ಕಾರ್ಯ ಎಲ್ಲ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಪ್ರೇರಣಾದಾಯಿ.



ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದ 40% ಹೆಚ್ಚು ಮನೆಗಳಲ್ಲಿ ಇಂದಿಗೂ ಸರಿಯಾದ ಶೌಚ ವ್ಯವಸ್ಥೆಯಿಲ್ಲ. ಈ ಸಮಸ್ಯೆಯನ್ನು ಮನಗಂಡು ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಶೌಚ ವ್ಯವಸ್ಥಯಲ್ಲಿ ಪರಿಶುದ್ಧತೆ ಹಾಗೂ ಗ್ರಾಮ ನೈರ್ಮಲ್ಯೀಕರಣದಲ್ಲಿ ಪ್ರಯತ್ನಶೀಲರಾದವರು ಶ್ರೀ ವಾಸುದೇವರಾವ್ ದೇಶಪಾಂಡೆ. ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸ್ವರ್ಣಪದಕದೊಂದಿಗೆ ಪದವಿ ಪಡೆದು ಅಮೆರಿಕದ ಮೆಸ್ಯಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದರು. ಕೆಲವು ಕಾಲ ಅಮೆರಿಕದಲ್ಲಿ ಉದ್ಯೊಗ ನಿಮಿತ್ತ ನೆಲೆಸಿದ ಶ್ರೀಯುತರು ಪ್ರಸ್ತುತ ಭಾರತದಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ ಪ್ರಬಂಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ಫೋಸಿಸ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭವಾದ ಇವರ 'ಪರಿಶುದ್ಧ' ಯೋಜನೆ 'ಬಯಲು ಶೌಚ ಮುಕ್ತ ಗ್ರಾಮದೆಡೆಗೆ ಒಂದು ದಿಟ್ಟ ಹೆಜ್ಜೆ' ಎಂಬ ಮಂತ್ರದೊಂದಿಗೆ ಗ್ರಾಮ ನೈರ್ಮಲ್ಯೀಕರಣದ ಕೆಲಸದಲ್ಲಿ ತೊಡಗಿಕೊಂಡಿದೆ. ಗ್ರಾಮಗಳ ಶೌಚ ಸಮಸ್ಯೆಯ ಪರಿಹಾರಕ್ಕಾಗಿ ಕೇವಲ 18 ತಿಂಗಳ ಅಲ್ಪಾವಧಿಯಲ್ಲಿ 11,250ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಗ್ರಾಮನೈರ್ಮಲ್ಯದಲ್ಲಿ ಸ್ಥಳೀಯರಿಗೆ ಮಾಹಿತಿ/ತರಬೇತಿಯನ್ನು ನೀಡುವುದರ ಜೊತೆಗೆ ಅವರನ್ನೂ ಕಾರ್ಯದಲ್ಲಿ ಜೋಡಿಸಲಾಗುತ್ತದೆ. ಇದುವರೆಗೆ ಸುಮಾರು 400 ಗ್ರಾಮಗಳ 5 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ನೈರ್ಮಲ್ಯದ ತರಬೇತಿ ನೀಡಿದ 'ಪರಿಶುದ್ಧ' ಯೋಜನೆಯ ಕಾರ್ಯ ಶ್ಲಾಘನೀಯ. ಇದರ ರೂವಾರಿ ಶ್ರೀ ವಾಸುದೇವರಾವ್ ದೇಶಪಾಂಡೆ ಬಿಡುವಿರದ ಐಟಿ-ಸಾಫ್ಟವೇರ್ ಜಗತ್ತಿನ ಜನರೂ ಹೇಗೆ ಸಮಾಜಹಿತ ಕಾರ್ಯಗಳಲ್ಲಿ ತೊಡಗಬಹುದು ಎನ್ನುವುದಕ್ಕೆ ಉತ್ತಮ ಮಾದರಿಯಾಗಿದ್ದಾರೆ.



ಯುವಮನಗಳನ್ನು ಸೇವೆಯೆಂಬ ಸೂತ್ರದಲ್ಲಿ ಪೋಣಿಸುತ್ತಿರುವವರು ಯೂಥ್ ಫಾರ್ ಸೇವಾ (YFS) ಸಂಸ್ಥೆಯ ಸಂಸ್ಥಾಪಕ ಸಂಯೋಜಕ ಶ್ರೀ ವೆಂಕಟೇಶಮೂರ್ತಿಯವರು. ಸುರತ್ಕಲ್ಲಿನ ಕೆಆರ್‍ಇಸಿ (ಈಗಿನ ಎನ್‍ಐಟಿ)ನಲ್ಲಿ ಇಂಜಿನಿಯರಿಂಗ ಪದವಿ ಪಡೆದ ನಂತರ ಕೆಲಕಾಲ ಪುಣೆಯಲ್ಲಿ ಮತ್ತು 15 ವರ್ಷಗಳ ಕಾಲ ಅಮೆರಿಕದಲ್ಲಿ ಸಾಫ್ಟವೇರ್ ತಂತ್ರಜ್ಞರಾಗಿ ಕಾರ್ಯನಿರ್ವಹಿಸಿದರು. ವೃತ್ತಿಯ ಜೊತೆಗೆ ಸೇವಾ ಇಂಟರ್‍ನ್ಯಾಶನಲ್, ಐಡಿಆರ್‍ಎಪ್ ಮುಂತಾದ ಅನೇಕ ಸೇವಾ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ವೆಂಕಟೇಶಮೂರ್ತಿಯವರು 1997ರಲ್ಲಿ 2 ವರ್ಷಗಳ ಕಾಲ ಟ್ರಿನಿಡಾನ್ ಮತ್ತು ಗಯಾನಾ ದೇಶಗಳಲ್ಲಿ ಸೇವಾವ್ರತಿಯಾಗಿ ಕೆಲಸ ಮಾಡಿದರು. ಬಳಿಕ ಭಾರತಕ್ಕೆ ಮರಳಿ ಯುವಜನರನ್ನು ಸೇವಾಕಾರ್ಯದಲ್ಲಿ ಜೋಡಿಸುವ ದೃಷ್ಟಿಯಿಂದ 2007ರಲ್ಲಿ ಯೂಥ್ ಫಾರ್ ಸೇವಾ ಸಂಘಟನೆಯನ್ನು ಆರಂಭಿಸಿ ಅದರಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡಿದ್ದಾರೆ. ಅಂದಿನಿಂದ ವಾಯ್‍ಎಫ್‍ಎಸ್ 5000ಕ್ಕೂ ಹೆಚ್ಚು ಯುವಕ-ಯವತಿಯರನ್ನು ಸೇವಾಕಾರ್ಯಗಳಲ್ಲಿ ಜೋಡಿಸಿದೆ. ಐಟಿ ಉದ್ಯೋಗಿಗಳು, ವೈದ್ಯರು, ಗೃಹಿಣಿಯರು, ವಿದ್ಯಾರ್ಥಿಗಳು ಹೀಗೆ ಅನೇಕರು ವಾಯ್‍ಎಫ್‍ಎಸ್‍ನ ವೇದಿಕೆಯ ಅಡಿಯಲ್ಲಿ ಬಡಮಕ್ಕಳಿಗೆ ಉಚಿತ ಪಾಠ, ಪರಿಸರ ಸಂರಕ್ಷಣೆ, ಆಸ್ಪತ್ರೆಗಳಲ್ಲಿ ಸೇವಾಕಾರ್ಯ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಾಯ್‍ಎಫ್‍ಎಸ್‍ನ 'ಸ್ಕೂಲ್ ಕಿಟ್' ಅಭಿಯಾನ, ವಿದ್ಯಾಚೇತನ, ಡಾಕ್ಟರ್ಸ ಫಾರ್ ಸೇವಾ ಮುಂತಾದ ಕಾರ್ಯಕ್ರಮಗಳು ಅನೇಕ ಮಕ್ಕಳ ಅಬಲರ ಬಾಳಿನಲ್ಲಿ ಬೆಳಕು ಮೂಡಿಸಿವೆ. ಬೆಂಗಳೂರಿನಲ್ಲಿ ಆರಂಭಗೊಂಡ ವಾಯ್‍ಎಫ್‍ಎಸ್ ಕಾರ್ಯ ಶಿವಮೊಗ್ಗ, ಮೈಸೂರು, ಬೆಳಗಾವಿ, ಚೆನ್ನೈ, ಹೈದರಾಬಾದ್, ಭೋಫಾಲ ಮುಂತಾದ ಕಡೆ ವಿಸ್ತರಿಸಿವೆ. ಯುವಜನರೂ ಸಮಾಜಹಿತ ಕಾರ್ಯಗಳಲ್ಲಿ ತೊಡಗಬಹುದೂ ಎಂದು ತೋರಿಸಿ ಅವರಿಗೆ ಒಂದು ವೇದಿಕೆಯನ್ನು ಒದಗಿಸಿದವರು ಶ್ರೀ ವೆಂಕಟೇಶಮೂರ್ತಿಯವರು.


ವೃತ್ತಿಯಲ್ಲಿ ಐಟಿ ಉದ್ಯೋಗಿ ಆದರೆ ಪ್ರವೃತ್ತಿಯಲ್ಲಿ ಪರಿಸರ ಪ್ರೇಮಿ ಶ್ರೀ ರಾಜೇಶ ಠಕ್ಕರ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಿಸರ್ಗಸ್ನೇಹಿ ಜೀವನ ಶೈಲಿ, ಸಸ್ಟೇನೇಬಲ್ ಲಿವಿಂಗ್‍ನ ಕುರಿತು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ನಿಸರ್ಗಸ್ನೇಹಿ ಜೀವನಶೈಲಿಯ ಸಂಶೋಧನೆಯಲ್ಲಿ ತೊಡಗಿರುವ ಬೆಂಗಳೂರಿನಲ್ಲಿರುವ "ಭೂಮಿ" ಕಾಲೇಜಿನ ನಿರ್ದೇಶಕರು ಹಾಗೂ ಪ್ರಾಧ್ಯಾಪಕರು ಶ್ರೀ ರಾಜೇಶ ಠಕ್ಕರರವರು. ಅವರು ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಸಂಭಂಧಿಸಿದ ಅನೇಕ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆಗೆ ಸಂಭಂದಿಸಿದ ಅನೇಕ ರಚನಾ ವಿನ್ಯಾಸಗಳನ್ನು ಮಾಡಿ ಅನುಷ್ಠಾನಗೊಳಿಸಿದ್ದಾರೆ. ಉದಾಹರಣೆಗೆ ಕಟ್ಟಡಗಳನ್ನು ಕಟ್ಟುವಲ್ಲಿ ಸ್ಥಿರವಾದ ಮಣ್ಣಿನ ಬ್ಲಾಕ್‍ಗಳನ್ನು ಬಳಸುವುದು, ಕಾಂಪೋಸ್ಟ್ ಶೌಚಾಲಯ, ಸೌರಶಕ್ತಿಯ ಬೆಳಕು ಹಾಗೂ ಗಾಳಿ ಅತಿಹೆಚ್ಚು ಬಳಕೆಯಾಗುವಂತೆ ಕಟ್ಟದ ವಿನ್ಯಾಸಗೊಳಿಸುವುದು ಇತ್ಯಾದಿ. ಪರಿಸರ ಸಂರಕ್ಷಣೆಯ ಬಗ್ಗೆ ಜಗತ್ತಿನ ನಾಯಕರುಗಳೇ ತಲೆಕೆಡಿಸಿಕೊಂಡಿರುವಾಗ ಭೂಮಿಯ ಧಾರಣ ಶಕ್ತಿಗೆ ಹೊಂದುವಂತೆ ಜೀವನಶೈಲಿ ರೂಪಿಸುವ ಮಾದರಿಗಳನ್ನು ಅನುಷ್ಠಾನಕ್ಕೆ ತರುತ್ತಿರುವವರು ಶ್ರೀ ರಾಜೇಶ ಠಕ್ಕರ.



ಪರಿಸರ ಸ್ನೇಹಿ ಸಂಚಾರಿ ವ್ಯವಸ್ಥೆಯನ್ನು ಪ್ರಚುರಗೊಳಿಸುವ ಉದ್ಧೇಶದಿಂದ ಪ್ರಾರಂಭವಾದ ಉಪಕ್ರಮ 'ನಮ್ಮ ಸೈಕಲ್'ನ ಪ್ರವರ್ತಕ ಶ್ರೀ ಮುರಳಿ ಹೆಚ್ ಆರ್. ವೃತ್ತಿಯಲ್ಲಿ ಕಾರ್ಪೋರೇಟ್ ಜಗತ್ತಿನಲ್ಲಿ ಬ್ಯುಸಿನೆಸ್ ಪ್ರೊಸೆಸ್ ಮ್ಯಾನೇಜ್‍ಮೆಂಟ್ ಮತ್ತು ಅಂತರ್ಜಾಲ ತಂತ್ರಜ್ಞಾನದ ತರಬೇತುದಾರ. ಏಷಿಯ ಮತ್ತು ಯೂರೋಪಿನ ಅನೇಕ ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ಫ್ರಾನ್ಸಿನಲ್ಲಿದ್ದಾಗ ಸೈಕಲ್ಲಿನ ಗೀಳು ಹಿಡಿಸಿಕೊಂಡರು. ಭಾರತಕ್ಕೆ ಮರಳಿ ಸೈಕಲ್‍ನ ತಾಂತ್ರಿಕ ಅಭಿವೃದ್ಧಿಯ ಜೊತೆಗೆ ನಮ್ಮ ನಗರಗಳಲ್ಲಿ ಸೈಕಲ್ ಬಳಕೆಯನ್ನು ಜನಪ್ರಿಯಗೊಳಿಸುವ ಕೆಲಸದಲ್ಲಿ ತೊಡಗಿದ್ದಾರೆ. ಈ ಉದ್ಧೇಶದಿಂದ 2012ರಲ್ಲಿ 'ನಮ್ಮ ಸೈಕಲ್' ಆರಂಭಿಸಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಮಾದರಿ ಪ್ರಕಲ್ಪವನ್ನು ಪ್ರಾರಂಭಗೊಳಿಸಿದರು. 'ನಮ್ಮ ಸೈಕಲ್' ಬಿಬಿಎಂಪಿ, ಬೆಸ್ಕಾಮ್ ಹಾಗೂ ಕೆಲವು ಖಾಸಗೀ ಸಂಸ್ಥೆಗಳ ಸಹಯೋಗದೊಂದಿಗೆ ನಗರಗಳಲ್ಲಿ ಸೈಕಲ್ ಕಿಯೋಸ್ಕ್‍ಗಳ ಸ್ಥಾಪನೆ, ರಸ್ತೆಗಳಲ್ಲಿ ಸೈಕಲ್ ಪಥವನ್ನು ನಿರ್ಮಿಸುವುದು, ಜನರಲ್ಲಿ ಜಾಗೃತಿ ಮೂಡಿಸುವುದು ಮುಂತಾದ ಕೆಲಸಗಳನ್ನು ಮಾಡುತ್ತಿದೆ. ಸೈಕಲಿನ ಬಳಕೆ ಚಿಕ್ಕ ವಿಷಯವಾದರೂ ವಾಹನ ದಟ್ಟಣೆ ದಿನೇ ದಿನೇ ಹೆಚ್ಚುತ್ತಿರುವ ನಗರಗಳಲ್ಲಿ ಹೇಗೆ ಆರೋಗ್ಯ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆಗೆ ಸಹಾಯಕವಾಗಬಹುದು ಎನ್ನುವ ಸಂದೇಶವನ್ನು ಮೊಳಗಿಸುತ್ತಿರುವವರು ಶ್ರೀ ಮುರಳಿ.

ಇವರೆಲ್ಲರ ನಡುವೆ ಕೆಲವು ಸಮಾನ ತಂತುಗಳಿವೆ. ಇವರಲ್ಲಿ ಪ್ರಕೃತಿ ಹಾಗೂ ಸಮಾಜದ ಬಗ್ಗೆ ಕಾಳಜಿಯ ಜೊತೆಗೆ ಜೀವನಪ್ರೀತಿ ತೀವ್ರವಾಗಿದೆ. ತಮ್ಮ ಬಾಳಿನ ಜೊತೆಗೆ ಸಹಯಾತ್ರಿಕರ ಬದುಕನ್ನು ಸುಗಮಗೊಳಿಸುವ ಬಲವಾದ ಇಚ್ಛೆ ಕಾಣುತ್ತದೆ. ಇವರು ಉನ್ನತ ಶಿಕ್ಷಣ ಪಡೆದು ಶ್ರೀಮಂತಿಕೆಯ ದರ್ಬಾರಿನ ಜೀವನ ನಡೆಸುವ ಅವಕಾಶ ಹೊಂದಿದ್ದರೂ ಸರಳ ಹಾಗೂ ಸಮೃದ್ಧ ಬದುಕನ್ನು ಆಯ್ದುಕೊಂಡವರು. ಎಲ್ಲರಂತೆ ಸಾವಿರ ಸಮಸ್ಯೆಗಳ ಇದಿರಿದ್ದರೂ, ಪರಿಹಾರವನ್ನು ಹುಡುಕಲು ಪ್ರಯತ್ನಿಸಿದವರು. ವೈರುಧ್ಯಗಳ ನಡುವಲ್ಲೇ ಹೊಸ ಹಾದಿ ಹಿಡಿದವರು.

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...