Sunday, March 7, 2010

ನಾಲ್ಕನೇ ವರ್ಗ

          ಮುಲ್ಲಾ ನಸ್ರುದ್ದೀನ್ ಎದೆಯವರೆಗೆ ಬರುವಷ್ಟು ಉದ್ದವಾದ ಗಡ್ಡ ಬೆಳೆಸಿದ್ದ. ತುರಿಕೆಯಾಗುತ್ತಿತ್ತು. ಆಗಾಗ ಕೆರೆದುಕೊಳ್ಳಬೇಕಾಗುತ್ತಿತ್ತು. ಅದನ್ನು ಗಮನಿಸಿದ ಸ್ನೇಹಿತನೊಬ್ಬ ಕೇಳಿದ. "ಮುಲ್ಲಾ ಉದ್ದ ಗಡ್ಡ ಬೆಳೆಸಿದ್ದೀಯಾ, ಕಿರಿಕಿರಿ ಅನ್ನುಸುವುದಿಲ್ಲವೇ?"
          "ಅಯ್ಯೋ ತುಂಬ ಕಿರಿಕಿರಿ, i hate it"
          "ಮತ್ತೆ ಯಾಕಿಟ್ಟುಕೊಂಡಿದ್ದೀಯಾ? why can't you get rid of it?"
          "my wife hates it too" ಮುಲ್ಲಾ ಉತ್ತರಿಸಿದ, ಶಾಂತನಾಗಿ !!
          ಇರಲಿ, ಈಗ ವಿಷಯಕ್ಕೆ ಬರೋಣ. ವ್ಯಕ್ತಿ-ವ್ಯಕ್ತಿಗಳ, ವ್ಯಕ್ತಿ-ಸಮಾಜದ ನಡುವಿನ interaction ಸಂಘಜೀವಿಯಾದ ಮಾನವನ ಬದುಕಿನ ಅನಿವಾರ್ಯತೆ. ಸ್ನೇಹ-ದ್ವೇಷ, ಮೆಚ್ಚುಗೆ-ಅಸೂಯೆ, ಮೋಹ-ವಿರಾಗ, ಹೊಗಳಿಕೆ-ತೆಗಳಿಕೆ ಇವುಗಳಿಗೆಲ್ಲ ಕಾರಣ ಈ interaction. ಇದು ವೈಯಕ್ತಿಕ, ಸಾಮಾಜಿಕ ಸಂಬಂಧಗಳ ಕಾರ್ಯವೂ ಹೌದು ಕಾರಣವೂ ಹೌದು. ಈ ಸಂಬಂಧಕ್ಕೆ ಸಂಬಂಧಿಸಿದ ವ್ಯವಹಾರದ ಆಧಾರದ ಮೇಲೆ ಸ್ಥೂಲವಾಗಿ ಮನುಷ್ಯರನ್ನು ನಾಲ್ಕು ವರ್ಗಗಳಾಗಿ ವರ್ಗೀಕರಿಸಬಹುದು.
          ಮೊದಲೆನೆಯ ವರ್ಗದವರು, ತುಂಬಾ altruistic ಆದವರು. ತ್ಯಾಗಿಗಳು. ಇತರರ ಒಳಿತಿಗಾಗಿ ತಮ್ಮ ಹಿತವನ್ನು ಬಲಿಕೊಳ್ಳಬಲ್ಲವರು. ಹಿಂದೆ ಮಹಾರಾಷ್ಟ್ರದಲ್ಲಿ ನಾಮದೇವ ಎಂಬ ಸಂತರಿದ್ದರು. ಒಮ್ಮೆ ಭಿಕ್ಷಾಟನೆಯಲ್ಲಿ ಸಿಕ್ಕ ಹಿಟ್ಟಿನಿಂದ ರೊಟ್ಟಿಯನ್ನು ಮಾಡಿಕೊಂಡು ತಿನ್ನಲೆಂದು ಕುಳಿತರು. ತುಂಬ ಹಸಿದಿದ್ದರು. ರೊಟ್ಟಿಗೆ ತುಪ್ಪ ಹಚ್ಚಿಕೊಂಡು ತಿನ್ನೋಣವೆಂದು ನೋಡಿದರು, ತುಪ್ಪ ಗಟ್ಟಿಯಾಗಿತ್ತು. ತುಪ್ಪವನ್ನು ಕರಗಿಸುವ ಸಲುವಾಗಿ ಬಿಸಿಮಾಡತೊಡಗಿದರು. ಅಷ್ಟರಲ್ಲೇ ಅದೆಲ್ಲಿಂದಲೋ ಬಂದ ಬಡಕಲು ನಾಯಿ ಇವರ ರೊಟ್ಟಿಯನ್ನು ಕಚ್ಚಿಕೊಂಡು ಓಡತೊಡಗಿತು. ನಾಮದೇವರಿಗೆ ಏನನ್ನಿಸಿತೋ? "ಹಾಗೇ ತಿಂದರೆ ಗಂಟಲಿಗೆ ಹಿಡಿದುಕೊಂದು ಬಿಡುತ್ತೆ, ನಿಲ್ಲು ನಿಲ್ಲು ತುಪ್ಪ ಸವರಿಕೊಡುತ್ತೇನೆ" ಎನ್ನುತ್ತ ತುಪ್ಪದ ಜಾಡಿಯನ್ನು ಕೈಯಲ್ಲಿ ಹಿಡಿದು ನಾಯಿಯ ಹಿಂದೆ ಓಡಿದರು. ನಾಮದೇವರಂತಹ ಪ್ರಥಮ ವರ್ಗದ ಜನ ಇತಿಹಾಸದಲ್ಲಿ ಕತೆಗಳಲ್ಲಿ ಸಾಕಷ್ಟು ಸಿಗುತ್ತಾರಾದರೂ, ಇಂದಿಗೂ ವಿರಳವಾಗಿಯಾದರೂ ಸಿಗುತ್ತಾರೆ. ನಮ್ಮ ನಡುವೆಯೂ ಆಗಾಗ ಇಂತಹ ಪ್ರಥಮ ವರ್ಗದ ಗುಣಗಳು ಕಾಣಿಸಿಕೊಳ್ಳುತ್ತವೆ.
          ಎರಡನೆಯ ವರ್ಗದ ಮಾನವರು, ನಾವೂ ಚೆನ್ನಾಗಿರೋಣ, ನೀವು ಚೆನ್ನಾಗಿರಿ ಎಂಬ ಚಿಂತನೆಯವರು. ನೀನನಗಿದ್ದರೆ ನಾನಿನಗೆ ಎಂಬ ಸಿದ್ಧಾಂತದವರು. co-operation ತತ್ವದಲ್ಲಿ ಬಾಳುವವರು. ಕರ್ತವ್ಯನಿಷ್ಠೆಯಿಂದ ಹೊಟ್ಟೆಪಾಡಿಗಾಗಿ ಕೆಲಸಮಾಡುವ ಪ್ರತಿಯೊಬ್ಬನೂ ಈ ಗುಂಪಿಗೆ ಸೇರುತ್ತಾನೆ.
          ಇನ್ನು ಮೂರನೆಯ ಗುಂಪಿನವರು ಇನ್ನೊಬ್ಬನ ಅನ್ನವನ್ನು ಕಸಿದು ತನ್ನ ಹೊಟ್ಟೆ ತುಂಬಿಸಿಕೊಳ್ಳುವವರು. ಪರರ ಸಮಾಧಿಯ ಮೇಲೆ ತಮ್ಮ ಸೌಧವನ್ನು ನಿರ್ಮಿಸುವವರು. ಈ ವರ್ಗದ ಜನರಿಗೆ ಇತರರ ಅಸುಖಕ್ಕಿಂತ ತಮ್ಮ ಸಂತಸ ಹೆಚ್ಚು. ಇಂತವರಿಗೂ ನಮ್ಮಲ್ಲಿ ಕೊರತೆಯಿಲ್ಲ. ಬ್ರಷ್ಟರೆಂದು ಕರೆಸಿಕೊಳ್ಳುವ ಸಾಕಷ್ಟು ಜನರನ್ನು ಈ ಗುಂಪಿನಲ್ಲಿ ಕಾಣಬಹುದು.
          ನಾಲ್ಕನೇ ವರ್ಗದ ಜನ, ಈಗಾಗಲೇ ಊಹಿಸಿರಬಹುದು, ತಾವು ಹಾಳಾದರೂ ಚಿಂತೆಯಿಲ್ಲ ಇನ್ನೊಬ್ಬನಿಗೆ ಮಾತ್ರ ಒಳ್ಳೆಯದಾಗಬಾರದು ಎನ್ನುವವರು. ಇನ್ನೊಬ್ಬನಿಗೆ ದುಃಖತರಲೆಂದು ತಮ್ಮ ಸಂತಸವನ್ನು ಬಲಿಕೊಡಲು ಸಿದ್ಧರಿರುವವರು. ತಾನು ಸತ್ತಾದರೂ ದಾಯಾದಿಯ ಮನೆಯ ಮಂಗಳಕಾರ್ಯವನ್ನು ನಿಲ್ಲಿಸುವೆ ಎನ್ನುವ ದಾಯಾದಿ ದ್ವೇಷಿಯ, ತಾನು ಸತ್ತಾದರೂ ಹೆಂಡತಿಯ ಮಂಡೆ ಬೋಳಿಸುವೆ (ಹಳೆಯ ಕಾಲದಲ್ಲಿತ್ತು ಈ ಪದ್ಧತಿ, ಈಗ ಇರಲಿಕ್ಕಿಲ್ಲ) ಎಂಬ ಗಂಡನ ಜಾತಿಯವರು. ಮೇಲೆ ಉಲ್ಲೇಖಿಸಿದ ನಸ್ರುದ್ದೀನನ ಕತೆಯಲ್ಲಿ ಕಂಡೆವಲ್ಲ. ನಸ್ರುದ್ದೀನನಿಗೆ ಗಡ್ಡದಿಂದ ತುಂಬ ಕಿರಿಕಿರಿ, ಆದರೆ ಆತನ ಹೆಂಡತಿಗೂ ಕಿರಿಕಿರಿಯಾಗುವುದರಿಂದ ಅದನ್ನು ಬೋಳಿಸಲು ಸಿದ್ಧನಿಲ್ಲ. ಈ ವರ್ಗದ ಜನಮಾನಸಿಕತೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಖಂಡಿತ ಒಳ್ಳೆಯದಲ್ಲ. ಆದರೆ ನಮ್ಮ ರಾಜಕಾರಣ, ಕೋರ್ಟ್‍ಗಳಲ್ಲಿ ಬೆಳೆಯುತ್ತಲೇ ಇರುವ pending caseಗಳು ಈ ವರ್ಗದ ಮಾನಸಿಕತೆಯ ಬೆಳವಣಿಗೆಯ ಕೆಲ ಉದಾಹರಣೆಗಳು.
          ಖಂಡಿತ ಯಾವೊಬ್ಬ ಮನುಷ್ಯನನ್ನು ನಾಲ್ಕರಲ್ಲಿ ಯಾವುದೋ ಒಂದು ವರ್ಗಕ್ಕೆ ಸೇರಿಸಿ, ’ಇವನು ಇಂಥವನು’ ಎಂದು ಹಣೆಪಟ್ಟಿ ಕಟ್ಟುವುದು ಸಾಧ್ಯವಿಲ್ಲ. ಇದು ಮಾನವನ ಮಾನಸಿಕತೆಯ ವರ್ಗೀಕರಣ ಅಷ್ಟೇ. ಪ್ರತಿಯೊಬ್ಬನಲ್ಲಿಯೂ ಆಗಾಗ ಒಂದೊಂದು ತರಹದ ಸ್ವಭಾವ ಕಾಣಿಸಿಕೊಳ್ಳಬಹುದು. ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ, ’ನಾವು ಯಾವ ವರ್ಗಕ್ಕೆ ಸೇರಿದರೆ ಉತ್ತಮ?         

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...