Sunday, November 15, 2015

ಗೋಸಂಪತ್ತಿನ ಸಂರಕ್ಷಣೆ - ಸಂವರ್ಧನೆಗಾಗಿ ಗೋಶಾಲೆಗಳು


(ಪುಂಗವ 15/11/2015)

ವಿಶ್ವದಲ್ಲೇ ಅತಿಹೆಚ್ಚು ಪಶುಸಂಪತ್ತುಳ್ಳ ದೇಶ ಭಾರತ. ಗೋವಂಶದಿಂದ ಮನುಷ್ಯನಿಗಾಗುವ ಪ್ರಯೋಜನವನ್ನು ಮನಗಂಡದ್ದಿಂದಲೇ ನಮ್ಮ ಪೂರ್ವಜರು ದನಕರುಗಳ ಸಂರಕ್ಷಣೆಗೆ ಮಹತ್ವ ನೀಡಿದ್ದಲ್ಲದೇ ಗೋವಿಗೆ ಪೂಜ್ಯ ಸ್ಥಾನವನ್ನೂ ನೀಡಿದ್ದರು. ಪ್ರಸಕ್ತ ಸನ್ನಿವೇಶದಲ್ಲಿ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಯ ಕುರಿತ ರಾಜಕೀಯ ಮೇಲಾಟಗಳ ನಡುವೆಯೂ ನಮ್ಮ ದೇಶದ ಹೆಚ್ಚಿನ ಮನೆಗಳಲ್ಲಿ ಇಂದಿಗೂ ಗೋಸೇವೆಯೊಂದಿಗೇ ದಿನನಿತ್ಯದ ಚಟುವಟಿಕೆಗೆಳು ಆರಂಭವಾಗುವುದು. ಹಾಗೆಯೇ ಭಾರತೀಯ ಗೋವಂಶ ಉಳಿವಿಗಾಗಿ ಸಾವಿರಾರು ಸಂರಕ್ಷಣಾ ಕೇಂದ್ರಗಳು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಕರ್ನಾಟಕ ರಾಜ್ಯದಲ್ಲೇ ಸುಮಾರು ಎಂಭತ್ತು ಗೋಶಾಲೆಗಳಿವೆ. ದೇಸೀ ಗೋತಳಿಗಳ ಸಂರಕ್ಷಣೆ ಈ ಎಲ್ಲ ಗೋಶಾಲೆಗಳ ಮೂಲ ಉದ್ಧೇಶವಾದರೂ ಪ್ರತಿಯೊಂದು ಕೇಂದ್ರದ ಕಾರ್ಯವಿಧಾನವೂ ತನ್ನದೇ ಆದ ವಿಶೇಷತೆ ಹಾಗೂ ಹೊಸತನವನ್ನು ಅಳವಳಡಿಸಿಕೊಳ್ಳುವ ಮೂಲಕ ಭಿನ್ನವಾಗಿದೆ. ಈ ಹಿನ್ನೆಲೆಯಲ್ಲಿ ಒಂದೆರಡು ಗೋಶಾಲೆಗಳ ಕಿರುಪರಿಚಯವನ್ನು ಇಲ್ಲಿ ನೀಡಲಾಗಿದೆ. 
ಭುಕ್ತ್ವಾ  ತೃಣಾನಿ ಶುಷ್ಕಾನಿ ಪೀತ್ವಾ ತೋಯಂ ಜಲಾಶಯಾತ್ | ದುಗ್ಧಂ ದದಾತಿ ಲೋಕೇಭ್ಯಃ ಗಾವೋ ವಿಶ್ವಸ್ಯ ಮಾತರಃ ||
ಒಣ ಹುಲ್ಲನ್ನು ತಿಂದು, ಜಲಾಶಯದ ನೀರನ್ನು ಕುಡಿದು ಲೋಕದ ಜನರಿಗೇ ಹಾಲನ್ನು ಕೊಟ್ಟು ಸಲಹುವ ಗೋವುಗಳೇ ವಿಶ್ವದ ಮಾತೆಯರು.


ರಾಷ್ಟ್ರೋತ್ಥಾನ ಗೋಶಾಲೆ - ಗೋಸಂರಕ್ಷಣೆ - ಸಂವರ್ಧನೆ - ಸಂಶೋಧನೆ

ರಾಜಸ್ಥನದ ಕಾಂಕ್ರೇಜ್ 

ಹಳ್ಳಿಕಾರ್ 
ದೊಡ್ಡಬಳ್ಳಾಪುರ ಜಿಲ್ಲೆಯ ಘಾಟಿ ಸುಬ್ರಮಣ್ಯದ ಹತ್ತಿರ ಸುಮಾರು ನೂರೈವತ್ತು ಎಕರೆ ವಿಶಾಲವಾದ ಪ್ರದೇಶದಲ್ಲಿ ರಾಷ್ಟ್ರೋತ್ಥಾನ ಗೋಶಾಲೆ ಕಾರ್ಯನಿರ್ವಹಿಸುತ್ತಿದ್ದು ದೇಸಿ ತಳಿಯ ಸುಮಾರು ಐದುನೂರು ದನಕರುಗಳು ಇಲ್ಲಿ ಆಶ್ರಯ ಪಡೆದಿವೆ. ದೂರದ ರಾಜಸ್ಥಾನದಿಂದ ಕಾಂಕ್ರೇಜ್, ಗುಜರಾತಿನಿಂದ ಗೀರ್, ಮಧ್ಯಭಾರತದಿಂದ ಸಾಹೀವಾಲ್ ಮಹಾರಾಷ್ಟ್ರದಿಂದ ದೇವನಿ ಮೊದಲಾದ ತಳಿಗಳನ್ನು ತರಿಸಲಾಗಿದ್ದು ಸ್ಥಳೀಯ ವಾತಾವರಣಕ್ಕೆ ಅವುಗಳು ಹೊಂದಿಕೊಳ್ಳುವಂತೆ ವಿಶೇಷ ಕಾಳಜಿವಹಿಸಿ ಸಾಕಲಾಗುತ್ತಿದೆ. ಕೇವಲ ಗೋಸಂರಕ್ಷಣೆಗಷ್ಟೇ ಸೀಮಿತವಾಗದೇ ಪ್ರತಿಯೊಂದು ತಳಿಯ ಭೌತಿಕ ಅಗತ್ಯಗಳು, ಆಹಾರ, ಹಾಲು ಮೊದಲಾದ ಗೋಉತ್ಪನ್ನಗಳ ಪ್ರಮಾಣ ಪ್ರಯೋಜನಗಳು ಮೊದಲಾದ ವಿಷಯಗಳಲ್ಲಿ ಸಂಶೋಧನೆ ಇಲ್ಲಿ ನಡೆಯುತ್ತಿದೆ. ಉದಾಹರಣೆ ಅತಿ ಹೆಚ್ಚು ಹಾಲು ಕೊಡುವ ಗುಜರಾತಿನ ಗೀರ್ ಮತ್ತು ರಾಜಸ್ಥಾನದ ಕಾಂಕ್ರೇಜ್ ತಳಿಗಳನ್ನು ತಂದು ಅವು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗಿದೆ. ಈ ತಳಿಗಳು ದಿನಕ್ಕೆ 15ರಿಂದ 18 ಲೀಟರಿನವರೆಗೆ ಹಾಲನ್ನು ನೀಡುವುದ ಇಲ್ಲಿನ ಸಂಶೋಧನೆಯಿಂದ ದೃಢಪಟ್ಟಿದೆ.

ಗುಜರಾತಿನ ಗೀರ್ 
ಸುತ್ತಲಿನ ಗ್ರಾಮಗಳ ರೈತರಿಗೆ ಹೋರಿಗಳನ್ನು ಸಾಕಲು ನೀಡುವದು, ಗ್ರಾಮವನ್ನು ದತ್ತು ತೆಗೆದುಕೊಂಡು ಗೋಕೇಂದ್ರಿತ ಉಳುಮೆ ಹಾಗೂ ಸಾವಯವ ಕೃಷಿಯ ಮೂಲಕ ಅಭಿವೃದ್ಧಿಪಡಿಸುವುದು, ಗೋಬರ್ ಗ್ಯಾಸ ಘಟಕವನ್ನು ನಿರ್ಮಿಸುವುದು ಮೊದಲಾದ ಅನೇಕ ಕಾರ್ಯಗಳನ್ನು ರಾಷ್ಟ್ರೋತ್ಥಾನ ಗೋಶಾಲೆ ಹಮ್ಮಿಕೊಂಡಿದೆ. ಜನಪರ ಸಂಸ್ಥೆಯೊಂದು ಸಮರ್ಥವಾಗಿ ನಡೆಸುವ ಗೋಸಂರಕ್ಷಣಾ ಕಾರ್ಯದ ಮಾದರಿಯನ್ನು ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಕಾಣಬಹುದು.



ನಾಟಿ ಗೋಶಾಲೆ - ಗೋ ಆಧಾರಿತ ಕಿರು ಉದ್ಯಮದ ಪ್ರಾಯೋಗಿಕ ಮಾದರಿ

ನಾಟಿ ಗೋಶಾಲೆ 
ಚಿಕ್ಕ ಪ್ರದೇಶದಲ್ಲಿ ದೇಸಿ ಗೋ ಉತ್ಪನ್ನಗಳನ್ನೇ ಆಧರಿಸಿ ನಡೆಸಬಹುದಾದ ಯಶಸ್ವೀ ಉದ್ಯಮದ ಮಾದರಿಯನ್ನು ನಾಟಿ ಗೋಶಾಲೆಯಲ್ಲಿ ನೋಡಬಹುದು. ಸುಮಾರು ಒಂದೂವರೆ ಎಕರೆ ವಿಸ್ತೀರ್ಣದ ಹರಡಿಕೊಂಡಿರುವ ನಾಟಿ ಗೋಶಾಲೆಯ ಕಂಪೌಂಡಿನೊಳಗೆ ಕಾಲಿಡುತ್ತಿದ್ದಂತೇ ಗ್ರಾಮೀಣ ಪ್ರದೇಶದ ಹಟ್ಟಿಯ ಶುದ್ಧ ಸುಗಂಧ ಮೂಗಿಗೆ ಬಡಿಯುತ್ತದೆ. ವೃತ್ತಿಯಲ್ಲಿ ಚಾರ್ಟರ್ಡ ಅಕೌಂಟಂಟ್ ಆಗಿರುವ ಶ್ರೀ ಸುಧೀಂದ್ರರವರು ತಾಯಿ ಶ್ರೀಮತಿ ಪಾರ್ವತಮ್ಮನವರ ಒತ್ತಾಸೆಯ ಮೇಲೆ ಆರಂಭಿಸಿರುವ ಈ ಗೋಶಾಲೆಯಲ್ಲಿ ಗೀರ್, ಸಾಹಿವಾಲ್, ಹಳ್ಳಿಕಾರ್, ಮಲೆನಾಡ ಗಿಡ್ಡ, ವಚ್ಚೂರ್ ಮೊದಲಾದ ವಿವಿಧ ತಳಿಗಳ ನೂರಕ್ಕೂ ಹೆಚ್ಚು ದನಗಳನ್ನು ಸಾಕಿ ಸಲಹಲಾಗುತ್ತಿದೆ. ದನಗಳಿಗಾಗಿ ಸ್ನಾನದ ಕೊಳ, ಬಿಸಿಲಿನ ಪ್ರದೇಶ, ಗೋಬರ್ ಗ್ಯಾಸ್ ಘಟಕ, ಬಯೋಫೀನ್- ಹುಲ್ಲು ಮೇವಿನ ಘಟಕ, ಜಲ ಶುದ್ಧೀಕರಣ ಘಟಕ ಇವೆಲ್ಲದ ಜೊತೆಗೆ ಅವರು ವಾಸವಾಗಿರುವ ಮನೆ, ಕೆಲಸಮಾಡುವ ಆಳುಗಳ ವಸತಿ ಇವೆಲ್ಲವೂ ಕೇವಲ ಒಂದೂವರೆ ಎಕರೆ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಹರಡಿವೆ.  

ಸುವ್ಯವಸ್ಥಿತ ನಾಟಿ ಗೋಶಾಲೆ 
ಗೋಮೂತ್ರ, ಗೋಮಯಗಳಿಂದ ಘನಜೀವಾಮೃತ, ಅಗ್ನಿ ಅಸ್ತ್ರ, ಪಂಚಾಮೃತ ಮೊದಲಾದ ಹಲವಾರು ಸಾವಯವ ಕೃಷಿಗೆ ಉಪಯೋಗಿಸಬಹುದಾದ ಗೊಬ್ಬರ ಔಶಧಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ. ಹಾಲು ಆಕಳಿಂದ ಸಿಗುವ ಉಪ ಉತ್ಪನ್ನ ಗೋಮಯ ಗೋಮೂತ್ರಗಳೇ ದನದಿಂದ ಸಿಗುವ ಪ್ರಮುಖ ಉತ್ಪನ್ನಗಳು ಎನ್ನುವುದು ಅವರ ಅನಿಸಿಕೆ.


ಆನ್‍ಲೈನ್ ಮೂಲಕ ಗೋ ಉತ್ಪನ್ನಗಳನ್ನು ಮಾರಾಟಮಾಡಲು http://www.pasuthai.com/ ಎನ್ನುವ ವೆಬ್‍ಸೈಟನ್ನು ನಿರ್ವಹಿಸುತ್ತಿದ್ದಾರೆ. ISO 2008-9001  ಮಾನ್ಯತೆ ಪಡೆದುಕೊಂಡ ಮೊದಲ ಗೋಶಾಲೆ ಎಂಬ ಹೆಗ್ಗಳಿಕೆಗೆ ನಾಟಿ ಗೋಶಾಲೆ ಪಾತ್ರವಾಗಿದೆ. ಹಾಗೆಯೇ ಸಾವಯವ ಉತ್ಪನ್ನ ಪ್ರಮಾಣಪತ್ರವನ್ನೂ ಕೂಡ ಈ ಗೋಶಾಲೆ ಗಳಿಸಿದೆ. 


ಸುರಭೀ ಗೋ-ಸಂರಕ್ಷಣಾ ಕೇಂದ್ರ ಮಧುಗಿರಿ
ಮಧುಗಿರಿಯ ಸುರಭಿ ಗವ್ಯೋತ್ಪನ್ನ ಕೆಂದ್ರ 
ಮಧುಗಿರ ತಪ್ಪಲಿನ ರಮಣೀಯ ಪ್ರದೇಶ ಶ್ರೀರಾಮಕ್ಷೇತ್ರದಲ್ಲಿ 2006ರಿಂದ ಸುರಭಿ ಗೋಶಾಲೆ ಕಾರ್ಯನಿರ್ವಹಿಸುತ್ತಿದೆ. ದೇಸೀ ಗೋತಳಿಗಳನ್ನೇ ಸಾಕಿ ಸ್ವಾವಲಂಬಿಯಾದಂತಹ ಗೋಶಾಲೆಯನ್ನು ನಡೆಸಬೇಕೆಂಬ ಉದ್ಧೇಶದಿಂದ ಶ್ರೀ ಮಧುಸೂದನರವರು ಆರಂಭಿಸಿದ ಸುರಭಿ ಗೋಶಾಲೆಯಲ್ಲಿ ಇದುವರೆಗೂ ಕಟುಕರಿಂದ ರಕ್ಷಿಸಲ್ಪಟ್ಟ ನೂರಾರು ದನಗಳು ಆಶ್ರಯ ಪಡೆದಿವೆ. ವಿವಿಧ ದೇಸೀ ತಳಿಯ ದನಗಳ ಜೊತೆಗೆ ಗಾಯಗೊಂಡಿರುವ, ಮುದಿಯಾದ, ಮಾನಸಿಕವಾಗಿ ಅಸ್ವಸ್ಥಗೊಂಡಿರುವ, ವಿಕಲಾಂಗ ಹೀಗೆ ಅನೇಕ ತರಹದ ದನಕರುಗಳನ್ನು ಶ್ರೀ ಮಧುಸೂದನ ದಂಪತಿ ತಮ್ಮ ಗೋಶಾಲೆಯಲ್ಲಿ ಆರೈಕೆ ನೀಡಿ ಸಲಹುತ್ತಿದ್ದಾರೆ. ಹಾಲಿನ ಹೊರತಾಗಿ ಗೋಮೂತ್ರ, ಗೋಮಯ ಗೊಬ್ಬರ ಮುಂತಾದ ಉಪ ಉತ್ಪನ್ನಗಳಿಂದ ಆದಾಯಗಳಿಸಿ ಸ್ವಾವಲಂಬಿ ಗೋಶಾಲೆಯನ್ನು ನಡೆಸಬಹುದು ಎಂದು ಅವರು ಪ್ರತಿಪಾದಿಸುತ್ತಾರೆ. ಇಲ್ಲಿ ಸುಮಾರು ಒಂಭತ್ತು ಬಗೆಯ ಗೋ ಉತ್ಪನ್ನಗಳನ್ನು ತಯಾರಿಸಿ ಮಾರಾಟಮಾಡಲಾಗುತ್ತದೆ, ಅಲ್ಲದೇ ಆಸಕ್ತರಗೆ ಈ ಕುರಿತು ತರಬೇತಿಯನ್ನೂ ನೀಡಲಾಗುತ್ತದೆ.


ಸುರಭಿ ಗೋಶಾಲೆಯ ರಮಣೀಯ ಪರಿಸರ 
ರಮಣೀರ ಪ್ರಾಕೃತಿಕ ಪ್ರದೇಶದಲ್ಲಿರುವ ಸುರಭಿ ಗೋಶಾಲೆ ಒಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಪಕ್ಕದಲ್ಲಿರುವ ಬೃಹತ್  ಶಿಲಾಬೆಟ್ಟದಿಂದ ಹರಿದು ಬರುವ ನೀರನ್ನು ಸಂಗ್ರಹಿಸಲು ಕೊಳವೊಂದನ್ನು ನಿರ್ಮಿಸಲಾಗಿದ್ದು ನಟ್ಟನಡುವಿನಲ್ಲಿ ಪಂಚಮುಖ ಶ್ರೀ ಪಶುಪತಿನಾಥ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶಾಲಾವಿದ್ಯಾರ್ಥಿಗಳು ಗೋವಿನ ಬಗ್ಗೆ ಶೈಕ್ಷಣಿಕ ಮಾಹಿತಿ ಪಡೆಯುವುದರ ಜೊತೆಗೆ ಪರಿಸರದ ಸೌಂದರ್ಯವನ್ನು ಸವಿಯುಲು, ಕುಟುಂಬ ಸಮೇತ ಒಂದು ದಿನದ ಪ್ರವಾಸ ಕೈಗೊಳ್ಳಲು ಹಾಗೆಯೇ ಕಸುವುಳ್ಳವರಿಗೆ ಚಾರಣ ಮಾಡಲು ಇದು ಹೇಳಿ ಮಾಡಿಸಿದಂತಹ ಸ್ಥಳ.


ರೈತರಿಗೆ ಉಚಿತವಾಗಿ ಎತ್ತುಗಳನ್ನು ಕೊಡುವ ಯೋಜನೆ
ಕಾಂಕ್ರೇಜ್ ಹೋರಿ 
ಅರ್ಹ ರೈತರಿಗೆ ಉಳುಮೆಗಾಗಿ ಎತ್ತಿನ ಜೋಡಿಯನ್ನು ಉಚಿತವಾಗಿ ಕೊಡುವ ಯೋಜನೆ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಜಾರಿಯಲ್ಲಿದೆ. ರೈತರಿಂದ ಅರ್ಜಿಯನ್ನು ಪಡೆದು ಯೋಗ್ಯತಾ ಪರೀಕ್ಷೆಯ ನಂತರ ಎತ್ತಿನ ಜೋಡಿಯನ್ನು ಉಚಿತವಾಗಿ ನೀಡಲಾಗುತ್ತದೆ. ಅಂತಹ ಫಲಾನುಭವಿ ರೈತರಿಗೆ ನೀಡಿದ ಜಾನುವಾರಿನ ಆರೋಗ್ಯ ಹಾಗೂ ಬಳಕೆಯ ಕುರಿತು ಕಾಲಕಾಲಕ್ಕೆ ಅಧಿಕೃತ ತಪಾಸಣೆ ನಡೆಸಿ ವೀಡಿಯೋ ಚಿತ್ರೀಕರಣದ ದಾಖಲೆಗಳನ್ನು ಮಾಡಲಾಗುತ್ತದೆ. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಯುವವರಿಗೆ ಮಾತ್ರ ಎತ್ತಿನ ಜೋಡಿಗಳನ್ನು ನೀಡುವುದು ಇನ್ನೊಂದು ವಿಶೇಷತೆ. ಇದುವರೆಗೂ ನೂರಕ್ಕೂ ಹೆಚ್ಚು ಎತ್ತಿನ ಗೋಡಿಗಳನ್ನು ಉಳುಮೆಗಾಗಿ ನೀಡಲಾಗಿದ್ದು ಹತ್ತಾರು ರೈತಾಪಿ ಕುಟುಂಬಗಳು ಪ್ರಯೋಜನ ಪಡೆದಿವೆ. 


ಸ್ಥಳೀಯ ರೈತರೊಂದಿಗೆ ಹುಲ್ಲು ಮೇವಿನ ಬದಲಾಗಿ ಗೊಬ್ಬರದ ವಿನಿಮಯ
ದೊಡ್ಡ ಸಂಖ್ಯೆಯಲ್ಲಿ ದನಗಳಿದ್ದಾಗ ಅಗತ್ಯವಿರುವ ಮೇವನ್ನು ಕಾಲಕಾಲಕ್ಕ ಒದಗಿಸುವುದು ಗೋಶಾಲೆ ನಡೆಸುವವರ ಮುಂದಿರುವ ಸವಾಲುಗಳಲ್ಲೊಂದು. ಅದರಲ್ಲೂ ಬರಗಾಲ ಅನಾವೃಷ್ಠಿ ಬೆಳೆನಾಶ ಮೊದಲಾದ ಸಮಯಗಳಲ್ಲಿ ಹುಲ್ಲಿನ ದರವೂ ಗಗನಕ್ಕೇರುವುದರಿಂದ ಮೇವನ್ನು ಹೊಂದಿಸುವುದು ಕಷ್ಟವಾಗುವ ಸಂಧರ್ಭವೊದಗುತ್ತದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಸುರಭಿ ಗೋಶಾಲೆಯಲ್ಲಿ ಸರಳವಾದ ಉಪಾಯವನ್ನು ಕಂಡುಕೊಂಡಿದ್ದಾರೆ. ಸುತ್ತಲಿನ ಗ್ರಾಮಗಳ ರೈತರೊಂದಿಗೆ ಹುಲ್ಲಿನ ಬದಲಾಗಿ ಗೊಬ್ಬರವನ್ನು ವಿನಿಮಯ ಮಾಡಿಕೊಳ್ಳುವ ಪದ್ಧತಿಯನ್ನು ಬೆಳೆಸಿಕೊಂಡಿದ್ದಾರೆ. ಗೋಶಾಲೆಯಲ್ಲೊಂದು ಟ್ರಾಕ್ಟರ್ ಇದೆ. ಟ್ರಾಕ್ಟರಿಗೆ ಗೊಬ್ಬರ ತುಂಬಿಸಿ ಕಳುಹಿಸುವುದು ಗೋಶಾಲೆಯ ಜವಾಬ್ದಾರಿಯಾದರೆ, ಮಾರ್ಗ ವೆಚ್ಚದ ಡೀಸೆಲ್ ತುಂಬಿಸಿ ಹುಲ್ಲನ್ನು ತುಂಬಿಸಿ ಕಳುಹಿಸುವ ಜವಾಬ್ದಾರಿ ರೈತರದು. ಇದರಿಂದ ಗೋಶಾಲೆಯ ದನಗಳಿಗೆ ಅಗತ್ಯ ಮೇವು ಕಾಲಕಾಲಕ್ಕೆ ಪೋರೈಕೆಯಾಗುವುದು ಒಂದಾದರೆ ರೈತರ ಹೊಲಗಳಿಗೆ ಸಮೃದ್ಧ ಸಾವಯವ ಗೊಬ್ಬರವು ದೊರಕಿ ಬಂಗಾರದ ಬೆಳೆ ಬರುತ್ತಿದೆ. ಜೊತೆಗೆ ಸ್ಥಳೀಯ ರೈತರಿಗೆ ಗೋಶಾಲೆಯೊಂದಿಗೆ ಭಾವನಾತ್ಮಕ ಸಂಭಂಧವೂ ಬೆಳೆದಿದೆ.


ಗ್ರಾಮಕ್ಕೊಂದು ಗೋಶಾಲೆ - ಹೀಗೊಂದು ಪ್ರಯೋಗ ಮಾಡಬಹುದೇ?
ಕೃಷಿಯೇ ಪ್ರಧಾನ ಉದ್ಯೋಗವಾಗಿದ್ದ ನಮ್ಮ ದೇಶದಲ್ಲಿ ಅದರ ಅಗತ್ಯಕ್ಕೆ ತಕ್ಕಂತೇ ಗೊಬ್ಬರ, ಉಳುಮೆ ಹಾಗೂ ಹಾಲು ಮೊದಲಾದವುಗಳಿಗಾಗಿ ಗ್ರಾಮೀಣ ಪ್ರದೇಶದ ಬಹುತೇಕ ಮನೆಗಳಲ್ಲಿ ದನಕರುಗಳನ್ನು ಸಾಕುವ ಪದ್ಧತಿ ಬೆಳೆದುಬಂದಿದೆ. ಇಂದು ಆರ್ಥಿಕ ಪ್ರಗತಿಯ ಹಾದಿಯಲ್ಲಿ ಬದಲಾದ ಕಾಲಕ್ಕನುಗುಣವಾಗಿ ಜೀವನ ನಿರ್ವಹಣೆಗಾಗಿ ಹೆಚ್ಚಿನ ಜನರು ಕೃಷಿಯೇತರ ಉದ್ಯೋಗವನ್ನು ಅವಂಬಿಸಬೇಕಾದುದು ಅನಿವಾರ್ಯವಾಗಿದೆ. ಅದರಿಂದಾಗಿ ಬೇರೆ ಊರುಗಳಿಗೆ ವಲಸೆ ಹೋಗುವುದು, ಚಿಕ್ಕ ಕುಟುಂಬ, ಸಮಯದ ಅಭಾವ ಮುಂತಾದ ಕಾರಣಗಳಿಂದ ಮುಂಚಿನಂತೆ ಮನೆಮನೆಗಳಲ್ಲೂ ದನಕರುಗಳನ್ನು ಸಾಕುವುದು ಇಂದಿನ ಪರಿಸ್ಥಿತಿಯಲ್ಲಿ ಕಷ್ಟಕರ. ಅಂತೆಯೇ ಹತ್ತಿಪ್ಪತ್ತು ದನಕರುಗಳಿಂದ ತುಂಬಿರುತ್ತಿದ್ದ ಕೊಟ್ಟಿಗೆಗಳಲ್ಲಿ ಕೇವಲ ಒಂದೆರಡು ದನಗಳು ಅಥವಾ ಜೆರ್ಸಿ ಆಕಳುಗಳು ಇರುವುದನ್ನು ನಾವು ಇಂದು ಕಾಣಬಹುದು. ಇದರಿಂದಾಗಿ ದೇಸಿ ಪಶುಸಂಪತ್ತು ಅಳಿವನಂಚಿಗೆ ಸಾಗುತ್ತಿದೆ ಎನ್ನುವ ಕಳವಳ ಒಂದು ಕಡೆಯಾದರೆ ಗೋವಿನಿಂದ ಸಿಗುವ ಪ್ರಯೋಜನ, ಆಕಳ ಹಾಲಿನಿಂದ ಸಿಗುವ ಪೋಷಣೆ, ಗೋಮೂತ್ರದ ಔಶಧೀಯ ಗುಣಗಳಿಂದ ಸಿಗುವ ಲಾಭ, ಗೊಬ್ಬರ, ಗೋಬರ್ ಗ್ಯಾಸ್ ಮುಂತಾದವುಳಿಂದ ಸಿಗುವ ಆರ್ಥಿಕ ಲಾಭದಿಂದ ನಾವು ವಂಚಿತರಾಗುತ್ತಿದ್ದೇವೆ.

ಆದ್ದರಿಂದ ದನಕರುಗಳನ್ನು ಸಾಕುವ ಸಲುವಾಗಿ ಸಮಾನ ಮನಸ್ಕರು ಕೈಜೋಡಿಸಿ ಸೇರಿ ಗ್ರಾಮಕ್ಕೊಂದು ಗೋಶಾಲೆಯನ್ನು ನಡೆಸಬಹುದು. ಹಲವು ಜನರ ಸಹಭಾಗಿತ್ವದಲ್ಲಿ ನಡೆಸುವ ಗೋಶಾಲೆಯು ನಮ್ಮ ಗ್ರಾಮಕ್ಕೆ ಬೇಕಾದ ಹಾಲು ಮತ್ತು ಹಾಲಿನ ಉತ್ಪನ್ನಗಳ ಅಗತ್ಯವನ್ನು ಪೋರೈಸುವುದು. ಜೊತೆಗೆ ಗೋ ಉತ್ಪನ್ನಗಳನ್ನು ತಯಾರಿಸುವ ಕಿರು ಉದ್ಯಮವನ್ನು ನಡೆಸಿ ಕೆಲವರಿಗೆ ಉದ್ಯೋಗ ನೀಡಬಹುದು, ಗೋಬರ್ ಗ್ಯಾಸ್ ಅದರ ಮೂಲಕ ವಿದ್ಯುತ್ ಉತ್ಪಾದನೆ, ಸಾವಯವ ಗೊಬ್ಬರ ತಯಾರಿ ಹೀಗೆ ಅನೇಕ ಗೋಶಾಲೆ ಕೇಂದ್ರಿತ ಆರ್ಥಿಕ ಚಟುವಟಿಕೆಗಳನ್ನು ನಡೆಸಬಹುದು. 

Friday, September 4, 2015

ಮರೆಯಲಾಗದ ಮಹಾಕದನ

(ಪುಂಗವ – 15/9/2015)


1965ರ ಭಾರತ - ಪಾಕ್ ಯುದ್ಧಕ್ಕೆ 50 ವರ್ಷಗಳು

            ದೇಶದ ಏಕತೆ ಮತ್ತು ಸಮಗ್ರತೆಯನ್ನು ಗಟ್ಟಿಯಾಗಿರಿಸುವಲ್ಲಿ ಭೌಗೋಳಿಕ ಗಡಿಗಳು ಸುರಕ್ಷಿತವಾಗಿರುವುದರ ಜೊತೆಗೆ ಜನಮಾನಸದಲ್ಲಿ ರಾಷ್ಟ್ರದ ಆತ್ಮಗೌರವವನ್ನು ಎತ್ತಿಹಿಡಿಯಬೇಕೆಂಬ ಪ್ರಜ್ಞೆ ಜಾಗೃತವಾಗಿರುವುದೂ ಅತ್ಯಗತ್ಯವಾಗಿದೆ. ಒಚಿದು ರಾಷ್ಟ್ರದ ಇತಿಹಾಸದ ಭಾಗವಾದ ಶೌರ್ಯ ಮತ್ತು ವಿಜಯಗಳ ಗಾಥೆಗಳು ರಾಷ್ಟ್ರಾಭಿಮಾನದ ಭಾವನೆಯನ್ನು ಹೆಚ್ಚಿಸುತ್ತವೆ. ಆದರೆ ಭಾರತ ವಿರೋಧಿ ಶಕ್ತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾದ ನಮ್ಮ ಸಾಧನೆಗಳನ್ನು ತಗ್ಗಿಸಿ ದೇಶದ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಸದಾ ಪ್ರಯತ್ನ ನಡೆಸುವುದು ಹೊಸದೇನಲ್ಲ. ಇಂದಿಗೆ ಐವತ್ತು ವರ್ಷಗಳ ಹಿಂದೆ 1965ರಲ್ಲಿ ಅತಿಕ್ರಮಣದ ಸಾಹಸಕ್ಕೆ ಮುಂದಾದ ಪಾಕಿಸ್ತಾನ ಸೈನ್ಯವನ್ನು ಹಿಮ್ಮೆಟ್ಟಿಸಿ ತಕ್ಕ ಪಾಠ ಕಲಿಸಿದ ನಮ್ಮ ವೀರಯೋಧರ ಸಾಧನೆಯನ್ನು, ಇದೊಂದು ಅನಿರ್ಣಾಯಕವಾದ ಸಂಘರ್ಷ ಎಂದು ಬಿಂಬಿಸಿ ಜನರ ನೆನಪಿನಿಂದ ಮರೆಯಾಗುವಂತೆ ಮಾಡಿದ್ದು ಅಪಚಾರವೇ ಸರಿ. ಈ ಹಿನ್ನೆಲೆಯಲ್ಲಿ 1965ರ ಆಗಸ್ಟ್ 5ರಿಂದ ಸೆಪ್ಟೆಂಬರ್ 22ರವರೆಗೆ ನಡೆದ ಪಾಕಿಸ್ತಾನ ಯುದ್ಧದ 50ನೇ ವರ್ಷಾಚರಣೆಯನ್ನು ಕೇಂದ್ರ ಸರ್ಕಾರ ನಿರ್ಧರಿಸಿರುವುದು ದೇಶದ ರಕ್ಷಣೆಯಲ್ಲಿ ಪ್ರಾಣತೆತ್ತ ಸಹಸ್ರಾರು ಸೈನಿಕರಿಗೆ ಸಲ್ಲಿಸುವ ಸೂಕ್ತ ಗೌರವವಾಗಿದೆ.


ನಡೆದದ್ದಿಷ್ಟು...
ಎರಡನೇ ವಿಶ್ವಯುದ್ಧದ ನಂತರ ಅತ್ಯಂತ ನಡೆದ ಅತ್ಯಂತ ಉಗ್ರವಾದ ಸಮರವೆಂದೇ ಬಣ್ಣಿಸಲಾಗುವ 1965 ಭಾರತ-ಪಾಕಿಸ್ತಾನ ಕದನ ಕಛ್‍ದಿಂದ ಕಾಶ್ಮೀರದವರೆಗಿನ ಭಾರತದ ಪಶ್ಚಿಮದಗಡಿಯುದ್ಧಕ್ಕೂ ನಡೆಯಿತು. 
1962ರ ಚೀನಾ ಯುದ್ಧದ ಸೋಲಿನಿಂದ ಭಾರತ ಸೈನ್ಯ ಶಕ್ತಿ ಮತ್ತು ಆರ್ಥಿಕವಾಗಿ ದುರ್ಬಲವಾಗಿದೆ, ಇದರ ಲಾಭ ಪಡೆದು ಕಾಶ್ಮೀರವನ್ನು ಕಬಳಿಸಬೇಕೆಂಬ ಪಾಕಿಸ್ತಾನದ ಹುನ್ನಾರವೇ ಈ ಯುದ್ಧದ ಮೂಲಕಾರನ. ಪಾಕಿಸ್ತಾನಿ ಮಿಲಿಟರಿ ಗುಪ್ತಚರ ಇಲಾಖೆ ಮತ್ತು ವಿದೇಶಾಂಗ ಮಂತ್ರಿ ಝುಲ್ಫಿಕರ್ ಅಲಿ ಭುಟ್ಟೋ ನೇತೃತ್ವದ ಸಚಿವಾಲಯ ಈ ವಿಷಯಗಳನ್ನು ಮುಂದಿಟ್ಟುಕೊಂಡು, ಕಾಶ್ಮೀರದಲ್ಲಿ ಪ್ರಬಲವಾದ ಭಾರತ ವಿರೋಧಿ ಅಲೆ ಇದೆ, ಅಲ್ಲಿನ ಜನರು ಪಾಕಿಸ್ತಾನ ಸೇರಲು ಉತ್ಸುಕರಾಗಿದ್ದಾರೆ ಎಂಬ ವಾದವನ್ನು ಮಂಡಿಸಿ ಕಾಶ್ಮೀರವನ್ನು ಆಕ್ರಮಿಸಲು ಇದು ಸುಸಂದರ್ಭ ಎಂದು ಅಂದಿನ ರಾಷ್ಟ್ರಪತಿ ಅಯೂಬ್ ಖಾನ್‍ನನ್ನು ಒಪ್ಪಿಸುವಲ್ಲಿ ಯ

ಅತಿಕ್ರಮಣಕ್ಕೆ ಮುನ್ನ ಪಾಕಿಸ್ತಾನದ ಸಿದ್ಧತೆ 
  • ಅಮೇರಿಕದೊಂದಿಗೆ ರಕ್ಷಣಾ ಒಪ್ಪಂದಕ್ಕೆ ಸಹಿಹಾಕಿ ಅಮೆರಿಕದ ನೆರವಿನಿಂದ ಸೈನ್ಯ ಶಕ್ತಿಯನ್ನು ಬೆಳೆಸಿಕೊಂಡಿತು. 
  • 1954 ರಿಂದ 1965ರವರೆಗೆ ಅಮೆರಿಕದಿಂದ ಪಾಟನ್ ಟ್ಯಾಂಕ್, ಯುದ್ಧ ವಿಮಾನಗಳು, ಜೆಟ್‍ಗಳು, ಮೆಶಿನ್ ಗನ್, ಆಧುನಿಕ ರೈಫಲ್‍ಗಳು ಮುಂತಾದವನ್ನು  ದೊಡ್ಡ ಪ್ರಮಾಣದಲ್ಲಿ ಪಡೆದು ತನ್ನ ಯುದ್ಧ ಸಾಮಗ್ರಿಗಳನ್ನು ಸಂಪೂರ್ಣ ಆಧುನಿಕಗೊಳಸಿಕೊಂಡಿತು.
  • ಪಾಕಿಸ್ತಾನದ ಸೈನ್ಯಾಧಿಕಾರಿಗಳು ಅಮೇರಿಕ ಮತ್ತು ಬ್ರಿಟನ್‍ಗಳಿಂದ ತರಬೇತಿ ಪಡೆದು ಜಂಟಿ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿದರು.
  • ಆಜಾದ್ ಕಾಶ್ಮೀರ ಎಂದು ಕರೆಯುವ ಪಾಕ್ ಆಕ್ರಮಿತ ಕಾಶ್ಮೀರದ ಸೈನ್ಯಬಲವನ್ನು ಹೆಚ್ಚಿಸಿತು.
  • ಚೀನಾದೊಂದಿಗೆ ಆರ್ಥಿಕ ಮತ್ತು ಮಿಲಿಟರಿ ಸಹಕಾರದ ಒಪ್ಪಂದವನ್ನೂ ಮಾಡಿಕೊಂಡಿತು. 



      1965ರ ಜನವರಿಯಲ್ಲಿ ಕಛ್ ಪ್ರದೇಶದಲ್ಲಿ 'ಆಪರೇಶನ್ ಡೆಸರ್ಟ ಹಾಕ್' ಹೆಸರಿನಲ್ಲಿ ಪಾಕಿಸ್ತಾನ ಸೈನ್ಯ ನುಗ್ಗುವುದರೊಂದಿಗೆ ಅತಿಕ್ರಮಣ ಪ್ರಾರಂಭವಾಯಿತು. ಭಾರತೀಯ ಸೈನ್ಯದ ಗಮನವನ್ನು ಕಛ್‍ನತ್ತ ಸೆಳೆದು ಕಾಶ್ಮೀರದ ಕಡೆ ಒಳನುಸುಳುವುದು ಪಾಕಿಸ್ತಾನದ ಮೂಲ ಉದ್ಧೇಶವಾಗಿತ್ತು. ಆರಂಭಿಕ ಗುಂಡಿನ ದಾಳಿಯ ವಿನಿಮಯದ ನಂತರ ಪಾಕಿಸ್ತಾನ ಕೆಲವು ಪೋಸ್ಟಗಳನ್ನು ಆಕ್ರಮಿಸಿಕೊಂಡು, ಮಾತುಕತೆಗೆ ಆಹ್ವಾನ ನೀಡಿತು. ಪಾಕಿಸ್ತಾನ ಆಕ್ರಮಿಸಿದ ಪ್ರದೇಶವನ್ನು ತೆರವುಗೊಳಿಸದ ಹೊರತೂ ಯಾವುದೇ ಮಾತುಕತೆಗೆ ಸಿದ್ಧವಿಲ್ಲವೆಂದು ಭಾರತ ಹೇಳಿದರೂ ಬ್ರಿಟಿನ್ನಿನ ಒತ್ತಡಕ್ಕೆ ಮಣಿದು ಕದನವಿರಾಮಕ್ಕೆ ಒಪ್ಪಿತು. ಜೂನ್ 30ರ ಕದನವಿರಾಮ ಒಪ್ಪಂದದಂತೆ ಪಾಕಿಸ್ತಾನ ಅತಿಕ್ರಮಣ ಮಾಡಿದ ಪ್ರದೇಶದಿಂದ ಹಿಂತೆಗೆಯಲೇನೋ ಒಪ್ಪಿತು ಆದರೆ ಭಾರತ ಸರ್ಕಾರ ಮತ್ತು ಸೈನ್ಯ ಯುದ್ಧಕ್ಕೆ ಸಿದ್ಧವಿಲ್ಲ ಎಂದು ಭಾವಿಸಿ ಎದೆಯುಬ್ಬಿಸಿಕೊಂಡಿತು. “ಮುಂದಿನ ಬಾರಿ ಪಾಕಿಸ್ತಾನ ಯುದ್ಧ ಬಯಸಿದರೆ ಭಾರತ ತನ್ನ ಆಯ್ಕೆಯ ಸಮಯದಲ್ಲಿ ತಾನು ಆರಿಸಿದ ಪ್ರದೇಶದ ಮೇಲೆ ದಾಳಿ ಮಾಡುತ್ತದೆ” ಎಂದ ಪ್ರಧಾನಿ ಲಾಲ ಬಹಾದ್ದೂರ್ ಶಾಸ್ತ್ರಿಯವರ ಮಾತನ್ನು ಪಾಕಿಸ್ತಾನ ಲಘುವಾಗಿ ಪರಿಗಣಿಸಿತು.

        ಈ ನಡುವೆ ಕಾಶ್ಮೀರದ ನಿಯಂತ್ರಣ ರೇಖೆಗುಂಟ ಶೆಲ್ಲಿಂಗ, ಗುಂಡಿನ ದಾಳಿಗಳು, ಒಳನುಸುಳುವುದು ಮುಂತಾದ ಪ್ರಚೋದನಕಾರಿ ಚಟುವಟಿಕೆಗಳು ಹೆಚ್ಚಾಗಿದ್ದಲ್ಲದೇ, ಆಗಸ್ಟ ತಿಂಗಳಿನಲ್ಲಿ ಪಾಕಿಸ್ತಾನದಿಂದ ಸುಮಾರು 30000ಕ್ಕೂ ಹೆಚ್ಚು ನುಸುಳುಕೋರರು, ಅವರಲ್ಲಿ ಬಹುತೇಕ ಪಾಕಿಸ್ತಾನಿ ಸೈನಿಕರು, ನಿಯಂತ್ರಣ ರೇಖೆಯನ್ನು ದಾಟಿ ಒಳನುಸುಳಿದರು. ದೊಡ್ಟ ಪ್ರಮಾಣದಲ್ಲಿ ಗಲಭೆಯನ್ನು ಎಬ್ಬಿಸಿ ಸ್ಥಳೀಯ ಜನರ ಅನುಕಂಪಗಳಿಸುವುದು ಇದರ ಉದ್ಧೇಶವಾಗಿತ್ತು. ಆಪರೇಶನ್ ಜಿಬ್ರಾಲ್ಟರ್ ಹೆಸರಿನ ಈ ಅತಿಕ್ರಮಣದ ಮಾಹಿತಿ ದುರದೃಷ್ಟವಶಾತ್ ಒಂದು ವಾರ ತಡವಾಗಿ ಭಾರತೀಯ ಸೇನೆಗೆ ದೊರಕಿತು. ಸ್ಥಳೀಯ ಜನರೊಡನೆ ಬೆರೆತು ಆಗಸ್ಟ 8ರಂದು ಪೀರ್ ದಸ್ತಗೀರ್ ಸಾಹಿಬ್ ಉತ್ಸವ ಹಾಗೂ ಮರುದಿನ ಶೇಖ್ ಅಬ್ದುಲ್ಲಾ ಬಂಧನದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ತಮ್ಮ ಕಾರ್ಯವನ್ನು ಸಾಧಿಸುವ ಯೋಜನೆಗೆ ಭಾರತೀಯ ಸೈನ್ಯದ ಜಾಗರೂಕತೆಯಿಂದ ಹಿನ್ನೆಡೆಯಾಯಿತು. ಅನೇಕ ಒಳನುಸುಳುಕೋರರು ಬಂಧಿಸಲ್ಪಟ್ಟರು. ರಾಜ್ಯಾಂದ್ಯಂತ ಸುರಕ್ಷತೆಯನ್ನು ಬಿಗಿಗೊಳಿಸಲಾಯಿತು. ಒಳನುಸುಳುಕೋರರ ವಿರುದ್ಧ ಕಾರ್ಯಚರಣೆ ನಡೆಸಲಾಯಿತು. ಸ್ಥಳೀಯರ ಸಹಾಯ ಸಿಗದೆ ಅನೇಕರು ಬಂಧನಕ್ಕೊಳಗಾದರು, ಅನೇಕರು ಶರಣಾದರು, ಕೆಲವರು ಗಡಿದಾಟಿ ಪರಾರಿಯಾದರು. 
ಆಗಸ್ಟ 28ರಂದು ನಿಯಂತ್ರಣ ರೇಖೆಯನ್ನು ದಾಟಿದ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಹಾಜಿ ಪೀರ್ ಪಾಸ್ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಇದೊಂದು ಬಹುಮುಖ್ಯ ವಿಜಯ ಏಕೆಂದರೆ ಹಾಜಿ ಪೀರ್ ಮೇಲಿನ ನಿಯಂತ್ರಣವೆಂದರೆ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಪ್ಪರಾಬಾದ್‍ನ್ನು ವಶಕ್ಕೆ ತೆಗೆದುಕೊಂಡಂತೆ.
ಈ ನಡುವೆ ಪಾಕಿಸ್ತಾನವು ಛಂಬ್ ಮತ್ತು ಆಖ್‍ನೂರ್ ಪ್ರದೇಶಗಳಲ್ಲಿ ಆಪರೇಶನ್ ಗ್ರಾಂಡ್ ಸ್ಲಾಮ್ ಹೆಸರಿನಲ್ಲಿ ತೀವ್ರ ದಾಳಿಯನ್ನು ಆರಂಭಿಸಿತು. 

        ಪರಿಸ್ಥಿತಿಯ ತೀವ್ರತೆಯನ್ನು ಮನಗಂಡ ಪ್ರಧಾನಿ ಶಾಸ್ತ್ರಿ ಎರಡು ಪ್ರಮುಖ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡರು. ಒಂದು ವಾಯುಸೇನೆಯನ್ನು ಯುದ್ಧದಲ್ಲಿ ತೊಡಿಗಿಸುವುದು. ಭಾರತೀಯ ವಾಯುಸೇನೆಯ 45ನೇ ಸ್ಕ್ವಾಡ್ರನ್‍ನ್ನು ನಿಯೋಜಿಸಿ ಪಾಕಿಸ್ತಾನ ಸೇನೆಯ ಮೇಲೆ ನೇರ ಸಮರ ಸಾರಲಾಯಿತು. ಇನ್ನೊಂದು ಭಾರತೀಯ ಭೂಸೇನೆಗೆ ಪಾಕಿಸ್ತಾನದ ಮೇಲೆ ಯುದ್ಧ ಸಾರುಲು ಆದೇಶಿಸಲಾಯಿತು. ಮೊದಲನೇ ಬಾರಿಗೆ ಭಾರತೀಯ ಸೇನೆಯು ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಲಾಹೋರ್ ಮತ್ತು ಸಿಯಾಲ್ಕೊಟ್‍ಗಳತ್ತ ನುಗ್ಗಿತು. ಭಾರತೀಯ ವಾಯುಸೇನೆಯ ದಾಳಿಗೆ ಅಮೇರಿಕದಿಂದ ಆಮದಾದ ಶಸ್ತ್ರಾಸ್ತ್ರಗಳು ನಾಶವಾಗಿ, ಯುದ್ಧವಿಮಾನಗಳು ನೆರವಿಗೆ ಬಾರದೇ, ಅನೇಕ ಯುದ್ಧಟ್ಯಾಂಕುಗಳು ಭಾರತದ ವಶವಾಗಿ, ಪಾಕಿಸ್ತಾನದ ಹೃದಯದಂತಿರುವ ಲಾಹೋರ್ ನಗರವೂ ಭಾರತದ ಸೈನ್ಯದ ದಾಳಿಗೆ ತುತ್ತಾದಾಗ ಗಾಬರಿಗೊಂಡ ಪಾಕಿಸ್ತಾನ ನಡುಗಿ ಮಂಡಿಯೂರಲೇ ಬೇಕಾಯಿತು.
ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಲ್ಲದೇ ಹೋಗಿದ್ದರೆ ಪಾಕಿಸ್ತಾನಕ್ಕೆ ಸಂಪೂರ್ಣ ಶರಣಾಗತಿಯ ಹೊರತು ಅನ್ಯ ಮಾರ್ಗವೇ ಇರುತ್ತಿರಲಿಲ್ಲ. ವಿಶ್ವಸಂಸ್ಥೆಯ ಒತ್ತಡದಿಂದಾಗಿ ಭಾರತ ಸಂಘರ್ಷ ವಿರಾಮಕ್ಕೆ ಒಪ್ಪಿತು. ಯುದ್ಧ ನಿರ್ಣಾಯಕವೆಂದು ಕಾಣದಿದ್ದರೂ ಭಾರತ ಶಕ್ತಿಶಾಲಿಯಾಗಿ ಹೊರಹೊಮ್ಮಿತು.

ಯುದ್ಧೋತ್ತರ
          ಸಂಘರ್ಷ ವಿರಾಮದ ನಂತರ ಸೋವಿಯತ್ ಯೂನಿಯನ್‍ನ ತಾಷ್ಕೆಂಟ್‍ನಲ್ಲಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಜನರಲ್ ಅಯೂಬ್ ಖಾನ್ ತಾಷ್ಕೆಂಟ್ ಒಪ್ಪಂದಕ್ಕೆ ಸಹಿಹಾಕಿದರು. ಇದರ ಅನ್ವಯ ಎರಡೂ ಪಕ್ಷಗಳು ತಮ್ಮ ತಮ್ಮ ವಶದಲ್ಲಿರುವ ಪ್ರದೇಶಗಳಿಂದ ಹಿಂತೆಗೆಯಬೇಕು ಮತ್ತು ಯುದ್ಧಪೂರ್ವ ಆಗಸ್ಟ ಸ್ಥಿತಿಗೆ ಮರಳಬೇಕು ಎನ್ನುವ ಷರತ್ತಿಗೆ ಒಪ್ಪಿದವು. ಇದರರ್ಥ ಪಾಕಿಸ್ತಾನಿ ನುಸುಳುಕೋರರು ದಾಟಿಬಂದ ಆಯಕಟ್ಟಿನ ಹಾಜಿ ಪೀರ್ ಪಾಸ್‍ನ ನಿಯಂತ್ರಣ ಮೊದಲಾದ ಅನೇಕ ತಾಂತ್ರಿಕ ಲಾಭಗಳನ್ನು ಭಾರತ ಕಳೆದುಕೊಂಡಿತು. ತಾಷ್ಟೆಂಟ್‍ನಲ್ಲಿ ಪ್ರಧಾನಿ ಶಾಸ್ತ್ರಿಯವರ ಹಠಾತ್ ಮೃತ್ಯುವಿನಿಂದ ತಾಷ್ಟೆಂಟ್ ಭಾರತದ ಪಾಲಿಗೆ ಕಹಿಯಾಯಿತು.

      1965ರ ಯುದ್ಧದ ನಂತರ ನಡೆದ ಇನ್ನೆರಡು ಪಾಕಿಸ್ತಾನಕ್ಕೆ ಸಂಬಂಧಿಸಿದ ಬೆಳವಣಿಗೆಗಳು ಮಹತ್ಚದ್ದಾಗಿವೆ. ಪಾಕಿಸ್ತಾನದೊಂದಿಗೆ ರಕ್ಷಣಾ ಸಹಕಾರ ಒಪ್ಪಂದ ಹೊಂದಿದ್ದ ಅಮೇರಿಕ ಯುದ್ಧದಲ್ಲಿ ತಟಸ್ಥ ಧೊರಣೆಯನ್ನು ಅನುಸರಿಸಿತು. ಇದರಿಂದ ಪಾಕಿಸ್ತಾನ ಮತ್ತು ಅಮೇರಿಕದ ಸಂಬಂಧಗಳು ಸ್ವಲ್ಪ ಹಳಸಿದುದು ಒಂದಾದರೆ, ಪಾಠ ಕಲಿತ ಪಾಕಿಸ್ತಾನ ಚೀನಾ ಮತ್ತು ಸೋವಿಯತ್‍ಗಲ ಸಖ್ಯವನ್ನು ಬೆಳೆಸುವತ್ತ ಹೆಜ್ಜೆಯಿಟ್ಟಿತು. ಹಾಗೆಯೇ ಸೋಲಿನ ಬಾಗಿಲಿಗೆ ಬಂದು ನಿಂತರೂ ತಾನೇ ಯುದ್ಧದಲ್ಲಿ ವಿಜಯಿ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿರುವುದು ಇನ್ನೊಂದು ವಿಪರ್ಯಾಸ. 

           1965ರ ಯುದ್ಧವು ಅತ್ಯಂತ ಕಷ್ಟಕರ ಸನ್ನಿವೇಶದಲ್ಲಿ ಭಾರತದ ಮೇಲೆ ಅನಿವಾರ್ಯವಾಗಿ ಹೇರಲ್ಪಟ್ಟದ್ದಾದರೂ ಭಾರತ ಸಂದರ್ಭೋಚಿತವಾಗಿ ಎದುರಿಸಿತು. ಈ ಸಂಘರ್ಷದ ಗೆಲುವು 1962ರಲ್ಲಿ ಚೀನಾ ವಿರುದ್ಧದ ಸೋಲಿನಿಂದಾದ ಸಾಮರಿಕ, ಆರ್ಥಿಕ ಆಘಾತದಿಂದÀ ಚೇತರಿಸಿಕೊಂಡು ಹೊಸ ಆತ್ಮವಿಶ್ವಾಸದ ಮೂಡಿಸುವಲ್ಲಿ ಸಹಕಾರಿಯಾಯಿತು. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಒತ್ತಿ ಹೇಳುವುದರ ಜೊತೆಗೆ ಭಾರತ ತನ್ನ ನೆಲದ ಯಾವುದೇ ಅತಿಕ್ರಮಣವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಿತು. ಹಾಗೆಯೇ ಈ ವಿಜಯವು 1971ರ ಯುದ್ಧದಲ್ಲಿ ಪಾಕಿಸ್ತಾನ ಸೈನ್ಯ ಸಂಪೂರ್ಣ ನೆಲಕಚ್ಚಿ ಶರಣಾಗುವ ಘಟನೆಗೆ ಮುನ್ನುಡಿಯಾಯಿತು. 

Monday, June 8, 2015

ಜಾಗತೀಕರಣದ "ಯೋಗ"

(ಪುಂಗವ 15/06/2015)


ಭಾರತದ ಪ್ರಧಾನಿ ನರೇಂದ್ರ ಮೋದಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಸಾಮಾನ್ಯ ಸಭೆಯನ್ನುದ್ಧೇಶಿಸಿ ಮಾತನಾಡುವಾಗ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿವಸವನ್ನಾಗಿ ಆಚರಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. (ಜೂನ್ 21 ಉತ್ತರ ಗೋಳಾರ್ಧದಲ್ಲಿ ಅತಿ ದೊಡ್ಡ ಹಗಲಿರುವ ದಿನ.) ಪ್ರಸ್ತಾವನೆಗೆ ವಿಶ್ವದ 175 ದೇಶಗಳು ಸಹ ಪ್ರಾಯೊಜಕರಾಗಿದ್ದಲ್ಲದೇ ಒಟ್ಟೂ 193 ದೇಶಗಳ ಸಹಮತಿಯೊಂದಿಗೆ ಅಂಗೀಕಾರಗೊಂಡಿದ್ದು ವಿಶ್ವಸಂಸ್ಥೆಯ ಇತಿಹಾಸದಲ್ಲೊಂದು ಮೈಲಿಗಲ್ಲು. ಶರೀರ ಮನ ಬುದ್ಧಿಗಳ ಸಮಗ್ರ ವಿಕಾಸದ ಯೋಗ ಪದ್ಧತಿಯಾದ ಆರು ಸಾವಿರ ವರ್ಷಗಳಿಗೂ ಹಿಂದಿನ ಇತಿಹಾಸವುಳ್ಳ ಭಾರತೀಯ ಮೂಲದ ಯೋಗ ಪದ್ಧತಿಗೆ ವಿಶ್ವದೆಲ್ಲೆಡೆ ಮಾನ್ಯತೆ ದೊರೆಯುತ್ತಿರುವದು ಹಾಗೂ ಭಾರತೀಯ ಜೀವನ ಶೈಲಿಯ ಬಗ್ಗೆ ವಿಶ್ವದ ಜನರ ಆಸಕ್ತಿ ಘಟನೆಯಿಂದ ಪ್ರತಿಬಿಂಬಿತವಾಗುವುದರ ಜೊತೆಗೆ, ಭಾರತೀಯ ರಾಜತಾಂತ್ರಿಕ ಕ್ಷಮತೆಯ ಪರಿಣತಿ ಹಾಗೂ ವಿಶ್ವದ ಆಗುಹೋಗುಗಳ ಮೇಲೆ ಭಾರತದ ಪ್ರಭಾವವೂ ಸ್ಪಷ್ಟವಾಗುತ್ತದೆ.

       ಯೋಗವೆಂದರೆ ಕೇವಲ ಆಸನಗಳು ಮತ್ತು ಪ್ರಾಣಾಯಾಮ ಎಂಬುದು ಸಾಮಾನ್ಯವಾಗಿ ಜನಜನಿತವಾದ ನಂಬಿಕೆ. ಆದರೆ ಯೋಗ ಕೇವಲ ಶರೀರ ಮನಗಳ ನಿಯಂತ್ರಣ ಸಾಧನೆಯ ತಂತ್ತಕ್ಕ್ಕೆ ಸೀಮಿತವಾದುದಲ್ಲ. ಯೋಗ ಎನ್ನವುದು ಭಾರತೀಯ ಆಧ್ಯಾತ್ಮಿಕ ಚಿಂತನೆಯ ಒಂದು ತತ್ತ್ವದರ್ಶನದ ಹೆಸರು. ಯೋಗಸೂತ್ರಗಳನ್ನು ಬರೆದ ಪತಂಜಲಿ ಮುನಿಯಿಂದ ಮೊದಲ್ಗೊಂಡು, ಭಗವದ್ಗೀತೆಯ ಯೋಗತತ್ವ, ಬುದ್ಧ, ಜೈನ ಶೈವ ಮುಂತಾದ ಪರಂಪರೆಯ ಯೋಗತತ್ವಗಳು, ಜೀವನಶೈಲಿ ಮತ್ತು ಆರೊಗ್ಯವನ್ನು ಪ್ರಧಾನವಾಗಿರಿಸಿರುವ ಪ್ರಚಲಿತ ವರ್ಷಗಳ ಯೋಗಾಭ್ಯಾಸಗಳವರೆಗೆ ಯೋಗ ಪರಂಪರೆ ಆಗಾಧ ವಿಸ್ತಾರದಲ್ಲಿ ಬೆಳೆದಿದೆ.

        ಯೋಗಕ್ಕೆ ಸಂಬಂಧಿಸಿದ ಮೂರು ವಾಕ್ಯಗಳು  ಪ್ರಸಿದ್ಧವಾಗಿವೆ, ಮೊದಲನೆಯದು  ಪತಂಜಲಿ ಯೋಗ ದರ್ಶನದ ವಾಕ್ಯ  ಯೋಗಃ ಚಿತ್ತವೃತ್ತಿ ನಿರೋಧಃ (ಮನಸ್ಸಿನ ಚಂಚಲ ವೃತ್ತಿಗಳನ್ನು ನಿಯಂತ್ರಿಸುವುದು). ಇನ್ನೆರಡು  ಭಗವದ್ಗೀತಯ ವಾಕ್ಯಗಳು,ಯೋಗಃ ಕರ್ಮಸು ಕೌಶಲಮ್  (ಕೆಲಸದಲ್ಲಿನ ಕುಶಲತೆಯೇ ಯೋಗ) ಮತ್ತು ಸಮತ್ವಮ್ ಯೋಗ ಉಚ್ಯತೇ (ಮನಸ್ಸಿನ ಸಂತುಲನವನ್ನು ಯೋಗವೆನ್ನುವರು).  ಮೂರು ಉಕ್ತಿಗಳು ಸಾಮಾನ್ಯ ವ್ಯಕ್ತಿಗೆ ಯೋಗವೆಂದರೇನು ಎನ್ನುವುದನ್ನು ತಿಳಿಸುತ್ತವೆಚಿತ್ತದ ವೃತ್ತಿಗಳನ್ನು ನಿರೋಧವನ್ನು ಏಕೆ ಮಾಡಬೇಕು ಅಂದರೆ, ಚಿತ್ತದ ವೃತ್ತಿಗಳನ್ನು ನಿಯಂತ್ರಿಸಿದ ಮೇಲೆ ಬರುವ ದೃಷ್ಟಿ ಸ್ಪಷ್ಟತೆಯಿಂದ ಸತ್ಯದ ದರ್ಶನವಾಗುತ್ತದೆ. ಇದು ಸಾಧ್ಯವಾಗಬೇಕು ಎಂದಾದರೆ ಪ್ರತಿ ಕೆಲಸವನ್ನೂ ಕುಶಲತೆಯಿಂದ ಮಾಡುವುದನ್ನು ಕಲಿಯಬೇಕಾಗುತ್ತದೆ. ಇದರಿಂದ ಸಿಗುವ ಉಪಲಬ್ಧಿ ಅಂತಿಮ ಸತ್ಯದ ದರ್ಶನ. ಅಂತಿಮ ಸತ್ಯದ ದರ್ಶನದಿಂದ ನಮಗೆ ತಿಳಿಯುವುದೆಂದರೆ ಅದೊಂದೇ ಸತ್ಯ ಬೇರೇನೂ ಅಲ್ಲ, ಕಾಣುವುದೆಲ್ಲವೂ ಸತ್ಯದ ವಿವಿಧ ರೂಪಗಳು, ಆದ್ದರಿಂದ ಎಲ್ಲರ ಬಗ್ಗೆ, ಎಲ್ಲ ವಿವಿಧ ರೂಪಗಳ ಬಗ್ಗೆ ಮನಸ್ಸಿನಲ್ಲಿ ಒಂದು ಸಮತ್ವ ಮೂಡುತ್ತದೆ. ವಿಭಿನ್ನ ಪರಿಸ್ಥಿತಿಗಳಲ್ಲೂ ಸಮತೆ ಮನಸ್ಸಿನಲ್ಲಿ ಕಾಣುತ್ತದೆ. ನಂತರ ವ್ಯಕ್ತಿಯುಸುಖೇ ದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ  ಎನ್ನುವಂತೆ ಎಲ್ಲ ಪರಿಸ್ಥಿತಿಯಲ್ಲೂ ಸಮನಾಗಿರುತ್ತಾನೆ.

       ಭಾರತೀಯರಾದ ನಾವು ಯೋಗವು ಜಗತ್ತಿಗೆ ಮಾನ್ಯವಾಗುವಂತೆ ನಾವು ಮಾಡಬೇಕು. ವೈಜ್ಞಾನಿಕವಾಗಿ ಅದನ್ನು ಜಗತ್ತಿನ ಮುಂದಿರಿಸಬೇಕು. ಎಷ್ಟರಮಟ್ಟಿಗೆ ಅಂದರೆ ಯೋಗವಂತು ಸತ್ಯ ಅದನ್ನು ವೈಜ್ಞಾನಿಕವಾಗಿ ಪ್ರಸ್ತುತ ಪಡಿಸಬೇಕು ಎಂದು ಇಂದು ನಾವು ಹೇಳುವಂತೆ, ನಾಳೆ ವಿಜ್ಞಾವಂತೂ ಸತ್ಯ ಆದರೆ ಅದನ್ನು ಯೋಗದ ಆಧಾರದ ಮೇಲೆ ಮಂಡಿಸಿದರೆ ನಾವು ಒಪ್ಪುತ್ತೇವೆ - ಎಂದು ಜಗತ್ತು ಹೇಳುವಂತೆ ಯೋಗ ವಿಚಾರವನ್ನು ಬೆಳೆಸಬೇಕು

     ಯೋಗ ಎಂದರೆ ಸೇರಿಸುವುದು, ಒಂದುಗೂಡಿಸುವುದು ಎನ್ನುವ ಅರ್ಥವಿದೆ. ಮಾನವನನ್ನು ದೈವತ್ವದೊಂದಿಗೆ ಜೋಡಿಸುವ ಯೋಗವು ಭಿನ್ನತೆಯಲ್ಲಿ ಒಡೆದಿರುವ ಸಮಾಜವನ್ನು ಹಾಗೂ ವಿವಿಧ ವಿಷಮತೆಗಳಿಂದಾಗಿ ವಿಘಟಿತವಾಗಿರುವ ವಿಶ್ವವನ್ನು ಒಂದುಗೂಡಿಸಲಿ.

ಯೋಗದ ಹಂತಗಳು
ಯೋಗಸೂತ್ರಗಳನ್ನು ರಚಿಸಿದ ಪತಂಜಲಿ ಮುನಿಯು  ಆತ್ಮಸಾಧನೆಗಾಗಿ ಅಷ್ಟ ಅಂಗಗಳಿರುವ ಯೋಗವನ್ನು ಹೇಳಿದ್ದಾನೆ.

ಯಮ- ಅಹಿಂಸೆ, ಸತ್ಯವನ್ನು ನುಡಿಯುವುದು, ಕಳ್ಳತನ ಮಾಡದಿರುವುದು, ಬ್ರಹ್ಮಚರ್ಯ, ಅತಿಯಾಗಿ ಸಂಗ್ರಹ ಮಾಡದ ಸರಳ ಜೀವನ ಇವೇ  ಸಾರ್ವತ್ರಿಕ ನೀತಿ ನಿಯಮಗಳು
ನಿಯಮ -ದೇಹದ ಶುಚಿತ್ವ, ಮನಸ್ಸಿನ ತೃಪ್ತಿ ಹಾಗೂ ಸಂತೋಷ, ತಪಸ್ಸು, ಸ್ವಾಧ್ಯಾಯ, ದೈವಭಕ್ತಿ ಮುಂತಾದ  ವ್ಯಕ್ತಿಯ ನಡವಳಿಕೆಗೆ ಸಂಬಂಧಪಟ್ಟ ಆತ್ಮ ಶುದ್ಧೀಕರಣದ ನಿಬಂಧನೆಗಳು .
ಆಸನ- ದೇಹದ ನಿಲುಮೆ, ದೇಹಕ್ಕೆ ಆರೋಗ್ಯ ಮತ್ತು ಲಘುತ್ವವನ್ನು ನೀಡಬಲ್ಲ ವ್ಯಾಯಾಮಗಳು
ಪ್ರಾಣಾಯಾಮ-ಉಸಿರಾಟದ ಕ್ರಮಬದ್ಧ ಹತೋಟಿ
ಪ್ರತ್ಯಾಹಾರ-ಇಂದ್ರಿಯಗಳ ಮತ್ತು ಇಂದ್ರಿಯಾರ್ಥಗಳ ಪ್ರಾಬಲ್ಯದಿಂದ ಮನಸ್ಸಿನ ಬಿಡುಗಡೆ
ಧಾರಣ-ಕೇಂದ್ರೀಕರಣ, ಮನಸ್ಸನ್ನು ಏಕಾಗ್ರಗೊಳಿಸುವುದು.
ಧ್ಯಾನ-ಜಪ, ಚಿತ್ತವನ್ನು ಅವಿಚ್ಛಿನ್ನವಾಗಿ ಧ್ಯೇಯದಲ್ಲಿ ನೆಲೆನಿಲ್ಲಿಸುವುದು
ಸಮಾಧಿ-ಜಪದ ಧ್ಯೇಯವಾದ ಪರಮಾತ್ಮನಲ್ಲಿ ಸಾಧಕನ ಐಕ್ಯ


     ಯಮ ನಿಯಮಗಳು ವ್ಯಕ್ತಯಲ್ಲಿ ಕಾಮ ಮತ್ತು ಉದ್ವೇಗಗಳನ್ನು ನಿಗ್ರಹಿಸಿ ಸಮಾಜದ ಇತರರೊಡನೆ ಸಮರಸವಾಗಿರುವಂತೆ ಮಾಡುತ್ತವೆ. ಆಸನವು ದೇಹವನ್ನು ಆರೋಗ್ಯಕರವಾಗಿ ಮತ್ತು ಬಲಯುತವಾಗಿರಿಸಿ ಪ್ರಕೃತಿಯೊಡನೆ ಸಮರಸವಾಗಿರುವಂತೆ ಮಾಡುತ್ತದೆ. ಪ್ರಾಣಯಾಮ ಮತ್ತು ಪ್ರತ್ಯಾಹಾರಗಳು ಉಸಿರಾಟವನ್ನು  ಕ್ರಮಬದ್ಧಗೊಳಿಸಿ ಮನಸ್ಸಿನ ಮೇಲೆ ಹತೋಟಿಯನ್ನು ಕೊಡುತ್ತವೆ. ಇದರಿಂದ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆ. ಧಾರಣ, ಧ್ಯಾನ ಮತ್ತು ಸಮಾಧಿ ಇವು ಯೋಗಸಾಧಕನ್ನು ಆತ್ಮನ ಅಂತರಂಗದೊಳಕ್ಕೆ  ಕೊಂಡೊಯ್ಯುತ್ತವೆ. ಧ್ಯಾನಪರನಾದ ಯೋಗಿಯು ತಾನೇ ತಾನಾಗಿ ಸ್ವ- ಭಾವವನ್ನು ಹೊಂದಿ ಪರಮಾತ್ಮನ ಅಂಶವಾದ ತನ್ನ ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಯಜ್ಞಾತ್ವಾ ಸರ್ವಮಿದಂ ವಿಜ್ಞಾತೋ ಭವತಿ - ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ ಆಗುವುದೋ, ಎನ್ನುವ ಸ್ಥಿತಿಯೆಡೆಗೆ ಯೋಗಿಯು ಸಾಗುತ್ತಾನೆ.

Monday, May 25, 2015

ನೆಲಕ್ಕೆ ನೀರುಣಿಸಲು ನೂರಾರು ದಾರಿಗಳು

(ಪುಂಗವ 01/06/2015)

      ಪೃಥ್ವಿಯ ಮುಕ್ಕಾಲು ಪಾಲು ಜಲವಿದ್ದರೂ ಸಮಗ್ರ ಜೀವಸಂಕುಲ ನೀರಿಗಾಗಿ ಆಶ್ರಯಿಸಿದ್ದು ಮಳೆಯನ್ನೇ. ಸಮುದ್ರ, ನದಿಕೆರೆಗಳ ನೀರು ಆವಿಯಾಗಿ ಮತ್ತೆ ಮಳೆಯಾಗಿ ಭೂಮಿಯ ಮೇಲೆ ಸುರಿದು ವಿತರಣೆಯಾಗಿ, ನದಿಗಳಲ್ಲಿ ಹರಿದು, ಕೆರೆ ಬಾವಿಗಳನ್ನು ತುಂಬಿಸಿ ಮಣ್ಣಿನಲ್ಲಿ ಇಳಿದು ಅಂತರ್ಜಲಕ್ಕೆ ಮರುಪೂರಣೆಯಾಗುವ ಜಲಚಕ್ರದ ವ್ಯವಸ್ಥೆ ಜೀವಕೋಟಿಯ ನೀರಿನ ಅವಶ್ಯಕತೆಯನ್ನು ಪೋರೈಸುತ್ತಿತ್ತು. ಈ ಪ್ರಾಕೃತಿಕ ವ್ಯವಸ್ಥೆಯನ್ನು ಅರಿತಿದ್ದ ನಮ್ಮ ಪೂರ್ವಜರು ಅದಕ್ಕೆ ತಕ್ಕಂತೆ ಜಲಸಂರಕ್ಷಣೆ ಮತ್ತು ಬಳಕೆಯ ವಿಧಾನಗಳನ್ನು ವಿಕಸನಗೊಳಿಸಿದ್ದರು. ಮಳೆಯ ನೀರು ಸಂಗ್ರಹಣಾ(ಕ್ಯಾಚ್‌ಮೆಂಟ್) ಪ್ರದೇಶಗಳಿಂದ ಒಟ್ಟಾಗಿ ಹಳ್ಳ ಕೋಡಿಗಳಲ್ಲಿ ಹರಿದು ಕೆರೆಕಟ್ಟೆಗಳನ್ನು ತುಂಬಿಸುವುದು. ಹೀಗೆ ಸಂಗ್ರಹವಾದ ನೀರಿನಿಂದಾಗಿ ಕೆರೆಯ ಕೆಳಗಿನ ಪ್ರದೇಶದ ಹೊಲಗಳ ಬಾವಿ ಹಾಗೂ ಕಲ್ಯಾಣಿಗಳಲ್ಲಿ ಸದಾ ನೀರಿರುತ್ತಿದ್ದು ಕೃಷಿಗೆ, ದನಕರುಗಳು ಕುಡಿಯಲು ಹಾಗೂ ಗೃಹಕಾರ್ಯಗಳಿಗೆ ಬಳಕೆಯಾಗುತ್ತಿದ್ದವು. ಹಾಗೆಯೇ ಹೊಲ ತೋಟಗಳಲ್ಲೂ ಒಂದು ಗುಂಡಿ ಇರುತ್ತಿತ್ತು. ಮಳೆ ಬಂದಾಗ ಇವುಗಳಲ್ಲಿ ಶೇಖರವಾಗುವ ನೀರು ತರಕಾರಿ ಬೆಳೆಯಲು, ದನಗಳ ಮೈತೊಳೆಸಲು ಹೀಗೆ ವಿಧವಿಧವಾಗಿ ಬಳಕೆಯಾಗುವುದರ ಜೊತೆಗೆ ನಿಧಾನವಾಗಿ ನೆಲದಲ್ಲಿಯೂ ಇಂಗುತ್ತಿತ್ತು.


      ಆದರೆ ಇಂದು ಪ್ರಗತಿಯ ಹೆಸರಿನಲ್ಲಿ ನಡೆಯುತ್ತಿರುವ ವಿವೇಚನಾರಹಿತ ಸಂಪನ್ಮೂಲಗಳ ಬಳಕೆ, ನದಿ ಪಾತ್ರದ ಜಲಸಂಗ್ರಹಣಾ ಪ್ರದೇಶದಲ್ಲಿನ ಚಟುವಟಿಕೆಗಳು, ಕೆರೆಗಳ ಒತ್ತುವರಿ ಹಾಗೂ ನಿರ್ವಹಣೆಯ ಕೊರತೆ, ಅತಿಯಾಗಿ ಕೊಳವೆ ಬಾವಿಗಳನ್ನು ಕೊರೆಯುವುದು, ಕಾಡಿನ ನಾಶ ಮೊದಲಾದವುಗಳಿಂದ ಸಾಂಪ್ರದಾಯಿಕ ಜಲಮೂಲಗಳು ಬತ್ತಿಹೋಗುತ್ತಿವೆ. ಇದು ಒಂದೆರಡು ಊರುಗಳ ಸಮಸ್ಯೆಯಲ್ಲ. ಈ ಹಿನ್ನೆಲೆಯಲ್ಲಿ ಜಲಕ್ಷಾಮದ ಸಮಸ್ಯೆಯ ಗಂಭೀರತೆಯ ಪ್ರಜ್ಞೆ ಬೆಳೆದಿದ್ದರಿಂದ ಅನೇಕ ಪ್ರದೇಶಗಳಲ್ಲಿ ಮಳೆ ನೀರಿನ ಸಂಗ್ರಹ, ನೀರಿಂಗಿಸುವುದ ಕಾಡನ್ನು ಬೆಳೆಸುವುದು ಹೀಗೆ ಅನೇಕ ರೀತಿಯ ಜಲಸಂವರ್ಧನೆ ಕಾರ್ಯಗಳು ನಡೆಯುತ್ತಿರುವುದು ಸಮಾಧಾನಕರ ಸಂಗತಿ. ಬತ್ತಿಹೋಗಿರುವ ಕುಮುದ್ವತಿ ನದಿ ಪಾತ್ರದ ಹಳ್ಳಿಗಳಾದ ನೆಲಮಂಗಲ ತಾಲೂಕಿನ ಕಾಸರಘಟ್ಟ , ಮಹಿಮಾಪುರ, ಕೆರೆಕತ್ತಿಗನೂರು, ಆಲದಹಳ್ಳಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ನದಿ ಪುನಶ್ಚೇತನ, ಕೆರೆ ಕಲ್ಯಾಣಿ ಮುಂತಾದ ಜಲಮೂಲಗಳ ಸಂರಕ್ಷಣೆಯ ಕಾರ್ಯ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದು ಉತ್ತಮ ಪರಿಣಾಮ ಕಂಡುಬಂದಿದೆ. ಭಾರತೀಯ ಕಿಸಾನ ಸಂಘದ ಸ್ಥಳೀಯ ಕಾರ್ಯಕರ್ತರು ಗ್ರಾಮಸ್ಥರನ್ನು ಜೊತೆಗೂಡಿಸಿ ಕೆಲವು ಸಂಘಸಂಸ್ಥೆಗಳ ನೆರವಿನಿಂದ ಮಾದರಿ ಕಾರ್ಯವನ್ನು ನಡೆಸುತ್ತಿದ್ದಾರೆ. 


ಮರಗಿಡಗಳನ್ನು ಬೆಳೆಸುವ ಯೋಜನೆ
      ಮಳೆ, ಅಂತರ್ಜಲ ಹಾಗೂ ಮರಗಳಿಗೆ ತುಂಬ ಹತ್ತಿರದ ಸಂಬಂಧವಿದೆ. ಮರಗಳು ಮೋಡಗಳನ್ನು ತಡೆದು ವಾತಾವರಣವನ್ನು ತಂಪಾಗಿಸಿ ಮಳೆಸುರಿಸುವುದು ಒಂದಾದರೆ, ನೆಲದ ಆಳಕ್ಕೆ ಇಳಿಯುವ ಮರದ ಬೇರುಗಳು ನೀರು ಇಂಗಲು ಸಹಕಾರಿಯಾಗಿವೆ. ಇದನ್ನು ಅರಿತು ಮಹಿಮಾಪುರ, ಆಲದಹಳ್ಳಿ ಮತ್ತು ಸುತ್ತಲಿನ ಹಳ್ಳಿಗಳ ಗುಡ್ಡಗಾಗು ಪ್ರದೇಶದಲ್ಲಿ ದೊಡ್ಡಪ್ರಮಾಣದಲ್ಲಿ ಕಾಡನ್ನು ಬೆಳೆಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಮಹಿಮಾಪುರ ಗ್ರಾಮದ ಜಾತ್ರಾ ಮೈದಾನ, ಗುಂಡುತೋಪುಗಳಲ್ಲಿ ಗ್ರಾಮಸ್ಥರೇ ಸೇರಿ ಅತ್ತಿ, ಮಾವು, ನೇರಳೆ, ಹಿಪ್ಪಲಿ, ಆಲ, ಹಲಸು, ಸೀತಾಫಲ ಮುಂತಾದ ವಿವಿಧ ಜಾತಿಯ ಮರಗಳನ್ನು ಬೆಳೆಸುತ್ತಿದ್ದಾರೆ. ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಮೂಲಕ ಗಿಡಗಳಿಗೆ ನೀರುಣಿಸಿ ಆರೈಕೆ ಮಾಡಲಾಗುತ್ತದೆ. ಹೊಸದಾಗಿ ಕಾಡುಬೆಳಸುವುದರ ಜೊತೆಗೆ ಗುಂಡುತೋಪಿನ ಮರಗಳನ್ನು ಕಾಪಾಡುವುದಕ್ಕೂ ಆದ್ಯತೆ ನೀಡಲಾಗುತ್ತದೆ. ಬೆಂಗಳೂರು ಮುಂತಾದ ನಗರ ಪ್ರದೇಶದ ಕೆಲವು ಸ್ವಯಂಸೇವಕರು ಹಾಗೂ ಸಂಘಟನೆಗಳು ಗ್ರಾಮಸ್ಥರ ಜೊತೆಗೆ ಗಿಡನೆಡುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.


ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರು ಗ್ರಾಮದ ನಿವಾಸಿ ಪ್ರಗತಿಪರ ರೈತ, ಸಿಆಯ್‌ಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿದ ಮಾಜಿ ಯೋಧ ಶ್ರೀ ಗಂಗಣ್ಣನವರ ಪ್ರಕೃತಿ ಪ್ರೇಮ ಮತ್ತು ಅನುಭವ ಜ್ಞಾನ ವಿಸ್ಮಯವನ್ನು ಮೂಡಿಸುವಂತಹುದು. ತಮ್ಮ ಹಳ್ಳಿಯ ಸುತ್ತಲಿನ ಗುಡ್ಡಗಾಡಿನಲ್ಲಿ ಬೆಳೆಯುವ ಮರಗಳಿಂದ ಹಿಡಿದು ಸಣ್ಣ ಪೊದೆ-ಗಿಡಗಳು, ಬಳ್ಳಿ ಮೂಲಿಕೆಗಳು ಮತ್ತು ಅವುಗಳ ಔಶಧಿಯ ಗುಣಗಳನ್ನು ಆಳವಾಗಿ ತಿಳಿದುಕೊಂಡಿರುವ ಗಂಗಣ್ಣನವರು, ನೆಟ್ಟ ಪ್ರತಿಯೊಂದು ಗಿಡವನ್ನು ವಾತ್ಸಲ್ಯದಿಂದ ಆರೈಕೆ ಮಾಡಿ ಬೆಳೆಸುತ್ತಿದ್ದಾರೆ. ಅಂತರ್ಜಲದ ಕುರಿತು ಅವರು ಹೇಳುವ ಮಾತು ತುಂಬ ಪ್ರಸ್ತುತವಾಗಿದೆ: "ಅಂತರ್ಜಲ ಆಪತ್ಕಾಲದ ನಿಧಿ. ಆದ್ದರಿಂದ ಅತೀ ಅಗತ್ಯಬಿದ್ದಾಗ ಮಾತ್ರ ಬೋರವೆಲ್ ಅಗೆದು ಅದನ್ನು ಬಳಸಬೇಕು. ಇಂದು ಭೂಮಿಯ ಮೇಲ್ಪದರದಿಂದ ಮೂವತ್ತು ನಲವತ್ತು ಅಡಿ ಅಗೆದರೂ ತೇವಾಂಶ ಇರುವುದಿಲ್ಲ. ಹೀಗಾದರೆ ಗಿಡಮರಗಳು ಹೇಗೆ ಬದುಕಬಲ್ಲವು? ಆದ್ದರಿಂದ ಮೊದಲು ಭೂಮಿಯ ಮೇಲ್ಪದರದಲ್ಲಿ ನೀರನ್ನು ಇಂಗಿಸಿದರೆ ಅಂತರ್ಜಲ ತನ್ನಿಂದ ತಾನೇ ಪೂರಣವಾಗುತ್ತದೆ. ಭೂಮಿಯ ಆಳಕ್ಕೆ ಇಳಿಯುವ ಮರದ ಬೇರುಗಳು ನೀರನ್ನು ಇಂಗಿಸುವ ಕಾರ್ಯವನ್ನು ತಾವೇ ಮಾಡುತ್ತವೆ."

ನೀರಿಂಗಿಸುವ ಹೊಂಡಗಳು
      ಮಳೆಯ ನೀರನ್ನು ಸಂಗ್ರಹಿಸಿ ಭೂಮಿಯಲ್ಲಿ ಇಂಗಿಸುವ ಸಲುವಾಗಿ ತೋಪಿನಲ್ಲಿ ಅಲ್ಲಲ್ಲಿ ಹೊಂಡಗಳನ್ನು ತೋಡಲಾಗಿದೆ. ಮಹಿಮಾಪುರ ಗ್ರಾಮದ ತೋಪಿನಲ್ಲಿ ಅಗೆಯಲಾದ ಸುಮಾರು ೬೦ ಮೀ ಅಗಲ ೧೨೦ಮೀ ಇಂತಹ ಒಂದು ಹೊಂಡ ಸುಮಾರು ಎರಡು ಲಕ್ಷ ಲೀಟರಿಗೂ ಹೆಚ್ಚು ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅರ್ಧದಷ್ಟು ಆವಿಯಾದರೂ ಬಹುದೊಡ್ಡ ಪ್ರಮಾಣದಲ್ಲಿ ಹರಿದು ಹೋಗಬಹುದಾಗಿದ್ದ ನೀರು ಅಲ್ಲಿಯೇ ಮಣ್ಣಿನಲ್ಲಿ ಇಂಗಿ ಅಂತರ್ಜಲವನ್ನು ಸೇರುವುದು. ಈ ಇಂಗುಗುಂಡಿಯ ಪರಣಾಮದಿಂದಾಗಿ ಅಲ್ಲಿಯೇ ಹತ್ತಿರದಲ್ಲಿನ ಬತ್ತಿಹೋಗಿದ್ದ ಕೊಳವೆ ಬಾವಿಗೆ ಮತ್ತೆ ಜೀವ ಬಂದಿದೆ. ಹೊಂಡದ ಮಣ್ಣಿನ ಮೇಲ್ಪದರದಲ್ಲೂ ತೇವಾಂಶ ಹೆಚ್ಚಾಗಿರುವುದರಿಂದ ಸುತ್ತಲಿನ ಪರಿಸರದಲ್ಲಿ ಮರಗಳು ಮತ್ತು ಪೊದೆಗಳು ಹುಲುಸಾಗಿ ಬೆಳೆದಿವೆ.


ಸೀಡ್ ಬಾಲ್ ಗಳು ಮತ್ತು ಬೀಜ ಎರಚುವುದು


ಸೀಡ್ ಬಾಲ್ ಗಿಡಬೆಳೆಸುವ ಒಂದು ವಿಶಿಷ್ಟ ಹಾಗೂ ಸರಳ ವಿಧಾನ. ಮಣ್ಣಿನೊಂದಿಗೆ ದನದ ಸಗಣಿಯನ್ನು ಬೆರೆಸಿ ಉಂಡೆಕಟ್ಟುವ ಮಟ್ಟಿಗೆ ಹದಮಾಡಿಕೊಳ್ಳುವುದು. ಬೀಜಗಳನ್ನು ಹಾಕಿ ಮಣ್ಣಿನ ಉಂಡೆ (ಸೀಡ್‌ಬಾಲ್)ಗಳನ್ನು ಕಟ್ಟಿ ನೆರಳಿನಲ್ಲಿ ಒಣಗಿಸಿ ಸಂಗ್ರಹಿಸಿಟ್ಟುಕೊಳ್ಳುವುದು. ಮಳೆಗಾಲದ ಸಂದರ್ಭದಲ್ಲಿ ಪೊದೆಗಳ ಮಧ್ಯೆ, ಒಣಗಿ ಕಿತ್ತಿರುವ ಮರದ ಬುಡದಲ್ಲಿ, ಸಣ್ಣ ಸಣ್ಣ ಹೊಂಡಗಳಲ್ಲಿ ಹೀಗೆ ಇಂತಹ ಬೀಜ ಉಂಡೆಗಳನ್ನು ಬಿಸಾಡುವುದು. ತೇವಾಂಶ ಸಿಕ್ಕಾಗ ಉಂಡೆಯೊಳಗಿನ ಬೀಜವು ಮೊಳಕೆಯೊಡೆದು ಅಲ್ಲೇ ಬೇರು ಬಿಟ್ಟು ಗಿಡವಾಗುವುದು. ಇದು ಶಾಲಾ ಮಕ್ಕಳೂ ಆಟವಾಡುತ್ತ ಮಾಡುವ ಕೆಲಸ. ಹಾಗೆಯೇ ವಿವಿಧ ರೀತಿಯ ತರಕಾರಿ ಗಿಡಗಳು ಹಾಗೂ ಬಳ್ಳಿಗಳ ಬೀಜಗಳನ್ನು ಸಂಗ್ರಹಿಸಿ ಹದವಾದ ಮಣ್ಣಿರುವ ಕಡೆ, ಬಂಡೆಗಳ ನಡುವೆ ಹೀಗೆ ಸುಮ್ಮನೆ ಎರಚುವುದು. ಮಳೆಗಾಲದ ತೇವಾಂಶ ತಾಕಿದೊಡನೆ ಅವು ಮೊಳಕೆಯೊಡೆದು ಅಲ್ಲಿಯೇ ಬೆಳೆಯುತ್ತವೆ. ಹೀಗೆ ಬೀಜ ಎರಚುವುದರಿಂದ ಹುಟ್ಟುಕೊಂಡು ಬೆಳೆದಿರುವ ಬಳ್ಳಿಗಳು, ಗಿಡಗಳು, ಸೊಪ್ಪಿನ ಹಾಗೂ ತರಕಾರಿ ಸಸ್ಯಗಳು ಮಹಿಮಾಪುರದ ಮಹಿರಂಗ ಸ್ವಾಮಿ ದೇವಸ್ಥಾನ ಸುತ್ತಲಿನ ಪ್ರದೇಶದಲ್ಲಿ ಹುಲುಸಾಗಿ ಬೆಳೆದಿವೆ.                   

ಮಳೆನೀರಿನ ಹರಿವಿಗೆ ಅಡ್ಡದಾಗಿ ಒಡ್ಡು ಕಟ್ಟುವುದು, ಇಂಗು ಬಾವಿ
        ಮಳೆ ನೀರಿನ ಹರಿವಿಗೆ ಅಲ್ಲಲ್ಲಿ ಸಣ್ಣ ಸಣ್ಣ ಒಡ್ಡುಗಳನ್ನು ಕಟ್ಟುವುದು ಮಣ್ಣಿನಲ್ಲಿ ನೀರಿಂಗಿಸುವ ಇನ್ನೊಂದು ವಿಧಾನ. ಒಡ್ಡುಗಳಲ್ಲಿ ಸಂಗ್ರಹವಾದ ನೀರು ಸುತ್ತಲಿನ ಭೂಮಿಯ ತೇವಾಂಶವನ್ನು ಹೆಚ್ಚಿಸುವುದರಿಂದ ಆ ಪ್ರದೇಶಗಳಲ್ಲಿ ಮರಗಿಡಗಳು ಚೆನ್ನಾಗಿ ಬೆಳೆಯುವುವು. ಜೊತೆಗೆ ಆಳಕ್ಕಿಳಿದ ಬೇರುಗಳ ಸಂದಿನಲ್ಲಿ ನೀರು ಭೂಮಿಗೆ ಇಂಗುವುದು. ಒಡ್ಡುಗಳ ಜೊತೆಗೆ ಆಧುನಿಕ ಇಂಗುಬಾವಿಗಳನ್ನೂ ನಿರ್ಮಿಸಲಾಗಿದೆ. ಆದರೆ ಈ ಇಂಗುಬಾವಿಗಳ ನಿರ್ಮಾಣಕ್ಕೆ ವೆಚ್ಚ ಹೆಚ್ಚು ಆದರೆ ಪರಿಣಾಮ ಕಡಿಮೆ ಎನ್ನುವುದು ಕಾರ್ಯಕರ್ತರ ಅನಿಸಿಕೆ.

ಕಾಸರಘಟ್ಟದ ನೀರು ನಿರ್ವಹಣಾ ಸಹಕಾರಿ ಸಂಘ
      ಕಾಸರಘಟ್ಟ ಗ್ರಾಮದಲ್ಲಿ ನೀರು ನಿರ್ವಹಣೆಗಾಗಿಯೇ ಸಹಕಾರಿ ಸಂಘ ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು ಸುತ್ತಲಿನ ಕೆರೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ. ಕೆರೆಗಳಲ್ಲಿ ಮೀನು ಸಾಕಲು ವಾರ್ಷಿಕ ಗುತ್ತಿಗೆಯನ್ನು ನೀಡಲಾಗುತ್ತಿದ್ದು ಇದರಿಂದ ಕೆರಗಳು ಸ್ವಚ್ಛವಾಗಿರುವುದರ ಜೊತೆಗೆ ಸಂಘ ಆದಾಯವನ್ನೂ ಗಳಿಸುತ್ತಿದೆ. ಗ್ರಾಮಸ್ಥ ಕೃಷಿಕರೇ ಈ ಸಂಘದ ನಿರ್ದೇಶಕರಾಗಿದ್ದು ಊರಿನವರ ಸಹಕಾರದಿಂದ ಜಲಮೂಲಗಳ ಸಂರಕ್ಷಣೆಯ ಕಾರ್ಯವನ್ನು ಮಾಡುತ್ತಿದೆ. ಜೊತೆಗೆ ಕಾಡು ಬೆಳಸುವ ಯೋಜನೆ, ಗ್ರಾಮಸ್ಥರಲ್ಲಿ ನೀರಿನ ಬಳಕೆಯ ಕುರಿತು ಶಿಕ್ಷಣ ನೀಡುವ ಕಾರ್ಯದಲ್ಲೂ ಸಂಘ ತೊಡಗಿಕೊಂಡಿದೆ.

       ಇಂದು ಬಹುತೇಕ ಗ್ರಾಮಗಳು ಜಲಕ್ಷಾಮದ ಸಮಸ್ಯೆಯನ್ನು ಎದುರಿಸುತ್ತಿರುವುದಕ್ಕೆ ಕೇವಲ ಮಳೆಯ ಪ್ರಮಾಣದಲ್ಲಿನ ವ್ಯತ್ಯಾಸ ಕಾರಣವಲ್ಲ.  ನೀರಿನ ಮೂಲಗಳನ್ನು ಉಳಿಸುವುದರಲ್ಲಿನ ಉದಾಸೀನತೆ ಹಾಗೂ ವಿವೇಚನಾರಹಿತ ಬಳಕೆ ಜಲ ಸಮಸ್ಯೆಯ ಕಾರಣಗಳಲ್ಲಿ ಪ್ರಮುಖವಾದವು. ಕಾಸರಘಟ್ಟದ ಸುತ್ತಲಿನ ಗ್ರಾಮಸ್ಥರು ಅನುಸರಿಸುತ್ತಿರುವ ವಿಧಾನಗಳು ತುಂಬ ಸರಳ. ಅವರ ಪರಿಶ್ರಮದಿಂದಾಗಿ ಕೆರೆಕತ್ತಿಗನೂರಿನ ಕೆರೆಯಲ್ಲಿ ಬೇಸಿಗೆಯಲ್ಲಿಯೂ ಸಾಕಷ್ಟು ನೀರಿದೆ, ಅಲ್ಲಿನ ಕಲ್ಯಾಣಿ ಹಾಗೂ ಬಾವಿಗಳಲ್ಲಿಯೂ ನೀರಿದೆ.

         ನಮ್ಮ ನಮ್ಮ ಊರುಗಳಲ್ಲಿರುವ ಕೆರೆಗಳ ಪುನಶ್ಚೇತನ ಕಾರ್ಯದ ಜೊತೆಗೆ ಸ್ಥಳೀಯ ಪರಿಸರಕ್ಕೆ ಹೊಂದುವ ಜಲಸಂವರ್ಧನ ಕಾರ್ಯಗಳನ್ನು ಕೈಗೊಳ್ಳುವುದು ಇಂದು ಒಂದು ರೀತಿಯ ಆಂದೋಲನವಾಗಿ ನಡೆಯಬೇಕಾದ ಕೆಲಸವಾಗಿದೆ. ಏಕೆಂದರೆ ಜೀವಜಲ ಅಮೂಲ್ಯವಾದುದು.

Thursday, May 7, 2015

ಓ ಹುಡುಗಿಯರೇ ನೀವೇಕೆ ಹೀಗೆ ?

          ಕೆಲವು ವರ್ಷಗಳ ಹಿಂದಿನ ಮಾತು. ನಾನು ಕೆಲಸ ಮಾಡುವ ಸಂಸ್ಥೆಗೆ ಬಂದಿದ್ದ ಓರ್ವ ಅಮೇರಿಕದ ಕ್ಲೈಂಟ್ನೊಟ್ಟಿಗೆ ಊಟಕ್ಕೆ ಕುಳಿತಿದ್ದಾಗ ಮಾತು ಕುಟುಂಬ ಮದುವೆಗಳ ಕಡೆಗೆ ಹೊರಳಿತ್ತು. ಈಗಾಗಲೆ ಎರಡು ಮೂರು ಮದುವೆಯಾಗಿ ವಿಚ್ಛೇದನವೂ ಆಗಿ ಹೊಸ ಗರ್ಲ್ಫ್ರೆಂಡ್ ಒಟ್ಟಿಗೆ ಮುಂದಿನ ಮದುವೆಯ ಯೋಜನೆಗೆ ತೊಡಗಿದ್ದ ಆತ ಕೇಳಿದ್ದಭಾರತದಲ್ಲಿ ಯಾಕೆ ಮದುವೆಗಳು ಅಷ್ಟು ಮುರಿದು ಬೀಳುವುದಿಲ್ಲ?’ (why marriages last so long in India and will not breakup much?). ಆತನಿಗೆ ಅದೊಂದು ವಿಸ್ಮಯವಾಗಿತ್ತು. ಅಂದು ಸಹೋದ್ಯೋಗಿಯೊಬ್ಬರು ನೀಡಿದ್ದ ಉತ್ತರ ತುಂಬ ಸೂಕ್ತವಾಗಿತ್ತು. ಭಾರತದಲ್ಲಿ ಮದುವೆಗಳು ನಡೆಯುವುದು ಕೇವಲ ಗಂಡು ಹೆಣ್ಣು ಇಬ್ಬರ ನಡುವೆ ಮಾತ್ರವಲ್ಲ. ವಿವಾಹ ಎರಡು ಕುಟುಂಬಗಳ ನಡುವೆ, ಎರಡು ಪರಿವಾರಗಳ ನಡುವೆ ಸಂಬಂಧವನ್ನು ಬೆಸೆಯುತ್ತದೆ. (marriage builds relation between two families). ಇದು ನಮ್ಮ ಅನುಭವ. ಕನ್ಯಾ ವರಯತೇ ರೂಪಮ್ ಮಾತಾ ವಿತ್ತಂ ಪಿತಾ ಶ್ರುತಮ್| ಬಾಂಧವಾಃ ಕುಲಮಿಚ್ಛಂತಿ ಮೃಷ್ಟಾನ್ನಮ್ ಇತರೇ ಜನಾಃ|| - ವಧುವು ಹುಡುಗನ ರೂಪವನ್ನೂ, ವಧುವಿನ ತಾಯಿಯು ಸಂಪತ್ತನ್ನು ನೋಡಿದರೂ ತಂದೆಯಾದವನು ವರನ ಗುಣಾವಗುಣಗಳು, ಕೌಟುಂಬಿಕ ಹಿನ್ನೆಲೆಗಳ ಬಗ್ಗೆ ಜನರು ಹೇಳುವುದನ್ನು ಮತ್ತು ಬಂಧುವರ್ಗದವರು ಕುಲ ಪರಿವಾರಗಳನ್ನು ಮಹತ್ತೆಂದು ನೋಡುತ್ತಾರೆ ಎನ್ನುವಲ್ಲಿ ನಮ್ಮಲ್ಲಿ ವೈವಾಹಿಕ ಸಂಬಂಧವನ್ನು ಬೆಳೆಸುವಲ್ಲಿನ ಮಾನದಂಡದ ಅರಿವಾಗುತ್ತದೆ. ಹಾಗೇಯೇ ಗುಣಮ್ ಪೃಚ್ಛಸ್ವ ಮಾ ರೂಪಮ್ ಶೀಲಮ್ ಪೃಚ್ಛಸ್ವ ಮಾ ಕುಲಮ್ ಸಿದ್ಧಿಮ್ ಪೃಚ್ಛಸ್ವ ಮಾ ವಿದ್ಯಾಮ್ ಸುಖಮ್ ಪೃಚ್ಛಸ್ವ ಮಾ ಧನಮ್ ಎನ್ನುವ ಸುಭಾಷಿತದಲ್ಲಿ ಹೇಳುವಂತೆ ರೂಪಕ್ಕಿಂತ ಆತನ ಗುಣ, ಕುಲಕ್ಕಿಂತ ಆತನ ನಡತೆ, ವಿದ್ಯೆಗಿಂತ ಆತ ಗಳಿಸಿದ ಸಿದ್ಧಿ, ವಿದ್ಯೆಯನ್ನು ವಿನಿಯೋಗಿಸಬಲ್ಲ ಕ್ಷಮತೆ, ಧನಸಂಪತ್ತಿಗಿಂತ ಮಿಗಿಲಾಗಿ ಆತನ ಜೀವನ ಸುಖ ಇವು ಒಬ್ಬ ವ್ಯಕ್ತಿಯನ್ನು ಅಳೆಯಬಲ್ಲ ಸೂಕ್ತ ಅಳತೆಗೋಲುಗಳು. ರೀತಿಯ ಮಾನದಂಡಗಳಿಂದ ವರಸಾಮ್ಯ ಗುಣದೋಷಗಳನ್ನು ಗ್ರಹಿಬಲ್ಲ ಹಿರಿಯರಿಂದ ನಿಶ್ಚಯವಾಗಿ ಪರದೆ ಸರಿಯುವವರೆಗೂ ಒಬ್ಬರನ್ನೊಬ್ಬರು ಮುಖವನ್ನೂ ನೋಡಿರದ ಗಂಡು-ಹೆಣ್ಣುಗಳ ವೈವಾಹಿಕ ಸಂಬಂಧಗಳು ಬಹುತೇಕ ಸುಖೀ ದಾಂಪತ್ಯವಾಗುವುದು ನಮ್ಮ ನಡುವಿನ ಸಮಾಜದಲ್ಲಿ ಸಹಜವಾಗಿತ್ತು.

         ಆದರೆ ಕಾಲಾಚಾರಗಳು ಬದಲಾಗಿವೆ. ಕಾಲೇ ಕಾಲೇ ನವಾಚಾರಃ ನವಾ ವಾಣೀ ಮುಖೇ ಮುಖೇ ಎನ್ನುವಂತೆ ಆಚಾರಗಳೂ ಬದಲಾಗಿವೆ, ಬದಲಾಗತಕ್ಕದ್ದೇ, ಅದು ಪ್ರಕೃತಿಯ ನಿಯಮ. ಇಂದಿನ ಕಾಲದಲ್ಲಿ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಸಾಮಾನ್ಯವಾಗಿ ಇದೆ, ಅದರಲ್ಲೂ ಹುಡುಗಿಯರಿಗೆ ಸ್ವಲ್ಪ ಜಾಸ್ತಿಯೇ ಇದೆ. ಜೊತೆಗೆ ಕೆಲವು ಸಮುದಾಯಗಳಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆ ಕಡಿಮೆಯಿದೆ ಎಂಬ ಸ್ವಲ್ಪ ವಾಸ್ತವ ಆದರೆ ಹೆಚ್ಚಿನ ಗುಲ್ಲು ಹಬ್ಬಿದಾಗಿನಿಂದ ಹುಡುಗಿಯರ ಆಯ್ಕೆಯ ಸ್ವಾತಂತ್ರ್ಯದ ವ್ಯಾಪ್ತಿ  ಹಿಗ್ಗಿದ್ದಷ್ಟೇ ಅಲ್ಲ ಆಯ್ಕೆ ಚೌಕಾಶಿಯ ವ್ಯವಹಾರದ ಮಟ್ಟಕ್ಕೆ ಇಳಿದಿದೆಯೆಂದರೆ ಅತಿಶಯೋಕ್ತಿಯೇನೂ ಅಲ್ಲ. ಗಂಡನ್ನುಆರಿಸುವಾಗ ಹೇಗೇಗಿರಬೇಕು ಏನೇನಿರಬೇಕು ಎಂದು ಹುಡುಗಿಯೋ ಅವಳ ಹೆತ್ತವರೋ ಮುಂದಿಡುವ ಕಂಡೀಶನ್ನುಗಳು ಕಳವಳಕಾರಿಯಾದರೂ ಕೇಳಲೂ ಬಹಳ ಮಜವಾಗಿವೆ. ಕೃಷಿ ಕೆಲಸ ಮಾಡುತ್ತ ಅಥವಾ ಇನ್ನು ಯಾವುದೋ ವ್ಯವಹಾರ ಮಾಡುತ್ತ ಊರಿನ ಕಡೆ ಮನೆಯಲ್ಲಿ ತಂದೆತಾಯಿಯರೊಡನೆ ತುಂಬು ಕುಟುಂಬದಲ್ಲಿ(?) ವಾಸವಾಗಿರುವ ಮಾಣಿಗೆ ಹೆಣ್ಣು ಸಿಗುವುದಿಲ್ಲ ಎನ್ನುವುದು ಬಹಳ ಹಳೆಯ ವಿಚಾರವಾಯಿತು. ಕೆಲವು ವರ್ಷಗಳ ಕೆಳಗೆ ಸ್ಟಾರ್ ವ್ಯಾಲ್ಯೂ ಹೊಂದಿದ್ದ ಸಾಫ್ಟವೇರ್ ಗಂಡಿಗೂ ಈಗ ಸುಲಭವಿಲ್ಲ.

        ಹೀಗಿರುವ ಸನ್ನಿವೇಶದಲ್ಲಿ ಮದುವೆವ್ಯವಹಾರ  ಚೌಕಾಶಿಯ ನಡುವೆ ಅಲ್ಪಸ್ವಲ್ಪ ಸ್ವಾನುಭವ ಪಡೆದ ಆಧಾರದ ಮೇಲೆ ಇತ್ತೀಚಿಗೆ ಹಾದುಹೋದ ಒಂದು ರಿಕ್ವೈರ್ಮೆಂಟ್ನ್ನು ಸ್ಯಾಂಪಲ್ಲಿಗಾಗಿ ಉಲ್ಲೇಖಿಸುವುದಾದರೆ - ತಂದೆ ತಾಯಿಯ ಒಬ್ಬನೇ ಮಗನಾಗಿರಬೇಕು ಆದರೆ ಮನೆಯಲ್ಲಿ ಅತ್ತೆಮಾವ(ಲಗೇಜು !) ಇರಬಾರದು, ಬೆಂಗಳೂರಿನಲ್ಲಿ ಮಲ್ಟಿನ್ಯಾಶನಲ್ ಕಂಪನಿಯಲ್ಲಿ ಕೆಲಸದಲ್ಲಿರಬೇಕು. ಊರಿನಲ್ಲಿ ಮನೆ ಜಮೀನು ಇರಬೇಕು, ಆದರೆ ವಾಪಾಸು ಮನೆಗೆ ಹೋಗಿ ಜಮೀನು ಮತ್ತು ತಂದೆತಾಯಿರನ್ನು ನೋಡಿಕೊಂಡಿರುವ ವಿಷಯ ಎತ್ತಬಾರದು. ಬೆಂಗಳೂರಿನಲ್ಲಿ ಸೈಟು ಫ್ಲಾಟು ಮಾಡಬೇಕು!!

        ಇಂತಹ ಷರತ್ತುಗಳ, ಹೇಗೇಗಿರಬೇಕುಗಳ ಪಟ್ಟಿ ಮಾಡಿ ಹುಡುಗಿಯರೇ ನೀವೇಕೆ ಹೀಗೆ? ಎಂದು ಸವಾಲು ಹಾಕುವುದು ಇಲ್ಲಿ ಪ್ರಸ್ತುತವಾದರೂ ಅಪ್ರಯೋಜಕ ಮತ್ತು ಅಪೇಕ್ಷಣೀಯವಲ್ಲ. ಕಾರಣವಿಷ್ಟೇ. ತನಗೊಪ್ಪುವ ಸಂಗಾತಿಯೊಂದಿಗೆ ಬದುಕುವ, ತನಗೆ ಸರಿಯಾದ ವರನನ್ನು ವರಿಸುವುದು ವರಮಾಲೆ ಕೈಯಲ್ಲಿ ಹಿಡಿದ ಪ್ರತಿಯೊಬ್ಬ ವಧುವಿನ ಆಯ್ಕೆಗೆ, ಅವಳ ಹೆತ್ತವರ ಆಯ್ಕೆಗೆ ಬಿಟ್ಟ ವಿಷಯ. ಇಲ್ಲಿ ಸರಿತಪ್ಪುಗಳ ವಿಶ್ಲೇಷಣೆಗಿಂತ ಅವರವರ ಇಷ್ಟವನ್ನು ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯ. ಮೂರನೆಯ ವ್ಯಕ್ತಿ ಅದನ್ನು ಪ್ರಶ್ನಿಸತಕ್ಕದ್ದಲ್ಲ, ಅದಕ್ಕೆ ಆಕ್ಷೇಪಿಸತಕ್ಕದ್ದಲ್ಲ.

       ಆದರೂ ಇಂತಹಇರಬೇಕುಗಳಪಟ್ಟಿಯನ್ನು ಮುಂದಿಟ್ಟಿರುವ ಕನ್ಯಾಮಣಿ ಮತ್ತವರ ಹೆತ್ತವರು ಅರಸುತ್ತಿರುವುದೇನು? ಎಂದು ಪ್ರಶ್ನಿಸಿಕೊಳ್ಳುವುದು ಖಂಡಿತ ಅಸಾಧುವಲ್ಲ. ಸುಖೀ ಜೀವನಕ್ಕೆ ಆರ್ಥಿಕ ಸಂಪನ್ಮೂಲ, ನೌಕರಿ, ಸೌಕರ್ಯ ಸಾಧನಗಳು ಬೇಕು ನಿಜ. ಆದರೆ ಕೌಟುಂಬಿಕ ಜೀವನದ ಸುಖ ಸಂತೋಷಗಳನ್ನು ಕೇವಲ ಹಣದಿಂದ ಕೊಂಡುಕೊಳ್ಳಲು ಸಾಧ್ಯವಿದೆಯೇ? ನಗರದ ಐಶಾರಾಮಿ ಬದುಕಿನ ದೊಡ್ಡಸ್ತಿಕೆ ಕೊನೆಯವರೆಗೆ ಸಾರ್ಥಕತೆಯ ಅನುಭವವನು ನೀಡಬಲ್ಲದೇ? ಸಂಬಂಧ ಬೆಳಸುವಲ್ಲಿ ಹಣ ಐಶ್ವರ್ಯ ಅಂತಸ್ತುಗಳೇ ಪ್ರಮುಖವಾದರೆ ಪರಿವಾರದಲ್ಲಿ ಪ್ರೀತಿ ಸ್ನೇಹಗಳಿಗೆಲ್ಲಿ ಜಾಗ. ಮದುವೆ ಅನುಕೂಲಕ್ಕೆ, ಗಂಡು ಅನೂಕೂಲಸ್ಥನಾಗಿದ್ದರೆ ಸಾಕೋ? ಅಥವಾ ಅನುರೂಪನಾಗಿರಬೇಕೋ? ಇದೆಲ್ಲದರ ಜೊತೆಗೆ ಹೆಣ್ಣು ಗಂಡಿನಂತೆಯೇ ಓರ್ವ ಜೀವಂತ ವ್ಯಕ್ತಿಯೇ ಹೊರತು ಹಣವಂತನಿಗೆ ಮಾರಾಟವಾಗಬಲ್ಲ ವಸ್ತುವಲ್ಲವಲ್ಲ.

       ಬದುಕು ಹಣ-ಸಂಪತ್ತಿನಿಂದ ತುಂಬಿ ತುಳುಕುತ್ತಿರಬೇಕೆಂದಿಲ್ಲ, ಆದರೆ ಸಮೃದ್ಧವಾಗಿರಬೇಕು-ಪ್ರೀತಿ ಆತ್ಮೀಯತೆಗಳಿಂದ, ನಾವು-ನಮ್ಮವರೆಂಬ ಆರ್ದ್ರ ಸಂಬಂಧಗಳಿಂದ, ಇತರರ ಸುಖ ದುಃಖಗಳಿಗೆ ಸಂವೇದನಶೀಲವಾದ ನಡವಳಿಕೆಯಿಂದ, ಮಕ್ಕಳು ಕಿರಿಯರನ್ನು ಸರಿಯಾದ ಮಾರ್ಗದಲ್ಲಿ ನಡೆಸಬಲ್ಲ ಕರ್ತವ್ಯ ನಿರ್ವಹಣೆಯಿಂದ, ಪ್ರಕೃತಿಯ ಅಗಾಧತೆಯಲ್ಲಿ ವಿಶಾಲತೆ ಗಳಿಸಬಲ್ಲ ಬುದ್ಧಿಯಿಂದ, ನಿಸರ್ಗದ ಸೊಬಗ ಸವಿಯಬಲ್ಲ, ಕಲೆ- ಕಾವ್ಯ- ಸಂಗೀತ- ಕ್ರೀಡೆ-ಹಣ್ಣು ಹಂಪಲು ತಿಂಡಿ ತಿನಿಸುಗಳನ್ನು ಆಸ್ವಾದಿಸಬಲ್ಲ ಸಹೃದಯತೆಯಿಂದ, ಜೀವನಪ್ರೀತಿಯಿಂದ.

     ಇನ್ನು ಇಂದಿನ ನಗರೀಕೃತ ಬದುಕಿನ ಆಕರ್ಷಣೆಯ ಪ್ರಭಾವದಲ್ಲಿ ಕಳೆದುಹೋಗಿರುವ ಹುಡುಗಿಯರನ್ನೇ ಉದ್ಧೇಶಿಸಿ ನೇರವಾದ ಮಾತೊಂದನ್ನು ಹೇಳುವುದಾದರೆ - ಕೃಷಿ ಅಥವಾ ಇನ್ನು ಯಾವುದೋ ವ್ಯವಹಾರವನ್ನು ಮಾಡುತ್ತ ತಂದೆ ತಾಯಿ ಬಳಗದೊಟ್ಟಿಗೆ ಊರಿನ ಸ್ವಂತ ಮನೆಯಲ್ಲಿರುವ ಹುಡುಗನೋ ಅಥವಾ ಉದ್ಯೋಗ ನಿಮಿತ್ತ ಬೆಂಗಳೂರಿನಂತಹ ಪಟ್ಟಣದೊಳಗೆ ನೆಲೆಸಿದ್ದರೂ ಊರಿನೆಡೆಗೆ ಸೆಳೆತ ಹೊಂದಿರುವ ಹುಡುಗನೂ ಗಂಡಸೇ! ನಿಜ, ಅವನು ಜೆಹಾದಿ ಸಾಬಿಯಂತೆ ಅರೇಬಿಯಾದಿಂದ ಆಮದಾದ ಸೆಂಟಿನ ಪರಿಮಳದಿಂದ ಸೆಳೆಯಲಾರ, 250 ಸಿಸಿಯ ಬೈಕಿನ ಎತ್ತರದ ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿಕೊಂಡು ಪಾರ್ಕು ಮಾಲುಗಳಿಗೆ ಓಡಾಡಿಸಲಾರ, ಯಾರೂ ಸುಳಿಯದ ಊರಹೊರಗಿನ ಕಲ್ಲುಬಂಡೆಯ ಮೇಲೆ ಮೈಬೆಚ್ಚಾಗಾಗುವಂತೆ ತಾಗಿ ಕುಳಿತು ಸರಸ ಸಲ್ಲಾಪ ನಡೆಸಲಾರ. ಉತ್ತರದ ಹಿಂದೀ ಪ್ರದೇಶದ ತರುಣನಂತೆ ಬಾಲಿವುಡ್ಡಿನ ಹಿಂದಿ ಹಾಡಿನ ಅಂತ್ಯಾಕ್ಷರಿ ಹಾಡಿ ಮನಮೋಹಿಸಲಾರ, ಮೊಬೈಲಿಗೆ ರೊಮ್ಯಾಂಟಿಕ್ ಆದ ಶಾಯಿರಿ ಎಸ್ಸೆಮ್ಮೆಸ್ಗಳನ್ನು ಕಳಿಸಿ ಬಣ್ಣದ ಮಾತುಗಳಲ್ಲೇ ತೇಲಿಸಲಾರ. ಮೆಟ್ರೋ ನಗರದಲ್ಲಿ ಬೆಳೆದ ಯುವಕನಂತೆ ಇಂಗ್ಲಿಷ್ ಸಿನಿಮಾದ ಕತೆಯನ್ನು ಹೇಳುತ್ತಲೋ, ಗಿಟಾರಿನ ಒಂದೇ ತಂತಿಯನ್ನು ಮೀಟುತ್ತ ತಲೆಯನ್ನು ಜಾಸ್ತಿಯೇ ಅಲ್ಲಾಡಿಸಿ ರಾಕ್ ಮ್ಯೂಸಿಕ್ಕಿನ ಟ್ಯೂನನ್ನು ಗುನುಗುನಿಸಿ ಇಂಗ್ಲೀಷಿನಲ್ಲಿ ಪಟಪಟನೆ ಮಾತನಾಡಿ ಬೀಳಿಸಿಲಾರ. ಅಸಾಧ್ಯವೆಂದಲ್ಲ, ಅಸಕ್ತಿಯಿಲ್ಲ ಅಷ್ಟೇ. ಆದರೆ ನೆನಪಿರಲಿ ಗ್ರಾಮ್ಯಮನದ ಹುಡುನಲ್ಲಿಯೂ ಪ್ರೇಮಿಸಬಲ್ಲ ಹೃದಯವಿದೆ. ಸಂಸಾರದ ಸಂಕಷ್ಟಗಳಲ್ಲಿ ಭದ್ರತೆ ನೀಡಬಲ್ಲ ಸಾಮರ್ಥ್ಯವಿದೆ, ಬಾಳಕೊನೆಯವರೆಗೆ ಜೊತೆಯಾಗಿ ನಡೆಯಬಲ್ಲ ಮನವಿದೆ.

       ಎಲ್ಲರೂ ಹೀಗೆಂದಲ್ಲ. ಜೀವನಪ್ರೀತಿಯ ಪ್ರತಿಬಿಂಬದಂತಿರುವ, ಕುಟುಂಬದ ಜನರ ನಡುವಿನ ಕೊಂಡಿಯಂತೆ ಹಲವು ಸಂಕಷ್ಟಗಳ ನಡುವೆಯೂ ಆದರ್ಶ ದಾಂಪತ್ಯ ಜೀವನ ನಡೆಸುತ್ತಿರುವ ಅನೇಕ ಸೋದರಿಯರ, ಮಾತೆಯರ ಉದಾಹರಣೆಗಳನ್ನು ನಮ್ಮ ಸುತ್ತಲೇ ಕಾಣಬಹದು. ಪ್ರೇಮಕವಿಯೆಂದೇ ಪ್ರಸಿದ್ಧರಾಗಿದ್ದ ಕೆ ಎಸ್ ನರಸಿಂಹಸ್ವಾಮಿಯವರ ಒಂದು ಸುಂದರ ಕವನನೀವಲ್ಲವೇ?’ ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಸುಳಿದವರು ನೀವಲ್ಲವೇ ಎಂದು ಪ್ರಾರಂಭವಾಗುವ ಕವನದಲ್ಲಿ ಒಲ್ಮೆಯ ದಾಂಪತ್ಯದಲ್ಲಿ ಸಾರ್ಥಕ್ಯ ಕಾಣುತ್ತಿರುವ ಹೆಂಡತಿ ತನ್ನ ಗಂಡನನ್ನು ವರ್ಣಿಸುವುದನ್ನು ಕವಿ ಸುಂದರ ಸಾಲುಗಳಲ್ಲಿ ಪೋಣಿಸಿದ್ದಾರೆ. ಅದರ ಕೊನೆಯ ಚರಣದ ಕೊನೆಯ ಸಾಲು ಹೀಗಿದೆ ಗಂಡನಿಗೆ ಒಪ್ಪಾಗಿ ಕಂದನಿಗೆ ದಿಕ್ಕಾಗಿ ಪಯಣದಲಿ ಜೊತೆಯಾಗಿ ನಾನಿಲ್ಲವೇ?ನರಸಿಂಹಸ್ವಾಮಿಯವರಿಗೆನೋ ಬಾಳಪಯಣದಲ್ಲಿ ಜೊತೆಯಾಗಿ ವೆಂಕಮ್ಮನವರಿದ್ದರು. ಆದರೆ ನಾನು ನನ್ನಂತವರು . . . .? ಕಾದು ನೋಡಬೇಕು.

ಹಿಂದೂ ಹೃದಯ ಸಾಮ್ರಾಟನಾದ ಮರಾಠಿ ಮಾಣೂಸ್‌

 (ವಿಕ್ರಮ - 25 ಜನವರಿ 2026) ಸುದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿ ನಿರಂತರ ಸಕ್ರಿಯರಾಗಿದ್ದು, ಜೊತೆಗೆ ಪ್ರಸ್ತುತರೂ ಆಗಿದ್ದು ತಮ್ಮ ಬದುಕಿನ ನಂತರವೂ ಪ್ರಭಾವಿಯಾಗಿರು...