Thursday, May 7, 2015

ಹಿಂದೆ ನಡೆದ ಹಾದಿಗಳಲಿ ಒಂದೆರಡು ಹೆಜ್ಜೆಗಳು

                ಬಹುತೇಕ ಸಂದರ್ಭಗಳಲ್ಲಿ ನಮ್ಮ ಸುತ್ತಲೂ ನಡೆದಿರುವ ದೊಡ್ಡದೊಂದು ಬದಲಾವಣೆ ಗಮನ ಸೆಳೆಯುವ ಮಟ್ಟಿಗೆ ನಮ್ಮ ಗ್ರಹಿಕೆಗೆ ಬಾರದೇ ಇರುತ್ತದೆ. ಕಾರಣವಿಷ್ಟೇ, ನಾವೂ ಆ ಪರಿವರ್ತನಾ ಪ್ರಕ್ರಿಯೆಯ ಅಂಗವಾಗಿರುತ್ತೇವೆ. ಬದಲಾವಣೆಯ ಪ್ರಕ್ರಿಯೆಯ ಏರಿಕೆಯ ಬೆಳವಣಿಗೆ –incremental change ನಮ್ಮ ಮುಂದೆಯೇ ನಡೆದು ಹಂಚಿ ದೀರ್ಘವಾಗಿ ನಮ್ಮ ಅನುಭವಕ್ಕೆ ಸಿಕ್ಕಿದ್ದರಿಂದ, ಒತ್ತಟ್ಟಿಗೇ ನಮ್ಮ ಗ್ರಹಿಕೆಗೆ ಬಂದಾಗ ಆಗುವ ಅನುಭವ ಅಂತಹ ಸಂದರ್ಭದಲ್ಲಿ ಆಗುವುದಿಲ್ಲ. ಉದಾಹರಣೆಗೆ ಮಗನೋ ಮಗಳೋ ಬೆಳೆದು ನಿಂತದ್ದು ಒಂದಿಷ್ಟು ವರ್ಷಗಳ ನಂತರ ಭೇಟಿಯಾದ ಬಂಧುವಿನ ಅಥವಾ ಸ್ನೇಹಿತನ ಗಮನಕ್ಕೆ ಬರುವಷ್ಟು ಹುಟ್ಟಿಸಿದ ತಂದೆಯ ಗ್ರಹಿಕೆಗೇ ಬಂದಿರುವುದಿಲ್ಲ. ಆದ್ದರಿಂದ ಮಾರ್ಪಾಡಾಗಿದ್ದು ಮನದ ಕದತಟ್ಟುವ ಮಟ್ಟಿಗೆ ಗಮನಕ್ಕೆ ಬರಬೇಕೂ ಅಂತಾದರೆ ದೇಶಕಾಲಗಳ ಪರಿಧಿಯಿಮದ ಒಂದು ಮಟ್ಟಿನ ಅಂತರದಲ್ಲಿ ನಿಂತು ನೋಡುವುದು ಅನಿವಾರ್ಯ.

              ಇಷ್ಟೊಂದು ಪೀಠೀಕೆ ಹಾಕಲಿಕ್ಕೂ ಕಾರಣವುಂಟು. ದಶಕದ ಹಿಂದೆ ವಿದ್ಯಾರ್ಥಿ ದೆಶೆಯಲ್ಲಿ ಆಶ್ರಯ ನೀಡಿದ್ದ ಹುಬ್ಬಳ್ಳಿಯ ಎಬಿಎಮ್‍ಎಮ್ ವಸತಿ ನಿಲಯದ ಆವರಣದಲ್ಲಿ ಹಾಗೂ ಓಡಾಡಿದ ವಿದ್ಯಾನಗರದ ಬೀದಿಗಳಲ್ಲಿ ನಾಲ್ಕಾರು ಹೆಜ್ಜೆ ನಡೆದಾಡುವ ಅವಕಾಶ ಅಚಾನಕ್ಕಾಗಿ ಇತ್ತೀಚೆಗೆ ಒದಗಿಬಂದಿತ್ತು. ಹತ್ತು ವರ್ಷಗಳಲ್ಲಿ ಹಾಸ್ಟೆಲ್ ಹಾಗೂ ವಿದ್ಯಾನಗರ ಪರಿಸರದಲ್ಲಿಯೂ ಸಾಕಷ್ಟು ಬದಲಾವಣೆಯಾಗಿದ್ದು ಸಹಜವೇ. ರಸ್ತೆಯ ಇಕ್ಕೆಲಗಲ್ಲಿ ಖಾಲಿಯಿದ್ದ ಸೈಟುಗಳಲ್ಲಿ ಬಹುಮಹಡಿ ಕಟ್ಟಡಗಳೆದ್ದಿವೆ. ಬೆರೆಳೆಣಿಕೆಯಷ್ಟೇ ಇದ್ದ ಜಾಲಿಯ ಮರಗಳೂ ಉರುಳಿವೆ. ನಾವೆಲ್ಲ ಕ್ರಿಕೆಟ್ ಆಡುತ್ತಿದ್ದ ಹಾಸ್ಟೆಲ್ ಮುಂದಿನ ಲೋಕಪ್ಪನ ಹಕ್ಕಲ ಧೂಳಿನ ಮೈದಾನವನ್ನು ಶಾಪಿಂಗ್ ಕಾಂಪ್ಲೆಕ್ಸ್, ಬೇಬಿ ಸಿಟ್ಟಿಂಗ್, ಕಿಂಡರ್‍ಗಾರ್ಡನ್ ಉದ್ಯಮಗಳು ಆಕ್ರಮಿಸಿಕೊಂಡಿವೆ. ಪಕ್ಕದ ಉದ್ಯಾನದಲ್ಲಿದ್ದ ದೇವಸ್ಥಾನದ ಸುತ್ತಲಿನ ಹಸಿರು ಕಾಣೆಯಾಗಿದೆ. ನಮ್ಮ ನಿತ್ಯ ಮುಂಜಾನೆಯ ಉಪಹಾರದ ತಾಣವಾಗಿದ್ದ ಉಡುಪಿ ದರ್ಶಿನಿಯ ಶೆಟ್ಟರು ಬೆಂಗಳೂರಿಗೆ ಸೇರಿ ಐದಾರು ವರ್ಷವೇ ಆಯಿತಂತೆ. ಅಲ್ಲೇ ಪಕ್ಕದ ಶಿವಶಕ್ತಿ ಕಾಂಡಿಮೆಂಟ ಅಂಗಡಿಯ ಅಂಕಲ್ ತಲೆಯ ಕೂದಲು ಕರ್ರಗಿದೆ ಆದರೆ ಕಿರುಗಡ್ಡ ಮೀಸೆ ಹಾಲಿನಷ್ಟು ಬೆಳ್ಳಗಾಗಿವೆ, ಜೊತೆಗೆ “ಅಂಗಡಿ ಮಾರಾಟಕ್ಕಿದೆ” ಬೋರ್ಡು ನೇತಾಡುತ್ತಿದೆ ಗೋಡೆಯ ಮೇಲೆ. ಸರತಿ ಸಾಲಿನಲ್ಲಿ ನಿಂತು ಮನೆಗೆ ಫೋನ್ ಮಾಡಲು ಕಾಯುತ್ತಿದ್ದ ಕರಿ ತೆಲುಗು ಕಿರಸ್ತನ ಟೆಲಿಫೋನ್ ಕಾಲದ ಗಾಳಿಯಲ್ಲಿ ಎಂದೋ ಉರುಳಿ ಹೋಗಿದೆ, ಎಲ್ಲಕಡೆಯಂತೆ. ಪಕ್ಕದ ಧೋಬಿ ಕುಟುಂಬದ ಹೆಣ್ಣುಮಕ್ಕಳು ಬಟ್ಟೆಯನ್ನು ಧಬಧಬನೆ ಕಲ್ಲಿನೆ ಮೇಲೆ ಕುಕ್ಕಿ ಹಿಂಡಿ ಎರಡು ಎಳೆಗಳನ್ನು ನೇಯ್ದು ಕಟ್ಟಿದ್ದ ಹಗ್ಗಕ್ಕೆ ಸಿಕ್ಕಿಸ ಒಣಗಿಸುತ್ತಿದ್ದದ್ದು ಕಾಣಸಿಗಲಿಲ್ಲ. ಮೊಯ್ನು ಪಾನ್ ಅಂಗಡಿ, ಕಿನ್ನಾಳ ಜಿಮ್ ನೋಡಲು ಮರೆತೆ!
ಇನ್ನು ನಾವು ಬದುಕಿನ ಪಾಠ ಕಲಿತ ಶಾಲೆ ಎಂದೇ ಹೇಳಬಹುದಾದ ಎಬಿಎಮ್‍ಎಮ್ ಹಾಸ್ಟೆಲಿನ ಕಂಪೌಂಡಿನೊಳಗೆ ಬಂದರೆ “ಅಭಿವೃದ್ಧಿ” “ಡೆವೆಲೊಪ್‍ಮೆಂಟ್” ಹೆಸರಿನಲ್ಲಿ ನಡೆದ ಅನೇಕ ಬದಲಾವಣೆಗಳು ಕಾಣಸಿಗುತ್ತವೆ. ಕೆಲವರ್ಷಗಳ ಕೆಳಗೆ ನಾವೆಲ್ಲ ಬಟ್ಟೆ ಒಗೆದು ಒಣಗಿಸುತ್ತಿದ್ದ ಜಾಗದಲ್ಲಿದ್ದ ಸಾಲು ತೆಂಗಿನಮರಗಳನ್ನು ಕೆಡಗಿ ಮೇಲೆಬ್ಬಿಸಿದ ಕಲ್ಯಾಣ ಮಂಟಪದ ಕಟ್ಟಡ ತೆಂಗಿನ ಮರದ ಎತ್ತರವನ್ನೂ ಮೀರಿಸಿ ತಲೆಯೆತ್ತಿದೆ. ದೊಡ್ಡಭಟ್ಟರು ಗಲಗಲ ಅಲುಗಿಸಿ ಉದುರಿಸಿದ ಹೂವನ್ನು ದೇವರ ಪೂಜೆಗೆ ಆಯ್ದುಕೊಳ್ಳುತ್ತಿದ್ದ ಪಾರಿಜಾತದ ಗಿಡ, ನಾನು ವಾಸವಾಗಿದ್ದ ರೂಮಿನ ಏಣಿಯಮೇಲೆ ಬೆಳೆದು, ಹತ್ತಿಳಿಯುವಾಗ ಪರಿಮಳ ಬೀರುತ್ತಿದ್ದ ಮಲ್ಲಿಗೆ ಬಳ್ಳಿ, ಸಂದಿಯಲ್ಲಿ ಬೆಳೆದಿದ್ದ ಸೀತಾಫಲದ ಗಿಡ ಯಾವುದೂ ಈಗ ಕಾಣಿಸುವುದಿಲ್ಲ. ಮೆಸ್ ಹಾಲಿನ ಮುಂದಿದ್ದ ಮಾವಿನ ಮರ ಹೋಮ ಮಾಡುವ ಕೋಣೆಗೆ ಜಾಗಮಾಡಿಕೊಟ್ಟಿದೆ.  ನಾವಿದ್ದಾಗ ಕೇವಲ ಐದಾರು ಟಾಯ್ಲೆಟ್ಟುಗಳಿದ್ದವು, ಈಗ ಇನ್ನೊಂದು ಮೂರ್ನಾಲ್ಕು ಜಾಸ್ತಿಯಾಗಿವೆ, ಆಗಬೇಕು, ಅತ್ಯಗತ್ಯ. ಮೆಸ್ ಹಾಲ್, ಟಿವಿ ರೂಮಿನ ಕತ್ತಲು ಇನ್ನಷ್ಟು ಹೆಚ್ಚಾಗಿದೆ. ಲೋಕಪ್ಪನ ಹಕ್ಕಲ ಮಕ್ಕಳಿಗೆಂದು ಶಾಲೆ ನಡೆಸುತ್ತಿದ್ದ ಕೋಣೆ ಕಾಣಿಸಿಲಿಲ್ಲ. ಗೇಟಿನ ಪಕ್ಕದಲ್ಲೇ ಅಂಗಡಿ ಮುಂಗಟ್ಟು ತಲೆಎತ್ತಿದೆ. 

         ಗಮನಕ್ಕೆ ಬಂದ ಇನ್ನೊಂದು ಮುಖ್ಯ ಅಂಶವನ್ನು ಇಲ್ಲಿ ಉಲ್ಲೇಖಿಸುವುದು ಒಳ್ಳೆಯದು. ಭಾನುವಾರ ಬೆಳಗಿನ ಎಂಟೂವರೆ ಒಂಭತ್ತರ ಹೊತ್ತು ಎಬಿಎಮ್‍ಎಮ್ ಹಾಸ್ಟೆಲಿನ ವಾತಾವರಣ ಹೇಗಿರುತ್ತಿತ್ತು ಅಂದರೆ- ಎರಡು ಕನ್ನಡ ಒಂದು ಇಂಗ್ಲೀಷ್ ಪೇಪರನ್ನು ಹದಿನೈದು ಮಂದಿ ಹಂಚಿಕೊಂಡು ಓದುತ್ತಿದ್ದೆವು ರೂಮ್ ನಂಬರ್ ಒಂದರ ಮುಂದೆ. ತಮ್ಮವರ ಕುಶಲವನ್ನು ಕೇಳಿ ಮನೆಗಳಿಂದ ಅಮ್ಮನೋ, ಅಪ್ಪನೋ ಅಕ್ಕನೋ ಮಾಡಿದ ಕಾಲ್‍ನಿಂದ ಮತ್ತೆ ಮತ್ತೆ ರಿಂಗಾಗುವ ಹಳೇ ಫೋನನ್ನು ಎತ್ತಿ ಮಲಗಿದ್ದವರನ್ನು ಕೂಗಿ ಕರೆದು ಎಬ್ಬಿಸುವ ಕೂಗಾಟ ಸದಾ ನಡೆಯುತ್ತಿತ್ತು. ಒಂದು ಕಡೆ ಭಾನುವಾರ ಬೆಳಗಿನ ಉಪಹಾರ ಅವಲಕ್ಕಿಗಾಗಿ ಮೆಸ್ ಹಾಲಿನ ಕಡೆಗೆ ತಾಟು ಲೋಟ ಹಿಡಿದು ಹೋಗುವವರ ಸಾಲು, ಇನ್ನೊಂದೆಡೆ ಬಾತ್‍ರೂಮ್ ಟಾಯ್ಲೆಟ್ ಕಡೆಗೆ ಬಕೆಟ್ ಟೂತ್‍ಬ್ರಶ್ ಹಿಡದು ಹೋಗಿ ಬರುವವರ ಸಾಲು, ಮಗದೊಂದು ಕಡೆ ಸಂಧ್ಯಾವಂದನೆಗೆ ಲೋಟ ಚಮಚ ಹಿಡಿದು ಹೋಗುವವರು, ಕ್ರಿಕೆಟ್ ಬ್ಯಾಟು ಬಾಲು ಹಿಡಿದು ವಾರ್ಡನ್ ಎದುರೇ ನಟ್ಟನಡುವಿನ ವರಾಂಡದಲ್ಲಿ ಆಡುವವರು, ನಡು ನಡುವೆ ಕುಶಲೋಪರಿ, ಹಾಸ್ಯ ಮಾತುಕತೆ ಒಟ್ಟಿನಲ್ಲಿ ಎಬಿಎಮ್‍ಎಮ್‍ನ ಭಾನುವಾರದ ಮುಂಜಾನೆ ಅತ್ಯಂತ ಜೀವಂತಿಕೆ ವೈಬ್ರನ್ಸಿಯಿಂದ ತುಳುಕುತ್ತಿತ್ತು. ಅಂದು ನಾನು ಎಬಿಎಮ್‍ಎಮ್ ಹಾಸ್ಟೆಲಿಗೆ ಹೋದಾಗ ಭಾನುವಾರ ಬೆಳಿಗ್ಗೆ ಸುಮಾರು ಎಂಟೂವರೆಯ ಹೊತ್ತು. ಮಾತನಾಡಿಸುವಾ ಎಂದರೆ ವರಾಂಡದಲ್ಲಿ ಒಂದು ನರಪಿಳ್ಳೆಯೂ ಕಾಣಿಸಲಿಲ್ಲ. ಟಿವಿ ಹಾಲಿನ ಕತ್ತಲೆಯಲ್ಲಿ ಮೂರ್ನಾಲ್ಕು ಮಂದಿ ಅವಲಕ್ಕಿ ಮೆಲ್ಲುತ್ತ ಅದೇ ಹಳೆ ಟಿವಿಯಲ್ಲಿ ಯಾವುದೋ ಕ್ರಿಕೆಟ್ ಮ್ಯಾಚು ನೋಡುತ್ತಿದ್ದರು. ರೂಮ್ ನಂಬರ್ ಒಂದರ ಎದುರು ಪೇಪರು ಕಾಣಲಿಲ್ಲ, ನಾವೆಲ್ಲ ಮನೆಯಿಂದ ಬರುವ ಫೋನಕರೆಗಾಗಿ ಕಾಯುತ್ತಿದ್ದ ಹಳೇ ಟೆಲಿಫೋನು ಕಾಣಿಸಲಿಲ್ಲ. 

           
            ಎಲ್ಲವೂ ಹೀಗೆ ಎಂದಲ್ಲ. ಕಾಲದ ಧಾವಂತದಲ್ಲಿ ತಮ್ಮತನವನ್ನು ಉಳಿಸಿಕೊಂಡವರೂ ಇಲ್ಲದಿಲ್ಲ. ಸುಮ್ಮನೆ ಹಾಸ್ಟಲಿನ ಅಡುಗೆ ಮನೆಯ ಕಡೆಗೆ ಇಣುಕಿ ನೋಡಿದಾಗೆ ಚಪಾತಿ ರೊಟ್ಟಿ ಮಾಡುವ ಬಾಯರು ಕಂಡು ಅವರೇ ಗುರುತಿಸಿ ‘ಆರಾಮಿದ್ದೀ ಇಲ್ಲೋ?’ ಎಂದು ವಿಚಾರಿಸಿ ಮಾತನಾಡಿಸಿದರು. ಸ್ವಲ್ಪ ವಯಸ್ಸಾಗಿದೆ, ಇನ್ನೊಂದೆರಡು ಹಲ್ಲುಗಳು ಉದುರಿವೆ, ಮುಖದ ಮೇಲಿನ ಸುಕ್ಕು ತಲೆಮೇಲಿನ ಬಿಳಿಕೂದಲುಗಳು ಜಾಸ್ತಿಯಾಗಿವೆ. ಆದರೆ ಬಾಯರ ವಾತ್ಸಲ್ಯ ಒಂಚೂರು ಕಡಿಮೆಯಾಗಿಲ್ಲ. ವಾರ್ಡನ್ನರನ್ನು ಹುಡುಕಿದೆ ಕಾಣಿಸಿಲಿಲ್ಲ. ನಮ್ಮ ವಾರ್ಡನ ರಘುಪತಿ ತಂತ್ರಿಗಳೆಂದೂ ಬದಲಾಗುವವರಲ್ಲ ಬಿಡಿ. ಹಾಗೆಯೇ ಉಡುಪಿ ದರ್ಶಿನಿಯಲ್ಲಿ ಚಹಾ ಕುಡಿಯೋಣ ಎಂದು ಬಂದೆ. ಶೆಟ್ಟರಿರಲಿಲ್ಲ, ಬೆಂಗಳೂರಿಗೆ ಹೊಗಿ ಐದು ವರ್ಷ ಆಯಿತು ಎಂದು ಪಕ್ಕದ ಶಿವಶಕ್ತಿ ಕಿರಾಣಿ ಅಂಗಡಿಯ ಅಂಕಲ್ ಹೇಳಿದರು. ಅಂಕಲ್ ನಗು ಮಾತ್ರ ಮಾಸಿಲ್ಲ, ಮೊದಲಿನಂತೇ ಮಾತು ಅದೇ ಆತ್ಮೀಯತೆ ಅವರ ಅಂಗಡಿಯಲ್ಲೂ ಅವೇ ಸಾಮಾನುಗಳು. ಎದುರಿನ ವಿಘ್ನೇಶ್ವರ ಪ್ರೌಢಶಾಲೆಯ ಕೊಠಡಿಗಳ ಸಂಖ್ಯೆ ಹೆಚ್ಚಾಗಿಲ್ಲ, ಅಷ್ಟೇ ಇದೆ. ಪ್ರೌಢಶಾಲೆಯ ಮೈದಾನದಲ್ಲಿ ಭಾನುವಾರದ ಸಂತೆ ಈಗಲೂ ನಡೆಯತ್ತಿದೆ. ಪಕ್ಕದ ಚರಂಡಿಯಲ್ಲಿ ಹೊರಳಾಡಿ ಎದ್ದ ನಾಡಹಂದಿಗಳು ಈಗಲೂ ಅದೇ ರೀತಿ ಗುಟುರು ಹಾಕುತ್ತ ಓಡುತ್ತಿವೆ ಜಾಲಿಗಿಡಗಳ ಪೊದೆಗಳ ನಡುವೆ.

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...