Wednesday, March 3, 2010

’ಸಾರ್ಥ’ದಲ್ಲಿ ಶಂಕರ-ಮಂಡನ ಮಿಶ್ರರ ನಡುವಿನ ಸಂವಾದ

ಶಾಸ್ತ್ರಾರ್ಥದ ಪ್ರಾರಂಭದಲ್ಲೇ ಶಂಕರರು ಹಾಗೂ ಮಂಡನರು ತಮ್ಮ ತಮ್ಮ ಮತಗಳನ್ನು ಮಂಡಿಸುತ್ತಾರೆ.

ಭಾರತೀಯ ಪರಂಪರೆ ನಂಬಿರುವ ಆಧ್ಯಾತ್ಮ ಸಾಧನೆಯ ತುತ್ತತುದಿಯಾದ ಮೋಕ್ಷ ಅಥವ ಮುಕ್ತಿ ಅಥವ ಬ್ರಹ್ಮತ್ವವನ್ನು ಜ್ಞಾನಮಾರ್ಗದಿಂದ ಗಳಿಸಿಕೊಳ್ಳಬಹುದು. ಜ್ಞಾನಮರ್ಗ ಅಂದರೆ ವೇದಗಳಲ್ಲಿ ಹೇಳಿರುವ ಸತ್ಯದ ಅರ್ಥವನ್ನು ಅರಿತುಕೊಳ್ಳುವುದು. ಜ್ಞಾನಮಾರ್ಗಸಾಧನೆಯು ಇಂದ್ರಿಯ ಮಟ್ಟದಲ್ಲಿ ಜೀವಿಸುವ ಸಂಸಾರಿಗೆ ಸುಲಭವಲ್ಲವಾದ್ದರಿಂದ ಸನ್ಯಾಸ ಮೋಕ್ಷಪ್ರಾಪ್ತಿಗೆ ಅತ್ಯಗತ್ಯೆ, ಇದು ಶಂಕರರ ವಾದ

ಮುಕ್ತಿಯು ಕರ್ಮಗಳಿಂದ ಮಾತ್ರ ಸಾಧಿಸಬಲ್ಲದ್ದು, ಗ್ರಹಸ್ಥನಾದವನು ಮಾತ್ರ ಸಂಪೂರ್ಣವಾಗಿ ಕರ್ಮನಿರತನಾಗಿರಲು ಸಾಧ್ಯವದ್ದರಿಂದ ಗಾರ್ಹಸ್ಥ್ಯವೇ ಶ್ರೇಷ್ಠ. ಹಾಗೆಯೇ ವೇದಗಳ ಶಬ್ದಗಳು ಕರ್ಮಪ್ರಚೋದನೆಯ ಕೆಲಸವನ್ನು ಮಾಡುವವೇ ಹೊರತು ಅರ್ಥನಿರೂಪಣೆಯನ್ನಲ್ಲ. ಇದಕ್ಕೆ ಪ್ರಮಾಣ ಪ್ರಮಾಣ ವೇದದ ಪೂರ್ವ ಭಾಗದ ಕರ್ಮಕಾಂಡವೇ ಹೊರತು ವೇದಾಂತವಲ್ಲ. ಇದು ಮಂಡನರ ವಾದ.

ವಾದದ ಕೊನೆಯಲ್ಲಿ ಶಂಕರರು ಮಂಡನರ ವಾದದ ಮೂರು ಮುಖ್ಯ ಅಂಶಗಳನ್ನು ಖಂಡಿಸುತ್ತಾರೆ

೧: ವೇದದ ಶಬ್ದಗಳ ಅರ್ಥ, ಕ್ರಿಯಪ್ರಚೋದನೆಯ ವಿನಾ ವಸ್ತುನಿರೂಪಣೆಯಲ್ಲ : ಶಬ್ದಾರ್ಥಗಳು ಒಂದಕ್ಕೊಂದು ಸೇರಿಕೊಂಡೆ ಇರುತ್ತವೆ.(ವಾಗರ್ಥಾವಿವ ಸಂಪ್ರಕ್ತೌ ವಾಗರ್ಥ ಪ್ರತಿಪತ್ತಯೆ... ಎನ್ನುವ ಶ್ಲೋಕ) ಯಾವುದೇ ಶಬ್ದ ಅರ್ಥವನ್ನು ತಿಳಿಸದೇ ಇದ್ದರೆ ಅದು ಶಬ್ದ ಎನಿಸಿಕೊಳ್ಳುವುದೇ ಇಲ್ಲ. ಶಬ್ದ ತಿಳಿಸಿದ ಅರ್ಥ ಯಾವುದೋ ಕ್ರಿಯೆಯನ್ನು ಪ್ರಚೋದಿಸಬಹುದು. ಆದ್ದರಿಂದ ವೈದಿಕ ಶಬ್ದಗಳ ಮೂಲೋದ್ಧೇಶ ಅರ್ಥಭೋದೆಯೆ ಹೊರತು ಕ್ರಿಯಪ್ರಚೋದನೆಯಲ್ಲ.

೨: ಪುರುಷಾರ್ಥಗಳು ಕ್ರಿಯೆಯಿಂದ ಲಭ್ಯವೇ ಹೊರತು ಜ್ಞಾನದಿಂದಲ್ಲ : ವೇದಾಂತದಲ್ಲಿ ಹೇಳಿದ ಸಚ್ಚಿದಾನಂದ ಸ್ಥಿತಿ ಮಂಡನರು ವಿವರಿಸಿದ ಪರಮಪುರುಷಾರ್ಥವಾದ ಸ್ವರ್ಗಕ್ಕಿಂತಲೂ ಬಿನ್ನವಾದದ್ದು, ಶ್ರೇಷ್ಠವಾದದ್ದು. ಜೀವನ್ಮುಕ್ತ, ಸಚ್ಚಿದಾನಂದ ಸ್ಥಿತಿ.  ಲೋಕಜೀವನದಲ್ಲಿ ಜ್ಞಾನವನ್ನು ಪಡೆದು ಜೀವನ್ಮುಕ್ತರಾದವರನ್ನು ಶ್ರುತಿ, ಸ್ಮೃತಿ ಇತಿಹಾಸಗಳಲ್ಲಿ ಓದುತ್ತೇವೆ.

೩: ಕರ್ಮರಹಿತವಾದ ಆಶ್ರಮವೆಂಬುದು ಯಾವುದೂ ಇಲ್ಲ, ಆದ್ದರಿಂದ ಸಂನ್ಯಾಸವು ಶ್ರುತಿವಿರುದ್ಧ: ಶ್ರುತಿಗಳೇ ಕರ್ಮದಿಂದಾಗಲೀ, ಮಕ್ಕಳಿಂದಾಗಲೀ, ಹಣದಿಂದಾಗಲೀ ಅಮೃತತ್ವವನ್ನು ಪಡೆಯಲಾಗದು, ಕೇವಲ ತ್ಯಾಗದಿಂದ ಮಾತ್ರ ಅದು ಸಾಧ್ಯ ಎಂದು ತಿಳಿಸುತ್ತದೆ (ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೆನೈಕೇ ಅಮೃತತ್ವಮಾನಶುಃ .... ಕೈವಲ್ಯೋಪನಿಶತ್). ವೇದಾಂತವು ಇದನ್ನು ಪುಷ್ಠೇಕರಿಸುತ್ತದೆ, ವಿಶುದ್ಧವಾದ ಆತ್ಮಸ್ವರೂಪವನ್ನು ಗ್ರಹಿಸಿದ ವ್ಯಕ್ತಿಗಳು ಪುತ್ರಕಾಮನೆ, ವಿತ್ತಕಾಮನೆ, ಲೋಕಕಾಮನೆಗಳನ್ನು ಬಿಟ್ಟು ಭಿಕ್ಷಾಟನೆಯಲ್ಲಿ ತೊಡಗುತ್ತಾರೆ ಎಂದು ಯಾಜ್ಞವಲ್ಕ್ಯರು ಸ್ವಾನುಭವವನ್ನು ಪ್ರಕಟಿಸಿದ್ದಾರೆ. ಇವೆಲ್ಲ ಆಧಾರಗಳಿಂದ ಮೋಕ್ಷಸಾಧನೆಗೆ ಸಂನ್ಯಾಸವೇ ಏಕೈಕ ಸಾಧನ. ಏಕೆಂದರೆ ಗ್ರಹಸ್ಥಧರ್ಮದಲ್ಲಿ ಎಷ್ಟೇ ನಿತಿಸಾಧನೆ ಇದ್ದರೂ ಅದು ನೀತಿಯ ಮೂಲಕ್ಕೆ ನಮ್ಮನ್ನು ಎತ್ತುವುದಿಲ್ಲ, ಸರ್ವಸಂಗ ಪರಿತ್ಯಾಗವಾದ ಸಂನ್ಯಾಸ ಮಾತ್ರ ಇದನ್ನು ಮಾಡಬಲ್ಲದು.

ಆನುಷಂಗಿಕವಾಗಿ ಇದೇ ಸಂದರ್ಭದಲ್ಲಿ ಬರುವ ಎರಡು ಪ್ರಶ್ನೆಗಳು ತುಂಬಾ ಮಾರ್ಮಿಕವಾದವು

೧. ನಾಗಭಟ್ಟನ ಪ್ರಶ್ನೆ: ಪಾಠಶಾಲೆಯಲ್ಲಿ ಬ್ರಹ್ಮಸತ್ಯ ಜಗನ್ಮಿಥ್ಯ ಎಂದು ವಾದಮಾಡುತ್ತಿದ್ದ ಶಂಕರರು ಸಂಜೆಯ ಹೊತ್ತು ಜನರಿಗೆ ಪ್ರವಚನ ಮಾಡುತ್ತ ದೇವ ದೇವತೆಯರ ಪೂಜೆ ಮಾಡುವಂತೆ, ದೇವಾಲಯಗಳನ್ನು ಕಟ್ಟಿಸುವಂತೆ, ಜೀರ್ಣೊದ್ಧಾರ ಮಾಡುವಂತೆ ಕರ್ಮಮಾರ್ಗವನ್ನೇ ಬೋಧಿಸುತ್ತಿದ್ದರು. ನಾಗಭಟ್ಟ ಇದು ಒಂದಕ್ಕೊಂದು ವಿರುದ್ಧವಲ್ಲವೇ ಎಂದು ಪ್ರಶ್ನಿಸುತ್ತಾನೆ. ಶಂಕರರು ಇದಕ್ಕೆ ಉತ್ತರಿಸುತ್ತ "ವಿರೋಧವಿಲ್ಲ. ಇದು ತಾತ್ತ್ವಿಕ ಜಿಜ್ಞಾಸೆಯನ್ನು ಮುಟ್ಟಲಾರದ ಜನಸಾಮನ್ಯರಿಗೆ. ರೂಪಾತೀತವಾದದ್ದನ್ನು ರೂಪದಲ್ಲಿ ಭಾವಿಸಿ ಉಪಾಸಿಸುವ ಅವಕಾಶವಿಲ್ಲದಿದ್ದರೆ ಜನಸಾಧಾರಣರಿಗೆ ಶೂನ್ಯ ಕವಿಯುತ್ತದೆ. ಜನಸಾಮನ್ಯರಿಗೆ ಉಪಾಸನೆಯ ಸಾಧನವನ್ನು ಸೃಷ್ಟಿಸಿಕೊಡುವುದೇ ಶಿಲ್ಪಿಯ ಕೆಲಸ"  ಎನ್ನುತ್ತಾರೆ. ಇದು ನಮ್ಮಲ್ಲಿರುವ ಮೂರ್ತಿಪೂಜೆಯ ಬಗ್ಗೆ ಶಂಕರರು ಕೊಟ್ಟ ವ್ಯಾಖ್ಯಾನ.

೨. ಉಭಯಭಾರತಿಯ ಪ್ರಶ್ನೆ: "ಎಲ್ಲರೂ ಹೀಗೆ ಬ್ರಹ್ಮಚರ್ಯದಿಂದ ನೇರವಾಗಿ ಸಂನ್ಯಾಸಕ್ಕೆ ಜಿಗಿದರೆ ಪ್ರಪಂಚ ಮುಂದುವರಿಯುವುದೆ ಹೇಗೆ?" ಇದಕ್ಕೆ ಶಂಕರ ಉತ್ತರ "ಬ್ರಹ್ಮಚರ್ಯೆಯಿಂದ ನೇರವಾಗಿ ಸಂನ್ಯಾಸಕ್ಕೆ ಜಿಗಿಯುವ ಶಕ್ತಿ ಇರುವವರು ಬಹಳ ವಿರಳ. ಜಗತ್ತಿನ ಸಂಸಾರ ಭಗವತ್ಸಂಕಲ್ಪದಂತೆ ಅನಂತಕಾಲ ನಡೆಯುತ್ತಿರುತ್ತದೆ......."

ಶಂಕರ - ಮಂಡನ ಮಿಶ್ರರ ನಡುವಿನ ವಾಗ್ವಾದದ historical credibilityಯ ಬಗ್ಗೆ ಸಂಶಯಗಳನ್ನು ಕೆಲವು ಸಂಶೋಧನೆಗಳು ವ್ಯಕ್ತಪಡಿಸಿವೆ. ಈ ಬಗೆಗಿನ ಉಲ್ಲೇಖವನ್ನು ಶತಾವಧಾನಿ ಡಾ. ಗಣೇಶರವರ "ಭೈರಪ್ಪನವರ ಕಾದಂಬರಿಗಳಲ್ಲಿ ಕಲೆ ಮತ್ತು ನೆಲೆ" ಎಂಬ ಉಪನ್ಯಾಸ ಸರಣಿಯ ಮೊದಲ ಕಂತಿನಲ್ಲ ಕಾಣಬಹುದು. (ಉಪನ್ಯಾಸದ ಸಿಡಿ ಎನ್ ಆರ್ ಕಾಲನಿಯ ಗೋಖಲೇ ಇನ್ಸ್ಟಿಟೂಟ್‍ನಲ್ಲಿ ಲಭ್ಯವಿದೆ)

1 comment:

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...